Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕೊಚ್ಚಿ ಮೆಟ್ರೋವನ್ನು ದೇಶಕ್ಕೆ ಸಮರ್ಪಿಸುವ ಸಮಾರಂಭದಲ್ಲಿ ಪ್ರಧಾನಿ ಭಾಷಣ

ಕೊಚ್ಚಿ ಮೆಟ್ರೋವನ್ನು ದೇಶಕ್ಕೆ ಸಮರ್ಪಿಸುವ ಸಮಾರಂಭದಲ್ಲಿ ಪ್ರಧಾನಿ ಭಾಷಣ

ಕೊಚ್ಚಿ ಮೆಟ್ರೋವನ್ನು ದೇಶಕ್ಕೆ ಸಮರ್ಪಿಸುವ ಸಮಾರಂಭದಲ್ಲಿ ಪ್ರಧಾನಿ ಭಾಷಣ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರಿಂದು ಕೊಚ್ಚಿ ಮೆಟ್ರೋ ಉದ್ಘಾಟಿಸಿದರು ಮತ್ತು ಹೊಸ ಮೆಟ್ರೋ ರೈಲು ಮಾರ್ಗದಲ್ಲಿ ಸ್ವಲ್ಪ ದೂರ ಪ್ರಯಾಣಿಸಿದರು. ಕೊಚ್ಚಿ ಮೆಟ್ರೋವನ್ನು ದೇಶಕ್ಕೆ ಸಮರ್ಪಿಸುವ ಸಮಾರಂಭದಲ್ಲಿ ನೆರೆದಿದ್ದ ಬೃಹತ್ ಸಭಿಕರನ್ನುದ್ದೇಶಿಸಿ ಮಾತನಾಡಿದರು.

ಪ್ರಧಾನಮಂತ್ರಿಯವರ ಭಾಷಣದ ಪಠ್ಯ ಕೆಳಕಂಡಂತಿದೆ:

ಕೊಚ್ಚಿ ಮೆಟ್ರೋ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿರುವುದು ಸಂತಸ ತಂದಿದೆ. ಈ ಹೆಮ್ಮೆಯ ಕ್ಷಣದಲ್ಲಿ ನಾನು ಕೊಚ್ಚಿಯ ಜನರನ್ನು ಅಭಿನಂದಿಸುತ್ತೇನೆ.

ಸ್ನೇಹಿತರೇ,

ಕೊಚ್ಚಿ ಅರಬ್ಬಿ ಸಮುದ್ರದ ರಾಣಿ, ಇದು ಒಂದು ಪ್ರಮುಖ ಸಾಂಬಾರ ವಾಣಿಜ್ಯ ಕೇಂದ್ರ. ಇಂದು ಇದು ಕೇರಳದ ವಾಣಿಜ್ಯ ರಾಜಧಾನಿ ಎಂದು ಕರೆಸಿಕೊಂಡಿದೆ. ಒಟ್ಟಾರೆಯಾಗಿ ಕೇರಳಕ್ಕೆ ಬರುವ ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರವಾಸಿಗರಲ್ಲಿ ಕೊಚ್ಚಿ ಮೊದಲ ಶ್ರೇಯಾಂಕದಲ್ಲಿದೆ. ಹೀಗಾಗಿಯೇ ಕೊಚ್ಚಿಗೆ ಮೆಟ್ರೋ ರೈಲು ಸೌಲಭ್ಯ ಸರಿಯಾಗಿ ಹೊಂದುತ್ತದೆ.

ಈ ನಗರದ ಜನಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ, ಮತ್ತು 2021ರ ಹೊತ್ತಿಗೆ ಇದರ ಜನಸಂಖ್ಯೆ 23 ಲಕ್ಷ ತಲುಪುವ ನಿರೀಕ್ಷೆ ಇದೆ. ಹೀಗಾಗಿ ನಗರ ಮೂಲಸೌಕರ್ಯದ ಮೇಲಿನ ಒತ್ತಡವನ್ನು ನಿವಾರಿಸಲು ತ್ವರಿತ ಸಾಮೂಹಿಕ ಸಾರಿಗೆಯ ವ್ಯವಸ್ಥೆ ಅಗತ್ಯವಾಗಿತ್ತು. ಇದು ಕೊಚ್ಚಿಯ ಆರ್ಥಿಕ ಪ್ರಗತಿಗೂ ನೆರವಾಗಲಿದೆ.

ಕೊಚ್ಚಿ ಮೆಟ್ರೋ ರೈಲು ಲಿಮಿಟೆಡ್ ಭಾರತ ಸರ್ಕಾರ ಮತ್ತು ಕೇರಳ ಸರ್ಕಾರದ 50-50 ಪಾಲುದಾರಿಕೆಯನ್ನು ಹೊಂದಿದೆ. ಈವರೆಗೆ ಕೇಂದ್ರ ಸರ್ಕಾರ ಕೊಚ್ಚಿ ಮೆಟ್ರೋಗೆ 2 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಹಣ ಬಿಡುಗಡೆ ಮಾಡಿದೆ. ಒಂದು ಹಂತ ಇಂದು ಉದ್ಘಾಟನೆಗೊಂಡು ಅಲುವಾದಿಂದ ಪಲರಿವಟ್ಟಂವರೆಗೆ ಕಾರ್ಯಾಚರಣೆ ಮಾಡಲಿದೆ. ಇದು 13.26 ಕಿ.ಮೀ ದೂರ ಮತ್ತು 11 ನಿಲ್ದಾಣ ಒಳಗೊಂಡಿದೆ.

ಈ ಮೆಟ್ರೋ ರೈಲು ಯೋಜನೆ ಹಲವು ಮಹತ್ವದ ಅಂಶಗಳನ್ನು ಒಳಗೊಂಡಿದೆ.

ಸಂವಹನ ಆಧಾರಿತ ರೈಲು ನಿಯಂತ್ರಣ ಸಂಕೇತ ವ್ಯವಸ್ಥೆ ಎಂದು ಕರೆಯುವ ಅತ್ಯಾಧುನಿಕ ಸಿಗ್ನಲ್ ವ್ಯವಸ್ಥೆಯೊಂದಿಗೆ ಕಾರ್ಯಾರಂಭ ಮಾಡುತ್ತಿರುವ ಮೊದಲ ಮೆಟ್ರೋ ಇದಾಗಿದೆ.

ಕೋಚ್ ಗಳು ಮೇಕ್ ಇನ್ ಇಂಡಿಯಾ ಮುನ್ನೋಟವನ್ನು ಬಿಂಬಿಸುತ್ತವೆ. ಇವುಗಳನ್ನು ಫ್ರಾನ್ಸ್ ನ ಆಲ್ಸ್ಟಾಮ್ ಚೆನ್ನೈ ಬಳಿತ ನ್ನ ಕಾರ್ಖಾನೆಯಲ್ಲಿ ನಿರ್ಮಾಣ ಮಾಡಿದೆ, ಇದರಲ್ಲಿ ಶೇಕಡ 70ರಷ್ಟು ಭಾರತೀಯ ಕಾಂಪೊನೆಂಟ್ ಗಳಿವೆ.

ಕೊಚ್ಚಿ ಮೆಟ್ರೋ ನಗರದ ಇಡೀ ಸಾರ್ವಜನಿಕ ಸಾರಿಗೆ ಜಾಲವನ್ನು ಒಂದು ವ್ಯವಸ್ಥೆಯಡಿ ಏಕೀಕರಿಸುತ್ತದೆ. ಈ ವ್ಯವಸ್ಥೆ ಸಮಾನವಾದ ವೇಳಾಪಟ್ಟಿ, ಸಮಾನವಾದ ಟೆಕೆಟ್ ವ್ಯವಸ್ಥೆ ಮತ್ತು ಕೇಂದ್ರೀಕೃತ ಆದೇಶ ಮತ್ತು ನಿಯಂತ್ರಣವನ್ನು ಒಳಗೊಂಡಿದೆ. ಇದು ಕೊನೆ ಮೈಲಿನ ಸಂಪರ್ಕ ಮತ್ತು ನಗರದ ಒಳಗೆ ಯಾಂತ್ರೀಕೃತವಲ್ಲದ ಸಾರಿಗೆ ವ್ಯವಸ್ಥೆಗೂ ಗಮನ ಹರಿಸಿದೆ.

ಕೊಚ್ಚಿ ಮೆಟ್ರೋ ಸ್ವಯಂಚಾಲಿತ ದರ ಸಂಗ್ರಹಣಾ ವ್ಯವಸ್ಥೆಗೆ ಭಾರತೀಯ ಬ್ಯಾಂಕ್ ಗಳು ಮತ್ತು ಹಣಕಾಸು ಸಂಸ್ಥೆಗಳನ್ನು ಬಿಡ್ ಪ್ರಕ್ರಿಯೆ ಮೂಲಕ ಆಹ್ವಾನಿಸಿ ನಾವಿನ್ಯಪೂರ್ಣ ಪಿಪಿಪಿ ಮಾದರಿಯ ಟಿಕೆಟ್ ವ್ಯವಸ್ಥೆಯ ಅಗ್ರೇಸರನಾಗಿದೆ. ಆಯ್ದ ಬ್ಯಾಂಕ್ ಗಳು ಕೊಚ್ಚಿ ಮೆಟ್ರೋ ದರ ಕಾರ್ಡ್ ನ ಮತ್ತು ಬ್ಯಾಂಕ್ ಹೆಸರಿನ ಆಪ್ ಗೆ ಸಹ ಬ್ರಾಂಡ್ ಆಗಲಿವೆ.

ಈ ಕೊಚ್ಚಿ -1 ಕಾರ್ಡ್ ಬಹು ಉಪಯೋಗಿಯಾಗಿದ್ದು, ಪೂರ್ವ-ಪಾವತಿಸಿದ ಕಾಂಟಾಕ್ಟ್ -ಲೆಸ್ ರುಪೇ ಡೆಬಿಟ್ ಕಾರ್ಡ್ ಆಗಿ ಮೆಟ್ರೊದಲ್ಲಿ ಪ್ರಯಾಣಿಸಲು ಮತ್ತು ಸಾಮಾನ್ಯ ಡೆಬಿಟ್ ಕಾರ್ಡಿನಂತೆ ಬಳಸಲೂ ಬಹುದಾಗಿರುತ್ತದೆ. ಕೊಚ್ಚಿ ಆದುನಿಕ ಮುಕ್ತ ಲೂಪ್ ಸ್ಮಾರ್ಟ್ ಕಾರ್ಡ್ ವ್ಯವಸ್ಥೆಯ ವಿಶ್ವದ ಕೆಲವೇ ಹಾಗೂ ಭಾರತದ ಪ್ರಥಮ ನಗರವಾಗಿದೆ, ಇದನ್ನು ಇದರ ಸಾರಿಗೆ ಮಾಧ್ಯಮಗಳಾದ ಬಸ್, ಟ್ಯಾಕ್ಸಿ ಮತ್ತು ಆಟೋದಲ್ಲಿಯೂ ಬಳಬಹುದು ಎಂದು ನನಗೆ ತಿಳಿಸಲಾಗಿದೆ.

ಕೊಚ್ಚಿ 1 ಮೊಬೈಲ್ ಆಪ್ ಅನ್ನು ದೂರದೃಷ್ಟಿಯೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಈ ಮೊಬೈಲ್ ಆಪ್ ವಿದ್ಯುನ್ಮಾನ ವ್ಯಾಲೆಟ್ ಸಂಪರ್ಕದ ಜೊತೆಗೆ ಕೊಚ್ಚಿ 1 ಕಾರ್ಡ್ ಗೆ ಸಂಪರ್ಕ ಹೊಂದಿರುತ್ತದೆ. ಪ್ರಾರಂಭಿಕವಾಗಿ ಇದು ಕೊಚ್ಚಿಯ ನಾಗರಿಕರಿಗೆ ಮೆಟ್ರೋ ಸೇವೆ ಪಡೆಯಲು ನೆರವಾಗುತ್ತದೆ. ಭವಿಷ್ಯದಲ್ಲಿ ಇದು, ಅವರ ಎಲ್ಲ ರೀತಿಯ ಸಾರಿಗೆ ಅವಶ್ಯಕತೆಗಳನ್ನು, ನಿರಂತರ ಪಾವತಿ ಅಗತ್ಯಗಳನ್ನು ಪೂರೈಸಲು ಮತ್ತು ನಗರ ಮತ್ತು ಪ್ರವಾಸೋದ್ಯಮ ಮಾಹಿತಿ ನೀಡಲೂ ಬಳಸಬಹುದಾಗಿದೆ ಎಂದು ನನಗೆ ವಿವರಿಸಲಾಗಿದೆ.ಇದು ಡಿಜಿಟಲ್ ವೇದಿಕೆಯ ಇ ಆಡಳಿತಕ್ಕೆ ಉತ್ತಮ ಉದಾಹರಣೆಯಾಗಿದೆ. ಈ ಯೋಜನೆಯ ಮತ್ತೊಂದು ಉಲ್ಲೇಖಾರ್ಹ ಅಂಶವೆಂದರೆ ಸುಮಾರು ಒಂದು ಸಾವಿರ ಮಹಿಳೆಯರು ಮತ್ತು 23 ಹರೆಯದವರು ಕೊಚ್ಚಿ ಮೆಟ್ರೋ ವ್ಯವಸ್ಥೆಯಲ್ಲಿ ಕೆಲಸ ಮಾಡಲು ಆಯ್ಕೆಯಾಗಿದ್ದಾರೆ.

ಈ ಯೋಜನೆಯು ಪರಿಸರ ಸ್ನೇಹಿ ಅಭಿವೃದ್ಧಿಗೂ ಒಂದು ಉದಾಹರಣೆಯಾಗಿದೆ. ಇದು ಸಂಪೂರ್ಣ ಇಂಧನ ಅಗತ್ಯದ ಸುಮಾರು ಶೇಕಡ 25ರಷ್ಟನ್ನು ನವೀಕರಿಸಬಹುದಾದ ಇಂಧನ ಮೂಲ ಅದರಲ್ಲೂ ಸೌರ ವಿದ್ಯುತ್ ನಿಂದ ಪೂರೈಸಿಕೊಳ್ಳಲು ಯೋಜಿಸಿದೆ. ದೀರ್ಘಾವಧಿಯಲ್ಲಿ ಇದು ಶೂನ್ಯ ಇಂಗಾಲ ಹೊರಸೂರುವ ನಗರ ಸಾರಿಗೆ ವ್ಯವಸ್ಥೆ ಆಗುವ ಯೋಜನೆ ಹೊಂದಿದೆ. ಮೆಟ್ರೋ ವ್ಯವಸ್ಥೆಯ ಪ್ರತಿ ಆರನೇ ಆಧಾರಸ್ತಂಭ ಉದ್ಯಾನವನ್ನು ಒಳಗೊಂಡಿದೆ. ಇದು ತರುವಾಯ ನಗರದ ಒಣ ತ್ಯಾಜ್ಯವನ್ನು ಬಳಕೆ ಮಾಡಿಕೊಳ್ಳುತ್ತದೆ.

ಕೊಚ್ಚಿ ಮೆಟ್ರೋದ ಎಲ್ಲ ನಿಲ್ದಾಣಗಳೂ ಭಾರತೀಯ ಹಸಿರು ನಿರ್ಮಾಣ ಮಂಡಳಿ ನೀಡುವ ಅತ್ಯುನ್ನತ ಪ್ರಮಾಣೀಕರಣವಾದ ಪ್ಲಾಟಿನಂ ಶ್ರೇಣಿ ಪಡೆದಿವೆ ಎಂದು ತಿಳಿಸಲು ಹೃದಯ ತುಂಬಿ ಬರುತ್ತದೆ.

ಸ್ನೇಹಿತರೇ,

ಸುಮಾರು ಮೂರು ವರ್ಷಗಲಿಂದ, ನನ್ನ ಸರ್ಕಾರ ದೇಶದ ಒಟ್ಟಾರೆ ಮೂಲಸೌಕರ್ಯ ಅಭಿವೃದ್ಧಿಗೆ ಗಮನ ಹರಿಸಿದೆ. ರೈಲ್ವೆ, ರಸ್ತೆ, ವಿದ್ಯುತ್ ನಮ್ಮ ಆದ್ಯತೆಯ ಕ್ಷೇತ್ರಗಳಾಗಿವೆ. ಪ್ರಗತಿ ಸಭೆಯಲ್ಲಿ 8 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ 175 ಯೋಜನೆಗಳನ್ನು ಸ್ವತಃ ನಾನೇ ಪರಿಶೀಲನೆ ನಡೆಸಿದ್ದೇನೆ. ನಾವು ಅನುಷ್ಠಾನದಲ್ಲಿನ ಅಡ್ಡಿ ಆತಂಕಗಳನ್ನು ನಿವಾರಣೆ ಮಾಡಿದ್ದು, ಈ ವಲಯಗಳಲ್ಲಿನ ಅನುಷ್ಠಾನದ ಸರಾಸರಿ ದರವನ್ನು ಗಣನೀಯವಾಗಿ ಸುಧಾರಣೆ ಮಾಡಿದ್ದೇವೆ. ಈಗ, ಮುಂದಿನ ಪೀಳಿಗೆಯ ಮೂಲಸೌಕರ್ಯದ ಬಗ್ಗೆಯೂ ಗಮನ ಹರಿಸಿದ್ದೇವೆ, ಇದರಲ್ಲಿ ಲಾಜಿಸ್ಟಿಕ್ಸ್, ಡಿಜಿಟಲ್ ಮತ್ತು ಗ್ಯಾಸ್ ಸಹ ಸೇರಿದೆ.

ಸಾರ್ವಜನಿಕ ಸಾರಿಗೆ ಅದರಲ್ಲೂ ನಗರ ಪ್ರದೇಶಗಳಲ್ಲಿ ಹೆಚ್ಚಳ ಮಾಡಲು ನಾವು ಹಲವು ಉಪಕ್ರಮಗಳನ್ನು ಕೈಗೊಂಡಿದ್ದೇವೆ. ವಿದೇಶೀ ಹೂಡಿಕೆಯನ್ನು ಈ ವಲಯಕ್ಕೆ ಆಹ್ವಾನಿಸಿದ್ದೇವೆ. ದೇಶದ 50 ನಗರಗಳು ಮೆಟ್ರೋ ರೈಲು ಅನುಷ್ಠಾನಕ್ಕೆ ಸಜ್ಜಾಗಿವೆ.

ಮೆಟ್ರೋ ರೈಲಿನ ಆರ್ಥಿಕ ಮತ್ತು ಸಾಮಾಜಿಕ ಉಪಯೋಗ ಚೆನ್ನಾಗಿಯೇ ತಿಳಿದಿದೆ. ನಾವು ಈ ವಲಯದಲ್ಲಿ ನೀತಿ ನಿರೂಪಣೆಗಳನ್ನು ತ್ವರಿತಗೊಳಿಸಿದ್ದೇವೆ. ಇತ್ತೀಚೆಗೆ ಭಾರತ ಸರ್ಕಾರವು ಮೆಟ್ರೋ ರೈಲಿನ ರೋಲಿಂಗ್ ಸ್ಟಾಕ್ ಮತ್ತು ಸಿಗ್ನಲ್ ವ್ಯವಸ್ಥೆಗೆ ಗುಣಮಟ್ಟವನ್ನು ನಿರ್ದಿಷ್ಟಪಡಿಸಿದೆ. ಇದು ಉತ್ಪಾದಕರಿಗೆ ಭಾರತದಲ್ಲಿ ದೀರ್ಘಕಾಲೀನ ದೃಷ್ಟಿಯೊಂದಿಗೆ ಉತ್ಪಾದನಾ ಘಟಕ ಸ್ಥಾಪಿಸಲು ಉತ್ತೇಜಿಸುತ್ತದೆ. ಮೇಕ್ ಇನ್ ಇಂಡಿಯಾ ದೃಷ್ಟಿಕೋನದಲ್ಲಿ, ಮೆಟ್ರೋ ರೈಲಿನ ರೋಲಿಂಗ್ ಸ್ಟಾಕ್ (ಬೋಗಿ ಇತ್ಯಾದಿ) ದೇಶೀಯ ಉತ್ಪಾದನೆಗೆ ಉತ್ತೇಜನ ನೀಡಲಾಗುತ್ತಿದೆ.

ಸ್ನೇಹಿತರೆ,

ನಗರ ಯೋಜನೆಯಲ್ಲಿ ಜನ ಕೇಂದ್ರಿತ ನಿಲುವಿನೊಂದಿಗೆ ಮತ್ತು ಸಾರಿಗೆ ಮತ್ತು ಭೂ ಬಳಕೆಯ ಏಕೀಕರಣದೊಂದಿಗೆ ಮಾದರಿ ಬದಲಾವಣೆ ತರುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಭಾರತ ಸರ್ಕಾರವು ರಾಷ್ಟ್ರೀಯ ಸಾರಿಗೆ ಪ್ರಾಶಸ್ತ್ಯದ ಅಭಿವೃದ್ಧಿ ನೀತಿಯನ್ನು 2017ರ ಏಪ್ರಿಲ್ ನಲ್ಲಿ ಪ್ರಕಟಿಸಿದೆ. ಈ ನೀತಿಯು ನಗರಗಳನ್ನು ಸಾರಿಗೆ ಅವಲಂಬಿತದ ಬದಲು ಸಾರಿಗೆ ಪ್ರಾಶಸ್ತ್ಯದ ಪರಿವರ್ತನೆ ಬಯಸುತ್ತದೆ. ಇದು ಸಾರ್ವಜನಿಕ ಸಾರಿಗೆಯನ್ನು ಆಪ್ತಗೊಳಿಸುತ್ತದೆ.

ಮೌಲ್ಯ ಸೆಳೆಯುವ ಹಣಕಾಸು ನೀತಿಯ ಚೌಕಟ್ಟು ಒದಗಿಸಿದ್ದಕ್ಕಾಗಿ ನಾನು ವೆಂಕಯ್ಯನಾಯ್ಡು ಅವರ ನೇತೃತ್ವದ ಕೇಂದ್ರ ನಗರಾಭಿವೃದ್ಧಿ ಸಚಿವಾಲಯಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಇದು ಹೆಚ್ಚಿನ ಭೂಮಿಯ ಮೌಲ್ಯವನ್ನು ಸೆಳೆಯಲು ವ್ಯವಸ್ಥೆಯನ್ನು ಒದಗಿಸಿದೆ.
ಈ ಮಹತ್ವದ ಮೈಲಿಗಲ್ಲು ಸಾಧಿಸಿದ್ದಕ್ಕಾಗಿ ನಾನು ಕೊಚ್ಚಿಯ ಜನರನ್ನು, ಕೊಚ್ಚಿ ಮೆಟ್ರೋ ರೈಲು ನಿಗಮ ಮತ್ತು ಕೇರಳದ ಮುಖ್ಯಮಂತ್ರಿಗಳನ್ನು ಅಭಿನಂದಿಸುವ ಮೂಲಕ ನನ್ನ ಮಾತುಗಳನ್ನು ಮುಗಿಸುತ್ತೇನೆ. ಜನವರಿ 2016ರ ಮೊದಲ ಸುತ್ತಿನ ಸವಾಲಿನ ಪ್ರಕ್ರಿಯೆಯಲ್ಲಿ ಕೊಚ್ಚಿ ಸ್ಮಾರ್ಟ್ ಸಿಟಿಗೆ ಆಯ್ಕೆಯಾಗಿದೆ. ಮುಂಬರುವ ದಿನಗಳಲ್ಲಿ ಇದು ಇನ್ನೂ ಉತ್ತಮ ಸಾಧನೆ ಮಾಡುತ್ತದೆ ಎಂದು ನಾನು ನಂಬಿದ್ದೇನೆ.

ಧನ್ಯವಾದಗಳು.

***

AKT/SH