Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಅದ್ಧೂರಿ ಭೋಜನಕೂಟ ಸಭೆ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಅದ್ಧೂರಿ ಭೋಜನಕೂಟ ಸಭೆ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ


ಗೌರವಾನ್ವಿತ ಪ್ರಧಾನ ಮಂತ್ರಿ ಕ್ರಿಸ್ಟೋಫರ್ ಲಕ್ಸನ್,

ಎರಡೂ ದೇಶಗಳ ಪ್ರತಿನಿಧಿಗಳೆ,

ನಮಸ್ಕಾರ!

 

ನನಗೆ ಮತ್ತು ನನ್ನ ನಿಯೋಗಕ್ಕೆ ನೀಡಿದ ಆತ್ಮೀಯ ಸ್ವಾಗತ ಮತ್ತು ಸೌಹಾರ್ದಯುತ ಆತಿಥ್ಯಕ್ಕಾಗಿ ನನ್ನ ಸ್ನೇಹಿತ ಪ್ರಧಾನಮಂತ್ರಿ ಲಕ್ಸನ್ ಅವರಿಗೆ ನಾನು ಹೃತ್ಪೂರ್ವಕ ಕೃತಜ್ಞತೆ ವ್ಯಕ್ತಪಡಿಸುತ್ತೇನೆ. ಅವರು ನೀಡಿದ ಆತ್ಮೀಯ ಸ್ವಾಗತದಿಂದಾಗಿ ಇಂದು ಆಕ್ಲೆಂಡ್‌ನ ಚಳಿಯೂ ತುಸು ಕಡಿಮೆಯಾಗಿದೆ ಎಂದು ಭಾಸವಾಗುತ್ತಿದೆ. ಈ ಭೇಟಿಯ ಸಮಯದಲ್ಲಿ ನ್ಯೂಜಿಲೆಂಡ್ ಜನರಿಂದ ನಾನು ಪಡೆದ ಪ್ರೀತಿ ಮತ್ತು ವಿಶ್ವಾಸ ಯಾವಾಗಲೂ ನಮ್ಮ ಹೃದಯದಲ್ಲಿ ಉಳಿಯುತ್ತದೆ.

ಕಳೆದ ವರ್ಷ ಪ್ರಧಾನ ಮಂತ್ರಿ ಲಕ್ಸನ್ ಅವರ ಭಾರತ ಭೇಟಿಯು ನಮ್ಮ ದ್ವಿಪಕ್ಷೀಯ ಸಂಬಂಧದ ಪ್ರತಿಯೊಂದು ಅಂಶಕ್ಕೂ ಹೊಸ ಶಕ್ತಿ ತುಂಬಿತು. ಅವರ ನಾಯಕತ್ವ, ಸ್ಪಷ್ಟ ದೃಷ್ಟಿಕೋನ ಮತ್ತು ಬಲವಾದ ಬದ್ಧತೆಯಡಿ, ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಸ್ನೇಹವು ಹೊಸ ಆವೇಗ ಮತ್ತು ಹೊಸ ದಿಕ್ಕನ್ನು ಪಡೆದುಕೊಂಡಿದೆ. 40 ವರ್ಷಗಳಲ್ಲಿ ಭಾರತೀಯ ಪ್ರಧಾನ ಮಂತ್ರಿಯೊಬ್ಬರು ನ್ಯೂಜಿಲೆಂಡ್‌ಗೆ ನೀಡಿದ ಮೊದಲ ಭೇಟಿ ಇದಾಗಿದೆ. ನಾನು ಆಗಾಗ್ಗೆ ಹೇಳುವಂತೆ, ನನಗಿಂತ ಮೊದಲು ಬಂದವರು ನನಗಾಗಿ ಅನೇಕ ಉತ್ತಮ ಕಾರ್ಯಗಳನ್ನು ಬಿಟ್ಟು ಹೋಗಿದ್ದಾ, ಅವುಗಳನ್ನು ಪೂರ್ಣಗೊಳಿಸುವ ಸೌಭಾಗ್ಯ ನನಗಿದೆ. ಸ್ನೇಹಿತರೆ, ಇದು ನಮ್ಮ ದ್ವಿಪಕ್ಷೀಯ ಸಂಬಂಧದಲ್ಲಿ ಹೊಸ ಅಧ್ಯಾಯದ ಆರಂಭವನ್ನು ಸೂಚಿಸುತ್ತಿದೆ.

ಸ್ನೇಹಿತರೆ,

ಭಾರತ ಮತ್ತು ನ್ಯೂಜಿಲೆಂಡ್‌ ಹೊಂದಿರುವ ಪ್ರಜಾಪ್ರಭುತ್ವ ಮೌಲ್ಯಗಳ ಮೇಲಿನ ದೃಢ ನಂಬಿಕೆಯು ಒಟ್ಟಾಗಿ ಮುಂದುವರಿಯಲು ನಮಗೆ ಸ್ವಾಭಾವಿಕವಾದ ಬುನಾದಿ ಒದಗಿಸುತ್ತದೆ. ಕಳೆದ ಕೆಲವು ವರ್ಷಗಳಿಂದ ನಾವು ನಮ್ಮ ದ್ವಿಪಕ್ಷೀಯ ಸಂಬಂಧಕ್ಕೆ ಅಭೂತಪೂರ್ವ ಆವೇಗವನ್ನು ನೀಡಿದ್ದೇವೆ.

ಇಂದಿನ ಸಭೆಯಲ್ಲಿ ನಮ್ಮ ಸಹಕಾರಕ್ಕೆ ಹೆಚ್ಚಿನ ಆಳ ಮತ್ತು ವಿಸ್ತಾರ ನೀಡುವ ಕುರಿತು ನಾವು ವಿವರವಾದ ಚರ್ಚೆಗಳನ್ನು ನಡೆಸಿದ್ದೇವೆ. ಭಾರತ-ನ್ಯೂಜಿಲೆಂಡ್ ಸಂಬಂಧಗಳನ್ನು ಕಾರ್ಯತಂತ್ರ ಪಾಲುದಾರಿಕೆಯ ಮಟ್ಟಕ್ಕೆ ಏರಿಸುವ ಐತಿಹಾಸಿಕ ನಿರ್ಧಾರವನ್ನು ನಾವು ತೆಗೆದುಕೊಂಡಿದ್ದೇವೆ. ಈ ಮಾರ್ಗಸೂಚಿಯಡಿ, ಸ್ಪಷ್ಟ ಗುರಿಗಳು ಮತ್ತು ಸ್ಪಷ್ಟ ಫಲಿತಾಂಶಗಳೊಂದಿಗೆ ನಾವು ಪ್ರತಿಯೊಂದು ವಲಯದಲ್ಲೂ ಮುಂದುವರಿಯುತ್ತೇವೆ.

ಈ ವರ್ಷ ನಾವು ದಾಖಲೆಯ ಸಮಯದಲ್ಲಿ ಮುಕ್ತ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಿದ್ದೇವೆ. ಈ ಸಾಧನೆಯು ಎರಡೂ ದೇಶಗಳ ಕೈಗಾರಿಕೆಗಳು, ರೈತರು ಮತ್ತು ಯುವಕರಿಗೆ ಹೊಸ ಅವಕಾಶಗಳನ್ನು ತೆರೆಯುತ್ತದೆ. ವ್ಯಾಪಾರದ ಜತೆಗೆ, ನಾವು ನಂಬಿಕೆ, ತಂತ್ರಜ್ಞಾನ ಮತ್ತು ಪ್ರತಿಭೆಗಾಗಿ ನೀಲನಕ್ಷೆಯನ್ನು ಸಹ ಸಿದ್ಧಪಡಿಸುತ್ತಿದ್ದೇವೆ.

ಕಳೆದ 3 ವರ್ಷಗಳಲ್ಲಿ ನಮ್ಮ ದ್ವಿಪಕ್ಷೀಯ ವ್ಯಾಪಾರ ಶೇಕಡ 50ಕ್ಕಿಂತ ಹೆಚ್ಚು ಬೆಳೆದಿದೆ. ಮುಂದಿನ 5 ವರ್ಷಗಳಲ್ಲಿ ನಮ್ಮ ವ್ಯಾಪಾರವನ್ನು ದ್ವಿಗುಣಗೊಳಿಸಲು ಮುಕ್ತ ವ್ಯಾಪಾರ ಒಪ್ಪಂದವು ಬಲವಾದ ಅಡಿಪಾಯ ಒದಗಿಸುತ್ತದೆ ಎಂಬ ವಿಶ್ವಾಸ ನಮಗಿದೆ.

ಭಾರತದಲ್ಲಿ ನ್ಯೂಜಿಲೆಂಡ್‌ ಮಾಡಲಿರುವ 20 ಶತಕೋಟಿ ಡಾಲರ್ ಹೂಡಿಕೆ ಬದ್ಧತೆಯನ್ನು ಸಹ ನಾವು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ. ಇದು ನ್ಯೂಜಿಲೆಂಡ್ ಕಂಪನಿಗಳಿಗೆ ಭಾರತದ ಬೆಳವಣಿಗೆಯ ಯಶೋಗಾಥೆಯಲ್ಲಿ ದೀರ್ಘಕಾಲೀನ ಪಾಲುದಾರರಾಗಲು ಅವಕಾಶ ಒದಗಿಸುತ್ತದೆ.

ಸ್ನೇಹಿತರೆ,

ನಮ್ಮ ಕಾರ್ಯತಂತ್ರ ಪಾಲುದಾರಿಕೆಯನ್ನು ಅರ್ಥಪೂರ್ಣವಾಗಿಸಲು ನಾವು ಎರಡೂ ದೇಶಗಳ ಬಲವನ್ನು ಪ್ರಾಯೋಗಿಕ ಸಹಕಾರವಾಗಿ ಪರಿವರ್ತಿಸುತ್ತಿದ್ದೇವೆ. ಹಣಕಾಸು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಯುಪಿಐ ಅನ್ನು ನ್ಯೂಜಿಲೆಂಡ್‌ನ ಪಾವತಿ ವ್ಯವಸ್ಥೆಗಳೊಂದಿಗೆ ಸಂಪರ್ಕಿಸುವತ್ತ ನಾವು ಮುಂದುವರಿಯುತ್ತಿದ್ದೇವೆ.

ಕೃಷಿ, ಡೇರಿ ಮತ್ತು ಆಹಾರ ಸಂಸ್ಕರಣೆಯಲ್ಲಿ ನಾವು ಸಹಕಾರಕ್ಕಾಗಿ ಬಲವಾದ ಮಾರ್ಗಸೂಚಿಯನ್ನು ಅಭಿವೃದ್ಧಿಪಡಿಸಿದ್ದೇವೆ. ಇದು ನಮ್ಮ ರೈತರು ಮತ್ತು ಹೈನುಗಾರರಿಗೆ ಪ್ರಯೋಜನ ನೀಡುತ್ತದೆ.

ನ್ಯೂಜಿಲೆಂಡ್ ಮತ್ತು ಭಾರತ ಎರಡೂ ಸಾಂಪ್ರದಾಯಿಕ ಔಷಧದಲ್ಲಿ ಶ್ರೀಮಂತ ಮತ್ತು ರೋಮಾಂಚಕ ಸಂಪ್ರದಾಯಗಳನ್ನು ಹೊಂದಿವೆ. ಇಂದು ನಮ್ಮ ಆರೋಗ್ಯ ರಕ್ಷಣಾ ಸಹಕಾರದಲ್ಲಿ ಸಾಂಪ್ರದಾಯಿಕ ಔಷಧಗಳ ಪಾತ್ರ ಹೆಚ್ಚಿಸಲು ನಾವು ಒಪ್ಪಿಕೊಂಡಿದ್ದೇವೆ.

ರಕ್ಷಣೆ ಮತ್ತು ಭದ್ರತೆಯಲ್ಲಿ ನಮ್ಮ ಬೆಳೆಯುತ್ತಿರುವ ಸಹಕಾರವು ನಮ್ಮ ಆಳವಾದ ಕಾರ್ಯತಂತ್ರ ನಂಬಿಕೆಯ ಪ್ರತಿಬಿಂಬವಾಗಿದೆ. ಕಳೆದ ವರ್ಷ ಸಹಿ ಹಾಕಲಾದ ರಕ್ಷಣಾ ಸಹಕಾರ ಒಪ್ಪಂದವು ನಮ್ಮ ಸಹಯೋಗಕ್ಕಾಗಿ ಬಲವಾದ ಮಾರ್ಗಸೂಚಿ ಸೃಷ್ಟಿಸಿದೆ. ಇಂದು ಇಂಡೋ-ಪೆಸಿಫಿಕ್‌ ವಲಯದಲ್ಲಿ ಕಡಲ ಸಹಕಾರದ ಮಾರ್ಗಸೂಚಿಯನ್ನು ನಾವು ಒಪ್ಪಿಕೊಂಡಿದ್ದೇವೆ. ದ್ವಿಪಕ್ಷೀಯ ನೌಕಾ ಅಭ್ಯಾಸಗಳು, ಸರಕು ಸಾಗೆ ಬೆಂಬಲ ಮತ್ತು ಜಲಗತಿ ಮಾಪನ ವಿಜ್ಞಾನ(ಹೈಡ್ರೋಗ್ರಫಿ)ದಲ್ಲಿನ ಸಹಕಾರವು ನಮ್ಮ ಸಮನ್ವಯ ಮತ್ತು ಪರಸ್ಪರ ಕಾರ್ಯಸಾಧ್ಯತೆಯನ್ನು ಮತ್ತಷ್ಟು ಬಲಪಡಿಸುತ್ತದೆ.

ಸ್ನೇಹಿತರೆ,

ನಮ್ಮ ಸಂಬಂಧದ ಬಲಿಷ್ಠ ಆಧಾರಸ್ತಂಭವೆಂದರೆ, ನಮ್ಮ ಜನರ ನಡುವಿನ ಸಂಬಂಧಗಳು. ಭಾರತೀಯ ಸಮುದಾಯದ ಸದಸ್ಯರು ತಮ್ಮ ಕಠಿಣ ಪರಿಶ್ರಮ ಮತ್ತು ಪ್ರತಿಭೆಯ ಮೂಲಕ ನ್ಯೂಜಿಲೆಂಡ್‌ನಲ್ಲಿ ವಿಶೇಷ ಸ್ಥಾನಮಾನ ಗಳಿಸಿದ್ದಾರೆ. ಅವರನ್ನು ನೋಡಿಕೊಳ್ಳುತ್ತಿರುವ ಪ್ರಧಾನಿ ಲಕ್ಸನ್, ನ್ಯೂಜಿಲೆಂಡ್ ಸರ್ಕಾರ ಮತ್ತು ನ್ಯೂಜಿಲೆಂಡ್ ಜನರಿಗೆ ನಾನು ನನ್ನ ಕೃತಜ್ಞತೆ ವ್ಯಕ್ತಪಡಿಸುತ್ತೇನೆ.

ಇಂದು ಸಹಿ ಹಾಕಿದ ಸಾಂಸ್ಕೃತಿಕ ಸಹಕಾರ ಒಪ್ಪಂದವು ಕಲೆ, ಸಂಸ್ಕೃತಿ, ಪರಂಪರೆ ಮತ್ತು ಸೃಜನಶೀಲ ಕೈಗಾರಿಕೆಗಳ ಕ್ಷೇತ್ರಗಳಲ್ಲಿ ನಮ್ಮ ಎರಡೂ ದೇಶಗಳ ನಡುವಿನ ವಿನಿಮಯಕ್ಕೆ ಮತ್ತಷ್ಟು ವೇಗ ನೀಡುತ್ತದೆ. ಭಾರತೀಯ ವಿದ್ಯಾರ್ಥಿಗಳಿಗೆ ನ್ಯೂಜಿಲೆಂಡ್ ಪ್ರಮುಖ ತಾಣವಾಗಿದೆ. ಭಾರತದಲ್ಲಿ ಕ್ಯಾಂಪಸ್‌ಗಳನ್ನು ತೆರೆಯಲು ನಾವು ನ್ಯೂಜಿಲೆಂಡ್ ವಿಶ್ವವಿದ್ಯಾಲಯಗಳನ್ನು ಆಹ್ವಾನಿಸುತ್ತೇವೆ.

ಈ ವರ್ಷ ನಮ್ಮ ಎರಡೂ ದೇಶಗಳ ನಡುವಿನ ಕ್ರೀಡಾ ಸಂಬಂಧಗಳ ಶತಮಾನೋತ್ಸವವನ್ನು ನಾವು ಆಚರಿಸುತ್ತಿದ್ದೇವೆ. 100 ವರ್ಷಗಳ ಹಿಂದೆ ಮೇಜರ್ ಧ್ಯಾನ್ ಚಂದ್ ನೇತೃತ್ವದ ಹಾಕಿ ತಂಡವು ಇಲ್ಲಿಗೆ ಬಂದು ಇತಿಹಾಸ ಸೃಷ್ಟಿಸಿತು, ಆ ಪರಂಪರೆ ಇಂದಿಗೂ ನಮ್ಮ ಕ್ರೀಡಾ ಪಾಲುದಾರಿಕೆಗೆ ಸ್ಫೂರ್ತಿ ನೀಡುತ್ತಿದೆ.

ಈ ಸಂದರ್ಭವನ್ನು ಗುರುತಿಸಲು, ನಾವು ಎರಡೂ ದೇಶಗಳಲ್ಲಿ ಹಲವಾರು ಕ್ರೀಡಾಕೂಟಗಳನ್ನು ಆಯೋಜಿಸುತ್ತಿದ್ದೇವೆ. ಕ್ರಿಕೆಟ್ ಜತೆಗೆ, ಕ್ರೀಡಾ ಜಂಟಿ ಕ್ರಿಯಾ ಯೋಜನೆಯ ಮೂಲಕ ಇತರೆ ಕ್ರೀಡೆಗಳಲ್ಲಿ ಸಹಕಾರ ಹೆಚ್ಚಿಸಲು ನಾವು ಕೆಲಸ ಮಾಡುತ್ತಿದ್ದೇವೆ. ಭುವನೇಶ್ವರದಲ್ಲಿ ನ್ಯೂಜಿಲೆಂಡ್ ರಗ್ಬಿ ಮತ್ತು ರಗ್ಬಿ ಇಂಡಿಯಾ ನಡುವೆ ಇತ್ತೀಚೆಗೆ ನಡೆದ ತರಬೇತಿ ಕಾರ್ಯಕ್ರಮವು ಈ ದಿಕ್ಕಿನಲ್ಲಿ ಭರವಸೆಯ ಆರಂಭವಾಗಿದೆ.

ಸ್ನೇಹಿತರೆ,

ಜಾಗತಿಕ ವೇದಿಕೆಯಲ್ಲೂ ಸಹ ಭಾರತ ಮತ್ತು ನ್ಯೂಜಿಲೆಂಡ್ ವಿಶ್ವಾಸಾರ್ಹ ಪಾಲುದಾರರು ಮತ್ತು ಆಪ್ತ ಸ್ನೇಹಿತರು. ಪ್ರಸ್ತುತ ಕಾಲದ ಸವಾಲುಗಳನ್ನು ಎದುರಿಸಲು ವಿಶ್ವಸಂಸ್ಥೆ ಸೇರಿದಂತೆ ಜಾಗತಿಕ ಸಂಸ್ಥೆಗಳಲ್ಲಿ ಸುಧಾರಣೆಗಳು ಅತ್ಯಗತ್ಯ ಎಂದು ನಾವು ನಂಬುತ್ತೇವೆ.

ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಹೆಗಲಿಗೆ ಹೆಗಲು ಕೊಟ್ಟು ಮುಂದುವರಿಯಲು ನಾವು ಇಂದು ಜಂಟಿ ಕಾರ್ಯಪಡೆ ಸ್ಥಾಪಿಸಿದ್ದೇವೆ. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ, ಸ್ಥಿರತೆ ಮತ್ತು ಭದ್ರತೆಗೆ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಸಹಕಾರವು ಅತ್ಯಂತ ಮುಖ್ಯವಾಗಿದೆ.

ಸ್ನೇಹಿತರೆ,

ಮಾವೋರಿ ಹೊಸ ವರ್ಷದ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ, “ಮಾತಾರಿಕಿ”. ನೀವು ಹೇಳಿದಂತೆ ಇಲ್ಲಿ “ಮಾತಾರಿಕಿ” ಎಂದು ಕರೆಯಲ್ಪಡುವ ನಕ್ಷತ್ರಪುಂಜವು ಪ್ರಾಚೀನ ಕಾಲದಿಂದಲೂ ಭಾರತದಲ್ಲಿ “ಕೃತಿಕಾ ನಕ್ಷತ್ರ” ಎಂದು ಕರೆಯಲ್ಪಡುತ್ತದೆ. ಈ “ಮಾತಾರಿಕಿ” ಹಬ್ಬವು ನಮ್ಮ ಸಂಬಂಧವು ಈ ನಕ್ಷತ್ರಗಳಂತೆ ಪ್ರಕಾಶಮಾನವಾಗಿ ಬೆಳಗಲು ಪ್ರೇರೇಪಿಸುತ್ತದೆ ಎಂಬ ವಿಶ್ವಾಸ ನನಗಿದೆ.

ಪ್ರಧಾನಮಂತ್ರಿ ಲಕ್ಸನ್ ಅವರೆ,

ನಿಮ್ಮ ಸ್ನೇಹ, ನಿಮ್ಮ ಬದ್ಧತೆ ಮತ್ತು ನನ್ನ ನ್ಯೂಜಿಲೆಂಡ್ ಭೇಟಿಯನ್ನು ಸ್ಮರಣೀಯವಾಗಿಸಿದ್ದಕ್ಕಾಗಿ ನಾನು ನನ್ನ ಕೃತಜ್ಞತೆ ವ್ಯಕ್ತಪಡಿಸುತ್ತೇನೆ. ರಗ್ಬಿಯಲ್ಲಿ ತಂಡದ ಕೆಲಸ ಮತ್ತು ನಂಬಿಕೆ ಅತ್ಯಗತ್ಯವಾದಂತೆಯೇ, ನಾವು ಸಹ ಪರಸ್ಪರ ವಿಶ್ವಾಸದಿಂದ ಮುಂದುವರಿಯುತ್ತಿದ್ದೇವೆ. ನಾವು ಒಂದೇ ತಂಡದಲ್ಲಿದ್ದೇವೆ, ಆದ್ದರಿಂದಲೇ, ನಾವು ಸವಾಲುಗಳನ್ನು ಮಾತ್ರ ಎದುರಿಸುತ್ತೇವೆ.

ತುಂಬು ಧನ್ಯವಾದಗಳು.

ಹಕ್ಕು ನಿರಾಕರಣೆ: ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಕನ್ನಡ ರೂಪಾಂತರ ಇದಾಗಿದೆ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.

 

*****