ಪಿಎಂಇಂಡಿಯಾ
ನಮಸ್ಕಾರ
ಇಂದು ನಿಮ್ಮೆಲ್ಲರನ್ನೂ ಭೇಟಿಯಾಗಿರುವುದು ನನಗೆ ತುಂಬಾ ಸಂತೋಷ ತಂದಿದೆ. ನೀವು ಜಪಾನ್ನ ಶಕ್ತಿ ಮತ್ತು ವೈವಿಧ್ಯತೆಯ ಜೀವಂತ ಸಾಕಾರವಾಗಿದ್ದೀರಿ.
ನಾನು ಈ ಸಭಾಂಗಣದಲ್ಲಿ ಸೈತಾಮಾದ ವೇಗ, ಮಿಯಾಗಿಯ ಚೇತರಿಕೆ, ಫುಕುವೋಕಾದ ಚೈತನ್ಯ ಮತ್ತು ನಾರಾದ ಪರಂಪರೆಯನ್ನು ಅನುಭವಿಸಬಲ್ಲೆ. ನಿಮ್ಮೆಲ್ಲರಲ್ಲೂ ಕುಮಾಮೊಟೊದ ಉಷ್ಣತೆ, ನಾಗಾನೊದ ತಾಜಾತನ, ಶಿಜುವೋಕಾದ ಸೌಂದರ್ಯ ಮತ್ತು ನಾಗಸಾಕಿಯ ನಾಡಿಮಿಡಿತವಿದೆ. ನೀವೆಲ್ಲರೂ ಫ್ಯೂಜಿ ಪರ್ವತದ ಶಕ್ತಿ ಮತ್ತು ಸಕುರಾದ ಚೈತನ್ಯವನ್ನು ಸಾಕಾರಗೊಳಿಸುತ್ತೀರಿ. ಒಟ್ಟಾಗಿ, ನೀವು ಜಪಾನ್ ದೇಶವನ್ನು ಕಾಲಾತೀತವಾಗಿಸುತ್ತೀರಿ.
ಗೌರವಾನ್ವಿತರೆ,
ಭಾರತ ಮತ್ತು ಜಪಾನ್ ನಡುವಿನ ಗಾಢ ಬಾಂಧವ್ಯವು ಸಾವಿರಾರು ವರ್ಷಗಳ ಹಿಂದಿನದು. ನಾವು ಭಗವಾನ್ ಬುದ್ಧನ ಕರುಣೆಯಿಂದ ಸಂಪರ್ಕ ಹೊಂದಿದ್ದೇವೆ. ಬಂಗಾಳದ ರಾಧಾಬಿನೋದ್ ಪಾಲ್ ಅವರು ‘ಟೋಕಿಯೊ ಪ್ರಯೋಗ’ಗಳಲ್ಲಿ ‘ತಂತ್ರ’ಕ್ಕಿಂತ ‘ನ್ಯಾಯ’ವನ್ನು ಹೆಚ್ಚು ಇರಿಸಿದರು. ಅವರ ಅದಮ್ಯ ಧೈರ್ಯದಿಂದ ನಾವು ಸಂಪರ್ಕ ಹೊಂದಿದ್ದೇವೆ.
ನನ್ನ ತವರು ರಾಜ್ಯ ಗುಜರಾತ್ನಿಂದ ವಜ್ರ ವ್ಯಾಪಾರಿಗಳು ಕಳೆದ ಶತಮಾನದ ಆರಂಭದಲ್ಲಿ ಕೋಬೆಗೆ ಬಂದರು. ಹಮಾ-ಮಟ್ಸು ಅವರ ಕಂಪನಿಯು ಭಾರತದ ಆಟೋಮೊಬೈಲ್ ವಲಯದಲ್ಲಿ ಕ್ರಾಂತಿ ತಂದಿತು. ಎರಡೂ ದೇಶಗಳ ಈ ಉದ್ಯಮಶೀಲತಾ ಮನೋಭಾವವು ನಮ್ಮನ್ನು ಸಂಪರ್ಕಿಸುತ್ತಿದೆ.
ಭಾರತ ಮತ್ತು ಜಪಾನ್ ನಡುವೆ ನಿಕಟ ಸಂಪರ್ಕ ಕಲ್ಪಿಸುವ ಇಂತಹ ಹಲವು ಕಥೆಗಳಿವೆ, ಹಲವು ಸಂಬಂಧಗಳಿವೆ. ಇಂದು ವ್ಯಾಪಾರ, ತಂತ್ರಜ್ಞಾನ, ಪ್ರವಾಸೋದ್ಯಮ, ಭದ್ರತೆ, ಕೌಶಲ್ಯ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ಈ ಸಂಬಂಧಗಳಲ್ಲಿ ಹೊಸ ಅಧ್ಯಾಯಗಳನ್ನು ಬರೆಯಲಾಗುತ್ತಿದೆ. ಈ ಸಂಬಂಧವು ಟೋಕಿಯೊ ಅಥವಾ ದೆಹಲಿಯ ಕಾರಿಡಾರ್ಗಳಿಗೆ ಮಾತ್ರ ಸೀಮಿತವಾಗಿಲ್ಲ. ಈ ಸಂಬಂಧವು ಭಾರತ ಮತ್ತು ಜಪಾನ್ ಜನರ ಆಲೋಚನೆಗಳಲ್ಲಿ ವಾಸಿಸುತ್ತಿದೆ.
ಸನ್ಮಾನ್ಯರೆ,
ಪ್ರಧಾನಿಯಾಗುವ ಮೊದಲು, ನಾನು ಸುಮಾರು ಒಂದೂವರೆ ದಶಕಗಳ ಕಾಲ ಗುಜರಾತ್ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದೆ. ಆ ಸಮಯದಲ್ಲಿ, ಜಪಾನ್ಗೆ ಭೇಟಿ ನೀಡುವ ಸೌಭಾಗ್ಯವೂ ನನಗೆ ಸಿಕ್ಕಿತು. ನಮ್ಮ ರಾಜ್ಯಗಳು ಮತ್ತು ನಿಮ್ಮ ಪ್ರಾಂತ್ಯಗಳಲ್ಲಿನ ಸಾಮರ್ಥ್ಯ ಮತ್ತು ಸಾಧ್ಯತೆಗಳನ್ನು ನಾನು ಹತ್ತಿರದಿಂದ ನೋಡಿದ್ದೇನೆ.
ಮುಖ್ಯಮಂತ್ರಿಯಾಗಿ, ನನ್ನ ಗಮನ ನೀತಿ ಆಧಾರಿತ ಆಡಳಿತ, ಕೈಗಾರಿಕೆಗಳನ್ನು ಉತ್ತೇಜಿಸುವುದು, ಬಲವಾದ ಮೂಲಸೌಕರ್ಯ ನಿರ್ಮಿಸುವುದು ಮತ್ತು ಹೂಡಿಕೆಗೆ ಅನುಕೂಲಕರ ವಾತಾವರಣ ಸೃಷ್ಟಿಸುವುದಾಗಿತ್ತು. ಇಂದು ಇದನ್ನು ‘ಗುಜರಾತ್ ಮಾದರಿ’ ಎಂದೂ ಕರೆಯಲಾಗುತ್ತಿದೆ.
2014ರಲ್ಲಿ ಪ್ರಧಾನಮಂತ್ರಿಯಾದ ನಂತರ, ನಾನು ಈ ಚಿಂತನೆಯನ್ನು ರಾಷ್ಟ್ರೀಯ ನೀತಿಯ ಭಾಗವನ್ನಾಗಿ ಮಾಡಿದ್ದೇನೆ. ನಮ್ಮ ರಾಜ್ಯಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಪುನರುಜ್ಜೀವನಗೊಳಿಸಿದ್ದೇವೆ. ನಾವು ಅವುಗಳನ್ನು ರಾಷ್ಟ್ರೀಯ ಬೆಳವಣಿಗೆಗೆ ವೇದಿಕೆಯನ್ನಾಗಿ ಮಾಡಿದ್ದೇವೆ. ಜಪಾನ್ನ ಪ್ರಾಂತ್ಯಗಳಂತೆ, ಭಾರತದ ಪ್ರತಿಯೊಂದು ರಾಜ್ಯವು ತನ್ನದೇ ಆದ ಗುರುತು, ತನ್ನದೇ ಆದ ವಿಶೇಷತೆ ಹೊಂದಿದೆ. ಅವುಗಳ ಪ್ರದೇಶಗಳು ವಿಭಿನ್ನವಾಗಿವೆ. ಕೆಲವು ಕರಾವಳಿ ಪ್ರದೇಶಗಳಾಗಿದ್ದರೆ, ಇನ್ನು ಕೆಲವು ಪರ್ವತಗಳ ಮಡಿಲಲ್ಲಿವೆ.
ನಮ್ಮ ವೈವಿಧ್ಯತೆಯನ್ನು ಲಾಭಾಂಶವಾಗಿ ಪರಿವರ್ತಿಸಲು ನಾವು ಕೆಲಸ ಮಾಡಿದ್ದೇವೆ. ಪ್ರತಿ ಜಿಲ್ಲೆಯ ಆರ್ಥಿಕತೆ ಮತ್ತು ಗುರುತು ಹೆಚ್ಚಿಸಲು, ನಾವು “ಒಂದು ಜಿಲ್ಲೆ – ಒಂದು ಉತ್ಪನ್ನ” ಅಭಿಯಾನ ಪ್ರಾರಂಭಿಸಿದ್ದೇವೆ. ಅಭಿವೃದ್ಧಿಯಾಗದ ಜಿಲ್ಲೆಗಳು ಮತ್ತು ಬ್ಲಾಕ್ಗಳಿಗಾಗಿ, ನಾವು ಮಹತ್ವಾಕಾಂಕ್ಷೆಯ ಜಿಲ್ಲೆ ಮತ್ತು ಬ್ಲಾಕ್ ಕಾರ್ಯಕ್ರಮ ಪರಿಚಯಿಸಿದ್ದೇವೆ. ದೂರದ ಗಡಿ ಗ್ರಾಮಗಳನ್ನು ಮುಖ್ಯವಾಹಿನಿಯೊಂದಿಗೆ ಸಂಪರ್ಕಿಸಲು, ನಾವು ರೋಮಾಂಚನಕಾರಿ ಗ್ರಾಮಗಳು ಕಾರ್ಯಕ್ರಮವನ್ನು ಪ್ರಾರಂಭಿಸಿದ್ದೇವೆ. ಇಂದು ಈ ಜಿಲ್ಲೆಗಳು ಮತ್ತು ಗ್ರಾಮಗಳು ರಾಷ್ಟ್ರೀಯ ಬೆಳವಣಿಗೆಯ ಹೊಸ ಕೇಂದ್ರಗಳಾಗಿ ಹೊರಹೊಮ್ಮುತ್ತಿವೆ.
ಮಹನೀಯರೆ,
ನಿಮ್ಮ ಪ್ರಾಂತ್ಯಗಳು ತಂತ್ರಜ್ಞಾನ, ಉತ್ಪಾದನೆ ಮತ್ತು ನಾವೀನ್ಯತೆಯ ನಿಜವಾದ ಶಕ್ತಿ ಕೇಂದ್ರಗಳಾಗಿವೆ. ಅವುಗಳಲ್ಲಿ ಕೆಲವು ದೇಶಗಳಿಗಿಂತ ದೊಡ್ಡ ಆರ್ಥಿಕತೆ ಹೊಂದಿವೆ. ಇದರರ್ಥ ನೀವು ಅಷ್ಟೇ ದೊಡ್ಡ ಜವಾಬ್ದಾರಿ ಹೊಂದಿದ್ದೀರಿ.
ಅಂತಾರಾಷ್ಟ್ರೀಯ ಸಹಭಾಗಿತ್ವದ ಭವಿಷ್ಯವು ನಿಮ್ಮ ಪ್ರಯತ್ನಗಳಿಂದ ರೂಪುಗೊಳ್ಳುತ್ತಿದೆ. ಅನೇಕ ಭಾರತೀಯ ರಾಜ್ಯಗಳು ಮತ್ತು ಜಪಾನಿನ ಪ್ರಾಂತ್ಯಗಳು ಈಗಾಗಲೇ ಪಾಲುದಾರಿಕೆಗಳನ್ನು ಹೊಂದಿವೆ, ಉದಾಹರಣೆಗೆ:
ಗುಜರಾತ್ ಮತ್ತು ಶಿಜುವೊಕಾ,
ಉತ್ತರ ಪ್ರದೇಶ ಮತ್ತು ಯಮನಾಶಿ,
ಮಹಾರಾಷ್ಟ್ರ ಮತ್ತು ವಕಯಾಮಾ,
ಆಂಧ್ರಪ್ರದೇಶ ಮತ್ತು ಟೊಯಾಮಾ.
ಆದಾಗ್ಯೂ, ಈ ಪಾಲುದಾರಿಕೆ ಕೇವಲ ಕಾಗದದ ಮೇಲೆ ಮಾತ್ರ ಉಳಿಯಬಾರದು ಎಂದು ನಾನು ನಂಬುತ್ತೇನೆ. ಇದು ಕಾಗದದಿಂದ ಜನರಿಗೆ ಸಮೃದ್ಧಿಯತ್ತ ಸಾಗಬೇಕು.
ಭಾರತೀಯ ರಾಜ್ಯಗಳು ಅಂತಾರಾಷ್ಟ್ರೀಯ ಸಹಕಾರದ ಕೇಂದ್ರಗಳಾಗಬೇಕೆಂದು ನಾವು ಬಯಸುತ್ತೇವೆ. ಇದನ್ನು ಗಮನದಲ್ಲಿಟ್ಟುಕೊಂಡು, ಪ್ರಧಾನಮಂತ್ರಿ ಇಶಿಬಾ ಮತ್ತು ನಾನು ನಿನ್ನೆ ರಾಜ್ಯ – ಪ್ರಾಂತ್ಯಗಳ ಪಾಲುದಾರಿಕೆ ಉಪಕ್ರಮ ಪ್ರಾರಂಭಿಸಿದೆವು. ಕನಿಷ್ಠ 3 ಭಾರತೀಯ ರಾಜ್ಯಗಳು ಮತ್ತು 3 ಪ್ರಾಂತ್ಯಗಳ ನಿಯೋಗಗಳು ಪ್ರತಿ ವರ್ಷ ಪರಸ್ಪರರ ದೇಶಗಳಿಗೆ ಭೇಟಿ ನೀಡುವುದು ನಮ್ಮ ಗುರಿಯಾಗಿದೆ. ಈ ಉಪಕ್ರಮದ ಭಾಗವಾಗಲು ಮತ್ತು ಭಾರತಕ್ಕೆ ಭೇಟಿ ನೀಡಲು ನಾನು ನಿಮ್ಮೆಲ್ಲರನ್ನೂ ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇನೆ.
ಭಾರತದ ರಾಜ್ಯಗಳು ಮತ್ತು ಜಪಾನ್ನ ಪ್ರಾಂತ್ಯಗಳು ನಮ್ಮ ಹಂಚಿಕೆಯ ಪ್ರಗತಿಯನ್ನು ನಿರ್ವಹಣೆ ಮಾಡಲಿ. ನಿಮ್ಮ ಪ್ರಾಂತ್ಯವು ದೊಡ್ಡ ಕಂಪನಿಗಳಿಗೆ ಮಾತ್ರವಲ್ಲದೆ ಎಂ.ಎಸ್.ಎಂ.ಇಗಳು ಮತ್ತು ಸ್ಟಾರ್ಟಪ್ಗಳಿಗೂ ಫಲವತ್ತಾದ ವೇದಿಕೆಯನ್ನು ಒದಗಿಸುತ್ತದೆ. ಅದೇ ರೀತಿ, ಭಾರತದಲ್ಲಿ, ಸಣ್ಣ ಪಟ್ಟಣಗಳ ಸ್ಟಾರ್ಟಪ್ಗಳು ಮತ್ತು ಎಂಎಸ್ಎಂಇಗಳು ದೇಶದ ಬೆಳವಣಿಗೆಯ ಯಶೋಗಾಥೆ ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ.
ಜಪಾನ್ ಮತ್ತು ಭಾರತದ ಈ ರೋಮಾಂಚಕ ಪರಿಸರ ವ್ಯವಸ್ಥೆಗಳು ಒಟ್ಟಿಗೆ ಬಂದರೆ – ಆಲೋಚನೆಗಳು ಹರಿಯುತ್ತವೆ, ನಾವೀನ್ಯತೆ ಬೆಳೆಯುತ್ತದೆ ಮತ್ತು ಅವಕಾಶಗಳು ತೆರೆದುಕೊಳ್ಳುತ್ತವೆ!
ಈ ಚಿಂತನೆಯನ್ನು ಮನಸ್ಸಿನಲ್ಲಿಟ್ಟುಕೊಂಡು, ಕನ್ಸೈನಲ್ಲಿ ವ್ಯಾಪಾರ ವಿನಿಮಯ ವೇದಿಕೆ ಪ್ರಾರಂಭಿಸಲಾಗುತ್ತಿದೆ ಎಂಬುದರಿಂದ ನನಗೆ ಸಂತೋಷವಾಗಿದೆ. ಇದು ಕಂಪನಿಗಳ ನಡುವೆ ನೇರ ಸಂವಹನವನ್ನು ಸೃಷ್ಟಿಸುತ್ತದೆ, ಹೊಸ ಹೂಡಿಕೆಗಳನ್ನು ತರುತ್ತದೆ, ಸ್ಟಾರ್ಟಪ್ ಪಾಲುದಾರಿಕೆಗಳನ್ನು ಬಲಪಡಿಸುತ್ತದೆ ಮತ್ತು ಕೌಶಲ್ಯಪೂರ್ಣ ವೃತ್ತಿಪರರಿಗೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುತ್ತದೆ.
ಮಾನ್ಯರೆ,
ಯುವ ಮನಸ್ಸುಗಳು ಒಂದಾದಾಗ, ಮಹಾನ್ ರಾಷ್ಟ್ರಗಳು ಒಟ್ಟಿಗೆ ಏಳುತ್ತವೆ. ಜಪಾನ್ನ ವಿಶ್ವವಿದ್ಯಾನಿಲಯಗಳು ವಿಶ್ವಪ್ರಸಿದ್ಧವಾಗಿವೆ. ಹೆಚ್ಚಿನ ಭಾರತೀಯ ವಿದ್ಯಾರ್ಥಿಗಳು ಇಲ್ಲಿ ಅಧ್ಯಯನ ಮಾಡಲು, ಕಲಿಯಲು ಮತ್ತು ಕೊಡುಗೆ ನೀಡಲು ಪ್ರೋತ್ಸಾಹಿಸಲು ಬರುತ್ತಿದ್ದಾರೆ. ನಾವು ನಿನ್ನೆ ಪ್ರಧಾನಿ ಇಶಿಬಾ ಅವರೊಂದಿಗೆ ಕ್ರಿಯಾ ಯೋಜನೆ ಪ್ರಾರಂಭಿಸಿದ್ದೇವೆ. ಈ ಯೋಜನೆಯಡಿ, ಮುಂದಿನ 5 ವರ್ಷಗಳಲ್ಲಿ 5 ಲಕ್ಷ ವಿದ್ಯಾರ್ಥಿಗಳು ವಿವಿಧ ವಲಯಗಳಲ್ಲಿ ವಿನಿಮಯ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಇದರ ಜತೆಗೆ, 50,000 ನುರಿತ ಭಾರತೀಯ ವೃತ್ತಿಪರರು ಜಪಾನ್ಗೆ ಬರುತ್ತಾರೆ. ಜಪಾನ್ನ ಪ್ರಾಂತ್ಯಗಳು ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಈ ಪ್ರಯತ್ನದಲ್ಲಿ ನಮಗೆ ನಿಮ್ಮ ಬೆಂಬಲ ಸಿಗುತ್ತದೆ ಎಂಬ ವಿಶ್ವಾಸ ನನಗಿದೆ.
ಗಣ್ಯರೆ,
ನಮ್ಮ ದೇಶಗಳು ಒಟ್ಟಾಗಿ ಮುಂದುವರಿಯುತ್ತಿದ್ದಂತೆ, ಪ್ರತಿಯೊಂದು ಪ್ರಾಂತ್ಯ ಮತ್ತು ಪ್ರತಿಯೊಂದು ಭಾರತೀಯ ರಾಜ್ಯವು ಹೊಸ ಕೈಗಾರಿಕೆಗಳನ್ನು ಸೃಷ್ಟಿಸುತ್ತದೆ, ಹೊಸ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುತ್ತದೆ ಮತ್ತು ತನ್ನ ಜನರಿಗೆ ಹೊಸ ಅವಕಾಶಗಳನ್ನು ತೆರೆಯುತ್ತದೆ ಎಂದು ನಾನು ಬಯಸುತ್ತೇನೆ.
ಟೋಕಿಯೊ ಮತ್ತು ದೆಹಲಿ ಇದನ್ನು ಮುನ್ನಡೆಸಬಹುದು.
ಆದರೆ, ಕನಗಾವಾ ಮತ್ತು ಕರ್ನಾಟಕ ಧ್ವನಿ ನೀಡಲಿ.
ಐಚಿ ಮತ್ತು ಅಸ್ಸಾಂ ಒಟ್ಟಿಗೆ ಕನಸು ಕಾಣಲಿ.
ಒಕಾಯಾಮಾ ಮತ್ತು ಒಡಿಶಾ ಭವಿಷ್ಯವನ್ನು ನಿರ್ಮಿಸಲಿ.
ತುಂಬು ಧನ್ಯವಾದಗಳು.
ಅರಿಗಾಟೊ ಗೊಜೈಮಾಸು.
ಹಕ್ಕು ನಿರಾಕರಣೆ: ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಅನುವಾದದ ಕನ್ನಡ ರೂಪಾಂತರ ಇದಾಗಿದೆ, ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.
*****
This morning in Tokyo, interacted with the Governors of 16 prefectures of Japan. State-prefecture cooperation is a vital pillar of India-Japan friendship. This is also why a separate initiative on it was launched during the 15th Annual India-Japan Summit yesterday. There is… pic.twitter.com/N31Kp9wTw3
— Narendra Modi (@narendramodi) August 30, 2025
今朝、東京にて日本の16県の知事と意見交換を行いました。州と県の協力は、印日間の友情における重要な柱です。そのため、昨日開催された第15回印日首脳会談においても、この地方間協力に関するイニシアティブが立ち上げられました。貿易、イノベーション、起業などの分野で大きな協力の可能性があり、… pic.twitter.com/M9v4ZFgdHq
— Narendra Modi (@narendramodi) August 30, 2025