Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಅಂಡಮಾನ್‍ನಲ್ಲಿ ಪ್ರಧಾನಮಂತ್ರಿ

ಅಂಡಮಾನ್‍ನಲ್ಲಿ  ಪ್ರಧಾನಮಂತ್ರಿ

ಅಂಡಮಾನ್‍ನಲ್ಲಿ  ಪ್ರಧಾನಮಂತ್ರಿ

ಅಂಡಮಾನ್‍ನಲ್ಲಿ  ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರಿ ನರೇಂದ್ರ ಮೋದಿಯವರು ಇಂದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಪೋರ್ಟ್‍ಬ್ಲೇರ್‍ಗೆ ಭೇಟಿ ನೀಡಿದರು. 

 

ಪೋರ್ಟ್‍ಬ್ಲೇರ್‍ನಲ್ಲಿ ಅವರು ಹುತಾತ್ಮರಿಗೆ ಪುಷ್ಪಗುಚ್ಚ ಅರ್ಪಿಸಿ, ಸೆಲ್ಯುಲಾರ್ ಜೈಲಿಗೆ ಭೇಟಿ ನೀಡಿದರು. ಸೆಲ್ಯುಲಾರ್ ಜೈಲಿನಲ್ಲಿ ಅವರು ವೀರ್ ಸಾವರ್ಕರ್ ಮತ್ತಿತರ ಸ್ವಾತಂತ್ರ್ಯ ಹೋರಾಟಗಾರರಿದ್ದ ಕೋಣೆಗಳಿಗೆ ಭೇಟಿ ಕೊಟ್ಟರು. ಅವರು   ರಾಷ್ಟ್ರಧ್ವಜವನ್ನು ಹಾರಿಸಿ, ನೇತಾಜಿ ಸುಭಾಷ್‍ಚಂದ್ರ ಬೋಸ್ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು.

  

ನೇತಾಜಿ ಸುಭಾಚಂದ್ರ ಬೋಸ್ ಅವರು ತ್ರಿವರ್ಣ ಧ್ವಜ ಹಾರಿಸಿದ 75ನೇ ವರ್ಷಾಚರಣೆ ಅಂಗವಾಗಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿಯವರು, ಇದರ ಸ್ಮರಣಾರ್ಥ ಅಂಚೆ ಚೀಟಿ, ನಾಣ್ಯ ಬಿಡುಗಡೆ ಮಾಡಿದರು.

 

ಇಂಧನ, ಸಂಪರ್ಕ ಮತ್ತು ಆರೋಗ್ಯ ಕ್ಷೇತ್ರಗಳ ಹಲವಾರು ಅಭಿವೃದ್ಧಿ ಯೋಜನೆಗಳನ್ನೂ ಅವರು ಅನಾವರಣಗೊಳಿಸಿದರು.

 

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಕೇವಲ ಭಾರತದ ನೈಸರ್ಗಿಕ ಸೌಂದರ್ಯದ ಸಂಕೇತವಲ್ಲ, ಭಾರತೀಯರಿಗೆ ಪವಿತ್ರ ಕೇತ್ರಗಳಿದ್ದಂತೆ ಎಂದರು. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ನಮಗೆ ಸ್ವಾತಂತ್ರ್ಯ ಹೋರಾಟಗಾರರ ಸಾಮೂಹಿಕ ಹೋರಾಟವನ್ನು ನೆನಪಿಸುತ್ತವೆ ಎಂದರು.

 

ಈ ದ್ವೀಪಗಳ ಸಶಕ್ತೀಕರಣ ಮತ್ತು ಅಭಿವೃದ್ಧಿಗೆ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದ ಅವರು, ಇಂದು ಅನಾವರಣಗೊಳಿಸಿರುವ ಯೋಜನೆಗಳು ಶಿಕ್ಷಣ, ಆರೋಗ್ಯ, ಸಂಪರ್ಕ, ಪ್ರವಾಸೋದ್ಯಮ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಈ ಉದ್ದೇಶವನ್ನು ಮುಂದುವರಿಸಲಿವೆ ಎಂದರು.

 

ಸೆಲ್ಯುಲಾರ್ ಜೈಲು ಮತ್ತು ನೇತಾಜಿ ಸುಭಾಷ್‍ಚಂದ್ರ ಬೋಸ್ ಅವರು 75 ವರ್ಷಗಳ ಹಿಂದೆ ತ್ರಿವರ್ಣ ಧ್ವಜವನ್ನು ಹಾರಿಸಿದ ಸ್ಥಳಕ್ಕೆ ತಮ್ಮ ಭೇಟಿಯನ್ನು ಅವರು ಉಲ್ಲೇಖಿಸಿದರು. ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರು ಯಾತನೆ ಅನುಭವಿಸಿದ ಸೆಲ್ಯುಲಾರ್ ಜೈಲು ನನಗೆ ಯಾವುದೇ ಪವಿತ್ರ ಕ್ಷೇತ್ರಕ್ಕಿಂತ ಕಡಿಮೆಯಲ್ಲ. ದೇಶ ಎಂದಿಗೂ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಮರೆಯುವುದಿಲ್ಲ ಎಂದರು.

 

ನೇತಾಜಿ ಸುಭಾಷ್‍ಚಂದ್ರ ಬೋಸ್ ಅವರನ್ನು ಸ್ಮರಿಸಿದ ಪ್ರಧಾನಿಯವರು, ನೇತಾಜಿಯವರ ಕರೆಗೆ ಓಗೊಟ್ಟ ಅಂಡಮಾನ್‍ನ ಹಲವಾರು ಯುವಕರು ಭಾರತದ ಸ್ವಾತಂತ್ರ್ಯಕ್ಕಾಗಿ ತಮ್ಮನ್ನು ಅರ್ಪಿಸಿಕೊಂಡರು ಎಂದರು. 150 ಅಡಿ ಎತ್ತರದ ಧ್ವಜವು, 1943ರಲ್ಲಿ ಈ ದಿನ ನೇತಾಜಿಯವರು ತ್ರಿವರ್ಣ ಧ್ವಜ ಹಾರಿಸಿದ ಸ್ಮರಣೆಯನ್ನು ಸಂರಕ್ಷಿಸುವ ಪ್ರಯತ್ನವಾಗಿದೆ ಎಂದರು.

 

ಇದೇ ಸಂದರ್ಭದಲ್ಲಿ ಅವರು, ರೋಸ್‍ಲ್ಯಾಂಡ್ ದ್ವೀಪವನ್ನು ನೇತಾಜಿ ಸುಭಾಷ್‍ಚಂದ್ರ ಬೋಸ್ ದ್ವೀಪ, ನೀಲ್ ದ್ವೀಪವನ್ನು ಶಹೀದ್ ದ್ವೀಪ ಮತ್ತು ಹ್ಯಾವ್‍ಲಾಕ್ ದ್ವೀಪವನ್ನು ಸ್ವರಾಜ್ ದ್ವೀಪ ಎಂದು ಮರುನಾಮಕರಣ ಮಾಡಿರುವುದಾಗಿ ಘೋಷಿಸಿದರು.

 

ನೇತಾಜಿಯವರ ದೂರದೃಷ್ಟಿಯಂತೆ ಇಂದು ಭಾರತೀಯರು ಸಶಕ್ತ ಭಾರತ ಕಟ್ಟಲು ದುಡಿಯುತ್ತಿದ್ದಾರೆ ಎಂದ ಪ್ರಧಾನಿಯವರು, ದೇಶಾದ್ಯಂತ ಸಂಪರ್ಕವನ್ನು ಬಲಪಡಿಸಲು ಸರ್ಕಾರ ಕೆಲಸಮಾಡುತ್ತಿದೆ ಎಂದು ಪ್ರಧಾನಿ ತಿಳಿಸಿದರು.

 

ನಮ್ಮ ನಾಯಕರನ್ನು ಸ್ಮರಿಸುವುದು ಹಾಗೂ ಗೌರವಿಸುವುದು ಐಕ್ಯತೆಯನ್ನು ಬಲಡಿಸುತ್ತದೆ ಎಂದ ಅವರು, ನಮ್ಮ ಇತಿಹಾಸದ ಪ್ರತೀ ಮಹತ್ವದ ಅಧ್ಯಾಯವನ್ನು ಪ್ರಮುಖವಾಗಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದರು. ಈ ಸಂದರ್ಭದಲ್ಲಿ ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಕುರಿತ ಪಂಚತೀರ್ಥ, ರಾಷ್ಟ್ರೀಯ ಪೊಲೀಸ್ ಸ್ಮಾರಕ ಮತ್ತು ಏಕತಾ ಪ್ರತಿಮೆಯನ್ನು ಉಲ್ಲೇಖಿಸಿದರು. ನೇತಾಜಿ ಸುಭಾಷ್‍ಚಂದ್ರ ಬೋಸ್ ಮತ್ತು ಸರ್ದಾರ್ ಪಟೇಲ್ ಅವರ ಹೆಸರಿನಲ್ಲಿ ರಾಷ್ಟ್ರೀಯ ಪ್ರಶಸ್ತಿಗಳನ್ನು ಘೋಷಿಸಲಾಗಿದೆ ಎಂದರು.

 

ಈ ಮಹಾನ್ ನಾಯಕರ ಸ್ಫೂರ್ತಿಯೊಂದಿಗೆ ನವಭಾರತವನ್ನು ನಿರ್ಮಿಸಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು.

 

ಪರಿಸರದ ಅವಶ್ಯಕತೆಗಳಿಗನುಗುಣವಾಗಿ ದ್ವೀಪಗಳ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದ ಅವರು, ಕೈಗಾರಿಕಾ ಅಭಿವೃದ್ಧಿಯ ಭಾಗವಾಗಿ ಪ್ರವಾಸೋದ್ಯಮ, ಆಹಾರ ಸಂಸ್ಕರಣೆ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಿಗೆ ವಿಶೇಷ ಗಮನ ನೀಡಲಾಗುವುದು ಎಂದರು.

 

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಸಾಧ್ಯವಾದಷ್ಟು ಸ್ವಾವಲಂಬಿಗಳಾಗುವಂತೆ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಪ್ರಧಾನಿಯವರು ಹೇಳಿದರು. ಪೋರ್ಟ್‍ಬ್ಲೇರ್‍ನ ಹಡಗುಕಟ್ಟೆಯ ವಿಸ್ತರಣೆ ಬಗ್ಗೆ ಮಾತನಾಡಿದ ಅವರು, ಇದು ಭಾರೀ ಹಡಗುಗಳ ನಿರ್ವಹಣೆಗೆ ಅನುವು ಮಾಡಿಕೊಡಲಿದೆ ಎಂದರು. ದ್ವೀಪಗಳ ಗ್ರಾಮೀಣ ರಸ್ತೆಗಳ ಸ್ಥಿತಿಯ ಬಗ್ಗೆ ಎರಡು ವಾರದೊಳಗೆ ವರದಿ ನೀಡುವಂತೆ ತಿಳಿಸಿದ ಅವರು, ಒಮ್ಮೆ ವರದಿಯನ್ನು ಪರಿಶೀಲಿಸಿದ ನಂತರ ಕೇಂದ್ರ ಸರ್ಕಾರ ಎಲ್ಲ ನೆರವು ನೀಡಲಿದೆ ಎಂದರು.

 

ವೀರ ಸಾವರ್ಕರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್ ಕಟ್ಟಡ ನಿರ್ಮಿಸಲಾಗುವುದು ಎಂದು ಪ್ರಧಾನಿ ಹೇಳಿದರು. ಚೆನ್ನೈನಿಂದ ಹಾಕಲಾಗುತ್ತಿರುವ ಸಮುದ್ರದೊಳಗಿನ ಆಪ್ಟಿಕಲ್ ಫೈಬರ್ ಕೇಬಲ್ ಅಳವಡಿಕೆ ಮುಕ್ತಾಯದ ನಂತರ ಉತ್ತಮ ಇಂಟರ್‍ನೆಟ್ ಸಂಪರ್ಕ ದೊರೆಯಲಿದೆ ಎಂದರು. ನೀರು, ವಿದ್ಯುತ್, ಶುದ್ಧ ಇಂಧನ ಮತ್ತು ಆರೋಗ್ಯ ಕ್ಷೇತ್ರಗಳ ಅಭಿವೃದ್ಧಿಯ ಬಗ್ಗೆಯೂ ಅವರು ಮಾತನಾಡಿದರು.