ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಏಪ್ರಿಲ್ 14, 2026 ರಂದು ಉತ್ತರಾಖಂಡ ಮತ್ತು ಉತ್ತರ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಬೆಳಿಗ್ಗೆ 11:15ರ ಸುಮಾರಿಗೆ, ಪ್ರಧಾನಮಂತ್ರಿಯವರು ದೆಹಲಿ-ಡೆಹ್ರಾಡೂನ್ ಆರ್ಥಿಕ ಕಾರಿಡಾರ್ ನ ಎಲಿವೇಟೆಡ್ ವಿಭಾಗದಲ್ಲಿ ವನ್ಯಜೀವಿ ಕಾರಿಡಾರ್ ನ ಪರಿಶೀಲನೆಯನ್ನು ಕೈಗೊಳ್ಳಲು ಉತ್ತರ ಪ್ರದೇಶದ ಸಹರಾನ್ ಪುರಕ್ಕೆ ಭೇಟಿ ನೀಡಲಿದ್ದಾರೆ. ಬೆಳಿಗ್ಗೆ 11:40ರ ಸುಮಾರಿಗೆ, ಪ್ರಧಾನಮಂತ್ರಿಯವರು ಡೆಹ್ರಾಡೂನ್ ಬಳಿಯ ಜೈ ಮಾ ದಾತ್ ಕಾಳಿ ದೇವಾಲಯದಲ್ಲಿ ದರ್ಶನ ಮತ್ತು ಪೂಜೆಯನ್ನು ನೆರವೇರಿಸಲಿದ್ದಾರೆ. ನಂತರ, ಮಧ್ಯಾಹ್ನ 12:30 ರ ಸುಮಾರಿಗೆ, ಪ್ರಧಾನಮಂತ್ರಿಯವರು ಡೆಹ್ರಾಡೂನ್ ನಲ್ಲಿ ನಡೆಯುವ ಸಾರ್ವಜನಿಕ ಸಮಾರಂಭದಲ್ಲಿ ದೆಹಲಿ-ಡೆಹ್ರಾಡೂನ್ ಆರ್ಥಿಕ ಕಾರಿಡಾರ್ ಅನ್ನು ಉದ್ಘಾಟಿಸಲಿದ್ದಾರೆ ಮತ್ತು ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.
213 ಕಿಮೀ ಉದ್ದದ ಆರು ಪಥಗಳ ಪ್ರವೇಶ-ನಿಯಂತ್ರಿತ ದೆಹಲಿ-ಡೆಹ್ರಾಡೂನ್ ಆರ್ಥಿಕ ಕಾರಿಡಾರ್ ಅನ್ನು ₹12,000 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ ಕಾರಿಡಾರ್ ದೆಹಲಿ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳ ಮೂಲಕ ಹಾದುಹೋಗುತ್ತದೆ ಮತ್ತು ದೆಹಲಿ ಮತ್ತು ಡೆಹ್ರಾಡೂನ್ ನಡುವಿನ ಪ್ರಯಾಣದ ಸಮಯವನ್ನು ಪ್ರಸ್ತುತ ಇರುವ ಆರು ಗಂಟೆ ಪಯಣದಿಂದ ಸುಮಾರು ಎರಡೂವರೆ ಗಂಟೆಗಳವರೆಗೆ ಕಡಿಮೆ ಮಾಡುತ್ತದೆ.
ಯೋಜನೆಯ ಅನುಷ್ಠಾನವು 10 ಇಂಟರ್ ಚೇಂಜ್ ಗಳು, ಮೂರು ರೈಲ್ವೆ ಓವರ್ ಬ್ರಿಡ್ಜ್ ಗಳು (ಆರ್.ಒ.ಬಿ.ಗಳು), ನಾಲ್ಕು ಪ್ರಮುಖ ಸೇತುವೆಗಳು ಮತ್ತು 12 ವೇಸೈಡ್ ಸೌಲಭ್ಯಗಳ ನಿರ್ಮಾಣವನ್ನು ಸಹ ಒಳಗೊಂಡಿದೆ, ಇದು ತಡೆರಹಿತ ಹೈ-ಸ್ಪೀಡ್ ಸಂಪರ್ಕವನ್ನು ಸಕ್ರಿಯಗೊಳಿಸುತ್ತದೆ. ಪ್ರಯಾಣಿಕರಿಗೆ ಸುರಕ್ಷಿತ ಮತ್ತು ಹೆಚ್ಚು ಪರಿಣಾಮಕಾರಿ ಪ್ರಯಾಣ ಅನುಭವವನ್ನು ಒದಗಿಸಲು ಕಾರಿಡಾರ್ ಸುಧಾರಿತ ಸಂಚಾರ ನಿರ್ವಹಣಾ ವ್ಯವಸ್ಥೆಯನ್ನು (ಎ.ಟಿ.ಎಂ.ಎಸ್.) ಹೊಂದಿದೆ.
ಈ ಪ್ರದೇಶದಲ್ಲಿನ ಪರಿಸರ ಸೂಕ್ಷ್ಮತೆ, ಶ್ರೀಮಂತ ಜೀವವೈವಿಧ್ಯ ಮತ್ತು ವನ್ಯಜೀವಿಗಳನ್ನು ಗಮನದಲ್ಲಿಟ್ಟುಕೊಂಡು, ಮಾನವ-ಪ್ರಾಣಿ ಸಂಘರ್ಷವನ್ನು ಗಮನಾರ್ಹವಾಗಿ ಕಡಿಮೆ ಮಾಡುವ ಗುರಿಯನ್ನು ಹೊಂದಿರುವ ಹಲವಾರು ವೈಶಿಷ್ಟ್ಯಗಳೊಂದಿಗೆ ಕಾರಿಡಾರ್ ಅನ್ನು ವಿನ್ಯಾಸಗೊಳಿಸಲಾಗಿದೆ. ಕಾಡು ಪ್ರಾಣಿಗಳ ಮುಕ್ತ ಚಲನೆಯನ್ನು ಖಚಿತಪಡಿಸಿಕೊಳ್ಳಲು, ಈ ಯೋಜನೆಯು ಹಲವಾರು ಮೀಸಲಾದ ವನ್ಯಜೀವಿ ಸಂರಕ್ಷಣಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇವುಗಳಲ್ಲಿ 12 ಕಿ.ಮೀ ಉದ್ದದ ವನ್ಯಜೀವಿ ಎತ್ತರದ ಕಾರಿಡಾರ್ ಸೇರಿವೆ, ಇದು ಏಷ್ಯಾದ ಅತಿ ಉದ್ದವಾಗಿದೆ. ಈ ಕಾರಿಡಾರ್ ಎಂಟು ಪ್ರಾಣಿಗಳ ಪಾಸ್ಗಳು, ತಲಾ 200 ಮೀಟರ್ಗಳ ಎರಡು ಆನೆ ಅಂಡರ್ಪಾಸ್ ಗಳು ಮತ್ತು ದಾತ್ ಕಾಳಿ ದೇವಾಲಯದ ಬಳಿ 370 ಮೀಟರ್ ಉದ್ದದ ಸುರಂಗವನ್ನು ಸಹ ಒಳಗೊಂಡಿದೆ.
ದೆಹಲಿ-ಡೆಹ್ರಾಡೂನ್ ಆರ್ಥಿಕ ಕಾರಿಡಾರ್ ಪ್ರಮುಖ ಪ್ರವಾಸೋದ್ಯಮ ಮತ್ತು ಆರ್ಥಿಕ ಕೇಂದ್ರಗಳ ನಡುವಿನ ಸಂಪರ್ಕವನ್ನು ಹೆಚ್ಚಿಸುವ ಮೂಲಕ ಪ್ರಾದೇಶಿಕ ಆರ್ಥಿಕ ಬೆಳವಣಿಗೆಯನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ಪ್ರದೇಶದಾದ್ಯಂತ ವ್ಯಾಪಾರ ಮತ್ತು ಅಭಿವೃದ್ಧಿಗೆ ಹೊಸ ಮಾರ್ಗಗಳನ್ನು ತೆರೆಯುತ್ತದೆ. ಹೆಚ್ಚಿನ ವೇಗದ ಸಂಪರ್ಕವನ್ನು ಪರಿಸರ ಸುಸ್ಥಿರತೆ ಮತ್ತು ನಾಗರಿಕರ ಸುಧಾರಿತ ಜೀವನ ಗುಣಮಟ್ಟದೊಂದಿಗೆ ಸಂಯೋಜಿಸುವ ಮುಂದಿನ ಪೀಳಿಗೆಯ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವ ಪ್ರಧಾನಮಂತ್ರಿಯವರ ಪರಿಕಲ್ಪನೆಯ ದೃಷ್ಟಿಕೋನವನ್ನು ಈ ಯೋಜನೆಯು ಪ್ರತಿಬಿಂಬಿಸುತ್ತದೆ.
*****