Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಗ್ರಾಮೀಣ ವಿದ್ಯುದೀಕರಣ ಮತ್ತು ಸೌಭಾಗ್ಯ ಯೋಜನೆಯ ಫಲಾನುಭವಿಗಳೊಂದಿಗೆ ಮಾನ್ಯ ಪ್ರಧಾನಮಂತ್ರಿಗಳು ನಡೆಸಿದ ಮಾತುಕತೆಯ ಪೂರ್ಣಪಾಠ.


 

ಇದೇ ಮೊದಲ ಬಾರಿಗೆ ವಿದ್ಯುತ್ ಸಂಪರ್ಕವನ್ನು ಕಾಣುತ್ತಿರುವ ದೇಶದ 18 ಸಾವಿರ ಹಳ್ಳಿಗಳ ಎಲ್ಲ ಸ್ನೇಹಿತರನ್ನೂ ಭೇಟಿ ಮಾಡುವ ಸದವಕಾಶ ನನಗಿಂದು ಸಿಕ್ಕಿದೆ. ಶತಶತಮಾನಗಳಿಂದ ಕತ್ತಲಿನಲ್ಲೇ ಬದುಕುತ್ತಿದ್ದ ಈ ಹಳ್ಳಿಗಳ ಜನರೆಲ್ಲ “ನಿಜಕ್ಕೂ ನಮ್ಮ ಊರಿಗೆಲ್ಲ ಯಾವತ್ತಿಗಾದರೂ ವಿದ್ಯುತ್ ಬರುತ್ತದೆಯೇ?” ಎಂದು ಬೆರಗಿನಿಂದ ಕೇಳುತ್ತಿದ್ದರು. ಆದರೆ, ನಿಮ್ಮೆಲ್ಲರಿಗೂ ಆಗಿರುವ ಸಂತೋಷವನ್ನು ಹಂಚಿಕೊಳ್ಳುವ ಭಾಗ್ಯ ನನ್ನದಾಗಿದೆ. ನಿಮ್ಮ ಮುಖದ ಮೇಲಿರುವ ನಗದು ಮತ್ತು ವಿದ್ಯುತ್ತು ನಿಮ್ಮೆಲ್ಲರ ಬದುಕನ್ನು ಹೇಗೆ ಬದಲಿಸಲಿದೆ ಎನ್ನುವುದು ತಮ್ಮಷ್ಟಕ್ಕೆ ತಾವೇ ತಾವೇ ತುಂಬಾ ಮುಖ್ಯವಾದ ಸಂಗತಿಗಳಾಗಿವೆ. ಹುಟ್ಟಿದ ದಿನದಿಂದಲೂ ವಿದ್ಯುತ್ತನ್ನು ನೋಡುತ್ತಿರುವವರಿಗೆ, ಹಾಗೆಯೇ ಗಾಢಾಂಧಕಾರದಿಂದ ತುಂಬಿರುವ ಕತ್ತಲೆಂದರೇನೆಂದೇ ಅನುಭವವಿಲ್ಲದವರಿಗೆ, ಕತ್ತಲಿನ ಘೋರ ಪರಿಣಾಮವೇನೆಂಬುದೇ ಗೊತ್ತಿರಲಾರದು. ಮನೆಯಲ್ಲಾಗಲಿ, ಹಳ್ಳಿಯಲ್ಲಾಗಲಿ ರಾತ್ರಿ ಹೊತ್ತು ವಿದ್ಯುತ್ತೇ ಇಲ್ಲದಿದ್ದರೆ ಅದರ ಸಾಧಕ-ಬಾಧಕಗಳೇನು ಎನ್ನುವುದು ಕೂಡ ಇಂಥವರಿಗೆ ಅರಿವಿರುವುದಿಲ್ಲ. ಯಾವತ್ತೂ ಕತ್ತಲೆಯಲ್ಲಿ ಬದುಕದವರಿಗೆ ಇವೆಲ್ಲ ಅರ್ಥವಾಗುವುದಿಲ್ಲ. ನಮ್ಮ ಉಪನಿಷತ್ತುಗಳಲ್ಲೇ `ತಮಸೋ ಮಾ ಜ್ಯೋತಿರ್ಗಮಯ’ ಎಂಬ ಮಾತಿದೆ. ಅಂದರೆ, ಕತ್ತಲನ್ನು ಹೊಡೆದೋಡಿಸೋಣ, ಎಲ್ಲೆಲ್ಲೂ ಬೆಳಕನ್ನು ಕಾಣೋಣ ಎನ್ನುವುದು ಇದರ ಅರ್ಥ. 

 

ಇಂದು ಇಲ್ಲಿ ನನ್ನೊಂದಿಗೆ ಮಾತನಾಡುತ್ತಿರುವ ನೀವೆಲ್ಲರೂ ಕತ್ತಲಿನಿಂದ ಬೆಳಕಿಗೆ ಬಂದಿರುವವರು. ನಿಮ್ಮನ್ನೆಲ್ಲ ಭೇಟಿಯಾಗಲು ನಾನು ನಿಜಕ್ಕೂ ಅದೃಷ್ಟ ಮಾಡಿದ್ದೆ. ಅದೆಷ್ಟೋ ವರುಷಗಳ ಕಾಲದ ಕಾಯುವಿಕೆಯ ನಂತರ ಈ ಹಳ್ಳಿಗಳ ಬದುಕು ಬೆಳಗತೊಡಗಿದೆ. ನಮ್ಮೆಲ್ಲರಿಗೂ ಒಂದು ದಿನವೆಂದರೆ 24 ಗಂಟೆಗಳು. ಈ 24 ಗಂಟೆಗಳನ್ನು ಪ್ರತಿಯೊಬ್ಬರೂ ತಮ್ಮತಮ್ಮ ಒಳಿತಿಗಾಗಿ, ತಮ್ಮ ಕುಟುಂಬಗಳ, ಸಮಾಜದ ಮತ್ತು ದೇಶದ ಶ್ರೇಯಸ್ಸಿಗಾಗಿ ತುಂಬಾ ಒಳ್ಳೆಯ ರೀತಿಯಲ್ಲಿ ಉಪಯೋಗಿಸಿಕೊಳ್ಳಲು ಇಷ್ಟಪಡುತ್ತಾರೆ. ಆದರೆ, ಈ 24 ಗಂಟೆಗಳಲ್ಲಿ 10-12 ಗಂಟೆಗಳು ವ್ಯರ್ಥವಾಗಿ ಹೋಗುತ್ತಿದ್ದರೆ ನೀವೇನು ಮಾಡುತ್ತೀರಿ? 24 ಗಂಟೆಗಳ ಕಾಲದಲ್ಲಿ ಮಾಡಬಹುದಾದ ಕೆಲಸವನ್ನೆಲ್ಲ ಈ ಉಳಿದ 12-14 ಗಂಟೆಗಳಲ್ಲೇ ಮಾಡುತ್ತೀರ? `ಇದೇನಿದು, ಈ ಮೋದಿಯವರು ಏನೇನೋ ಕೇಳುತ್ತಿದ್ದಾರಲ್ಲ?” ಎಂದು ನಿಮಗೆ ಆಶ್ಚರ್ಯವಾಗುತ್ತಿರಬಹುದು. ಆದರೆ, ಒಬ್ಬ ಮನುಷ್ಯನಿಗೆ ಒಂದು ಇಡೀ ದಿನದಲ್ಲಿ ಕೇವಲ 12ರಿಂದ 14 ಗಂಟೆಗಳು ಮಾತ್ರ ಸಿಗುವುದು ಎಂದರೇನು? ದೇಶವಾಸಿಗಳೇ, ನನ್ನ ಈ ಮಾತು ನಿಮಗೆಲ್ಲ ವಿಚಿತ್ರವೆನಿಸುತ್ತಿರಬಹುದು. ಆದರೆ, ನಮ್ಮ ದೇಶದ ಮೂಲೆಮೂಲೆಗಳಲ್ಲಿರುವ ಮತ್ತು ತೀರಾ ಹಿಂದುಳಿದಿರುವ ಸಹಸ್ರ ಸಹಸ್ರ ಹಳ್ಳಿಗಳಲ್ಲಿರುವ ಜನರು ದಶಕಗಳಿಂದಲೂ ಹೀಗೆ ಬದುಕುತ್ತಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಬಂದು ಎಷ್ಟೊಂದು ವರುಷಗಳ ನಂತರವೂ ವಿದ್ಯುತ್ತನ್ನೇ ಕಾಣದ ಇಂತಹ ಹಳ್ಳಿಗಳಲ್ಲಿ ಬದುಕು ಸೂರ್ಯೋದಯ ಮತ್ತು ಸೂರ್ಯಾಸ್ತಗಳ ನಡುವಿನ ಅವಧಿಗಷ್ಟೇ ಸೀಮಿತವಾಗಿದೆ. ಇಲ್ಲೆಲ್ಲ ಸೂರ್ಯನ ಬೆಳಕೇ ಇವರೆಲ್ಲರ ಕೆಲಸದ ಅವಧಿಯನ್ನು ನಿರ್ಧರಿಸುತ್ತದೆ. ಅದು ಮಕ್ಕಳ ಓದು-ಬರಹವೇ ಇರಲಿ, ಗೃಹಿಣಿಯರು ಅಡುಗೆ ಮಾಡುವುದೇ ಆಗಿರಲಿ, ಊಟ ಮಾಡುವುದೇ ಆಗಿರಲಿ ಅಥವಾ ಇನ್ನಿತರ ಯಾವುದೇ ಗೃಹಕೃತ್ಯವಾಗಿರಲಿ, ಎಲ್ಲವನ್ನೂ ಈ ಹಳ್ಳಿಗಳಲ್ಲಿ ನಿರ್ಧರಿಸುವುದು ಸೂರ್ಯನ ಬೆಳಕೇ ಆಗಿದೆ! ಅಂದಹಾಗೆ, ದೇಶಕ್ಕೆ ಸ್ವಾತಂತ್ರ್ಯ ಬಂದಮೇಲೆ ಎಷ್ಟೊಂದು ದಶಕಗಳು ಉರುಳಿ ಹೋಗಿವೆಯಲ್ಲವೇ? ಆದರೂ, ನಾವು ಸರಕಾರವನ್ನು ರಚಿಸಿದಾಗ ದೇಶದಲ್ಲಿ ಇನ್ನೂ 18,000 ಹಳ್ಳಿಗಳಿಗೆ ವಿದ್ಯುತ್ ಸಂಪರ್ಕವೇ ಇರಲಿಲ್ಲ ಎಂದರೆ ನಿಮಗೆ ಅಚ್ಚರಿಯಾಗಬಹುದು. ಗಾಢಾಂಧಕಾರದಲ್ಲಿದ್ದ ಈ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಒದಗಿಸಲು ಹಿಂದಿನ ಸರಕಾರಗಳಿಗೆ ಇದ್ದ ಅಡೆತಡೆಗಳೇನು?, ಈ ಸಮಸ್ಯೆಗಳನ್ನು ಆ ಸರಕಾರಗಳೇಕೆ ಪರಿಹರಿಸಿಕೊಂಡು ಮುಂದಡಿ ಇಡಲಿಲ್ಲ ಎನ್ನುವುದು ಆರ್ಶರ್ಯಕರ ಸಂಗತಿಯಾಗಿದೆ. ಹಿಂದಿನ ಸರಕಾರಗಳು ಕೂಡ ವಿದ್ಯುದೀಕರಣದ ಬಗ್ಗೆ ಸಾಕಷ್ಟು ಭರವಸೆಗಳನ್ನು ಕೊಟ್ಟಿದ್ದವು. ಆದರೆ, ಅವುಗಳ ಪೈಕಿ ಯಾವೊಂದು ಭರವಸೆಯೂ ಈಡೇರಲಿಲ್ಲ. ಈ ನಿಟ್ಟಿನಲ್ಲಿ ಹಿಂದಿನ ಸರಕಾರಗಳು ಏನನ್ನೂ ಮಾಡಲಿಲ್ಲ. 13 ವರುಷಗಳ ಹಿಂದೆ, ಅಂದರೆ 2005ನೇ ಇಸವಿಯಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದು, ಮನಮೋಹನ್ ಸಿಂಗ್ ಅವರು ಪ್ರಧಾನಮಂತ್ರಿಯಾಗಿದ್ದರು. ಆಗ ಅವರು, 2009ನೇ ಇಸವಿಯ ಹೊತ್ತಿಗೆ ದೇಶದ ಪ್ರತಿಯೊಂದು ಮನೆಗೂ ವಿದ್ಯುತ್ ಸೌಲಭ್ಯವನ್ನು ಒದಗಿಸುವುದಾಗಿ ವಾಗ್ದಾನ ಮಾಡಿದ್ದರು. ಇಷ್ಟೇ ಅಲ್ಲ, ಕಾಂಗ್ರೆಸ್ ಪಕ್ಷದ ಆಗಿನ ಅಧ್ಯಕ್ಷರು ಕೂಡ ಇದೇ ಭರವಸೆಯನ್ನು ಕೊಟ್ಟಿದ್ದರು. ಆದರೆ, ಈ ಭರವಸೆಯನ್ನು ಅವರು ಯಾವತ್ತೂ ಈಡೇರಿಸಲಿಲ್ಲ. ನಿಜ ಹೇಳಬೇಕೆಂದರೆ, ಇಂತಹ ಭರವಸೆಗಳನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಆದರೆ, ಈ ವಿಷಯವನ್ನು ನಾವು ಗಂಭೀರವಾಗಿ ಕೈಗೆತ್ತಿಕೊಂಡೆವು. ಇಷ್ಟೇ ಅಲ್ಲ, ಈ ನಿಟ್ಟಿನಲ್ಲಿ ಇರುವ ಅಡೆತಡೆಗಳನ್ನು ನಿವಾರಿಸಿ, ನಮ್ಮ ಕೈಯಿಂದ ಸಾಧ್ಯವಾದಷ್ಟೂ ಒಳ್ಳೆಯ ಕೆಲಸವನ್ನು ಮಾಡಲು ಶ್ರಮಿಸುತ್ತಿದ್ದೇವೆ. ನಾವು ಸದಾ ಒಳ್ಳೆಯದನ್ನು ಮಾಡಲು ಪ್ರಯತ್ನಿಸುವುದು ಮತ್ತು ಜನರಿಗೆ ನಿಜಕ್ಕೂ ಏನು ಬೇಕೆನ್ನುವುದನ್ನು ತಿಳಿದುಕೊಳ್ಳಲು ನಮ್ಮ ಕೆಲಸಗಳನ್ನು ಸಾರ್ವಜನಿಕಗೊಳಿಸುವುದೇ ಪ್ರಜಾಪ್ರಭುತ್ವದ ಚೆಲುವು. ನಾವೆಲ್ಲರೂ ಜತೆಗೂಡಿ ಕೆಲಸ ಮಾಡಿದಾಗ ಮಾತ್ರ ಅದ್ಭುತವಾದ ಫಲಿತಾಂಶಗಳು ಹೊರಬರುತ್ತವೆ.

 

ಆಗಸ್ಟ್ 15ರಂದು ನಾನು ದೆಹಲಿಯ ಕೆಂಪುಕೋಟೆಯ ಮೇಲಿನಿಂದ ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲೂ ಇದೇ ಸಂಗತಿಯನ್ನು ಹೇಳಿದ್ದೆ. ಅಂದರೆ, ಮುಂದಿನ ಒಂದು ಸಾವಿರ ದಿನಗಳಲ್ಲಿ ನಾವು ದೇಶದ ಪ್ರತಿಯೊಂದು ಹಳ್ಳಿಗೂ ವಿದ್ಯುತ್ತನ್ನು ಒದಗಿಸುವುದಾಗಿ ಅಂದು ನಾನು ಘೋಷಿಸಿದ್ದೆ. ಕೇಂದ್ರ ಸರಕಾರವು ಒಂದಿಷ್ಟೂ ತಡ ಮಾಡದೆ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಯಿತು. ಈ ವಿಚಾರದಲ್ಲಿ ನಾವು ಅವರಿವರೆಂಬ ಯಾವ ಭೇದವನ್ನೂ ಮಾಡಲಿಲ್ಲ. ಉತ್ತರದಿಂದ ಹಿಡಿದು ದಕ್ಷಿಣದವರೆಗೆ, ಪೂರ್ವದಿಂದ ಹಿಡಿದು ಪಶ್ಚಿಮದವರೆಗೆ ನಾವು `ದೀನದಯಾಳ್ ಉಪಾಧ್ಯಾಯ ಗ್ರಾಮಜ್ಯೋತಿ ಯೋಜನೆ’ಯಡಿಯಲ್ಲಿ ಈ ವಿದ್ಯುತ್ವಂಚಿತ 18 ಸಾವಿರ ಹಳ್ಳಿಗಳಿಗೆ ವಿದ್ಯುತ್ತನ್ನು ಒದಗಿಸಲು ನಮ್ಮನ್ನು ಸಮರ್ಪಿಸಿಕೊಂಡೆವು. ಜೊತೆಗೆ, ರೈತರಿಗೆ ಅಗತ್ಯವಾಗಿರುವ ವಿದ್ಯುತ್ತನ್ನು ಪೂರೈಸಲು ನಾವು ಪ್ರತ್ಯೇಕವಾದ ಒಂದು ಫೀಡರ್ ವ್ಯವಸ್ಥೆಯನ್ನೇ ನಾವು ಈ ಯೋಜನೆಯಡಿ ಆರಂಭಿಸಿದೆವು. ಅಲ್ಲದೆ, ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ನಾವು ಬಲಪಡಿಸಿದೆವು. ಮಿಗಿಲಾಗಿ, ದೇಶದ ಎಲ್ಲ ಹಳ್ಳಿಗಳು ಮತ್ತು ಮನೆಮಠಗಳನ್ನು ಈ ವ್ಯವಸ್ಥೆಗೆ ಜೋಡಿಸಲಾಗುವುದು ಎಂಬುದನ್ನು ನಾವು ಖಾತ್ರಿಪಡಿಸಿದೆವು. ಹಳ್ಳಿಗಳು ಸಣ್ಣದಾಗಿರಲಿ, ದೊಡ್ಡದಾಗಿರಲಿ, ಪ್ರತಿಯೊಂದು ಹಳ್ಳಿಯೂ ಈ ಯೋಜನೆಯಡಿ ಒಂದೊಂದಾಗಿ ವಿದ್ಯುತ್ ಸಂಪರ್ಕವನ್ನು ಪಡೆಯಬೇಕು ಎನ್ನುವುದೇ ನಮ್ಮ ಆಶಯ. ಇನ್ನೊಂದೆಡೆಯಲ್ಲಿ, `ಉಜಾಲ’ ಯೋಜನೆಯನ್ನು ವಿಸ್ತರಿಸುವ ಕೆಲಸ ಎಂದಿನಂತೆಯೇ ಮುಂದುವರಿದಿದೆ. 

 

ಹಳ್ಳಿಯಾಗಲಿ, ಜನವಸತಿ ಪ್ರದೇಶವಾಗಲಿ, ಒಂದು ವೇಳೆ ಬೆರಳೆಣಿಕೆಯಷ್ಟು ಜನಸಂಖ್ಯೆಯನ್ನು ಹೊಂದಿದ್ದರೂ ಸಹ ಅದನ್ನೇ ನೆಪವಾಗಿ ಒಡ್ಡಿ ಅಲ್ಲಿಗೆ ವಿದ್ಯುತ್ ಸಂಪರ್ಕವನ್ನು ಒದಗಿಸದೆ ಇರಬಾರದು ಎನ್ನುವುದು ನಮ್ಮ ಗುರಿಯಾಗಿತ್ತು. ಇದನ್ನು ಮನಸ್ಸಿನಲ್ಲಿಟ್ಟುಕೊಂಡೇ ನಾವು ಕೆಲಸ ಮಾಡುತ್ತಿದ್ದೇವೆ. ಯಾವುದಾದರೂ ಹಳ್ಳಿಗಳನ್ನು ವಿದ್ಯುತ್ ಜಾಲಕ್ಕೆ ಬೆಸೆಯಲು ಸಾಧ್ಯವಿಲ್ಲ ಎಂದಾದಾಗ, ಅಂತಹ ಸಂದರ್ಭಗಳಲ್ಲಿ ಪರ್ಯಾಯ ಮಾರ್ಗೋಪಾಯಗಳನ್ನು ನಾವು ಅನುಸರಿಸಿದ್ದೇವೆ. ಭಾರತದ ಅಭಿವೃದ್ಧಿಯ ಪಥದಲ್ಲಿ 2018ನೇ ಇಸವಿಯ ಏಪ್ರಿಲ್ 28ನೇ ತಾರೀಖನ್ನು ಮುಂಬರುವ ದಿನಗಳಲ್ಲಿ ಎಲ್ಲರೂ `ಐತಿಹಾಸಿಕ ದಿನ’ವೆಂದು ನೆನಪಿಸಿಕೊಳ್ಳಲಾಗುತ್ತದೆ. ಏಕೆಂದರೆ, ಈ ದಿನದಂದು ಮಣಿಪುರದ ಲೀಸಾಂಗ್ ಎನ್ನುವ ಗ್ರಾಮವು ದೇಶದ ವಿದ್ಯುತ್ ಜಾಲದ ಸಂಪರ್ಕವನ್ನು ಪಡೆಯುವುದರೊಂದಿಗೆ ಇಡೀ ದೇಶವು ವಿದ್ಯುತ್ ಗ್ರಿಡ್ಗೆ ಒಳಪಟ್ಟ ದಾಖಲೆಯನ್ನು ಸೃಷ್ಟಿಸಲಾಯಿತು. ಇದು ದೇಶದ ಪ್ರತಿಯೊಬ್ಬರಿಗೂ ಹೆಮ್ಮೆಯ ಕ್ಷಣ! ವಿದ್ಯುತ್ ಸೌಲಭ್ಯವನ್ನು ಕಟ್ಟಕಡೆಯದಾಗಿ ಪಡೆದ ಆ ಲೀಸಾಂಗ್ ಎನ್ನುವ ಹಳ್ಳಿಯ ಜನರೊಂದಿಗೆ ಮಾತನಾಡುವ ಮೂಲಕ ನಾನು ಇಂದಿನ ಈ ಮಾತುಕತೆಯನ್ನು ಆರಂಭಿಸಲು ಬಯಸುತ್ತಿದ್ದೇನೆ. ಮೊಟ್ಟಮೊದಲಿಗೆ, ಲೀಸಾಂಗ್ ಜನರು ಏನನ್ನು ಹೇಳಲು ಬಯಸಿದ್ದಾರೆ ಎಂಬುದನ್ನು ಕೇಳೋಣ. ಅಂದಂತೆ, ಈ ಲೀಸಾಂಗ್ ಗ್ರಾಮವು ಮಣಿಪುರದ ಸೇನಾಪತಿ ಜಿಲ್ಲೆಯಲ್ಲಿದೆ. 

 

ನನ್ನ ಪ್ರೀತಿಯ ದೇಶವಾಸಿಗಳೇ, ವಿದ್ಯುತ್ ಸಂಪರ್ಕವನ್ನು ಒದಗಿಸಿದ ನಂತರ ತಮ್ಮೆಲ್ಲರ ಬದುಕಿನಲ್ಲಿ ಹೇಗೆ ಹೊಸಹೊಸ ಅನುಭವಗಳಾಗುತ್ತಿವೆ ಎನ್ನುವುದನ್ನು ನಾವೆಲ್ಲರೂ ಸ್ವತಃ ಲೀಸಾಂಗ್ ಗ್ರಾಮಸ್ಥರ ಬಾಯಿಯಿಂದ ಈಗಷ್ಟೇ ಕೇಳಿದ್ದೇವೆ. ವಿದ್ಯುತ್ ಸಂಪರ್ಕದಿಂದ ವಂಚಿತವಾಗಿದ್ದ ಈ 18 ಸಾವಿರ ಹಳ್ಳಿಗಳ ಪೈಕಿ ಹೆಚ್ಚಿನವು ತುಂಬಾ ದೂರದಲ್ಲಿದ್ದವು, ಅಂದರೆ, ಈ ಹಳ್ಳಿಗಳು ಹಿಮಾಚ್ಛಾದಿತ ಪರ್ವತ ಪ್ರದೇಶಗಳಲ್ಲೋ, ದಟ್ಟಡವಿಗಳ ಮಧ್ಯೆಯೋ, ನಕ್ಸಲರು ಮತ್ತು ಭಯೋತ್ಪಾದನಾ ಚಟುವಟಿಕೆಗಳಿಂದ ಪೀಡಿತವಾಗಿರುವ ಪ್ರದೇಶಗಳಲ್ಲೋ ಇವೆ. ಇಂತಹ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕವನ್ನು ಒದಗಿಸುವುದು ನಿಜಕ್ಕೂ ದೊಡ್ಡ ಸವಾಲಿನ ಕೆಲಸವೇ ಆಗಿತ್ತು. ಏಕೆಂದರೆ, ಈ ಹಳ್ಳಿಗಳಲ್ಲಿ ಯಾವುದೇ ಬಗೆಯ ಸಂಪರ್ಕ ಸಾಧನವಾಗಲಿ ಇಲ್ಲ; ಈ ಹಳ್ಳಿಗಳಿಗೆ ತಲುಪುವುದು ಕೂಡ ಸುಲಭವಲ್ಲ. ಸಾವಿರಾರು ಹಳ್ಳಿಗಳ ಸ್ಥಿತಿ ಹೀಗೆಯೇ ಇದೆ. ಹೀಗಾಗಿ ಈ ಹಳ್ಳಿಗಳಿಗೆ ಕುದುರೆಯ ಮೇಲೆ ಹೇರಿಕೊಂಡೋ, ಹೇಸರಗತ್ತೆಗಳ ಮೇಲೆ ಹೊರಿಸಿಕೊಂಡೋ, ಸ್ವತಃ ಹೆಗಲ ಮೇಲೆ ಹೊತ್ತುಕೊಂಡೋ, ದೋಣಿಗಳ ಮೂಲಕವೋ ಸಾಧನ-ಸಲಕರಣೆಗಳನ್ನು ನಾವು ಸಾಗಿಸಿದೆವು. ಅದರಲ್ಲೂ ಜಮ್ಮು-ಕಾಶ್ಮೀರದ 35 ಮತ್ತು ಅರುಣಾಚಲ ಪ್ರದೇಶದ 16 ಹಳ್ಳಿಗಳಿಗೆ ವಿದ್ಯುದೀಕರಣಕ್ಕೆ ಅಗತ್ಯವಾದ ಸಾಮಗ್ರಿಗಳನ್ನು ಹೆಲಿಕಾಪ್ಟರ್ ಮೂಲಕ ರವಾನಿಸಿದೆವು. ಇದು ನಮ್ಮ ಸರಕಾರದ ಸಾಧನೆ ಎಂದು ನಾನು ಹೇಳುವುದಿಲ್ಲ. ಬದಲಿಗೆ, ಇದು ಪ್ರತಿಯೊಬ್ಬ ವ್ಯಕ್ತಿಯ, ಇಂತಹ ಪ್ರತಿಯೊಂದು ಹಳ್ಳಿಯ ಸಾಧನೆಯಾಗಿದೆ. ಅದರಲ್ಲೂ ಸರಕಾರದ ಸಿಬ್ಬಂದಿ ವರ್ಗದಲ್ಲಿ ತೀರಾ ಕೆಳ ಸ್ತರದಲ್ಲಿರುವ ಕೆಲಸಗಾರರಿಗೆ ಈ ಶ್ರೇಯಸ್ಸು ಸಲ್ಲಬೇಕು. ಏಕೆಂದರೆ, ಇವರೆಲ್ಲರೂ ಹಗಲಿರುಳೆನ್ನದೆ ಮತ್ತು ಎದುರಾದ ಕಷ್ಟಗಳಿಗೆಲ್ಲ ಎದೆಗೊಟ್ಟು ಕೆಲಸ ಮಾಡಿದ್ದಾರೆ. ಇವರು ತಮ್ಮ ಹೆಗಲ ಮೇಲೆ ವಿದ್ಯುತ್ ಕಂಬಗಳನ್ನು ಹೊತ್ತಿದ್ದಾರೆ. ಎಲೆಕ್ಟ್ರೀಷಿಯನ್ ಆಗಿರಲಿ, ಟೆಕ್ನೀಷಿಯನ್ ಆಗಿರಲಿ, ಅಥವಾ ಕೂಲಿ ಕೆಲಸದವರಾಗಿರಲಿ, ಇದು ಅವರು ಮಾಡಬೇಕಾದ ಕೆಲಸ ಎನ್ನುವುದು ನಿಜ. ಆದರೆ, ಇವರೆಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರಿಂದಲೇ ನಾವಿಂದು ದೇಶದ ಪ್ರತಿಯೊಂದು ಹಳ್ಳಿಗೂ ವಿದ್ಯುತ್ ಸಂಪರ್ಕವನ್ನು ಒದಗಿಸಲು ಸಾಧ್ಯವಾಗಿದೆ. ಇಡೀ ದೇಶದ ಪರವಾಗಿ ನಾವು ಇವರೆಲ್ಲರಿಗೂ ಧನ್ಯವಾದಗಳನ್ನೂ, ಶುಭಾಶಯಗಳನ್ನೂ ಸಲ್ಲಿಸುತ್ತಿದ್ದೇನೆ. 

 

ಅಂದಂತೆ, ನಾವೆಲ್ಲ ಮುಂಬೈ ಬಗ್ಗೆ ಮಾತನಾಡುವಾಗಲೆಲ್ಲ ಅಲ್ಲಿಯ ಗಗನಚುಂಬಿ ಕಟ್ಟಡಗಳನ್ನೂ ಝಗಮಗಿಸುವ ದೀಪಗಳಿಂದ ಬೆಳಗುವ ಅಲ್ಲಿಯ ರಸ್ತೆಗಳನ್ನೂ ನೆನಪಿಸಿಕೊಳ್ಳುತ್ತೇವೆ. ಇಂತಹ ಮುಂಬೈ ನಗರಕ್ಕೆ ಅನತಿ ದೂರದಲ್ಲೇ ಎಲಿಫೆಂಟಾ ದ್ವೀಪವಿದೆ. ಪ್ರವಾಸೋದ್ಯಮದ ದೃಷ್ಟಿಯಿಂದಂತೂ ಈ ದ್ವೀಪವು ಬಹುದೊಡ್ಡ ತಾಣವಾಗಿದೆ. ಈ ಎಲಿಫೆಂಟಾದಲ್ಲಿರುವ ಗುಹೆಗಳು ವಿಶ್ವಸಂಸ್ಥೆಯ ಯುನೆಸ್ಕೋದ ಪಾರಂಪರಿಕ ತಾಣಗಳ ಪಟ್ಟಿಯಲ್ಲಿದೆ. ಇಲ್ಲಿಗೆ ಪ್ರತಿದಿನವೂ ಸಾವಿರಾರು ಭಾರತೀಯರೂ ವಿದೇಶೀಯರೂ ಭೇಟಿ ಕೊಡುತ್ತಾರೆ. ಆದರೆ, ಮುಂಬೈನ ಮಗ್ಗುಲಲ್ಲೇ ಇರುವ ಈ ದ್ವೀಪದ ಅದೆಷ್ಟೋ ಹಳ್ಳಿಗಳಿಗೆ ಸ್ವಾತಂತ್ರ್ಯ ಬಂದ ಅದೆಷ್ಟೋ ವರುಷಗಳಾದರೂ ಇನ್ನೂ ವಿದ್ತುತ್ ಸಂಪರ್ಕವನ್ನೇ ಒದಗಿಸಿಲ್ಲ ಎನ್ನುವುದನ್ನು ತಿಳಿದು ನನಗೆ ಆಶ್ಚರ್ಯವಾಯಿತು. ವಾಸ್ತವವೆಂದರೆ, ಈ ಸಮಾಚಾರವನ್ನು ಯಾವುದೇ ಸುದ್ದಿ ಪತ್ರಿಕೆಯಲ್ಲಾಗಲಿ, ಟಿವಿ ವಾಹಿನಿಗಳಲ್ಲಾಗಲಿ ನೋಡಿಲ್ಲ. ಇಷ್ಟೇ ಅಲ್ಲ, ಈ ಬಗ್ಗೆ ಯಾರೊಬ್ಬರೂ ತಲೆಯನ್ನೂ ಕೆಡಿಸಿಕೊಂಡಿಲ್ಲ. ಆದರೆ, ಎಲಿಫೆಂಟಾ ದ್ವೀಪದಲ್ಲಿರುವ ಹಳ್ಳಿಗಳ ಜನರು ಈಗ ಖುಷಿಯಾಗಿದ್ದಾರೆ. ನಾವು ಅಲ್ಲಿ ಕೆಲಸ ಮಾಡುತ್ತಿದ್ದಾಗ ನಮ್ಮಲ್ಲಿಗೆ ಬಂದ ಜನರು “ಮುಂಚೂಣಿಯಲ್ಲಿರುವ ಭಾಗಗಳಿಗೆ ಮಾತ್ರ ವಿದ್ಯುತ್ತನ್ನು ನೀಡಲಾಗುತ್ತಿದೆಯೇ ವಿನಾ ಹಿಂಭಾಗದಲ್ಲಿರುವ ಪ್ರದೇಶಗಳಿಗೆ ಈ ಭಾಗ್ಯವೇ ಸಿಕ್ಕಿಲ್ಲ,” ಎಂದು ದೂರಿದರು. ವಿದ್ಯುತ್ ಜಾಲ ಸಣ್ಣದೇ ಇರಲಿ, ದೊಡ್ಡದೇ ಇರಲಿ, ಈಗ ನಾವು ಪ್ರತಿಯೊಂದು ಕೆಲಸವೂ ಆಗುವಂತೆ ಮಾಡುತ್ತಿದ್ದೇವೆ. ಇದೇನೇ ಇರಲಿ, ಇವೆಲ್ಲ ಕೆಲಸಗಳನ್ನೂ ಹಿಂದಿನ ಸರಕಾರಗಳೇ ಮಾಡಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತು? ನಮ್ಮ ಎಲಿಫೆಂಟಾ ದ್ವೀಪದ ಪರಿಸರದಲ್ಲಿರುವ ಹಳ್ಳಿಗಳ ಜನರು ಕಳೆದ 70 ವರ್ಷಗಳಿಂದಲೂ ಕತ್ತಲಿನಲ್ಲೇ ಬದುಕಿದ್ದಾರೆ ಎನ್ನುವುದನ್ನು ನೀವು ಊಹಿಸಿಕೊಳ್ಳ ಬಲ್ಲಿರಾ? ಆದರೆ ನಾವು ಸಮುದ್ರದಾಳದಲ್ಲಿ ಕೇಬಲ್ ಎಳೆಯುವ ಮೂಲಕ ಎಲಿಫೆಂಟಾ ದ್ವೀಪದ ಹಳ್ಳಿಗಳಿಗೆ ವಿದ್ಯುತ್ತನ್ನು ಒದಗಿಸಿದೆವು. ಹೀಗಾಗಿ, ಈ ಹಳ್ಳಿಗಳಲ್ಲಿದ್ದ ಅಂಧಕಾರ ಇಂದು ಮಾಯವಾಗಿದೆ. ಯಾವಾಗ ನಮ್ಮ ಉದ್ದೇಶ ಸರಿಯಾಗಿರುತ್ತದೋ, ಯಾವಾಗ ನಮ್ಮ ಉದ್ದೇಶ ಪರಿಶುದ್ಧವಾಗಿರುತ್ತದೋ, ಯಾವಾಗ ನಮ್ಮ ನೀತಿಗಳು ಸ್ಪಷ್ಟವಾಗಿರುತ್ತವೋ ಆಗ ಕಷ್ಟಕರವಾದ ಗುರಿಗಳನ್ನು ಕೂಡ ನಾವು ಸಾಧಿಸಬಹುದು. 

 

ನಾವೀಗ ಬೇರೆಡೆಗಳಿಗೆ ಹೋಗೋಣ. ಮೊದಲಿಗೆ ನಾವು ಈ ನಿಟ್ಟಿನಲ್ಲಿ ಜಾರ್ಖಂಡ್ ರಾಜ್ಯಕ್ಕೆ ತೆರಳೋಣ. 

 

ಅಣ್ಣ-ತಮ್ಮಂದಿರೇ ಮತ್ತು ಅಕ್ಕ-ತಂಗಿಯರೇ, 

 

ಹಿಂದಿನ ಸರಕಾರಗಳು ದೇಶದ ಪೂರ್ವ ಭಾಗಗಳ ಅಭಿವೃದ್ಧಿಯ ಕಡೆಗೆ ಗಮನವನ್ನೇ ಕೊಡಲಿಲ್ಲ. ಹೀಗಾಗಿ ಈ ಭಾಗವು ಅಭಿವೃದ್ಧಿಯಿಂದಲೂ ಅನೇಕ ಬಗೆಯ ಸೌಕರ್ಯಗಳಿಂದಲೂ ವಂಚಿತವಾಗಿದ್ದು, ಹಿಂದುಳಿದಿದೆ. ಇದಕ್ಕೊಂದು ಉದಾಹರಣೆ ನೋಡೋಣ. ಅದೇನೆಂದರೆ, ದೇಶದಲ್ಲಿ ವಿದ್ಯುತ್ತನ್ನೇ ಕಾಣದಿದ್ದ 18 ಸಾವಿರ ಹಳ್ಳಿಗಳಲ್ಲಿ 14,582 ಹಳ್ಳಿಗಳು ಅಥವಾ ಹತ್ತಿರ ಹತ್ತಿರ 15 ಸಾವಿರ ಗ್ರಾಮಗಳು ದೇಶದ ಪೂರ್ವ ಭಾಗದಲ್ಲೇ ಇವೆ! 5,790 ಅಥವಾ ಹತ್ತಿರ ಹತ್ತಿರ 6,000 ಗ್ರಾಮಗಳು ಈಶಾನ್ಯ ಭಾರತ ಮತ್ತು ಪೂರ್ವಾಂಚಲದಲ್ಲಿವೆ. ಅಂದರೆ, ಈ ಗ್ರಾಮಗಳೆಲ್ಲ ಇರುವುದು ಈಶಾನ್ಯ ಭಾರತದಲ್ಲೇ. ನೀವೀಗ ಟಿ.ವಿ. ಪರದೆಯ ಮೇಲೆ ಕಾಣುತ್ತಿರುವ ಭೂಪಟದಲ್ಲಿ ಕೆಲವು ಭಾಗಗಳು ಕೆಂಪು ಬಣ್ಣದಲ್ಲಿ ಇರುವುದನ್ನು ನೋಡುತ್ತಿರಬಹುದು. ಇವೆಲ್ಲವೂ ತೀರಾ ಇತ್ತೀಚಿನವರೆಗೂ ವಿದ್ಯುತ್ ಸಂಪರ್ಕದಿಂದ ವಂಚಿತವಾಗಿದ್ದವು. ಇಲ್ಲಿಯ ಜನರು ಪ್ರತಿಯೊಬ್ಬರ ಒಳಿತಿಗಾಗಿ ದುಡಿಯಲು ಬಯಸಿದ್ದರೂ ಅದು ಅವರಿಗೆ ಸಾಧ್ಯವಿತ್ತೇ ಎನ್ನುವುದನ್ನು ನೀವೀಗ ನನಗೆ ಹೇಳಿ. ಈ ಪ್ರದೇಶಗಳೇನೂ ವಿಪರೀತ ಜನಸಂಖ್ಯೆಯನ್ನು ಹೊಂದಿಲ್ಲ. ಹಾಗೆಯೇ, ಇಲ್ಲಿರುವ ಲೋಕಸಭೆ ಕ್ಷೇತ್ರಗಳ ಸಂಖ್ಯೆಯೂ ಕಡಿಮೆಯೇ. ಹೀಗಾಗಿ, ಹಿಂದಿನ ಸರಕಾರಗಳಿಗೆ ಈ ಪ್ರದೇಶದ ಅಭಿವೃದ್ಧಿಯ ಬಗ್ಗೆ ಯಾವ ಆಸಕ್ತಿಯೂ ಇರಲಿಲ್ಲ. ವಿರಳ ಜನಸಂಖ್ಯೆಯನ್ನು ಹೊಂದಿರುವ ಈ ಪ್ರದೇಶಗಳಿಗೆ ವಿದ್ಯುತ್ತನ್ನು ಒದಗಿಸಬೇಕೆಂಬ ಬಗ್ಗೆ ಹಿಂದಿನ ಸರಕಾರಗಳು ತಲೆಯನ್ನೇ ಕೆಡಿಸಿಕೊಳ್ಳಲಿಲ್ಲ. ಏಕೆಂದರೆ, ಅವರ ರಾಜಕೀಯ ಹಿತಾಸಕ್ತಿಗಳಿಗೆ ಇದು ಹೊಂದಿಕೊಳ್ಳುತ್ತಿರಲಿಲ್ಲ. ದೇಶದ ಪೂರ್ವ ಭಾಗದಲ್ಲಿ ಕ್ಷಿಪ್ರ ಗತಿಯಲ್ಲಿ ಮತ್ತು ಸಮತೋಲನದಿಂದ ಕೂಡಿರುವ ಅಭಿವೃದ್ಧಿಯನ್ನು ಸಾಧಿಸಿದಾಗಲಷ್ಟೇ ಇಡೀ ರಾಷ್ಟ್ರದ ಅಭಿವೃದ್ಧಿಯ ಪಯಣಕ್ಕೆ ಮತ್ತಷ್ಟು ವೇಗ ಸಿಕ್ಕುತ್ತದೆ ಎಂದು ನಾನು ಸದಾ ನಂಬಿಕೊಂಡು ಬಂದಿದ್ದೇನೆ. 

 

ನಮ್ಮ ಸರಕಾರ ರಚನೆಯಾದಾಗ ನಾವು ಈ ನಿಲುವಿನೊಂದಿಗೇ ಮುಂದಡಿ ಇಡಲು ಆರಂಭಿಸಿದೆವು. ಅಂದರೆ, ದೇಶದ ಈಶಾನ್ಯ ಭಾಗವನ್ನು ಅಭಿವೃದ್ಧಿಯ ಮುಖ್ಯ ವಾಹಿನಿಯೊಂದಿಗೆ ಬೆಸೆಯಲು ಅಗತ್ಯವಾಗಿದ್ದಂತಹ ಪ್ರಯತ್ನಗಳನ್ನು ನಾವು ಕೈಗೊಳ್ಳತೊಡಗಿದೆವು. ಅದರಲ್ಲೂ ಇದನ್ನು ಸಾಧಿಸುವ ಅಂಗವಾಗಿ ಈಶಾನ್ಯ ಭಾರತದ ಹಳ್ಳಿಗಳಿಗೆಲ್ಲ ವಿದ್ಯುತ್ತನ್ನು ಒದಗಿಸುವಂತಹ ಬಹುಮುಖ್ಯವಾದ ಕ್ರಮವನ್ನು ಸಾಕಾರಗೊಳಿಸಿದೆವು. ಇಂದು ಕೇವಲ ಈಶಾನ್ಯ ಭಾರತದ ಹಳ್ಳಿಗಳಿಗೆ ಮಾತ್ರವಲ್ಲ, ಇಡೀ ದೇಶದ ಪ್ರತಿಯೊಂದು ಹಳ್ಳಿಗೂ ವಿದ್ಯುತ್ ಸಂಪರ್ಕವಿದೆ ಎನ್ನುವುದರಿಂದ ನನಗಿಂದು ಸಂತೋಷವಾಗಿದೆ. ಈ ಮೂಲಕ ದೇಶದ ಗ್ರಾಮಾಂತರ ಪ್ರದೇಶಗಳಲ್ಲಿದ್ದ ಅಂಧಕಾರವನ್ನು ನಾವು ಕಿತ್ತೊಗೆದಿದ್ದೇವೆ. ವಿದ್ಯುತ್ ಸೌಲಭ್ಯವು ಜೀವನದಲ್ಲಿ ಎಂತಹ ಬದಲಾವಣೆಗಳನ್ನು ತರಲಿದೆ ಎನ್ನುವುದು ನಿಮಗಿಂತ ಬೇರಾರಿಗೂ ಚೆನ್ನಾಗಿ ತಿಳಿದಿರುವುದು ಸಾಧ್ಯವಿಲ್ಲ. 

 

ನನಗೆ ದೇಶಾದ್ಯಂತದ ಜನರಿಂದ ಸಾವಿರಾರು ಪತ್ರಗಳು ಬರುತ್ತವೆ. ಜನರು ಈ ಪತ್ರಗಳಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ಇವುಗಳನ್ನು ಓದುವ ಮೂಲಕ ನಾನು ಸಾಕಷ್ಟನ್ನು ಕಲಿಯುತ್ತೇನೆ. 

 

ಈಗ ವಿದ್ಯುತ್ ಸೌಲಭ್ಯವನ್ನು ಪಡೆದಿರುವ ಈ ಹಳ್ಳಿಗಳಲ್ಲಿ ಎಂತಹ ಮಹತ್ತರವಾದ ಬದಲಾವಣೆಗಳು ಸಂಭವಿಸಿವೆ ಎನ್ನುವುದನ್ನು ನೀವು ಊಹಿಸಿಕೊಳ್ಳಬಹುದು. ಈ ಯಾವ ಹಳ್ಳಿಗಳಲ್ಲೂ ಇಂದು ಕತ್ತಲು ಅಲ್ಲಿಯ ಜನರ ಬದುಕನ್ನು ನಿಯಂತ್ರಿಸುತ್ತಿಲ್ಲ. ಬದಲಿಗೆ, ಅಲ್ಲಿಯ ಜನರೇ ತಮ್ಮತಮ್ಮ ಬದುಕಿನ ಒಡೆಯರಾಗಿದ್ದಾರೆ. ಇಂದಿಗೂ ಸಹ ಈ ಹಳ್ಳಿಗಳಲ್ಲಿ ಸೂರ್ಯನು ಎಂದಿನಂತೆಯೇ ಮುಳುಗುತ್ತಿದ್ದಾನೆ, ನಿಜ. ಆದರೆ, ಸೂರ್ಯಾಸ್ತದೊಂದಿಗೆ ಈ ಹಳ್ಳಿಗರ ಅಂದಿನ ಬದುಕಿಗೆ ತೆರೆ ಬೀಳುತ್ತಿಲ್ಲ. ಈ ಹಳ್ಳಿಗಳ ಮಕ್ಕಳೆಲ್ಲರೂ ಈಗ ವಿದ್ಯುತ್ ದೀಪದ ಬೆಳಕಿನಲ್ಲಿ ಸುಲಭವಾಗಿ ಓದಿಕೊಳ್ಳಬಹುದು. ಹಾಗೆಯೇ, ಇಲ್ಲಿನ ಗೃಹಿಣಿಯರು ರಾತ್ರಿಗೆ ಬೇಕಾದ ಊಟವನ್ನು ಮೊದಲಿನಂತೆ ಮಧ್ಯಾಹ್ನವೇ ಶುರು ಮಾಡಬೇಕಾಗಿಲ್ಲ. ಇಂತಹ ದಿನಚರಿ ಈಗ ಕೊನೆಗೊಂಡಿದೆ. ಜನರು ಇಲ್ಲೆಲ್ಲ ಈ ಬಗೆಯ ಚಿಂತೆಗಳಿಂದ ಹೊರಬಂದಿದ್ದಾರೆ. ಇಲ್ಲೆಲ್ಲ ಈಗ ಮಾರುಕಟ್ಡೆಯು ಮಧ್ಯರಾತ್ರಿಯವರೆಗೂ ತೆರೆದಿರುತ್ತದೆ. ಜನರು ತಮ್ಮ ಮೊಬೈಲುಗಳನ್ನು ರೀಚಾರ್ಜ್ ಮಾಡಿಸಲು ದೂರದ ಊರುಗಳಿಗೆ ಹೋಗಬೇಕಾಗಿಲ್ಲ. ಹಿಂದೆಲ್ಲ ಇಲ್ಲಿನ ಜನರು ಅಕಸ್ಮಾತ್ ತಮ್ಮ ಮೊಬೈಲುಗಳನ್ನು ರಾತ್ರಿಯ ಹೊತ್ತು ಎಲ್ಲೋ ಮರೆತು, ಬೆಳಗ್ಗೆ ಅದನ್ನು ತೆಗೆದುಕೊಳ್ಳಲು ಹೋಗುತ್ತಿದ್ದರು. ಇಷ್ಟರ ಮಧ್ಯೆ ಬೇರೆ ಇನ್ನಾರೋ ಈ ಮೊಬೈಲಿನ ಮೂಲಕ ಏನೋ ಮಾಡಬಾರದ್ದನ್ನು ಮಾಡಿರುತ್ತಿದ್ದರು. ಆಗ ಉಳಿದವರೆಲ್ಲರೂ ಮೊಬೈಲನ್ನು ಮರೆತು ಬಿಟ್ಟು ಬಂದಿದ್ದವನನ್ನೇ ದೂಷಿಸುತ್ತಿದ್ದರು. ಕೊನೆಗೆ, ತಮ್ಮದಲ್ಲದ ತಪ್ಪಿಗೆ ಅಮಾಯಕರು ಜೈಲುಗಳಲ್ಲಿ ಕೊಳೆಯುತ್ತಿದ್ದರು. ನಿಜಕ್ಕೂ ಈ ಜನರಿಗೆ ಎಂತೆಂತಹ ಕಷ್ಟಗಳಿದ್ದವು ನೋಡಿ! ಜಮ್ಮು-ಕಾಶ್ಮೀರದ ಜನರು ಇಂದು ನಮ್ಮೊಂದಿಗೆ ಇಲ್ಲಿದ್ದಾರೆ. ನಾವೀಗ ಅವರ ಮಾತುಗಳನ್ನು ಆಲಿಸೋಣ. ಏಕೆಂದರೆ, ದುರ್ಗಮವಾದ ಗಿರಿಶ್ರೇಣಿಯಲ್ಲಿರುವ ಈ ಹಳ್ಳಿಗಳಿಗೆ ವಿದ್ಯುತ್ತನ್ನು ಒದಗಿಸಲು ಬೇಕಾದ ಸಾಧನ ಸಲಕರಣೆಗಳನ್ನೆಲ್ಲ ನಾವು ಹೆಲಿಕಾಪ್ಟರು ಮೂಲಕ ಸಾಗಿಸಿದ್ದೇವೆ. ಹೀಗಾಗಿ, ಜಮ್ಮು-ಕಾಶ್ಮೀರದ ನಮ್ಮ ಸೋದರ-ಸೋದರಿಯರಿಂದ ಒಂದಿಷ್ಟು ಮಾತುಗಳನ್ನು ಆಲಿಸಲು ನಾನು ಬಯಸುತ್ತೇನೆ. 

 

ಇಂದು ನಮ್ಮೊಂದಿಗೆ ಮಾತನಾಡುತ್ತಿರುವ ಈ ಸಹಸ್ರ ಸಹಸ್ರ ಜನರು ವಿದ್ಯುತ್ ಸೌಲಭ್ಯವು ತಮ್ಮೆಲ್ಲರ ನಿತ್ಯಬದುಕಿನಲ್ಲಿ ಎಂತಹ ಅಗಾಧವಾದ ಪರಿಣಾಮವನ್ನು ಉಂಟುಮಾಡಿದೆ ಎಂಬುದನ್ನು ಬಲ್ಲರು. ಇಂದು, ದೇಶದ ಪ್ರತಿಯೊಂದು ಹಳ್ಳಿಗೂ ವಿದ್ಯುತ್ತನ್ನು ಒದಗಿಸಲಾಗಿದೆ. ಅಂದ ಮಾತ್ರಕ್ಕೆ, ನಾವು ಕೇವಲ ಇದೊಂದೇ ಸಂಗತಿಯಿಂದ ತೃಪ್ತರಾಗಿದ್ದೇವೆಂದು ಅರ್ಥವಲ್ಲ. ಹೀಗಾಗಿಯೇ ನಮ್ಮ ಸರಕಾರವು ಈ ಗುರಿಯನ್ನೂ ಮೀರಿ ದೇಶದ ಪ್ರತಿಯೊಂದು ಮನೆಗೂ ವಿದ್ಯುತ್ತನ್ನು ನೀಡಬೇಕೆಂಬ ಪ್ರತಿಜ್ಞೆಯನ್ನು ಕೈಗೊಂಡಿದೆ. ಈ ಮೂಲಕವಾಗಿ, ಸಮಾಜದ ಕಟ್ಟಕಡೆಯ ಮನುಷ್ಯನ ಪರೋಭಿವೃದ್ಧಿಯೂ ಆಗಬೇಕೆಂದು ಪ್ರತಿಪಾದಿಸುತ್ತಿದ್ದ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಕನಸನ್ನು ನನಸು ಮಾಡಬೇಕೆನ್ನುವುದು ನಮ್ಮ ಹಂಬಲವಾಗಿದೆ. ಈ ನಿಟ್ಟಿನಲ್ಲಿ ನಾವು `ಪ್ರಧಾನಮಂತ್ರಿಗಳ ಸಹಜ್ ಬಿಜ್ಲಿ ಹರ್ ಘರ್ ಯೋಜನೆ’ (ಸಂಕ್ಷಿಪ್ತವಾಗಿ `ಸೌಭಾಗ್ಯ’ ಯೋಜನೆ)ಯನ್ನು ಆರಂಭಿಸಿದ್ದೇವೆ. ಇದುವರೆಗೂ ವಿದ್ಯುತ್ ಸೌಲಭ್ಯದಿಂದ ವಂಚಿತವಾಗಿರುವ ಮನೆಗಳು ಹಳ್ಳಿಗಳಲ್ಲೇ ಇರಲಿ, ನಗರಗಳಲ್ಲೇ ಇರಲಿ, ಅವೆಲ್ಲವೂ ಇನ್ನುಮುಂದೆ ಈ ಯೋಜನೆಯಡಿ ಬೆಳಕನ್ನು ಕಾಣಲಿವೆ. ಈ ಯೋಜನೆಯಡಿ ನಾಲ್ಕು ಕೋಟಿ ಮನೆಗಳಿಗೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸುವ ಗುರಿಯನ್ನು ನಿಗದಿಪಡಿಸಲಾಗಿದ್ದು, ಇದನ್ನು ಸಾಧಿಸಲು ಆಂದೋಲನದ ಮಾದರಿಯಲ್ಲಿ ಕೆಲಸ ಮಾಡಲಾಗುತ್ತಿದೆ. ಈ ಯೋಜನೆಯಡಿ ಈಗಾಗಲೇ 80-85-90 ಲಕ್ಷ ಮನೆಗಳಿಗೆ ವಿದ್ಯುತ್ ಸಂಪರ್ಕವನ್ನು ಕೊಡಲಾಗಿದೆ. ಅದರಲ್ಲೂ ಬಡಕುಟುಂಬಗಳಿಗೆ ಇದನ್ನು ನೂರಕ್ಕೆ ನೂರರಷ್ಟು ಉಚಿತವಾಗಿ ಒದಗಿಸಲಾಗಿದ್ದು, ಸ್ವಲ್ಪ ಸುಸ್ಥಿತಿಯಲ್ಲಿರುವ ಕುಟುಂಬಗಳಿಂದಲೂ ಕೇವಲ 500 ರೂ. ಶುಲ್ಕವನ್ನಷ್ಟೆ ತೆಗೆದುಕೊಳ್ಳಲಾಗುತ್ತಿದೆ. ಅಂದಹಾಗೆ, ಈ 500 ರೂ. ಶುಲ್ಕವನ್ನು ಕೂಡ ನಾವು ವಿದ್ಯುತ್ ಬಿಲ್ನ ಜತೆಯಲ್ಲೇ 10 ಸುಲಭ ಕಂತುಗಳಲ್ಲಿ ಪಾವತಿಸುವ ಅವಕಾಶವನ್ನು ನೀಡುತ್ತಿದ್ದೇವೆ. ದೇಶದ ಪ್ರತಿಯೊಂದು ಮನೆಗೂ ನಿಗದಿತ ಕಾಲಮಿತಿಯಲ್ಲೇ ವಿದ್ಯುತ್ ಸಂಪರ್ಕವನ್ನು ಒದಗಿಸಬೇಕೆಂಬ ಈ ಗುರಿಯನ್ನು ಸಾಧಿಸಲು ಆಧುನಿಕ ತಂತ್ರಜ್ಞಾನವನ್ನು ಕೂಡ ಉಪಯೋಗಿಸಿಕೊಳ್ಳಲಾಗುತ್ತಿದೆ. ಇದರ ಜತೆಗೆ, ಅತ್ಯಂತ ಕಡಿಮೆ ಅವಧಿಯಲ್ಲಿ ವಿದ್ಯುತ್ತನ್ನು ಒದಗಿಸಬೇಕೆಂಬ ದೃಷ್ಟಿಯಿಂದ ಹಳ್ಳಿಗಳಲ್ಲಿ ಶಿಬಿರಗಳನ್ನು ಕೂಡ ಆಯೋಜಿಸಲಾಗುತ್ತಿದ್ದು, ಅಲ್ಲೇ ಎಲ್ಲ ವಿಧಿವಿಧಾನಗಳನ್ನೂ ಪೂರೈಸಿ, ವಿದ್ಯುತ್ ಸಂಪರ್ಕಕ್ಕೆ ಅಗತ್ಯವಾದ ಎಲ್ಲ ಅನುಮತಿಗಳನ್ನೂ ಪಡೆಯಲಾಗುತ್ತಿದೆ. ಇನ್ನೊಂದೆಡೆಯಲ್ಲಿ, ದೂರದ/ದುರ್ಗಮ ಪ್ರದೇಶಗಳಲ್ಲಿ ನೆಲೆಸಿರುವ ಕುಟುಂಬಗಳಿಗೆ ಸೌರವಿದ್ಯುತ್ತನ್ನು ಒದಗಿಸಲು ಕೂಡ ನಾವು ಅವಕಾಶ ಮಾಡಿಕೊಡುತ್ತಿದ್ದೇವೆ. ವಿದ್ಯುತ್ತು ಜನರಿಗೆ ಕೇವಲ ಬೆಳಕನ್ನಷ್ಟೇ ನೀಡುವುದಿಲ್ಲ; ಬದಲಿಗೆ, ಅದು ವಿಶ್ವಾಸವನ್ನೂ ನೀಡುತ್ತದೆ ಎಂದು ನಾನು ನಂಬಿದ್ದೇನೆ. ವಿದ್ಯುತ್ ಶಕ್ತಿಯು ಇನ್ನೊಂದು ವಿಧದಲ್ಲಿ ಬಡತನದ ವಿರುದ್ಧದ ಹೋರಾಟದಲ್ಲಿ ಕೂಡ ಒಂದು ಪ್ರಮುಖ ಅಸ್ತ್ರವಾಗಿದೆ. ಹಳ್ಳಿಗಳಿಗೆ ನಾವು ಒದಗಿಸುತ್ತಿರುವ ವಿದ್ಯುತ್ ಕೇವಲ ಅಲ್ಲಿನ ಅಂಧಕಾರವನ್ನಷ್ಟೇ ಹೋಗಲಾಡಿಸುವುದಿಲ್ಲ. ಅದರ ಜತೆಗೆ ಇದು ಹಳ್ಳಿಗಾಡಿನ ಜನತೆಯಲ್ಲಿ ಪ್ರಗತಿಯ ಬೆಳಕನ್ನೂ ತುಂಬುತ್ತಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ವಿದ್ಯುತ್ ಸಂಪರ್ಕ ಬಂದಮೇಲೆ ನಿಮ್ಮೆಲ್ಲರಿಗೂ ಆಗುತ್ತಿರುವ ಅನುಭವಗಳೇ ಇದಕ್ಕೆ ಸಾಕ್ಷಿಯಾಗಿವೆ. ಇದನ್ನೆಲ್ಲ ನೀವು ಇಂದು ನಮ್ಮೊಂದಿಗೆ ಹಂಚಿಕೊಂಡಿದ್ದೀರಿ. ನಿಮ್ಮ ಈ ಮಾತುಗಳನ್ನೆಲ್ಲ ಇಡೀ ದೇಶವೇ ಕೇಳಿಸಿಕೊಂಡಿದೆ. ಇಂತಹ ಇನ್ನೂ ನೂರಾರು ಹಳ್ಳಿಗಳು ನಮ್ಮ ಮುಂದಿವೆ. ಆದರೆ, ಆ ಎಲ್ಲ ಹಳ್ಳಿಗಳ ಜನರೊಂದಿಗೂ ಮಾತನಾಡುವುದು ಸಮಯಾಭಾವದಿಂದಾಗಿ ನನಗೆ ಸಾಧ್ಯವಾಗುತ್ತಿಲ್ಲ. ಏಕೆಂದರೆ, ಈಗ ಸಂಸತ್ ಅಧಿವೇಶನ ನಡೆಯುತ್ತಿದ್ದು ನಾನು ಅಲ್ಲಿ ಇರಬೇಕಾಗಿದೆ. ಅದೇನೇ ಇರಲಿ, ಖಂಡಿತವಾಗಿಯೂ ನಾನು ಈ ಪೈಕಿ ಕೆಲವಾದರೂ ಹಳ್ಳಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಲು ಬಯಸುತ್ತೇನೆ. ಬಸ್ತಾರ್, ಅಲಿರಾಜ್ಪುರ, ಸಿಹೋರ್, ನವಪಾದ, ಸೀತಾಪುರ ಮುಂತಾದವು ಈ ಪಟ್ಟಿಯಲ್ಲಿವೆ. ನಮ್ಮ ರಾಜಕೀಯ ವಿರೋಧಿಗಳು ನಮ್ಮ ದೇಶದ ವೈರಿಗಳನ್ನೇ ಹಾಡಿ ಹೊಗಳುತ್ತಿರುವುದನ್ನು ನೀವೂ ಕೇಳಿರಬಹುದು. ಇವರೆಲ್ಲರೂ ದೇಶದ ಅದೆಷ್ಟೋ ಮನೆಗಳಿಗೆ ವಿದ್ಯುತ್ ಸಂಪರ್ಕವೇ ಇಲ್ಲ ಎಂದು ಹೇಳುತ್ತಾರೆ. ಇದು ನಮ್ಮನ್ನು ಕುರಿತ ಟೀಕೆಯಾಗಲಿ, ನಮ್ಮ ಸರಕಾರವನ್ನು ಕುರಿತ ವಿಮರ್ಶೆಯಾಗಲಿ ಅಲ್ಲವೆನ್ನುವುದನ್ನು ನೀವು ದಯವಿಟ್ಟು ಗಮನಿಸಬೇಕು. ಇದು ನಿಜಕ್ಕೂ ಕಳೆದ 70 ವರ್ಷಗಳ ಕಾಲ ಆಳ್ವಿಕೆ ನಡೆಸಿದವರ್ನು ಕುರಿತ ಟೀಕೆಯಾಗಿದೆ. ಇದು ಖಂಡಿತವಾಗಿಯೂ ನಮ್ಮನ್ನು ಉದ್ದೇಶಿಸಿದ ಟೀಕೆಯಲ್ಲ. ಈ ದೇಶದಲ್ಲಿ ಅಗಾಧ ಸ್ವರೂಪದ ಕೆಲಸವನ್ನು ಹಾಗೆಯೇ ನನೆಗುದಿಗೆ ಹಾಕಿಹೋದವರನ್ನು ಕುರಿತ ವಿಮರ್ಶೆಯೇ ಆಗಿದೆ. ಅವರೆಲ್ಲ ಹೀಗೆ ಬಿಟ್ಟುಹೋದ ಕೆಲಸಗಳನ್ನು ಮುಗಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. 

 

ದೇಶದ ನಾಲ್ಕು ಕೋಟಿ ಮನೆಗಳಲ್ಲಿ ವಿದ್ಯುತ್ ಇಲ್ಲವೆಂದರೆ, ನಾವು ಅಧಿಕಾರಕ್ಕೆ ಬರುವ ಮುಂಚೆ ಈ ಮನೆಗಳಲ್ಲೆಲ್ಲ ವಿದ್ಯುತ್ ಸಂಪರ್ಕವಿತ್ತು ಎಂದಾಗಲಿ, ಮೋದಿ ಸರಕಾರ ಅಧಿಕಾರಕ್ಕೆ ಬಂದಮೇಲೆ ಈ ಮನೆಗಳಿಗೆಲ್ಲ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದೆ ಎಂದಾಗಲಿ, ಈ ಮೋದಿಯೇ ಇಷ್ಟೂ ಹಳ್ಳಿಗಳಲ್ಲಿದ್ದ ವಿದ್ಯುತ್ ಕಂಬಗಳನ್ನೆಲ್ಲ ಹೊತ್ತೊಯ್ದಿದ್ದಾರೆ ಎಂದಾಗಲಿ ಅರ್ಥವಲ್ಲ. ನಾವು ಅಧಿಕಾರಕ್ಕೆ ಬರುವ ಮೊದಲು ಈ 18 ಸಾವಿರ ಹಳ್ಳಿಗಳಲ್ಲಿ ಏನೇನೂ ಇರಲಿಲ್ಲ. ಇದನ್ನು ಗಮನಿಸಿದ ನಾವು, ವಿದ್ಯುತ್ ಸೌಲಭ್ಯವನ್ನು ಕೊಡಲು ಪ್ರಯತ್ನಿಸತೊಡಗಿದೆವು. ಹೀಗಾಗಿಯೇ, ನಮ್ಮ ವಿರೋಧಿಗಳು ನಮ್ಮ ಮೇಲೆ ಉತ್ಸಾಹದಿಂದ ಮುಗಿಬೀಳುತ್ತಿದ್ದಾರೆ. ನಮ್ಮ ಸರಕಾರ ಅಧಿಕಾರಕ್ಕೂ ಬರುವ ಮೊದಲು ಯಾರೊಬ್ಬರೂ ಈ ಹಳ್ಳಿಗಳಲ್ಲಿ ಒಂದೇಒಂದು ವಿದ್ಯುತ್ ಕಂಬವನ್ನೂ ನೆಟ್ಟಿರಲಿಲ್ಲ. ಆದರೆ, ನಾವು ಈ ಕೆಲಸವನ್ನು ಮಾಡುತ್ತಿದ್ದೇವೆ. ನಿಮ್ಮ ಬೆಂಬಲ ಮತ್ತು ಸಹಕಾರ ನಮಗೆ ಹೀಗೆಯೇ ಮುಂದುವರಿದರೆ ಇನ್ನೂ ಮಹತ್ತರವಾದುದನ್ನು ಸಾಧಿಸಬಹುದು. ಹಾಗೆಯೇ, ನಾವು ನಿಗದಿಪಡಿಸಿಕೊಳ್ಳುವ ಗುರಿಗಳನ್ನು ಸಾಕಾರಗೊಳಿಸಲು ದಣಿವರಿಯದೆ ಕೆಲಸ ಮಾಡುತ್ತಿರುವ ಕೆಳಹಂತದ ಸಿಬ್ಬಂದಿಯನ್ನು ನಾವು ಬೆನ್ನು ತಟ್ಟಬೇಕು. ನೀವು ಈ ಮೋದಿಯನ್ನು ಎಷ್ಟು ಬೇಕಾದರೂ ದೂಷಿಸಿ. ಅದಕ್ಕೆ ನನ್ನ ಅಭ್ಯಂತರವೇನೂ ಇಲ್ಲ. ಆದರೆ, ಕಷ್ಟಪಟ್ಟು ಕೆಲಸ ಮಾಡುವ ಕೆಳಹಂತದ ಕೆಲಸಗಾರರನ್ನು, ಕಗ್ಗತ್ತಲಿನಲ್ಲಿದ್ದ ಹಳ್ಳಿಗಳಲ್ಲಿ ವಿದ್ಯುತ್ ಬೆಳಕು ಹರಿಯುವಂತೆ ಮಾಡಿದ ಈ ಜನರನ್ನು ನಾವೆಲ್ಲರೂ ಗೌರವಿಸಬೇಕು. ಇಂಥವರನ್ನು ನಾವು ಪ್ರಶಂಸಿಸಬೇಕು. ಹೀಗಾಗಿದ್ದೇ ಆದಲ್ಲಿ ದೇಶದಲ್ಲಿ ಯಾವುದೇ ಸಮಸ್ಯೆ ಎದುರಾದರೂ ಅವನ್ನೆಲ್ಲ ಕುಟುಂಬ ಮತ್ತು ಸಮಾಜಗಳ ಮಟ್ಟದಲ್ಲಿ ಪರಿಹರಿಸಿ, ಅವುಗಳನ್ನೆಲ್ಲ ಈ ದೇಶದಿಂದ ಓಡಿಸಬಹುದು. ಕೇವಲ ಸಮಸ್ಯೆಗಳನ್ನು ಎಣಿಸುವುದು ಮಾತ್ರ ನಮ್ಮ ಕಸುಬಲ್ಲ. ಬದಲಿಗೆ, ಹೀಗೆ ದೇಶದ ಒಳಿತಿಗಾಗಿ ದುಡಿಯುವುದು ನಮ್ಮೆಲ್ಲರ ಕೆಲಸವಾಗಿದೆ. ದೇಶವು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಹಿಡಿಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ.

 

ದಯಾಮಯನಾದ ಭಗವಂತನು ನಮ್ಮೆಲ್ಲರಿಗೂ ಅಗತ್ಯವಾಗಿರುವ ಶಕ್ತಿಯನ್ನು ದಯಪಾಲಿಸುತ್ತಾನೆ ಎನ್ನುವ ವಿಶ್ವಾಸ ನನಗಿದೆ. ನಮ್ಮ ಉದ್ದೇಶ ಸ್ಪಷ್ಟವಾಗಿದೆ. ನಿಮ್ಮೆಲ್ಲರ ಬಗ್ಗೆ ನಮ್ಮ ಹೃದಯದಲ್ಲಿ ಅಪಾರವಾದ ಪ್ರೀತಿ ಇದೆ. ಹೀಗಾಗಿ, ನಾವು ನಿಮಗೋಸ್ಕರ ಎಷ್ಟು ಮಾಡಿದರೂ ಅದು ಕಡಿಮೆಯೇ. ನಿಮ್ಮ ಸೇವೆಯನ್ನು, ನಿಮಗಾಗಿ ಕೆಲಸ ಮಾಡುವುದನ್ನು ನಾವು ನಿಲ್ಲಿಸುವುದಿಲ್ಲ. ಈ ಕಾರ್ಯಕ್ರಮದ ಕೊನೆಯಲ್ಲಿ ನಾನು ನಿಮಗೊಂದು ವಿಡಿಯೋ ತುಣುಕನ್ನು ತೋರಿಸಲಿದ್ದೇನೆ. ಅದನ್ನು ನಾವೆಲ್ಲರೂ ವೀಕ್ಷಿಸೋಣ. ಅದಾದ ನಂತರ ನಾನು ನನ್ನ ಮಾತುಗಳನ್ನು ಮುಗಿಸಲಿದ್ದೇನೆ.