Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕೆಂಪುಕೋಟೆಯಲ್ಲಿ ಶ್ರೀ ಗುರು ತೇಗ್ ಬಹದ್ದೂರ್ ಜೀ ಅವರ 400ನೇ ʻಪ್ರಕಾಶ್ ಪುರಬ್ʼ ಆಚರಣೆಯಲ್ಲಿ ಭಾಗಿಯಾದ ಪ್ರಧಾನಿ

ಕೆಂಪುಕೋಟೆಯಲ್ಲಿ ಶ್ರೀ ಗುರು ತೇಗ್ ಬಹದ್ದೂರ್ ಜೀ ಅವರ 400ನೇ ʻಪ್ರಕಾಶ್ ಪುರಬ್ʼ ಆಚರಣೆಯಲ್ಲಿ ಭಾಗಿಯಾದ ಪ್ರಧಾನಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಕೆಂಪುಕೋಟೆಯಲ್ಲಿ ಶ್ರೀ ಗುರು ತೇಗ್ ಬಹದ್ದೂರ್ ಜೀ ಅವರ 400ನೇ `ಪ್ರಕಾಶ್ ಪುರಬ್’ ಆಚರಣೆಯಲ್ಲಿ ಪಾಲ್ಗೊಂಡರು. ಪ್ರಧಾನಮಂತ್ರಿಯವರು ಶ್ರೀ ಗುರು ತೇಗ್ ಬಹದ್ದೂರ್ ಜೀ ಅವರಿಗೆ ಪ್ರಾರ್ಥನೆ ಸಲ್ಲಿಸಿದರು. 400 ರಾಗಿಗಳು ಶಹಬ್/ಕೀರ್ತನೆ ಅರ್ಪಿಸಿದಾಗ ಪ್ರಧಾನ ಮಂತ್ರಿಗಳು ಪ್ರಾರ್ಥನೆಯಲ್ಲಿ ತಲ್ಲೀನರಾದರು. ಈ ಸಂದರ್ಭದಲ್ಲಿ ಸಿಖ್ ಮುಖಂಡರು ಪ್ರಧಾನಮಂತ್ರಿಯವರನ್ನು ಗೌರವಿಸಿದರು. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಸ್ಮರಣಾರ್ಥ ನಾಣ್ಯ ಮತ್ತು ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಪೂಜ್ಯ ಗುರುಗಳ ಬೋಧನೆಗಳ ಪ್ರಕಾರವೇ ದೇಶವು ಗುರುಗಳ ಕೃಪೆಯಿಂದ ಮುಂದುವರಿಯುತ್ತಿದೆ ಎಂದರು. ಪ್ರಧಾನಮಂತ್ರಿಯವರು ಗುರುಗಳ ಪಾದಗಳಿಗೆ ನಮಸ್ಕರಿಸಿದರು. ಗುರು ತೇಗ್ ಬಹದ್ದೂರ್ ಜೀ ಅವರ ಬಲಿದಾನಕ್ಕೆ ಸಾಕ್ಷಿಯಾದ ಕೆಂಪು ಕೋಟೆಯ ಐತಿಹಾಸಿಕ ಮಹತ್ವವನ್ನು ಪ್ರಧಾನ ಮಂತ್ರಿಯವರು ಒತ್ತಿ ಹೇಳಿದರು. ಇದು ರಾಷ್ಟ್ರದ ಇತಿಹಾಸ ಮತ್ತು ಆಕಾಂಕ್ಷೆಯ ಪ್ರತಿಬಿಂಬವಾಗಿದೆ. ಈ ಹಿನ್ನೆಲೆಯಲ್ಲಿ ಈ ಐತಿಹಾಸಿಕ ಸ್ಥಳದಲ್ಲಿ ಇಂದಿನ ಕಾರ್ಯಕ್ರಮ ನಡೆಯುತ್ತಿರುವುದು ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ ಎಂದು ಅವರು ಹೇಳಿದರು.

ನೂರಾರು ವರ್ಷಗಳ ಗುಲಾಮಗಿರಿಯಿಂದ ಭಾರತ ಗಳಿಸಿದ ಮುಕ್ತಿ ಹಾಗೂ ಭಾರತದ ಸ್ವಾತಂತ್ರ್ಯವನ್ನು ದೇಶದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪ್ರಯಾಣದಿಂದ ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ಒತ್ತಿ ಹೇಳಿದರು. ಅದಕ್ಕಾಗಿಯೇ, ದೇಶವು ʻಆಜಾದಿ ಕಾ ಅಮೃತ ಮಹೋತ್ಸವʼ ಮತ್ತು ಶ್ರೀ ಗುರು ತೇಗ್ ಬಹದ್ದೂರ್ ಜೀ ಅವರ 400ನೇ ʻಪ್ರಕಾಶ್ ಪುರಬ್ʼ ಅನ್ನು ಒಂದೇ ಸಂಕಲ್ಪದೊಂದಿಗೆ ಆಚರಿಸುತ್ತಿದೆ ಎಂದರು. “ನಮ್ಮ ಗುರುಗಳು ಸದಾ ತಮ್ಮ ಜ್ಞಾನ ಮತ್ತು ಆಧ್ಯಾತ್ಮಿಕತೆಯ ಜೊತೆಗೆ ಸಮಾಜ ಮತ್ತು ಸಂಸ್ಕೃತಿಯ ಜವಾಬ್ದಾರಿಯನ್ನೂ ವಹಿಸಿಕೊಳ್ಳುತ್ತಾರೆ. ಅವರು ಶಕ್ತಿಯನ್ನು ಸೇವೆಯ ಮಾಧ್ಯಮವನ್ನಾಗಿ ಮಾಡಿಕೊಂಡರು” ಎಂದು ಪ್ರಧಾನಿ ಹೇಳಿದರು.

“ಭಾರತದ ಈ ನೆಲವು ಕೇವಲ ಒಂದು ದೇಶವಲ್ಲ, ಅದು ನಮ್ಮ ಶ್ರೇಷ್ಠ ಪರಂಪರೆ ಮತ್ತು ಒಂದು ಮಹಾನ್ ಸಂಪ್ರದಾಯವಾಗಿದೆ,” ಎಂದು ಪ್ರಧಾನಿ ಹೇಳಿದರು. ಇದನ್ನು ನಮ್ಮ ಋಷಿಮುನಿಗಳು, ಗುರುಗಳು ಲಕ್ಷಾಂತರ ವರ್ಷಗಳ ತಪಸ್ಸು ಹಾಗೂ ಅದರಿಂದ ದೊರೆತ ಚಿಂತನೆಗಳ ಸಮೃದ್ಧಿಯೊಂದಿಗೆ ಪೋಷಿಸಿದ್ದಾರೆ.” ಗುರು ತೇಗ್ ಬಹದ್ದೂರ್ ಜೀ ಅವರ ಅಮರ ತ್ಯಾಗದ ಪ್ರತೀಕವಾದ ಗುರುದ್ವಾರ ಶೀಶ್ ಗಂಜ್ ಸಾಹಿಬ್, ಗುರು ತೇಗ್ ಬಹದ್ದೂರ್ ಅವರ ತ್ಯಾಗದ ಅಗಾಧತೆಯನ್ನು ನಮಗೆ ನೆನಪಿಸುತ್ತದೆ ಎಂದು ಶ್ರೀ ಮೋದಿ ಹೇಳಿದರು. ಆ ಅವಧಿಯಲ್ಲಿ ಧರ್ಮದ ಹೆಸರಿನಲ್ಲಿ ಹಿಂಸಾಚಾರಕ್ಕೆ ಇಳಿದವರ ಧಾರ್ಮಿಕ ಮತಾಂಧತೆ ಮತ್ತು ತೀವ್ರ ದೌರ್ಜನ್ಯಗಳನ್ನು ಪ್ರಧಾನಮಂತ್ರಿಯವರು ನೆನಪಿಸಿದರು. “ಆ ಸಮಯದಲ್ಲಿ, ಭಾರತಕ್ಕೆ ಅದರ ಅಸ್ಮಿತೆಯನ್ನು ಉಳಿಸುವ ದೊಡ್ಡ ಭರವಸೆಯು ಗುರು ತೇಗ್ ಬಹದ್ದೂರ್ ಜೀ ಅವರ ರೂಪದಲ್ಲಿ ಹೊರಹೊಮ್ಮಿತು. ಔರಂಗಜೇಬನ ದಬ್ಬಾಳಿಕೆಯ ಚಿಂತನೆಗಳ ಮುಂದೆ ಗುರು ತೇಗ್ ಬಹದ್ದೂರ್ ಜೀ ಅವರು ಬಂಡೆಯಂತೆ ‘ಹಿಂದ್ ದಿ ಚಾದರ್’ ಆಗಿ ನಿಂತರು”, ಎಂದು ಪ್ರಧಾನಿ ಬಣ್ಣಿಸಿದರು. ಗುರು ತೇಗ್ ಬಹದ್ದೂರ್ ಜೀ ಅವರ ತ್ಯಾಗವು ನಮ್ಮ ಸಂಸ್ಕೃತಿಯ ಘನತೆಯನ್ನು ರಕ್ಷಿಸಲು ಮತ್ತು ಗೌರವಿಸಲು ಹಾಗೂ ಅಂತಹ ಗೌರವಕ್ಕಾಗಿ ಬದುಕಲು ಮತ್ತು ಅಗತ್ಯವಾದರೆ ಪ್ರಾಣವನ್ನೂ ನೀಡಲು ಭಾರತದ ಅನೇಕ ತಲೆಮಾರುಗಳನ್ನು ಪ್ರೇರೇಪಿಸಿದೆ. ದೈತ್ಯ ಶಕ್ತಿಗಳು ಕಣ್ಮರೆಯಾಗಿವೆ, ಬೃಹತ್‌ ಬಿರುಗಾಳಿಗಳು ಶಾಂತವಾಗಿವೆ, ಆದರೆ ಭಾರತವು ಇನ್ನೂ ಅಮರವಾಗಿದೆ, ಮುಂದೆ ಸಾಗುತ್ತಿದೆ ಎಂದು ಅವರು ಹೇಳಿದರು. ಇಂದು, ವಿಶ್ವವು ಮತ್ತೊಮ್ಮೆ ಭಾರತದತ್ತ ಭರವಸೆ ಮತ್ತು ನಿರೀಕ್ಷೆಯಿಂದ ನೋಡುತ್ತಿದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ‘ನವ ಭಾರತ’ದ ಪ್ರಭಾವಳಿಯಲ್ಲಿ ನಾವು ಎಲ್ಲೆಡೆ ಗುರು ತೇಗ್ ಬಹದ್ದೂರ್ ಜೀ ಅವರ ಆಶೀರ್ವಾದವನ್ನು ಅನುಭವಿಸುತ್ತೇವೆ” ಎಂದು ಪ್ರಧಾನಿ ಹೇಳಿದರು.

ದೇಶದ ಮೂಲೆ ಮೂಲೆಗಳಲ್ಲಿ ಗುರುವಿನ ಪ್ರಭಾವ ಮತ್ತು ಅವರ ಬುದ್ಧಿವಂತಿಕೆಯ ಬೆಳಕಿನ ಉಪಸ್ಥಿತಿಯನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಗುರುನಾನಕ್ ದೇವ್ ಜೀ ಅವರು ಇಡೀ ದೇಶವನ್ನು ಒಂದೇ ಎಳೆಯಲ್ಲಿ ಒಗ್ಗೂಡಿಸಿದರು ಎಂದರು. ಗುರು ತೇಗ್ ಬಹದ್ದೂರ್ ಅವರ ಅನುಯಾಯಿಗಳು ಎಲ್ಲೆಡೆಯೂ ಇದ್ದರು. ಪಾಟ್ನಾದ ಪವಿತ್ರ ʻಪಾಟ್ನಾ ಸಾಹಿಬ್ʼ ಮತ್ತು ದೆಹಲಿಯ ʻರಕಬ್ ಗಂಜ್ ಸಾಹಿಬ್ʼ ಅನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, “ನಾವು ಎಲ್ಲೆಲ್ಲೂ ‘ಏಕ್ ಭಾರತ್’ ಅನ್ನು ಗುರುಗಳ ಬುದ್ಧಿವಂತಿಕೆ ಮತ್ತು ಆಶೀರ್ವಾದದ ರೂಪದಲ್ಲಿ ನೋಡುತ್ತೇವೆ” ಎಂದು ಹೇಳಿದರು. ಸಿಖ್ ಪರಂಪರೆಯನ್ನು ಆಚರಿಸುವ ಸರಕಾರದ ಪ್ರಯತ್ನದ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಕಳೆದ ವರ್ಷವೇ, ʻಸಾಹಿಬ್ಜಾದೆʼ ಅವರ ಮಹಾನ್ ತ್ಯಾಗದ ನೆನಪಿಗಾಗಿ ಡಿಸೆಂಬರ್ 26ರಂದು ʻವೀರ್ ಬಾಲ್ ದಿವಸ್ʼ ಆಚರಿಸಲು ಸರಕಾಋ ನಿರ್ಧರಿಸಿದೆ ಎಂದು ಗಮನಸೆಳೆದರು. ಸಿಖ್ ಸಂಪ್ರದಾಯದ ತೀರ್ಥಯಾತ್ರೆಗಳನ್ನು ಸಂಪರ್ಕಿಸಲು ಸರಕಾರವು ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ. ʻಕರ್ತಾರ್ ಸಾಹಿಬ್ʼಗಾಗಿ ಕಾಯುವಿಕೆ ಮುಗಿದಿದೆ ಮತ್ತು ಸರಕಾರ ಅನೇಕ ಯೋಜನೆಗಳು ಈ ಪವಿತ್ರ ಸ್ಥಳಗಳ ತೀರ್ಥಯಾತ್ರೆಯನ್ನು ಸುಲಭಗೊಳಿಸುತ್ತಿವೆ.  ಸ್ವದೇಶ್ ದರ್ಶನ್ ಯೋಜನೆಯಡಿ, ಆನಂದಪುರ ಸಾಹಿಬ್ ಮತ್ತು ಅಮೃತಸರ ಸಾಹಿಬ್ ಸೇರಿದಂತೆ ಅನೇಕ ಪ್ರಮುಖ ಸ್ಥಳಗಳನ್ನು ಒಳಗೊಂಡ ʻಯಾತ್ರಾ ಸರ್ಕ್ಯೂಟ್ʼ ಬರಲಿದೆ. ಹೇಮಕುಂಟ್ ಸಾಹಿಬ್‌ನಲ್ಲಿ ʻರೋಪ್ ವೇʼ ಕಾಮಗಾರಿ ಪ್ರಗತಿಯಲ್ಲಿದೆ ಎಂದು  ಮಾಹಿತಿ ನೀಡಿದರು. ಗುರು ಗ್ರಂಥ ಸಾಹಿಬ್‌ನ ವೈಭವಕ್ಕೆ ತಲೆಬಾಗಿದ ಶ್ರೀ ಮೋದಿ ಅವರು, “ಶ್ರೀ ಗುರು ಗ್ರಂಥ ಸಾಹಿಬ್, ನಮಗೆ ಆತ್ಮಸಾಕ್ಷಾತ್ಕಾರದ ಮಾರ್ಗದರ್ಶಕ ಮತ್ತು ಭಾರತದ ವೈವಿಧ್ಯತೆ ಹಾಗೂ ಏಕತೆಯ ಜೀವಂತ ರೂಪ. ಆದ್ದರಿಂದ, ಅಫ್ಘಾನಿಸ್ತಾನದಲ್ಲಿ ಬಿಕ್ಕಟ್ಟು ಉದ್ಭವಿಸಿದಾಗ ಸರಕಾರವು ಶತಪ್ರಯತ್ನಗಳನ್ನೂ ನಡೆಸಿ  ಗುರು ಗ್ರಂಥ ಸಾಹಿಬ್‌ ಪವಿತ್ರ ‘ಸ್ವರೂಪ್’ ಅನ್ನು ಎಲ್ಲಾ ಗೌರವಗಳೊಂದಿಗೆ ಭಾರತಕ್ಕೆ ತರುವ ವ್ಯವಸ್ಥೆ ಮಾಡಿತು,” ಎಂದರು. ಪೌರತ್ವ ತಿದ್ದುಪಡಿ ಕಾಯ್ದೆಯ ಮೂಲಕ, ನೆರೆಯ ದೇಶಗಳಿಂದ ಬರುವ ಸಿಖ್ಖರು ಮತ್ತು ಅಲ್ಪಸಂಖ್ಯಾತರಿಗೆ ಪೌರತ್ವದ ಮಾರ್ಗವನ್ನು ಮುಕ್ತಗೊಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಭಾರತದ ತಾತ್ವಿಕ ತಿರುಳಿನ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, “ಭಾರತವು ಯಾವುದೇ ದೇಶ ಅಥವಾ ಸಮಾಜಕ್ಕೆ ಎಂದಿಗೂ ಬೆದರಿಕೆ ಒಡ್ಡಿಲ್ಲ. ಇಂದಿಗೂ ನಾವು ಇಡೀ ಪ್ರಪಂಚದ ಕಲ್ಯಾಣಕ್ಕಾಗಿ ಯೋಚಿಸುತ್ತೇವೆ. ನಾವು ಸ್ವಾವಲಂಬಿ ಭಾರತದ ಬಗ್ಗೆ ಮಾತನಾಡುವಾಗ, ನಾವು ಇಡೀ ವಿಶ್ವದ ಪ್ರಗತಿಯನ್ನು ಮುಂಚೂಣಿಯಲ್ಲಿಡುತ್ತೇವೆ.  ಇಂದಿನ ಭಾರತವು ಜಾಗತಿಕ ಸಂಘರ್ಷಗಳ ನಡುವೆಯೂ ಸಂಪೂರ್ಣ ಸ್ಥಿರತೆಯೊಂದಿಗೆ ಶಾಂತಿಗಾಗಿ ಶ್ರಮಿಸುತ್ತದೆ, ಮತ್ತು ದೇಶದ ರಕ್ಷಣೆ ಮತ್ತು ಭದ್ರತೆ ವಿಚಾರದಲ್ಲಿ ಭಾರತವು ಸಮಾನವಾಗಿ ಸದೃಢವಾಗಿದೆ. ಗುರುಗಳು ನೀಡಿದ ಮಹಾನ್ ಸಿಖ್ ಸಂಪ್ರದಾಯ ನಮ್ಮ ಮುಂದಿದೆ ಎಂದು ಅವರು ಹೇಳಿದರು.

ಗುರುಗಳು ಹಳೆಯ ರೂಢಮಾದರಿಗಳನ್ನು ಬದಿಗಿಟ್ಟು ಹೊಸ ಆಲೋಚನೆಗಳನ್ನು ಮುಂದಿಟ್ಟಿದ್ದಾರೆ. ಅವರ ಶಿಷ್ಯರು ಅವುಗಳನ್ನು ಅನುಸರಿಸಿ, ಅವುಗಳಿಂದ ಕಲಿತರು. ಹೊಸ ಚಿಂತನೆಯ ಈ ಸಾಮಾಜಿಕ ಅಭಿಯಾನವು ಆಲೋಚನಾ ಮಟ್ಟದಲ್ಲಿ ಒಂದು ದೊಡ್ಡ ಆವಿಷ್ಕಾರವಾಗಿತ್ತು. “ಹೊಸ ಚಿಂತನೆ, ನಿರಂತರ ಕಠಿಣ ಪರಿಶ್ರಮ ಮತ್ತು 100% ಸಮರ್ಪಣೆ, ಇದು ಇಂದಿಗೂ ನಮ್ಮ ಸಿಖ್ ಸಮಾಜದ ಅಸ್ಮಿತೆಯಾಗಿದೆ. ಇದು ಇಂದಿನ ʻಆಜಾದಿ ಕಾ ಅಮೃತ ಮಹೋತ್ಸವʼದ ಸಮಯದಲ್ಲಿ ದೇಶದ ಸಂಕಲ್ಪವಾಗಿದೆ. ನಮ್ಮ ಅಸ್ಮಿತೆಯ ಬಗ್ಗೆ ನಾವು ಹೆಮ್ಮೆ ಪಡಬೇಕು. ನಾವು ಸ್ಥಳೀಯರ ಬಗ್ಗೆ ಹೆಮ್ಮೆ ಪಡಬೇಕು, ನಾವು ಸ್ವಾವಲಂಬಿ ಭಾರತವನ್ನು ನಿರ್ಮಿಸಬೇಕು ಎಂದರು.

 

********