Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಅಯೋಧ್ಯೆ ಕುರಿತು ಸುಪ್ರೀಂ ಕೋರ್ಟ್ ತೀರ್ಪಿನ ನಂತರ ರಾಷ್ಟ್ರವನ್ನುದ್ದೇಶಿಸಿ ಪ್ರಧಾನಮಂತ್ರಿಯವರ ಭಾಷಣ


ನನ್ನ ದೇಶಬಾಂಧವರೇ,

ನಾನು ಇಡೀ ದಿನ ಪಂಜಾಬ್ನಲ್ಲಿದ್ದೆ. ದೆಹಲಿಗೆ ಮರಳಿದ ನಂತರ, ನನಗೆ ನಿಮ್ಮೆಲ್ಲರೊಂದಿಗೆ ನೇರವಾಗಿ ಮಾತನಾಡಬೇಕೆನಿಸಿತು.
ಇಂದು, ಮಾನ್ಯ ಸುಪ್ರೀಂ ಕೋರ್ಟ್ ಹಲವಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಪ್ರಮುಖ ವಿಷಯದ ಬಗ್ಗೆ ತನ್ನ ತೀರ್ಪನ್ನು ನೀಡಿದೆ.

ಈ ವಿಷಯವನ್ನು ನ್ಯಾಯಾಲಯದಲ್ಲಿ ಪ್ರತಿದಿನ ವಿಚಾರಣೆ ನಡೆಸಬೇಕೆಂದು ಇಡೀ ದೇಶ ಬಯಸಿತು. ಹಾಗೆಯೇ ಆಯಿತು ಮತ್ತು ಅದರ ಫಲಿತಾಂಶ ಇಂದಿನ ತೀರ್ಪು. ದಶಕಗಳಿಂದ ನಡೆದ ನ್ಯಾಯಾಂಗ ಪ್ರಕ್ರಿಯೆಯು ಇಂದು ಮುಕ್ತಾಯಗೊಂಡಿದೆ.

ಸ್ನೇಹಿತರೇ,

ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಎಂದು ಜಾಗತಿಕವಾಗಿ ತಿಳಿದಿದೆ. ಇಂದು, ನಮ್ಮ ಪ್ರಜಾಪ್ರಭುತ್ವ ಎಷ್ಟು ರೋಮಾಂಚಕ ಮತ್ತು ಪ್ರಬಲವಾಗಿದೆ ಎಂಬುದನ್ನೂ ಸಹ ಜಗತ್ತು ತಿಳಿದಿದೆ.

ಇಂದಿನ ತೀರ್ಪಿನ ನಂತರ ಸಮಾಜದ ಪ್ರತಿಯೊಂದು ವಿಭಾಗ, ಪ್ರತಿ ಸಮುದಾಯ, ಪ್ರತಿ ಧರ್ಮ, ಇಡೀ ರಾಷ್ಟ್ರವು ತೀರ್ಪನ್ನು ಮುಕ್ತವಾಗಿ ಸ್ವೀಕರಿಸಿದ ರೀತಿ. ಇದು ಭಾರತದ ಪಾರಂಪರಿಕ ನೀತಿಗಳು, ಸಂಸ್ಕೃತಿ, ಸಂಪ್ರದಾಯಗಳು ಮತ್ತು ನಮ್ಮ ಸಹೋದರತ್ವದ ಅಂತರ್ಗತ ಮನೋಭಾವದ ಅಭಿವ್ಯಕ್ತಿಯಾಗಿದೆ.

ಸೋದರ, ಸೋದರೆಯರೇ,

ಭಾರತವು ಹೆಸರಾಗಿರುವುದೇ ವೈವಿಧ್ಯತೆಯಲ್ಲಿ ಏಕತೆಗಾಗಿ. ಈ ಉತ್ಸಾಹವು ಇಂದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಸಾವಿರಾರು ವರ್ಷಗಳ ನಂತರವೂ, ವೈವಿಧ್ಯತೆಯ ಏಕತೆಯ ಭಾರತವನ್ನು ಯಾರಾದರೂ ಅರ್ಥಮಾಡಿಕೊಳ್ಳಲು ಬಯಸಿದರೆ, ಇಂದು ಇದನ್ನು ಒಂದು ಅತ್ಯುತ್ತಮ ಉದಾಹರಣೆ ಎಂದು ಕರೆಯಬಹುದು.

ಸ್ನೇಹಿತರೇ,

ಭಾರತದ ನ್ಯಾಯಾಂಗದ ಇತಿಹಾಸದಲ್ಲಿಯೂ ಕೂಡ ಇಂದು ಸುವರ್ಣ ದಿನವಾಗಿದೆ.

ವಿಚಾರಣೆಯ ಸಮಯದಲ್ಲಿ (ಅಯೋಧ್ಯೆಯ ಬಗ್ಗೆ) ಗೌರವಾನ್ವಿತ ಸುಪ್ರೀಂ ಕೋರ್ಟ್ ಎಲ್ಲರನ್ನೂ ಹೆಚ್ಚು ತಾಳ್ಮೆಯಿಂದ ಆಲಿಸಿತು ಮತ್ತು ಅದರ ನಂತರವೇ ನ್ಯಾಯಾಲಯವು ಸರ್ವಾನುಮತದ ತೀರ್ಪು ನೀಡಿತು.

ಇದು ತುಂಬಾ ಸರಳವಾದ ವಿಷಯವಲ್ಲ.

ಇಂದು ಐತಿಹಾಸಿಕ ದಿನ. ಇದು ದೇಶದ ನ್ಯಾಯಾಂಗದಲ್ಲಿ ಸುವರ್ಣ ಯುಗದ ಆರಂಭವಾಗಿದೆ. ತೀರ್ಪು ಸರ್ವಾನುಮತದಿಂದಿತ್ತು ಮತ್ತು ಧೈರ್ಯದಿಂದ ಕೂಡಿತ್ತು. ಈ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ದೃಢತೆಯನ್ನು ತೋರಿಸಿದೆ. ನಮ್ಮ ನ್ಯಾಯಾಂಗಕ್ಕೆ ವಿಶೇಷ ಮೆಚ್ಚುಗೆ ವ್ಯಕ್ತಪಡಿಸಲೇಬೇಕು.

ಸ್ನೇಹಿತರೇ,

ಇಂದು ನವೆಂಬರ್ 9.

ಇಂದೇ ಬರ್ಲಿನ್ ಗೋಡೆ ಕುಸಿದಿದ್ದು.

ಎರಡು ವಿಭಿನ್ನ ಚಿಂತನೆಯ ತೊರೆಗಳು ಒಗ್ಗೂಡಿ ಹೊಸ ಪ್ರತಿಜ್ಞೆಯನ್ನು ತೆಗೆದುಕೊಂಡವು.

ಇಂದು, ನವೆಂಬರ್ 9 ರಂದು, ಕರ್ತಾರ್ಪುರ್ ಕಾರಿಡಾರ್ ಪ್ರಾರಂಭವಾಗಿದೆ. ಈ ಕಾರಿಡಾರ್ಗಾಗಿ ಭಾರತ ಮತ್ತು ಪಾಕಿಸ್ತಾನ ಸಂಘಟಿತ ಪ್ರಯತ್ನ ಮಾಡಿವೆ.

ಇಂದು ನವೆಂಬರ್ 9 ರಂದು ಸುಪ್ರೀಂ ಕೋರ್ಟ್ ತೀರ್ಪು ನಮಗೆ ಒಗ್ಗೂಡಿ, ಒಟ್ಟಿಗೆ ಬದುಕುವ ಸಂದೇಶವನ್ನು ನೀಡುತ್ತಿದೆ. ಯಾರಲ್ಲೂ ಯಾವುದೇ ಕೆಟ್ಟ ಭಾವನೆ ಇರಬಾರದು.

ಯಾರದಾದರೂ ಮನಸ್ಸಿನಲ್ಲಿ ಕಹಿಯ ಕುರುಹು ಇದ್ದರೆ, ಅಂತಹ ಮನೋಭಾವಕ್ಕೆ ವಿದಾಯ ಹೇಳುವ ಸಮಯ ಇದು.

ನವ ಭಾರತದಲ್ಲಿ ಭಯ, ಕಹಿ ಮತ್ತು ನಕಾರಾತ್ಮಕ ಭಾವನೆಗಳಿಗೆ ಸ್ಥಾನವಿಲ್ಲ.

ಸ್ನೇಹಿತರೇ,

ಇಂದಿನ ತೀರ್ಪಿನೊಂದಿಗೆ, ಗೌರವಾನ್ವಿತ ಸುಪ್ರೀಂ ಕೋರ್ಟ್ ಸಂವಿಧಾನದ ಚೌಕಟ್ಟಿನೊಳಗೆ ಮತ್ತು ಕಾನೂನಿನಡಿಯಲ್ಲಿ ಕಠಿಣ ಸಮಸ್ಯೆಗಳನ್ನು ಸಹ ಪರಿಹರಿಸಬಹುದು ಎಂಬ ಸಂದೇಶವನ್ನು ನೀಡಿದೆ.

ಸ್ವಲ್ಪ ವಿಳಂಬವಾದರೂ ನಾವು ತಾಳ್ಮೆಯಿಂದಿರಬೇಕು ಎಂದು ಈ ತೀರ್ಪಿನಿಂದ ನಾವು ಕಲಿಯಬೇಕು. ಇದರಲ್ಲಿ ಎಲ್ಲರ ಹಿತಾಸಕ್ತಿಯಿದೆ.

ಪ್ರತಿಯೊಂದು ಪರಿಸ್ಥಿತಿಯಲ್ಲೂ, ಭಾರತದ ಸಂವಿಧಾನ ಮತ್ತು ಭಾರತದ ನ್ಯಾಯಾಂಗ ವ್ಯವಸ್ಥೆಯ ಮೇಲಿನ ನಮ್ಮ ನಂಬಿಕೆ ಅಚಲವಾಗಿರಬೇಕು. ಇದು ಬಹಳ ಮುಖ್ಯವಾದ್ದು.

ಸ್ನೇಹಿತರೇ,

ಗೌರವಾನ್ವಿತ ಸುಪ್ರೀಂ ಕೋರ್ಟ್ ನ ತೀರ್ಪು ಹೊಸ ಯುಗದ ಆರಂಭವನ್ನು ಸೂಚಿಸುತ್ತದೆ.

ಅಯೋಧ್ಯೆ ವಿವಾದ ಅನೇಕ ತಲೆಮಾರುಗಳ ಮೇಲೆ ಪರಿಣಾಮ ಬೀರಿದೆ. ಆದರೆ, ಇಂದಿನ ತೀರ್ಪಿನ ನಂತರ ಮುಂದಿನ ಪೀಳಿಗೆಗಳು ಹೊಸ ಮನೋಭಾವದಿಂದ ನವ ಭಾರತವನ್ನು ನಿರ್ಮಿಸಲು ತಮ್ಮನ್ನು ತೊಡಗಿಸಿಕೊಳ್ಳುವಂತೆ ಮಾಡುವ ಪ್ರತಿಜ್ಞೆಯನ್ನು ನಾವು ಮಾಡಬೇಕು.

ಬನ್ನಿ, ನಾವು ಹೊಸ ಆರಂಭವನ್ನು ಮಾಡೋಣ.

ಬನ್ನಿ, ನಾವು ನವ ಭಾರತವನ್ನು ನಿರ್ಮಿಸೋಣ.

ನಾವು ದೃಢವಾಗಿರಬೇಕು. ನಮ್ಮ ಪ್ರಗತಿಯು ಯಾರನ್ನೂ ಬಿಟ್ಟು ಇರಬಾರದು ಎಂಬ ಸಿದ್ಧಾಂತವನ್ನು ಆಧರಿಸಿರಬೇಕು.

ನಾವು ಎಲ್ಲರನ್ನೂ ಒಟ್ಟಿಗೆ ಸೇರಿಸಿಕೊಳ್ಳಬೇಕು, ಪ್ರತಿಯೊಬ್ಬರ ಅಭಿವೃದ್ಧಿಗೆ ಕೆಲಸ ಮಾಡಬೇಕು, ಎಲ್ಲರ ವಿಶ್ವಾಸವನ್ನು ಗಳಿಸಿ ಮುಂದೆ ಸಾಗಬೇಕು.

ಸ್ನೇಹಿತರೇ,

ರಾಮ ಮಂದಿರ ನಿರ್ಮಾಣದ ಬಗ್ಗೆ ಸುಪ್ರೀಂ ಕೋರ್ಟ್ ತನ್ನ ತೀರ್ಪು ನೀಡಿದೆ.

ಈ ನಿರ್ಧಾರವು ರಾಷ್ಟ್ರ ನಿರ್ಮಾಣದ ನಮ್ಮ ಜವಾಬ್ದಾರಿಯನ್ನು ಇನ್ನಷ್ಟು ಗಂಭೀರವಾಗಿ ತೆಗೆದುಕೊಳ್ಳುವಂತೆ ನಮ್ಮೆಲ್ಲರ ಮೇಲೆ ಜವಾಬ್ದಾರಿ ವಹಿಸಿದೆ.

ಅಲ್ಲದೆ, ನಾಗರಿಕನಾಗಿ, ಈ ನೆಲದ ಕಾನೂನು ಮತ್ತು ಅದರ ನಿಯಮಗಳನ್ನು ಪಾಲಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.
ಒಂದು ಸಮಾಜವಾಗಿ, ಪ್ರತಿಯೊಬ್ಬ ಭಾರತೀಯನು ನಮ್ಮ ಕರ್ತವ್ಯ ಮತ್ತು ಜವಾಬ್ದಾರಿಗಳಿಗೆ ಆದ್ಯತೆ ನೀಡುವ ಮೂಲಕ ಕೆಲಸ ಮಾಡಬೇಕು.

ರಾಷ್ಟ್ರದ ಅಭಿವೃದ್ಧಿಗೆ ನಮ್ಮೆಲ್ಲರ ನಡುವೆ ಸಾಮರಸ್ಯ, ಸಹೋದರತ್ವ, ಸ್ನೇಹ, ಐಕ್ಯತೆ ಮತ್ತು ಶಾಂತಿ ಬಹಳ ಮುಖ್ಯವಾಗಿದೆ.
ನಾವು ಭಾರತೀಯರು, ಒಂದಾಗಿ ಕೆಲಸ ಮಾಡಿ ಮತ್ತು ಒಟ್ಟಿಗೆ ನಡೆದರೆ ಮಾತ್ರ ನಮ್ಮ ಗುರಿ ಮತ್ತು ಉದ್ದೇಶಗಳನ್ನು ಸಾಧಿಸಲು ಸಾಧ್ಯವಾಗುತ್ತದೆ.

ಜೈ ಹಿಂದ್