Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವಡೋದರಾದ ಹರಣಿ ಏರ್‌ಪೋರ್ಟ್‌ಟರ್ಮಿನಲ್‌ನ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಮಂತ್ರಿಯವರು ಮಾಡಿದ ಭಾಷಣ.

ವಡೋದರಾದ  ಹರಣಿ ಏರ್‌ಪೋರ್ಟ್‌ಟರ್ಮಿನಲ್‌ನ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಮಂತ್ರಿಯವರು ಮಾಡಿದ ಭಾಷಣ.


ವೇದಿಕೆಯ ಮೇಲೆ ವಿರಾಜಮಾನರಾಗಿರುವ ಗುಜರಾತಿನ ರಾಜ್ಯಪಾಲರಾದ ಶ್ರೀಮಾನ್‌ ಓಂಪ್ರಕಾಶ್‌ ಕೋಹಲಿರವರೇ, ಗುಜಾರಾತಿನ ಮುಖ್ಯಮಂತ್ರಿಗಳಾದ ವಿಜಯ ರೂಪಾಣಿ ಅವರೇ , ಉಪಮುಖ್ಯಮಂತ್ರಿಗಳಾದ

ಶ್ರೀ ನಿತಿನ್‌ ಭಾಯಿ ಪಟೇಲರೇ, ಕೇಂದ್ರ ಮಂತ್ರಿ ಪರಿಷತ್ತಿನ ನನ್ನ ಸಂಗಡಿಗ ಶ್ರೀ ಅಶೋಕ್ ಗಣಪತಿ ರಾಜೂರವರೇ, ಜಯಂತ್ ಸಿನ್ಹಾರವರೇ, ಇಲ್ಲಿನ ಸಂಸದರಾದ ಶ್ರೀಮತಿ ರಂಜನ್‌ ಬೇನ್, ಈ ಕ್ಷೇತ್ರದ ಶಾಸಕರಾದ ಮನೀಷಾ ಬೇನ್, ರಾಜ್ಯ ಸರ್ಕಾರದ ಮಂತ್ರಿಗಳಾದ ಶ್ರೀಮಾನ್ಯ ರಾಜೇಂದ್ರರವರೇ, ವಿಭಾಗದ ಸಚಿವರಾದ ಶ್ರೀಮಾನ್ ಆರ್‌‌. ಎನ್‌. ಚೌಬೆ ಅವರೇ, ಏರ್‌ಪೋರ್ಟ್‌ ಅಥಾರಿಟಿ ಆಫ್ ಇಂಡಿಯಾದ ಅಧ್ಯಕ್ಷರಾದ ಡಾ. ಗುರುಪ್ರಸಾದ್ ಮಹಾಪಾತ್ರ ಅವರೇ, ಉಪಸ್ಥಿತ ಎಲ್ಲ ಸಹೋದರ ಮತ್ತು ಸಹೋದರಿಯರೇ….

2014 ರ ಮೇ ತಿಂಗಳಿನಲ್ಲಿ ನನಗೆ ಪ್ರಧಾನಮಂತ್ರಿಯ ರೂಪದಲ್ಲಿ ಕಾರ್ಯನಿರ್ವಹಿಸುವ ಜವಾಬ್ದಾರಿಯನ್ನು ಕೊಟ್ಟಿರುವಿರಿ. ಜವಾಬ್ದಾರಿಯನ್ನು ವಹಿಸಿಕೊಂಡ ಸ್ವಲ್ಪ ಸಮಯದಲ್ಲಿಯೇ ಎರಡು ಬಹುಮುಖ್ಯ ಕಾರ್ಯಗಳನ್ನು ನಾವು ಮಾಡಿದೆವು. ಅದರಲ್ಲಿ ಮೊದಲನೆಯದು ಸರದಾರ್‌ ಸರೋವರದ ಆಣೆಕಟ್ಟಿನ ಎತ್ತರವನ್ನು ಹೆಚ್ಚಿಸುವುದು , ಗುಜರಾತ್‌ ರಾಜ್ಯವು ಇದಕ್ಕಾಗಿ ಐದು ದಶಕಗಳಿಂದ ಕಾಯುತ್ತಿತ್ತು, ಹೋರಾಟ ಮಾಡುತ್ತಿತ್ತು ಮತ್ತು ಕಷ್ಟಗಳನ್ನು ಸಹಿಸುತ್ತಿತ್ತು.

ಸರ್ಕಾರ ರಚಿಸಿದ ಪ್ರಾರಂಭದ ದಿನಗಳಲ್ಲಿ ನಾವು ಮಾಡಿದ ಮೊದಲ ಕಾರ್ಯವೇ ಸರದಾರ ಪಟೇಲರ ಹೆಸರಿನಲ್ಲಿ ನಿರ್ಮಿತ ಸರ್ದಾರ್ ಸರೋವರ ಯೋಜನೆಯ ಎತ್ತರವನ್ನು ಹೆಚ್ಚಿಸುವ ಯೋಜನೆಗೆ ಅನುಮತಿಯನ್ನು ನೀಡುವುದಾಗಿತ್ತು. ಗುಜರಾತ್ ಸರ್ಕಾರವು ಯಾವ ವೇಗದಲ್ಲಿ ಈ ಕಾರ್ಯವನ್ನು ಮುನ್ನಡೆಸಿಕೊಂಡು ಹೋಗುತ್ತಿದೆ ಎಂದರೆ, ನಿರ್ಧಾರಿತ ಸಮಯಕ್ಕಿಂತ ಸ್ವಲ್ಪ ಮುಂಚಿತವಾಗಿಯೇ ಈ ಯೋಜನೆಯು ಪೂರ್ಣವಾಗುವುದೆಂಬ ವಿಶ್ವಾಸ ನನಗಿದೆ. ಅದಕ್ಕಾಗಿ ನಾನು ಗುಜರಾತ್‌ ಸರ್ಕಾರವನ್ನು ಅಭಿನಂದಿಸುತ್ತೇನೆ.

ಎರಡನೇ ಕಾರ್ಯವೆಂದರೆ, ಈ ಏರ್‌ಪೋರ್ಟ್‌ ನಿರ್ಮಿಸುವ ಕಾರ್ಯ. ಇದರ ನಿರ್ಮಾಣದ ಕಾರ್ಯವನ್ನೂ ಕೂಡ 2014 ರ ಜೂನ್‌-ಜುಲೈನಲ್ಲಿ ಪ್ರಾರಂಭಿಸಲಾಯಿತು. ಈಗ ವಡೋದರಾ ವಿಮಾನನಿಲ್ದಾಣವನ್ನು ಹಿಂದುಸ್ತಾನದ ಶ್ರೇಷ್ಠ ಏರ್‌ಪೋರ್ಟ್‌ಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ.

ಇಂದು ಭಾರತ ಸರ್ಕಾರವು ನಿರ್ಮಾಣಕ್ಕೆ ಸಂಬಂಧಿಸಿದ ಯಾವುದೇ ಕಾರ್ಯಗಳನ್ನು ಕೈಗೆತ್ತಿಕೊಳ್ಳುವಾಗ ಪರಿಸರಕ್ಕೆ ಅನುಕೂಲವಾಗುವಂತೆ ಮತ್ತು ಇಕೋ-ಸಿಸ್ಟಮ್‌ನನ್ನು ಗಮನದಲ್ಲಿಟ್ಟುಕೊಂಡು ಮಾಡುತ್ತಿದೆ.

ಹೊಸ ಸರ್ಕಾರವು ಬಂದ ನಂತರ ಭಾರತದ ಎರಡು ಏರ್‌ಪೋರ್ಟ್‌ಗಳು ಈ ಹಸಿರುಕ್ರಾಂತಿಯ ಭಾಗಗಳಾಗಿವೆ ಎಂಬ ವಿಚಾರ ನನಗೆ ಸಂತೋಷ ನೀಡುವಂತಹದ್ದಾಗಿದೆ. ಒಂದು ಕೇರಳದ ಕೊಚ್ಚಿಯಲ್ಲಿ ಆರಂಭಗೊಂಡ ಏರ್‌ಪೋರ್ಟ್ ಮತ್ತು ಎರಡನೆಯದು ಇಂದು ರಾಷ್ಟ್ರಕ್ಕೆ ಸಮರ್ಪಿತವಾಗುತ್ತಿರುವ ವಡೋದರಾ ಏರ್‌ಪೋರ್ಟ್‌. ಈ ಟರ್ಮಿನಲ್‌ ಕಸದಿಂದ ರಸವೆಂಬ ತತ್ತ್ವವನ್ನು ಆಧರಿಸಿ ನಿರ್ಮಿತವಾದದ್ದು, ಇದು ವಿದ್ಯುತ್ತನ್ನು ಉಳಿಸುವುದರೊಂದಿಗೆ ಪರಿಸರಕ್ಕೆ ಅನುಕೂಲಕರವಾಗಿದೆ. ಇಂತಹ ಪ್ರತಿಷ್ಠಿತ ಕಟ್ಟಡಗಳ ನಿರ್ಮಾಣವಾದಾಗ ಸಾಮಾನ್ಯ ಜನರಲ್ಲೂ ಈ ಕಾರ್ಯಗಳ ಕುರಿತು ಉತ್ಸಾಹ ಮೂಡುತ್ತದೆ. ಪ್ರಾರಂಭದಲ್ಲಿ ನಿರ್ಮಾಣದ ವಸ್ತುಗಳು ಹೆಚ್ಚು ದುಬಾರಿಯಾಗಿರುತ್ತವೆ. ಆದರೆ ಸರ್ಕಾರವು ಒಂದು ಬಾರಿ ಈ ದಿಕ್ಕಿನಲ್ಲಿ ಗಮನಹರಿಸಿ ಇವುಗಳ ನಿರ್ಮಾಣ ಕಾರ್ಯದಲ್ಲಿ ತೊಡಗಿದರೆ ಸಾಮಾನ್ಯ ನಾಗರಿಕರಿಗೂ ಸಹ ಆರ್ಥಿಕವಾಗಿ ಕಡಿಮೆ ಬೆಲೆಯಲ್ಲಿ ದೊರೆಯುತ್ತವೆ. ಕಲ್ಲಿದ್ದಿಲಿನ ಬೂದಿಯ ಗುಡ್ಡಗಳನ್ನು ಅಕ್ಕಪಕ್ಕಗಳಲ್ಲಿ ಹಾಕಿಕೊಂಡು ವಿದ್ಯುತ್ ತಯಾರಿಸುವ ಕಲ್ಲಿದ್ದಿಲಿನ ವಿದ್ಯುತ್‌ ಕಾರ್ಖಾನೆಗಳಿದ್ದ ಒಂದು ಕಾಲವಿತ್ತು. ವಿದ್ಯುತ್ ಕಾರ್ಖಾನೆಗಿಂತ ದೊಡ್ಡದಾದ ಕಲ್ಲಿದ್ದಿಲ ಬೂದಿಯ ರಾಶಿ ಬಿದ್ದಿರುತ್ತಿತ್ತು. ಇನ್ನು ಕಲ್ಲಿದ್ದಿಲ ಬೂದಿಯ ರಾಶಿಯನ್ನೆತ್ತಲು ಹಣ ನೀಡಬೇಕಾಗುತ್ತಿತ್ತು. ಇದನ್ನು ಎತ್ತಿಕೊಂಡು ಹೋಗಿ, ನಾವು ಸಾಯುತ್ತಿದ್ದೇವೆ ಎಂದು ಅಕ್ಕಪಕ್ಕದ ಜನರು ಕೂಗಾಡುತ್ತಿದ್ದರು. ಈ ಟರ್ಮಿನಲ್‌ ಕಟ್ಟಡದ ನಿರ್ಮಾಣಕ್ಕೆ ಕಲ್ಲಿದ್ದಿಲ ಬೂದಿಯಿಂದ ನಿರ್ಮಿತ ಇಟ್ಟಿಗೆಗಳನ್ನು ಉಪಯೋಗಿಸಲಾಗಿದೆ. ಕಲ್ಲಿದ್ದಿಲ ಬೂದಿಯ ಕಸವನ್ನು ಹೊರತೆಗೆಯುವ ಖರ್ಚನ್ನು ಉಳಿಸುವುದರೊಂದಿಗೆ, ಅದೇ ಬೂದಿಯಲ್ಲಿ ಇಟ್ಟಿಗೆಗಳನ್ನು ತಯಾರಿಸಿ ಪರಿಸರವನ್ನು ರಕ್ಷಿಸಿ ಕಟ್ಟಡ ನಿರ್ಮಾಣಕ್ಕೆ ಗಟ್ಟಿತನವನ್ನು ಕೊಡಲಾಗಿದೆ.

ಭಾರತದ ವಿಮಾನಯಾನ ಕ್ಷೇತ್ರವು ಅತ್ಯಂತ ವೇಗವಾಗಿ ಮುಂದುವರೆಯುತ್ತಿದೆ. ಬಹಳ ವೇಗವಾಗಿ ಅದರ ವಿಕಾಸವಾಗುತ್ತಿದೆ. ಈಗ ಮಧ್ಯಮ ವರ್ಗದ ಕುಟುಂಬಗಳು ವಿಮಾನದಲ್ಲಿ ಪ್ರಯಾಣಿಸಲು ಬಯಸುತ್ತಾರೆ, ಅವರಿಗೆ ರೈಲುಪ್ರಯಾಣ ಅಷ್ಟಾಗಿ ಹಿಡಿಸುವುದಿಲ್ಲ. ಅಯ್ಯೋ, ರೈಲಿನಲ್ಲಿ ಬಂದಿರೇ? ಎಂದು ಸಂಬಂಧಿಕರು ವಿಚಾರಿಸಿದಾಗ ಅವರಿಗೆ ವಿಮಾನದಲ್ಲಿ ಪ್ರಯಾಣ ಮಾಡಬೇಕೆನಿಸುತ್ತದೆ. ನಮ್ಮ ದೇಶದಲ್ಲಿ ಈ ವಿಷಯ ಪ್ರತಿಷ್ಠೆಯೊಂದಿಗೆ ತಳಕುಹಾಕಿಕೊಂಡಿದೆ.

ಇನ್ನು ಐದು ವರ್ಷಗಳಲ್ಲಿ ಭಾರತದಲ್ಲಿ ಅಮೇರಿಕದ ಜನಸಂಖ್ಯೆಗಿಂತ ಹೆಚ್ಚು ಜನ ಒಂದು ವರ್ಷದಲ್ಲಿ ಭಾರತದ ವಿಮಾನ ನಿಲ್ದಾಣಗಳಲ್ಲಿ ಸಿಗುತ್ತಾರೆಂಬ ಅಂದಾಜಿದೆ. ಇದರಿಂದ ವೈಮಾನಿಕ ಕ್ಷೇತ್ರದ ಪ್ರಗತಿ ಹೇಗೆ ಹೆಚ್ಚಾಗಲಿದೆ ಎಂಬುದನ್ನು ನೀವು ಕಲ್ಪಿಸಿಕೊಳ್ಳಬಹುದು. ಬಹುಶಃ ಏರ್‌ಪೋರ್ಟ್‌ ಎಕ್ಟಿವಿಟಿ ಮಾನದಂಡಗಳ ಅನುಸಾರ ಅತಿ ಶೀಘ್ರದಲ್ಲಿ ಭಾರತವು ವಿಶ್ವದ ಮೂರನೇ ದೊಡ್ಡ ದೇಶವಾಗಿ ಭವಿಷ್ಯದಲ್ಲಿ ಬದಲಾಗುವ ಸಾಧ್ಯತೆಯಿದೆ. ಇದರಿಂದ ಉದ್ಯೊಗಾವಕಾಶಗಳು ಹೆಚ್ಚಲಿವೆ. ಇದರಿಂದಾಗಿ ಆರ್ಥಿಕ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ ವೇಗವು ಕಂಡುಬರುತ್ತದೆ.

ಸ್ವಾತಂತ್ರ್ಯದ ಅನಂತರ ದೇಶದಲ್ಲಿ ಮೊದಲ ಬಾರಿಗೆ ಈ ಸರ್ಕಾರವು ಪ್ರತ್ಯೇಕ ವೈಮಾನಿಕ ನೀತಿಯನ್ನು ರಚಿಸಿದೆ.

ನಮ್ಮ ದೇಶಗಳಲ್ಲಿ ವಿಮಾನಗಳು ಹಾರಾಡುತ್ತಿದ್ದವು, ವಿಮಾನ ನಿಲ್ದಾಣಗಳು ನಿರ್ಮಾಣವಾಗುತ್ತಿದ್ದವು,ವಿಮಾನಗಳ ಖರೀದಿ ಮತ್ತು ವಿತರಣೆಗಳಾಗುತ್ತಿದ್ದವು, ಆದರೆ ದೇಶಕ್ಕೆ ಯಾವುದೇ ವೈಮಾನಿಕ ನೀತಿ ಇರಲಿಲ್ಲ. ಮುಂದಿನ ಐದು ವರ್ಷಗಳಲ್ಲಿ, ಮತ್ತು ಬರುವ ಹತ್ತು ವರ್ಷಗಳಲ್ಲಿ ವಿಮಾನಯಾನ ಕ್ಷೇತ್ರದ ಅಭಿವೃದ್ಧಿಯನ್ನು ಹೇಗೆ ಮಾಡಬೇಕು, ದೇಶದ ಸಾಮಾನ್ಯ ನಾಗರಿಕರ ಅವಶ್ಯಕತೆಗಳನ್ನು ಪೂರೈಸಲು ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದರ ಕುರಿತು ಯಾವುದೇ ದೃಷ್ಟಿಕೋನಗಳಿರಲಿಲ್ಲ. ಹಾಗೆಯೇ ತನ್ನ ಪಾಡಿಗೆ ತಾನು ನೆಡೆದರೆ ನೆಡೆಯುತ್ತಿತ್ತು, ಓಡಿದರೆ ಓಡುತ್ತಿತ್ತು, ನಿಂತರೆ ನಿಲ್ಲುತ್ತಿತ್ತು ಎಂಬ ಧೋರಣೆಯಿತ್ತು.

ನಮ್ಮದು ವಿಶಾಲವಾದ ದೇಶ. ನಾವು 80 ರಿಂದ 100 ರಷ್ಟು ವಿಮಾನ ನಿಲ್ದಾಣಗಳನ್ನಿಟ್ಟುಕೊಂಡು ದೇಶವನ್ನು ಮುನ್ನೆಡೆಸುವ ಕುರಿತು ಯೋಚಿಸಿದರೆ ಅದು ನಮ್ಮ ದೇಶದ ಅಭಿವೃದ್ಧಿಯ ಪ್ರಯಾಣಕ್ಕೆ ಅಡಚಣೆಯಂತಾಗುವುದು. ಶ್ರೇಣಿ -2, ಶ್ರೇಣಿ -3 ಪಟ್ಟಣಗಳಲ್ಲಿಯೂ ಮೇಲ್ದರ್ಜೆಯ ನಗರಗಳಲ್ಲಿರುವಂತೆಯೇ ಸಾಧ್ಯತೆ ಮತ್ತು ಅವಕಾಶಗಳಿರುತ್ತವೆ. ಒಂದು ವೇಳೆ ಅವರಿಗೆ ವಿಮಾನಯಾನ ವ್ಯಾಪ್ತಿಯ ಲಾಭ ದೊರೆತರೆ ದೇಶದ ವಿಕಾಸ ಯಾತ್ರೆಯ ಹೊಸ ಆಯಾಮಗಳು ತೆರೆದುಕೊಳ್ಳುತ್ತವೆ. ಆದ್ದರಿಂದಲೇ ಇಂದು ದೂರದ ನಾಗಾಲ್ಯಾಂಡ್, ಅರುಣಾಚಲ, ಮಿಜೋರಾಮ್‌, ಅಂಡಮಾನ್‌- ನಿಕೋಬಾರ್‌, ಲಕ್ಷದ್ವೀಪ, ಕಚ್ಛ್, ಭಾವನಗರ, ಜೂನಾಗಢ್ ನಗರಗಳಂತಹ ಟ್ರಾಫಿಕ್‌ರಹಿತ, ಹಳೆಯ ವಿಮಾನಯಾನದ ಟ್ಯ್ರಾಕ್‌ಗಳಿರುವ ಪ್ರದೇಶಗಳಿಗೆ ಇದನ್ನು ಪ್ರಮೋಟ್ ಮಾಡಲು 500 ಕಿಲೋಮೀಟರ್‌ಗಳ ಲೆಕ್ಕಾಚಾರದಲ್ಲಿ 2500 ರೂಪಾಯಿಗಳ ಟಿಕೇಟ್‌ಗಳನ್ನು ನಿರ್ಧರಿಸಲಾಗಿದೆ. ವಿಸ್ತೃತ ಉದ್ದೇಶವನ್ನಿಟ್ಟುಕೊಂಡು ಒಂದು ಬಹು ವಿಶಾಲ ಯೋಜನೆಯೊಂದಿಗೆ ಕಾರ್ಯಗಳು ಮುನ್ನೆಡೆಯುತ್ತಿವೆ. ಇವು ಖಾಸಗಿ-ಸಾರ್ವಜನಿಕ ಹೊಂದಾಣಿಕೆಗಳ ಮಾದರಿಗಳೊಂದಿಗೆ ಕಾರ್ಯನಿರ್ವಹಿಸಲಿವೆ. ಇಂದಿನ ಆಧುನಿಕ ಜಗತ್ತಿಗನುಸಾರ ಕನೆಕ್ಟಿವಿಟಿಯು ಬಹಳ ಪ್ರಮುಖವಾದುದಾಗಿದೆ. ಇಂದು ಫಿಸಿಕಲ್ ಕನೆಕ್ಟಿವಿಟಿಯೂ ಬೇಕು, ಡಿಜಿಟಲ್ ಕನೆಕ್ಟಿವಿಟಿಯೂ ಬೇಕು. ನಮಗೆ ಹೈವೇಯೊಂದಿಗೆ ಐ-ವೇಯೂ ಬೇಕು. ಸೂಚನಾ ತರಂಗಗಳ ಅವಶ್ಯಕತೆಯೂ ಇದೆ. ಅದರಂತೆಯೇ ಹೈವೇ ಸಾಗಾಣಿಕಾ-ಪ್ರಯಾಣದ ಅವಶ್ಯಕತೆಯೂ ಅಷ್ಟೇ ಇದೆ. ಪ್ರವಾಸೋಧ್ಯಮದಲ್ಲಿಂದು ಹೈವೇಗಳ ಅವಶ್ಯಕತೆಯು ಬಹಳ ಅನಿವಾರ್ಯವಾಗಿದೆ.

ಭಾರತದ ಪ್ರವಾಸೋದ್ಯಮವು ಅತಿ ವೇಗವಾಗಿ ಪ್ರಗತಿಯನ್ನು ಸಾಧಿಸುತ್ತಿದೆ. ಇಲ್ಲಿ ಅಪಾರ ಉದ್ಯೋಗಾವಕಾಶಗಳ ಸಾಧ್ಯತೆಗಳಿವೆ. ನಾವು ಜನರಿಗೆ ಅನೇಕ ಸ್ಥಳಗಳಿಗೆ ತೆರಳಲು ಪ್ರಯಾಣದ ಸೌಲಭ್ಯಗಳನ್ನು ಒದಗಿಸಿದಲ್ಲಿ ಅವರು ಎರಡು-ಮೂರು ದಿನಗಳವರೆಗೆ ತಮ್ಮ ಪ್ರವಾಸವನ್ನು ಹೆಚ್ಚಿಗೆ ಮುಂದುವರೆಸಿ ತಂಗುತ್ತಾರೆ. ಅವರು ಎಷ್ಟು ಹೆಚ್ಚು ದಿನಗಳವರೆಗೆ ತಂಗುವರೋ ಅಷ್ಟೇ ಹೆಚ್ಚು ಖರ್ಚು ಮಾಡುತ್ತಾರೆ. ಹೀಗಾದಾಗ ಅಲ್ಲಿನ ಸ್ಥಳೀಯ ಆರ್ಥವ್ಯವಸ್ಥೆಗೆ ಹೆಚ್ಚಿನ ಶಕ್ತಿ ಬರುವುದು. ಈ ದೃಷ್ಟಿಯಿಂದ ನೋಡಿದಾಗ ವಿಮಾನಯಾನವು ಬಹು ಆಯಾಮಿ ಆರ್ಥಿಕ ಪ್ರಭಾವ ಬೀರುತ್ತದೆ. ವರ್ತಮಾನ ಸರ್ಕಾರವು ಇಂತಹ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ವಿಮಾನಯಾನ ಕ್ಷೇತ್ರಕ್ಕೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡುವ ಪ್ರಯತ್ನ ಮಾಡಿದೆ.

ವಡೋದರಾ ನಿವಾಸಿಗಳಿಗೆ ಇಂದು ಈ ಹೊಸ ಉಡುಗೊರೆ ಸಿಗುತ್ತಿದೆ. ವಡೋದರಾ ನಗರವು ತನ್ನ ವೈಶಿಷ್ಟ್ಯಗಳ ಪರಿಚಯಕ್ಕೆ ಹೆಸರುವಾಸಿಯಾಗಿದೆ, ಅದರೊಂದಿಗೆ ಈ ಹೊಸ ವ್ಯವಸ್ಥೆಯು ವಡೋದರಾ ನಗರವನ್ನುಇನ್ನೂ ಹೆಚ್ಚು ಶೋಭಾಯಮಾನ ಮಾಡುವುದೆಂಬ ವಿಶ್ವಾಸ ನನಗಿದೆ.

ವಡೋದರಾವನ್ನು ಸುಸಂಸ್ಕೃತ ನಗರವೆಂದು ತಿಳಿಯಲಾಗಿದೆ, ಅದರೊಂದಿಗೆ ವಡೋದರಾ ಶಿಕ್ಷಣದ ಹಬ್‌ ಕೂಡ ಆಗಿದೆ. ವಡೋದರಾ ತಾಂತ್ರಿಕ ಶಿಕ್ಷಣದಲ್ಲಿ ತನ್ನದೇ ಆದ ಸ್ಥಾನವನ್ನು ಪಡೆದುಕೊಂಡಿದೆ. ವಡೋದರಾ ಮತ್ತು ವಿದ್ಯಾನಗರಗಳು ಈ ದಿಶೆಯಲ್ಲಿ ಅನೇಕ ಕಾರ್ಯಗಳನ್ನು ಮಾಡಿವೆ. ಈ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಭಾರತ ಸರ್ಕಾರವು ಒಂದು ಮಹತ್ವಪೂರ್ಣ ನಿರ್ಣಯವನ್ನು ಮಾಡಿದೆ. ಅದರ ಪ್ರಭಾವ ಮುಂಬರುವ ಪೂರ್ಣ ಶತಮಾನದವರೆಗೆ ಇರಲಿದೆ. ನೂರು ವರ್ಷಗಳವರೆಗೆ ಪ್ರಭಾವ ಬೀರುವಂತಹ ಒಂದು ಮಹತ್ವಪೂರ್ಣ ನಿರ್ಣಯವನ್ನು ಮಾಡಲಾಗಿದೆ. ಆ ನಿರ್ಣಯವೆಂದರೆ ವಡೋದರಾ ನಗರದಲ್ಲಿ ದೇಶದ ಮೊದಲ ರೈಲ್ವೆ ವಿಶ್ವವಿದ್ಯಾಲಯವನ್ನು ನಿರ್ಮಿಸಲಾಗುವುದು. ರೈಲ್ವೆ ಕ್ಷೇತ್ರದಲ್ಲಿ ಸಂಪೂರ್ಣ ವಿಶ್ವವು 100 ಅಂಕಗಳನ್ನು ಪಡೆದಿದ್ದರೆ ಹಿಂದುಸ್ಥಾನವಿನ್ನೂ 10 ಅಂಕಗಳಲ್ಲಿ ನಿಂತಿದೆ. ಇಂದಿಗೂ ಕೂಡ ನಮ್ಮ ಬೋಗಿ, ಅವುಗಳ ವೇಗ, ಆ ಧ್ವಜ ಹಾರಿಸುವವ ಎಲ್ಲವೂ ಹಾಗೆಯೇ ಇದೆ.

ಜಗತ್ತೇ ಬದಲಾಗಿದೆ. ಅನೇಕ ಆಧುನಿಕ ಪ್ರಯೋಗಗಳಾಗಿವೆ. ಹಳೆಯ ರೈಲಿದೆ, ಆದರೆ ಅದನ್ನು ಆಧುನಿಕ ತಂತ್ರಜ್ಞಾನ ಮತ್ತು ಹೊಸ ಪ್ರಯೋಗಗಳೊಂದಿಗೆ ಭಾರತದ ಅವಶ್ಯಕತೆಗಳಿಗನುಸಾರವಾಗಿ ಬದಲಾಯಿಸಬಹುದಾಗಿದೆ. ಈ ಕಾರ್ಯಕ್ಕೆ ಪ್ರಾಥಮಿಕ ಆದ್ಯತೆಯನ್ನು ನೀಡಲು ಭಾರತ ಸರ್ಕಾರ ಹಾಗೂ ಭಾರತೀಯ ರೈಲ್ವೆಗಳೆರಡೂ ವಡೋದರಾ ನಗರವನ್ನು ಆಯ್ದುಕೊಂಡಿವೆ. ಹಿಂದೂಸ್ಥಾನದ ಮೊದಲ ರೈಲ್ವೆ ವಿಶ್ವವಿದ್ಯಾಲಯ ವಡೋದರಾ ನಗರದಲ್ಲಿ ನಿರ್ಮಾಣವಾಗಲಿದೆ. ದೇಶಕ್ಕಾಗಿ ವಡೋದರಾ ನಗರ ಎಷ್ಟು ದೊಡ್ಡ ಸಹಕಾರವನ್ನು ಕೊಡುತ್ತಿದೆಯಂದು ನೀವು ಕಲ್ಪಿಸಿಕೊಳ್ಳಬಹುದು.

ಇಂದು ನಾನು ನಿಮ್ಮನ್ನು ಭೇಟಿಯಾಗುವ ಅವಕಾಶ ದೊರೆಯಿತು. ಇಷ್ಟು ದೊಡ್ಡ ಸಂಖ್ಯೆಯಲ್ಲಿ ನೀವೆಲ್ಲರೂ ಇಲ್ಲಿಗೆ ಬಂದು ನನ್ನನ್ನು ಆಶೀರ್ವದಿಸಿದಿರಿ, ನಾನು ನಿಮ್ಮೆಲ್ಲರಿಗೂ ಬಹಳ ಕೃತಜ್ಞನಾಗಿದ್ದೇನೆ.

******