Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಚಾರ್ಟರ್ಡ್ ಅಕೌಂಟೆಂಟರುಗಳ ದಿನದಂದು ಸಭಿಕರನ್ನುದ್ದೇಶಿಸಿ ಪ್ರಧಾನಿ ಭಾಷಣ

ಚಾರ್ಟರ್ಡ್ ಅಕೌಂಟೆಂಟರುಗಳ ದಿನದಂದು ಸಭಿಕರನ್ನುದ್ದೇಶಿಸಿ ಪ್ರಧಾನಿ ಭಾಷಣ

ಚಾರ್ಟರ್ಡ್ ಅಕೌಂಟೆಂಟರುಗಳ ದಿನದಂದು ಸಭಿಕರನ್ನುದ್ದೇಶಿಸಿ ಪ್ರಧಾನಿ ಭಾಷಣ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ನವದೆಹಲಿಯಲ್ಲಿಂದು, ಚಾರ್ಟರ್ಡ್ ಅಕೌಂಟೆಂಟರುಗಳ ದಿನದ ಸಂದರ್ಭದಲ್ಲಿ ಬೃಹತ್ ಸಭೆಯನ್ನುದ್ದೇಶಿಸಿ ಭಾಷಣ ಮಾಡಿದರು.

ಸರಕು ಮತ್ತು ಸೇವೆಗಳ ತೆರಿಗೆ ಜಾರಿಯಾದ ಪ್ರಥಮ ದಿನದಂದು ದೇಶದಾದ್ಯಂತ ಬಹು ತಾಣಗಳಲ್ಲಿ ನೇರ ಪ್ರಸಾರ ಮೂಲಕ ಮಾಡಿದ ಭಾಷಣದಲ್ಲಿ ಪ್ರಧಾನಮಂತ್ರಿಯವರು, ಚಾರ್ಟರ್ಡ್ ಅಕೌಂಟೆಂಟರುಗಳು ಸಮಾಜದ ಒಳಿತಿಗಾಗಿ ಆರ್ಥಿಕ ಆರೋಗ್ಯದ ವೈದ್ಯರೆಂದು ಬಣ್ಣಿಸಿದರು. ಆರ್ಥಿಕ ಜಗತ್ತಿನ ಸಂತರು ಮತ್ತು ಋಷಿಗಳಿಗೆ ಅವರನ್ನು ಹೋಲಿಸಿದರು. ಭಾರತೀಯ ಚಾರ್ಟರ್ಡ್ ಅಕೌಂಟೆಂಟರುಗಳು ತಮ್ಮ ಅದ್ಭುತ ಆರ್ಥಿಕ ಕೌಶಲದಿಂದ ವಿಶ್ವಾದ್ಯಂತ ಹೆಸರು ಮಾಡಿದ್ದಾರೆಂದರು.

ದೇಶವು ಯಾವುದೇ ಹಿನ್ನಡೆಯಿಂದ ಪುನಶ್ಚೇತನಗೊಳ್ಳುವ ಸಾಮರ್ಥ್ಯ ಹೊಂದಿದ್ದರೂ, ಯಾವಾಗ ಸಣ್ಣ ವರ್ಗದ ಜನರು ಭ್ರಷ್ಟ ಹವ್ಯಾಸದಲ್ಲಿ ತೊಡಗಿದರೋ ಆಗ ಅದರ ಗಂಭೀರ ಪರಿಣಾಮ ಅಭಿವೃದ್ಧಿಯ ಮೇಲೆ ಬೀರಿದೆ ಎಂದು ಪ್ರಧಾನಿ ಹೇಳಿದರು.
ಕಳೆದ ಮೂರು ವರ್ಷಗಳಲ್ಲಿ ಕಪ್ಪುಹಣದ ವಿರುದ್ಧ ಮತ್ತು ಭ್ರಷ್ಟಾಚಾರದಲ್ಲಿ ತೊಡಗಿರುವವರನ್ನು ಶಿಕ್ಷಿಸಲು ಕೇಂದ್ರ ಸರ್ಕಾರ ಕೈಗೊಂಡ ಗರಿಷ್ಠ ಮೌಲ್ಯದ ನೋಟುಗಳ ಅಮಾನ್ಯ ಸೇರಿದಂತೆ ವಿವಿಧ ಕ್ರಮಗಳ ಪ್ರಸ್ತಾಪ ಮಾಡಿದರು.

ಗರಿಷ್ಠ ಮೌಲ್ಯದ ನೋಟುಗಳ ಅಮಾನ್ಯದ ಬಳಿಕ ದತ್ತಾಂಶವನ್ನು ಹುಡುಕಿ ಪರಿಶೀಲಿಸಿದಾಗ ಸುಮಾರು 3 ಲಕ್ಷ ಕಂಪನಿಗಳು ತನಿಖೆಯ ವ್ಯಾಪ್ತಿಗೆ ಬಂದವು ಎಂದು ಪ್ರಧಾನಿ ತಿಳಿಸಿದರು. ಈ ಪೈಕಿ 1 ಲಕ್ಷ ಕಂಪನಿಗಳು ಕಾನೂನು ಉಲ್ಲಂಘಿಸಿರುವುದು ಪತ್ತೆಯಾಗಿದೆ, ಇವುಗಳನ್ನು ಕಂಪನಿಗಳ ನೋಂದಣಿಯಿಂದ ತೆಗೆದುಹಾಕಲಾಗಿದೆ ಎಂದರು. ರಾಷ್ಟ್ರದ ಹಿತದ ದೃಷ್ಟಿಯಿಂದ ಕೇಂದ್ರ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಂಡಿದೆ ಎಂದು ತಿಳಿಸಿದರು. ಚಾರ್ಟರ್ಡ್ ಅಕೌಂಟೆಂಟರುಗಳು ಆತ್ಮಾವಲೋಕನ ಮಾಡಿಕೊಳ್ಳಲು ಮತ್ತು ಭ್ರಷ್ಟ ಅಭ್ಯಾಸಗಳನ್ನು ನಿರ್ಮೂಲನೆ ಮಾಡುವಂತೆ ಮತ್ತು ತಮ್ಮ ವೃತ್ತಿಯ ಭ್ರಷ್ಟರನ್ನು ದೂರವಿಡುವಂತೆ ಕರೆ ನೀಡಿದರು. ಜನರು ತಮ್ಮ ಆದಾಯಕರ ರಿಟರ್ನ್ಸ್ ಸಲ್ಲಿಕೆ ಮಾಡುವ ಕುರಿತು ಅಂಕಿ ಅಂಶ ನೀಡಿದ ಪ್ರಧಾನಿ, ತಮ್ಮ ಕ್ಲೈಂಟ್ ಗಳಿಗೆ ಸಲಹೆ ನೀಡುವಾಗ ರಾಷ್ಟ್ರ ಹಿತಕ್ಕೆ ಪ್ರಥಮ ಆದ್ಯತೆ ನೀಡುವಂತೆ ಚಾರ್ಟರ್ಡ್ ಅಕೌಂಟೆಂಟರುಗಳಿಗೆ ಮನವಿ ಮಾಡಿದರು. ವಕೀಲರೂ ಸೇರಿದಂತೆ ಹಲವು ವೃತ್ತಿಪರರು ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ತೋರಿದ ಪ್ರಮುಖ ಪಾತ್ರದ ಬಗ್ಗೆ ಸಭಿಕರಿಗೆ ನೆನಪು ಮಾಡಿಕೊಟ್ಟ ಪ್ರಧಾನಿ, ದೇಶ ನೂತನ ಸರಕು ಮತ್ತು ಸೇವೆಗಳ ತೆರಿಗೆಯ ಸಮಗ್ರ ಆರ್ಥಿಕ ಯುಗದಲ್ಲಿ ಸಾಗುತ್ತಿರುವಾಗ ಅವರ ಹೆಜ್ಜೆಗುರುತುಗಳನ್ನು ಅನುಸರಿಸುವಂತೆ ಮತ್ತು ಅವರ ಕ್ಲೈಂಟ್ ಗಳಿಗೆ ಪ್ರಾಮಾಣಿಕತೆಯ ಮಾರ್ಗ ಅನುಸರಿಸುವಂತೆ ಸಲಹೆ ಮಾಡಿ ಎಂದು ಚಾರ್ಟರ್ಡ್ ಅಕೌಂಟೆಂಟರುಗಳಿಗೆ ಮನವಿ ಮಾಡಿದರು. ಇಡೀ ವಿಶ್ವ ಚಾರ್ಟರ್ಡ್ ಅಕೌಂಟೆಂಟರುಗಳ ಪ್ರಮಾಣಪತ್ರದ ಬಗ್ಗೆ ನಂಬಿಕೆ ಇಡುತ್ತದೆ ಎಂದ ಪ್ರಧಾನಿ, ಈ ವಿಶ್ವಾಸ ಮತ್ತು ನಂಬಿಕೆ ಎಂದಿಗೂ ಒಡೆಯಬಾರದು ಎಂದರು. ತೆರಿಗೆದಾರರು ಪಾವತಿಸುವ ತೆರಿಗೆ ಹೇಗೆ ಸಮಾಜದ ಕಲ್ಯಾಣ ಮತ್ತು ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ವಿವರಿಸಿದರು.

ದೇಶ 75ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುವ 2022ರ ಹೊತ್ತಿಗೆ ತಾವು ನಿಗದಿ ಪಡಿಸಬಹುದಾದ ಗುರಿಗಳ ಬಗ್ಗೆ ಚಿಂತಿಸುವಂತೆ ಚಾರ್ಟರ್ಡ್ ಅಕೌಂಟೆಂಟರುಗಳಿಗೆ ಅವರು ಮನವಿ ಮಾಡಿದರು. ವಿಶ್ವಾದ್ಯಂತದ ಬಿಗ್ 4 ಲೆಕ್ಕ ಪರಿಶೋಧನಾ ಸಂಸ್ಥೆಗಳ ಕುರಿತು ಮಾತನಾಡಿದ ಅವರು, ಮುಂದಿನ ಬಿಗ್ 4 ಜಾಗತಿಕ ಲೆಕ್ಕಪರಿಶೋಧನಾ ಸಂಸ್ಥೆ ರೂಪಿಸುವತ್ತ ಶ್ರಮಿಸುವಂತೆ ಭಾರತದ ಚಾರ್ಟರ್ಡ್ ಅಕೌಂಟೆಂಟರುಗಳಿಗೆ ಮನವಿ ಮಾಡಿದರು.

ಚಾಣಕ್ಯನನ್ನು ಉಲ್ಲೇಖಿಸಿದ ಪ್ರಧಾನಿ, ಈ ಅವಕಾಶ ಕೈಚೆಲ್ಲದಂತೆ ಮತ್ತು ರಾಷ್ಟ್ರ ನಿರ್ಮಾಣದ ಮುಖ್ಯವಾಹಿನಿಯಲ್ಲಿ ಸೇರವಂತೆ ಆಗ್ರಹಿಸಿದರು.

*****

AKT/HS