Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

‘ಮನದ ಮಾತು’ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ದಿನಾಂಕ 24-02-2019 ರಂದು ಮಾಡಿದ ‘ಮನ್ ಕಿ ಬಾತ್’ – 53 ನೇ ಭಾಷಣದ ಕನ್ನಡ ಅವತರಣಿಕೆ


ನನ್ನ ಪ್ರಿಯ ದೇಶವಾಸಿಗಳೇ ನಮಸ್ಕಾರ. ಮನದ ಮಾತು ಆರಂಭಿಸುವಾಗ ಇಂದು ಮನಸ್ಸು ಭಾರವಾಗಿದೆ. ಹತ್ತು ದಿನಗಳ ಹಿಂದೆ ಭಾರತ ಮಾತೆ ತನ್ನ ವೀರ ಸುಪುತ್ರರನ್ನು ಕಳೆದುಕೊಂಡಳು. ಈ ಪರಾಕ್ರಮಿಗಳು 125 ಕೋಟಿ ಭಾರತೀಯರ ರಕ್ಷಣೆ ಮಾಡುತ್ತಾ ತಾವೇ ಬಲಿಯಾದರು. ದೇಶ ಬಾಂಧವರು ನಿಶ್ಚಿಂತೆಯಿಂದ ನಿದ್ರಿಸಲಿ ಎಂದು ಈ ನಮ್ಮ ವೀರ ಪುತ್ರರು ಹಗಲು ರಾತ್ರಿ ಎನ್ನದೆ ಶ್ರಮಿಸುತ್ತಿದ್ದರು. ಪುಲ್ವಾಮಾದ ಭಯೋತ್ಪಾದನಾ ದಾಳಿಯಲ್ಲಿ ವೀರ ಯೋಧರ ಬಲಿದಾನದ ನಂತರ ದೇಶದಾದ್ಯಂತ ಜನರಲ್ಲಿ, ಅವರ ಮನಸ್ಸಿನಲ್ಲಿ ಆಘಾತ ಮತ್ತು ಆಕ್ರೋಶವಿದೆ. ಹುತಾತ್ಮರು ಮತ್ತು ಅವರ ಕುಟುಂಬಗಳಿಗೆ ಎಲ್ಲೆಡೆಯಿಂದ ಸಂತಾಪ ಹೊಳೆಯೇ ಹರಿದು ಬಂತು. ಈ ಉಗ್ರರ ಹಿಂಸೆಯನ್ನು ವಿರೋಧಿಸಿ ನಿಮ್ಮ ಮತ್ತು ನನ್ನ ಮನದಲ್ಲಿರುವ ಆವೇಗದ ಭಾವನೆಯೇ ಪ್ರತಿಯೊಬ್ಬ ನಾಗರಿಕನ ಮನಸ್ಸಿನೊಳಗೂ ಇದೆ ಮತ್ತು ಮಾನವೀಯತೆಯನ್ನು ನಂಬುವಂಥ ವಿಶ್ವದ ಮಾನವತಾವಾದಿಗಳ ಸಮುದಾಯದಲ್ಲೂ ಇದೆ. ಭಾರತ ಮಾತೆಯ ರಕ್ಷೆಯಲ್ಲಿ ತಮ್ಮ ಪ್ರಾಣವನ್ನೇ ಸಮರ್ಪಿಸಿದ ದೇಶದ ಎಲ್ಲ ವೀರ ಸುಪುತ್ರರಿಗೆ ನಾನು ನಮಿಸುತ್ತೇನೆ. ಈ ಬಲಿದಾನ ಭಯೋತ್ಪಾದನೆಯನ್ನು ಮೂಲದಿಂದಲೇ ನಾಶ ಮಾಡಲು ನಮ್ಮನ್ನು ನಿರಂತರವಾಗಿ ಪ್ರೇರೆಪಿಸುತ್ತಿದೆ. ನಮ್ಮ ಸಂಕಲ್ಪವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ. ಭಯೋತ್ಪಾದನೆ ವಿರುದ್ಧ ನಮ್ಮ ಹೆಜ್ಜೆ ಹಿಂದಿಗಿಂತ ಹೆಚ್ಚು ಧೃಡವಾಗಿರಲಿ, ಸಶಕ್ತವಾಗಿರಲಿ, ಮತ್ತು ನಿರ್ಣಾಯಕವಾಗಿರಲಿ ಎಂಬುದಕ್ಕಾಗಿ ನಾವೆಲ್ಲ ಒಂದಾಗಿ ಜಾತೀವಾದ, ಸಂಪ್ರದಾಯವಾದ, ಕ್ಷೇತ್ರವಾದ ಮತ್ತು ಮಿಕ್ಕ ಎಲ್ಲ ಭೇದ ಭಾವವನ್ನು ಮರೆತು ದೇಶದ ಮುಂದಿರುವ ಈ ಸವಾಲನ್ನು ಎದುರಿಸಬೇಕು. ನಮ್ಮ ದೇಶದ ಸೇನಾಪಡೆಗಳು ಯಾವತ್ತೂ ಅದ್ವಿತೀಯ ಸಾಹಸ ಮತ್ತು ಪರಾಕ್ರಮವನ್ನು ತೋರುತ್ತಲೇ ಬಂದಿವೆ. ಶಾಂತಿ ನೆಲೆಸುವಂತೆ ಮಾಡಲು ಎಲ್ಲಿ ಅವರು ಅದ್ಭುತವಾದ ಸಾಮಥ್ರ್ಯ ತೋರಿದ್ದಾರೋ ಅಲ್ಲಿಯೇ ದಾಳಿಕೋರರಿಗೆ ಅವರದೇ ಭಾಷೆಯಲ್ಲಿ ಪ್ರತ್ಯುತ್ತರ ನೀಡುವ ಕೆಲಸವನ್ನೂ ಮಾಡಿದ್ದಾರೆ. 
 
ಘಟನೆ ನಡೆದ 100 ಗಂಟೆಗಳ ಒಳಗೆ ಎಂಥ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದನ್ನು ನೀವು ನೋಡಿರಬಹುದು. ಸೇನೆ, ಭಯೋತ್ಪಾದಕರು ಮತ್ತು ಅವರ ಬೆಂಬಲಿಗರ ಸಂಪೂರ್ಣ ನಾಶ ಮಾಡುವ ಸಂಕಲ್ಪಗೈದಿದೆ. ವೀರ ಸೈನಿಕರ ಬಲಿದಾನದ ನಂತರ ಮಾಧ್ಯಮದ ಮೂಲಕ ಅವರ ಪರಿವಾರಗಳಿಂದ ಬಂದಂತಹ ಪ್ರೇರಣಾದಾಯಕ ಮಾತುಗಳು ಸಂಪೂರ್ಣ ದೇಶಕ್ಕೆ ಧೈರ್ಯ ತುಂಬುವ ಕೆಲಸ ಮಾಡಿವೆ. ಬಿಹಾರದ ಭಾಗಲ್‍ಪುರದ ಹುತಾತ್ಮ ರತನ್ ಠಾಕೂರ್ ಅವರ ತಂದೆ ರಾಮ್ ನಿರಂಜನ್ ಅವರು ದುಖಃದ ಈ ಸಂದರ್ಭದಲ್ಲಿಯೂ ಎಂಥ ಸ್ಪೂರ್ತಿಯನ್ನು ಮೆರೆದಿದ್ದಾರೆಂದರೆ ಅದು ನಮ್ಮೆಲ್ಲರನ್ನೂ ಪ್ರೇರೆಪಿಸುವಂಥದ್ದಾಗಿದೆ. ತಮ್ಮ ಇನ್ನೊಬ್ಬ ಮಗನನ್ನೂ ವೈರಿಗಳ ವಿರುದ್ಧ ಹೋರಾಡಲು ಕಳುಹಿಸುವೆ ಮತ್ತು ಅವಶ್ಯಕತೆಯಿದ್ದಲ್ಲಿ ಸ್ವತಃ ಕೂಡಾ ಹೋರಾಡಲು ಹೋಗುವುದಾಗಿ ಅವರು ಹೇಳಿದ್ದಾರೆ. ಒಡಿಶಾದ ಜಗತ್‍ಸಿಂಗ್‍ಪುರದ ಹುತಾತ್ಮ ಪ್ರಸನ್ನ ಸಾಹು ಅವರ ಪತ್ನಿ ಮೀನಾ ಅವರ ಅದಮ್ಯ ಸಾಹಸಕ್ಕೆ ಸಂಪೂರ್ಣ ದೇಶವೇ ಕೈ ಮುಗಿಯುತ್ತಿದೆ. ಅವರು ತಮ್ಮ ಏಕಮಾತ್ರ ಪುತ್ರನನ್ನು ಕೂಡಾ ಸಿ ಆರ್ ಪಿ ಎಫ್ ಗೆ ಭರ್ತಿ ಮಾಡುವ ಪಣ ತೊಟ್ಟಿದ್ದಾರೆ. ತ್ರಿವರ್ಣ ಧ್ವಜದಲ್ಲಿ ಸುತ್ತಿದ ವಿಜಯ್ ಸೊರೇನ್ ಅವರ ಪಾರ್ಥಿವ ಶರೀರ ಜಾರ್ಖಂಡ್‍ನ ಗುಮಲಾ ತಲುಪಿತೋ ಆಗ ಅವರ ಮುಗ್ಧ ಮಗು ನಾನೂ ಸೇನೆಗೆ ಸೇರುವೆ ಎಂದು ಹೇಳಿದೆ. ಆ ಮುಗ್ಧನ ಸ್ಪೂರ್ತಿ ಇಂದು ಭಾರತ ದೇಶದ ಪ್ರತಿಯೊಂದು ಮಗುವಿನ ಭಾವನೆಗಳನ್ನು ವ್ಯಕ್ತಪಡಿಸುತ್ತದೆ. ಇಂಥವೇ ಭಾವನೆಗಳು ನಮ್ಮ ವೀರ, ಪರಾಕ್ರಮಿ ಹುತಾತ್ಮರ ಮನೆ ಮನೆಗಳಲ್ಲೂ ನೋಡಲು ಸಿಗುತ್ತಿದೆ. ಹುತಾತ್ಮನಾದ ಒಬ್ಬ ವೀರನೂ ಇದಕ್ಕೆ ಹೊರತಲ್ಲ. ಅವರ ಕುಟುಂಬದವರೂ ಇದಕ್ಕೆ ಹೊರತಾಗಿಲ್ಲ. ಅದು ಹುತಾತ್ಮರಾದ ದೇವರಿಯಾದ ವಿಜಯ್ ಮೌರ್ಯಾ ಕುಟುಂಬದವರೇ ಆಗಿರಲಿ ಅಥವಾ ಕಾಂಗಡಾದ ಹುತಾತ್ಮ ತಿಲಕ್ ರಾಜ್‍ರವರ ತಂದೆ ತಾಯಿಯೇ ಇರಲಿ ಅಥವಾ ಕೋಟಾದ ಹುತಾತ್ಮ ಹೇಮರಾಜರ 6 ವರ್ಷದ ಮಗನೇ ಇರಲಿ – ಪ್ರತಿ ಹುತಾತ್ಮರ ಕುಟುಂಬದವರ ಕಥೆ, ಪ್ರೇರಣೆಯಿಂದ ತುಂಬಿದೆ. ಈ ಕುಟುಂಬಗಳು ತೋರಿದ ಸ್ಫೂರ್ತಿ, ಭಾವನೆಯನ್ನು ಇಂದಿನ ಯುವ ಪೀಳಿಗೆ ನೋಡಿ, ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಬೇಕೆಂದು ನಾನು ಹೇಳಬಯಸುತ್ತೇನೆ. ದೇಶ ಭಕ್ತಿ ಎಂದರೇನು, ತ್ಯಾಗ ಮತ್ತು ತಪಸ್ಸು ಎಂದರೇನು ಎಂಬುದು ತಿಳಿದುಕೊಳ್ಳಲು ನಾವು ಇತಿಹಾಸದ ಪುರಾತನ ಘಟನೆಗಳತ್ತ ಹೋಗುವ ಅವಶ್ಯಕತೆಯಿಲ್ಲ. ಇದು ನಮ್ಮ ಕಣ್ಮುಂದೆ ಕಾಣುವ ಸಜೀವ ಉದಾಹರಣೆಯಾಗಿದೆ ಮತ್ತು ಭಾರತದ ಉಜ್ವಲ ಭವಿಷ್ಯಕ್ಕಾಗಿ ಪೇರಣೆಯ ಕಾರಣವೂ ಆಗಿದೆ.
 
ನನ್ನ ಪ್ರ್ರಿಯ ದೇಶಬಾಂಧವರೇ, ಸ್ವಾತಂತ್ರ್ಯಾ ನಂತರ ಇಷ್ಟು ವರ್ಷಗಳವರೆಗೂ ನಾವು ಯಾವ ಯುದ್ಧ ಸ್ಮಾರಕಕ್ಕಾಗಿ ಎದುರುನೋಡುತ್ತಿದ್ದೆವೋ, ಅದು ಈಗ ಪೂರ್ಣಗೊಳ್ಳಲಿದೆ. ಈ ಕುರಿತು ದೇಶವಾಸಿಗಳ ಜಿಜ್ಞಾಸೆ, ಉತ್ಸುಕತೆ ಬಹಳ ಸ್ವಾಭಾವಿಕವಾದದ್ದು. NarendraModiApp ಗೆ ಕರ್ನಾಟಕದ ಉಡುಪಿಯ ಶ್ರೀ ಓಂಕಾರ ಶೆಟ್ಟಿಯವರು National War Memorial ಸಿದ್ಧಗೊಳ್ಳುತ್ತಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಯಾವುದೇ  National War Memorial ಇಲ್ಲ ಎಂಬುದಕ್ಕೆ ನನಗೆ ಆಶ್ಚರ್ಯವೂ ಆಗುತ್ತಿತ್ತು ಮತ್ತು ದುಖಃವೂ ಆಗುತ್ತಿತ್ತು. ರಾಷ್ಟ್ರ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಬಲಿದಾನಗೈದ ವೀರ ಸೈನಿಕರ ಶೌರ್ಯದ ವಿಷಯಗಳನ್ನು ಜತನದಿಂದ ಇಡುವಂಥ ಅವಶ್ಕತೆ ಇತ್ತು. ದೇಶದಲ್ಲಿ ಇಂಥ ಒಂದು ಸ್ಮಾರಕ ಖಂಡಿತ ನಿರ್ಮಾಣವಾಗಬೇಕು ಎಂದು ನಾನು ನಿರ್ಧರಿಸಿದ್ದೇನೆ.
 
ನಾವು ರಾಷ್ಟ್ರೀಯ ಯುದ್ಧ ಸ್ಮಾರಕದ ನಿರ್ಮಾಣದ ನಿರ್ಣಯ ಕೈಗೊಂಡಿದ್ದೇವೆ ಮತ್ತು ಈ ಸ್ಮಾರಕ ಇಷ್ಟು ಕಡಿಮೆ ಅವಧಿಯಲ್ಲಿ ಸಿದ್ಧವಾಗಿದೆ ಎಂದು ನನಗೆ ಸಂತೋಷವಿದೆ. ನಾಳೆ ಅಂದರೆ ಫೆಬ್ರವರಿ 25 ಕ್ಕೆ ಕೋಟ್ಯಾಂತರ ದೇಶವಾಸಿಗಳು ಈ ರಾಷ್ಟ್ರೀಯ ಸ್ಮಾರಕವನ್ನು ಸೇನೆಗೆ ಸಮರ್ಪಿಸುತ್ತೇವೆ. ದೇಶ ತನ್ನ ಋಣ ತೀರಿಸುವ ಒಂದು ಸಣ್ಣ ಪ್ರಯತ್ನವನ್ನು ಮಾಡಲಿದೆ.
 
ದಿಲ್ಲಿಯ ಹೃದಯ ಅಂದರೆ ಇಂಡಿಯಾ ಗೇಟ್ ಮತ್ತು ಅಮರ್ ಜವಾನ್ ಜ್ಯೋತಿ ಇರುವ ಸ್ಥಳದ ಹತ್ತಿರದಲ್ಲೇ ಈ ಹೊಸ ಸ್ಮಾರಕವನ್ನು ನಿರ್ಮಿಸಲಾಗಿದೆ. ರಾಷ್ಟ್ರೀಯ ಸೈನಿಕ ಸ್ಮಾರಕಕ್ಕೆ ಭೇಟಿ ನೀಡುವುದು ದೇಶವಾಸಿಗಳಿಗೆ ಯಾವುದೇ ತೀರ್ಥ ಕ್ಷೇತ್ರಕ್ಕೆ ಹೋಗುವಷ್ಟೇ ಪ್ರಮುಖವಾಗಿರುತ್ತದೆ ಎಂಬುದು ನನ್ನ ವಿಶ್ವಾಸ. ರಾಷ್ಟ್ರೀಯ ಸೈನಿಕ ಸ್ಮಾರಕ, ಸ್ವಾತಂತ್ರ್ಯದ ನಂತರ ಸರ್ವೋತ್ತಮ ಬಲಿದಾನಗೈದ ಯೋಧರಿಗೆ ರಾಷ್ಟ್ರದ ಕೃತಜ್ಞತೆಯ ಪ್ರತೀಕವಾಗಿದೆ. ಸ್ಮಾರಕದ ವಿನ್ಯಾಸ ನಮ್ಮ ಅಮರ ಸೈನಿಕರ ಅದಮ್ಯ ಸಾಹಸವನ್ನು ಪ್ರದರ್ಶಿಸುತ್ತದೆ. ರಾಷ್ಟ್ರೀಯ ಸೈನಿಕ ಸ್ಮಾರಕದ concept, Four Concentric Circles ಅಂದರೆ, ನಾಲ್ಕು ಚಕ್ರಗಳನ್ನು ಆಧರಿಸಿದೆ. ಇದರಲ್ಲಿ ಸೈನಿಕನ ಜನ್ಮದಿಂದ ಬಲಿದಾನದವರೆಗಿನ ಪಯಣದ ಚಿತ್ರಣವಿರುತ್ತದೆ. ಅಮರ ಚಕ್ರದ ಜ್ವಾಲೆ, ಹುತಾತ್ಮ ಸೈನಿಕರ ಅಮರತೆಯ ಪ್ರತೀಕವಾಗಿದೆ. 2 ನೇ ವೃತ್ತ ವೀರತೆಯ ವೃತ್ತವಾಗಿದೆ. ಇದು ಸೈನಿಕರ ಸಾಹಸ ಮತ್ತು ಧೈರ್ಯವನ್ನು ಪ್ರದರ್ಶೀಸುತ್ತದೆ. ಈ ಗ್ಯಾಲರಿಯ ಗೋಡೆಗಳ ಮೇಲೆ ಸೈನಿಕರ ಶೌರ್ಯದ ಕಥೆಗಳನ್ನು ಕೆತ್ತಲಾಗಿದೆ. ಇದರ ನಂತರವಿದೆ ತ್ಯಾಗ ಚಕ್ರ. ಇದು ಸೈನಿಕರ ಬಲಿದಾನವನ್ನು ಪ್ರದರ್ಶಿಸುತ್ತದೆ. ಇದರಲ್ಲಿ ದೇಶಕ್ಕೆ ಸರ್ವೋತ್ತಮ ಬಲಿದಾನಗೈದ ಯೋಧರ ಹೆಸರುಗಳನ್ನು ಸುವರ್ಣಾಕ್ಷರಗಳಲ್ಲಿ ಬರೆಯಲಾಗಿದೆ. ಇದರ ನಂತರ ಇರುವ ರಕ್ಷಕ ಚಕ್ರ, ಸುರಕ್ಷತೆಯನ್ನು ಪ್ರದರ್ಶಿಸುತ್ತದೆ. ಈ ವೃತ್ತದಲ್ಲಿ ದಟ್ಟವಾದ ಮರಗಿಡಗಳ ಸಾಲುಗಳಿವೆ. ಈ ಮರಗಳು ಸೈನಿಕರನ್ನು ಪ್ರತಿನಿಧಿಸುತ್ತವೆ ಇವು ಪ್ರತಿ ಘಳಿಗೆಯೂ ಸೈನಿಕರು ಗಡಿಯಲ್ಲಿ ಸನ್ನದ್ಧವಾಗಿದ್ದಾರೆ ಮತ್ತು ದೇಶದ ಪ್ರಜೆಗಳು ಸುರಕ್ಷಿತವಾಗಿದ್ದಾರೆ ಎಂಬ ಸಂದೇಶವನ್ನು ದೇಶದ ಜನತೆಗೆ ಸಾರುತ್ತವೆ. ಒಟ್ಟಿನಲ್ಲಿ ಹೇಳುವುದಾದರೆ, ಜನರು ದೇಶದ ಮಹಾನ್ ಹುತಾತ್ಮರ ಬಗ್ಗೆ ಮಾಹಿತಿ ಪಡೆಯಲು, ತಮ್ಮ ಕೃತಜ್ಞತೆಯನ್ನು ಸಲ್ಲಿಸಲು, ಅವರ ಮೇಲೆ ಸಂಶೋಧನೆಗೈಯ್ಯುವ ಉದ್ದೇಶದಿಂದ ಬರುವಂಥ ಸ್ಥಳವಾಗಿ ರಾಷ್ಟ್ರೀಯ ಸೈನಿಕ ಸ್ಮಾರಕದ ನಿರ್ಮಾಣದ ಪರಿಚಯವಾಗಲಿದೆ. ನಾವು ನಿಶ್ಚಿಂತೆಯಿಂದ ಬದುಕಿರಲಿ, ದೇಶ ಸುರಕ್ಷಿತವಾಗಿದ್ದು ಏಳ್ಗೆಯನ್ನು ಸಾಧಿಸಲಿ ಎಂಬುದಕ್ಕಾಗಿ ಇಲ್ಲಿ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿರಿಸಿದ ಸೈನಿಕರ ಯಶೋಗಾಥೆಯಿದೆ. ದೇಶದ ಅಭಿವೃದ್ಧಿಯಲ್ಲಿ ನಮ್ಮ ಸೇನೆ, ಪೋಲಿಸ್ ಮತ್ತು ಅರೆ ಸೇನಾಪಡೆಯ ಅದ್ಭುತ ಪಾಲುದಾರಿಕೆಯನ್ನು ಶಬ್ದಗಳಲ್ಲಿ ವ್ಯಕ್ತಪಡಿಸುವುದು ಸಂಭವವಿಲ್ಲ. ಕಳೆದ ವರ್ಷ
 
ಅಕ್ಟೋಬರ್‍ನಲ್ಲಿ ನನಗೆ ರಾಷ್ಟ್ರೀಯ ಪೋಲಿಸ್ ಸ್ಮಾರಕವನ್ನು ದೇಶಕ್ಕೆ ಸಮರ್ಪಿಸುವ ಸೌಭಾಗ್ಯ ದೊರೆತಿತ್ತು. ಅದು ಕೂಡಾ, ನಮ್ಮ ಸುರಕ್ಷತೆಯಲ್ಲಿ ಅನವರತ ನಿರತವಾಗಿರುವ ಪುರುಷ ಮತ್ತು ಮಹಿಳಾ ಪೋಲಿಸರ ಬಗ್ಗೆ ಕೃತಜ್ಞರಾಗಿರಬೇಕು ಎಂಬ ನಮ್ಮ ವಿಚಾರದ ಪ್ರತಿಬಿಂಬವಾಗಿತ್ತು ರಾಷ್ಟ್ರೀಯ ಸೈನಿಕ ಸ್ಮಾರಕ ಮತ್ತು ಪೋಲಿಸ್ ಸ್ಮಾರಕವನ್ನು ನೋಡಲು ನೀವು ಖಂಡಿತಾ ಹೋಗುವಿರೆಂದು ಆಶಿಸುತ್ತೇನೆ. ನೀವು ಯಾವಾಗಲೇ ಅಲ್ಲಿಗೆ ಹೋದರೂ ಅಲ್ಲಿ ತೆಗೆದುಕೊಂಡ ಭಾವಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಖಂಡಿತ ಹಂಚಿಕೊಳ್ಳಿ. ಇದರಿಂದ ಇತರರಿಗೂ ಪ್ರೇರಣೆ ದೊರೆಯಲಿ ಮತ್ತು ಅವರೂ ಸಹ ಈ ಪವಿತ್ರ ಸ್ಥಳದಲ್ಲಿರುವ ಸ್ಮಾರಕಗಳನ್ನು ನೋಡಲು ಉತ್ಸುಕರಾಗಲಿ.
 
ನನ್ನ ಪ್ರ್ರಿಯ ದೇಶಬಾಂಧವರೇ, ನನಗೆ ವಿವಿಧ ಮಾಧ್ಯಮಗಳ ಮೂಲಕ ಮನದ ಮಾತಿಗೆ ನೀವು ಬರೆದ ಸಾವಿರಾರು ಪತ್ರಗಳು ಮತ್ತು ಅನಿಸಿಕೆಗಳು ಓದಲು ಸಿಗುತ್ತಿರುತ್ತವೆ. ಈ ಬಾರಿ ನಿಮ್ಮ ಅನಿಸಿಕೆಗಳನ್ನು ಓದುತ್ತಿರುವಾಗ, ಆತೀಷ್ ಮುಖ್ಯೋಪಾಧ್ಯಾಯ ಅವರ ಒಂದು ಬಹಳ ರೋಚಕವಾದ ಟಿಪ್ಪಣಿ ನನಗೆ ನೆನಪಿಗೆ ಬಂತು. ಅವರು, 1900 ರ ಮಾರ್ಚ್ 3 ರಂದು ಬ್ರಿಟಿಷರು ಬಿರ್ಸಾ ಮುಂಡಾ ಅವರನ್ನು ಬಂಧಿಸಿದ್ದರು. ಆಗ ಅವರ ವಯಸ್ಸು ಕೇವಲ 25. ಕಾಕತಾಳೀಯವೆಂಬಂತೆ ಮಾರ್ಚ್ 3ಕ್ಕೆ ಜೆಮ್‍ಶೆಡ್‍ಜಿ ಟಾಟಾ ಅವರ ಜಯಂತಿಯೂ ಇದೆ. ಮುಂದುವರಿದು ಅವರು ಬರೆಯುತ್ತಾರೆ, ಇವೆರಡೂ ವ್ಯಕ್ತಿತ್ವಗಳು ವಿಭಿನ್ನ ಪಾರಿವಾರಿಕ ಹಿನ್ನೆಲೆ ಹೊಂದಿವೆ. ಇವರಿಬ್ಬರೂ ಜಾರ್ಖಂಡ್‍ನ ಪರಂಪರೆ ಮತ್ತು ಇತಿಹಾಸವನ್ನು ಸಮೃದ್ಧಗೊಳಿಸಿದ್ದಾರೆ. ಮನದ ಮಾತಿನಲ್ಲಿ ಬಿರ್ಸಾ ಮುಂಡಾ ಮತ್ತು ಜೆಮ್‍ಶೆಡ್‍ಜಿ ಟಾಟಾ ಅವರನ್ನು ಸ್ಮರಿಸುವುದು ಒಂದು ರೀತಿಯಲ್ಲಿ ಜಾರ್ಖಂಡ್‍ನ ಗೌರವಯುತ ಪರಂಪರೆ ಮತ್ತು ಇತಿಹಾಸಕ್ಕೆ ಗೌರವ ಸೂಚಿಸುವಂಥದ್ದಾಗಿದೆ. ಆತೀಶ್ ಅವರೇ ನಿಮ್ಮ ವಿಚಾರವನ್ನು ನಾನು ಒಪ್ಪುತ್ತೇನೆ. ಈ ಇಬ್ಬರು ಮಹಾನ್ ದಿಗ್ಗಜರು ಕೇವಲ ಜಾರ್ಖಂಡ್ ಮಾತ್ರವಲ್ಲ ದೇಶಕ್ಕೂ ಗೌರವ ತಂದುಕೊಟ್ಟಿದ್ದಾರೆ. ಸಂಪೂರ್ಣ ದೇಶ ಅವರ ಕೊಡುಗೆಗೆ ಕೃತಜ್ಞವಾಗಿದೆ. ಇಂದು ನಮ್ಮ ಯುವಕರ ಮಾರ್ಗದರ್ಶನಕ್ಕಾಗಿ ಯಾವುದಾದರೂ ಪ್ರೇರಣೆ ನೀಡುವಂತಹ ವ್ಯಕ್ತಿತ್ವದ ಅವಶ್ಯಕತೆಯಿದೆ ಎಂದರೆ ಅದು ಭಗವಾನ್ ‘ಬಿರ್ಸಾ ಮುಂಡಾ.’ ಬ್ರಿಟಿಷರು ಬಹಳ ಚಾಲಾಕಿತನದಿಂದ ಬಚ್ಚಿಟ್ಟುಕೊಂಡು ಬಿರ್ಸಾ ಮುಂಡಾ ಮಲಗಿರುವ ಸಮಯದಲ್ಲಿ ಬಂಧಿಸಿದ್ದರು. ಅವರು ಇಂಥ ಪುಕ್ಕಲುತನದ ಕೆಲಸಕ್ಕೆ ಯಾಕೆ ಕೈ ಹಾಕಿದರು ಎಂದು ನಿಮಗೆ ಗೊತ್ತೇ? ಏಕೆಂದರೆ ಇಷ್ಟು ಅಗಾಧವಾದ ಸಾಮ್ರಾಜ್ಯವನ್ನೇ ಕಟ್ಟಿದ ಬ್ರಿಟಿಷರಿಗೂ ಇವರೆಂದರೆ ಭಯವಾಗುತ್ತಿತ್ತು. ಭಗವಾನ್ ಬಿರ್ಸಾ ಮುಂಡಾ ಅವರು ಕೇವಲ ತಮ್ಮ ಪರಂಪರಾಗತ ಬಿಲ್ಲು ಬಾಣಗಳೊಂದಿಗೆ ಬಂದೂಕು ಮತ್ತು ತೋಪುಗಳಿಂದ ಸಜ್ಜಿತವಾದ ಬ್ರಿಟಿಷ್ ಆಡಳಿತವನ್ನೇ ಅಲ್ಲಾಡಿಸಿಬಿಟ್ಟಿದ್ದರು. ಅಸಲಿನಲ್ಲಿ, ಜನರಿಗೆ ಒಂದು ಪ್ರೇರಣಾದಾಯಕ ನೇತೃತ್ವ ದೊರೆತಾಗ ಅಸ್ತ್ರಗಳ ಶಕ್ತಿಗಿಂತ ಜನಸಮುದಾಯದ ಇಚ್ಛಾಶಕ್ತಿ ಪ್ರಬಲವಾಗಿ ಪರಿಣಮಿಸುತ್ತದೆ. ಭಗವಾನ್ ಬಿರ್ಸಾ ಮುಂಡಾ ಅವರು ಬ್ರಿಟಿಷ್‍ರ ವಿರುದ್ಧ ಕೇವಲ ರಾಜಕೀಯ ಸ್ವಾತಂತ್ರ್ಯಕ್ಕಾಗಿ ಮಾತ್ರವಲ್ಲದೆ ಬುಡಕಟ್ಟು ಜನರ ಸಾಮಾಜಿಕ ಮತ್ತು ಆರ್ಥಿಕ ಹಕ್ಕುಗಳಿಗಾಗಿಯೂ ಹೋರಾಡಿದರು. ತಮ್ಮ ಅಲ್ಪಾವಧಿಯ ಜೀವನದಲ್ಲಿಯೇ ಅವರು ಇದೆಲ್ಲ ಸಾಧಿಸಿ ತೋರಿಸಿದರು. ವಂಚಿತರು ಮತ್ತು ಶೋಷಿತರ ಅಂಧಕಾರ ತುಂಬಿದ ಬಾಳಿನಲ್ಲಿ ಸೂರ್ಯನಂತೆ ಬೆಳಕು ಚೆಲ್ಲಿದರು. ಭಗವಾನ್ ಬಿರ್ಸಾ ಮುಂಡಾ ಅವರು ತಮ್ಮ 25 ನೇ ವರ್ಷದ ಅಲ್ಪಾಯುಷ್ಯದಲ್ಲೇ ತಮ್ಮ ಬಲಿದಾನ ನೀಡಿದರು. ಬಿರ್ಸಾ ಮುಂಡಾ ಅವರಂತಹ ಭಾರತ ಮಾತೆಯ ಮಕ್ಕಳು ದೇಶದ ಪ್ರತಿ ಮೂಲೆಯಲ್ಲೂ ಜನಿಸಿದ್ದಾರೆ. ಶತಮಾನಗಳವರೆಗೆ ನಡೆದ ಸ್ವಾತಂತ್ರ್ಯ ಹೋರಾಟದಲ್ಲಿ ಬಹುಶಃ ಕೊಡುಗೆ ನೀಡದಿರುವ ಹಿಂದೂಸ್ಥಾನದ ಯಾವುದೇ ಪ್ರದೇಶವಿಲ್ಲ. ದೌರ್ಭಾಗ್ಯವೆಂದರೆ, ಹೊಸ ಪೀಳಿಗೆಗೆ ಇವರ ಶೌರ್ಯ, ತ್ಯಾಗ, ಬಲಿದಾನದ ಕಥೆಗಳು ತಲುಪಲೇ ಇಲ್ಲ. ಭಗವಾನ್ ಬಿರ್ಸಾ ಮುಂಡಾ ಅವರಂತಹ ವ್ಯಕ್ತಿತ್ವ ನಮಗೆ ನಮ್ಮ ಅಸ್ತಿತ್ವದ ಅರಿವು ಮೂಡಿಸಿದರೆ, ಜೆಮ್‍ಶೆಡ್‍ಜಿ ಟಾಟಾ ಅವರಂಥವರು ದೇಶಕ್ಕೆ ದೊಡ್ಡ ದೊಡ್ಡ ಉದ್ಯಮಗಳನ್ನು ನೀಡಿದ್ದಾರೆ. ಜೆಮ್‍ಶೆಡ್‍ಜಿ ಟಾಟಾ ಅವರು ದೂರದರ್ಶಿತ್ವವುಳ್ಳವರಾಗಿದ್ದರು. ಅವರು ಕೇವಲ ಭಾರತದ ಭವಿಷ್ಯದ ಕನಸು ಕಾಣುವುದಲ್ಲದೆ ಅದಕ್ಕೆ ಗಟ್ಟಿಮುಟ್ಟಾದ ಅಡಿಪಾಯವನ್ನೂ ಹಾಕಿದರು. ವಿಜ್ಞಾನ, ತಂತ್ರಜ್ಞಾನ ಮತ್ತು ಔದ್ಯಮಿಕ ಕೇಂದ್ರ ನಿರ್ಮಿಸುವುದು ಭಾರತದ ಭವಿಷ್ಯಕ್ಕೆ ಅವಶ್ಯಕ ಎಂಬುದನ್ನು ಅವರು ಚೆನ್ನಾಗಿ ಅರಿತಿದ್ದರು. ಇದು ಅವರ ದೃಷ್ಟಿಕೋನವಾಗಿತ್ತು. ಇದರ ಪರಿಣಾಮವೇ ಟಾಟಾ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್ ಸ್ಥಾಪನೆಯಾಯಿತು. ಇದನ್ನು ಈಗ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್ ಎಂದು ಕರೆಯಲಾಗುತ್ತದೆ. ಇಷ್ಟೆ ಅಲ್ಲದೇ ಅವರು ಟಾಟಾ ಸ್ಟೀಲ್ ನಂತಹ ವಿಶ್ವಮಟ್ಟದ ಬಹಳಷ್ಟು ಸಂಸ್ಥೆಗಳು ಮತ್ತು ಕೈಗಾರಿಕೆಗಗಳನ್ನು ಸ್ಥಾಪಿಸಿದ್ದಾರೆ. ಅಮೇರಿಕಕ್ಕೆ ತೆರಳುವಾಗ ಹಡಗಿನಲ್ಲಿ ಜೆಮ್‍ಶೆಡ್‍ಜಿ ಟಾಟಾ ಮತ್ತು ಸ್ವಾಮಿ ವಿವೇಕಾನಂದರ ಭೇಟಿಯಾಗಿತ್ತು. ಆಗ ಅವರಿಬ್ಬರ ಮಧ್ಯೆ ನಡೆದ ಮಹತ್ವಪೂರ್ಣ ಚರ್ಚಾ ವಿಷಯ ಭಾರತದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಚಾರ ಮತ್ತು ಪ್ರಸಾರದ ಬಗೆಗಿನದಾಗಿತ್ತು. ಇದೇ ಚರ್ಚೆ ಮೂಲಕವೇ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್ ನ ಅಡಿಪಾಯ ಹಾಕಲಾಯಿತು ಎನ್ನಲಾಗಿದೆ.
 
ನನ್ನ ಪ್ರ್ರಿಯ ದೇಶವಾಸಿಗಳೇ, ನಮ್ಮ ದೇಶದ ಅಂದಿನ ಪ್ರಧಾನ ಮಂತ್ರಿಗಳಾದ ಮೊರಾರ್ಜಿ ದೇಸಾಯಿ ಅವರ ಜನ್ಮ ಫೆಬ್ರವರಿ 29 ಕ್ಕೆ ಆಗಿತ್ತು. ನಿಮಗೆಲ್ಲ ತಿಳಿದಿರುವ ಹಾಗೆ ಈ ದಿನಾಂಕ ನಾಲ್ಕು ವರ್ಷಗಳಿಗೊಮ್ಮೆ ಬರುತ್ತದೆ. ಸಹಜ, ಶಾಂತಿಯುತ ವ್ಯಕ್ತಿತ್ವದ ಧಣಿಗಳಾದ ಮೊರಾರ್ಜಿ ದೇಸಾಯಿ ಅವರು ದೇಶದ ಅತ್ಯಂತ ಶಿಸ್ತಿನ ನಾಯಕರಲ್ಲೊಬ್ಬರಾಗಿದ್ದರು. ಸ್ವತಂತ್ರ ಭಾರತದ ಸಂಸತ್ತಿನಲ್ಲಿ ಅತ್ಯಂತ ದೊಡ್ಡ ಮೊತ್ತದ ಆಯವ್ಯಯ ಮಂಡಿಸಿದ ದಾಖಲೆ ಮೊರಾರ್ಜಿ ದೇಸಾಯಿ ಅವರದ್ದಾಗಿದೆ. ಮೊರಾರ್ಜಿ ದೇಸಾಯಿ ಅವರು ದೇಶದ ಪ್ರಜಾಪ್ರಭುತ್ವದ ಅಳಿವು ಉಳಿವಿನ ಸಂಕಷ್ಟ ಪರಿಸ್ಥಿತಿಯಲ್ಲಿ ಕೌಶಲ್ಯಪೂರ್ಣವಾಗಿ ಭಾರತದ ಆಡಳಿತ ಚುಕ್ಕಾಣಿ ಹಿಡಿದಿದ್ದರು. ಇದಕ್ಕಾಗಿ ನಮ್ಮ ಮುಂಬರುವ ಪೀಳಿಗೆಗಳು ಕೂಡ ಅವರಿಗೆ ಕೃತಜ್ಞರಾಗಿರುತ್ತವೆ. ಮೊರಾರ್ಜಿ ದೇಸಾಯಿ ಅವರು ಪ್ರಜಾಪ್ರಭುತ್ವದ ರಕ್ಷಣೆಗಾಗಿ ತುರ್ತು ಪರಿಸ್ಥಿತಿಯ ವಿರುದ್ಧದ ಆಪತ್ಕಾಲದ ಚಳವಳಿಯಲ್ಲಿ ಸ್ವತಃ ಧುಮುಕಿದ್ದರು. ಇದಕ್ಕಾಗಿ ಅವರಿಗೆ ಇಳಿವಯಸ್ಸಿನಲ್ಲಿ ಬಹುದೊಡ್ಡ ಬೆಲೆ ತೆರಬೇಕಾಯಿತು. ಆ ಸಮಯದಲ್ಲಿ ಆಡಳಿತಾರೂಢ ಸರ್ಕಾರ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಿತ್ತು. ಆದರೆ 1977 ರಲ್ಲಿ ಜನತಾ ಪಕ್ಷ ಚುನಾವಣೆಯಲ್ಲಿ ಗೆದ್ದು ಬಂದಾಗ ಅವರು ಪ್ರಧಾನ ಮಂತ್ರಿಗಳಾದರು. ಅವರು ಹುದ್ದೆಯಲ್ಲಿದ್ದಾಗಲೇ 44 ನೇ ಸಾಂವಿಧಾನಿಕ ತಿದ್ದುಪಡಿಯನ್ನು ಜಾರಿಗೆ ತರಲಾಯಿತು. ಇದು ಏಕೆ ಮಹತ್ವಪೂರ್ಣವಾಗಿದೆ ಎಂದರೆ, ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜಾರಿಗೆ ತಂದಿದ್ದ 42 ನೇ ಸಾಂವಿಧಾನಿಕ ತಿದ್ದುಪಡಿಯಲ್ಲಿ ಸರ್ವೋಚ್ಚ ನ್ಯಾಯಾಲಯದ ಸಾಮಥ್ರ್ಯವನ್ನು ತಗ್ಗಿಸುವ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ಉಂಟು ಮಾಡುವಂತಹ ಅಂಶಗಳಿದ್ದವು, ಅವನ್ನು ರದ್ದು ಮಾಡಲಾಯಿತು. ಉದಾಹರಣೆಗೆ 44 ನೇ ತಿದ್ದುಪಡಿಯಲ್ಲಿ ಸಂಸತ್ ಮತ್ತು ಶಾಸನ ಸಭೆಗಳ ಕಾರ್ಯನಿರ್ವಹಿಸುವ ಬಗೆಯನ್ನು ವೃತ್ತ ಪತ್ರಿಕೆಗಳಲ್ಲಿ ಮುದ್ರಿಸಲು ಅವಕಾಶ ಕಲ್ಪಿಸಲಾಯಿತು. ಇದೇ ರೀತಿ ಸರ್ವೋಚ್ಚ ನ್ಯಾಯಾಲಯದ ಕೆಲವು ಅಧಿಕಾರಗಳನ್ನು ಪುನಃ ಸ್ಥಾಪಿಸಲಾಯಿತು. ಇದೇ ತಿದ್ದುಪಡಿಯಲ್ಲಿ ಸಂವಿಧಾನದ 20 ಮತ್ತು 21 ನೇ ಅನುಚ್ಛೇದದಡಿಯಲ್ಲಿ ನೀಡಲಾದ ಮೂಲಭೂತ ಹಕ್ಕುಗಳನ್ನು ತುರ್ತು ಪರಿಸ್ಥಿತಿಯಲ್ಲೂ ವಜಾ ಮಾಡಲಾಗದು ಎಂಬುದಕ್ಕೂ ಅವಕಾಶ ನೀಡಲಾಯಿತು. 
 
ಮೊದಲ ಬಾರಿಗೆ ಮಂತ್ರಿ ಮಂಡಲದ ಲಿಖಿತ ಶಿಫಾರಸ್ಸಿನ ಮೇರೆಗೆ ಮಾತ್ರ ರಾಷ್ಟ್ರಪತಿಗಳು ತುರ್ತು ಪರಿಸ್ಥಿತಿಯನ್ನು ಘೋಷಿಸಬಹುದು ಎಂಬ ವ್ಯವಸ್ಥೆಯನ್ನು ಕಲ್ಪಿಸಲಾಯಿತು. ಜೊತೆಗೆ ತುರ್ತು ಪರಿಸ್ಥಿತಿಯನ್ನು 6 ತಿಂಗಳುಗಳಿಗಿಂತ ಹೆಚ್ಚಿನ ಅವಧಿಗೆ ವಿಸ್ತರಿಸಬಾರದು ಎಂದು ನಿರ್ಧರಿಸಲಾಯಿತು. ಹೀಗೆ 1975 ರಲ್ಲಿ ತುರ್ತು ಪರಿಸ್ಥಿತಿಯನ್ನು ಜಾರಿಗೊಳಿಸಿ ಯಾವ ರೀತಿ ಪ್ರಜಾಪ್ರಭುತ್ವದ ಹತ್ಯೆಗೈಯ್ಯಲಾಯಿತೋ ಅದು ಭವಿಷ್ಯದಲ್ಲಿ ಎಂದಿಗೂ ಮರುಕಳಿಸಬಾರದು ಎಂಬುದನ್ನು ಮೊರಾರ್ಜಿ ದೇಸಾಯಿ ಅವರು ಖಚಿತಪಡಿಸಿದರು. ಭಾರತೀಯ ಪ್ರಜಾಪ್ರಭುತ್ವದ ಘನತೆಯನ್ನು ಕಾಪಾಡುವಲ್ಲಿ ಅವರ ಅಮೂಲ್ಯ ಕೊಡುಗೆಯನ್ನು ಮುಂಬರುವ ಪೀಳಿಗೆಗಳು ಎಂದಿಗೂ ಸ್ಮರಿಸುತ್ತವೆ. ಮತ್ತೊಮ್ಮೆ ಇಂಥ ಮಹಾನ್ ನಾಯಕನಿಗೆ ನನ್ನ ಗೌರವಪೂರ್ಣ ಸ್ಮರಣೆಯನ್ನು ಅರ್ಪಿಸುತ್ತೇನೆ.
 
ನನ್ನ ಪ್ರಿಯ ದೇಶಬಾಂಧವರೇ, ಪ್ರತಿ ವರ್ಷದಂತೆ ಈ ಬಾರಿಯೂ ಪದ್ಮ ಪ್ರಶಸ್ತಿ ಕುರಿತು ಜನರಲ್ಲಿ ಬಹಳ ಉತ್ಸುಕತೆಯಿತ್ತು. ಇಂದು ನಾವು ನವಭಾರತದತ್ತ ದಾಪುಗಾಲಿಕ್ಕಿದ್ದೇವೆ. ಇದರಲ್ಲಿ ನಾವು ಯಾರು ನಿಸ್ವಾರ್ಥ ಭಾವನೆಯಿಂದ ತಳ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೋ ಅವರನ್ನು ಸನ್ಮಾನಿಸಬಯಸುತ್ತೇವೆ. ತಮ್ಮ ಪರಿಶ್ರಮದಿಂದ ವಿವಿಧ ವಿಧಾನಗಳ ಮೂಲಕ ಇತರರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಯಾರು ಪ್ರಯತ್ನಿಸುತ್ತಿದ್ದಾರೋ ಅವರೇ ನಿಜವಾದ ಕರ್ಮಯೋಗಿಗಳು, ಅವರು ಜನಸೇವೆ, ಸಮಾಜ ಸೇವೆ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ರಾಷ್ಟ್ರ ಸೇವೆಯಲ್ಲಿ ನಿಸ್ವಾರ್ಥಿಗಳಾಗಿ ತೊಡಗಿಕೊಂಡಿರುತ್ತಾರೆ. ಪದ್ಮ ಪ್ರಶಸ್ತಿ ಘೋಷಣೆಯಾದಾಗ ಜನರು ಇವರು ಯಾರು ಎಂದು ಕೇಳುವುದನ್ನು ನೀವು ಗಮನಿಸಿರಬಹುದು. ಒಂದು ರೀತಿಯಲ್ಲಿ ಇದನ್ನು ನಾನು ಬಹುದೊಡ್ಡ ಸಫಲತೆಯೆಂದು ಭಾವಿಸುತ್ತೇನೆ. ಏಕೆಂದರೆ ಇವರು ಟಿ ವಿ, ಪತ್ರಿಕೆಗಳು ಅಥವಾ ಸುದ್ದಿಗಳ ಮೊದಲ ಪುಟದಲ್ಲಿ ಇರದಂಥವರು. ಈ ಹೊಳಪಿನ ಜಗತ್ತಿನಿಂದ ದೂರವಿರುವವರು. ಆದರೆ, ಇವರು ತಮ್ಮ ಹೆಸರಿನ ಬಗ್ಗೆ ಚಿಂತಿಸುವಂಥವರಲ್ಲ, ಕೇವಲ ತಳ ಮಟ್ಟದಲ್ಲಿ ಕಾರ್ಯ ನಿರ್ವಹಿಸುವುದನ್ನು ನಂಬುತ್ತಾರೆ. 
 
“ಯೋಗಃ ಕರ್ಮಸು ಕೌಶಲಮ್” ಎಂಬ ಭಗವದ್ಗೀತೆಯ ಸಂದೇಶವನ್ನೇ ಅವರು ಜೀವಿಸುತ್ತಾರೆ. ಇಂಥ ಕೆಲವರ ಬಗ್ಗೆ ನಿಮಗೆ ತಿಳಿಸಬಯಸುತ್ತೇನೆ. ಒಡಿಶಾದ ದೈತಾರಿ ನಾಯಕ್ ಅವರ ಬಗ್ಗೆ ನೀವು ಖಂಡಿತ ಕೇಳಿರಬಹುದು. ಅವರನ್ನು ‘Canal Man of Odisha’ಎಂದು ಸುಮ್ಮನೆ ಕರೆಯುವುದಿಲ್ಲ, ದೈತಾರಿ ನಾಯಕ್ ಅವರು ತಮ್ಮ ಗ್ರಾಮದಲ್ಲಿ ಸ್ವತಃ ಬೆಟ್ಟವನ್ನು ಕಡಿದು 3 ಕಿಮೀ ವರೆಗೆ ಕಾಲುವೆ ನಿರ್ಮಿಸಿದ್ದಾರೆ. ತಮ್ಮ ಶ್ರಮದಿಂದ ನೀರಿನ ಮತ್ತು ನೀರಾವರಿಯ ಸಮಸ್ಯೆಯನ್ನು ಖಾಯಂ ಆಗಿ ಪರಿಹರಿಸಿದರು. ಗುಜರಾತ್‍ನ ಅಬ್ದುಲ್ ಗಫೂರ್ ಖತ್ರಿಯವರ ಬಗ್ಗೆಯೇ ಕೇಳಿ, ಅವರು ಕಛ್‍ನ ಪರಂಪರಾಗತ ರೋಗನ್ ವರ್ಣಚಿತ್ರಕಲೆಯನ್ನು ಪುನರುಜ್ಜೀವನಗೊಳಿಸುವ ಅದ್ಭುತ ಕೆಲಸ ಮಾಡಿದ್ದಾರೆ. ಇಂಥ ದುರ್ಲಭ ವರ್ಣಚಿತ್ರಕಲೆಯನ್ನು ಹೊಸ ಪೀಳಿಗೆಗೆ ತಲುಪಿಸುವ ಮಹತ್ವಪೂರ್ಣ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಅಬ್ದುಲ್ ಗಫೂರ್ ಅವರ ನಿರ್ಮಾಣದ ‘‘Tree of Life’ ಕಲಾಕೃತಿಯನ್ನೇ ನಾನು ಅಮೇರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರಿಗೆ ಕಾಣಿಕೆಯಾಗಿ ನೀಡಿದ್ದೆ. 
 
ಪದ್ಮ ಪ್ರಶಸ್ತಿ ಪಡೆದವರಲ್ಲಿ ಒಬ್ಬರಾದ ಮರಾಠಾವಾಡಾದ ಶಬ್ಬೀರ್ ಸೈಯ್ಯದ್ ಅವರು ಗೋಮಾತಾ ಸೇವಕರೆಂದೇ ಪ್ರಸಿದ್ಧಿ ಗಳಿಸಿದ್ದಾರೆ. ಅವರು ತಮ್ಮ ಸಂಪೂರ್ಣ ಜೀವನವನ್ನು ಗೋಮಾತೆಯ ಸೇವೆಯಲ್ಲಿ ವ್ಯಯಿಸಿದರು ಎಂಬುದು ವಿಶಿಷ್ಠವಾಗಿದೆ. ಮಧುರೈ ನ ಚಿನ್ನ ಪಿಳ್ಳೈ ಅವರು ಎಲ್ಲರಿಗಿಂತ ಮೊದಲು ತಮಿಳುನಾಡಿನಲ್ಲಿ ಕಲಂಜಿಯಮ್ ಚಳವಳಿ ಮೂಲಕ ಪೀಡಿತರು ಮತ್ತು ಶೋಷಿತರನ್ನು ಸಶಕ್ತರನ್ನಾಗಿ ಮಾಡುವ ಪ್ರಯತ್ನ ಮಾಡಿದ ವ್ಯಕ್ತಿಯಾಗಿದ್ದಾರೆ. ಜೊತೆಗೆ ಸಮುದಾಯ ಆಧರಿತ ಲಘು ವಿತ್ತೀಯ ವ್ಯವಸ್ಥೆಯನ್ನು ಆರಂಭಿಸಿದರು. ಅಮೇರಿಕದ ತಾವೋ ಪೊಶೊ ಲಿಂಚ್ ಬಗ್ಗೆ ಕೇಳಿ ನೀವು ಬಹಳ ಆಶ್ಚರ್ಯ ಚಕಿತರಾಗುತ್ತೀರಿ. ಲಿಂಚ್ ಅವರು ಇಂದು ಯೋಗದ ಜೀವಂತ ಸಂಸ್ಥೆಯಾಗಿ ಮಾರ್ಪಾಡಾಗಿದ್ದಾರೆ. ಶತಾಯುಷಿಯಾದರೂ ಅವರು ವಿಶ್ವಾದ್ಯಂತ ಜನರಿಗೆ ಯೋಗ ತರಬೇತಿ ನೀಡುತ್ತಿದ್ದಾರೆ. ಇಲ್ಲಿವರೆಗೆ ಒಂದೂವರೆ ಸಾವಿರ ಜನರನ್ನು ಯೋಗ ಶಿಕ್ಷಕರನ್ನಾಗಿ ತಯಾರು ಮಾಡಿದ್ದಾರೆ. ಜಾರ್ಖಂಡ್ ನಲ್ಲಿ ಲೇಡಿ ಟಾರ್ಜನ್ ಹೆಸರಿನಿಂದಲೇ ಖ್ಯಾತರಾದ ಜಮುನಾ ಟುಡು ಅವರು ಕಟ್ಟಿಗೆ ಕಳ್ಳಸಾಗಾಣಿಕೆದಾರರು ಮತ್ತು ನಕ್ಸಲೀಯರ ವಿರುದ್ಧ ಹೋರಾಡುವಂಥ ಸಾಹಸಕ್ಕೆ ಕೈ ಹಾಕಿದ್ದಾರೆ. ಅವರು 50 ಹೆಕ್ಟೇರ್ ಅರಣ್ಯವನ್ನು ರಕ್ಷಿಸಿದ್ದು ಮಾತ್ರವಲ್ಲದೆ 10 ಸಾವಿರ ಮಹಿಳೆಯನ್ನು ಒಗ್ಗೂಡಿಸಿ ಮರಗಳು ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ಪ್ರೇರೆಪಿಸಿದ್ದಾರೆ. ಈಗ ಜಮುನಾಜಿ ಅವರ ಪರಿಶ್ರಮದ ಪ್ರತಿಫಲವಾಗಿ ಗ್ರಾಮಸ್ಥರು ಮಗುವಿನ ಜನನವಾದಲ್ಲಿ 18 ಸಸಿಗಳು ಮತ್ತು ಮಗಳ ಮದುವೆ ಸಂದರ್ಭದಲ್ಲಿ 10 ಸಸಿಗಳನ್ನು ನೆಡುತ್ತಿದ್ದಾರೆ. 
 
ಗುಜರಾತ್‍ನ ಮುಕ್ತಾಬೆನ್ ಪಂಕಜ್‍ಕುಮಾರ್ ದಗಲಿಯವರ ಕಥೆ ನಿಮಗೆ ಸ್ಪೂರ್ತಿದಾಯಕವಾಗಲಿದೆ, ಸ್ವತಃ
ದಿವ್ಯಾಂಗರಾದರೂ ಇತರ ದಿವ್ಯಾಂಗ ಮಹಿಳೆಯರ ಉನ್ನತಿಗಾಗಿ ಎಂಥ ಕೆಲಸ ಮಾಡಿದ್ದಾರೆಂದರೆ ಇಂತಹ ಉದಾಹರಣೆ ಸಿಗುವುದು ಬಹಳ ಅಪರೂಪ. ಚಕ್ಷು ಮಹಿಳಾ ಸೇವಾ ಕುಂಜ್ ಎಂಬ ಹೆಸರಿನ ಸಂಸ್ಥೆಯನ್ನು ಸ್ಥಾಪಿಸಿ ನೇತ್ರಹೀನ (ಅಂಧ)ಮಕ್ಕಳಿಗೆ ಸ್ವಾವಲಂಬಿಗಳಾಗುವಂತೆ ಮಾಡುವ ಪವಿತ್ರ ಕೆಲಸದಲ್ಲಿ ತೊಡಗಿದ್ದಾರೆ. ಬಿಹಾರದ ಮುಝಫರ್‍ಪುರದ ರೈತ ಮಹಿಳೆ ರಾಜ್‍ಕುಮಾರಿ ದೇವಿಯವರ ಕಥೆ ಬಹಳ ಪ್ರೇರಣೆಯನ್ನು ನೀಡುವಂಥದ್ದು. ಮಹಿಳೆಯರ ಸಶಕ್ತೀಕರಣ ಮತ್ತು ಕೃಷಿಯನ್ನು ಲಾಭದಾಯಕವಾಗಿಸುವ ನಿಟ್ಟಿನಲ್ಲಿ ಒಂದು ದೃಷ್ಟಾಂತವನ್ನು ಸೃಷ್ಟಿಸಿದ್ದಾರೆ. ಈ ರೈತ ಮಹಿಳೆ/ಕಿಸಾನ್ ಚಾಚಿ ತಮ್ಮ ಪ್ರಾಂತ್ಯದ 300 ಮಹಿಳೆಯರನ್ನು ಸ್ವಸಹಾಯ ಗುಂಪುಗಳಿಗೆ ಸೇರಿಸಿದರು. ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಪ್ರೇರೇಪಿಸಿದರು. ಅವರು ಗ್ರಾಮದ ಮಹಿಳೆಯರಿಗೆ ಕೃಷಿ ಜೊತೆಗೆ ಉದ್ಯೋಗ ಸೃಷ್ಟಿಯ ಹಲವಾರು ಪರಿಕರಗಳ ಬಗ್ಗೆ ತರಬೇತಿ ನೀಡಿದ್ದಾರೆ. ವಿಶೇಷವೆಂದರೆ ಅವರು ಕೃಷಿ ಜೊತೆಗೆ ತಂತ್ರಜ್ಞಾನ ಅಳವಡಿಸಿಕೊಳ್ಳುವ ಕೆಲಸ ಮಾಡಿದ್ದಾರೆ. ದೇಶಬಾಂಧವರೇ, ಬಹುಶಃ ಪ್ರಥಮ ಬಾರಿಗೆ ಪದ್ಮ ಪುರಸ್ಕøತರಲ್ಲಿ 12 ಕೃಷಿಕರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ. ಸಾಮಾನ್ಯವಾಗಿ ಕೃಷಿ ಜಗತ್ತಿಗೆ ಸೇರಿದ ಬಹಳ ಕಡಿಮೆ ಜನರು ಮತ್ತು ಸ್ವತಃ ಕೃಷಿ ಕೈಗೊಳ್ಳುವ ಕಡಿಮೆ ಮಂದಿ ಪದ್ಮಶ್ರೀ ಪಟ್ಟಿಯಲ್ಲಿದ್ದಾರೆ. ಇದು ಬದಲಾಗುತ್ತಿರುವ ಭಾರತದ ನೈಜ ಚಿತ್ರವಾಗಿದೆ.
 
ನನ್ನ ಪ್ರಿಯ ದೇಶವಾಸಿಗಳೇ, ಕೆಲ ದಿನಗಳಿಂದ ನನಗೆ ಭಾಸವಾಗುತ್ತಿರುವ ಒಂದು ಹೃದಯಸ್ಪರ್ಶಿ ಅನುಭವವನ್ನು ಇಂದು ನಾನು ನಿಮ್ಮೆಲ್ಲರ ಜೊತೆ ಹಂಚಿಕೊಳ್ಳಬಯಸುತ್ತೇನೆ. ಈ ದಿನಗಳಲ್ಲಿ ದೇಶದ ಯಾವುದೇ ಭಾಗಕ್ಕೆ ಹೋದರೂ ಅಲ್ಲಿ ಆಯುಷ್ಮಾನ್ ಭಾರತ ಯೋಜನೆಯಡಿ ಬರುವ PMJAY ಅಂದರೆ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯ ಕೆಲ ಫಲಾನುಭವಿಗಳನ್ನು ಭೇಟಿಯಾಗುವ ಪ್ರಯತ್ನ ಮಾಡುತ್ತೇನೆ. ಅದರಲ್ಲಿ ಕೆಲವರೊಂದಿಗೆ ಮಾತನಾಡುವ ಅವಕಾಶವೂ ದೊರೆಯಿತು. ಏಕಾಂಗಿ ತಾಯಿ ಮತ್ತು ಅವಳ ಮಕ್ಕಳು ಹಣದ ಅಭಾವದಿಂದ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಈ ಯೋಜನೆಯಿಂದ ಅವಳಿಗೆ ಚಿಕಿತ್ಸೆ ದೊರೆಯಿತು ಮತ್ತು ಆರೋಗ್ಯವಂತಳಾದಳು. ಶ್ರಮಪಟ್ಟು ತನ್ನ ಕುಟುಂಬವನ್ನು ಸಲಹುವ ಮನೆಯ ಯಜಮಾನ ಅಪಘಾತಕ್ಕೆ ಗುರಿಯಾಗಿ ಕೆಲಸ ಮಾಡಲಾಗುತ್ತಿರಲಿಲ್ಲ. ಈ ಯೋಜನೆಯಿಂದ ಅವನಿಗೆ ಲಾಭವಾಯಿತು ಹಾಗೂ ಮತ್ತೆ ಆತ ಆರೋಗ್ಯವಂತನಾಗಿ ಹೊಸ ಜೀವನವನ್ನು ಆರಂಭಿಸಿದ.
 
ಸೋದರ ಸೋದರಿಯರೇ ಕಳೆದ 5 ತಿಂಗಳಲ್ಲಿ ಸುಮಾರು 12 ಲಕ್ಷ ಬಡ ಕುಟುಂಬಗಳು ಈ ಯೋಜನೆಯ ಲಾಭ ಪಡೆದಿವೆ. ಇದರಿಂದ ಬಡವರ ಜೀವನದಲ್ಲಿ ಎಷ್ಟು ಮಹತ್ವಪೂರ್ಣ ಪರಿವರ್ತನೆಯಾಗುತ್ತಿದೆ ಎಂಬುದನ್ನು ನಾನು ಕಂಡುಕೊಂಡಿದ್ದೇನೆ. ಇಂಥ ಹಣವಿಲ್ಲದೆ ಚಿಕಿತ್ಸೆ ಪಡೆಯಲಾಗದ ಯಾವುದೇ ಬಡ ವ್ಯಕ್ತಿಯ ಬಗ್ಗೆ ನಿಮಗೆ ತಿಳಿದಿದ್ದರೆ, ನೀವೆಲ್ಲರೂ ಅವರಿಗೆ ಈ ಯೋಜನೆ ಬಗ್ಗೆ ಖಂಡಿತ ತಿಳಿಸಿ. ಈ ಯೋಜನೆ ಅಂಥ ಬಡವರಿಗಾಗಿಯೇ ಮೀಸಲಾಗಿದೆ.
 
ನನ್ನ ಪ್ರಿಯ ದೇಶಬಾಂಧವರೇ, ಶಾಲೆಗಳಲ್ಲಿ ಇನ್ನೇನು ಪರೀಕ್ಷೆಗಳು ಆರಂಭಗೊಳ್ಳಲಿವೆ. ದೇಶಾದ್ಯಂತ ಬೇರೆ ಬೇರೆ ಶಿಕ್ಷಣ ಮಂಡಳಿಗಳು 10 ಮತ್ತು 12 ನೇ ತರಗತಿಯ ಪರೀಕ್ಷಾ ಪ್ರಕ್ರಿಯೆಯನ್ನು ಆರಂಭಿಸಲಿದ್ದಾರೆ. ಪರೀಕ್ಷೆ ನೀಡಲಿರುವ ಎಲ್ಲ ವಿದ್ಯಾರ್ಥಿಗಳಿಗೆ, ಪಾಲಕರಿಗೆ ಮತ್ತು ಎಲ್ಲ ಶಿಕ್ಷಕರಿಗೆ ಹಾರ್ದಿಕ ಶುಭ ಹಾರೈಕೆಗಳು.
 
ಕೆಲ ದಿನಗಳ ಹಿಂದೆ ದಿಲ್ಲಿಯಲ್ಲಿ ‘ಪರೀಕ್ಷಾ ಪೆ ಚರ್ಚಾ’ ಎಂಬ ಒಂದು ಬೃಹತ್ ಆಯೋಜನೆಯನ್ನು ಟೌನ್ ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಟೌನ್ ಹಾಲ್ ಕಾರ್ಯಕ್ರಮದಲ್ಲಿ ತಂತ್ರಜ್ಞಾನದ ಮೂಲಕ ದೇಶ ವಿದೇಶಗಳಿಂದ ಕೋಟ್ಯಾಂತರ ವಿದ್ಯಾರ್ಥಿಗಳ ಜೊತೆ ಅವರ ಪೋಷಕರು ಹಾಗೂ ಶಿಕ್ಷಕರ ಜೊತೆ ಮಾತನಾಡುವ ಅವಕಾಶ ದೊರೆಯಿತು. ‘ಪರೀಕ್ಷಾ ಪೆ ಚರ್ಚಾ’ ದ ವೈಶಿಷ್ಟ್ಯವೆಂದರೆ ಇಲ್ಲಿ ಪರೀಕ್ಷೆ ಕುರಿತಾದ ವಿಭಿನ್ನ ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ವಿದ್ಯಾರ್ಥಿಗಳಿಗೆ ಖಂಡಿತವಾಗಿಯೂ ಲಾಭದಾಯಕವಾಗಬಲ್ಲ ಹಲವಾರು ಅಂಶಗಳು ಬೆಳಕಿಗೆ ಬಂದವು. ಎಲ್ಲ ವಿದ್ಯಾರ್ಥಿಗಳು ಅವರ ಪೋಷಕರು ಹಾಗೂ ಶಿಕ್ಷಕರು ಯು ಟ್ಯೂಬ್ ನಲ್ಲಿ ಮುದ್ರಿತ ಕಾರ್ಯಕ್ರಮವನ್ನು ಪೂರ್ತಿ ವೀಕ್ಷಿಸಬಹುದಾಗಿದೆ. ಆದ್ದರಿಂದ ಮುಂಬರುವ ಪರೀಕ್ಷೆ ಎದುರಿಸುತ್ತಿರುವ ನನ್ನ ಎಲ್ಲ ಪರೀಕ್ಷಾ ಯೋಧರಿಗೆ ಅನಂತ ಶುಭ ಹಾರೈಕೆಗಳು.
 
ನನ್ನ ಪ್ರಿಯ ದೇಶಬಾಂಧವರೆ, ಭಾರತದ ವಿಷಯ ಬಂದಾಗ ಹಬ್ಬಗಳ ಬಗ್ಗೆ ಮಾತನಾಡದೇ ಇರಲು ಸಾಧ್ಯವೇ. ಬಹುಶಃ ನಮ್ಮ ದೇಶದಲ್ಲಿ ಯಾವುದೇ ಮಹತ್ವವಿಲ್ಲದ, ಯಾವ ಹಬ್ಬವೂ ಇಲ್ಲದ ದಿನವೇ ಇಲ್ಲ. ಏಕೆಂದರೆ ಸಾವಿರಾರು ವರ್ಷಗಳ ಪುರಾತನ ಸಂಸ್ಕøತಿಯ ಬಳುವಳಿ ನಮ್ಮ ಬಳಿಯಿದೆ. ಕೆಲ ದಿನಗಳ ನಂತರ ಮಹಾಶಿವರಾತ್ರಿಯ ಆಚರಣೆ ಬರಲಿದೆ ಮತ್ತು ಈ ಬಾರಿ ಶಿವರಾತ್ರಿ ಸೋಮವಾರವಿದೆ ಹಾಗೂ ಶಿವರಾತ್ರಿ ಸೋಮವಾರವಿದೆ ಎಂದಾದಲ್ಲಿ ನಮ್ಮ ಮನದಲ್ಲಿ ಅದಕ್ಕೆ ವಿಶೇಷ ಮಹತ್ವ ಮೂಡುತ್ತದೆ. ಈ ಶಿವರಾತ್ರಿಯ ಪವಿತ್ರ ದಿನದಂದು ನಿಮ್ಮೆಲ್ಲರಿಗೂ ಅನಂತ ಅನಂತ ಶುಭ ಹಾರೈಕೆಗಳು.
 
ನನ್ನ ಪ್ರಿಯ ದೇಶವಾಸಿಗಳೇ, ಕೆಲ ದಿನಗಳ ಹಿಂದೆ ನಾನು ಕಾಶಿಗೆ ಹೋಗಿದ್ದೆ. ಅಲ್ಲಿ ನನಗೆ ದಿವ್ಯಾಂಗ ಸೋದರ ಸೋದರಿಯರೊಂದಿಗೆ ಸಮಯ ಕಳೆಯುವ ಅವಕಾಶ ಲಭಿಸಿತು. ಅವರೊಂದಿಗೆ ಬಹಳಷ್ಟು ವಿಷಯಗಳ ಕುರಿತು ಚರ್ಚೆ ನಡೆಯಿತು ಮತ್ತು ಅವರ ಆತ್ಮವಿಶ್ವಾಸ ಖಂಡಿತ ಪ್ರಭಾವಶಾಲಿಯಾಗಿತ್ತು ಮತ್ತು ಪ್ರೇರಣೆ ನೀಡುವಂಥದ್ದಾಗಿತ್ತು. ಮಾತುಕತೆ ವೇಳೆ ಅವರಲ್ಲೊಬ್ಬ ಪ್ರಜ್ಞಾವಂತ ಯುವಕನೊಬ್ಬನ ಜೊತೆ ನಾನು ಮಾತನಾಡುತ್ತಿದ್ದಾಗ, ನಾನೊಬ್ಬ stage artist ಎಂದು ಆತ ಹೇಳಿದ. ನಾನು ಮನರಂಜನಾ ಕಾರ್ಯಕ್ರಮಗಳಲ್ಲಿ ಮಿಮಿಕ್ರಿ ಮಾಡುತ್ತೇನೆ ಎಂದನು. ಅದಕ್ಕೆ ಆತನಿಗೆ ನೀನು ಯಾರ ಮಿಮಿಕ್ರಿ ಮಾಡುತ್ತೀಯ? ಎಂದು ಕೇಳಿದೆ. ಅದಕ್ಕೆ ಆತ ತಾನು ಪ್ರಧಾನ ಮಂತ್ರಿಯವರ ಮಿಮಿಕ್ರಿ ಮಾಡುತ್ತೇನೆ ಎಂದು ಹೇಳಿದ. ಹಾಗಾದರೆ ಸ್ವಲ್ಪ ನನಗೂ ಮಾಡಿ ತೋರಿಸಿ ಎಂದು ಕೇಳಿದಾಗ ನನಗೆ ಬಹಳ ಆಶ್ಚರ್ಯವಾಯಿತು. ‘ಮನದ ಮಾತಿನಲಿ’್ಲ ನಾನು ಹೇಗೆ ಮಾತನಾಡುತ್ತೇನೆಯೋ ಹಾಗೆ ಅವರು ಅನುಕರಣೆಯನ್ನು ಮಾಡಿದರು. ಜನರು ಕೇವಲ ‘ಮನದ ಮಾತನ್ನು ಕೇಳುವುದೇ ಅಲ್ಲದೆ ಅನೇಕ ಸಂದರ್ಭಗಳಲ್ಲಿ ಅದನ್ನು ನೆನಪಿಸಿಕೊಳ್ಳುತ್ತಾರೆ ಎಂಬುದನ್ನು ಕೇಳಿ ನನಗೆ ಬಹಳ ಸಂತೋಷವಾಯಿತು. ನಾನು ಆ ದಿವ್ಯಾಂಗ ಯುವಕನ ಪ್ರಾವೀಣ್ಯತೆಯನ್ನು ಕಂಡು ನಿಜವಾಗಿ ಪ್ರಭಾವಿತನಾದೆ.
 
ನನ್ನ ಪ್ರಿಯದೇಶಬಾಂಧವರೇ ‘ಮನದ ಮಾತು’ ಕಾರ್ಯಕ್ರಮದ ಮೂಲಕ ನಿಮ್ಮೆಲ್ಲರನ್ನು ಸಂಪರ್ಕಿಸುವುದು ನನಗೊಂದು ಅದ್ಭುತ ಅನುಭವವಾಗಿದೆ. ರೇಡಿಯೋ ಮಾಧ್ಯಮದ ಮೂಲಕ ನಾನು ಕೋಟ್ಯಾಂತರ ಕುಟುಂಬಗಳೊಂದಿಗೆ ಪ್ರತಿ ತಿಂಗಳು ಸಂಪರ್ಕಿಸುತ್ತೇನೆ. ಎಷ್ಟೋ ಸಾರಿ ನಿಮ್ಮೊಂದಿಗೆ ಮಾತನಾಡುತ್ತಾ, ನಿಮ್ಮ ಪತ್ರಗಳನ್ನು ಓದುತ್ತಾ, ನಿಮ್ಮ ದೂರವಾಣಿ ಸಂದೇಶಗಳನ್ನು ಕೇಳುತ್ತಾ ನೀವು ನನ್ನನ್ನು ನಿಮ್ಮ ಕುಟುಂಬದ ಸದಸ್ಯನೆಂದೇ ಪರಿಗಣಿದ್ದೀರಿ ಎಂಬಂತೆ ನನಗೆ ಭಾಸವಾಗುತ್ತದೆ. ಇದು ನನಗೆ ಅತ್ಯಂತ ಆಹ್ಲಾದಕರ ಅನುಭವ ನೀಡಿದೆ.
 
ಸ್ನೇಹಿತರೆ, ಚುನಾವಣೆ ಪ್ರಜಾಪ್ರಭುತ್ವದ ಅತ್ಯಂತ ದೊಡ್ಡ ಉತ್ಸವವಾಗಿದೆ. ಮುಂದಿನ 2ತಿಂಗಳು ನಾವೆಲ್ಲರೂ ಚುನಾವಣೆ ಕೆಲಸಗಳಲ್ಲಿ ನಿರತವಾಗಿರುತ್ತೇವೆ. ನಾನೂ ಸಹ ಈ ಚುನಾವಣೆಯ ಅಭ್ಯರ್ಥಿಯಾಗಿರುತ್ತೇನೆ. ಆರೋಗ್ಯವಂತ ಪ್ರಜಾಪ್ರಭುತ್ವದ ಪರಂಪರೆ ಮತ್ತು ಗೌರವದ ದೃಷ್ಟಿಯಿಂದ ಮುಂದಿನ ಮನದ ಮಾತು ಕಾರ್ಯಕ್ರಮ ಮೇ ತಿಂಗಳ ಕೊನೆಯ ಭಾನುವಾರ ಇರಲಿದೆ. ಅಂದರೆ ಮಾರ್ಚ್, ಏಪ್ರೀಲ್ ಮತ್ತು ಪೂರ್ಣ ಮೇ ತಿಂಗಳುಗಳ ನಮ್ಮೆಲ್ಲ ಭಾವನೆಗಳನ್ನು ನಾನು ಚುನಾವಣೆಯ ನಂತರ ಒಂದು ಹೊಸ ವಿಶ್ವಾಸದೊಂದಿಗೆ ನಿಮ್ಮ ಆಶೀರ್ವಾದದ ಶಕ್ತಿಯೊಂದಿಗೆ ಮತ್ತೊಮ್ಮೆ ‘ಮನದ ಮಾತಿನ’ ಮೂಲಕ ನಮ್ಮ ಮಾತುಕತೆಯ ಶೃಂಖಲೆಯನ್ನು ಆರಂಭಿಸುತ್ತೇನೆ ಮತ್ತು ವರ್ಷಗಳುದ್ದಕ್ಕೂ ನಿಮ್ಮೊಂದಿಗೆ ಮನದ ಮಾತುಗಳನ್ನಾಡುತ್ತಲೇ ಇರುತ್ತೇನೆ. ಮತ್ತೊಮ್ಮೆ ನಿಮ್ಮೆಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು
 
*****