Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಉದಯಿಸುತ್ತಿರುವ ಭಾರತ ಶೃಂಗದಲ್ಲಿ ಪ್ರಧಾನಮಂತ್ರಿ ಅವರ ಭಾಷಣ.

ಉದಯಿಸುತ್ತಿರುವ ಭಾರತ ಶೃಂಗದಲ್ಲಿ ಪ್ರಧಾನಮಂತ್ರಿ ಅವರ ಭಾಷಣ.

ಉದಯಿಸುತ್ತಿರುವ ಭಾರತ ಶೃಂಗದಲ್ಲಿ ಪ್ರಧಾನಮಂತ್ರಿ ಅವರ ಭಾಷಣ.

ಉದಯಿಸುತ್ತಿರುವ ಭಾರತ ಶೃಂಗದಲ್ಲಿ ಪ್ರಧಾನಮಂತ್ರಿ ಅವರ ಭಾಷಣ.


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯಲ್ಲಿ ನೆಟ್ವರ್ಕ್ -18 ಉದಯಿಸುತ್ತಿರುವ ಭಾರತ ಶೃಂಗವನ್ನುದ್ದೇಶಿಸಿ ಭಾಷಣ ಮಾಡಿದರು.

ರಾಷ್ಟ್ರೀಯ ಸಮರ ಸ್ಮಾರಕ ಅಥವಾ ರಾಷ್ಟ್ರೀಯ ಯುದ್ದ ಸ್ಮಾರಕವನ್ನು ಲೋಕಾರ್ಪಣೆ ಮಾಡಿದ ಕೊಂಚ ಸಮಯದಲ್ಲಿಯೇ , “ಉದಯಿಸುತ್ತಿರುವ ಭಾರತ” ವಿಷಯದ ಕುರಿತಂತೆ ಮಾತನಾಡಲು ತಮಗೆ ಅವಕಾಶ ಸಿಕ್ಕಿದುದಕ್ಕಾಗಿ ಅವರು ಸಂತೋಷ ವ್ಯಕ್ತಪಡಿಸಿದರು. ಈ ವಿಷಯ –ರಾಜಕೀಯವನ್ನು ಮೀರಿದ , ರಾಷ್ಟ್ರೀಯ ಆದ್ಯತೆಗಳನ್ನು ವ್ಯಾಖ್ಯಾನಿಸುವ –ಅತ್ಯಂತ ಮಹತ್ವದ ವಿಷಯಗಳಲ್ಲೊಂದು ಎಂದರು.

ರಾಷ್ಟ್ರೀಯ ಹಿತಾಸಕ್ತಿಯನ್ನು ಆದ್ಯತೆಯಾಗಿಸಿಕೊಂಡರೆ ಯಾವ ರೀತಿಯ ಫಲಿತಾಂಶವನ್ನು ಪಡೆಯಬಹುದು ಎಂಬುದನ್ನು ವಿವರಿಸಲು ಅವರು ತಾವು ಭೂತ ಮತ್ತು ವರ್ತಮಾನದ ನಡುವೆ ತುಲನಾತ್ಮಕ ವಿಶ್ಲೇಷಣೆ ಮಾಡುವ ಮೂಲಕ ವಿಷಯವನ್ನು ಸಾದರಪಡಿಸುವುದಾಗಿ ಹೇಳಿದರು.

2014 ಕ್ಕೆ ಮೊದಲು ಹೇಗೆ ಹಣದುಬ್ಬರ ಮತ್ತು ಆದಾಯ ತೆರಿಗೆ ದರಗಳು ಹೆಚ್ಚಿದ್ದವು, ಆದರೆ ಜಿ.ಡಿ.ಪಿ. ಬೆಳವಣಿಗೆ ಕಡಿಮೆ ಇತ್ತು ಎಂಬುದನ್ನು ವಿವರಿಸಿದ ಅವರು, ಈಗ ಜಿ.ಡಿ.ಪಿ. ದರ 7 ರಿಂದ 8 ಶೇಖಡಾಕ್ಕೆ ಮರಳಿರುವುದನ್ನು , ಹಣಕಾಸು ಕೊರತೆ ಮತ್ತು ಹಣದುಬ್ಬರ ಕಡಿಮೆ ಪ್ರಮಾಣದಲ್ಲಿರುವುದನ್ನು ಉಲ್ಲೇಖಿಸಿದರು. ಆದಾಯ ತೆರಿಗೆಗೆ ಸಂಬಂಧಿಸಿದಂತೆ ಜನರಿಗೆ ನೆಮ್ಮದಿ, ನಿರಾಳತೆ ಲಭಿಸಿದೆ ಎಂದೂ ಅವರು ಹೇಳಿದರು.

ಭಾರತದ ಜಾಗತಿಕ ಸ್ಥಾನಮಾನದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿ ಅವರು 21 ನೇ ಶತಮಾನವನ್ನು ಭಾರತದ ಶತಮಾನ ಎಂದು ಒಮ್ಮೆ ಕರೆಯಲಾಗುತ್ತಿತ್ತು, ಆದರೆ 2013 ರ ವೇಳೆಗೆ ಭಾರತ ಜಾಗತಿಕ ಆರ್ಥಿಕತೆಯಲ್ಲಿ “ದುರ್ಬಲ ಐದು” ಆಗಿತ್ತು. ಇಂದು ಭಾರತ ತ್ವರಿತವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ. ವ್ಯಾಪಾರೋದ್ಯಮಕ್ಕೆ ಅನುಕೂಲಕರ ವಾತಾವರಣ ಇರುವ ಶ್ರೇಯಾಂಕದಲ್ಲಿ ಭಾರತದ ಸ್ಥಾನಮಾನ 2011 ರಲ್ಲಿ 132 ಇದ್ದಿತು, 2014 ರಲ್ಲಿ 142 ಆಗಿದ್ದಿತು. ಈಗ ನಾವು 77 ನೇ ಸ್ಥಾನದಲ್ಲಿದ್ದೇವೆ , ಎಂದರು.

“ವ್ಯಾಪಾರ ಮಾಡುವ” ಶ್ರೇಯಾಂಕದಲ್ಲಿ ಕುಸಿತಕ್ಕೆ ಭ್ರಷ್ಟಾಚಾರ ಒಂದು ಕಾರಣವಾಗಿತ್ತು ಎಂದ ಪ್ರಧಾನಮಂತ್ರಿ ಅವರು , ಈ ಹಿನ್ನೆಲೆಯಲ್ಲಿ ಕಲ್ಲಿದ್ದಲು, ಸಿ.ಡಬ್ಲ್ಯು.ಜಿ. , ತರಂಗ ಗುಚ್ಚ ಮತ್ತಿತರ ಪ್ರಮುಖ ಹಗರಣಗಳನ್ನು ಉಲ್ಲೇಖಿಸಿದರು.

ಜನ ಧನ ಯೋಜನಾವನ್ನು ಕೇಂದ್ರ ಸರಕಾರ ಹೇಗೆ ಆರಂಭಿಸಿತು ಎಂಬ ಬಗ್ಗೆ ವಿವರಿಸಿದ ಪ್ರಧಾನಮಂತ್ರಿ ಅವರು, ಈ ಯೋಜನೆ ಅಡಿಯಲ್ಲಿ 34 ಕೋಟಿ ಖಾತೆಗಳನ್ನು ತೆರೆಯಲಾಯಿತು ಎಂದರು. ಈ ಖಾತೆಗಳನ್ನು ಆಧಾರ್ ಸಂಖ್ಯೆಗಳ ಜೊತೆ ಮತ್ತು ಮೊಬೈಲ್ ಸಂಖ್ಯೆಗಳ ಜೊತೆ ಜೋಡಿಸಲಾಗಿದೆ . ಇಂದು ಸುಮಾರು 425 ಕಲ್ಯಾಣ ಕಾರ್ಯಕ್ರಮಗಳ ಲಾಭಗಳನ್ನು ಈ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾಯಿಸಲಾಗುತ್ತಿದೆ. ಫಲಾನುಭವಿಗಳಿಗೆ ನೇರವಾಗಿ ಆರು ಲಕ್ಷ ಕೋಟಿ ರೂ.ಗಳನ್ನು ವರ್ಗಾಯಿಸಲಾಗಿದೆ ಎಂದವರು ತಿಳಿಸಿದರು. ಈ ಪ್ರಕ್ರಿಯೆಯಲ್ಲಿ 8 ಕೋಟಿ ನಕಲಿ ಫಲಾನುಭವಿಗಳನ್ನು ನಿವಾರಿಸಲಾಗಿದೆ ಮತ್ತು 1.1 ಲಕ್ಷ ಕೋಟಿ ರೂ.ಗಳನ್ನು ಉಳಿತಾಯ ಮಾಡಲಾಗಿದೆ ಎಂದರು .

ಆಯುಷ್ಮಾನ್ ಭಾರತ ಯೋಜನೆಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು ಇದರಲ್ಲಿ ಹಣ ನೇರವಾಗಿ ಆಸ್ಪತ್ರೆಗಳ ಖಾತೆಗೆ ಹೋಗುವುದರಿಂದ ಯಾವುದೇ ಸೋರಿಕೆಗೆ ಅವಕಾಶ ಇರುವುದಿಲ್ಲ ಎಂದರು. ಫಲಾನುಭವಿಗಳು ಆಧಾರ್ ಕಾರ್ಡ್ ಹೊಂದಿದ್ದು, ಅವರನ್ನು 2015 ರ ಸಮಾಜೋ –ಆರ್ಥಿಕ ಸರ್ವೆ ಅಡಿಯಲ್ಲಿ ಆಯ್ಕೆ ಮಾಡಲಾಗಿದೆ. ಅದೇ ರೀತಿ 12 ಕೋಟಿ ರೈತರು ನೇರ ನಗದು ವರ್ಗಾವಣೆ ಪಡೆಯುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯಲ್ಲೂ ಸೋರಿಕೆ ಸಾಧ್ಯವಿಲ್ಲ ಎಂದರು.

ಉತ್ತರಪ್ರದೇಶದಲ್ಲಿಯ ಬಾಣಸಾಗರ ಅಣೆಕಟ್ಟು, ಜಾರ್ಖಂಡದಲ್ಲಿಯ ಮಂಡಲ್ ಅಣೆಕಟ್ಟುಗಳಂತಹ ಯೋಜನೆಗಳನ್ನು ಪ್ರಸ್ತಾವಿಸಿದ ಪ್ರಧಾನಮಂತ್ರಿ ಅವರು ಈ ಯೋಜನೆಗಳು ದಶಕಗಳ ಕಾಲ ವಿಳಂಬಗೊಂಡುದರಿಂದಾಗಿ ಅವುಗಳನ್ನು ನಿರ್ಮಿಸುವಲ್ಲಿ ಭಾರೀ ದರ ಏರಿಕೆ ಆಗಿದೆ ಎಂದರು. ಪ್ರಾಮಾಣಿಕ ತೆರಿಗೆ ಪಾವತಿದಾರ ಈ ವಿಳಂಬದ ಅವಧಿಯಲ್ಲೂ ತೆರಿಗೆ ಪಾವತಿಸುತ್ತಿದ್ದ ಎಂದೂ ಅವರು ನುಡಿದರು. ಪ್ರಗತಿ ಉಪಕ್ರಮದಡಿಯಲ್ಲಿ ತಾವು 12 ಲಕ್ಷ ಕೋಟಿ ರೂಪಾಯಿ ಮೌಲ್ಯದ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಿರುವುದಾಗಿಯೂ ಪ್ರಧಾನಮಂತ್ರಿ ಹೇಳಿದರು. ಈ ಯೋಜನೆಗಳಲ್ಲಿ ಬಹುಪಾಲು ಈಶಾನ್ಯ ಭಾಗದಲ್ಲಿವೆ ಎಂದರಲ್ಲದೆ ತಮ್ಮ ಸರಕಾರಕ್ಕೆ ಈಶಾನ್ಯ ಭಾರತ ಆದ್ಯತೆಯಾಗಿದೆ ಎಂದೂ ಹೇಳಿದರು.

ಉದ್ಯೋಗಗಳ ಕುರಿತು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು, ಭಾರತ ಈಗ ಅತ್ಯಂತ ತ್ವರಿತವಾಗಿ ಅಭಿವೃದ್ದಿ ಹೊಂದುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ: ವಿದೇಶೀ ಹೂಡಿಕೆ ಸಾರ್ವಕಾಲಿಕ ಗರಿಷ್ಟವಾಗಿದೆ: ಬಡತನ ತ್ವರಿತವಾಗಿ ಕಡಿಮೆಯಾಗುತ್ತಿದೆ, ಅಂತಾರಾಷ್ಟ್ರೀಯ ವರದಿಗಳ ಪ್ರಕಾರ ಮೂಲಸೌಕರ್ಯಗಳ ಅಭಿವೃದ್ದಿ ಹಿಂದೆಂದಿಗಿಂತಲೂ ವೇಗವಾಗಿ ಆಗುತ್ತಿದೆ ಮತ್ತು ಪ್ರವಾಸೋದ್ಯಮ ಕೂಡಾ ಬೆಳವಣಿಗೆ ಆಗುತ್ತಿದೆ ಎಂದರು. ಇವೆಲ್ಲವೂ ಉದ್ಯೋಗಾವಕಾಶಗಳ ಹೆಚ್ಚಳವಾಗದಿದ್ದರೆ ಸಾಧ್ಯವಾಗುತ್ತಿರಲಿಲ್ಲ ಎಂದೂ ಅವರು ಹೇಳಿದರು.

ವೃತ್ತಿಪರರ ಸಂಖ್ಯೆಯಲ್ಲಿ ಹೆಚ್ಚಳವಾಗಿರುವ, ವಾಣಿಜ್ಯಿಕ ವಾಹನಗಳ ಮಾರಾಟದಲ್ಲಿ ಹೆಚ್ಚಳವಾಗಿರುವ ಬಗ್ಗೆ ಅವರು ಮಾತನಾಡಿದರು. ಪ್ರಧಾನಮಂತ್ರಿ ಮುದ್ರಾ ಯೋಜನಾ ಅಡಿಯಲ್ಲಿ 15 ಕೋಟಿಗೂ ಅಧಿಕ ಉದ್ಯಮಿಗಳಿಗೆ 7 ಲಕ್ಷ ಕೋಟಿ ರೂ.ಗಳಿಗೂ ಅಧಿಕ ಸಾಲ ನೀಡಲಾಗಿದೆ ಎಂದು ಹೇಳಿದ ಅವರು ಇದೂ ಕೂಡಾ ಉದ್ಯೋಗ ಸೃಷ್ಟಿಗೆ ದಾರಿ ಮಾಡಿಕೊಟ್ಟಿದೆ ಎಂದರು ಪ್ರಧಾನಮಂತ್ರಿ ಅವರು ಇ.ಪಿ.ಎಫ್.ಒ. ಚಂದಾದಾರರ ಸಂಖ್ಯೆ ಹೆಚ್ಚುತ್ತಿರುವುದನ್ನೂ ಉಲ್ಲೇಖಿಸಿದರು.

ನವಭಾರತ ನಿರ್ಮಾಣದಲ್ಲಿ ಮತ್ತು ರಚನಾತ್ಮಕ ಪರಿಸರ ನಿರ್ಮಿಸುವಲ್ಲಿ ಮಾಧ್ಯಮಗಳ ಪಾತ್ರ ಪ್ರಮುಖ ಎಂದೂ ಪ್ರಧಾನಮಂತ್ರಿ ಅವರು ಪ್ರತಿಪಾದಿಸಿದರು.