ಪಿಎಂಇಂಡಿಯಾ

ಮಹಾರಾಷ್ಟ್ರ ರಾಜ್ಯ ಗ್ರಾಮೀಣ ಜೀವನೋಪಾಯ ಮಿಷನ್ (ಯುಎಂಇಡಿ) ಔರಂಗಾಬಾದ್ನಲ್ಲಿ ಆಯೋಜಿಸಿರುವ ರಾಜ್ಯಮಟ್ಟದ ಮಹಿಳಾ ಸಕ್ಷಂ ಮೇಳಾವಾ ಅಥವಾ ಸ್ವಯಂ ಸಹಾಯ ಗುಂಪುಗಳ ಸಶಕ್ತ ಮಹಿಳಾ ಸಭೆಯನ್ನು ಉದ್ದೇಶಿಸಿ ಇಂದು ಪ್ರಧಾನಿ ಮಾತನಾಡಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿಯವರು, ಸ್ವಸಹಾಯ ಗುಂಪುಗಳ ಮೂಲಕ ತಮ್ಮನ್ನು ಮತ್ತು ತಮ್ಮ ಸಮುದಾಯಗಳನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಕೊಡುಗೆ ನೀಡಿದ ಸಬಲೀಕೃತ ಮಹಿಳೆಯರನ್ನು ಶ್ಲಾಘಿಸಿದರು.
ಔರಂಗಾಬಾದ್ ಕೈಗಾರಿಕಾ ನಗರ (AURIC) ವು ಔರಂಗಾಬಾದ್ ಪಟ್ಟಣದ ಪ್ರಮುಖ ಭಾಗವಾಗಲಿದೆ ಮತ್ತು ಮುಂದಿನ ದಿನಗಳಲ್ಲಿ ದೇಶದ ಪ್ರಮುಖ ಕೈಗಾರಿಕಾ ಕೇಂದ್ರವಾಗಲಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟರು. ಔರಂಗಾಬಾದ್, ದೆಹಲಿ-ಮುಂಬೈ ಕೈಗಾರಿಕಾ ಕಾರಿಡಾರ್ನ ಪ್ರಮುಖ ವಿಭಾಗವಾಗಿದೆ ಎಂದು ಪ್ರಧಾನಿ ಹೇಳಿದರು. AURIC ಯಲ್ಲಿ ಹೂಡಿಕೆ ಮಾಡುವ ಸಂಸ್ಥೆಗಳು ಸಾಕಷ್ಟು ಉದ್ಯೋಗಗಳನ್ನು ಸೃಷ್ಟಿಸುತ್ತವೆ ಎಂದು ಪ್ರಧಾನಿ ಹೇಳಿದರು.
ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ 8 ಕೋಟಿ ಎಲ್ಪಿಜಿ ಸಂಪರ್ಕಗಳ ಮುಂಗಡ ಸಾಧನೆಯನ್ನು ಪ್ರಸ್ತಾವಿಸಿದ ಪ್ರಧಾನಿಯವರು, ಐವರು ಫಲಾನುಭವಿಗಳಿಗೆ ಎಲ್ಪಿಜಿ ಸಂಪರ್ಕಗಳನ್ನು ವಿತರಿಸಿದರು. ಗುರಿಯ ಗಡುವಿಗಿಂತ ಏಳು ತಿಂಗಳು ಮುಂಚಿತವಾಗಿ ಇದನ್ನು ಸಾಧಿಸಲಾಗಿದೆ ಎಂದು ಹೇಳಿದ ಪ್ರಧಾನಿಯವರು, ಮಹಾರಾಷ್ಟ್ರವೊಂದರಲ್ಗಲೇ 44 ಲಕ್ಷ ಉಜ್ವಲ ಸಂಪರ್ಕಗಳನ್ನು ನೀಡಲಾಗಿದೆ ಎಂದು ತಿಳಿಸಿದರು. ಇದನ್ನು ಸಾಧ್ಯವಾಗಿಸಿದ ಸಹೋದ್ಯೋಗಿಗಳಿಗೆ ನಮಸ್ಕರಿಸಿದ ಪ್ರಧಾನಿಯವರು, ಚುಲ್ಲಾಗಳಿಂದ ಹೊರಹೊಮ್ಮುವ ಹೊಗೆಯಿಂದ ಬಳಲುತ್ತಿರುವ ಮಹಿಳೆಯರ ಆರೋಗ್ಯದ ಬಗ್ಗೆ ಇರುವ ನಮ್ಮ ಕಾಳಜಿಯಿಂದಾಗಿ ನಾವು ಅದನ್ನು ಸಾಧಿಸಲು ಸಾಧ್ಯವಾಯಿತು ಎಂದು ಹೇಳಿದರು.
ಸಂಪರ್ಕಗಳನ್ನು ಮಾತ್ರ ನೀಡಲಾಗಿಲ್ಲ, ಬದಲಿಗೆ ಗ್ರಾಮೀಣ ಭಾರತದಲ್ಲಿ 10,000 ಹೊಸ ಎಲ್ಪಿಜಿ ವಿತರಕರನ್ನು ಒಳಗೊಂಡ ಸಮಗ್ರ ಮೂಲಸೌಕರ್ಯವನ್ನು ನೇಮಿಸಲಾಗಿದೆ ಎಂದು ಪ್ರಧಾನಿ ಹೇಳಿದರು. “ಹೊಸ ಬಾಟ್ಲಿಂಗ್ ಘಟಕಗಳನ್ನು ನಿರ್ಮಿಸಲಾಗಿದೆ. ಬಂದರುಗಳ ಬಳಿ ಟರ್ಮಿನಲ್ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ ಮತ್ತು ಪೈಪ್ಲೈನ್ ನೆಟ್ವರ್ಕ್ ಅನ್ನು ವಿಸ್ತರಿಸಲಾಗಿದೆ. 5 ಕೆಜಿ ಸಿಲಿಂಡರ್ಗಳನ್ನು ಉತ್ತೇಜಿಸಲಾಗುತ್ತಿದೆ. ಪೈಪ್ ಅನಿಲವನ್ನು ಸಹ ತಲುಪಿಸಲಾಗುತ್ತಿದೆ. ಎಲ್ಪಿಜಿ ಸಂಪರ್ಕವಿಲ್ಲದೆ ಒಂದೇ ಒಂದು ಮನೆ ಉಳಿದಿಲ್ಲ ಎಂದು ನಾವು ಖಾತ್ರಿಪಡಿಸಿಕೊಳ್ಳಲು ಬಯಸುತ್ತೇವೆ ” ಎಂದರು.
ನೀರನ್ನು ತರಲು ಕಷ್ಟಪಡುವ ತೊಂದರೆಯಿಂದ ಮಹಿಳೆಯರನ್ನು ಮುಕ್ತಗೊಳಿಸುವ ಸಲುವಾಗಿ ಜಲ ಜೀವನ್ ಮಿಷನ್ ಪ್ರಾರಂಭಿಸಲಾಗಿದೆ ಎಂದು ಪ್ರಧಾನಿ ಹೇಳಿದರು. “ಜಲ ಜೀವನ್ ಮಿಷನ್, ನೀರನ್ನು ಉಳಿಸುವುದು ಮತ್ತು ಮನೆ ಬಾಗಿಲಿಗೆ ನೀರು ತಲುಪಿಸುವುದನ್ನು ಒಳಗೊಂಡಿರುತ್ತದೆ. ಇದಕ್ಕಾಗಿ ಮುಂದಿನ ಐದು ವರ್ಷಗಳಲ್ಲಿ ಸರ್ಕಾರ 3.5 ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಿದೆ ” ಎಂದು ಅವರು ತಿಳಿಸಿದರು.
ಶೌಚಾಲಯ ಮತ್ತು ನೀರು ಭಾರತೀಯ ಮಹಿಳೆಯರು ಎದುರಿಸುತ್ತಿರುವ ಎರಡು ಬಹು ದೊಡ್ಡ ಸಮಸ್ಯೆಗಳು ಎಂಬ ಶ್ರೀ ರಾಮ್ ಮನೋಹರ್ ಲೋಹಿಯಾ ಅವರ ಹೇಳಿಕೆಯನ್ನು ನೆನಪಿಸಿಕೊಂಡ ಪ್ರಧಾನಿಯವರು, ಈ ಎರಡು ಸಮಸ್ಯೆಗಳನ್ನು ಬಗೆಹರಿಸಿದರೆ ಮಹಿಳೆಯರು ದೇಶವನ್ನು ಮುನ್ನಡೆಸಬಹುದು ಎಂದರು. “ಮರಾಠವಾಡ ಪ್ರದೇಶವು ಜಲ ಜೀವನ್ ಮಿಷನ್ನಿಂದ ಹೆಚ್ಚಿನ ಲಾಭವನ್ನು ಪಡೆಯಲಿದೆ. ದೇಶದ ಮೊದಲ ವಾಟರ್ ಗ್ರಿಡ್ ಅನ್ನು ಮರಾಠವಾಡದಲ್ಲಿ ಮಾಡಲಾಗುವುದು; ಇದು ಈ ಪ್ರದೇಶದಲ್ಲಿ ನೀರಿನ ಲಭ್ಯತೆಯನ್ನು ಹೆಚ್ಚಿಸುತ್ತದೆ ” ಎಂದರು.
ಸರ್ಕಾರಿ ಯೋಜನೆಗಳಲ್ಲಿ ಸಾರ್ವಜನಿಕ ಭಾಗವಹಿಸುವಿಕೆಯ ಮಹತ್ವವನ್ನು ತಿಳಿಸಿದ ಪ್ರಧಾನಮಂತ್ರಿಯವರು, 60 ವರ್ಷ ದಾಟಿದ ನಂತರ ಸರ್ಕಾರ ಪ್ರತಿ ರೈತರಿಗೆ ಪಿಂಚಣಿ ನೀಡುತ್ತಿದೆ ಎಂದರು. ಪ್ರಾಣಿಗಳ ಲಸಿಕೆಗೂ ಇದೇ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು.
ಆಜೀವಿಕಾ – ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಮಹಿಳೆಯರಿಗೆ ಸಂಪಾದಿಸುವ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಪ್ರಧಾನಿ ಹೇಳಿದರು. ಸ್ವಸಹಾಯ ಸಂಘಗಳಿಗೆ ಬಡ್ಡಿ ಸಹಾಯಧನ ನೀಡಲು 2019 ರ ಕೇಂದ್ರ ಬಜೆಟ್ ವಿಶೇಷ ನಿಬಂಧನೆಗಳನ್ನು ಮಾಡಿದೆ ಎಂದು ಅವರು ಹೇಳಿದರು; ಸ್ವಸಹಾಯ ಸಂಘಗಳಿಗೆ ಸೇರಿದ ಜನ ಧನ್ ಖಾತೆದಾರರಿಗೆ 5000 ರೂಪಾಯಿಗಳ ಓವರ್ಡ್ರಾಫ್ಟ್ ಸೌಲಭ್ಯವೂ ದೊರೆಯಲಿದೆ, ಇದರಿಂದಾಗಿ ಅವರು ಖಾಸಗಿ ಲೇವಾದೇವಿಗಾರರನ್ನು ಅವಲಂಬಿಸುವ ಅಗತ್ಯತೆ ಇರುವುದಿಲ್ಲ ಎಂದು ಪ್ರಧಾನಿ ಹೇಳಿದರು.
ಮಹಿಳೆಯರ ಸ್ವಸಹಾಯ ಗುಂಪುಗಳ ಸಬಲೀಕರಣಕ್ಕಾಗಿ ಇತರ ಉಪಕ್ರಮಗಳ ಕುರಿತು ಮಾತನಾಡಿದ ಪ್ರಧಾನಿಯವರು: “ಮುದ್ರಾ ಯೋಜನೆಯಡಿ, ಪ್ರತಿ ಸ್ವಸಹಾಯ ಸಂಘದಲ್ಲಿ ಒಬ್ಬ ಮಹಿಳೆ 1 ಲಕ್ಷ ರೂಪಾಯಿಗಳ ಸಾಲವನ್ನು ಪಡೆಯುತ್ತಾರೆ; ಇದು ಹೊಸ ಉದ್ಯಮಗಳನ್ನು ಪ್ರಾರಂಭಿಸಲು ಮತ್ತು ಅವರ ವ್ಯವಹಾರವನ್ನು ಬೆಳೆಸಲು ಅವರಿಗೆ ಸಹಾಯ ಮಾಡುತ್ತದೆ. ಇದುವರೆಗೆ 20 ಕೋಟಿ ರೂಪಾಯಿ ಮೌಲ್ಯದ ಸಾಲವನ್ನು ವಿತರಿಸಲಾಗಿದ್ದು, ಅದರಲ್ಲಿ 14 ಕೋಟಿ ರೂಪಾಯಿ ಮಹಿಳೆಯರಿಗೆ ನೀಡಲಾಗಿದೆ. ಮಹಾರಾಷ್ಟ್ರದಲ್ಲಿ 1.5 ಕೋಟಿ ಮುದ್ರಾ ಫಲಾನುಭವಿಗಳಿದ್ದು, ಇವರಲ್ಲಿ 1.25 ಕೋಟಿ ಮಹಿಳೆಯರಿದ್ದಾರೆ” ಎಂದರು.
ಸಕಾರಾತ್ಮಕ ಸಾಮಾಜಿಕ ಬದಲಾವಣೆಯನ್ನು ತರುವಲ್ಲಿ ಮಹಿಳೆಯರ ಪಾತ್ರವನ್ನು ಪ್ರಧಾನಿಯವರು ಪ್ರಮುಖವಾಗಿ ಹೇಳಿದರು. “ನೀವು ಸಾಮಾಜಿಕ ಬದಲಾವಣೆಯ ಪ್ರಮುಖ ಚಾಲಕರು. ಹೆಣ್ಣು ಮಗುವನ್ನು ಉಳಿಸಲು, ಶಿಕ್ಷಣ ನೀಡಲು ಮತ್ತು ರಕ್ಷಿಸಲು ಅನೇಕ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ನಾವು ಸಾಮಾಜಿಕ ದೃಷ್ಟಿಕೋನದಲ್ಲಿ ಬದಲಾವಣೆಗಳನ್ನು ಮಾಡಬೇಕಾಗಿದೆ, ಇದರಲ್ಲಿ ಮಹಿಳೆಯರ ಪಾತ್ರ ಮುಖ್ಯವಾಗಿದೆ. ತ್ರಿವಳಿ ತಲಾಖ್ ನ ಕೆಟ್ಟ ಅಭ್ಯಾಸದಿಂದ ಮುಸ್ಲಿಂ ಮಹಿಳೆಯರನ್ನು ರಕ್ಷಿಸಲಾಗುತ್ತಿದೆ. ಈ ಬಗ್ಗೆ ನೀವು ಜಾಗೃತಿ ಮೂಡಿಸಬೇಕು ” ಎಂದು ತಿಳಿಸಿದರು.
ಭಾರತದ ಚಂದ್ರಯಾನ-2 ಮಿಷನ್ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿಯವರು “ನಮ್ಮ ವಿಜ್ಞಾನಿಗಳು ದೊಡ್ಡ ಮೈಲಿಗಲ್ಲು ಸಾಧಿಸಲು ನಿರ್ಧರಿಸಿದ್ದರು. ಅಂದು ನಾನೂ ಅವರೊಂದಿಗಿದ್ದೆ. ಅವರು ಭಾವೋದ್ವೇಗಗೊಂಡಿದ್ದರು. ಆದರೆ ಅವರು ಅದಮ್ಯ ಮನೋಭಾವವನ್ನೂ ಹೊಂದಿದ್ದಾರೆ. ಅವರು ತಪ್ಪುಗಳಿಂದ ಕಲಿಯಲು ಬಯಸಿದ್ದಾರೆ ” ಎಂದರು.
ಭಾರತವು ಶೀಘ್ರದಲ್ಲೇ ತನ್ನನ್ನು ಬಯಲು ಮಲವಿಸರ್ಜನೆ ಮುಕ್ತ ಎಂದು ಘೋಷಿಸಿಕೊಳ್ಳಲಿದೆ ಎಂದು ಪ್ರಧಾನಿ ಹೇಳಿದ್ದಾರೆ.
ಸರ್ಕಾರವು ಮನೆಗಳನ್ನು ಮಾತ್ರವಲ್ಲದೆ ಮನೆಗಳಿಗೆ ಬೇಕಾದ್ದೆಲ್ಲವನ್ನೂ ಒದಗಿಸಲು ಬಯಸಿದೆ ಎಂದು ಪ್ರಧಾನಿ ಹೇಳಿದರು: “ನಾವು ನಿಮ್ಮ ಕನಸುಗಳ ಮನೆಯನ್ನು ನಿಮಗೆ ನೀಡಲು ಬಯಸುತ್ತೇವೆ, ನಾಲ್ಕು ಗೋಡೆಗಳನ್ನು ಹೊಂದಿರುವ ರಚನೆಯನ್ನು ಮಾತ್ರವಲ್ಲ. ಅದರಲ್ಲಿ ಹಲವು ಸೌಲಭ್ಯಗಳನ್ನು ನೀಡಲು ನಾವು ಬಯಸುತ್ತೇವೆ. ನಾವು ಯಾವುದೇ ಸ್ಥಿರ ಸೂತ್ರವಿಲ್ಲದೆ ಕೆಲಸ ಮಾಡಿದ್ದೇವೆ ಮತ್ತು ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ನಾವು ಮನೆಗಳನ್ನು ನಿರ್ಮಿಸಿದ್ದೇವೆ. ವಿವಿಧ ಯೋಜನೆಗಳ ಅಡಿಯಲ್ಲಿ ಒದಗಿಸಲಾದ ಪ್ರಯೋಜನಗಳನ್ನು ಸಂಯೋಜಿಸುವ ಮೂಲಕ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ನೀಡಲು ನಾವು ಪ್ರಯತ್ನಿಸಿದ್ದೇವೆ. ಈಗಾಗಲೇ 1 ಕೋಟಿ, 80 ಲಕ್ಷ ಮನೆಗಳನ್ನು ನಿರ್ಮಿಸಲಾಗಿದೆ. ನಾವು 2022 ರಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುವಾಗ, ಎಲ್ಲರಿಗೂ ಪಕ್ಕಾ ಮನೆ ನೀಡಲು ಪ್ರಯತ್ನಿಸುತ್ತೇವೆ ಎಂದು ನನಗೆ ವಿಶ್ವಾಸವಿದೆ”
ಮನೆಗಳ ಪೂರೈಕೆ ಕುರಿತು ಮುಂದುವರಿದು ಮಾತನಾಡಿದ ಪ್ರಧಾನಿಯವರು: “1.5 ಲಕ್ಷ ರೂಪಾಯಿಗಳವರೆಗಿನ ಗೃಹ ಸಾಲಕ್ಕೆ ಬಡ್ಡಿ ವಿನಾಯಿತಿ ನೀಡಲಾಗಿದೆ, ಇದರಿಂದ ಮಧ್ಯಮ ವರ್ಗದವರು ತಮ್ಮ ಮನೆಗಳನ್ನು ಹೊಂದಬಹುದು. ನಿರ್ಮಾಣದ ವಿವಿಧ ಹಂತಗಳಲ್ಲಿನ ಮನೆಗಳ ಫೋಟೋಗಳನ್ನು ವೆಬ್ಸೈಟ್ನಲ್ಲಿ ಹಾಕಲಾಗುವುದು, ಪಾರದರ್ಶಕತೆ ಮತ್ತು ನಿಧಿಯ ಸೋರಿಕೆಯನ್ನು ತೆಗೆದುಹಾಕಲಾಗಿದೆ. ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಪಾರದರ್ಶಕತೆ ತರಲು ನಾವು ರೇರಾ ಕಾಯ್ದೆಯನ್ನು ತಂದಿದ್ದೇವೆ; ಈ ಕಾಯ್ದೆಯ ಅಧಿಸೂಚನೆಯನ್ನು ಈಗ ಅನೇಕ ರಾಜ್ಯಗಳಲ್ಲಿ ಹೊರಡಿಸಲಾಗಿದೆ, ಇದರ ಅಡಿಯಲ್ಲಿ ಲಕ್ಷಾಂತರ ಫ್ಲ್ಯಾಟ್ಗಳನ್ನು ನಿರ್ಮಿಸಲಾಗುತ್ತಿದೆ ” ಎಂದು ತಿಳಿಸಿದರು.
ಸರ್ಕಾರವು ಅಭಿವೃದ್ಧಿಗಾಗಿ ಎಲ್ಲಾ ಯೋಜನೆಗಳನ್ನು ಒಟ್ಟುಗೂಡಿಸಲು ಬಯಸಿದೆ ಎಂದು ಹೇಳಿದ ಪ್ರಧಾನಿಯವರು, ಸರ್ಕಾರದ ಯೋಜನೆಗಳ ಯಶಸ್ಸಿಗೆ ಜನರು ಸಹಕರಿಸುತ್ತಾರೆ ಎಂದು ಆಶಿಸಿದರು.
ಇಂದು ಶ್ರೀ ಉಮಾಜಿ ನಾಯಕ್ ಅವರ ಜನ್ಮ ವಾರ್ಷಿಕೋತ್ಸವ. ಈ ಸಂದರ್ಭದಲ್ಲಿ ಪ್ರಧಾನಿಯವರು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು, ಅವರೊಬ್ಬ ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಧಾನಿಯವರು “ಗ್ರಾಮೀಣ ಮಹಾರಾಷ್ಟ್ರದ ಪರಿವರ್ತನೆ”ಪುಸ್ತಕವನ್ನು ಬಿಡುಗಡೆ ಮಾಡಿದರು.
ಮಹಾರಾಷ್ಟ್ರದ ರಾಜ್ಯಪಾಲರಾದ ಶ್ರೀ ಭಗತ್ ಸಿಂಗ್ ಕೋಶ್ಯಾರಿ; ಮಹಾರಾಷ್ಟ್ರದ ಮುಖ್ಯಮಂತ್ರಿ ಶ್ರೀ ದೇವೇಂದ್ರ ಫಡ್ನವೀಸ್; ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಹಾಗೂ ರೈಲ್ವೆ ಸಚಿವ ಶ್ರೀ ಪಿಯೂಷ್ ಗೋಯಲ್, ಮಹಾರಾಷ್ಟ್ರ ಗ್ರಾಮೀಣಾಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಶ್ರೀಮತಿ. ಪಂಕಜಾ ಮುಂಡೆ ಮತ್ತು ಮಹಾರಾಷ್ಟ್ರ ಸರ್ಕಾರದ ಕೈಗಾರಿಕೆ ಮತ್ತು ಗಣಿಗ ಸಚಿವ ಶ್ರೀ ಸುಭಾಷ್ ದೇಸಾಯಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Ujjwala beneficiaries cross 8 crore mark!
— Narendra Modi (@narendramodi) September 7, 2019
Aurangabad will always be remembered as the land where our commitment to provide smoke free kitchens to women crossed a special milestone! pic.twitter.com/aCmzrCUo1J
Centre committed to provide LPG connection to all families, says PMhttps://t.co/dfHQXcuRdv
— PMO India (@PMOIndia) September 8, 2019
via NaMo App pic.twitter.com/6acK0TBJJQ