Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕೇಂದ್ರ ಬಜೆಟ್ ಕುರಿತು ಪ್ರಧಾನಮಂತ್ರಿ ಅವರ ಭಾಷಣ

ಕೇಂದ್ರ ಬಜೆಟ್ ಕುರಿತು ಪ್ರಧಾನಮಂತ್ರಿ ಅವರ ಭಾಷಣ


ನನ್ನ ಪ್ರೀತಿಯ ದೇಶವಾಸಿಗಳೇ, ನಮಸ್ಕಾರ. 

ಇಂದಿನ ಬಜೆಟ್ ಐತಿಹಾಸಿಕವಾಗಿದೆ; ಇದು ದೇಶದ ನಾರಿ ಶಕ್ತಿ (ಮಹಿಳಾ ಶಕ್ತಿ) ಯ ಪ್ರಬಲ ಪ್ರತಿಬಿಂಬವಾಗಿದೆ. ಮಹಿಳಾ ಹಣಕಾಸು ಸಚಿವೆಯಾಗಿ, ನಿರ್ಮಲಾ ಅವರು ಸತತ ಒಂಬತ್ತನೇ ಬಾರಿಗೆ ದೇಶದ ಬಜೆಟ್ ಮಂಡಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಈ ಬಜೆಟ್ ಅಪಾರ ಅವಕಾಶಗಳ ಹೆದ್ದಾರಿಯಾಗಿದೆ. ಈ ಬಜೆಟ್ ಪ್ರಸ್ತುತ ಕನಸುಗಳನ್ನು ಸಾಕಾರಗೊಳಿಸುತ್ತದೆ ಮತ್ತು ಭಾರತದ ಉಜ್ವಲ ಭವಿಷ್ಯದ ಅಡಿಪಾಯವನ್ನು ಬಲಪಡಿಸುತ್ತದೆ. 2047ರ ಹೊತ್ತಿಗೆ ‘ವಿಕಸಿತ ಭಾರತ’ದ (ಅಭಿವೃದ್ಧಿ ಹೊಂದಿದ ಭಾರತ) ಕಡೆಗೆ ನಮ್ಮ ಉನ್ನತ ಹಾರಾಟಕ್ಕೆ ಈ ಬಜೆಟ್ ಬಲವಾದ ಅಡಿಪಾಯವಾಗಿದೆ.

ಸ್ನೇಹಿತರೇ, 

ಭಾರತವು ಇಂದು ಸಾಗುತ್ತಿರುವ ‘ಸುಧಾರಣಾ ಎಕ್ಸ್‌ಪ್ರೆಸ್‌’ಗೆ ಈ ಬಜೆಟ್ ಹೊಸ ಶಕ್ತಿ ಮತ್ತು ಹೊಸ ವೇಗವನ್ನು ನೀಡಲಿದೆ. ಕೈಗೊಳ್ಳಲಾದ ಪಥ-ಪ್ರವರ್ತಕ ಸುಧಾರಣೆಗಳು, ಮಹತ್ವಾಕಾಂಕ್ಷಿ ಭಾರತದ ಧೈರ್ಯವಂತ ಮತ್ತು ಪ್ರತಿಭಾವಂತ ಯುವಜನತೆಗೆ ಹಾರಲು ಮುಕ್ತ ಆಕಾಶವನ್ನು ಒದಗಿಸುತ್ತವೆ. ಈ ಬಜೆಟ್ ನಂಬಿಕೆ ಆಧಾರಿತ ಆಡಳಿತ ಮತ್ತು ಮಾನವ-ಕೇಂದ್ರಿತ ಆರ್ಥಿಕತೆಯ ದೃಷ್ಟಿಕೋನವನ್ನು ಸಾಕಾರಗೊಳಿಸುತ್ತದೆ. ವಿತ್ತೀಯ ಕೊರತೆಯನ್ನು ಕಡಿಮೆ ಮಾಡುವ ಮತ್ತು ಹಣದುಬ್ಬರವನ್ನು ನಿಯಂತ್ರಿಸುವತ್ತ ಗಮನಹರಿಸುವುದರ ಜೊತೆಗೆ, ಏಕಕಾಲದಲ್ಲಿ ಹೆಚ್ಚಿನ ಬಂಡವಾಳ ವೆಚ್ಚ ಮತ್ತು ಹೆಚ್ಚಿನ ಬೆಳವಣಿಗೆಯ ನಡುವೆ ಸಮನ್ವಯತೆಯನ್ನು ಸಾಧಿಸಿರುವ ಒಂದು ವಿಶಿಷ್ಟ ಬಜೆಟ್ ಇದಾಗಿದೆ.

ಸ್ನೇಹಿತರೇ, 

ಈ ಬಜೆಟ್ ಭಾರತದ ಜಾಗತಿಕ ಪಾತ್ರವನ್ನು ಮರು-ಸಬಲೀಕರಣಗೊಳಿಸುತ್ತದೆ. ಭಾರತದ 140 ಕೋಟಿ ನಾಗರಿಕರು ಕೇವಲ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿರುವುದಕ್ಕೆ ತೃಪ್ತರಾಗಿಲ್ಲ. ನಾವು ಸಾಧ್ಯವಾದಷ್ಟು ಬೇಗ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲು ಬಯಸುತ್ತೇವೆ. ಇದು ಕೋಟ್ಯಂತರ ದೇಶವಾಸಿಗಳ ಸಂಕಲ್ಪವಾಗಿದೆ. ವಿಶ್ವದ ‘ವಿಶ್ವಾಸಾರ್ಹ ಪ್ರಜಾಪ್ರಭುತ್ವ ಪಾಲುದಾರ’ ಮತ್ತು ‘ವಿಶ್ವಾಸಾರ್ಹ ಗುಣಮಟ್ಟದ ಪೂರೈಕೆದಾರ’ನಾಗಿ ಭಾರತದ ಪಾತ್ರವು ನಿರಂತರವಾಗಿ ಹೆಚ್ಚುತ್ತಿದೆ.  ಭಾರತ ಇತ್ತೀಚೆಗೆ ಮಾಡಿರುವ ಎಲ್ಲಾ ಒಪ್ಪಂದಗಳ ತಾಯಿಯಾದ ದೊಡ್ಡ ವ್ಯಾಪಾರ ಒಪ್ಪಂದಗಳ ಗರಿಷ್ಠ ಲಾಭವು ಭಾರತದ ಯುವಜನರಿಗೆ ಮತ್ತು ಭಾರತದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಹೋಗಬೇಕು; ಈ ದಿಕ್ಕಿನಲ್ಲಿ ಬಜೆಟ್‌ ನಲ್ಲಿ ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಸ್ನೇಹಿತರೇ,

ಈ ಬಜೆಟ್‌ ನಲ್ಲಿ, ‘ಮೇಕ್ ಇನ್ ಇಂಡಿಯಾ’ ಮತ್ತು ‘ಆತ್ಮನಿರ್ಭರ ಭಾರತ ಅಭಿಯಾನ’ಕ್ಕೆ ಹೊಸ ವೇಗ ನೀಡಲು ಮಹತ್ವಾಕಾಂಕ್ಷೆಯ ಮಾರ್ಗಸೂಚಿಯನ್ನು ಮಂಡಿಸಲಾಗಿದೆ. ಈ ಬಜೆಟ್‌ ನಲ್ಲಿ ಉದಯೋನ್ಮುಖ ಉದ್ಯಮಗಳಿಗೆ, ಅಂದರೆ ‘ಸನ್‌ರೈಸ್ ಸೆಕ್ಟರ್ಸ್‌’ (Sunrise Sectors) ಗೆ ನೀಡಿರುವ ಬೆಂಬಲವು ಅಭೂತಪೂರ್ವವಾಗಿದೆ. ಬಯೋ-ಫಾರ್ಮಾ ಶಕ್ತಿ ಮಿಷನ್, ಸೆಮಿಕಂಡಕ್ಟರ್ ಮಿಷನ್ 2.0, ಎಲೆಕ್ಟ್ರಾನಿಕ್ ಘಟಕಗಳ ಉತ್ಪಾದನಾ ಯೋಜನೆ, ‘ರೇರ್ ಅರ್ಥ್’ (Rare Earth) ಕಾರಿಡಾರ್ ನಿರ್ಮಾಣ, ನಿರ್ಣಾಯಕ ಖನಿಜಗಳಿಗೆ ಒತ್ತು, ಜವಳಿ ವಲಯದಲ್ಲಿ ಹೊಸ ಯೋಜನೆ, ಹೈಟೆಕ್ ಉಪಕರಣಗಳ ತಯಾರಿಕೆಗೆ ಉತ್ತೇಜನ, ಚಾಂಪಿಯನ್ ಎಂ ಎಸ್‌ ಎಂ ಇಗ ಳನ್ನು (MSME) ರೂಪಿಸುವುದು—ಇವೆಲ್ಲವೂ ಭವಿಷ್ಯದ ದೃಷ್ಟಿಕೋನವನ್ನು ಹೊಂದಿದ್ದು, ದೇಶದ ಪ್ರಸ್ತುತ ಮತ್ತು ಭವಿಷ್ಯದ ಅಗತ್ಯಗಳನ್ನು ಪೂರೈಸುತ್ತವೆ. ಈ ಬಜೆಟ್‌ ನಲ್ಲಿ ಎಂ ಎಸ್‌ ಎಂ ಇ ಗಳು ಮತ್ತು ನಮ್ಮ ಸಣ್ಣ ಹಾಗೂ ಗುಡಿ ಕೈಗಾರಿಕೆಗಳಿಗೆ ದೊರೆತಿರುವ ಬೆಂಬಲವು ಅವುಗಳಿಗೆ ‘ಲೋಕಲ್ ಟು ಗ್ಲೋಬಲ್’ ಆಗಲು ಹೊಸ ಶಕ್ತಿಯನ್ನು ನೀಡುತ್ತದೆ.

ಸ್ನೇಹಿತರೇ,

ಮೂಲಸೌಕರ್ಯವನ್ನು ಬಲಪಡಿಸಲು ಬಜೆಟ್‌ ನಲ್ಲಿ ಹಲವಾರು ಪ್ರಮುಖ ಕ್ರಮಗಳನ್ನು ಕೈಗೊಳ್ಳಲಾಗಿದೆ:

• ಮೀಸಲಾದ ಸರಕು ಸಾಗಣೆ ಕಾರಿಡಾರ್ 

• ದೇಶಾದ್ಯಂತ ಜಲಮಾರ್ಗಗಳ ವಿಸ್ತರಣೆ

• ಹೈ-ಸ್ಪೀಡ್ ರೈಲು ಕಾರಿಡಾರ್

• ಟೈರ್-2 ಮತ್ತು ಟೈರ್-3 ನಗರಗಳ ಅಭಿವೃದ್ಧಿಗೆ ವಿಶೇಷ ಗಮನ ಮತ್ತು ನಗರಗಳಿಗೆ ಬಲವಾದ ಆರ್ಥಿಕ ಅಡಿಪಾಯ ನೀಡಲು ಮುನ್ಸಿಪಲ್ ಬಾಂಡ್‌ ಗಳನ್ನು ಉತ್ತೇಜಿಸುವುದು; ಈ ಎಲ್ಲಾ ಕ್ರಮಗಳು ‘ವಿಕಸಿತ ಭಾರತ’ದ ಪಯಣವನ್ನು ಮತ್ತಷ್ಟು ವೇಗಗೊಳಿಸಲಿವೆ.

ಸ್ನೇಹಿತರೇ,

ಯಾವುದೇ ದೇಶದ ಅತಿದೊಡ್ಡ ಬಂಡವಾಳವೆಂದರೆ ಅದರ ನಾಗರಿಕರು. ಕಳೆದ ವರ್ಷಗಳಲ್ಲಿ, ನಮ್ಮ ಸರ್ಕಾರವು ದೇಶದ ನಾಗರಿಕರ ಸಾಮರ್ಥ್ಯವನ್ನು ಹೆಚ್ಚಿಸಲು ಅಭೂತಪೂರ್ವ ಹೂಡಿಕೆಯನ್ನು ಮಾಡಿದೆ. ಕೌಶಲ (Skill), ವ್ಯಾಪ್ತಿ (Scale) ಮತ್ತು ಸುಸ್ಥಿರತೆ (Sustainability) ಗೆ ನಿರಂತರವಾಗಿ ಶಕ್ತಿ ನೀಡುವುದು ನಮ್ಮ ಪ್ರಯತ್ನವಾಗಿದೆ. ಇಂದು ಸಂಸತ್ತಿನಲ್ಲಿ ನಿರ್ಮಲಾ ಜೀ ಅವರು ಹೇಳಿದಂತೆ, ಇದು ಯುವಶಕ್ತಿಯ ಬಜೆಟ್ ಆಗಿದೆ. ಇದರಲ್ಲಿ ಯುವಕರ ಆಲೋಚನೆ, ಯುವಕರ ಕನಸುಗಳು, ಯುವಕರ ಸಂಕಲ್ಪ ಮತ್ತು ಯುವಕರ ವೇಗ ಅಡಗಿದೆ. ಈ ಬಜೆಟ್‌ ನಲ್ಲಿ ಮಾಡಲಾದ ನಿಬಂಧನೆಗಳು ವಿವಿಧ ಕ್ಷೇತ್ರಗಳಲ್ಲಿ ನಾಯಕರು, ನಾವೀನ್ಯಕಾರರು ಮತ್ತು ಸೃಷ್ಟಿಕರ್ತರನ್ನು ರೂಪಿಸಲಿವೆ. ವೈದ್ಯಕೀಯ ಹಬ್‌ಗಳ ರಚನೆಯ ಮೂಲಕ, ಪೂರಕ ಆರೋಗ್ಯ ವೃತ್ತಿಪರರ ಮೂಲಕ, ಆರೆಂಜ್ ಎಕಾನಮಿ (ಅಂದರೆ ಆಡಿಯೋ-ವಿಷುಯಲ್ ಮತ್ತು ಗೇಮಿಂಗ್) ಪ್ರೋತ್ಸಾಹಿಸುವ ಮೂಲಕ, ಪ್ರವಾಸೋದ್ಯಮವನ್ನು ಉತ್ತೇಜಿಸುವ ಮೂಲಕ ಮತ್ತು ಖೇಲೋ ಇಂಡಿಯಾ ಮಿಷನ್ ಮೂಲಕ ಯುವಕರಿಗೆ ಹೊಸ ಅವಕಾಶಗಳ ಬಾಗಿಲು ತೆರೆಯಲಿದೆ. ಭಾರತವನ್ನು ವಿಶ್ವದ ಡೇಟಾ ಸೆಂಟರ್ ಹಬ್ ಆಗಿ ಮಾಡಲು ಪ್ರಮುಖ ತೆರಿಗೆ ವಿನಾಯಿತಿಯನ್ನು ಸಹ ಘೋಷಿಸಲಾಗಿದೆ. ಈ ಬಜೆಟ್‌ಗಾಗಿ ನಾನು ವಿಶೇಷವಾಗಿ ಭಾರತದ ಯುವಕರನ್ನು ಅಭಿನಂದಿಸುತ್ತೇನೆ, ಏಕೆಂದರೆ ಇದು ಉದ್ಯೋಗ ಸೃಷ್ಟಿಗೆ ದೊಡ್ಡ ಉತ್ತೇಜನ ನೀಡುತ್ತದೆ. ಪ್ರವಾಸೋದ್ಯಮವನ್ನು ಉತ್ತೇಜಿಸಲು, ವಿಶೇಷವಾಗಿ ಈಶಾನ್ಯ ಭಾಗದಲ್ಲಿ ದೃಢವಾದ ಕ್ರಮಗಳನ್ನು ಈ ಬಜೆಟ್‌ನಲ್ಲಿ ತೆಗೆದುಕೊಂಡಿರುವುದು ನನಗೆ ತುಂಬಾ ಸಂತೋಷ ತಂದಿದೆ. ಭಾರತದ ವಿವಿಧ ರಾಜ್ಯಗಳನ್ನು ಶಕ್ತಿಶಾಲಿಯನ್ನಾಗಿ ಮಾಡುವ ಮೂಲಕ ಸಮತೋಲಿತ ಅಭಿವೃದ್ಧಿಯ ಅಡಿಪಾಯವನ್ನು ಈ ಬಜೆಟ್‌ ನಲ್ಲಿ ಬಲಪಡಿಸಲಾಗಿದೆ.

ಸ್ನೇಹಿತರೇ,

ನಮ್ಮ ದೇಶದಲ್ಲಿ 10 ಕೋಟಿಗೂ ಹೆಚ್ಚು ಮಹಿಳೆಯರು ಸ್ವಸಹಾಯ ಸಂಘಗಳೊಂದಿಗೆ  ಸಂಬಂಧ ಹೊಂದಿದ್ದಾರೆ ಮತ್ತು ಇದು ಅತ್ಯಂತ ಯಶಸ್ವಿ ಅಭಿಯಾನವಾಗಿದೆ. ಮಹಿಳೆಯರೇ ತಯಾರಿಸಿದ ಮತ್ತು ಮಹಿಳೆಯರೇ ನಡೆಸುವ ಸ್ವಸಹಾಯ ಸಂಘಗಳ ಆಧುನಿಕ ಪರಿಸರ ವ್ಯವಸ್ಥೆಯನ್ನು ರಚಿಸಲು ಬಜೆಟ್‌ ನಲ್ಲಿ ಆದ್ಯತೆ ನೀಡಲಾಗಿದೆ. ಪ್ರತಿ ಮನೆಗೂ ಮಹಾಲಕ್ಷ್ಮಿ ಬರಲಿ ಎಂಬುದು ನಮ್ಮ ಪ್ರಯತ್ನವಾಗಿದೆ. ಪ್ರತಿ ಜಿಲ್ಲೆಯಲ್ಲೂ ವಿದ್ಯಾರ್ಥಿನಿಯರಿಗಾಗಿ ಹೊಸ ಹಾಸ್ಟೆಲ್‌ ಗಳನ್ನು ನಿರ್ಮಿಸುವ ಅಭಿಯಾನವು ಶಿಕ್ಷಣವನ್ನು ಸುಲಭವಾಗಿ ಲಭ್ಯವಾಗುವಂತೆ ಮಾಡುತ್ತದೆ.

ಸ್ನೇಹಿತರೇ,

ನಮ್ಮ ಸರ್ಕಾರವು ಭಾರತದ ಕೃಷಿ, ಡೈರಿ ವಲಯ ಮತ್ತು ಮೀನುಗಾರಿಕೆಗೆ ಯಾವಾಗಲೂ ಹೆಚ್ಚಿನ ಆದ್ಯತೆಯನ್ನು ನೀಡಿದೆ. ಈ ಬಜೆಟ್‌ ನಲ್ಲಿಯೂ ತೆಂಗು, ಗೋಡಂಬಿ, ಕೋಕೋ ಮತ್ತು ಶ್ರೀಗಂಧದ ಉತ್ಪಾದನೆಯಲ್ಲಿ ತೊಡಗಿರುವ ರೈತರಿಗಾಗಿ ಅನೇಕ ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ‘ಭಾರತ್ ವಿಸ್ತಾರ್ ಎಐ’ (Bharat Vistar AI) ಉಪಕರಣವು ರೈತರಿಗೆ ಅವರ ಸ್ವಂತ ಭಾಷೆಯಲ್ಲಿ ಮಾಹಿತಿಯನ್ನು ಒದಗಿಸುವ ಮೂಲಕ ಸಾಕಷ್ಟು ಸಹಾಯ ಮಾಡುತ್ತದೆ. ಮೀನುಗಾರಿಕೆ ಮತ್ತು ಪಶುಸಂಗೋಪನೆಯಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುವ ಮೂಲಕ, ಹಳ್ಳಿಗಳಲ್ಲಿಯೇ ಉದ್ಯೋಗ ಮತ್ತು ಸ್ವಯಂ ಉದ್ಯೋಗಕ್ಕೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸಲಾಗುತ್ತದೆ.

ಸ್ನೇಹಿತರೇ,

ಈ ಬಜೆಟ್ ಮಹತ್ವಾಕಾಂಕ್ಷೆಯದಾಗಿದ್ದು, ಇದು ದೇಶದ ಆಕಾಂಕ್ಷೆಗಳನ್ನು ಈಡೇರಿಸುತ್ತದೆ. ಹಳ್ಳಿ, ಬಡವರು ಮತ್ತು ರೈತರ ಕಲ್ಯಾಣವನ್ನು ಖಾತ್ರಿಪಡಿಸುವ ಈ ಭವಿಷ್ಯದ ಬಜೆಟ್‌ ಗಾಗಿ ಮತ್ತು ಸಂವೇದನಾಶೀಲ ಬಜೆಟ್‌ ಗಾಗಿ ನಾನು ಮತ್ತೊಮ್ಮೆ ನಿರ್ಮಲಾ ಜೀ ಮತ್ತು ಅವರ ತಂಡವನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ತುಂಬಾ ಧನ್ಯವಾದಗಳು.

 

*****