Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕೇರಳಂನ ಎರ್ನಾಕುಲಂನಲ್ಲಿ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಕೇರಳಂನ ಎರ್ನಾಕುಲಂನಲ್ಲಿ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ


ಕೇರಳಂ ರಾಜ್ಯಪಾಲರಾದ ರಾಜೇಂದ್ರ ಅರ್ಲೇಕರ್ ಜಿ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿ ಸುರೇಶ್ ಗೋಪಿ ಜಿ, ಜಾರ್ಜ್ ಕುರಿಯನ್ ಜಿ, ಸಂಸತ್ತು ಮತ್ತು ವಿಧಾನಸಭಾ ಸದಸ್ಯರೆ, ಮಾಜಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಜಿ, ಮಹಿಳೆಯರೆ ಮತ್ತು ಮಹನೀಯರೆ!

ಕೊಚ್ಚಿಗೆ ಬರುವುದು ಯಾವಾಗಲೂ ಅದ್ಭುತ ಅನುಭವ ನೀಡುತ್ತದೆ. ಇಂದು ಈ ರೋಮಾಂಚಕ ಕರಾವಳಿ ನಗರದಿಂದ, ಕೇರಳಂ ಅಭಿವೃದ್ಧಿಯನ್ನು ಮತ್ತಷ್ಟು ವೇಗಗೊಳಿಸಲು ನನಗೆ ಅವಕಾಶ ಸಿಕ್ಕಿದೆ. ಸ್ವಲ್ಪ ಸಮಯದ ಹಿಂದೆ, ಕೇರಳದ ಅಭಿವೃದ್ಧಿಗೆ ಸಂಬಂಧಿಸಿದ ಸುಮಾರು 11 ಸಾವಿರ ಕೋಟಿ ರೂಪಾಯಿ ಮೊತ್ತದ ಯೋಜನೆಗಳನ್ನು ಉದ್ಘಾಟಿಸಲಾಯಿತು ಮತ್ತು ಶಂಕುಸ್ಥಾಪನೆ ನೆರವೇರಿಸಲಾಯಿತು. ಈ ಎಲ್ಲಾ ಯೋಜನೆಗಳಿಗಾಗಿ ಕೇರಳದ ಜನರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ನನ್ನ ಪ್ರೀತಿಯ ಸ್ನೇಹಿತರೆ,

ಆತ್ಮನಿರ್ಭರ ಭಾರತ ನಿರ್ಮಾಣಕ್ಕಾಗಿ ಮತ್ತು ಮೇಕ್ ಇನ್ ಇಂಡಿಯಾಕ್ಕಾಗಿ, ಪೆಟ್ರೋಲಿಯಂ ವಲಯದ ವಿಸ್ತರಣೆ ಬಹಳ ಅವಶ್ಯಕ. ಈ ಗುರಿಯನ್ನು ಗಮನದಲ್ಲಿಟ್ಟುಕೊಂಡು ಕೊಚ್ಚಿ ಸಂಸ್ಕರಣಾಗಾರದಲ್ಲಿ ಪಾಲಿಪ್ರೊಪಿಲೀನ್ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಈ ಘಟಕವು ಪ್ರತಿ ವರ್ಷ ಸುಮಾರು 4 ಲಕ್ಷ ಟನ್ ಪಾಲಿಪ್ರೊಪಿಲೀನ್ ಉತ್ಪಾದಿಸುತ್ತದೆ. ಮುಂಬರುವ ದಿನಗಳಲ್ಲಿ, ಈ ಸ್ಥಾವರವು ಪ್ಯಾಕೇಜಿಂಗ್, ಜವಳಿ, ಆಟೋಮೊಬೈಲ್, ವೈದ್ಯಕೀಯ ಸಾಧನಗಳು ಮತ್ತು ಇನ್ನೂ ಅನೇಕ ಕೈಗಾರಿಕೆಗಳನ್ನು ಬೆಂಬಲಿಸುತ್ತದೆ.

ನನ್ನ ಪ್ರೀತಿಯ ಸ್ನೇಹಿತರೆ,

ಭಾರತ ಇಂದು ಉತ್ಪಾದನೆಯ ಪ್ರಮುಖ ಕೇಂದ್ರವಾಗುತ್ತಿದೆ. ದೇಶವು ಕೃತಕ ಬುದ್ಧಿಮತ್ತೆ (ಎಐ) ಮತ್ತು ಸೆಮಿಕಂಡಕ್ಟರ್ ಕ್ಷೇತ್ರಗಳಲ್ಲಿಯೂ ವೇಗವಾಗಿ ಪ್ರಗತಿ ಸಾಧಿಸುತ್ತಿದೆ. ಅಂತಹ ಎಲ್ಲಾ ಕೆಲಸಗಳಿಗೆ, ಹೆಚ್ಚಿನ ಇಂಧನದ ಅಗತ್ಯವಿದೆ – ವಿಶೇಷವಾಗಿ ಹೆಚ್ಚು ಹಸಿರು ಮತ್ತು ಸ್ವಚ್ಛ ಇಂಧನ ಉತ್ಪಾದನೆ. ಭಾರತವು ಈಗಾಗಲೇ ಸೌರಶಕ್ತಿಯಲ್ಲಿ ವಿಶ್ವದ ಅಗ್ರ ರಾಷ್ಟ್ರಗಳಲ್ಲಿ ಒಂದಾಗಿದೆ. ಕೇರಳವು ಸೌರಶಕ್ತಿ ಉತ್ಪಾದನೆಯಲ್ಲಿ ಮತ್ತಷ್ಟು ಮುನ್ನಡೆಯುವುದು ನಮ್ಮ ಪ್ರಯತ್ನವಾಗಿದೆ. ಈ ಉದ್ದೇಶದೊಂದಿಗೆ, ಇಂದು ಪಶ್ಚಿಮ ಕಲ್ಲಡದಲ್ಲಿ 50 ಮೆಗಾವ್ಯಾಟ್ ತೇಲುವ ಸೌರ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಕೇರಳವು ಹೆಚ್ಚಿನ ಸಂಖ್ಯೆಯ ಜಲಮೂಲಗಳನ್ನು ಹೊಂದಿದೆ. ಆದ್ದರಿಂದ ತೇಲುವ ಸೌರಶಕ್ತಿ ಕ್ಷೇತ್ರದಲ್ಲಿ ಇಲ್ಲಿ ಅಪಾರ ಸಾಮರ್ಥ್ಯವಿದೆ.

ನನ್ನ ಪ್ರೀತಿಯ ಸ್ನೇಹಿತರೆ,

ಇಂದು ಭಾರತವು ಆಧುನಿಕ ಮೂಲಸೌಕರ್ಯ ವಲಯದಲ್ಲಿ ಮಾಡಲಾಗುತ್ತಿರುವ ಹೂಡಿಕೆಗಳಿಗಾಗಿ ಇಡೀ ಜಗತ್ತು ಪ್ರಶಂಸಿಸುತ್ತಿದೆ. ಈ ವರ್ಷದ ಕೇಂದ್ರ ಬಜೆಟ್‌ನಲ್ಲಿಯೂ ಸಹ, ಮೂಲಸೌಕರ್ಯಕ್ಕಾಗಿ ದಾಖಲೆಯ ಹಣ ಹಂಚಿಕೆ ಮಾಡಲಾಗಿದೆ. ಮೂಲಸೌಕರ್ಯದಲ್ಲಿನ ಈ ಹೂಡಿಕೆಯಿಂದ ಕೇರಳವು ಹೆಚ್ಚಿನ ಪ್ರಯೋಜನ ಪಡೆಯುತ್ತಿದೆ. ಅಮೃತ ಭಾರತ ನಿಲ್ದಾಣ ಯೋಜನೆಯಡಿ, ಶೋರನೂರ್ ಜಂಕ್ಷನ್, ಕುಟ್ಟಿಪ್ಪುರಂ ಮತ್ತು ಚಂಗನಶ್ಶೇರಿ ರೈಲು ನಿಲ್ದಾಣಗಳನ್ನು ಆಧುನೀಕರಿಸಲಾಗಿದೆ. ಇದರೊಂದಿಗೆ, ಶೋರನೂರ್-ನಿಲಂಬೂರ್ ರೈಲು ಮಾರ್ಗದ ಪ್ರಮುಖ ವಿಭಾಗದ ವಿದ್ಯುದ್ದೀಕರಣವೂ ಪೂರ್ಣಗೊಂಡಿದೆ. ಇಂದು ಪಾಲಕ್ಕಾಡ್-ಪೊಲ್ಲಾಚಿ ರೈಲು ಸೇವೆಯನ್ನು ಸಹ ಉದ್ಘಾಟಿಸಲಾಗಿದೆ. ಇದು ಕೇರಳ ಮತ್ತು ತಮಿಳುನಾಡು ಎರಡೂ ರಾಜ್ಯಗಳ ಜನರಿಗೆ ಹೆಚ್ಚಿನ ಅನುಕೂಲ ಒದಗಿಸುತ್ತದೆ.

ನನ್ನ ಪ್ರೀತಿಯ ಸ್ನೇಹಿತರೆ,

ಇಂದು ಕೇರಳಂನಲ್ಲಿ ಹಲವಾರು ಪ್ರಮುಖ ರಸ್ತೆ ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ಆರು ಪಥದ ರಸ್ತೆ ನಿರ್ಮಾಣವು ಅಳಿಕ್ಕಲ್ ಬಂದರಿಗೆ ಸಂಪರ್ಕ ಸುಧಾರಿಸುತ್ತದೆ. ಆರು ಪಥದ ಕೋಯಿಕ್ಕೋಡ್ ಬೈಪಾಸ್ ಸಂಚಾರ ದಟ್ಟಣೆ ಕಡಿಮೆ ಮಾಡುತ್ತದೆ ಮತ್ತು ಪ್ರಯಾಣದ ಸಮಯ ಉಳಿಸುತ್ತದೆ. ಈ ಎಲ್ಲಾ ಯೋಜನೆಗಳು ಕೇರಳದ ರೈತರಿಗೆ ಪ್ರಯೋಜನ ನೀಡುತ್ತವೆ, ಜತೆಗೆ ಪ್ರವಾಸೋದ್ಯಮ ಮತ್ತು ಇತರೆ ಕೈಗಾರಿಕೆಗಳಿಗೆ ಉತ್ತೇಜನ ನೀಡುತ್ತವೆ.

ನನ್ನ ಪ್ರೀತಿಯ ಸ್ನೇಹಿತರೆ,

ಮೂಲಸೌಕರ್ಯಕ್ಕಾಗಿ ಖರ್ಚು ಮಾಡುವ ಪ್ರತಿ ರೂಪಾಯಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಈ ಎಲ್ಲಾ ಯೋಜನೆಗಳು ಕೇರಳದ ಸಾವಿರಾರು ಯುವಕರಿಗೆ ಹೊಸ ಉದ್ಯೋಗಗಳನ್ನು ಒದಗಿಸುತ್ತವೆ. ಅಭಿವೃದ್ಧಿ ಹೊಂದಿದ ಕೇರಳ ರೂಪಿಸುವ ನಮ್ಮ ಸಂಕಲ್ಪವನ್ನು ಈಡೇರಿಸುವಲ್ಲಿ ಈ ಯೋಜನೆಗಳು ನಿರ್ಣಾಯಕ ಪಾತ್ರ ವಹಿಸುತ್ತವೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ.

ಮತ್ತೊಮ್ಮೆ, ನಾನು ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳನ್ನು ಕೋರುತ್ತೇನೆ.

ತುಂಬು ಧನ್ಯವಾದಗಳು!

 

*****