ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ವಿಕಸಿತ ರೋಮಾಂಚಕ ಗ್ರಾಮ ಕಾರ್ಯಕ್ರಮ 2026ರಲ್ಲಿ ಭಾಗವಹಿಸಿದ ಪ್ರತಿನಿಧಿಗಳ ಜತೆ ವರ್ಚುವಲ್ ಸಂವಾದ ನಡೆಸಿದರು, ಈ ಸಂದರ್ಭದಲ್ಲಿ ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಲಡಾಖ್ನ ಗಡಿ ಗ್ರಾಮಗಳಿಂದ ಬಂದ ಯುವ ಮೈಭಾರತ್ ಸ್ವಯಂಸೇವಕರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಈ ಸಂವಾದವು ಸುಧಾರಿತ ಮೂಲಸೌಕರ್ಯ, ಸಂಪರ್ಕ ಮತ್ತು ಸಾರ್ವಜನಿಕ ಸೇವೆಗಳ ಜತೆಗೆ ಮಹಿಳೆಯರ ನೇತೃತ್ವದ ಅಭಿವೃದ್ಧಿ, ಪ್ರವಾಸೋದ್ಯಮ, ಸಮುದಾಯ ಭಾಗವಹಿಸುವಿಕೆ ಮತ್ತು ಬಲವಾದ ರಾಷ್ಟ್ರೀಯ ಏಕೀಕರಣದ ಮೂಲಕ ಈ ಗ್ರಾಮಗಳ ಪರಿವರ್ತನೆಯನ್ನು ಉಲ್ಲೇಖಿಸಿತು. ದೇಶಾದ್ಯಂತ 245 ಜಿಲ್ಲೆಗಳಿಂದ 5,000ಕ್ಕೂ ಹೆಚ್ಚು ಮೈಭಾರತ್ ಸ್ವಯಂಸೇವಕರು ವರ್ಚುವಲ್ ಆಗಿ ಕಾರ್ಯಕ್ರಮದಲ್ಲಿ ಸೇರಿಕೊಂಡರು.
ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ಡಿಯುವಿನ ಮೈಭಾರತ್ ಸ್ವಯಂಸೇವಕ ಶ್ರೀ ದಿವ್ಯಾಂಶ ಜೋಶಿ ಅವರು ಕಾರ್ಯಕ್ರಮವನ್ನು ಪರಿಚಯಿಸುತ್ತಾ, ವಿಕಸಿತ ಭಾರತ ಯುವ ನಾಯಕರ ಸಂವಾದ, ವಿಕಸಿತ ಭಾರತ ಯುವ ಸಂಸತ್ತು, ಬಜೆಟ್ ಟ್ವಿಸ್ಟ್, ಮಾರ್ಗದರ್ಶನ ಮತ್ತು ಸ್ವಯಂಸೇವಕ ಕಾರ್ಯಕ್ರಮಗಳು ಸೇರಿದಂತೆ ಉಪಕ್ರಮಗಳನ್ನು ವಿವರಿಸಿದರು. ಮೈಭಾರತ್ ಉಪಕ್ರಮಗಳಿಂದ 2.30 ಕೋಟಿಗೂ ಹೆಚ್ಚು ಯುವಕರು ಪ್ರಯೋಜನ ಪಡೆದಿದ್ದಾರೆ. ಜತೆಗೆ, 2.86 ಲಕ್ಷ ಯುವಕರು ದೇಶಾದ್ಯಂತ ನಡೆದ ರಸಪ್ರಶ್ನೆಯಲ್ಲಿ ಭಾಗವಹಿಸಿದ್ದರು, ಇದರ ಮೂಲಕ ಗಡಿ ಗ್ರಾಮಗಳಿಗೆ ಭೇಟಿ ನೀಡಲು 403 ಸ್ವಯಂಸೇವಕರನ್ನು ಆಯ್ಕೆ ಮಾಡಲಾಯಿತು. ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯ ಲಿಯೋ ಗ್ರಾಮಕ್ಕೆ ನೀಡಿದ ತಮ್ಮ ಭೇಟಿಯನ್ನು ನೆನಪಿಸಿಕೊಂಡ ಅವರು, ನಿವಾಸಿಗಳು, ಹಿರಿಯ ನಾಗರಿಕರು ಮತ್ತು ಶಾಲಾ ಮಕ್ಕಳೊಂದಿಗಿನ ಸಂವಾದ, ಸ್ಥಳೀಯ ಯುವಕರಿಗೆ ವೃತ್ತಿ ಸಮಾಲೋಚನೆ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು, ಮಹಿಳಾ ಸರಪಂಚೆಯರ ನಾಯಕತ್ವ ಮತ್ತು ಆಯುಷ್ಮಾನ್ ಆರೋಗ್ಯ ಮಂದಿರದ ಕಾರ್ಯವೈಖರಿಯನ್ನು ಪ್ರಸ್ತಾಪಿಸಿದರು. ತಮ್ಮ ಹೋಂಸ್ಟೇ ಅನುಭವವು ಭಾಷೆ ಮತ್ತು ರಾಜ್ಯದ ಗಡಿಗಳನ್ನು ಮೀರಿದೆ ಎಂಬುದನ್ನು ತೋರಿಸಿದೆ ಎಂದು ತಿಳಿಸಿದರು. ಸ್ವಯಂಸೇವಕರು ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿ ದೇಶದ ಧೈರ್ಯಶಾಲಿ ಸೈನಿಕರಿಗೆ ಗೌರವ ಸಲ್ಲಿಸಿದರು. ವಿಕಸಿತ ಭಾರತದ ದೃಷ್ಟಿಕೋನಕ್ಕೆ ಬದ್ಧರಾಗಿ ಪ್ರಧಾನಿ ಅವರಿಗೆ ವಿವರ ನೀಡಲು ತಮ್ಮೆಲ್ಲಾ ಅನುಭವಗಳನ್ನು ಸಂಗ್ರಹಿಸಿದ್ದೇವೆ ಎಂದು ಹೇಳಿದರು.
ಮೈಭಾರತ್ ಸ್ವಯಂಸೇವಕಿ ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ಡಿಯುವಿನ ಶ್ರೀಮತಿ ನಿಕಿತಾ ಪ್ರವೀಣ್ ಸೋಲಂಕಿ ಮಾತನಾಡಿ, ಮೈಭಾರತ್ ರಸಪ್ರಶ್ನೆ ಮೂಲಕ ಆಯ್ಕೆಯಾದ ಕಾರಣ ಕಿನ್ನೌರ್ ಜಿಲ್ಲೆಯ ಧಾರ್ ಚಾಂಗೊ ನಿಚ್ಲಾ ಗ್ರಾಮಕ್ಕೆ ತನ್ನ ಮೊದಲ ಸ್ವತಂತ್ರ ಪ್ರಯಾಣಕ್ಕೆ ಅವಕಾಶ ಸಿಕ್ಕಿತು ಎಂದು ಹೇಳಿದರು. ಗ್ರಾಮಸ್ಥರು ನೀಡಿದ ಪ್ರೀತಿಯ ಸ್ವಾಗತವು ಅವರ ಆತ್ಮವಿಶ್ವಾಸವನ್ನು ಬಲಪಡಿಸಿತು, ಮಹಿಳೆಯರ ಬಗ್ಗೆ ಬದಲಾಗುತ್ತಿರುವ ಸಾಮಾಜಿಕ ಮನೋಭಾವಗಳನ್ನು ಪ್ರತಿಬಿಂಬಿಸಿತು. ಮಹಿಳಾ ಪ್ರಧಾನ್, ಪಂಚಾಯಿತಿ ಪ್ರತಿನಿಧಿಗಳು, ರೈತರು, ಹಿರಿಯ ನಾಗರಿಕರು ಮತ್ತು ಮಕ್ಕಳೊಂದಿಗಿನ ಸಂವಹನದ ಮೂಲಕ, ಗ್ರಾಮೀಣ ಮಹಿಳೆಯರು ಹೊತ್ತಿರುವ ಬಹು ಜವಾಬ್ದಾರಿಗಳನ್ನು ಅವರು ಗಮನಿಸಿದರು. ಅವರ ಹಿಂದಿನ ಗ್ರಹಿಕೆಗಳಿಗೆ ವಿರುದ್ಧವಾಗಿ, ಗುಣಮಟ್ಟದ ರಸ್ತೆಗಳು, ನಿಯಮಿತ ವಿದ್ಯುತ್, ಕುಡಿಯುವ ನೀರಿನ ಸಂಪರ್ಕಗಳು ಮತ್ತು ಡಿಜಿಟಲ್ ಸಂಪರ್ಕವನ್ನು ನೋಡಿದರು. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ, ಜಲ ಜೀವನ್ ಮಿಷನ್ ಮತ್ತು ಆಯುಷ್ಮಾನ್ ಭಾರತ್ ಕಾರ್ಯಕ್ರಮಗಳೇ ಕಾರಣವೆಂದು ನಿವಾಸಿಗಳು ಹೇಳಿದರು. ಸ್ವಚ್ಛತೆ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ಭಾಗವಹಿಸಿದೆ. ತಮ್ಮ ತವರು ಪ್ರದೇಶದಲ್ಲಿ ಇರುವಂತೆ ಇಲ್ಲಿಯೂ ಇರುವ ಹಳ್ಳಿಯ ಮಕ್ಕಳ ಕುತೂಹಲವನ್ನು ನೆನಪಿಸಿಕೊಂಡರು. ಅವರು ತಮ್ಮ ಆತಿಥೇಯ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದೇನೆ ಎಂದು ಹೇಳಿದರು.
2016ರಲ್ಲಿ ಚಾಂಗೋ ಪ್ರದೇಶಕ್ಕೆ ನೀಡಿದ ದೀಪಾವಳಿ ಭೇಟಿಯನ್ನು ನೆನಪಿಸಿಕೊಂಡ ಪ್ರಧಾನಮಂತ್ರಿ, ಶ್ರೀಮತಿ ಸೋಲಂಕಿ ಅವರ ಪ್ರಯಾಣವು ಭಾರತದ ಹೆಣ್ಣು ಮಕ್ಕಳ ಹೆಚ್ಚುತ್ತಿರುವ ಆತ್ಮವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ. ಮೈಭಾರತ್ ವೈಯಕ್ತಿಕ ಪ್ರಯಾಣಗಳನ್ನು ಒಂದು ರಾಷ್ಟ್ರೀಯ ಕುಟುಂಬವಾಗಿ ಪರಿವರ್ತಿಸಿದೆ ಎಂದು ಹೇಳಿದರು. “ವೈಯಕ್ತಿಕ ಅಥವಾ ಏಕಾಂಗಿ ಪ್ರಯಾಣವು ನಿಮ್ಮನ್ನು ನೀವು ಕಂಡುಕೊಳ್ಳುವಾಗ ಜಗತ್ತನ್ನು ಕಂಡುಕೊಳ್ಳುವ ಒಂದು ಸ್ಪಷ್ಟ ಮಾರ್ಗವಾಗಿದೆ” ಎಂದು ಶ್ರೀ ಮೋದಿ ಹೇಳಿದರು.
ರಾಜಸ್ಥಾನದ ಜಲೋರ್ನ ಮೈಭಾರತ್ ಸ್ವಯಂಸೇವಕ ಶ್ರೀ ಸುನಿಲ್ ಕುಮಾರ್ ಕೇಲಾ ಮಾತನಾಡಿ, ಗಡಿ ಗ್ರಾಮದವನಾದ ಕಾರಣ ನಾನು ಹಿಮಾಚಲ ಪ್ರದೇಶದ ಧಾರ್ ಚಾಂಗೊ ಉಪ್ರೇಲಾ ಗ್ರಾಮದ ಜನರೊಂದಿಗೆ ಸುಲಭವಾಗಿ ಸಂಪರ್ಕ ಸಾಧಿಸಲು ಸಾಧ್ಯವಾಯಿತು ಎಂದು ಹೇಳಿದರು. ಭೌಗೋಳಿಕ ಮತ್ತು ಹವಾಮಾನ ವ್ಯತ್ಯಾಸಗಳ ಹೊರತಾಗಿಯೂ, ಎರಡೂ ಪ್ರದೇಶಗಳ ಜನರು ಧೈರ್ಯ, ದೇಶಭಕ್ತಿ ಮತ್ತು ಪ್ರೀತಿ ವಾತ್ಸಲ್ಯದಿಂದ ಒಂದಾಗಿರುವುದನ್ನು ಕಂಡುಕೊಂಡೆ. ವೀಡಿಯೊ ಕರೆಗಳ ಮೂಲಕ ತಮ್ಮ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದೆ. ಸಟ್ಲೆಜ್ ನದಿ, ಶಾಲೆ, ಜನೌಷಧಿ ಕೇಂದ್ರ, ಆಸ್ಪತ್ರೆ ಮತ್ತು ಕ್ರೀಡಾ ಸೌಲಭ್ಯಗಳನ್ನು ಗ್ರಾಮಸ್ಥರು ತೋರಿಸಿದರು, ನಾನು ಮಾಡಿದ ಸಾಮಾಜಿಕ ಮಾಧ್ಯಮ ಪೋಸ್ಟ್ಗಳು ಸ್ನೇಹಿತರು ಮೈಭಾರತ್ ಅನ್ನು ಅನ್ವೇಷಿಸಲು ಪ್ರೋತ್ಸಾಹಿಸಿದವು. ರಸ್ತೆಗಳು, ವಸತಿ, ವಿದ್ಯುತ್ ಮತ್ತು ಮೊಬೈಲ್ ಸಂಪರ್ಕದ ಬಗ್ಗೆ ನನಗೆ ಆರಂಭಿಕ ಆತಂಕಗಳು ಇದ್ದವು, ಆದರೆ ಹೋಂಸ್ಟೇಗೆ ತಲುಪುವ ಉತ್ತಮ ಗುಣಮಟ್ಟದ ರಸ್ತೆಗಳು, ಸೌರಶಕ್ತಿ ಸ್ಥಾಪನೆಗಳು ಮತ್ತು ದೈನಂದಿನ ಜೀವನವನ್ನು ಪರಿವರ್ತಿಸಿದ ಸುಧಾರಿತ ಮೂಲಸೌಕರ್ಯಗಳನ್ನು ನೋಡಿ ಆತಂಕಗಳು ದೂರವಾದವು. ನಾನು ಆತಿಥೇಯ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದೇನೆ. ಮತ್ತೆ ರಾಜಸ್ಥಾನಕ್ಕೆ ಭೇಟಿ ನೀಡುವಂತೆ ಅವರು ಆಹ್ವಾನ ನೀಡಿದ್ದಾರೆ ಎಂದು ಹೇಳಿದರು.
ರಾಜಸ್ಥಾನ, ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಈಶಾನ್ಯದಾದ್ಯಂತದ ಗಡಿ ಗ್ರಾಮಗಳ ಯುವಜನರು ಸಾಮಾನ್ಯ ದೃಷ್ಟಿಕೋನವನ್ನು ಹಂಚಿಕೊಂಡಿದ್ದಾರೆ. ಗಡಿ ನಿವಾಸಿಗಳು ಭೌಗೋಳಿಕವಾಗಿ ದೂರದಲ್ಲಿದ್ದರೂ, ರಾಷ್ಟ್ರದೊಂದಿಗೆ ಭಾವನಾತ್ಮಕವಾಗಿ ಆಳವಾದ ಸಂಪರ್ಕ ಹೊಂದಿದ್ದಾರೆ ಎಂದು ಪ್ರಧಾನಮಂತ್ರಿ ತಿಳಿಸಿದರು. “ಮೊದಲು ಆದ್ಯತೆಯಲ್ಲಿ ಕೊನೆಯವರಾಗಿದ್ದವರು ಈಗ ಮೊದಲಿಗರಾಗಿದ್ದಾರೆ” ಎಂದು ಶ್ರೀ ಮೋದಿ ಹೇಳಿದರು.
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮೈಭಾರತ್ ಸ್ವಯಂಸೇವಕಿ ಶ್ರೀಮತಿ ಭವ್ಯ ಶ್ರೀ ಮಾತನಾಡಿ, ಶೈಕ್ಷಣಿಕತೆಯನ್ನು ಮೀರಿ ಕಲಿಯುವ ಬಯಕೆಯು ಮೈಭಾರತ್ ಮತ್ತು ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಹರ್ಸಿಲ್ ಕಣಿವೆಗೆ ಕರೆದೊಯ್ಯಿತು ಎಂದು ಹೇಳಿದರು. ಪರಿಚಯವಿಲ್ಲದ ಹವಾಮಾನ, ಆಹಾರ, ಸಂಸ್ಕೃತಿ ಮತ್ತು ಜೀವನಶೈಲಿಯ ಬಗ್ಗೆ ಅವರ ಆರಂಭಿಕ ಕಳವಳಗಳು ಇದ್ದವು. ಆದರೆ ಸ್ಥಳೀಯ ನಿವಾಸಿಗಳು ಮತ್ತು ಅಧಿಕಾರಿಗಳ ಆತಿಥ್ಯದಿಂದ ಅವೆಲ್ಲವೂ ದೂರವಾದವು, ಆದರೆ ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ ಸಿಬ್ಬಂದಿಯೊಂದಿಗಿನ ಸಂವಹನವು ಅವರ ಶಿಸ್ತು, ನಮ್ರತೆ, ಸಮರ್ಪಣೆ ಮತ್ತು ರಾಷ್ಟ್ರದ ಬಗೆಗಿನ ಬದ್ಧತೆಯ ಬಗ್ಗೆ ಅವರ ಮೆಚ್ಚುಗೆಯನ್ನು ಹೆಚ್ಚಿಸಿತು. ವಿವಿಧ ರಾಜ್ಯಗಳು, ಭಾಷೆಗಳು ಮತ್ತು ಸಂಸ್ಕೃತಿಗಳಿಂದ ಬಂದ ಯುವ ಪ್ರತಿನಿಧಿಗಳು ಅಪರಿಚಿತರಾಗಿ ಎಲ್ಲರೂ ಬಂದರು, ಆದರೆ ಕೊನೆಗೆ ಒಂದೇ ಕುಟುಂಬವಾಗಿ ಮರಳಿದರು, ಇದು ಏಕ ಭಾರತ, ಶ್ರೇಷ್ಠ ಭಾರತದ ಮನೋಭಾವವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು. ನೆಲಾಂಗ್ ಮತ್ತು ಜಾದುಂಗ್ ಕಣಿವೆಗಳು ಮತ್ತು ಸೇಬಿನ ತೋಟಗಳ ಛಾಯಾಚಿತ್ರಗಳು ಅವರ ಸ್ನೇಹಿತರಲ್ಲಿ ಅಪಾರ ಆಸಕ್ತಿ ಹುಟ್ಟುಹಾಕಿವೆ. ಅವರಲ್ಲಿ ಕೆಲವರು ನಂತರ ಮೈಭಾರತ್ನಲ್ಲಿ ನೋಂದಾಯಿಸಿಕೊಂಡಿದ್ದಾರೆ. ಶೀತ ವಾತಾವರಣಕ್ಕೆ ಹೊಂದಿಕೊಳ್ಳುವಂತೆ ಯುವ ಪ್ರತಿನಿಧಿಗಳಿಗೆ ಸಹಾಯ ಮಾಡಲು ಒದಗಿಸಲಾದ ಉಪಕರಣಗಳು, ಕಷ್ಟದ ಹೊರತಾಗಿಯೂ ಭೂಕುಸಿತ ಪೀಡಿತ ಸ್ಥಳೀಯ ಗ್ರಾಮದಲ್ಲಿ ಉಳಿಯಲು ಆಯ್ಕೆ ಮಾಡಿದ ನಿವಾಸಿಯ ಹೊಂದಾಣಿಕೆ ಮತ್ತು ತನ್ನ ತವರು ರಾಜ್ಯದ ಶಕ್ತಿಯುತ ಜಾನಪದ ನೃತ್ಯಗಳಿಗೆ ವ್ಯತಿರಿಕ್ತವಾಗಿ ಗರ್ಹ್ವಾಲಿ ನೃತ್ಯದ ಶಾಂತಿಯುತ, ಧ್ಯಾನಸ್ಥ ಸ್ವಭಾವವನ್ನು ಅವರು ನೆನಪಿಸಿಕೊಂಡರು.
ಉತ್ತರಾಖಂಡದ ಮುಖ್ವಾ ಗ್ರಾಮಕ್ಕೆ ತಾವು ನೀಡಿದ ಭೇಟಿಯನ್ನು ನೆನಪಿಸಿಕೊಂಡ ಪ್ರಧಾನಮಂತ್ರಿ, ಭಾರತದ ಯುವಕರು ರಾಷ್ಟ್ರವನ್ನು ಮೊದಲು ಇಡುತ್ತಾರೆ ಎಂಬ ತಮ್ಮ ನಂಬಿಕೆಯನ್ನು ಈ ಸಂವಾದ ಪುನರುಚ್ಚರಿಸಿದೆ ಎಂದು ಹೇಳಿದರು. “ನೀವೆಲ್ಲರೂ ಏಕ ಭಾರತ, ಶ್ರೇಷ್ಠ ಭಾರತ ಎಂಬ ಸ್ಫೂರ್ತಿಯನ್ನು ಬದುಕಿದ ರೀತಿ ಇನ್ನೂ ಅನೇಕ ಯುವ ಜನರಿಗೆ ಸ್ಫೂರ್ತಿ ನೀಡುತ್ತದೆ” ಎಂದು ಶ್ರೀ ಮೋದಿ ಹೇಳಿದರು.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ 21 ವರ್ಷದ ಮೈಭಾರತ್ ಸ್ವಯಂಸೇವಕಿ ಶ್ರೀಮತಿ ಸಯಂತಿಕಾ ಮಿಸ್ತ್ರಿ ಮಾತನಾಡಿ, ಕೋಟ್ಯಂತರ ಯುವ ಜನರು ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಲು ಅನುವು ಮಾಡಿಕೊಡುವ ವೇದಿಕೆಯಾಗಿ ಮೈಭಾರತ್ ಅನ್ನು ಕಲ್ಪಿಸಿಕೊಂಡಿದ್ದಕ್ಕಾಗಿ ಪ್ರಧಾನಮಂತ್ರಿ ಅವರಿಗೆ ಧನ್ಯವಾದ ಅರ್ಪಿಸಿದರು. ಸಮುದ್ರ ಮಟ್ಟದಿಂದ ಸುಮಾರು 17,000 ಅಡಿ ಎತ್ತರದಲ್ಲಿರುವ ಲಡಾಖ್ನ ಮಾನ್ ಹಳ್ಳಿಗೆ ನೀಡಿದ ತಮ್ಮ ಪ್ರಯಾಣವನ್ನು ನೆನಪಿಸಿಕೊಳ್ಳುತ್ತಾ, ತೀವ್ರವಾದ ಪರ್ವತ ಕಾಯಿಲೆಯಿಂದ ಬಳಲುತ್ತಿದ್ದವರಿಗೆ ಮೈಭಾರತ್ ತಂಡ ಮತ್ತು ಐಟಿಬಿಪಿ ಸಿಬ್ಬಂದಿ ನೀಡಿದ ಆರೈಕೆಯನ್ನು ವಿವರಿಸಿದರು, ವೈದ್ಯರು ತಮ್ಮ ಸ್ವಂತ ಸಿಬ್ಬಂದಿಗೆ ಚಿಕಿತ್ಸೆ ನೀಡುವ ಮೊದಲು ಅವರನ್ನು ತಮ್ಮ ಅತಿಥಿಯಾಗಿ ಪರಿಗಣಿಸಲು ಆದ್ಯತೆ ನೀಡಿದರು. ಐಟಿಬಿಪಿ ಸಿಬ್ಬಂದಿ ಗಡಿಗಳನ್ನು ರಕ್ಷಿಸುವುದಲ್ಲದೆ, ನಾಗರಿಕರ ಬಗ್ಗೆಯೂ ಅಪಾರ ಕಾಳಜಿ ವಹಿಸಿದರು. ಎತ್ತರದ ಪರಿಸ್ಥಿತಿಗಳಲ್ಲಿ ವಾಸಿಸಲು ಅಗತ್ಯವಿರುವ ಹೊಂದಾಣಿಕೆಯನ್ನು ಮೆಚ್ಚುವಂತೆ ಮಾಡಿದರು ಎಂಬುದು ಸ್ವತಃ ಅನುಭವವೇ ತೋರಿಸಿದೆ ಎಂದು ಅವರು ಹೇಳಿದರು. ಕಳಪೆ ಸಂಪರ್ಕದ ಬಗ್ಗೆ ಅವರ ಕುಟುಂಬದ ನಿರೀಕ್ಷೆಗೆ ಪ್ರತಿಯಾಗಿ, ಅವರು ಗಡಿ ಪ್ರದೇಶದಲ್ಲಿ ವಿಶ್ವಾಸಾರ್ಹ ಇಂಟರ್ನೆಟ್, ಕ್ಯುಆರ್-ಕೋಡ್ ಮತ್ತು ಯುಪಿಐ ಪಾವತಿ ಸೌಲಭ್ಯಗಳು ಮತ್ತು ವೈ-ಫೈ ಸೌಲಭ್ಯಗಳು ಸಿಕ್ಕವು. ಸ್ಥಳೀಯ ಮಕ್ಕಳೊಂದಿಗೆ ಸಂವಹನ ನಡೆಸಿದೆ. ಅವರಲ್ಲಿ ಒಬ್ಬರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಭೇಟಿ ನೀಡುವ ಬಯಕೆಯನ್ನು ವ್ಯಕ್ತಪಡಿಸಿದರು. ನಿವಾಸಿಗಳು ಸಾಮೂಹಿಕವಾಗಿ ಮದುವೆಗಳು ಮತ್ತು ಮಠದ ಕಾರ್ಯಕ್ರಮಗಳನ್ನು ಆಯೋಜಿಸುವ, ಹಾನಿಗೊಳಗಾದ ಮೊಬೈಲ್ ಟವರ್ ಪುನಃಸ್ಥಾಪಿಸುವ ಮತ್ತು ಅದರ ಬ್ಯಾಟರಿಗಳಿಗಾಗಿ ಸಂಗ್ರಹಣಾ ಸೌಲಭ್ಯವನ್ನು ನಿರ್ಮಿಸುವ ಸಮುದಾಯ ಮನೋಭಾವವನ್ನು ಪ್ರಶಂಸಿಸಿದರು.
ಶ್ರೀಮತಿ ಮಿಸ್ತ್ರಿ ಅವರು ತಮ್ಮ ಅನುಭವವನ್ನು ಲೇಖನಗಳು ಅಥವಾ ಪುಸ್ತಕದ ಮೂಲಕ ದಾಖಲಿಸುವಂತೆ ಪ್ರೋತ್ಸಾಹಿಸಿದ ಪ್ರಧಾನಮಂತ್ರಿ, ಇದರಿಂದ ಇತರರು ದೇಶದ ವಿಶಾಲತೆ, ಜನರು ಮತ್ತು ಹಂಚಿಕೊಂಡಿರುವ ವಿಷಯಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ ಎಂದು ಶ್ರೀ ಮೋದಿ ಹೇಳಿದರು, “ನೀವು ಸಂತೋಷವನ್ನು ಹಂಚಿಕೊಂಡಾಗ ಅದು ಹಲವು ಜನರನ್ನು ತಲುಪುತ್ತದೆ” ಎಂದರು.
ಉತ್ತರ ಪ್ರದೇಶದ ಜೌನ್ಪುರ ಜಿಲ್ಲೆಯ ನಾಗರಿಕ ಸೇವಾ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಮೈಭಾರತ್ ಸ್ವಯಂಸೇವಕ ಶ್ರೀ ಆಶಿಶ್ ಸೋನಿ ಮಾತನಾಡಿ, ಬಜೆಟ್ ತಯಾರಿಕೆ ಪ್ರಕ್ರಿಯೆಯಲ್ಲಿ ಯುವ ಜನರಿಗೆ ಸಲಹೆಗಳನ್ನು ನೀಡಲು ಅವಕಾಶ ನೀಡಿದ್ದಕ್ಕಾಗಿ ಪ್ರಧಾನಮಂತ್ರಿ ಅವರಿಗೆ ಧನ್ಯವಾದ ಅರ್ಪಿಸಿದರು. ಹಿಮಾಚಲ ಪ್ರದೇಶದ ಸ್ಪಿತಿ ಪ್ರದೇಶದ ಕಾಜಾ ಖಾಸ್ನ ಅನುಭವ ಹಂಚಿಕೊಂಡ ಅವರು, ದೂರದ ಪ್ರದೇಶಗಳಲ್ಲಿ ಮೊಬೈಲ್ ಸಂಪರ್ಕ ಕಷ್ಟಕರವಾಗಿದ್ದ ಸಮಯವನ್ನು ನೆನಪಿಸಿಕೊಂಡ ಅವರ ಪೋಷಕರು, ಸುಮಾರು 14,000 ಅಡಿ ಎತ್ತರದಿಂದ ವೀಡಿಯೊ ಕರೆ ಮಾಡಿದಾಗ ಆಶ್ಚರ್ಯಚಕಿತರಾದರು ಎಂದು ಹೇಳಿದರು. ಹೋರಾಟ ಮತ್ತು ಮತ್ತೊಂದು ಪರಿವರ್ತನೆಗೆ ಸಾಕ್ಷಿಯಾದ ಪೀಳಿಗೆಯ ನಡುವಿನ ಸೇತುವೆಯಾಗಿ ಮೈಭಾರತ್ ರೂಪುಗೊಂಡಿದೆ ಎಂದು ವಿವರಿಸಿದ ಅವರು, ಹಿಕ್ಕಿಂನಲ್ಲಿರುವ ವಿಶ್ವದ ಅತ್ಯುನ್ನತ ಅಂಚೆ ಕಚೇರಿಯಿಂದ ಪ್ರಧಾನಮಂತ್ರಿ, ಅವರ ಕುಟುಂಬ, ಯುವ ವ್ಯವಹಾರಗಳ ಸಚಿವಾಲಯ, ರಕ್ಷಣಾ ಸಚಿವರು ಮತ್ತು ಅವರ ಜಿಲ್ಲಾ ಮ್ಯಾಜಿಸ್ಟ್ರೇಟ್ಗೆ ಪತ್ರಗಳನ್ನು ಬರೆದದ್ದನ್ನು ನೆನಪಿಸಿಕೊಂಡರು. ಭಾರತವು ಮಹಾನಗರಗಳು ಮತ್ತು ವಿಮಾನ ನಿಲ್ದಾಣಗಳ ಮೂಲಕ ಮಾತ್ರವಲ್ಲದೆ, ಅದರ ದೂರದ ಪ್ರದೇಶಗಳಿಗೆ ಸೇವೆ ಸಲ್ಲಿಸುವ ಸಂಸ್ಥೆಗಳ ಮೂಲಕವೂ ಸಂಪರ್ಕ ಹೊಂದಿದೆ ಎಂದು ಅವರು ಹೇಳಿದರು. ಡಿಜಿಟಲ್ ಇಂಡಿಯಾ ದೇಶಾದ್ಯಂತ ನಂಬಿಕೆಯ ಮೂಲವಾಗಿದೆ ಎಂಬುದಕ್ಕೆ ಸುಮಾರು 14,500 ಅಡಿ ಎತ್ತರದಲ್ಲಿ ಕ್ಯುಆರ್-ಕೋಡ್ ಪಾವತಿ ಸೌಲಭ್ಯ ಸಿಕ್ಕಿದ್ದನ್ನು ಪ್ರಸ್ತಾಪಿಸಿದರು. ಮಹಿಳಾ ಸ್ವಸಹಾಯ ಗುಂಪುಗಳೊಂದಿಗೆ ನಡೆಸಿದ ಸಂವಹನಗಳಿಂದಾಗಿ ಹೋಂಸ್ಟೇಗಳು, ಡಿಜಿಟಲ್ ವೇದಿಕೆಗಳು ಮತ್ತು ಸಮುದ್ರ ಮುಳ್ಳುಗಿಡ ಆಧಾರಿತ ಉತ್ಪನ್ನಗಳ ಮಾರುಕಟ್ಟೆ ಮೂಲಕ ಉದ್ಯಮಶೀಲತೆ ನಡೆಸುತ್ತಿದ್ದೇನೆ ಎಂದರು. ಪ್ರಧಾನ ಮಂತ್ರಿ ಮುದ್ರಾ ಯೋಜನೆ ಮತ್ತು ದೀನದಯಾಳ್ ಅಂತ್ಯೋದಯ ಯೋಜನೆ ಕುರಿತ ಚರ್ಚೆಗಳು ಜೀವನೋಪಾಯದ ಅವಕಾಶಗಳನ್ನು ವಿಸ್ತರಿಸುವತ್ತ ಗಮನ ಹರಿಸಿದವು. ರಾತ್ರಿ ಪ್ರವಾಸೋದ್ಯಮಕ್ಕೆ ಈ ಪ್ರದೇಶದ ಸಾಮರ್ಥ್ಯವನ್ನು ಗಮನಿಸುವುದರ ಜೊತೆಗೆ, ಸಂಪರ್ಕ, ಪ್ರವಾಸೋದ್ಯಮ ಮತ್ತು ಆರ್ಥಿಕ ಚಟುವಟಿಕೆ ಸುಧಾರಿಸುವಲ್ಲಿ ಗಡಿ ರಸ್ತೆಗಳ ಸಂಘಟನೆ ನಿರ್ಮಿಸಿದ ಚಿಚಮ್ ಸೇತುವೆ ನಿಜಕ್ಕೂ ಅನನ್ಯ ಎಂದು ಅವರು ಪ್ರಶಂಸಿಸಿದರು.
ತಂತ್ರಜ್ಞಾನವು ದೇಶದ ಮೂಲೆ ಮೂಲೆಯನ್ನು ತಲುಪಿದೆ. ಸ್ಥಳೀಯ ಉತ್ಪನ್ನಗಳನ್ನು ಖರೀದಿಸುವುದರಿಂದ ಉದ್ಯೋಗ ಸೃಷ್ಟಿಯಾಗುತ್ತದೆ, ಜೀವನೋಪಾಯವನ್ನು ಬೆಂಬಲಿಸುತ್ತದೆ ಮತ್ತು ಭಾರತದಾದ್ಯಂತ ಪ್ರಾದೇಶಿಕ ಗುರುತುಗಳನ್ನು ಸಾಗಿಸುತ್ತದೆ ಎಂದು ಗಮನಿಸಿದ ಪ್ರಧಾನಮಂತ್ರಿ ಶ್ರೀ ಮೋದಿ, “ನೀವು ಎಲ್ಲೇ ಪ್ರಯಾಣಿಸಿದರೂ, ನಿಮ್ಮ ಪ್ರಯಾಣ ಬಜೆಟ್ನ ಕನಿಷ್ಠ 5 ಪ್ರತಿಶತವನ್ನು ಸ್ಥಳೀಯ ಜನರಿಂದ ಉತ್ಪನ್ನಗಳನ್ನು ಖರೀದಿಸಲು ವೆಚ್ಚ ಮಾಡಿ” ಎಂದು ಕಿವಿಮಾತು ಹೇಳಿದರು.
ಸಂವಾದ ಮುಕ್ತಾಯಗೊಳಿಸುತ್ತಾ ಮಾತನಾಡಿದ ಪ್ರಧಾನಮಂತ್ರಿ ಅವರು, ಯುವ ಜನರಿಗೆ ಶುಭ ಹಾರೈಸಿದರು. ಭಾರತದ ಗಡಿ ಗ್ರಾಮಗಳ ಪರಿವರ್ತನೆಯನ್ನು ಯುವ ಜನರು ನೇರವಾಗಿ ಅನುಭವಿಸಲು, ಹಳತಾದ ಗ್ರಹಿಕೆಗಳನ್ನು ಹೋಗಲಾಡಿಸಲು ಮತ್ತು ದೇಶದ ಸಾಂಸ್ಕೃತಿಕ ವೈವಿಧ್ಯತೆ, ಪ್ರಗತಿ, ಸಮುದಾಯದ ಭಾಗವಹಿಸುವಿಕೆ ಮತ್ತು ಏಕ ಭಾರತ, ಶ್ರೇಷ್ಠ ಭಾರತದ ಮನೋಭಾವದ ಬಗ್ಗೆ ಅವರ ತಿಳಿವಳಿಕೆಯನ್ನು ಹೆಚ್ಚಿಸಲು ಅನುವು ಮಾಡಿಕೊಡುವಲ್ಲಿ ಮೈಭಾರತ್ ಹೊಂದಿರುವ ನಿರ್ಣಾಯಕ ಪಾತ್ರವನ್ನು ಕಾರ್ಯಕ್ರಮವು ಉಲ್ಲೇಖಿಸಿದೆ ಎಂದರು.
*****
Interacting with the participants of the Viksit Vibrant Village Programme. Great to see that the initiative is instilling a deeper sense of nation-building among the youth.#Youth4ViksitBharat #MYBharat https://t.co/2vCFle03vY
— Narendra Modi (@narendramodi) July 26, 2026
विकसित गांव, विकसित भारत की भी आधारशिला है: PM @narendramodi
— PMO India (@PMOIndia) July 26, 2026
हमारी सरकार ने, सीमावर्ती गांवों को... देश का प्रथम गांव माना: PM @narendramodi
— PMO India (@PMOIndia) July 26, 2026
विकसित Vibrant Village की ये यात्रा... सबको जोड़ने, सबसे जुड़ने का ही एक माध्यम है: PM @narendramodi
— PMO India (@PMOIndia) July 26, 2026