ಪಿಎಂಇಂಡಿಯಾ
ರಾಮೇಶ್ವರಂನ ಈ ಪವಿತ್ರ ಮಣ್ಣಿನ ಸ್ಪರ್ಶ ನನಗೆ ಹೆಮ್ಮೆ ಎನಿಸುತ್ತಿದೆ. ರಾಮೇಶ್ವರಂ ದೇಶದ 12 ಜ್ಯೋರ್ತಿಲಿಂಗಗಳನ್ನು ಹೊಂದಿರುವ ತವರೂರು ಎಂದು ಹೆಸರಾಗಿರುವುದಷ್ಟೇ ಅಲ್ಲ, ರಾಮೇಶ್ವರಂ ಆಳವಾದ ಧಾರ್ಮಿಕ ಜ್ಞಾನವುಳ್ಳ ‘ಜ್ಞಾನ ಪುಂಜ್’ ಕೇಂದ್ರವಾಗಿದೆ. ಅಮೆರಿಕದಿಂದ ಹಿಂತಿರುಗಿದ ನಂತರ ಸ್ವಾಮಿ ವಿವೇಕಾನಂದ ಅವರು 1897ರಲ್ಲಿ ಭೇಟಿ ನೀಡಿದ್ದ ಜಾಗವಿದು ಮತ್ತು ಭಾರತದ ಅತ್ಯಂತ ಹೆಮ್ಮೆಯ ಪುತ್ರ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರನ್ನು ನೀಡಿದಂತಹ ಪವಿತ್ರ ಭೂಮಿ. ಡಾ. ಕಲಾಂ ಅವರು ಸದಾ ತಮ್ಮ ಕ್ರಿಯೆ ಮತ್ತು ಆಲೋಚನೆಗಳ ಮೂಲಕ ರಾಮೇಶ್ವರಂನ ಸರಳತೆ ಮತ್ತು ಆಳ ಹಾಗೂ ಶಾಂತತೆಯನ್ನು ಪ್ರತಿಬಿಂಬಿಸುತ್ತಿದ್ದರು.
ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಪುಣ್ಯತಿಥಿ ಅಂಗವಾಗಿ ನಾನು ರಾಮೇಶ್ವರಂಗೆ ಬಂದಿದ್ದೇನೆ. ಇದು ನನಗೆ ಅತ್ಯಂತ ಭಾವನಾತ್ಮಕ ಕ್ಷಣ. ಕಳೆದ ವರ್ಷ ಡಾ. ಕಲಾಂ ಅವರ ಸ್ಮರಣೆಗಾಗಿ ರಾಮೇಶ್ವರಂನಲ್ಲಿ ಒಂದು ಸ್ಮಾರಕವನ್ನು ನಿರ್ಮಿಸಲು ನಿರ್ಣಯವನ್ನು ಕೈಗೊಂಡಿದ್ದೆವು ಮತ್ತು ಆ ಭರವಸೆಯನ್ನು ಕೊಟ್ಟಿದ್ದೆವು. ಆ ನಿರ್ಣಯ ಇಂದು ಈಡೇರಿದೆ ಎಂಬುದು ನನಗೆ ಸಂತಸ ತಂದಿದೆ.
ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಅತ್ಯಲ್ಪ ಅವಧಿಯಲ್ಲಿಯೇ ಈ ಸ್ಮಾರಕವನ್ನು ನಿರ್ಮಿಸಿದೆ. ಈ ಸ್ಮಾರಕ ದೇಶದ ಪ್ರಸಕ್ತ ಹಾಗೂ ಭವಿಷ್ಯದ ತಲೆಮಾರುಗಳಿಗೆ ಸ್ಫೂರ್ತಿ ತುಂಬಲಿದೆ. ಕಳೆದ ವರ್ಷ ನಾನು
ಶ್ರೀ ವೆಂಕಯ್ಯ ನಾಯ್ಡು ಅವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ರಚಿಸಿ, ದೇಶದ ಮುಂದಿನ ಯುವ ತಲೆಮಾರುಗಳಿಗೆ ಉತ್ತೇಜನ ನೀಡುವಂತಹ ಸ್ಮಾರಕವನ್ನು ಈ ಜಾಗದಲ್ಲಿ ನಿರ್ಮಿಸುವ ಹೊಣೆಯನ್ನು ಡಿಆರ್ಡಿಒ ಮತ್ತು ತಮಿಳುನಾಡು ಸರ್ಕಾರಕ್ಕೆ ವಹಿಸಿಕೊಟ್ಟಿದ್ದೆ. ಇಂದು ಸ್ಮಾರಕವನ್ನು ನಾವು ಕಣ್ಣಾರೆ ಕಾಣುತ್ತಿದ್ದೇವೆ. ಅತಿ ಕಡಿಮೆ ಅವಧಿಯಲ್ಲಿಯೇ ಸ್ಮಾರಕ ನಿರ್ಮಾಣವಾಗಿರುವುದು ನನಗೆ ಹೆಮ್ಮೆ ಎನಿಸುತ್ತಿದೆ. ಅದ್ಭುತ ರೀತಿಯಲ್ಲಿ, ವಿನೂತನ ಆಲೋಚನೆ ಮತ್ತು ಕಲ್ಪನೆಯಿಂದಾಗಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಆಲೋಚನೆ, ಕಾರ್ಯಶೈಲಿ, ಜೀವನ ಆದರ್ಶ, ನಿರ್ಣಯಗಳನ್ನು ಬಿಂಬಿಸುವ ಸ್ಮಾರಕ ಸಿದ್ಧವಾಗಿದೆ. ಅದಕ್ಕಾಗಿ ನಾನು ಶ್ರೀ ವೆಂಕಯ್ಯ ನಾಯ್ಡು ಮತ್ತು ಅವರ ತಂಡವನ್ನು ಹಾಗೂ ತಮಿಳುನಾಡು ಸರ್ಕಾರವನ್ನು, ಭಾರತ ಸರ್ಕಾರದ ಎಲ್ಲಾ ಇಲಾಖೆಗಳನ್ನು ಮತ್ತು ಡಿಆರ್ಡಿಒ ಸಂಸ್ಥೆಯನ್ನು ಅಭಿನಂದಿಸುತ್ತೇನೆ.
ನಮ್ಮ ದೇಶದಲ್ಲಿ ಯಾವುದೇ ಕೆಲಸ ನಮ್ಮ ಕಲ್ಪನೆಯಂತೆ ಕಾಲಮಿತಿಯೊಳಗೆ ಪೂರ್ಣಗೊಂಡರೆ ನಿಮಗೆ ಆಶ್ಚರ್ಯವಾಗಬಹುದು, ಆಗ ಸಾರ್ವಜನಿಕರೂ ಸಹ, ಸರ್ಕಾರ ಈ ರೀತಿ ಕೆಲಸ ಮಾಡುತ್ತದೆಯೇ ಎಂದು ಅಚ್ಚರಿ ವ್ಯಕ್ತಪಡಿಸುತ್ತಾರೆ?. ಆದರೆ ಇದು ಸಾಧ್ಯವಿದೆ. ಏಕೆಂದರೆ ದೆಹಲಿಯಲ್ಲಿ ಇಂದು ಇರುವ ನಮ್ಮ ಸರ್ಕಾರ ದೇಶದ ಜನರು ನಮಗೆ ವಹಿಸಿರುವ ಕೆಲಸಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವ ಬದ್ಧತೆಯನ್ನು ಹೊಂದಿದ್ದೇವೆ. ಈ ಸರ್ಕಾರ ಇಡೀ ಕಾರ್ಯಶೈಲಿಯನ್ನೇ ಬದಲಾಯಿಸಿದೆ ಮತ್ತು ನಿಗದಿತ ಅವಧಿಯಲ್ಲಿ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವ ಸಂಸ್ಕತಿಯನ್ನು ಅತ್ಯಂತ ಯಶಸ್ವಿಯಾಗಿ ಉತ್ತೇಜಿಸಿದೆ.
ಆದರೆ ನಾವು ಎಲ್ಲ ಕೆಲಸವನ್ನು ಸರ್ಕಾರವೇ ಮಾಡಿದೆ ಅಥವಾ ಹಣ, ಯೋಜನೆ ಮತ್ತು ಶಕ್ತಿಯಿಂದಾಗಿದೆ ಎಂದು ಹೇಳಲಾಗದು. ಈ ಸ್ಮಾರಕದ ಯಶಸ್ವಿ ನಿರ್ಮಾಣದ ಹಿಂದಿರುವ ಒಂದು ರಹಸ್ಯವನ್ನು ನಿಮ್ಮೊಡನೆ ಹಂಚಿಕೊಳ್ಳಲು ಬಯಸುತ್ತೇನೆ. ಇದು ದೇಶದ ಎಲ್ಲ 125 ಕೋಟಿ ಜನತೆಗೆ ಹೆಮ್ಮೆ ತರುವ ಸಂಗತಿ. ಆ ರಹಸ್ಯ ಅಂಶ ಏನೆಂದರೆ ಸರ್ಕಾರ ಹಣ ಹಾಗೂ ಯೋಜನೆಯಲ್ಲದೆ, ದೇಶದ ಪ್ರತಿಯೊಂದು ಮೂಲೆ ಮೂಲೆಯಿಂದ ಬಂದಿರುವ ಕರಕುಶಲಕರ್ಮಿಗಳು, ಕಾರ್ಮಿಕರು, ಕಲಾವಿದರು ಮತ್ತು ವಿನ್ಯಾಸಗಾರರ ಅವಿರತ ದುಡಿಮೆ ಇದರ ಹಿಂದಿದೆ. ಭಾರತದ ಪ್ರತಿಯೊಂದು ಭಾಗದ ಜನರು ಈ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಈ ಕೆಲಸದಲ್ಲಿ ತೊಡಗಿದ್ದ ಕಾರ್ಮಿಕರು ಸರ್ಕಾರದ ನಿಯಮದಂತೆ ಬೆಳಗ್ಗೆ 5 ರಿಂದ ಸಂಜೆ 5ರ ವರೆಗೆ ಮಾತ್ರ ಕೆಲಸ ಮಾಡಲಿಲ್ಲ, ಸಂಜೆ 5 ರಿಂದ 6ರ ವರೆಗೆ ಮತ್ತೆ ಒಂದು ಗಂಟೆ ಕಾಲ ವಿಶ್ರಾಂತಿ ಪಡೆದು, ಚಹಾ ಸೇವಿಸಿ ಮತ್ತೆ ಸಂಜೆ 6 ರಿಂದ 8 ಗಂಟೆವರೆಗೆ ಹೆಚ್ಚುವರಿಯಾಗಿ ಕೆಲಸ ಮಾಡಿದ್ದಾರೆ. ಅವರು ಸಂಜೆ 6 ರಿಂದ 8 ಗಂಟೆವರೆಗೆ ಮಾಡಿರುವ ಹೆಚ್ಚುವರಿ ಕೆಲಸಕ್ಕೆ ಯಾವುದೇ ಕೂಲಿ ಇಲ್ಲ. ಅವರು ಡಾ. ಅಬ್ದುಲ್ ಕಲಾಂ ಜಿ ಅವರಿಗೆ ತಮ್ಮ ಕಠಿಣ ಪರಿಶ್ರಮ ಮತ್ತು ಪ್ರೀತಿಯಿಂದ ನೀಡಿರುವ ಗೌರವ ಇದು. ಅವರು ‘ಈ ಮೂಲಕ ನಾವು ಅವರಿಗೆ ಗೌರವ ನಮನ ಸಲ್ಲಿಸುತ್ತೇವೆ’ ಎಂದು ಹೇಳಿದ್ದರು.
ಈ ಪವಿತ್ರ ಕಾರ್ಯಕ್ಕೆ ಶ್ರದ್ಧೆಯಿಂದ ದುಡಿದು, ಸ್ಮಾರಕ ನಿರ್ಮಾಣದ ಕನಸು ಈಡೇರಿಕೆಗೆ ಶ್ರಮಿಸಿದ ಎಲ್ಲ ಬಡ ಕಾರ್ಮಿಕರಿಗೆ ನಾನು ತಲೆಬಾಗಿ ನಮಿಸುತ್ತೇನೆ. ಆ ಕೆಲಸಗಾರರು, ಕುಶಲಕರ್ಮಿಗಳು ಶ್ರೇಷ್ಠ ಕೆಲಸ ಮಾಡಿದ್ದಾರೆ. ಅದಕ್ಕಾಗಿ ಇಲ್ಲಿ ನೆರೆದಿರುವ ಎಲ್ಲರೂ ಎದ್ದು ನಿಂತು ಕರತಾಡನದ ಮೂಲಕ ಅವರನ್ನು ಅಭಿನಂದಿಸಬೇಕೆಂದು ಕೋರುತ್ತೇನೆ. ರಾಮೇಶ್ವರಂನಲ್ಲಿನ ಈ ಅಬ್ದುಲ್ ಕಲಾಂ ಅವರ ಸ್ಮಾರಕ ಕಾರ್ಮಿಕರ ಹೃದಯದಲ್ಲಿ ದೇಶಭಕ್ತಿಯ ಸ್ಪೂರ್ತಿ ಉಕ್ಕಿದಾಗ, ಇಂತಹ ಶ್ರೇಷ್ಠ ಕೆಲಸಗಳಾಗುತ್ತವೆ ಎಂಬುದಕ್ಕೆ ಒಂದು ಉದಾಹರಣೆಯಾಗಿದೆ. ಹಾಗಾಗಿ ಈ ಶ್ರೇಷ್ಠ ಕೆಲಸ ಸಾಧಿಸಿದಂತಾಗಿದೆ. ನನಗೆ ಇಲ್ಲಿ ‘ಅಮ್ಮಾ’ ಅವರ ನೆನಪು ತುಂಬಾ ಕಾಡುತ್ತಿದೆ ಮತ್ತು ನನಗೆ ಶೂನ್ಯಭಾವ ಕಾಡುತ್ತಿದೆ. ಇಂದು ‘ಅಮ್ಮಾ’ ಅವರು ನಮ್ಮೊಡನೆ ಇದ್ದಿದ್ದರೆ ಕಾರ್ಮಿಕರು ಮಾಡಿರುವ ಈ ಕೆಲಸವನ್ನು ನೋಡಿ ತುಂಬಾ ಸಂತಸ ಪಡುತ್ತಿದ್ದರು ಮತ್ತು ಅವರೂ ಕೂಡ ಎಲ್ಲರಿಗೂ ಶುಭ ಕೋರುತ್ತಿದ್ದರು. ಅವರು ನಾವೆಲ್ಲ ನೆನಪಿನಲ್ಲಿಟ್ಟುಕೊಳ್ಳಬಹುದಾದಂತಹ ನಾಯಕರು. ಅವರ ಆತ್ಮ ಸದಾ ತಮಿಳುನಾಡಿನ ಭವಿಷ್ಯ ಉಜ್ವಲವಾಗಲಿ ಎಂದು ಆಶೀರ್ವದಿಸುತ್ತದೆ ಎಂದು ನಾನು ನಂಬಿದ್ದೇನೆ.
ಈ ಪವಿತ್ರ ರಾಮೇಶ್ವರಂನಿಂದ ನಾನು ದೇಶದ ಜನತೆಯಲ್ಲಿ ಇಂದು ಒಂದು ಮನವಿಯನ್ನು ಮಾಡಲು ಬಯಸುತ್ತೇನೆ. ಭಾರತದ ಪ್ರತಿಯೊಂದು ಮೂಲೆ-ಮೂಲೆಯ ಜನರು ರಾಮೇಶ್ವರಂಗೆ ಭೇಟಿ ನೀಡಬೇಕು. ನಾನು ಎಲ್ಲ ಪ್ರವಾಸ ಆಯೋಜಕರ ಬಳಿ ಮತ್ತು ರಾಮೇಶ್ವರಂಗೆ ಭೇಟಿ ನೀಡುವವರನ್ನು ಹಾಗೂ ರಾಮೇಶ್ವರಂಗೆ ಭೇಟಿ ನೀಡುವ ಎಲ್ಲ ಯುವ ಜನಾಂಗವನ್ನು ಕೋರುವುದೇನೆಂದರೆ ಹೊಸ ತಲೆಮಾರಿಗೆ ಸ್ಫೂರ್ತಿ ತುಂಬುವ ಅಬ್ದುಲ್ ಕಲಾಂ ಅವರ ಸ್ಮಾರಕಕ್ಕೆ ಭೇಟಿ ನೀಡಿ ಎಂದು. ಪ್ರತಿಯೊಬ್ಬರು ಇಂತಹ ಸ್ಫೂರ್ತಿದಾಯಕ ತಾಣಕ್ಕೆ ಖಂಡಿತ ಭೇಟಿ ನೀಡಲೇಬೇಕು.
ಇಂದಿನ ಕಾರ್ಯಕ್ರಮಗಳು ಒಂದು ರೀತಿಯ ಪಂಚಾಮೃತ ಅಥವಾ ಐದು ಬಗೆಯ ಅಮೃತವಿದ್ದಂತೆ. ಅಬ್ದುಲ್ ಕಲಾಂ ಅವರ ಪುಣ್ಯತಿಥಿಯಲ್ಲಿ ಭಾಗವಹಿಸಲು ಬಂದಿರುವ ನಾನು ಐದು ಬಗೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೇನೆ. ಅಬ್ದುಲ್ ಕಲಾಂ ಅವರ ಸ್ಮಾರಕ, ರೈಲು, ರಸ್ತೆ, ಭೂಮಿ ಮತ್ತು ಆಗಸ. ಇಂದು ನಮ್ಮ ಮೀನುಗಾರರು ಸಣ್ಣ ದೋಣಿಗಳನ್ನು ಸಮುದ್ರಕ್ಕೆ ಕೊಂಡೊಯ್ಯಲಿದ್ದಾರೆ. ಎಷ್ಟೋ ಬಾರಿ ಅವರು ಸಾಗರದ ಭಾರತೀಯ ಗಡಿಭಾಗದಲ್ಲೇ ಇದ್ದೇವೆ ಎಂದುಕೊಳ್ಳುತ್ತಾರೆ, ಹಾಗೊಂದು ವೇಳೆ ಅವರು ಗಡಿ ದಾಟಿದರೆ ಸಾಕಷ್ಟು ತೊಂದರೆ ಅನುಭವಿಸುತ್ತಾರೆ. ಕೇಂದ್ರ ಸರ್ಕಾರ ಪ್ರಧಾನಮಂತ್ರಿಗಳ ನೀಲಿ ಕ್ರಾಂತಿ ಯೋಜನೆಯಡಿ ಮೀನುಗಾರರಿಗೆ ಸಹಾಯ ಮಾಡುತ್ತಿದೆ. ಈ ಯೋಜನೆಯಡಿ ನಮ್ಮ ನೆರೆಯ ಗ್ರಾಮಸ್ಥರು ಸರ್ಕಾರದಿಂದ ಸಾಲ, ಅನುದಾನ ಮತ್ತು ಸಬ್ಸಿಡಿಯನ್ನು ಪಡೆಯುತ್ತಾರೆ. ಅಲ್ಲದೆ ಅವರು ದೊಡ್ಡ ಬಲೆಗಳನ್ನು ಸ್ವೀಕರಿಸಲಿದ್ದು, ಅವರುಗಳು ಆಳವಾದ ಸಮುದ್ರಕ್ಕೆ ಹೋಗಿ ಮೀನುಗಾರಿಕೆ ಮಾಡಬಹುದಾಗಿದೆ, ಇಂದು ಈ ಕಾರ್ಯಕ್ರಮ ಆರಂಭವಾಗಿದ್ದು, ಕೆಲವು ಮೀನುಗಾರರು ನನ್ನಿಂದ ಚೆಕ್ಗಳನ್ನು ಸ್ವೀಕರಿಸಿದ್ದಾರೆ.
ರಾಮೇಶ್ವರಂನ ಈ ಭೂಮಿ ಶ್ರೀರಾಮಚಂದ್ರನ ಜತೆ ನಂಟು ಹೊಂದಿದೆ. ರಾಮೇಶ್ವರಂನಿಂದ ಅಯೋಧ್ಯೆವರೆಗೆ ರೈಲು ರಸ್ತೆಯನ್ನು ಉದ್ಘಾಟನೆ ಮಾಡುವ ಅವಕಾಶ ದೊರಕ್ಕಿದ್ದಕ್ಕೆ ಇಂದು ನನಗೆ ತುಂಬಾ ಸಂತೋಷವಾಗುತ್ತಿದೆ. ರಾಮನ ಜನ್ಮಸ್ಥಳ ಅಯೋಧ್ಯೆಗೆ ಸಂಪರ್ಕ ಕಲ್ಪಿಸುವ ಶ್ರದ್ಧಾ ಸೇತು ಯೋಜನೆಗೆ ಚಾಲನೆ ನೀಡಲಾಗಿದೆ. ಅದೇ ರೀತಿ ಧನುಷ್ಕೋಟಿಗೆ ರಾಮಸೇತುವನ್ನು ನೋಡಲು ಹೋಗುವವರೆಲ್ಲ ಸಮುದ್ರದ ಮಾರ್ಗವಾಗಿ ಹೋಗಬಹುದಾಗಿದೆ. ಆ ಪ್ರಮುಖ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ ಮತ್ತು ಅದನ್ನು ಇಂದು ದೇಶಕ್ಕೆ ಸಮರ್ಪಿಸುವ ಅವಕಾಶ ನನಗೆ ಲಭಿಸಿದೆ.
ಸ್ವಾಮಿ ವಿವೇಕಾನಂದ ಅವರು ವಿಶ್ವವನ್ನೇ ಗೆದ್ದು, ಅವರಲ್ಲಿ ಭಾರತದ ಬಗ್ಗೆ ಜ್ಞಾನೋದಯ ನೀಡಿ ದೇಶಕ್ಕೆ ವಾಪಸ್ಸಾದ ನಂತರ ಅವರು 1897ರಲ್ಲಿ ರಾಮೇಶ್ವರಂಗೆ ಭೇಟಿ ನೀಡಿದ್ದರು. ವಿವೇಕಾನಂದರ ಹೆಸರಾಂತ ಸ್ಮಾರಕ ಇಲ್ಲೇ ಸನಿಹದಲ್ಲಿದೆ. ಕೆಲವು ಸರ್ಕಾರೇತರ ಸಂಸ್ಥೆಗಳು ಜಿಲ್ಲಾ ಕಲೆಕ್ಟರ್ ಅವರ ಸಹಭಾಗಿತ್ವದಲ್ಲಿ ಹಸಿರು ರಾಮೇಶ್ವರಂ ಮಾಡುವ ಕೆಲಸವನ್ನು ಕೈಗೆತ್ತಿಕೊಂಡಿದೆ ಎಂದು ನಾನು ಕೇಳಿದ್ದೇನೆ. ರಾಮೇಶ್ವರಂನ ಭವಿಷ್ಯಕ್ಕಾಗಿ ವಿಶೇಷವಾಗಿ ವಿವೇಕಾನಂದ ಕೇಂದ್ರ ಕ್ಕಾಗಿ ದುಡಿಯುತ್ತಿರುವ ಎಲ್ಲ ಸಂಸ್ಥೆಗಳನ್ನು ನಾನು ಅಭಿನಂದಿಸುತ್ತೇನೆ.
ಹಿಂದೂ ಮಹಾಸಾಗರ ಮತ್ತು ಭಾರತ 7500 ಕಿಲೋಮೀಟರ್ ಕರಾವಳಿ ತೀರವನ್ನು ಹೊಂದಿದೆ. ಆ ಮಾರ್ಗದಲ್ಲಿ ಬಂಡವಾಳ ಹೂಡಿಕೆಗೆ ಯಥೇಚ್ಚ ಅವಕಾಶಗಳಿವೆ. ಇದನ್ನು ಗಮನದಲ್ಲಿರಿಸಿಕೊಂಡು ಭಾರತ ಸರ್ಕಾರ ಸಾಗರಮಾಲಾ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಈ ಯೋಜನೆಯ ಪ್ರಮುಖ ಉದ್ದೇಶವೆಂದರೆ – ದೇಶದ ಕರಾವಳಿಯ ಬಳಸಿಕೊಂಡು ಭಾರತದ ಜಲಸಾರಿಗೆ ವಲಯವನ್ನು ಪರಿವರ್ತಿಸುವುದು. ಸಾಗರಮಾಲಾ ಯೋಜನೆಯಡಿ ನಾವು ವ್ಯಾಪಾರ ಮತ್ತು ಆಮದು ಹಾಗೂ ರಫ್ತಿನ ಸಾಗಣೆ ವೆಚ್ಚವನ್ನು ಕಡಿಮೆಗೊಳಿಸಲು ಪ್ರಯತ್ನಿಸುತ್ತಿದ್ದೇವೆ. ಈ ಯೋಜನೆ ಮೂಲಕ ಕರಾವಳಿ ಪ್ರದೇಶದಲ್ಲಿನ ಜನರ ಜೀವನದಲ್ಲಿ ಮಹತ್ವದ ಬದಲಾವಣೆಗಳನ್ನು ತರಲು ನಾವು ಪ್ರಯತ್ನ ನಡೆಸುತ್ತಿದ್ದೇವೆ.
ಅಬ್ದುಲ್ ಕಲಾಂ ಜಿ ಅವರಿಗೆ ಗೌರವ ಸಲ್ಲಿಸಲು ಡಿಆರ್ಡಿಒ ಈ ಸ್ಮಾರಕವನ್ನು ನಿರ್ಮಿಸಿರುವುದು ನಿಮಗೆ ಸಂತಸ ತಂದಿದೆ ಎಂದುಕೊಂಡಿದ್ದೇನೆ. ಅದೇ ರೀತಿಯಲ್ಲಿ ಡಿಆರ್ಡಿಒ ಅತ್ಯಂತ ಪ್ರಾಮುಖ್ಯತೆ ಹೊಂದಿದ್ದು, ಅದು ನಮ್ಮ ಮಿಲಿಟರಿ ಶಕ್ತಿಯನ್ನು ಹೆಚ್ಚಿಸಲು ಸಾಕಷ್ಟು ಕೆಲಸ ಮಾಡುತ್ತಿದೆ. ಇಂದಿನಿಂದ ಆರಂಭವಾದ ಈ ರೈಲಿನಂತೆ ಜನರ ಕಲ್ಯಾಣಕ್ಕಾಗಿ ಸಂಸ್ಥೆ ಹಲವು ಕೆಲಸಗಳನ್ನು ಕೈಗೆತ್ತಿಕೊಂಡಿದೆ. ಅಯೋಧ್ಯೆಯಿಂದ ರಾಮೇಶ್ವರಂಗೆ ಸಂಪರ್ಕ ಕಲ್ಪಿಸುವ ಶ್ರದ್ಧಾ ಸೇತು ರೈಲು ಅತ್ಯಂತ ಮಹತ್ವದಾಗಿದೆ. ಆ ರೈಲಿನಲ್ಲಿ ಎಲ್ಲ ಜೈವಿಕ ಶೌಚಾಲಯಗಳಿವೆ. ಈ ರೈಲು ಸ್ವಚ್ಛ ಭಾರತದ ನಮ್ಮ ಯೋಜನೆಗೆ ಇನ್ನಷ್ಟು ಉತ್ತೇಜನ ನೀಡಲಿದೆ.
ಗೆಳೆಯರೇ, ಡಾ. ಕಲಾಂ ಅವರು ಯಾರಿಗಾದರೂ ಹೆಚ್ಚಿನ ಸ್ಫೂರ್ತಿ ನೀಡಿದ್ದಾರೆಂದರೆ ಅದು ಈ ದೇಶದ ಯುವಜನತೆಗೆ. ಇಂದಿನ ಯುವಜನತೆ ಆಕೆಯಾಗಿರಬಹುದು ಅಥವಾ ಆತನಾಗಿರಬಹುದು ಅವರು ತಮ್ಮ ಸ್ವಂತ ಶಕ್ತಿಯ ಮೇಲೆ ಬೆಳೆಯಲು ಬಯಸುವವರು. ಯುವಕರು ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಭಾರತ ಸರ್ಕಾರ ಸ್ಟಾರ್ಟ್ ಅಪ್ ಇಂಡಿಯಾ, ಸ್ಟಾಂಡ್ಅಪ್ ಇಂಡಿಯಾ ಕಾರ್ಯಕ್ರಮಗಳನ್ನು ಆರಂಭಿಸಿದೆ. ಯುವಜನರ ಕೌಶಲ್ಯಾಭಿವೃದ್ಧಿಗಾಗಿ ದೇಶದ ಪ್ರತಿಯೊಂದು ಜಿಲ್ಲೆಗಳಲ್ಲೂ ಕೌಶಲ್ಯಾಭಿವೃದ್ಧಿ ಕೇಂದ್ರ ಮತ್ತು ತರಬೇತಿ ಕೇಂದ್ರಗಳನ್ನು ತೆರೆಯಲಾಗಿದೆ. ಸ್ವಂತ ಉದ್ದಿಮೆ ಆರಂಭಿಸುವ ಯುವಜನರಿಗೆ ಬಂಡವಾಳ ಸಮಸ್ಯೆ ಎದುರಾಗಬಾರದು ಎಂದು ಮುದ್ರಾ ಯೋಜನೆಯನ್ನು ಕೇಂದ್ರ ಸರ್ಕಾರ ಆರಂಭಿಸಿದೆ. ಈ ಮುದ್ರಾ ಯೋಜನೆಯಡಿ ಎಂಟು ಕೋಟಿ ಯುವಕರಿಗೆ ಸುಮಾರು ನಾಲ್ಕು ಲಕ್ಷ ಕೋಟಿಗೂ ಅಧಿಕ ಸಾಲವನ್ನು ವಿತರಿಸಲಾಗಿದೆ. ಅವರು ಆ ಮೂಲಕ ತಮ್ಮ ಜೀವನ ರೂಪಿಸಿಕೊಂಡು ಪ್ರಗತಿಯನ್ನು ಕಾಣಬಹುದಾಗಿದೆ. ಅಂತಹ ಯುವಕರಲ್ಲಿ ತಮಿಳುನಾಡಿನವರೇ ಸುಮಾರು ಒಂದು ಕೋಟಿ ಇದ್ದಾರೆಂದು ಹೇಳಲು ನನಗೆ ಸಂತೋಷವಾಗುತ್ತಿದೆ. ಈ ಅಂಕಿ-ಅಂಶ ತಮಿಳುನಾಡು ಸರ್ಕಾರ, ಯುವಜನರಿಗೆ ಸ್ವಯಂ ಉದ್ಯೋಗ ಒದಗಿಸಲು ಎಷ್ಟೊಂದು ಉತ್ತೇಜನ ಹಾಗೂ ಒಲವು ಹೊಂದಿದೆ ಎಂಬುದನ್ನು ತೋರಿಸುತ್ತದೆ.
ಕೇಂದ್ರ ಸರ್ಕಾರ, ರಾಜ್ಯದಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದೆ. ನವ ತಮಿಳುನಾಡು ನಿರ್ಮಾಣವಾಗದೇ ನವ ಭಾರತ ನಿರ್ಮಾಣ ಅಸಾಧ್ಯ. ಅದಕ್ಕಾಗಿಯೇ ರಾಜ್ಯ ಸರ್ಕಾರ ಮೂಲಸೌಕರ್ಯ ಅಭಿವೃದ್ಧಿಗೆ ಎಲ್ಲ ರೀತಿಯ ಸಹಾಯವನ್ನು ನೀಡುತ್ತಿದೆ. ತಮಿಳುನಾಡಿನ ಮುಖ್ಯಮಂತ್ರಿ ಅವರು ಬಹಿರಂಗವಾಗಿ ತಮಿಳುನಾಡಿನ ಜನರಿಗೆ ಅನುಕೂಲವಾಗುವಂತಹ ಕಾರ್ಯಕ್ರಮಗಳನ್ನು ಹಾಕಿಕೊಂಡಿರುವುದಕ್ಕೆ ಕೇಂದ್ರ ಸರ್ಕಾರವನ್ನು ಸ್ವಾಗತಿಸಿ, ಅಭಿನಂದಿಸಿದ್ದಾರೆ. ಅದಕ್ಕೆ ನಾನು ಆಭಾರಿಯಾಗಿರುತ್ತೇನೆ ಮತ್ತು ಈ ಸಹಕಾರಕ್ಕಾಗಿ ಅವರಿಗೆ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಸ್ಮಾರ್ಟ್ಸಿಟಿ ಯೋಜನೆಗೆ ಆಯ್ಕೆಯಾಗಿರುವ ದೇಶದ ಹತ್ತು ಪ್ರಮುಖ ನಗರಗಳಲ್ಲಿ ರಾಜ್ಯದ ಚೆನ್ನೈ, ಕೊಯಮತ್ತೂರು, ಮಧುರೈ ಮತ್ತು ತಂಜಾವೂರು ದೊಡ್ಡಪಟ್ಟಣಗಳು ಆಯ್ಕೆಯಾಗಿವೆ. ಈ ನಗರಗಳಿಗೆ ಕೇಂದ್ರ ಸರ್ಕಾರ 900 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಅಂದರೆ ಸುಮಾರು ಒಂದು ಸಾವಿರ ಕೋಟಿ ರೂಪಾಯಿಗಳಷ್ಟು. ಅಮೃತ್ಮಿಷನ್ ಯೋಜನೆಯಡಿ ತಮಿಳುನಾಡಿನ 33 ಪಟ್ಟಣಗಳನ್ನು ಸೇರ್ಪಡೆಗೊಳಿಸಲಾಗಿದೆ. ಇದಲ್ಲದೆ ಕೇಂದ್ರ ಸರ್ಕಾರ, ತಮಿಳುನಾಡಿಗೆ ಹೆಚ್ಚುವರಿಯಾಗಿ 4700 ಕೋಟಿ ರೂಪಾಯಿಗಳ ಅನುದಾನ ಬಿಡುಗಡೆ ಮಾಡಿದೆ. ಈ ಹಣವನ್ನು ಆ 33 ನಗರಗಳಲ್ಲಿ ವಿದ್ಯುತ್, ನೀರು, ಒಳಚರಂಡಿ, ನೈರ್ಮಲೀಕರಣ ಮತ್ತು ಉದ್ಯಾನವನಗಳ ಅಭಿವೃದ್ಧಿಗೆ ಬಳಸಬಹುದಾಗಿದೆ.
ಈ ಯೋಜನೆಯಿಂದ ರಾಮೇಶ್ವರಂಗೆ ಹೆಚ್ಚಿನ ಅನುಕೂಲವಾಗಲಿದೆ. ಜೊತೆಗೆ ಮಧುರೈ, ಟುಟಿಕಾರನ್, ತಿರುನಲ್ವೇಲಿ ಮತ್ತು ನಾಗರಕೋಯಿಲ್ ಸೇರಿದಂತೆ 33 ಪಟ್ಟಣಗಳಿಗೆ ಪ್ರಯೋಜನವಾಗಲಿದೆ. ಇದಲ್ಲದೆ ಕೇಂದ್ರ ಸರ್ಕಾರ ನಾಲ್ಕು ಸಾವಿರ ಕೋಟಿ ರೂಪಾಯಿ ವೆಚ್ಚದ ಚೆನ್ನೈ ಮೆಟ್ರೋ ರೈಲು ಯೋಜನೆಯ ಮೊದಲನೇ ಹಂತದ ವಿಸ್ತರಣೆಗೆ ಅನುಮೋದನೆ ನೀಡಿದೆ. ಕೇಂದ್ರ ಸರ್ಕಾರ, ತಮಿಳುನಾಡಿಗೆ ಗ್ರಾಮೀಣ ಯುವಜನತೆಯ ಕೌಶಲ್ಯಾಭಿವೃದ್ಧಿ, ಸ್ವ-ಸಹಾಯ ಗುಂಪುಗಳ ವಿಸ್ತರಣೆ ಮತ್ತು ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಕಳೆದ ಮೂರು ವರ್ಷಗಳಲ್ಲಿ 18 ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡಿದೆ.
ನಾನು ಈ ಸಂದರ್ಭದಲ್ಲಿ ತಮಿಳುನಾಡು ಸರ್ಕಾರ ಮತ್ತು ಜನತೆಗೆ ಒಂದು ಮನವಿ ಮಾಡಿಕೊಳ್ಳುತ್ತಿದ್ದೇನೆ, ಸ್ವಚ್ಛ ಭಾರತ ಯೋಜನೆಯಡಿ ದೇಶದ ಎಲ್ಲ ನಗರಗಳ ನಡುವೆ ಸ್ಪರ್ಧೆ ಆರಂಭವಾಗಿದೆ. ಇತರೆಯವರಿಗಿಂತ ಮುಂಚೆ ನಾವೇ ಬಯಲು ಶೌಚಮುಕ್ತವೆಂದು ಘೋಷಿಸಿಕೊಳ್ಳುವ ಸ್ಪರ್ಧೆ ನಡೆದಿದೆ. ನನಗೆ ಭರವಸೆ ಇದೆ, ತಮಿಳುನಾಡು ಈ ಸ್ಪರ್ಧೆಯಲ್ಲಿ ಹಿಂದೆ ಬೀಳುವುದಿಲ್ಲ ಮತ್ತು ಅದು ಈ ಗುರಿಯನ್ನು ಸಾಧಿಸುತ್ತದೆಂದು. ಅದೇ ರೀತಿ ಸುಮಾರು 8 ಲಕ್ಷಕ್ಕೂ ಅಧಿಕ ಬಡ ಕುಟುಂಬಗಳಿಗೆ ವಸತಿ ಅಗತ್ಯವಿದೆ ಎಂದು ರಾಜ್ಯ ಸರ್ಕಾರ ಭಾವಿಸಿದೆ. ಈ ಬೇಡಿಕೆಯನ್ನು ಪ್ರಧಾನಮಂತ್ರಿ ನಗರ ವಸತಿ ಯೋಜನೆಯಡಿ ಈಡೇರಿಸಲಾಗುವುದು. ಕೂಡಲೇ ಆ ಪ್ರಸ್ತಾವವನ್ನು ತಮಿಳುನಾಡು ಸರ್ಕಾರ ನೀಡಬೇಕೆಂದು ನಾನು ಮನವಿ ಮಾಡುತ್ತೇನೆ. ಪ್ರಸ್ತಾವ ಕಳುಹಿಸಿದರೆ, ತ್ವರಿತವಾಗಿ ಮನೆಗಳ ನಿರ್ಮಾಣಕ್ಕೆ ಅನುಮತಿ ನೀಡಲಾಗುವುದು.
ಡಾ. ಅಬ್ದುಲ್ ಕಲಾಂ ಅವರು ತಮ್ಮ ಜೀವನದುದ್ದಕ್ಕೂ ಅಭಿವೃದ್ಧಿ ಹೊಂದಿದ ಕನಸು ನನಸು ಮಾಡಲು ಹೋರಾಟ ನಡೆಸಿದ್ದರು. ಈ ಗುರಿ ಸಾಧನೆಗಾಗಿ ಅವರು ದೇಶದ 125 ಕೋಟಿಗೂ ಅಧಿಕ ಜನಂಖ್ಯೆಗೆ ಸದಾ ಸ್ಫೂರ್ತಿ ತುಂಬುತ್ತಿದ್ದರು. ಅವರ ಸ್ಫೂರ್ತಿ ಭಾರತ ಸ್ವಾತಂತ್ರ್ಯಗಳಿಸಿ 75ನೇ ವರ್ಷ ಪೂರ್ಣಗೊಳ್ಳುವ 2022ರ ವೇಳೆಗೆ ನವಭಾರತದ ಕನಸು ನನಸಾಗಲು ಸಹಕಾರಿಯಾಗುತ್ತದೆ. ನಮ್ಮ ದೇಶ 2022ಕ್ಕೆ 75ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಿಕೊಳ್ಳುತ್ತದೆ. ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ ನಮ್ಮ ಸ್ವಾತಂತ್ರ್ಯ ಯೋಧರ ಕನಸುಗಳನ್ನು ನನಸು ಮಾಡಲು ಸರ್ವಪ್ರಯತ್ನ ನಡೆಸಲಾಗುತ್ತಿದೆ ಮತ್ತು ಆ ಮೂಲಕ ಡಾ. ಕಲಾಂ ಅವರಿಗೆ ಗೌರವ ಸಲ್ಲಿಸಲಾಗುವುದು.
ಇಂದು ನಾನು ರಾಮೇಶ್ವರಂನಲ್ಲಿ ಇರುವಾಗ ಇಲ್ಲಿನ ಜನತೆ ಮಾಡುತ್ತಿರುವ ಪ್ರಯತ್ನಗಳು ನನಗೆ ನೆನಪಾಗುತ್ತವೆ. ರಾಮಾಯಣದಲ್ಲಿ ಒಂದು ಸಣ್ಣ ಅಳಿಲಿನ ಕತೆ ಬರುತ್ತದೆ, ರಾಮಸೇತು ನಿರ್ಮಾಣಕ್ಕೆ ರಾಮೇಶ್ವರಂನ ಒಂದು ಸಣ್ಣ ಅಳಿಲು ನೆರವು ನೀಡಿತ್ತು. ಅದೇ ರೀತಿ ರಾಮೇಶ್ವರಂಗೆ ಸೇರಿದ ಒಂದು ಅಳಿಲಿನಂತೆ, ಆ ಅಳಿಲನ್ನು ಛತ್ರಿಯಂತೆ ಭಾವಿಸಲಾಗಿತ್ತು. ಎಂಟು ನೂರು ಮತ್ತು ಇಪ್ಪತ್ತೈದು ಕೋಟಿ ಭಾರತೀಯರು, ಕೇವಲ ಒಂದು ಹೆಜ್ಜೆ ಮುಂದೆ ಇಟ್ಟರೆ ಭಾರತ 125 ಕೋಟಿ ಹೆಜ್ಜೆ ಮುಂದಡಿ ಇಟ್ಟಂತಾಗುತ್ತದೆ.
ದೇಶದ ಒಂದು ತುದಿಯಿಂದ ಮತ್ತೊಂದು ತುದಿಗೆ, ರಾಮೇಶ್ವರಂನ ಈ ಸಾಗರ ಆರಂಭವಾಗುತ್ತದೆ. ಡಾ. ಕಲಾಂ ಅವರ ಬಗ್ಗೆ ಇಲ್ಲಿನ ಜನರಿಗೆ ಎಷ್ಟು ಗೌರವವಿದೆ ಎಂಬುದನ್ನು ಇಲ್ಲಿ ನೆರೆದಿರುವ ಬೃಹತ್ ಜನಸ್ತೋಮವೇ ಸೂಚಿಸುತ್ತದೆ. ದೇಶದ ಉತ್ತಮ ಭವಿಷ್ಯಕ್ಕಾಗಿ ಬದ್ಧತೆ ತೋರಲು ನೀವು ಸಿದ್ಧರಿದ್ದೀರಿ. ಅದನ್ನು ನಾನು ನಿಮ್ಮಲ್ಲಿ ಅತ್ಯಂತ ಸ್ಪಷ್ಟವಾಗಿ ಕಾಣುತ್ತಿದ್ದೇನೆ. ಮತ್ತೊಮ್ಮೆ ಈ ಭಾರೀ ಜನಸಂಖ್ಯೆಗೆ ನನ್ನ ವಂದನೆಗಳು. ನಾನು ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಮತ್ತು ದಿವಂಗತ ಜಯಲಲಿತಾ ಅಮ್ಮಾ ಅವರಿಗೆ ಅತ್ಯಂತ ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ.
ನಿಮ್ಮೆಲ್ಲರಿಗೂ ತುಂಬಾ ಧನ್ಯವಾದಗಳು.
Remembering a distinguished scientist, exemplary President and outstanding personality...PM @narendramodi at the memorial for Dr. Kalam. pic.twitter.com/0ZZ8Myx1LW
— PMO India (@PMOIndia) July 27, 2017
Rameswaram has a vital place in our history and it is also known as a place so closely associated with Dr. Kalam: PM @narendramodi
— PMO India (@PMOIndia) July 27, 2017
Dr. Kalam always reflected the simplicity, depth and calmness of Rameswaram: PM @narendramodi
— PMO India (@PMOIndia) July 27, 2017
The memorial for Dr. Kalam showcases his life and times in a remarkable manner: PM @narendramodi pic.twitter.com/Yc1yXcl2T1
— PMO India (@PMOIndia) July 27, 2017
If Amma was here today, in our midst, she would have been very happy and extended her good wishes. She is a leader we all remember: PM
— PMO India (@PMOIndia) July 27, 2017
केंद्र सरकार प्रधानमंत्री Blue Revolution Scheme के तहत मछुवारों को लॉन्ग लाइनर ट्रॉलर्स के लिए आर्थिक मदद दे रही है: PM @narendramodi
— PMO India (@PMOIndia) July 27, 2017
आज से ही रामेश्वरम और अयोध्या के बीच एक नई ट्रेन का शुभारंभ हो रहा है: PM @narendramodi
— PMO India (@PMOIndia) July 27, 2017
We have to bring a transformation in the ports and logistics sectors, which can contribute immensely to India's growth: PM @narendramodi
— PMO India (@PMOIndia) July 27, 2017
Dr. Kalam inspired the youth of India. I can see that today's youth wants to scale heights of progress and become job creators: PM
— PMO India (@PMOIndia) July 27, 2017
I see a very healthy competition among states as far as Swachh Bharat Mission is concerned: PM @narendramodi
— PMO India (@PMOIndia) July 27, 2017