Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಲೋಕಸಭೆಯಲ್ಲಿ ರಾಷ್ಟ್ರಪತಿಯವರ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಪ್ರಧಾನಮಂತ್ರಿಯವರ ಉತ್ತರ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಲೋಕಸಭೆಯಲ್ಲಿ ರಾಷ್ಟ್ರಪತಿಯವರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಗೆ ಉತ್ತರ ನೀಡಿದರು. ಚರ್ಚೆಗೆ ಹುರುಪು ತುಂಬಿ, ಒಳನೋಟವುಳ್ಳ ಅಂಶಗಳನ್ನು ಹಂಚಿಕೊಂಡಿದ್ದಕ್ಕಾಗಿ ವಿವಿಧ ಸದಸ್ಯರುಗಳಿಗೆ ಅವರು ಧನ್ಯವಾದ ಅರ್ಪಿಸಿದರು.

ಆರಂಭಿಕ ಹೇಳಿಕೆಯಲ್ಲಿ ಅವರು ತಮ್ಮ ಸರ್ಕಾರದ ಧ್ವನಿಯನ್ನು ಹೀಗೆ ಹೇಳಿದರು- “ಭಾರತದ ಜನರಿಗಾಗಿ ಕೆಲಸ ಮಾಡುವ, ಜನರ ಆಶಯಗಳಿಗೆ ಸ್ಪಂದಿಸುವ, ಪ್ರಾಮಾಣಿಕ, ಪಾರದರ್ಶಕ, ಭ್ರಷ್ಟಾಚಾರದ ವಿರುದ್ಧ ಮತ್ತು ವೇಗದ ಅಭಿವೃದ್ಧಿಯ ಸರ್ಕಾರ”.

ಕಳೆದ ನಾಲ್ಕು ವರ್ಷಗಳಲ್ಲಿ ಭಾರತ ಗಣನೀಯ ಪ್ರಗತಿ ಸಾಧಿಸಿದೆ ಎಂದು ಪ್ರಧಾನಮಂತ್ರಿಯವರು ತಿಳಿಸಿದರು. ವಿದೇಶೀ ನೇರ ಬಂಡವಾಳ ಹೂಡಿಕೆಯಿಂದ ಉಕ್ಕು ವಲಯದವರೆಗೆ, ನವೋದ್ಯಮ, ಹಾಲು, ಕೃಷಿ, ವಿಮಾನಯಾನದವರೆಗೆ ಭಾರತದ ಪ್ರಗತಿ ಅತ್ಯುತ್ತಮವಾಗಿದೆ. “ನಾವು ವಿಶ್ವದ ಎರಡನೇ ಅತಿ ದೊಡ್ಡ ಉಕ್ಕು ಉತ್ಪಾದಕರಾಗಿದ್ದೇವೆ, ಎರಡನೇ ಅತಿದೊಡ್ಡ ಮೊಬೈಲ್ ಪೋನ್ ಉತ್ಪಾದಕರಾಗಿದ್ದೇವೆ, 4ನೇ ಅತಿದೊಡ್ಡ ವಾಹನ ತಯಾರಕರಾಗಿದ್ದೇವೆ. ನಾವು ಕೃಷಿ ಉತ್ಪಾದನೆಯಲ್ಲಿ ಬಂಪರ್ ಬೆಳೆ ತೆಗೆಯುವ ರಾಷ್ಟ್ರವಾಗದ್ದೇವೆ.” ಎಂದೂ ಹೇಳಿದರು.

ತಮ್ಮ ಸರ್ಕಾರದ ಮುಖ್ಯಾಂಶಗಳನ್ನು ಉಲ್ಲೇಖಿಸಿದ ಅವರು, ತಮ್ಮ ಸರ್ಕಾರ ಕಳೆದ 55 ತಿಂಗಳುಗಳಲ್ಲಿ ಏನೆಲ್ಲಾ ಸಾಧಿಸಿದೆ ಎಂಬುದನ್ನು ಸುಲಭವಾಗಿಯೇ ಕಾಣಬಹುದು – “ನೈರ್ಮಲ್ಯದ ವ್ಯಾಪ್ತಿ ಶೇ.98ರಷ್ಟಾಗಿದ್ದು, 10 ಕೋಟಿ ಶೌಚಗೃಹಗಳನ್ನು ನಮ್ಮ ಜನರಿಗಾಗಿ ನಿರ್ಮಿಸಲಾಗಿದೆ. 55 ವರ್ಷಗಳಲ್ಲಿ 12 ಕೋಟಿ ಅಡುಗೆ ಅನಿಲ ಸಂಪರ್ಕ ಒದಗಿಸಲಾಗಿತ್ತು. ಆದರೆ ಕಳೆದ 55 ತಿಂಗಳುಗಳಲ್ಲಿ, 13 ಕೋಟಿ ಅಡುಗೆ ಅನಿಲ ಸಂಪರ್ಕ ಕಲ್ಪಿಸಲಾಗಿದ್ದು, ಇದರಲ್ಲಿ 6 ಕೋಟಿ ಉಜ್ವಲಾ ಯೋಜನೆಯಡಿ ನೀಡಲಾಗಿದೆ ಎಂದರು. ಕಾಮಗಾರಿಯ ವೇಗ ಮತ್ತು ಯಾರಿಗಾಗಿ ಕಾರ್ಯ ಮಾಡಲಾಗಿದೆ ಎಂಬುದನ್ನು ಸ್ವತಃ ನೀವೆ ನಿರ್ಧರಿಸಿ.” ಎಂದು ಹೇಳಿದರು.

ಪ್ರತಿಪಕ್ಷಗಳ ಕುರಿತು ಮಾತನಾಡಿದ ಪ್ರಧಾನಮಂತ್ರಿಯವರು, ಸಂಪೂರ್ಣ ಬಹುಮತ ಇರುವ ಸರ್ಕಾರ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಜನ ನೋಡಿದ್ದಾರೆ. ಈ ನಿಟ್ಟಿನಲ್ಲಿ ತಮ್ಮ ಸರ್ಕಾರದ ಕಾರ್ಯವನ್ನೂ ಅವರು ನೋಡಿದ್ದಾರೆ ಎಂದರು. ಜನರಿಗೆ ಮಹಾ ಮಿಲಾವಟ್ (ಮಹಾ ಕಲಬೆರಕೆ) ಸರ್ಕಾರ ಬೇಕಿಲ್ಲ ಮತ್ತು ಅದು ಯಶಸ್ವಿಯಾಗುವುದೂ ಇಲ್ಲ ಎಂದರು.

ತಮ್ಮನ್ನು ಟೀಕಿಸಲು ಪ್ರತಿಯೊಬ್ಬರೂ ಮುಕ್ತರಾಗಿದ್ದಾರೆ, ಆದರೆ ಹಾಗೆ ಮಾಡುವಾಗ ಅವರು ದೇಶವನ್ನು ಟೀಕಿಸಬಾರದು ಎಂದರು.

ಭ್ರಷ್ಟಾಚಾರದ ಕುರಿತು ಮಾತನಾಡಿದ ಪ್ರಧಾನಮಂತ್ರಿಯವರು, ತಮ್ಮ ಸರ್ಕಾರ ಭ್ರಷ್ಟರನ್ನು ಶಿಕ್ಷಿಸಲು ಅವಿಶ್ರಾಂತವಾಗಿ ಶ್ರಮಿಸುತ್ತಿದೆ ಎಂದರು.

ಬೇನಾಮಿ ಕಾಯಿದೆಯ ಕುರಿತಂತೆ ಮಾತನಾಡಿದ ಅವರು, ತಮ್ಮ ಸರ್ಕಾರ ಬೇನಾಮಿ ಆಸ್ತಿ ಕಾಯಿದೆ ತಂದಿದ್ದು, ಈಗ ಜನರು ಬೇನಾಮಿ ಆಸ್ತಿ ಹೊಂದಿದ್ದರೆ ಸಿಕ್ಕಿಬೀಳುತ್ತಾರೆ ಎಂದರು.

ರಫೇಲ್ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ರಕ್ಷಣಾ ಸಚಿವರು ಎಲ್ಲ ಆರೋಪಗಳಿಗೆ ವಿವರವಾಗಿ ಉತ್ತರ ನೀಡಿದ್ದಾರೆ, ಯಾವುದೇ ರಕ್ಷಣಾ ವಹಿವಾಟು ಲಂಚವಿಲ್ಲದೆ ನಡೆಯುವುದಿಲ್ಲ ಎಂದು ತಿಳಿದವರು ಮಾತ್ರವೇ ವಿವಾದ ಸೃಷ್ಟಿಸುತ್ತಿದ್ದಾರೆ ಎಂದರು.

ಎನ್.ಪಿ.ಎ. ಕುರಿತಂತೆ ಮಾತನಾಡಿದ ಪ್ರಧಾನಮಂತ್ರಿಯವರು, ಹಿಂದಿನ ಸರ್ಕಾರಗಳು ಪರಂಪರೆಯನ್ನು ಬಿಟ್ಟು ಹೋಗಿದ್ದವು, ಯಾರು ದೇಶದಿಂದ ಪಲಾಯನ ಮಾಡಿದ್ದರೋ ಅವರು ಈಗ ಟ್ವಿಟರ್ ನಲ್ಲಿ ಅಳುತ್ತಿದ್ದಾರೆ. “ನಾನು 7,800 ಕೋಟಿ ರೂ.ಗಳನ್ನು ತೆಗೆದುಕೊಂಡಿದ್ದೆ, ಆದರೆ ಸರಕಾರ ನನ್ನ 13,000 ಕೋಟಿ ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ” ಎನ್ನುತ್ತಿವೆ ಎಂದು ಅವರು ಹೇಳಿದರು.

ಸರ್ಕಾರ ಅವರ ಹಣಕಾಸಿನ ಹರಿವಿನ ಕುರಿತಂತೆ ವಿವರ ಕೇಳಿದ ಮೇಲೆ ಸುಮಾರು 20 ಸಾವಿರ ಎನ್.ಜಿ.ಓ.ಗಳು ತಮ್ಮ ವಹಿವಾಟು ನಿಲ್ಲಿಸಿವೆ ಮತ್ತು ಆ ಸಂಖ್ಯೆ ಭವಿಷ್ಯದಲ್ಲಿ ಇನ್ನೂ ಹೆಚ್ಚಲಿದೆ ಎಂದರು.

ಎಲ್ಲರೂ ಸುಗಮವಾಗಿ ಬದುಕಬೇಕು ಎಂದು ಎನ್.ಡಿ.ಎ. ಸರ್ಕಾರ ಹೇಗೆ ಕಷ್ಟಪಟ್ಟು ಕೆಲಸ ಮಾಡುತ್ತಿದೆ ಎಂಬುದನ್ನು ವಿವರಿಸಿದ ಪ್ರಧಾನಮಂತ್ರಿ, ಹಿಂದಿನ ಸರ್ಕಾರಗಳಿಗೆ ಹೋಲಿಸಿದರೆ ಬೆಲೆ ಏರಿಕೆಯನ್ನು ತಡೆಯಲಾಗಿದೆ ಎಂದರು.

ಆರೋಗ್ಯಪೂರ್ಣ ಭಾರತದ ಬಗ್ಗೆ ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಿದ ಪ್ರಧಾನಮಂತ್ರಿಯವರು, ಔಷಧಗಳ, ವೈದ್ಯಕೀಯ ಮತ್ತು ಶಸ್ತ್ರಕ್ರಿಯೆಯ ಉಪಕರಣಗಳ ದರವನ್ನು ಇಳಿಸಲಾಗಿದೆ ಎಂದರು.

ಉದ್ಯೋಗ ರಂಗದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಗರಿಷ್ಠ ಸಂಖ್ಯೆಯ ಉದ್ಯೋಗ ಸಾರಿಗೆ ವಲಯದಲ್ಲಿ ಬೆಳೆದಿದೆ. ಕಳೆದ ನಾಲ್ಕು ವರ್ಷಗಳಲ್ಲಿ 6 ಲಕ್ಷಕ್ಕೂ ಹೆಚ್ಚು ವೃತ್ತಿಪರರು ಕಾರ್ಯಪಡೆಯನ್ನು ಸೇರಿದ್ದಾರೆ ಮತ್ತು ಅವರು ಜನರಿಗಾಗಿ ಹೆಚ್ಚಿನ ಸಂಖ್ಯೆಯ ಉದ್ಯೋಗಗಳನ್ನು ಸೇರಿಸಿದ್ದಾರೆ ಎಂದರು. 2017ರ ಸೆಪ್ಟೆಂಬರ್ ನಿಂದ 2018ರ ನವೆಂಬರ್ ಒಳಗೆ ಕೇವಲ 15 ತಿಂಗಳುಗಳ ಅವಧಿಯಲ್ಲಿ, 1.80 ಕೋಟಿ ಜನರು ಹೇಗೆ ನೌಕರರ ಭವಿಷ್ಯ ನಿಧಿಯಲ್ಲಿ ನೋಂದಾಯಿತರಾಗಿದ್ದಾರೆ ಎಂಬುದನ್ನು ತಿಳಿಸಿದರು. ಇವರಲ್ಲಿ ಶೇ.64ರಷ್ಟು ಮಂದಿ 28 ವರ್ಷದೊಳಗಿನವರು ಎಂದು ತಿಳಿಸಿದರು. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಅಥವಾ ಎನ್.ಪಿ.ಎಸ್. ಅಡಿಯಲ್ಲಿ 1.20 ಕೋಟಿ ಜನರು ನೋಂದಾಯಿಸಿಕೊಂಡಿದ್ದಾರೆ ಎಂದು ಅವರು ಲೋಕಸಭೆಗೆ ತಿಳಿಸಿದರು.

ಭಾರತದ ವಿದೇಶಾಂಗ ನೀತಿಯು ಜಾಗತಿಕ ವೇದಿಕೆಯಲ್ಲಿ ಭಾರತವನ್ನು ಮುಂಚೂಣಿಗೆ ತಂದಿದೆ ಎಂದ ಪ್ರಧಾನಮಂತ್ರಿಯವರು, ಭಾರತ ಏನು ಹೇಳುತ್ತದೆ ಎಂದ ಜನ ಈಗ ಕೇಳುತ್ತಾರೆ ಎಂದರು. ಪ್ಯಾರೀಸ್ ಒಪ್ಪಂದ ಆಖೈರಾಗುವ ಮುನ್ನ, ವಿಶ್ವದ ಉನ್ನತ ನಾಯಕರು, ಭಾರತದೊಂದಿಗೆ ಈ ಕುರಿತು ಮಾತನಾಡುತ್ತಿದ್ದರು ಎಂದು ತಿಳಿಸಿದರು. ಭಾರತವು ಇಸ್ರೇಲ್ ಮತ್ತು ಪ್ಯಾಲಿಸ್ತೀನ್ ಎರಡೂ ರಾಷ್ಟ್ರದೊಂದಿಗೆ ಸ್ನೇಹವನ್ನು ಹೊಂದುತ್ತದೆ ಅದೇ ರೀತಿ ಸೌದಿ ಅರೇಬಿಯಾ ಮತ್ತು ಇರಾನ್ ನೊಂದಿಗೂ ಬಾಂಧವ್ಯ ಹೊಂದುತ್ತದೆ ಎಂದು ಸ್ಪಷ್ಟಪಡಿಸಿದರು.

ಭಾರತದ ಪ್ರಗತಿಯನ್ನು ಬರೆಯುವಲ್ಲಿ ಮುಂದಿನ ಪೀಳಿಗೆಯ ಪಾತ್ರವನ್ನು ಪ್ರಶಂಸಿಸಿದ ಪ್ರಧಾನಮಂತ್ರಿಯವರು, “21ನೇ ಶತಮಾನದಲ್ಲಿ ಜನಿಸಿದವರು, ಈಗ ಮತದಾರರಾಗುತ್ತಿದ್ದು, ಅವರು ಭಾರತದ ಪ್ರಗತಿಯನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಾರೆ” ಎಂದರು.

ತಮ್ಮ ಸರ್ಕಾರ ಸದಾ ಭಾರತದ ಜನರ ಆಶೋತ್ತರಗಳನ್ನು ಈಡೇರಿಸುತ್ತದೆ ಎಂದು ಹೇಳಿದ ಪ್ರಧಾನಮಂತ್ರಿಯವರು ತಮ್ಮ ಮಾತು ಮುಗಿಸಿದರು.