ಪಿಎಂಇಂಡಿಯಾ
ಸಾರ್ವಜನಿಕ, ಸರಕಾರಿ ವಾಸ್ತವ್ಯದ ಮನೆಗಳಲ್ಲಿ ಅನಧಿಕೃತವಾಗಿ ವಾಸ್ತವ್ಯ ಹೂಡಿರುವವರ ವಿರುದ್ದ ಕ್ರಮ ಕೈಗೊಳ್ಳುವ ಅಂಗವಾಗಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು “ಸಾರ್ವಜನಿಕ ಆವರಣಗಳ (ಅನಧಿಕೃತ ವಾಸ್ತವ್ಯ ತೆರವು) ತಿದ್ದುಪಡಿ ವಿಧೇಯಕ , 2019 ರ ಮಂಡನೆಗೆ ತನ್ನ ಅನುಮೋದನೆ ನೀಡಿತು.
ಪರಿಣಾಮ:
ಈ ತಿದ್ದುಪಡಿಗಳು ಸರಕಾರಿ ನಿವಾಸಗಳನ್ನು ಅನಧಿಕೃತವಾಗಿ ಆಕ್ರಮಿಸಿಕೊಂಡು ವಾಸವಾಗಿರುವವರನ್ನು ಸುಲಲಿತವಾಗಿ ಮತ್ತು ತ್ವರಿತವಾಗಿ ತೆರವು ಮಾಡಿ , ಆ ಖಾಲಿ ನಿವಾಸಗಳನ್ನು ಕಾಯುವವರ ಪಟ್ಟಿಯಲ್ಲಿರುವವರಿಗೆ ಹಿರಿತನ ಆಧಾರದಲ್ಲಿ ಅರ್ಹರಿಗೆ ಲಭ್ಯವಾಗುವಂತೆ ಮಾಡಲಿವೆ.
ಇದು ನಿವಾಸಗಳ ಸೌಲಭ್ಯಗಳನ್ನು ಪಡೆಯುವಲ್ಲಿ ಇರುವ ಕಾಯುವಿಕೆಯ ಅವಧಿಯನ್ನು ಕಡಿಮೆ ಮಾಡಲಿದೆ.
ಪ್ರಭಾವ- ಪರಿಣಾಮಗಳು:
ಹೊಸ ವಿಧೇಯಕವು “ ಸಾರ್ವಜನಿಕ ಆವರಣಗಳ (ಅನಧಿಕೃತ ವಾಸ್ತವ್ಯ ಯಾ ಅತಿಕ್ರಮಣ ತೆರವು ) ತಿದ್ದುಪಡಿ ವಿಧೇಯಕ , ೨೦೧೭ರ ಬದಲಿಗೆ ಜಾರಿಗೆ ಬರಲಿದೆ.
ಇದು ಬರಲಿರುವ ಸಂಸತ್ತಿನ ಅಧಿವೇಶನದಲ್ಲಿ ಮಂಡನೆಯಾಗಲಿದೆ.
ಅನುಷ್ಟಾನ:
ಈ ವಿಧೇಯಕವು ಸಾರ್ವಜನಿಕ ಆವರಣಗಳ (ಅನಧಿಕೃತ ವಾಸ್ತವ್ಯ ತೆರವು ) ಕಾಯ್ದೆ , 1971 ರ ಸೆಕ್ಷನ್ 2, ಸೆಕ್ಷನ್ 3, ಮತ್ತು ಸೆಕ್ಷನ್ 7 ಗಳಿಗೆ ತಿದ್ದುಪಡಿಯನ್ನು ಅಪೇಕ್ಷಿಸುತ್ತದೆ. ಸೆಕ್ಷನ್ 2 ರ ನಿಬಂಧನೆ (fb) ಗೆ ಮುಂಚಿತವಾಗಿ ನಿಬಂಧನೆ (fa ) ಯನ್ನು ಸೇರ್ಪಡೆ ಮಾಡುವ ಮತ್ತು ಸೆಕ್ಷನ್ 3 ರಲ್ಲಿ ಸೆಕ್ಷನ್ 3 A ಬಳಿಕ ಹೊಸ ಸೆಕ್ಷನ್ 3 B ಯನ್ನು ಸೇರಿಸುವ ಹಾಗು ಸೆಕ್ಷನ್ 7 ರಲ್ಲಿ ಉಪಸೆಕ್ಷನ್ 3 ರ ಬಳಿಕ ಹೊಸ ಉಪಸೆಕ್ಷನ್ 3 A ಯನ್ನು ಸಾರ್ವಜನಿಕ ಆವರಣಗಳ (ಅನಧಿಕೃತ ವಾಸ್ತವ್ಯ ತೆರವು ) ಕಾಯ್ದೆ, 1971 ಕ್ಕೆ ಸೇರಿಸುತ್ತದೆ.
ಉದ್ದೇಶಿತ ತಿದ್ದುಪಡಿಗಳು ಎಸ್ಟೇಟ್ ಅಧಿಕಾರಿಗೆ ನಿವಾಸಗಳಿಂದ ಅನಧಿಕೃತ ವಾಸ್ತವ್ಯವನ್ನು ಸಾರಾಸಗಟಾಗಿ ತೆರವು ಮಾಡಿಸುವ ಪ್ರಕ್ರಿಯೆಗಳನ್ನು ಜಾರಿ ಮಾಡಲು ಅವಕಾಶ ಮಾಡಿಕೊಡುತ್ತವೆ. ಮತ್ತು ಕಾನೂನು ಜಾರಿ ಅವಧಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಾನಿ ಶುಲ್ಕವನ್ನು ವಿಧಿಸಲು ಅನುವು ಮಾಡಿಕೊಡುತ್ತವೆ.
ಈ ವಿಧೇಯಕವು ಸರಕಾರಿ ನಿವಾಸಗಳಲ್ಲಿ ಅನಧಿಕೃತವಾಗಿ ವಾಸವಾಗಿರುವವರನ್ನು ತ್ವರಿತವಾಗಿ ತೆರವು ಮಾಡಿಸಲು ಮತ್ತು ಅರ್ಹರಿಗೆ ನಿವಾಸಗಳ ಲಭ್ಯತೆಯನ್ನು ಹೆಚ್ಚಿಸಲು ಅನುಕೂಲ ಮಾಡಿಕೊಡುತ್ತದೆ.
ಹಿನ್ನೆಲೆ:
ಭಾರತ ಸರಕಾರವು ಪಿ.ಪಿ.ಇ. ಕಾಯ್ದೆ 1971 ರ ಪ್ರಸ್ತಾವನೆಗಳ ಅನ್ವಯ ಸರಕಾರಿ ನಿವಾಸಗಳಲ್ಲಿ ಅನಧಿಕೃತವಾಗಿ ವಾಸವಾಗಿರುವವರನ್ನು ತೆರವು ಮಾಡಬೇಕಾಗಿರುತ್ತದೆ. ಆದರೆ ಈ ಒಕ್ಕಲೆಬ್ಬಿಸುವಿಕೆ ಯಾ ತೆರವು ಪ್ರಕ್ರಿಯೆ ಅಸಹಜವಾಗಿ ಧೀರ್ಘಾವಧಿಯನ್ನು ತೆಗೆದುಕೊಳ್ಳುತ್ತಿದೆ ಮತ್ತು ಆ ಮೂಲಕ ಹೊಸಬರಿಗೆ ಸರಕಾರಿ ನಿವಾಸಗಳ ಲಭ್ಯತೆಯನ್ನು ಕಡಿಮೆ ಮಾಡುತ್ತಿದೆ.
ಪಿ.ಪಿ.ಇ. ಕಾಯ್ದೆ 1971 ನ್ನು ನ್ನು ಪಿ.ಪಿ.ಇ. ತಿದ್ದುಪಡಿ ವಿಧೇಯಕ 2015 ಎಂದು ತಿದ್ದುಪಡಿ ಮಾಡಲಾಗಿದ್ದು, ತೆರವು ಪ್ರಕ್ರಿಯೆ 5 ರಿಂದ 7 ವಾರಗಳ ಕಾಲ ತೆಗೆದುಕೊಳ್ಳುತ್ತದೆ .ಆದರೆ ಈ ಪ್ರಕ್ರಿಯೆ ಇನ್ನೂ ಹೆಚ್ಚಿನ ಕಾಲಾವಧಿ ತೆಗೆದುಕೊಳ್ಳುತ್ತಿರುವುದರಿಂದ , ಅನಧಿಕೃತ ತೆರವು ವರ್ಷದವರೆಗೂ ಮುಂದೆ ಹೋಗುತ್ತಿದೆ. ಪ್ರಸ್ತಾವಿತ ವಿಧೇಯಕದಡಿಯಲ್ಲಿ ಸರಕಾರಿ ಅಧಿಕಾರಿ ನೋಟೀಸು ಜಾರಿ, ಕಾರಣ ಕೇಳಿ ನೋಟೀಸು, ತನಿಖೆಗಳಂತಹ ಪ್ರಕ್ರಿಯೆಗಳನ್ನು ನಡೆಸಬೇಕಾಗಿಲ್ಲ. ಅಧಿಕಾರಿಗಳು ಸಾರಾಸಗಟಾಗಿ ತೆರವು ಪ್ರಕ್ರಿಯೆಯನ್ನು ಆರಂಭಿಸಬಹುದು.
ಈ ನಿರ್ಧಾರವು ಸರಕಾರದ ಪಾರದರ್ಶಕತೆ ಮತ್ತು ದೇಶದ ನಾಗರಿಕರಿಗೆ ಅಡೆ –ತಡೆ ರಹಿತ ಆಡಳಿತ ನೀಡುವ ಬದ್ಧತೆಯ ಪ್ರತೀಕವಾಗಿದೆ.