ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯ ಮೇಲಿನ ಚರ್ಚೆಗೆ ಉತ್ತರ ನೀಡಿದರು. ಚರ್ಚೆಯಲ್ಲಿ ಭಾಗಿಯಾಗಿದ್ದಕ್ಕಾಗಿ ಮತ್ತು ಕೊಡುಗೆ ನೀಡಿದ್ದಕ್ಕಾಗಿ ಮೇಲ್ಮನೆಯ ಸದಸ್ಯರಿಗೆ ಅವರು ಧನ್ಯವಾದ ಅರ್ಪಿಸಿದರು. ರಾಜ್ಯಸಭೆಯ ಸದಸ್ಯ ದಿವಂಗತ ಶ್ರೀ ಮದನ್ ಲಾಲ್ ಸೈನಿ ಅವರಿಗೆ ಸಂತಾಪ ಸೂಚಿಸಿದರು.
2019ರ ಲೋಕಸಭೆ ಚುನಾವಣೆಯ ಫಲಿತಾಂಶ ಸ್ಥಿರತೆಗಾಗಿ ಜನತೆಯ ಆಶಯವನ್ನು ಬಿಂಬಿಸುತ್ತದೆ ಎಂದರು. ವಿವಿಧ ರಾಜ್ಯಗಳಲ್ಲಿ ಕೂಡ ಸ್ಥಿರ ಸರ್ಕಾರದ ಆಯ್ಕೆಯ ಪ್ರವೃತ್ತಿ ಈಗ ಗೋಚರಿಸುತ್ತಿದೆ ಎಂದು ತಿಳಿಸಿದರು.
ಇತ್ತೀಚಿನ ಲೋಕಸಭಾ ಚುನಾವಣೆ ವೇಳೆಯ ಚುನಾವಣಾ ಪ್ರಕ್ರಿಯೆಯನ್ನು ಶ್ಲಾಘಿಸಿದ ಪ್ರಧಾನಮಂತ್ರಿಗಳು, ಇಡೀ ಪ್ರಕ್ರಿಯೆಯ ಗಾತ್ರ ಅಪಾರವಾದದ್ದು ಎಂದರು. “ಪ್ರಜಾಪ್ರಭುತ್ವ ಕಳೆದು ಹೋಯಿತು’ ಎಂದು ಕೆಲವು ನಾಯಕರು ಹೇಳಿರುವುದು ದುರ್ದೈವ ಎಂದರು. ಮತದಾರರ ಪ್ರಜ್ಞೆಯನ್ನು ಪ್ರಶ್ನಿಸದಂತೆ ಅವರು ಸದಸ್ಯರಿಗೆ ತಿಳಿಸಿದರು. “ನಮ್ಮ ಚುನಾವಣೆ ಪ್ರಕ್ರಿಯೆ ಮತ್ತು ಪ್ರಜಾಪ್ರಭುತ್ವವನ್ನು ಗೌರವಿಸುವುದು ಅತಿ ಮುಖ್ಯ’ಎಂದು ಪ್ರಧಾನಮಂತ್ರಿ ತಿಳಿಸಿದರು.
ವಿದ್ಯುನ್ಮಾನ ಮತಯಂತ್ರ(ಇವಿಎಂ)ಗಳ ಬಗ್ಗೆ ಎತ್ತಿರುವ ಪ್ರಶ್ನೆಗಳನ್ನು ಪ್ರಧಾನಮಂತ್ರಿ ಖಂಡಿಸಿದರು. ಇವಿಎಂಗಳು ಮತಗಟ್ಟೆ ವಶ ಮತ್ತು ಹಿಂಸಾಚಾರವನ್ನು ತಗ್ಗಿಸಿವೆ ಎಂದು ಹೇಳಿದರು.“ಈಗ, ಮತದಾನ ಪ್ರಮಾಣ ಹೆಚ್ಚಳ ಸುದ್ದಿಯಾಗಿದೆ. ಇದು ಪ್ರಜಾಪ್ರಭುತ್ವಕ್ಕೆ ಆರೋಗ್ಯಕರ ಸಂಕೇತ” ಎಂದು ಪ್ರಧಾನಮಂತ್ರಿ ಹೇಳಿದರು. ವಿವಿಪ್ಯಾಟ್ ಗಳು ವಿದ್ಯುನ್ಮಾನ ಮತಯಂತ್ರಗಳ ವಿಶ್ವಾಸಾರ್ಹತೆಯನ್ನು ಬಲಪಡಿಸಿವೆ ಎಂದು ಅವರು ಉಲ್ಲೇಖಿಸಿದರು.
ಚುನಾವಣೆ ಸುಧಾರಣೆಗಳ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿ, ಭಾರತದಲ್ಲಿ ಚುನಾವಣಾ ಪ್ರಕ್ರಿಯೆಗಳನ್ನು ಬಲಪಡಿಸಲು ಸುಧಾರಣೆಗಳು ನಿಶ್ಚಿತವಾಗಿ ಅಗತ್ಯ ಎಂದು ಹೇಳಿದರು. ಈ ನಿಟ್ಟಿನಲ್ಲಿ, ಒಂದು ದೇಶ ಒಂದು ಚುನಾವಣೆಯಂಥ ಪ್ರಸ್ತಾಪಗಳ ಬಗ್ಗೆ ಚರ್ಚಿಸಿ, ಚುನಾವಣೆ ಸುಧಾರಣೆಗೆ ಸಲಹೆ ನೀಡುವುದು ಅತಿ ಮುಖ್ಯ ಎಂದರು. ಕೇಂದ್ರ ಸರ್ಕಾರ ಪ್ರಕ್ರಿಯೆಯನ್ನು ಸರಳೀಕರಿಸುವತ್ತ ಶ್ರಮಿಸುತ್ತದಿ, ಇದರಿಂದ ಭಾರತದ ಜನರಿಗೆ ಪ್ರಯೋಜನವಾಗಲಿದೆ ಎಂದರು. ಕೇಂದ್ರ ಸರ್ಕಾರ ಶ್ರೀಸಾಮಾನ್ಯರ ಸಬಲೀಕರಣದಲ್ಲಿ ನಂಬಿಕೆ ಇಟ್ಟಿದೆ ಎಂದು ಅವರು ಹೇಳಿದರು. ವಸತಿ, ವಿದ್ಯುತ್, ಅಡುಗೆ ಅನಿಲ ಸಂಪರ್ಕ, ಶೌಚಾಲಯ ಇತ್ಯಾದಿ ಖಾತ್ರಿ ಪಡಿಸುವ ನಿಟ್ಟಿನಲ್ಲಿ ಸರ್ಕಾರದ ಕಾರ್ಯವನ್ನು ಒತ್ತಿ ಹೇಳಿದರು.
ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕ ರಾಷ್ಟ್ರವಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಶ್ರಮಿಸುವಂತೆ ಶ್ರೀ ಮೋದಿ ಎಲ್ಲರಿಗೂ ಮನವಿ ಮಾಡಿದರು. ಧನಾತ್ಮಕ ಮನೋಸ್ಥಿತಿಯೊಂದಿಗೆ ಶ್ರಮಿಸುವಂತೆ ರಾಜಕೀಯ ಪಕ್ಷಗಳಿಗೆ ಕರೆ ನೀಡಿದ ಅವರು, ಈ ಗುರಿಯ ಸಾಧನೆಗೆ ಕಲ್ಪನೆ ಮತ್ತು ಸಲಹೆ ನೀಡುವಂತೆ ಕೋರಿದರು.
ಜಾರ್ಖಂಡ್ ನಲ್ಲಿನ ಇತ್ತೀಚಿನ ಘಟನೆಯಿಂದ ದುಃಖಿತರಾಗಿರುವುದಾಗಿ ಪ್ರಧಾನಮಂತ್ರಿಯವರು ತಿಳಿಸಿದರು. ತಪ್ಪಿತಸ್ಥರಿಗೆ ದೇಶದ ಕಾನೂನು ರೀತ್ಯ ಗರಿಷ್ಠಮಟ್ಟದ ಶಿಕ್ಷೆ ಆಗಬೇಕು ಎಂದು ಹೇಳಿದರು. ಒಂದು ಘಟನೆಗಾಗಿ ಇಡೀ ರಾಜ್ಯವನ್ನೇ ದೂಷಿಸುವುದು ಸರಿಯಲ್ಲ ಎಂದರು.ಹಿಂಸಾಚಾರದ ಹಿಂದಿನ ದುಷ್ಕರ್ಮಿಗಳನ್ನು ಕಠಿಣವಾಗಿ ಎದುರಿಸಬೇಕು ಮತ್ತು ಅದೇ ರೀತಿ ಯಾವುದೇ ರಾಜ್ಯದಲ್ಲಿ ಅಂತಹ ಎಲ್ಲ ಘಟನೆ ಸಂಭವಿಸಿದರೂಕಾನೂನು ರೀತ್ಯ ವ್ಯವಹರಿಸಬೇಕು ಎಂದು ಹೇಳಿದರು.
ಆಯುಷ್ಮಾನ್ ಭಾರತ್ ಅನ್ನು ಬಲಪಡಿಸುವ ಕಾಲ ಬಂದಿದೆ ಎಂದು ಪ್ರಧಾನಮಂತ್ರಿ ಹೇಳಿದರು.“ನಮ್ಮ ಬಡಜನರು ಉನ್ನತ ಗುಣಮಟ್ಟದ ಮತ್ತು ಕೈಗೆಟಕುವ ದರದಲ್ಲಿ ಚಿಕಿತ್ಸೆ ಪಡೆಯಬೇಕು” ಎಂದು ಬಯಸುವುದಾಗಿ ತಿಳಿಸಿದರು.
ಈಶಾನ್ಯ ರಾಜ್ಯಗಳ ಮತ್ತು ಮಹತ್ವಾಕಾಂಕ್ಷೆಯ ಜಿಲ್ಲೆಗಳ ಅಭಿವೃದ್ಧಿಗೆ ಗಮನ ಹರಿಸಬೇಕು ಎಂದು ಪ್ರಧಾನಮಂತ್ರಿ ಹೇಳಿದರು.
ಸಹಕಾರ ಒಕ್ಕೂಟ ವ್ಯವಸ್ಥೆಯ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, “ಪ್ರಾದೇಶಿಕ ಆಕಾಂಕ್ಷೆಗಳೊಂದಿಗೆ ರಾಷ್ಟ್ರೀಯ ಮಹತ್ವಾಕಾಂಕ್ಷೆ’’ಹೊಂದುವುದು ಅತಿ ಮುಖ್ಯ ಎಂದು ಪ್ರತಿಪಾಸಿದರು.
ರಾಷ್ಟ್ರವನ್ನು ಬಲಿಷ್ಠ ಮತ್ತು ಉತ್ತಮಗೊಳಿಸಲು ಏನು ಸಾಧ್ಯವೋ ಅದೆಲ್ಲವನ್ನೂ ಮಾಡುವಂತೆ ಪ್ರಧಾನಿ ಮನವಿ ಮಾಡಿದರು. ಭಾರತವನ್ನು ಹೊಸ ಎತ್ತರಕ್ಕೆ ತೆಗೆದುಕೊಂಡು ಹೋಗಲು ಮತ್ತು ನವ ಭಾರತ ನಿರ್ಮಿಸುವ ನಿಟ್ಟಿನಲ್ಲಿ ಒಗ್ಗೂಡಿ ಶ್ರಮಿಸುವಂತೆ ಪ್ರತಿಯೊಬ್ಬರಿಗೂ ತಿಳಿಸಿದರು.
****
Speaking in the Rajya Sabha https://t.co/1zcKaIxKRr
— Narendra Modi (@narendramodi) June 26, 2019