Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಮುಖ ಮೂಲಸೌಕರ್ಯ ವಲಯಗಳ ಕಾರ್ಯಕ್ಷಮತೆ ಪರಾಮರ್ಶೆ ನಡೆಸಿದ ಪ್ರಧಾನಿ

ಪ್ರಮುಖ ಮೂಲಸೌಕರ್ಯ ವಲಯಗಳ ಕಾರ್ಯಕ್ಷಮತೆ ಪರಾಮರ್ಶೆ ನಡೆಸಿದ ಪ್ರಧಾನಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಮಂಗಳವಾರ, ರಸ್ತೆ, ರೈಲು, ವಿಮಾನ ನಿಲ್ದಾಣ, ಬಂದರು, ಡಿಜಿಟಲ್ ಮತ್ತು ಕಲ್ಲಿದ್ದಲು ಸೇರಿದಂತೆ ಪ್ರಮುಖ ಮೂಲಸೌಕರ್ಯ ವಲಯಗಳ ಕಾರ್ಯಕ್ಷಮತೆಯ ಪ್ರಗತಿ ಪರಿಶೀಲನೆ ನಡೆಸಿದರು. ನಾಲ್ಕೂವರೆ ಗಂಟೆಗಳ ಕಾಲ ನಡೆದ ಈ ಪರಿಶೀಲನಾ ಸಭೆಯಲ್ಲಿ ಪ್ರಧಾನಮಂತ್ರಿಗಳ ಕಾರ್ಯಾಲಯ, ನೀತಿ ಆಯೋಗ ಮತ್ತು ಭಾರತ ಸರ್ಕಾರದ ಎಲ್ಲ ಮೂಲಸೌಕರ್ಯ ಸಚಿವಾಲಯಗಳ ಉನ್ನತ ಅಧಿಕಾರಿಗಳು ಪಾಲ್ಗೊಂಡಿದ್ದರು.

ನೀತಿ ಆಯೋಗದ ಸಿಇಓ ಪ್ರಸ್ತುತಪಡಿಸಿದ ಪ್ರಾತ್ಯಕ್ಷಿಕೆಯಲ್ಲಿ, ಹಲವು ಪ್ರದೇಶಗಳಲ್ಲಿ ಮತ್ತು ಮೂಲಸೌಕರ್ಯ ವಲಯದಲ್ಲಿ ಗಮನಾರ್ಹ ಪ್ರಗತಿ ಆಗಿರುವುದನ್ನು ಉಲ್ಲೇಖಿಸಲಾಯಿತು. ರಸ್ತೆ ಮತ್ತು ರೈಲು ವಲಯದಲ್ಲಿನ ಪ್ರಗತಿಯ ವಿಸ್ತೃತ ಪರಾಮರ್ಶೆ ನಡೆಸಿದ ಪ್ರಧಾನಮಂತ್ರಿಯವರು, ಹಾಲಿ ಯೋಜನೆಗಳ ಬಗ್ಗೆ ಏಕೀಕೃತ ವಿಧಾನಕ್ಕೆ ಮತ್ತು ಅವುಗಳನ್ನು ಶಿಸ್ತಿನ ಕಾಲಮಿತಿಯಲ್ಲಿ ಪೂರ್ಣಗೊಳಿಸುತ್ತ ಕಾರ್ಯೋನ್ಮುಖರಾಗುವಂತೆ ಸೂಚಿಸಿದರು.

ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಅಡಿಯಲ್ಲಿ ಪ್ರತಿನಿತ್ಯ ಗ್ರಾಮೀಣ ರಸ್ತೆಗಳ ನಿರ್ಮಾಣದ ಸರಾಸರಿ ದರದಲ್ಲಿ 130 ಕಿ.ಮೀ ಸಾಧನೆ ಮಾಡಲಾಗಿದೆ.ಇದರಿಂದಾಗಿ 2016-17ನೇ ಸಾಲಿನಲ್ಲಿ ಪಿ.ಎಂ.ಜಿ.ಎಸ್.ವೈ. ರಸ್ತೆಗಳಲ್ಲಿ 47,400 ಕಿ.ಮೀ. ರಸ್ತೆ ಸೇರ್ಪಡೆಯಾಗಿದೆ. ಹೆಚ್ಚುವರಿಯಾಗಿ 11,641 ವಸತಿಗಳು ಇದೇ ಅವಧಿಯಲ್ಲಿ ರಸ್ತೆಯೊಂದಿಗೆ ಸಂಪರ್ಕ ಹೊಂದಿವೆ.

17ನೇ ಹಣಕಾಸು ವರ್ಷದಲ್ಲಿ ಅಸಾಂಪ್ರಾದಾಯಿಕ ಸಾಮಗ್ರಿಗಳಾದ ತ್ಯಾಜ್ಯ ಪ್ಲಾಸ್ಟಿಕ್, ಕೋಲ್ಡ್ ಮಿಕ್ಸ್, ಜಿಯೋ ಟೆಕ್ಸ್ ಟೈಲ್ಸ್, ಹಾರುಬೂದಿ, ಕಬ್ಬಿಣ ಮತ್ತು ತಾಮದ್ರದ ಗಸಿಯನ್ನು ಬಳಸಿ ವ್ಯಾಪಕವಾಗಿ 4000 ಕಿ.ಮೀ.ಗೂ ಹೆಚ್ಚು ಗ್ರಾಮೀಣ ರಸ್ತೆಯನ್ನು ಹಸಿರು ತಂತ್ರಜ್ಞಾನ ಬಳಸಿ ನಿರ್ಮಿಸಲಾಗಿದೆ ಎಂದು ತಿಳಿಸಲಾಯಿತು.

ಪ್ರಧಾನಮಂತ್ರಿಯವರು ಗ್ರಾಮೀಣ ರಸ್ತೆಗಳ ನಿರ್ಮಾಣ ಮತ್ತು ಅವುಗಳ ಗುಣಮಟ್ಟದ ಬಗ್ಗೆ ಸಮರ್ಥವಾಗಿ ಮತ್ತು ಕಠಿಣ ನಿಗಾಕ್ಕೆ ಸೂಚನೆ ನೀಡಿದರು. ಇದಕ್ಕಾಗಿ ಈಗಾಗಲೇ ಬಳಸಲಾಗುತ್ತಿರುವ ತಂತ್ರಜ್ಞಾನದ ಜೊತೆಗೆ ಬಾಹ್ಯಾಕಾಶ ತಂತ್ರಜ್ಞಾನ ಅಂದರೆ ‘ಮೇರಿ ಸಡಕ್’ ಆಪ್ ಅನ್ನೂ ಬಳಕೆ ಮಾಡಿಕೊಳ್ಳುವಂತೆ ನಿರ್ದೇಶನ ನೀಡಿದರು. ಸಾಧ್ಯವಾದಷ್ಟು ಶೀಘ್ರ ಸಂಪರ್ಕವನ್ನೇ ಹೊಂದದ ವಸತಿಗಳಿಗೆ ತ್ವರಿತವಾಗಿ ಸಂಪರ್ಕ ಬೆಸೆಯುವ ಕಾರ್ಯ ಪೂರ್ಣಗೊಳಿಸುವಂತೆ ಕರೆ ನೀಡಿದರು.

ರಸ್ತೆಗಳ ನಿರ್ಮಾಣದಲ್ಲೂ ಹೊಸ ತಂತ್ರಜ್ಞಾನ ಬಳಕೆ ಮಾಡಿಕೊಳ್ಳುವಂತೆ ಪ್ರಧಾನಿ ನಿರ್ದೇಶನ ನೀಡಿದರು. ಮೂಲಸೌಕರ್ಯ ನಿರ್ಮಾಣದ ತಂತ್ರಜ್ಞಾನದ ಆನ್ವಯಿಕಗಳು ಮತ್ತು ಭಾರತದಲ್ಲಿ ಅದರ ಕಾರ್ಯ ಸಾಧ್ಯತೆಯ ಕುರಿತಂತೆ ಜಾಗತಿಕ ಗುಣಮಟ್ಟದ ಪರಿಶೀಲನೆ ನಡೆಸುವಂತೆ ನೀತಿ ಆಯೋಗಕ್ಕೆ ಅವರು ತಿಳಿಸಿದರು.

ಹೆದ್ದಾರಿ ವಲಯದಲ್ಲಿ 26,000 ಕಿ.ಮೀ.ಗಳ ನಾಲ್ಕು ಅಥವಾ 6 ಪಥದ ರಾಷ್ಟ್ರೀಯ ಹೆದ್ದಾರಿಗಳನ್ನು 17ನೇ ಆರ್ಥಿಕ ವರ್ಷದಲ್ಲಿ ನಿರ್ಮಿಸಲಾಗಿದೆ ಮತ್ತು ವೇಗದಲ್ಲಿ ಸುಧಾರಣೆ ಆಗಿದೆ.

ರೈಲ್ವೆ ವಲಯದಲ್ಲಿ 2016-17ನೇ ಸಾಲಿನಲ್ಲಿ 400 ಕಿ.ಮೀ. ಗುರಿಗೆ ವಿರುದ್ಧವಾಗಿ 953 ಕಿ.ಮೀ. ಹೊಸ ಮಾರ್ಗವನ್ನು ನಿರ್ಮಿಸಲಾಗಿದೆ. 2000 ಕಿ.ಮೀ. ಮಾರ್ಗಕ್ಕೆ ವಿದ್ಯುದ್ದೀಕರಣ ಮತ್ತು 1000 ಕಿ.ಮೀ. ಗೇಜ್ ಪರಿವರ್ತನೆಯನ್ನು ಇದೇ ಅವಧಿಯಲ್ಲಿ ಮಾಡಲಾಗಿದೆ. 2016-17ನೇ ಸಾಲಿನಲ್ಲಿ 1500ಕ್ಕೂ ಹೆಚ್ಚು ಮಾನವರಹಿತ ಕ್ರಾಸಿಂಗ್ ಗಳನ್ನು ತೆಗೆಯಲಾಗಿದೆ. ಗ್ರಾಹಕರ ಅನುಭವ ಹೆಚ್ಚಿಸುವ ಕ್ರಮವಾಗಿ, 115 ರೈಲು ನಿಲ್ದಾಣಗಳಲ್ಲಿ ವೈಫೈ ಸೌಲಭ್ಯ ಕಲ್ಪಿಸಲಾಗಿದೆ ಮತ್ತು 34000 ಜೈವಿಕ ಶೌಚಾಲಯ ಸೇರ್ಪಡೆ ಮಾಡಲಾಗಿದೆ. ರೈಲು ನಿಲ್ದಾಣಗಳ ಮರು ಅಭಿವೃದ್ಧಿಗೆ ಸಂಬಂಧಿಸಿದ ಕಾಮಗಾರಿ ಮತ್ತು ಪ್ರಯಾಣೇತರ ವೆಚ್ಚ ಉತ್ಪತ್ತಿಯಲ್ಲಿ ಹೆಚ್ಚಿನ ರಚನಾತ್ಮಕತೆಗೆ ಪ್ರಧಾನಮಂತ್ರಿಯವರು ಕರೆ ನೀಡಿದರು.

ರಸ್ತೆ ಮತ್ತು ರೈಲು ವಲಯದಲ್ಲಿನ ಮಹತ್ವದ ಯೋಜನೆಗಳ ಪ್ರಗತಿ, ಅಂದರೆ ಪೂರ್ವ ಪೆರಿಫೆರಲ್ ಎಕ್ಸ್ ಪ್ರೆಸ್ ಮಾರ್ಗ, ಚಾರ್ ಧಾಮ್ ಯೋಜನೆ, ಖ್ವಾಜಿಗುಂಡ್ – ಬನಿಹಾಲ್ ಸುರಂಗ, ಚೀನಬ್ ರೈಲ್ವೆ ಸೇತುವೆ, ಮತ್ತು ಜಿರಿಬಮ್ – ಇಂಪಾಲ್ ಯೋಜನೆಗಳನ್ನೂ ಪರಾಮರ್ಶಿಸಲಾಯಿತು. ವಾಯುಯಾನ ಕ್ಷೇತ್ರದಲ್ಲಿ ಪ್ರಾದೇಶಿಕ ಸಂಪರ್ಕ ಯೋಜನೆಯು 43 ತಾಣಗಳನ್ನು ಸಂಪರ್ಕಿಸುತ್ತಿದೆ, ಇದರಲ್ಲಿ ಈವರೆಗೆ ಸೇವೆಯನ್ನೇ ಪಡೆಯದ 31 ತಾಣಗಳೂ ಸೇರಿವೆ. ವಾಯುಯಾನ ಕ್ಷೇತ್ರದಲ್ಲಿ ಪ್ರಯಾಣಿಕರ ಸಾಮರ್ಥ್ಯ ವಾರ್ಷಿಕ 282 ದಶಲಕ್ಷ ತಲುಪಿದೆ.

ಬಂದರು ಕ್ಷೇತ್ರದಲ್ಲಿ ಸಾಗರಮಾಲಾ ಯೋಜನೆ ಅಡಿ 415 ಯೋಜನೆಗಳನ್ನು 8 ಲಕ್ಷ ಕೋಟಿ ರೂಪಾಯಿ ಹೂಡಿಕೆಗಾಗಿ ಗುರುತಿಸಲಾಗಿದೆ, ಮತ್ತು 1.37 ಲಕ್ಷ ಕೋಟಿ ರೂಪಾಯಿ ಮೌಲ್ಯದ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಪ್ರಧಾನಮಂತ್ರಿಯವರು ಹಡಗುಗಳ ಪ್ರಯಾಣದ ಸಮಯ ಮತ್ತು ಎಕ್ಸಿಮ್ ಸರಕುಗಳ ವಿಲೇವಾರಿಯ ಉತ್ತಮ ಫಲಶ್ರುತಿಯನ್ನು ಒತ್ತಿ ಹೇಳಿದ್ದಾರೆ. 2016-17ನೇ ಸಾಲಿನಲ್ಲಿ ಪ್ರಮುಖ ಬಂದರುಗಳಲ್ಲಿ ದಾಖಲೆಯ 100.4 ಎಂ.ಟಿ.ಪಿ.ಎ. ರೆಚ್ಚುವರಿ ಸಾಮರ್ಥ್ಯ ಸೇರ್ಪಡೆಯಾಗಿದೆ. ಎಲ್ಲ 193 ಲೈಟ್ ಹೌಸ್ ಗಳಿಗೆ ಸೌರ ಇಂಧನ ಶಕ್ತಿ ಒದಗಿಸಲಾಗಿದೆ. ಎಲ್ಲ ಪ್ರಮುಖ ಬಂದರುಗಳಲ್ಲಿ ಭೂ ದಾಖಲೆಗಳ ಡಿಜಿಟಲೀಕರಣ ಪೂರ್ಣಗೊಂಡಿದೆ.

ಡಿಜಿಟಲ್ ಮೂಲಸೌಕರ್ಯ ವಲಯದಲ್ಲಿ 2016-17ನೇ ಸಾಲಿನಲ್ಲಿ ಎಡ ಪಂಥೀಯ ವಿಧ್ವಂಸಕತೆಯಿಂದ ಬಾಧಿತವಾದ ಜಿಲ್ಲೆಗಳಲ್ಲಿ 2187 ಮೊಬೈಲ್ ಗೋಪುರಗಳನ್ನು ಅಳವಡಿಸಲಾಗಿದೆ. ರಾಷ್ಟ್ರೀಯ ಆಪ್ಟಿಕಲ್ ಫೈಬರ್ ಜಾಲದ ಪ್ರಗತಿಯನ್ನೂ ಪರಾಮರ್ಶಿಸಲಾಯಿತು. ಹೊರಹೊಮ್ಮುತ್ತಿರುವ ಡಿಜಿಟಲ್ ಜಾಲವು, ಇನ್ನು ಕೆಲವೇ ತಿಂಗಳುಗಲಲ್ಲಿ ಸಾವಿರಾರು ಗ್ರಾಮ ಪಂಚಾಯ್ತಿಗಳನ್ನು ಸಂಪರ್ಕಿಸಲಿದ್ದು, ಅದಕ್ಕೆ ಸೂಕ್ತವಾದ ಆಡಳಿತ ಕ್ರಮವೂ ಸೇರಬೇಕು ಆಗ, ಇದು ಉತ್ತಮ ಗುಣಮಟ್ಟದ ಬದುಕಿಗೆ ಇಂಬು ನೀಡುತ್ತದೆ ಮತ್ತು ಗ್ರಾಮೀಣ ಪ್ರದೇಶದ ಜನರ ಹೆಚ್ಚಿನ ಸಬಲೀಕರಣಕ್ಕೆ ಕಾರಣವಾಗುತ್ತದೆ ಎಂದು ಪ್ರಧಾನಿ ಪ್ರತಿಪಾದಿಸಿದರು.

ಇನ್ನು ಕಲ್ಲಿದ್ದಲು ವಲಯದಲ್ಲಿ 2016-17ರಲ್ಲಿ ತರ್ಕಬದ್ಧ ಕಲ್ಲಿದ್ದಲು ಸಂಪರ್ಕ ಮತ್ತು ಸಾಗಣೆಯಿಂದ ವಾರ್ಷಿಕ 2500 ಕೋಟಿ ರೂ. ಉಳಿತಾಯ ಸಾಧ್ಯವಾಗಿದೆ. ಕಳೆದ ವರ್ಷ ಕಲ್ಲಿದ್ದಲು ಆಮದಿನಲ್ಲಿ ಇಳಿಕೆ ಹಿನ್ನೆಲೆಯಲ್ಲಿ ಕಲ್ಲಿದ್ದಲು ಆಮದಿನ ಪರ್ಯಾಯ ಮತ್ತು ಅನಿಲೀಕರಣ ತಂತ್ರಜ್ಞಾನ ಸೇರಿದಂತೆ ಹೊಸ ಕಲ್ಲಿದ್ದಲು ತಂತ್ರಜ್ಞಾನದ ಆನ್ವಯಿಕಗಳಲ್ಲಿ ಇನ್ನೂ ಹೆಚ್ಚು ಪ್ರಯತ್ನಗಳಿಗೆ ಪ್ರಧಾನಮಂತ್ರಿಯವರು ಸೂಚಿಸಿದರು.

***

AKT/HS