Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪಶ್ಚಿಮ ಬಂಗಾಳದಲ್ಲಿ ಹಲವು ರೈಲ್ವೆ ಯೋಜನೆಗಳನ್ನು ಉದ್ಘಾಟಿಸಿದ ಪ್ರಧಾನಮಂತ್ರಿ

ಪಶ್ಚಿಮ ಬಂಗಾಳದಲ್ಲಿ ಹಲವು ರೈಲ್ವೆ ಯೋಜನೆಗಳನ್ನು ಉದ್ಘಾಟಿಸಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪಶ್ಚಿಮ ಬಂಗಾಳದಲ್ಲಿ ನೊಪರಾ ಮತ್ತು ದಕ್ಷಿಣೇಶ್ವರ್ ನಡುವೆ ವಿಸ್ತರಿತ ಮೆಟ್ರೊ ರೈಲು ಮಾರ್ಗವನ್ನು ಉದ್ಘಾಟಿಸಿದರು ಮತ್ತು ಮಾರ್ಗದ ರೈಲು ಸೇವೆಗೆ ಹಸಿರು ನಿಶಾನೆ ತೋರಿದರು. ಅಲ್ಲದೆ, ಅವರು ಕಲೈಕುಂದ ಮತ್ತು ಝರಗ್ರಾಮ್ ನಡುವಿನ ಮೂರನೇ ಮಾರ್ಗವನ್ನೂ ಸಹ ಉದ್ಘಾಟಿಸಿದರು.

ಪೂರ್ವ ರೈಲ್ವೆಯ ಅಜೀಂಗಂಜ್ ನಿಂದ ಖರ್ ಗ್ರಾಘಾಟ್ ನಡುವಿನ ಡಬ್ಲಿಂಗ್ ಮಾರ್ಗವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಷ್ಟ್ರಕ್ಕೆ ಸಮರ್ಪಿಸಿದರು. ಅಲ್ಲದೆ ಅವರು ಡಾಂಕುನಿ ಮತ್ತು ಬರುಯಿಪಾರಾ ನಡುವಿನ ನಾಲ್ಕನೇ ಮಾರ್ಗ ಮತ್ತು ರಸೂಲ್ಪುರ್ ಮತ್ತು ಮಾಗ್ರಾ ನಡುವಿನ ಮೂರನೇ ಮಾರ್ಗವನ್ನು ಅವರು ರಾಷ್ಟ್ರಕ್ಕೆ ಸಮರ್ಪಿಸಿದರು.

ನಂತರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ಇಂದು ಲೋಕಾರ್ಪಣೆಗೊಳಿಸಿದ ಯೋಜನೆಗಳಿಂದಾಗಿ ಹೂಗ್ಲಿಯ ಸುತ್ತಮುತ್ತ ವಾಸಿಸುತ್ತಿರುವ ಲಕ್ಷಾಂತರ ಜನರ ಜೀವನ ಸುಗಮವಾಗಲಿದೆ ಎಂದರು. ದೇಶದಲ್ಲಿ ಉತ್ತಮ ಸಾರಿಗೆ ಸೌಕರ್ಯಗಳಿಂದಾಗಿ ಸ್ವಾವಲಂಬನೆ ಮತ್ತು ಆತ್ಮವಿಶ್ವಾಸದ ನಮ್ಮ ಸಂಕಲ್ಪ ಬಲವರ್ಧನೆಯಾಗಿದೆ ಎಂದರು. ಕೋಲ್ಕತ್ತಾ ಮಾತ್ರವಲ್ಲದೆ, ಹೂಗ್ಲಿ, ಹೌರಾ ಮತ್ತು ದಕ್ಷಿಣ 24 ಪರಗಣ ಜಿಲ್ಲೆಯ ಜನರಿಗೆ ಮೆಟ್ರೋ ಸೇವೆಗಳಿಂದ ಅನುಕೂಲವಾಗಲಿದೆ ಎಂದರು. ನೊಪರಾ ಮತ್ತು ದಕ್ಷಿಣೇಶ್ವರ್ ನಡುವಿನ ವಿಸ್ತರಿತ ಮೆಟ್ರೋ ರೈಲು ಯೋಜನೆ ಉದ್ಘಾಟನೆಯಿಂದ ಎರಡೂ ಸ್ಥಳಗಳ ನಡುವಿನ ಪ್ರಯಾಣದ ಅವಧಿ 90 ನಿಮಿಷಗಳಿಂದ 25 ನಿಮಿಷಕ್ಕೆ ಇಳಿಕೆಯಾಗಲಿದೆ. ಈ ಸೇವೆಗಳು ವಿದ್ಯಾರ್ಥಿಗಳು ಮತ್ತು ಕಾರ್ಮಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲಿವೆ ಎಂದರು.

ಮೆಟ್ರೋ ಅಥವಾ ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ನಿರ್ಮಿಸಿರುವ ರೈಲ್ವೆ ವ್ಯವಸ್ಥೆಗಳಲ್ಲಿ ಮೇಕ್ ಇನ್ ಇಂಡಿಯಾ ಸ್ಪಷ್ಟವಾಗಿ ಗೋಚರಿಸುತ್ತಿದ್ದು, ಅದರ ಪ್ರಭಾವ ಕಾಣಲಾಗುತ್ತಿದೆ ಎಂದು ಪ್ರಧಾನಮಂತ್ರಿ ಸಂತಸ ವ್ಯಕ್ತಪಡಿಸಿದರು. ರೈಲು ಮಾರ್ಗಗಳ ಅಳವಡಿಕೆಯಿಂದ ಹಿಡಿದು, ಆಧುನಿಕ ಲೋಕೋಮೋಟಿವ್ ವರೆಗೆ ಆಧುನಿಕ ರೈಲುಗಳಿಂದ ಹಿಡಿದು, ರೈಲು ಬೋಗಿಗಳವರೆಗೆ ಸರಕುಗಳು ಮತ್ತು ತಂತ್ರಜ್ಞಾನವನ್ನು ಬೃಹತ್ ಪ್ರಮಾಣದಲ್ಲಿ ದೇಶೀಯ ಉತ್ಪನ್ನಗಳನ್ನೇ ಬಳಕೆ ಮಾಡಲಾಗುತ್ತಿದೆ. ಇದರಿಂದಾಗಿ ಯೋಜನೆಯ ಅನುಷ್ಠಾನ ವೇಗ ಪಡೆದುಕೊಂಡಿದೆ ಮತ್ತು ನಿರ್ಮಾಣ ಗುಣಮಟ್ಟ ವೃದ್ಧಿಯಾಗಿದೆ.

ಪಶ್ಚಿಮಬಂಗಾಳ ದೇಶದ ಪ್ರಮುಖ ಸ್ವಾವಲಂಬಿ ಕೇಂದ್ರವಾಗಿ ರೂಪುಗೊಂಡಿದೆ ಮತ್ತು ಪಶ್ಚಿಮಬಂಗಾಳ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಅಂತಾರಾಷ್ಟ್ರೀಯ ವ್ಯಾಪಾರದ ಸಾಧ್ಯತೆಗಳು ವಿಪುಲವಾಗಿವೆ ಎಂದು ಪ್ರಧಾನಮಂತ್ರಿ ಹೇಳಿದರು. ಈ ಹೊಸ ರೈಲು ಮಾರ್ಗಗಳಿಂದಾಗಿ ಜೀವನ ಸುಲಭವಾಗಲಿದೆ ಮತ್ತು ಕೈಗಾರಿಕೆಗಳಿಗೆ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ ಎಂದು ಪ್ರಧಾನಮಂತ್ರಿ ಹೇಳಿದರು.

ಸಂಕ್ಷಿಪ್ತ ಹಿನ್ನೆಲೆ:

ಮೆಟ್ರೊ ರೈಲ್ವೆ ವಿಸ್ತರಣೆ

ನೊಪರಾ ಮತ್ತು ದಕ್ಷಿಣೇಶ್ವರ್ ನಡುವಿನ ವಿಸ್ತರಿತ ಮೆಟ್ರೋ ರೈಲು ಮಾರ್ಗದಲ್ಲಿ ಮೊದಲ ಸೇವೆಗಳಿಗೆ ಹಸಿರು ನಿಶಾನೆ ತೋರಲಾಗಿದ್ದು, ಅದರಿಂದಾಗಿ ಮಾರ್ಗದಲ್ಲಿ ರಸ್ತೆಯಲ್ಲಿನ ವಾಹನ ದಟ್ಟಣೆ ಇಳಿಕೆಯಾಗಿ ನಗರ ಸಂಚಾರ ಸುಧಾರಿಸಲಿದೆ. 4.1 ಕಿ.ಮೀ. ಉದ್ದದ ವಿಸ್ತರಿತ ಮಾರ್ಗವನ್ನು 464 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಕೇಂದ್ರ ಸರ್ಕಾರವೇ ಸಂಪೂರ್ಣ ಹಣ ನೀಡಿದೆ. ಈ ವಿಸ್ತರಿತ ಮಾರ್ಗದಿಂದಾಗಿ ಎರಡು ವಿಶ್ವವಿಖ್ಯಾತ ಕಾಳಿ ದೇವಾಲಯಗಳಿರುವ ಕಾಳಿಘಾಟ್ ಮತ್ತು ದಕ್ಷಿಣೇಶ್ವರ ದೇವಾಲಯಕ್ಕೆ ಲಕ್ಷಾಂತರ ಪ್ರವಾಸಿಗರು ಮತ್ತು ಭಕ್ತಾದಿಗಳು ಭೇಟಿ ನೀಡುವುದು ಸುಲಭವಾಗಲಿದೆ. ಬರಾನಗರ ಮತ್ತು ದಕ್ಷಿಣೇಶ್ವರದಲ್ಲಿ ಎರಡು ಹೊಸ ನಿಲ್ದಾಣಗಳನ್ನು ನಿರ್ಮಿಸಲಾಗಿದ್ದು, ಆಧುನಿಕ ಪ್ರಯಾಣಿಕ ಸೌಕರ್ಯಗಳು ಮತ್ತು ಭಿತ್ತಿಚಿತ್ರಗಳು, ಛಾಯಾಚಿತ್ರಗಳು, ಶಿಲ್ಪಗಳು ಮತ್ತು ಮೂರ್ತಿಗಳಿಂದ ವಿನ್ಯಾಸ ಮತ್ತು ಅಲಂಕಾರ ಮಾಡಲಾಗಿದೆ.  

ರೈಲು ಮಾರ್ಗಗಳ ಉದ್ಘಾಟನೆ:

ಕಲೈಕುಂದ ಮತ್ತು ಝರಗ್ರಾಮ್ ನಡುವೆ ಮೂರನೇ ಮಾರ್ಗ 30 ಕಿ.ಮೀ. ವ್ಯಾಪ್ತಿಯನ್ನು ಹೊಂದಿದ್ದು, ಇದು  ಆಗ್ನೇಯ ರೈಲ್ವೆ ಯೋಜನೆಯ ಖರಗ್ ಪುರ್-ಆದಿತ್ಯಪುರ್ ಮೂರನೇ ಮಾರ್ಗದ 132 ಕಿ.ಮೀ. ಉದ್ದದ ಭಾಗವಾಗಿದೆ. ಇದಕ್ಕೆ 1312 ಕೋಟಿ ರೂ. ಅಂದಾಜಿಸಲಾಗಿದ್ದು, ಆ ಹಣವನ್ನು ಬಿಡುಗಡೆ ಮಾಡಲಾಗಿದೆ. ಕಲೈಕುಂದ ಮತ್ತು ಝರಗ್ರಾಮ್ ನಡುವೆ ನಾಲ್ಕು ಹೊಸ ನಿಲ್ದಾಣಗಳನ್ನು ಮರು ಅಭಿವೃದ್ಧಿಗೊಳಿಸಿ ನಾಲ್ಕು ಹೊಸ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಆರು ಮೇಲ್ಸೇತುವೆಗಳನ್ನು ಮತ್ತು 11 ಹೊಸ ಫ್ಲಾಟ್ ಫಾರಂಗಳನ್ನು ನವೀಕರಿಸಲಾಗಿದೆ. ಲಭ್ಯವಿರುವ ಮೂಲಸೌಕರ್ಯ ವಿಸ್ತರಿಸಲಾಗಿದೆ. ಇದರಿಂದಾಗಿ ಹೌರಾ-ಮುಂಬೈ ಟ್ರಂಕ್ ಮಾರ್ಗದಲ್ಲಿ ಸರಕು ಸಾಗಾಣೆ ರೈಲುಗಳು ಮತ್ತು ಪ್ರಯಾಣಿಕರ ಸಂಚಾರಕ್ಕೆ ಯಾವುದೇ ಅಡೆತಡೆ ಇರುವುದಿಲ್ಲ.

ಹೌರಾ – ಬರ್ಧಮಾನ್ ಕಾರ್ಡ್ ಮಾರ್ಗದ ಡಾಂಕುನಿ ಮತ್ತು ಬರಾಯಿಪುರ(11.28) ಕಿ.ಮೀ. ನಾಲ್ಕನೇ ಮಾರ್ಗ ಹಾಗೂ ಹೌರಾ – ಬರ್ಧಮಾನ್ ಮುಖ್ಯ ಮಾರ್ಗದ ರಸೂಲ್ಪುರ್ ಮತ್ತು ಮಾಗ್ರಾ(42.42 ಕಿ.ಮೀ.) ಉದ್ದದ ಮೂರನೇ ಮಾರ್ಗಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಾಯಿತು. ಇವು ಕೋಲ್ಕತ್ತಾಕ್ಕೆ ಪ್ರಮುಖ ಹೆಬ್ಬಾಗಿಲುಗಳಾಗಿ ಸೇವೆ ಸಲ್ಲಿಸಲಿವೆ. ರಸೂಲ್ಪುರ್ ಮತ್ತು ಮಾಗ್ರಾ ನಡುವಿನ ಮೂರನೇ ಮಾರ್ಗವನ್ನು 759 ಕೋಟಿ ರೂ. ವೆಚ್ಚದಲ್ಲಿ ಮತ್ತು ಡಾಂಕುನಿ ಮತ್ತು ಬರಾಯಿಪುರ ನಡುವಿನ ನಾಲ್ಕನೇ ಮಾರ್ಗವನ್ನು 195 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಅಜೀಂಗಂಜ್ ಖರ್ ಗ್ರಾಘಾಟ್ ರೈಲು ಮಾರ್ಗ ಡಬ್ಲಿಂಗ್

ಪೂರ್ವ ರೈಲ್ವೆಯ ಹೌರಾ-ಬಂಡೇಲ್- ಅಜೀಂಗಂಜ್ ವಲಯದ ಭಾಗವಾಗಿರುವ ಅಜೀಂಗಂಜ್ ನಿಂದ ಖರ್ ಗ್ರಾಘಾಟ್ ವರೆಗಿನ ರೈಲು ಮಾರ್ಗದ ಡಬ್ಲಿಂಗ್ ಕಾರ್ಯಕ್ಕೆ 240 ಕೋಟಿ ರೂ. ವ್ಯಯ ಮಾಡಲಾಗಿದೆ.

ಯೋಜನೆಗಳಿಂದ ಪ್ರಯಾಣದ ಅವಧಿ ತಗ್ಗಲಿದೆ. ಉತ್ತಮ ಕಾರ್ಯಾಚರಣೆ ಖಾತ್ರಿಯಾಗಲಿದೆ ಹಾಗೂ ರೈಲು ಕಾರ್ಯಾಚರಣೆಗಳ ಸುರಕ್ಷತೆ ವೃದ್ಧಿಯಾಗಲಿದೆ ಮತ್ತು ಒಟ್ಟಾರೆ ಪ್ರದೇಶದ ಆರ್ಥಿಕ ಪ್ರಗತಿಗೆ ಉತ್ತೇಜನ ದೊರಕಲಿದೆ.

***