Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಸ್ಮಾರಕ ರಾಷ್ಟ್ರಕ್ಕೆ ಸಮರ್ಪಣೆ ಮತ್ತು ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ವಾರಣಾಸಿಯಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಸ್ಮಾರಕವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು ಮತ್ತು ದೀನ್ ದಯಾಳ್ ಉಪಾಧ್ಯಾಯ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು. ಪ್ರಧಾನಿ ಅವರು, ವಾರಣಾಸಿ, ಉಜ್ಜಯನಿ ಮತ್ತು ಓಂಕಾರೇಶ್ವರದಲ್ಲಿರುವ ಮೂರು ಜ್ಯೋತಿರ್ಲಿಂಗ ಯಾತ್ರಾ ಕೇಂದ್ರಗಳಿಗೆ ಸಂಪರ್ಕ ಕಲ್ಪಿಸುವ ಮೂರನೇ ಕಾರ್ಪೊರೇಟ್ ರೈಲು ‘ಮಹಾಕಾಲ ಎಕ್ಸ್ ಪ್ರೆಸ್ ರೈಲಿ’ಗೆ ಹಸಿರು ನಿಶಾನೆ ತೋರಿದರು. ಪ್ರಧಾನಿ ಅವರು, 430 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಸರ್ಕಾರಿ ಆಸ್ಪತ್ರೆ ಸೇರಿದಂತೆ 36 ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು ಮತ್ತು 14 ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆಯನ್ನು ನೆರವೇರಿಸಿದರು.

ವಾರಣಾಸಿಯಲ್ಲಿ ದೀನ್ ದಯಾಳ್ ಉಪಾಧ್ಯಾಯ ಸ್ಮಾರಕ ಕೇಂದ್ರದಲ್ಲಿ ನೆರೆದಿದ್ದವರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಇಂದು ಈ ಪ್ರಾಂತ್ಯಕ್ಕೆ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಸ್ಮಾರಕ ಸ್ಥಳ ಸೇರ್ಪಡೆಯಾಗುವುದರೊಂದಿಗೆ ‘ಪದಾವ್’ ಹೆಸರಿಗೆ ಮತ್ತಷ್ಟು ಪ್ರಾಮುಖ್ಯತೆ ಬಂದಿದ್ದು, ಈ ಭಾಗದ ಅಭಿವೃದ್ಧಿಗೆ ನೆರವಾಗಿದೆ ಎಂದರು. ಇದು ಸೇವೆ, ತ್ಯಾಗ, ಅನ್ಯಾಯ ಮತ್ತು ಸಾರ್ವಜನಿಕ ಹಿತಾಸಕ್ತಿ ವಿಷಯಗಳು ಒಂದೆಡೆ ಸೇರುವ ತಾಣವಾಗಿ ಅಭಿವೃದ್ಧಿಗೊಳ್ಳಲಿದೆ. ಇಲ್ಲಿ ಸ್ಮಾರಕ ಸ್ಥಳವಿದೆ ಮತ್ತು ಹಸಿರು ಉದ್ಯಾನವನ ನಿರ್ಮಿಸಲಾಗಿದೆ ಎಂದ ಪ್ರಧಾನಮಂತ್ರಿ ಅವರು, ಇಲ್ಲಿ ಪ್ರತಿಷ್ಠಾಪಿಸಲಾಗಿರುವ ವೈಭವದ ಪ್ರತಿಮೆ, ದೀನ್ ದಯಾಳ್ ಜಿ ಅವರ ಚಿಂತನೆಗಳು ಮತ್ತು ತತ್ವಗಳನ್ನು ಪಾಲಿಸಲು ಹೊಸ ತಲೆಮಾರಿಗೆ ಸ್ಫೂರ್ತಿ ನೀಡುವುದನ್ನು ಮುಂದುವರಿಸಲಿದೆ ಎಂದರು.

ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜಿ ಅವರು, ನಮಗೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗಾಗಿ ಸ್ಪಂದಿಸುವ ಅಂತ್ಯೋದಯ ಮಾರ್ಗವನ್ನು ತೋರಿಸಿ ಕೊಟ್ಟಿದ್ದಾರೆ ಎಂದ ಪ್ರಧಾನಮಂತ್ರಿ ಅವರು, ಅವರ ಆದರ್ಶದಿಂದ ಸ್ಫೂರ್ತಿ ಪಡೆದ ನಾವು 21ನೇ ಶತಮಾನದಲ್ಲಿ ಅಂತ್ಯೋದಯಕ್ಕಾಗಿ ಕಾರ್ಯೋನ್ಮುಖವಾಗಿದ್ದೇವೆ ಎಂದು ಪ್ರಧಾನಮಂತ್ರಿ ಹೇಳಿದರು. ಈ ಪವಿತ್ರ ಸಂದರ್ಭದಲ್ಲಿ ಸುಮಾರು 1250 ಕೋಟಿ ರೂ. ಮೊತ್ತದ ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ಇದರಿಂದಾಗಿ ವಾರಣಾಸಿ ಸೇರಿದಂತೆ ಇಡೀ ಪೂರ್ವಾಂಚಲ ಪ್ರದೇಶಕ್ಕೆ ಅನುಕೂಲವಾಗಲಿದೆ ಎಂದು ಅವರು ಹೇಳಿದರು. “ಈ ಎಲ್ಲ ಯೋಜನೆಗಳು ಕಳೆದ 5 ವರ್ಷಗಳಿಂದೀಚೆಗೆ ಕಾಶಿ ಸೇರಿದಂತೆ ಇಡೀ ಪೂರ್ವಾಂಚಲದ ಪುನರುತ್ಥಾನಕ್ಕಾಗಿ ಕೈಗೊಂಡ ನಿರ್ಣಯದ ಭಾಗವಾಗಿದೆ. ಈ ವರ್ಷಗಳಲ್ಲಿ ವಾರಣಾಸಿ ಜಿಲ್ಲೆಯಲ್ಲಿ ಸುಮಾರು 25 ಸಾವಿರ ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳು ಪೂರ್ಣಗೊಂಡಿವೆ ಅಥವಾ ಪ್ರಗತಿಯಲ್ಲಿವೆ” ಎಂದು ಹೇಳಿದರು.

ರಸ್ತೆ, ಹೆದ್ದಾರಿ, ಜಲಮಾರ್ಗ, ರೈಲ್ವೆ ಮತ್ತು ವಿಶೇಷವಾಗಿ ಮೂಲಸೌಕರ್ಯಕ್ಕೆ ಸರ್ಕಾರ ಅಗ್ರ ಆದ್ಯತೆ ನೀಡಿದೆ ಎಂದು ಪ್ರಧಾನಮಂತ್ರಿ ಹೇಳಿದರು. “ಈ ಕೆಲಸ ಕಾರ್ಯಗಳು, ರಾಷ್ಟ್ರವನ್ನು ಅಭಿವೃದ್ಧಿಯಲ್ಲಿ ಮಾತ್ರ ಮುಂದೆ ಕೊಂಡೊಯ್ಯುತ್ತಿಲ್ಲ, ಜೊತೆಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ. ವಿಶೇಷವಾಗಿ ಪ್ರವಾಸೋದ್ಯಮ ಆಧರಿತ ಉದ್ಯೋಗಗಳು ಹೆಚ್ಚಾಗುತ್ತಿದ್ದು, ಕಾಶಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಹೆಚ್ಚಿನ ಮಾನವ ಸಂಪನ್ಮೂಲವಿದೆ” ಎಂದರು. ಕೆಲವು ದಿನಗಳ ಹಿಂದೆ ಶ್ರೀಲಂಕಾದ ಅಧ್ಯಕ್ಷರು ಇಲ್ಲಿಗೆ ಆಗಮಿಸಿದ್ದರು, ಇಲ್ಲಿನ ಆಧ್ಯಾತ್ಮಿಕ ವಾತಾವರಣವನ್ನು ಕಂಡು ಆಶ್ಚರ್ಯಚಕಿತರಾಗಿದ್ದರು ಎಂದು ಪ್ರಧಾನಮಂತ್ರಿ ಹೇಳಿದರು.

ಈ ಪವಿತ್ರ ಸಂದರ್ಭದಲ್ಲಿ ವಿಶ್ವನಾಥನ ನಗರಿಯಲ್ಲಿನ ಓಂಕಾರೇಶ್ವರ ಮತ್ತು ಮಹಾಕಾಲೇಶ್ವರ ಸಂಪರ್ಕಿಸುವ ಕಾಶಿ-ಮಹಾಕಾಲ ಎಕ್ಸ್ ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಲಾಯಿತು ಎಂದು ಪ್ರಧಾನಮಂತ್ರಿ ಹೇಳಿದರು. 2016ರ ದ್ವಿತೀಯಾರ್ಧದಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಇಂದು ಉದ್ಘಾಟಿಸಲಾಯಿತು ಎಂದರು. “ಕೇವಲ 21 ತಿಂಗಳಲ್ಲಿ 430 ಹಾಸಿಗೆಗಳ ಆಸ್ಪತ್ರೆ ಸಿದ್ಧವಾಗಿದೆ. ಇದು ಕಾಶಿ ಮತ್ತು ಪೂರ್ವಾಂಚಲದ ಜನರಿಗೆ ಸೇವೆ ನೀಡಲು ಸಜ್ಜಾಗಿದೆ” ಎಂದು ಹೇಳಿದರು.

ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜಿ ಅವರ ಸ್ವಾವಲಂಬನೆ ಮತ್ತು ಸ್ವಸಹಾಯ ಚಿಂತನೆಗಳಿಗೆ ಅನುಗುಣವಾಗಿ ಈ ಕೇಂದ್ರದಲ್ಲಿ ಎಲ್ಲ ಯೋಜನೆಗಳನ್ನು ರೂಪಿಸಲಾಗಿದೆ ಎಂದ ಪ್ರಧಾನಮಂತ್ರಿ ಅವರು, ಅವರ ಎಲ್ಲ ಆದರ್ಶಗಳನ್ನು ಸರ್ಕಾರದ ಯೋಜನೆಗಳು ಮತ್ತು ಸರ್ಕಾರದ ಸಂಸ್ಕೃತಿಯಲ್ಲಿ ಅಳವಡಿಸಿಕೊಳ್ಳಲು ನಿರಂತರ ಪ್ರಯತ್ನಗಳು ನಡೆದಿವೆ ಎಂದರು.

ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ತಲುಪಲು ಮತ್ತು ಅವರಿಗೆ ಅಭಿವೃದ್ಧಿಯ ಪ್ರಯೋಜನಗಳನ್ನು ದೊರಕಿಸಿಕೊಡಲು ಸರ್ಕಾರ ನಿರಂತರವಾಗಿ ಕಾರ್ಯೋನ್ಮುಖವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. “ಇದೀಗ ಪರಿಸ್ಥಿತಿ ಬದಲಾಗುತ್ತಿದೆ, ಈಗ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅಗ್ರ ಆದ್ಯತೆ ನೀಡಲಾಗುತ್ತಿದೆ” ಎಂದು ಅವರು ಹೇಳಿದರು.

**********