ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಮಾಲ್ಡೀವ್ಸ್ ನ ಅಧ್ಯಕ್ಷರು ಭಾರತಕ್ಕೆ ಅಧಿಕೃತ ಭೇಟಿ ನೀಡಿದ್ದ ಸಂದರ್ಭದಲ್ಲಿ ಭಾರತ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಮತ್ತು ಮಾಲ್ಡೀವ್ಸ್ ನ ಮೀನುಗಾರಿಕೆ, ಸಾಗರ ಸಂಪನ್ಮೂಲ ಮತ್ತು ಕೃಷಿ ಸಚಿವಾಲಯದ ನಡುವೆ 2018ರ ಡಿಸೆಂಬರ್ 17ರಂದು ಅಂಕಿತ ಹಾಕಲಾಗಿರುವ ತಿಳಿವಳಿಕೆ ಒಪ್ಪಂದಕ್ಕೆ ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ.
ಕೃಷಿ ವಾಣಿಜ್ಯಕ್ಕಾಗಿ ಪರಿಸರ ವ್ಯವಸ್ಥೆಯನ್ನು ಸುಧಾರಣೆ ಮಾಡಲು ಪರಸ್ಪರ ಸಹಕಾರ ಸ್ಥಾಪಿಸುವ ಈ ತಿಳಿವಳಿಕೆ ಒಪ್ಪಂದವು, ಕೃಷಿ ಗಣತಿ, ಕೃಷಿ ವಾಣಿಜ್ಯ, ಸಮಗ್ರ ಬೇಸಾಯ ವ್ಯವಸ್ಥೆ, ನೀರಾವರಿ, ಸುಧಾರಿತ ಬೀಜ, ಮಣ್ಣಿನ ಆರೋಗ್ಯ ನಿರ್ವಹಣೆ, ಸಂಶೋಧನೆ, ಸ್ಥಳೀಯ ಕೃಷಿ ವಾಣಿಜ್ಯದ ಸಾಮರ್ಥ್ಯವರ್ಧನೆ, ಆಹಾರ ಭದ್ರತೆ ಮತ್ತು ಪೌಷ್ಟಿಕತೆ ಕ್ಷೇತ್ರದಲ್ಲಿನ ಉದ್ಯಮಿಗಳ ಜ್ಞಾನವರ್ಧನೆ, ಹವಾಮಾನ ತಾಳಿಕೊಳ್ಳುವ ಕೃಷಿ ವ್ಯವಸ್ಥೆ, ಉಳಿಕೆ ಕೀಟನಾಶಕ ಪರೀಕ್ಷಿಸಲು ಸೌಲಭ್ಯಗಳ ಸ್ಥಾಪನೆ ಇತ್ಯಾದಿ ಕ್ಷೇತ್ರಗಳಲ್ಲಿ ಸಹಕಾರ ಒದಗಿಸುತ್ತದೆ.
ಈ ತಿಳಿವಳಿಕೆ ಒಪ್ಪಂದದ ಅಡಿಯಲ್ಲಿ ಸಹಕಾರ ಯೋಜನೆಗಳನ್ನು ರೂಪಿಸಲು, ಪಕ್ಷಕಾರರು ನಿರ್ಧರಿಸಿದ ಕಾರ್ಯಗಳನ್ನು ಜಾರಿಗೆ ತರಲು ಮತ್ತು ಕಾರ್ಯ ಚಟುವಟಿಕೆಗಳ ಅನುಷ್ಠಾನಕ್ಕಾಗಿ ಜಂಟಿ ಕಾರ್ಯ ಸಮೂಹವನ್ನು ರಚಿಸಲಾಗುವುದು.
***