Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನೇಪಾಳದ ಜನಕಪುರದಲ್ಲಿರುವ ಬಾರಾಹ್ ಬಿಗಾ ಮೈದಾನದಲ್ಲಿ ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣದ ಇಂಗ್ಲೀಷ್ ಅವತರಣಿಕೆ.

ನೇಪಾಳದ ಜನಕಪುರದಲ್ಲಿರುವ ಬಾರಾಹ್ ಬಿಗಾ ಮೈದಾನದಲ್ಲಿ ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣದ ಇಂಗ್ಲೀಷ್ ಅವತರಣಿಕೆ.

ನೇಪಾಳದ ಜನಕಪುರದಲ್ಲಿರುವ ಬಾರಾಹ್ ಬಿಗಾ ಮೈದಾನದಲ್ಲಿ ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣದ ಇಂಗ್ಲೀಷ್ ಅವತರಣಿಕೆ.

ನೇಪಾಳದ ಜನಕಪುರದಲ್ಲಿರುವ ಬಾರಾಹ್ ಬಿಗಾ ಮೈದಾನದಲ್ಲಿ ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣದ ಇಂಗ್ಲೀಷ್ ಅವತರಣಿಕೆ.


ಇಲ್ಲಿ ಹಾಜರಿರುವ ಎಲ್ಲಾ ಗೌರವಾನ್ವಿತ ಗಣ್ಯರೇ, ಇಲ್ಲಿ ದೊಡ್ಡ ಸಂಖ್ಯೆಯಲ್ಲಿ ಸೇರಿರುವ ಜನಕಪುರದ  ನನ್ನ ಪ್ರೀತಿಯ ಸಹೋದರ ಮತ್ತು ಸಹೋದರಿಯರೇ

 

ಜೈ ಸಿಯಾ ರಾಂ

 

ಜೈ ಸಿಯಾ ರಾಂ

 

ಜೈ ಸಿಯಾ ರಾಂ

 

ಸಹೋದರರೇ ಮತ್ತು ಸಹೋದರಿಯರೇ

 

2014 ರ ಆಗಸ್ಟ್ ತಿಂಗಳಲ್ಲಿ ನಾನು ಪ್ರಧಾನ ಮಂತ್ರಿಯಾಗಿ ಮೊದಲ ಬಾರಿಗೆ ನೇಪಾಳಕ್ಕೆ ಬಂದಾಗ, ನಾನು ಘಟನಾ ಸಭೆಯಲ್ಲಿ ಹೇಳಿದ್ದೆ, ನಾನು ಶೀಘ್ರವೇ ಜನಕಪುರಕ್ಕೆ ಬರುವೆ ಎಂದು. ನಾನು ತಡವಾಗಿ ಬಂದಿರುವುದಕ್ಕೆ ನಿಮ್ಮೆಲ್ಲರ ಕ್ಷಮೆ ಯಾಚಿಸುತ್ತೇನೆ. ಬಹುಷಃ ಸೀತಾ ಮಾತೆ  ಭದ್ರಕಾಳಿ ಏಕಾದಶಿಯಾದ ಈ ದಿನವನ್ನು ನಾನು ಇಲ್ಲಿಗೆ ಭೇಟಿ ಮಾಡಲು ನಿಗದಿ ಮಾಡಿರಬಹುದು. ದೊರೆ  ಜನಕನ ರಾಜಧಾನಿಗೆ ಭೇಟಿ ನೀಡಬೇಕು ಮತ್ತು ತಾಯಿ ಸೀತೆಗೆ ನನ್ನ ಭಕ್ತಿಯನ್ನು ಸಮರ್ಪಿಸಬೇಕು ಎಂಬುದು ನನ್ನ ಬಹುಕಾಲದ ಆಶಯವಾಗಿತ್ತು. ಜಾನಕಿ ದೇವಾಲಯಕ್ಕೆ ಭೇಟಿ ನೀಡುವ ಮೂಲಕ ನನ್ನ ಬಲು ಧೀರ್ಘ ಕಾಲದ ಕನಸು  ಈಡೇರಿದೆ ಮತ್ತು ಆ ಅಶಯವನ್ನು  ಈಡೇರಿಸಿದ್ದಕ್ಕೆ ನಾನು ಜೀವನದಲ್ಲಿ ಬಹಳ ಅಭಾರಿಯಾಗಿರುತ್ತೇನೆ.

ಸಹೋದರರೇ ಮತ್ತು ಸಹೋದರಿಯರೇ,

ಭಾರತ ಮತ್ತು ನೇಪಾಳಗಳು ಎರಡು ದೇಶಗಳು, ಈ ದೇಶಗಳ  ನಡುವಿನ ಬಾಂಧವ್ಯ ಇತ್ತೀಚಿನ ಕಾಲದ್ದೇನೂ ಅಲ್ಲ. ತ್ರೇತಾ ಯುಗದಿಂದಲೂ ನಾವು ಸ್ನೇಹಿತರು. ದೊರೆ ಜನಕ ಮತ್ತು ದೊರೆ ದಶರಥ ಅವರು ಜನಕಪುರ ಮತ್ತು ಆಯೋಧ್ಯೆಯನ್ನು ಮಾತ್ರ ಜೋಡಿಸಿದ್ದಲ್ಲ, ಅವರು ಭಾರತ ಮತ್ತು ನೇಪಾಳವನ್ನು ಗೆಳೆತನ ಮತ್ತು ಸಹಭಾಗಿತ್ವದ ಬಾಹುಗಳಲ್ಲಿ ಜೋಡಿಸಿದರು. ಇದು ರಾಮ –ಸೀತಾ ಮತ್ತು ಬುದ್ದ ಹಾಗು ಮಹಾವೀರರ ನಡುವಿನ ಬೆಸುಗೆ. ಇದು ರಾಮೇಶ್ವರಂನ ಜನತೆಯನ್ನು ಪಶುಪತಿ ನಾಥದತ್ತ ಆಕರ್ಷಿಸುವಂತಹ ಸೆಳೆತ. ಲುಂಬಿನಿಯ ಜನರನ್ನು ಬೋಧಗಯಾದತ್ತ ಸೆಳೆಯುವ ಬಾಂಧವ್ಯ. ಮತ್ತು ಇದು ಧಾರ್ಮಿಕ ನಂಬಿಕೆಗಳ ಬಂಧನ. ಮತ್ತು ಈ ಭಾವನೆಯೇ ಇಂದು ನನ್ನನ್ನು ಜನಕಪುರಕ್ಕೆ ಕರೆತಂದಿದೆ.

ಮಹಾಭಾರತ ಮತ್ತು ರಾಮಾಯಣ ಕಾಲದಿಂದಲೂ ಜನಕಪುರದ ಜೊತೆ ಇಂತಹ ಸಂಪರ್ಕ ಇದ್ದಿತು. ಮಹಾಭಾರತದ ಕಾಲದಲ್ಲಿ ಬಿರಾಟ್ ನಗರ ಮತ್ತು ಅದನ್ನನುಸರಿಸಿ ಸಿಮ್ರಾನಾ ಗಂಜ್ ಜೊತೆ ಸಂಪರ್ಕಗಳಿದ್ದವು. ಮತ್ತು ಬುದ್ದನ ಕಾಲದಲ್ಲಿ ಇದ್ದ ಲುಂಬಿನಿಯ ಸಂಪರ್ಕಗಳು ಸಹಿತ ಹಲವಾರು ವರ್ಷಗಳಿಂದ ಇಂತಹ ಬಾಂಧವ್ಯಗಳು ಬೆಳೆದುಬಂದಿವೆ. ಭಾರತ –ನೇಪಾಳ ಸಂಪರ್ಕಗಳು ಯಾವುದೇ ವ್ಯಾಖ್ಯಾನಕ್ಕೆ ಸಿಲುಕುವಂತಹವಲ್ಲ. ಆದರೆ ಅವು ಭಾಷೆಗೆ ಸಂಬಂಧಿಸಿವೆ, ಮತ್ತು ಈ ಭಾಷೆ ನಂಬಿಕೆಯ ಭಾಷೆ, ನಿಷ್ಟೆಯ ಭಾಷೆ. ಇದು ಅನ್ನದ ಭಾಷೆ, ಮತ್ತು ಇದು ಮಕ್ಕಳ ಮದುವೆಯ ಬಂಧನದ ಮೂಲಕ ಜೋಡಿಸಲ್ಪಟ್ಟ ಭಾಷೆ. ಇದು ತಾಯಿ ಜಾನಕಿಯ ಸ್ಥಳ, ಆಕೆಯನ್ನು ಹೊರತುಪಡಿಸಿದರೆ  ಅಯೋಧ್ಯೆ ಅಪೂರ್ಣ.

ನಮ್ಮ ತಾಯಿ ಮತ್ತು ನಮ್ಮ ಮತ, ಎರಡೂ ಒಂದೇ ; ನಮ್ಮ ಪ್ರಕೃತಿ ಮತ್ತು ನಮ್ಮ ಸಂಸ್ಕೃತಿ ಎರಡೂ ಒಂದೇ; ನಮ್ಮ ಹಾದಿಗಳು ಮತ್ತು ನಮ್ಮ ಪ್ರಾರ್ಥನೆಗಳು ಎರಡೂ ಒಂದೇ .ಅಲ್ಲಿ ನಮ್ಮ ಕಠಿಣ ದುಡಿಮೆಯ ಸುವಾಸನೆ ಇದೆ, ಮತ್ತು ನಮ್ಮ ಶೌರ್ಯದ ಪ್ರತಿಧ್ವನಿ ಇದೆ. ನಮ್ಮ ಭರವಸೆ ಮತ್ತು ಆಶೋತ್ತರಗಳೂ ಒಂದೇ ಆಗಿವೆ. ಅದೇ ರೀತಿ ನಮ್ಮ ಆಕಾಂಕ್ಷೆಗಳು ಮತ್ತು ನಮ್ಮ ಹಾದಿಗಳು ಸಮಾನವಾಗಿವೆ. ನಮ್ಮ ಆಶೋತ್ತರಗಳು, ನಮ್ಮ ಉದ್ದೇಶಗಳು ಮತ್ತು ನಮ್ಮ ಗುರಿಗಳು ಎಲ್ಲವೂ ಒಂದೇ ರೀತಿಯವು.ಇದು ಕಠಿಣ ದುಡಿಮೆಗಾರರ ನೆಲ, ಅವರ ಕೊಡುಗೆಗಳು  ಭಾರತದ ಅಭಿವೃದ್ದಿಯ ಹಾದಿಗೆ ಬೆಂಬಲ ಕೊಡಬಲ್ಲಂತಹವು. ನೇಪಾಳವನ್ನು ಹೊರತುಪಡಿಸಿದರೆ ಭಾರತದ ನಂಬಿಕೆ ವ್ಯವಸ್ಥೆ ಅಪೂರ್ಣವಾಗುತ್ತದೆ. ಭಾರತದ ನಂಬಿಕೆ ಮತ್ತು ಇತಿಹಾಸ ನೇಪಾಳವನ್ನು ಹೊರತುಪಡಿಸಿದರೆ ಅಪೂರ್ಣವಾಗುತ್ತದೆ. ನೇಪಾಳ ಹೊರತುಪಡಿಸಿದರೆ ನಮ್ಮ ಯಾತ್ರಾ ಸ್ಥಳಗಳೂ ಅಪೂರ್ಣ. ಮತ್ತು ನಮ್ಮ ರಾಮ ಕೂಡಾ ನೇಪಾಳ ಇಲ್ಲದಿದ್ದರೆ ಅಪೂರ್ಣ. 

ಸಹೋದರರೇ ಮತ್ತು ಸಹೋದರಿಯರೇ,

ನಿಮ್ಮ ಭಕ್ತಿ, ದೈವ ಶೃದ್ದೆ ಸಾಗರಗಳಿಗಿಂತ ಆಳವಾದುದು ಮತ್ತು ನಿಮ್ಮ ಸ್ವಾಭಿಮಾನ ಸಾಗರ ಮಾತೆಗಿಂದ ದೊಡ್ದದಾದುದು. ಮಿಥಿಲಾದ ತುಳಸಿ ಭಾರತದಲ್ಲಿ ಶುದ್ದತೆಯ, ಜಿತೇಂದ್ರಿಯತ್ವದ  ಪರಿಮಳ, ಗೌರವ-ಅಭಿಮಾನದ  ಸುವಾಸನೆ ಹರಡುವಂತೆಯೇ, ಭಾರತದ ಜೊತೆಗಿನ ನೇಪಾಳದ ನೆಂಟಸ್ತನ ಈ ಇಡೀ ಪ್ರದೇಶದಲ್ಲಿ ಶಾಂತಿ, ಭದ್ರತೆ, ಮತ್ತು ಸಂಸ್ಕೃತಿಯ ಹರವನ್ನು ಹರಡುತ್ತಿದೆ.

ಮಿಥಿಲೆಯ ಸಂಸ್ಕೃತಿ, ಸಾಹಿತ್ಯ, ಜಾನಪದ ಕಲೆ, ಮಿಥಿಲೆಯ ಆಥಿತ್ಯ, ಪ್ರತೀಯೊಂದು ಅದ್ಭುತ. ಮತ್ತು ಇಂದು ನಾನದನ್ನು ಅನುಭವಿಸುತ್ತಿದ್ದೇನೆ. ಇಂದು ನಾನು ನಿಮ್ಮ ಪ್ರೀತಿಯನ್ನು ಅನುಭವಿಸುತ್ತಿದ್ದೇನೆ: ನಿಮ್ಮ ಆಶೀರ್ವಾದದ ಅನುಭವವನ್ನು ಪಡೆಯುತ್ತಿದ್ದೇನೆ. ಮಿಥಿಲೆಯ ಸಂಸ್ಕೃತಿ ವಿಶ್ವದಲ್ಲಿ ಅತ್ಯುನ್ನತ ಸ್ಥಾನವನ್ನು ಪಡೆದಿದೆ. ವಿದ್ಯಾಪತಿ ಕವಿಯ ರಚನೆಗಳು ಈಗಲೂ ಭಾರತ ಮತ್ತು ನೇಪಾಳಗಳಲ್ಲಿ ಸಮಾನ ಮಹತ್ವ, ಪ್ರಾಮುಖ್ಯತೆಯನ್ನು ಪಡೆದಿವೆ. ಅವರ ಮಾತುಗಳ ಮಾಧುರ್ಯ ಈಗಲೂ ಭಾರತ ಮತ್ತು ನೇಪಾಳದ ಸಾಹಿತ್ಯದಲ್ಲಿದೆ. 

ಜನಕಪುರಕ್ಕೆ ಬರುವುದರೊಂದಿಗೆ , ಮತ್ತು ನಿಮ್ಮ ಪ್ರೀತಿಯನ್ನು , ಗೌರವವನ್ನು ಅನುಭವಿಸುವುದರೊಂದಿಗೆ ನನಗೆ ನಾನು ಹೊರಗಿನವನು ಎಂಬ ಭಾವನೆಯೇ ಹೊರಟುಹೋಗಿದೆ. ಪ್ರತೀಯೊಂದೂ ನಮ್ಮಲ್ಲಿರುವಂತೆಯೇ ಇದೆ. ಪ್ರತೀಯೊಬ್ಬರೂ ನಮ್ಮವರಂತೆಯೇ ಇದ್ದಾರೆ. ಪ್ರತೀಯೊಂದರಲ್ಲೂ ಪ್ರೀತಿ, ಗೌರವವಿದೆ. ವಸ್ತುಶಃ ಇವರೆಲ್ಲರೂ ನಮ್ಮದೇ ಸ್ನೇಹಿತರು. ನೇಪಾಳವು ಆದ್ಯಾತ್ಮ ಮತ್ತು ತತ್ವಜ್ಞಾನದ ಕೇಂದ್ರ , ಅದು ಲುಂಬಿನಿ ಇರುವ ಪವಿತ್ರ ಕ್ಷೇತ್ರ. ಈ ಲುಂಬಿನಿ ಬುದ್ದ ಜನಿಸಿದ ಸ್ಥಳ.

ಸ್ನೇಹಿತರೇ, ಭೂಮಿ ತಾಯಿಯ ಪುತ್ರಿ , ಸೀತಾ ಮಾತೆ ಈ ಮಾನವೀಯ ಮೌಲ್ಯಗಳು, ತತ್ವಗಳು, ಮತ್ತು ನಮ್ಮ ಸಂಪ್ರದಾಯಗಳನ್ನು ಸಂಕೇತಿಸುವಂತಿದ್ದಾರೆ. ಇವುಗಳು ಎರಡೂ ದೇಶಗಳನ್ನು ಬೆಸೆದಿವೆ. ಜನಕನ ಈ ನಾಡು ಸೀತಾ ಮಾತೆಯಿಂದಾಗಿ ಮಹಿಳಾ ಜಾಗೃತಿಯ ಮೂಲವಾಗಿದೆ. ಸೀತಾ ಮಾತೆ ತ್ಯಾಗ , ತಪಸ್ಸು, ಅರ್ಪಣಾಭಾವ ಮತ್ತು ಹೋರಾಟದ ಪ್ರತೀಕವಾಗಿದ್ದಾರೆ. ಕಾಠ್ಮಂಡುವಿನಿಂದ ಕನ್ಯಾಕುಮಾರಿಯವರೆಗೆ ನಾವೆಲ್ಲರೂ ಸೀತಾ ಮಾತೆಯ ಸಂಪ್ರದಾಯದ ಅನುಯಾಯಿಗಳು. ಆಕೆಯ ಭಕ್ತರು ವಿಶ್ವದಾದ್ಯಂತ ಹರಡಿದ್ದಾರೆ.

ನಮ್ಮ ಹೆಣ್ಣು ಮಕ್ಕಳನ್ನು ಹೇಗೆ ಗೌರವಿಸಬೇಕು ಎಂಬುದನ್ನು ನಮಗೆಲ್ಲರಿಗೂ ತೋರಿಸಿಕೊಟ್ಟ ನಾಡಿದು. ನಮ್ಮ ಹೆಣ್ಣು ಮಕ್ಕಳನ್ನು ಗೌರವಿಸುವ ಈ ಪಾಠ ಇಂದಿನ ಆಧುನಿಕ ಸಮಾಜದಲ್ಲಿ ಬಹಳ ಅತ್ಯಗತ್ಯವಾಗಿದೆ. ಇಲ್ಲಿಯ ಮೈಥಿಲಿ ಪೈಂಟಿಗ್ ಬಗ್ಗೆ ಒಂದು ಉದಾಹರಣೆ ತೆಗೆದುಕೊಳ್ಳೋಣ. ಈ ಪರಂಪರೆ ಮುಂದುವರಿಕೆಯಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸಿದ್ದಾರೆ. ಮತ್ತು ಈ ಮೈಥಿಲಿ ಕಲೆ ವಿಶ್ವ ಪ್ರಸಿದ್ದವಾಗಿದೆ. ನಾವು ಈ ಕಲೆಯಲ್ಲಿ ಪ್ರಕೃತಿ ಮತ್ತು ಪರಿಸರದ ಬಗ್ಗೆ ಜಾಗೃತಿಯನ್ನು ಕಾಣಬಹುದಾಗಿದೆ. ಇಂದಿನ ಮಹಿಳಾ ಜಾಗೃತಿ ಮತ್ತು ವಾತಾವರಣ ಬದಲಾವಣೆಯ ಈ ಕಾಲದಲ್ಲಿ ಇಡೀ ಜಗತ್ತಿಗೆ ಮಿಥಿಲಾ ಕೊಡುತ್ತಿರುವ ದೊಡ್ದ ಸಂದೇಶ ಇದು. ಗಾರ್ಗಿಯಂತಹ ಜ್ಞಾನಿ ಮಹಿಳೆ ಮತ್ತು ಅಷ್ಟಾವಕ್ರನಂತಹ ಋಷಿ ಮುನಿಗಳು ರಾಜಾ ಜನಕನ ಆಸ್ಥಾನದಲ್ಲಿದ್ದರು ಎಂಬುದು ಆಡಳಿತದ ಜೊತೆ ಜ್ಞಾನ ಮತ್ತು ಆಧ್ಯಾತ್ಮಕ್ಕೆ ಎಂತಹ ಪ್ರಾಮುಖ್ಯ ನೀಡಲಾಗುತ್ತಿತ್ತು ಎಂಬುದಕ್ಕೊಂದು ಉದಾಹರಣೆ.

ಜನಕ ರಾಜನ ಆಸ್ಥಾನದಲ್ಲಿ ಸಾರ್ವಜನಿಕ ಕಲ್ಯಾಣ ನೀತಿಗಳ ಚರ್ಚೆಯನ್ನು ವಿದ್ವಾಂಸರೊಂದಿಗೆ ನಡೆಸಲಾಗುತ್ತಿತ್ತು. ದೊರೆ ಜನಕ ಕೂಡ ಇಂತಹ ಚರ್ಚೆಗಳಲ್ಲಿ ಭಾಗವಹಿಸುತ್ತಿದ್ದರು. ಇಂತಹ ಚರ್ಚೆಗಳ ಮೂಲಕ ಹೊರಹೊಮ್ಮಿದ ಫಲಿತಾಂಶರೂಪವನ್ನು ದೇಶದ ಮತ್ತು ಜನತೆಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಜಾರಿಗೆ ತರಲಾಗುತ್ತಿತ್ತು. ದೊರೆ ಜನಕನಿಗೆ ಆತನ ಪ್ರಜೆಗಳೇ ಸರ್ವಸ್ವವಾಗಿದ್ದರು. ಆತನಿಗೆ ತನಗೆ ಸಂಬಂಧಿಸಿದವರಿಗಾಗಿ, ಬಂಧುಗಳಿಗಾಗಿ ಏನನ್ನಾದರೂ ಮಾಡುವ ಮನೋಭಾವ ಇರಲಿಲ್ಲ. ತನ್ನ ಪ್ರಜೆಗಳ ಕಲ್ಯಾಣ ಆತನ ಮೊದಲ ಆದ್ಯತೆಯಾಗಿತ್ತು. ಆದ್ದರಿಂದಲೇ ರಾಜಾ ಜನಕನನ್ನು ವಿದೇಹ ಎಂದು ಕರೆಯುತ್ತಿದ್ದರು. ವಿದೇಹ  ಎಂದರೆ ಯಾವ ವ್ಯಕ್ತಿ ತನ್ನ ದೇಹದೊಂದಿಗೆ ಹೆಚ್ಚು ಆಪ್ತನಾಗಿರುವುದಿಲ್ಲವೋ, ಮತ್ತು ತನ್ನನ್ನು ತಾನು ಸಾರ್ವಜನಿಕ ಸೇವೆಗೆ ತೊಡಗಿಸಿಕೊಂಡಿರುತ್ತಾನೋ , ಬದುಕನ್ನು ಸಾರ್ವಜನಿಕ ಕಲ್ಯಾಣಕ್ಕಾಗಿ ಮೀಸಲಿಡುತ್ತಾನೋ ಆತ ಎಂದರ್ಥ.

ಸಹೋದರರೇ ಮತ್ತು ಸಹೋದರಿಯರೇ,

ಇಂದು ಭಾರತ ಮತ್ತು ನೇಪಾಳಗಳು ಸಾರ್ವಜನಿಕ ಕಲ್ಯಾಣದ ಸಂದೇಶ ಹಾಗು ದೊರೆ ಜನಕನ ಸಂದೇಶದೊಂದಿಗೆ ಮುನ್ನಡೆಯುತ್ತಿವೆ. ನೇಪಾಳ ಮತ್ತು ಭಾರತದ ಬಾಂಧವ್ಯಗಳು ರಾಜಕೀಯ, ರಾಜತಾಂತ್ರಿಕತೆ, ಮತ್ತು ವ್ಯೂಹಾತ್ಮಕ ರೀತಿಯಲ್ಲಿ ಬೆಸೆಯಲ್ಪಟ್ಟಿವೆ ಮತ್ತು ಅವುಗಳು ಇವುಗಳನ್ನು ದಾಟಿ ನಮ್ಮ ದೇವರ ಜೊತೆಗೆ ಬೆಸೆದುಕೊಂಡಿವೆ. ವ್ಯಕ್ತಿಗಳು ಮತ್ತು ಸರಕಾರಗಳು ಬರುತ್ತವೆ ಮತ್ತು ಹೋಗುತ್ತವೆ, ಆದರೆ ಬಾಂಧವ್ಯ ಚಿರಕಾಲದ್ದು. ನಾವು ಜಂಟಿಯಾಗಿ ಐದು ಸಂಗತಿಗಳಾದ ಮೌಲ್ಯಗಳು, ಶಿಕ್ಷಣ, ಶಾಂತಿ, ಭದ್ರತೆ, ಮತ್ತು ಸಮೃದ್ದಿಯನ್ನು ಈ ಸಮಯದಲ್ಲಿ ಕಾಪಾಡಿಕೊಳ್ಳಬೇಕಾಗಿದೆ. ನೇಪಾಳದ ಅಭಿವೃದ್ದಿ ಎಂದರೆ ಅದು ಪ್ರಾದೇಶಿಕ ಅಭಿವೃದ್ದಿಯ ಮೂಲ ಎಂದು ನಾವು ನಂಬುತ್ತೇವೆ. ಭಾರತ ಮತ್ತು ನೇಪಾಳದ ನಡುವಿನ ಬಾಂಧವ್ಯದ ಸ್ವಭಾವ ಎಂತಹದು; ಅದನ್ನು ’ರಾಮಚರಿತಮಾನಸ ’ ದ ಈ ಕೆಳಗಿನ ದ್ವಿಪದಿಗಳ ಮೂಲಕ ಅರ್ಥ ಮಾಡಿಕೊಳ್ಳಬಹುದು.

जेनमित्रदु:खहोहिंदुखारी।

तिन्हहिबिलोकतपातकभारी॥

निजदु:खगिरिसमरजकरिजाना।

मित्रकदु:खरजमेरुसमाना॥

ಇದರರ್ಥ ತಮ್ಮ ಸ್ನೇಹಿತರ ದುಃಖದ ನೋವಿನಲ್ಲಿ ಭಾಗಿಯಾಗದವರನ್ನು ನೋಡುವುದು ಕೂಡಾ ದೊಡ್ದ ಪಾಪ. ಆದ್ದರಿಂದ ನಿಮ್ಮ ದುಃಖ ಬೆಟ್ಟದಷ್ಟಿದ್ದರೂ , ಅದಕ್ಕೆ ಹೆಚ್ಚು ಮಹತ್ವ ಕೊಡಬೇಡಿ. ಆದರೆ ನಿಮ್ಮ ಸ್ನೇಹಿತರ ನೋವು ಧೂಳಿನ ಕಣದಷ್ಟು ಸಣ್ಣದಾಗಿದ್ದರೂ , ನೀವದನ್ನು ಬೆಟ್ಟದಷ್ಟು ಎಂದು ಪರಿಗಣಿಸಿ ಆತನಿಗೆ ಏನು ಸಾಧ್ಯವೋ ಅಷ್ಟು  ಸಹಾಯವನ್ನು ಮಾಡಿ.

ಸ್ನೇಹಿತರೇ, 

ಯಾವುದಾದರೂ ವಿಪತ್ತು ಬಂದಾಗ ಭಾರತ ಇರಲಿ ನೇಪಾಳ ಇರಲಿ ಎರಡೂ ರಾಷ್ಟ್ರಗಳು ಜೊತೆಯಾಗಿ ನಿಂತಿವೆ ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. . ಪ್ರತೀ ಸಂಕಷ್ಟದ ಸ್ಥಿತಿಗಳಲ್ಲೂ ನಾವು ಪರಸ್ಪರ ಬೆಂಬಲಿಸಿದ್ದೇವೆ. ದಶಕಗಳಿಂದ ನೇಪಾಳದ ಅಭಿವೃದ್ದಿಯಲ್ಲಿ ಭಾರತ ಖಾಯಂ ಸಹಭಾಗಿಯಾಗಿದೆ. ನೇಪಾಳವು ನಮ್ಮ ನೆರೆಹೊರೆ ಮೊದಲು ನೀತಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇಂದು ಭಾರತವು ಮೂರನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗುವ ನಿಟ್ಟಿನಲ್ಲಿ ಮುಂದಡಿ ಇಡುತ್ತಿದೆ. ಅದೇ ರೀತಿ ನಿಮ್ಮ ನೇಪಾಳವೂ ತ್ವರಿತವಾಗಿ ಅಭಿವೃದ್ದಿ ಹೊಂದುತ್ತಿದೆ. ಈ ಸಹಭಾಗಿತ್ವಕ್ಕೆ ಹೊಸ ಶಕ್ತಿ ತುಂಬಲು ಇಲ್ಲಿಗೆ ಬರಲು ನನಗೆ ಅವಕಾಶ ಒದಗಿ ಬಂದಿದೆ.

ಸಹೋದರರೇ ಮತ್ತು ಸಹೋದರಿಯರೇ,

ಅಭಿವೃದ್ದಿಗೆ ಪ್ರಥಮ ಮತ್ತು ಮುಂಚೂಣಿ ಶರತ್ತೆಂದರೆ ಪ್ರಜಾಪ್ರಭುತ್ವ. ನೀವು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುತ್ತಿರುವುದು ನನಗೆ ಸಂತೋಷ ತಂದಿದೆ. ನಿಮ್ಮ ದೇಶದಲ್ಲಿ ಇತ್ತೀಚೆಗಷ್ಟೇ ಚುನಾವಣೆಗಳು ನಡೆದಿವೆ. ಮತ್ತು ನೀವು ಹೊಸ ಸರಕಾರವನ್ನು ಆಯ್ಕೆ ಮಾಡಿದಿರಿ. ನೀವು ನಿಮ್ಮ ಆಶೋತ್ತರಗಳನ್ನು ಈಡೇರಿಸುವ,  ಕನಸನ್ನು ನನಸು ಮಾಡುವ  ತೀರ್ಪನ್ನು ಕೊಟ್ಟಿದ್ದೀರಿ. ಒಂದು ವರ್ಷದೊಳಗೆ ಎಲ್ಲಾ ಮೂರೂ ಸ್ತರಗಳಲ್ಲಿಯೂ ಚುನಾವಣೆಯನ್ನು ಯಶಸ್ವಿಯಾಗಿ ನಡೆಸಿರುವುದಕ್ಕೆ ನಾನು ನಿಮ್ಮೆಲ್ಲರನ್ನೂ ಅಭಿನಂದಿಸುತ್ತೇನೆ. ನೇಪಾಳದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ನೇಪಾಳದ ಎಲ್ಲಾ ಏಳು ಪ್ರಾಂತ್ಯಗಳು ಚುನಾಯಿತ ಸರಕಾರವನ್ನು ಹೊಂದಿವೆ. ಇದು ನೇಪಾಳಕ್ಕೆ ಮಾತ್ರವಲ್ಲ, ಭಾರತ ಮತ್ತು ಇಡೀ  ವಲಯಕ್ಕೆ  ಹೆಮ್ಮೆಯ ಸಂಗತಿ. ನೇಪಾಳ ಹೊಸ ಸಮಾಜೋ-ಆರ್ಥಿಕ ಬದಲಾವಣೆಯ ಹಂತ ಪ್ರವೇಶಿಸುತ್ತಿದೆ. ಮತ್ತು ಅದು ಉತ್ತಮ ಆಡಳಿತ ಹಾಗು ಎಲ್ಲರನ್ನು ಒಳಗೊಳ್ಳುವ ಅಭಿವೃದ್ದಿಯಾಗಿದೆ.

ಈ ವರ್ಷ , ಅಥವಾ 10 ವರ್ಷಗಳಿಗೆ ಮೊದಲು , ನೇಪಾಳದ ಯುವಕರು ಗುಂಡಿಗೆ ಬದಲಾಗಿ ಮತಗಳನ್ನು ಆಯ್ಕೆ ಮಾಡಿಕೊಂಡರು. ಬಿಕ್ಕಟ್ಟಿಗೆ ಬದಲಾಗಿ ಬುದ್ದನ ಪಥವನ್ನು ಆಯ್ಕೆ ಮಾಡಿಕೊಂಡ ಇಂತಹ ಅರ್ಥಪೂರ್ಣ ಪರಿವರ್ತನೆಗಾಗಿ ನಾನು ನೇಪಾಳದ ಜನತೆಯನ್ನು ಅಭಿನಂದಿಸುತ್ತೇನೆ.ಭಾರತ ಮತ್ತು ನೇಪಾಳದ ಪ್ರಾಚೀನ ಬಾಂಧವ್ಯಗಳ ಹಿಂದೆ ಪ್ರಜಾಸತ್ತಾತ್ಮಕ ಮೌಲ್ಯಗಳಿವೆ. ಪ್ರಜಾಪ್ರಭುತ್ವವು  ಎಂತಹ ಶಕ್ತಿಯನ್ನು ಹೊಂದಿದೆ ಎಂದರೆ ಅದು ಅತ್ಯಂತ ಸಾಮಾನ್ಯ ವ್ಯಕ್ತಿಗೆ ಮತ್ತು ಅಸಾಮಾನ್ಯ ವ್ಯಕ್ತಿಗೆ ಯಾವುದೇ ಅಡೆತಡೆಗಳಿಲ್ಲದೆ ತನ್ನ ಕನಸನ್ನು  ನನಸು ಮಾಡಿಕೊಳ್ಳಲು  ಹಕ್ಕು  ಒದಗಿಸುತ್ತದೆ. ಭಾರತ ಈ ಶಕ್ತಿಯನ್ನು  ಅರ್ಥ ಮಾಡಿಕೊಂಡಿದೆ ಮತ್ತು ಇಂದು ಭಾರತದ ಪ್ರತೀಯೊಬ್ಬ ನಾಗರಿಕನೂ ತನ್ನ ಕನಸುಗಳಿಗೆ ಜೀವ ತುಂಬಲು ಅರ್ಪಣಾ ಭಾವದಿಂದ ಕಾರ್ಯಮಗ್ನನಾಗಿದ್ದಾನೆ. ಅದೇ ಪಥದಲ್ಲಿ ನೇಪಾಳವನ್ನೂ ಪ್ರಗತಿಯಲ್ಲಿ ಕೊಂಡೊಯ್ಯಬೇಕು ಎನ್ನುವ ಆಶಯದ ಬೆಳಕಿನ ಕಿಡಿಗಳನ್ನು ನಿಮ್ಮೆಲ್ಲರ ಕಣ್ಣುಗಳಲ್ಲಿ ನಾನು ಕಾಣುತ್ತಿದ್ದೇನೆ.

ಸ್ನೇಹಿತರೇ,

ಇತ್ತೀಚೆಗೆ ನನಗೆ ನೇಪಾಳದ ಪ್ರಧಾನ ಮಂತ್ರಿ ಓಲಿ ಜೀ ಅವರನ್ನು ದಿಲ್ಲಿಯಲ್ಲಿ ಸ್ವಾಗತಿಸುವ ಅವಕಾಶ ಒದಗಿ ಬಂದಿತು. ನೇಪಾಳಕ್ಕೆ ಸಂಬಂಧಿಸಿ ಅವರ ಚಿಂತನೆಯನ್ನು ಅರಿತುಕೊಳ್ಳುವ ಅವಕಾಶವೂ ಒದಗಿತು. ಓಲಿ ಜೀ ಅವರು ’ಸಮೃದ್ದ ನೇಪಾಳ , ಸಂತುಷ್ಟ ನೇಪಾಳಿ’ ಕನಸನ್ನು ಹೊಂದಿದ್ದಾರೆ. ಭಾರತವು ಸದಾ ಕಾಲ ಸಮೃದ್ದ ಮತ್ತು ಸಂಪನ್ನ ನೇಪಾಳದ ಹಾರೈಕೆಯನ್ನು ಹೊಂದಿದೆ. 1.25 ಬಿಲಿಯನ್ ಭಾರತೀಯರ ಪರವಾಗಿ , ಭಾರತ ಸರಕಾರದ ಪರವಾಗಿ ಪ್ರಧಾನ ಮಂತ್ರಿ ಓಲಿ ಅವರು ನೇಪಾಳ ಕುರಿತ ತಮ್ಮ ಕನಸನ್ನು ಸಾಕಾರಗೊಳಿಸಲು ಸಫಲರಾಗಲಿ ಎಂದು ನಾನು ಹಾರೈಸುತೇನೆ. ನಾನು ಭಾರತದ ಬಗ್ಗೆಯೂ ಇಂತಹದೇ ಧೋರಣೆಯನ್ನು ಅನುಸರಿಸಿದ್ದೇನೆ. 

ನಮ್ಮ ಭಾರತ ಸರಕಾರ ‘ಸಬ್ ಕಾ ವಿಕಾಸ್ ಸಬ್ ಕಾ ಸಾಥ್’ ತತ್ವದಡಿಯಲ್ಲಿ ಮುಂದೆ ಸಾಗುತ್ತಿದೆ. ದೇಶದ ಯಾವುದೇ ಭಾಗ ಅಥವಾ ಒಂದು ವಲಯ ಅಭಿವೃದ್ದಿ ತಲುಪಲಾಗದೆ ಹಿಂದುಳಿಯಬಾರದು ಎಂಬುದು ನಮ್ಮ ನಿರಂತರ ಪ್ರಯತ್ನ. ಅದು ಪೂರ್ವ ಇರಲಿ ಅಥವಾ ಪಶ್ಚಿಮ ಇರಲಿ . ಉತ್ತರ ಇರಲಿ ಅಥವಾ ದಕ್ಷಿಣ ಇರಲಿ , ಅಭಿವೃದ್ದಿಯ ರಥ ಪ್ರತೀ ದಿಕ್ಕಿನಲ್ಲಿಯೂ ವೇಗದಿಂದ ಸಾಗುತ್ತಿದೆ. ಇದುವರೆಗೆ ಅಭಿವೃದ್ದಿಯ ಬೆಳಕು ತಲುಪಲಾಗದ ಪ್ರದೇಶಗಳಲ್ಲಿ ಅಭಿವೃದ್ದಿಗಾಗಿ ಸರಕಾರ ಹೆಚ್ಚು ಗಮನ ಕೊಡುತ್ತಿದೆ. ಈ ಹಿನ್ನೆಲೆಯಲ್ಲಿ ಪೂರ್ವಾಂಚಲ , ಅಂದರೆ ಭಾರತದ ಪೂರ್ವ ಭಾಗ, ನೇಪಾಳ ಗಡಿಗೆ ತಾಗಿಕೊಂಡಿರುವ ಭೂಭಾಗಕ್ಕೆ ವಿಶೇಷ ಒತ್ತನ್ನು ನೀಡಲಾಗುತ್ತಿದೆ. ಉತ್ತರ ಪ್ರದೇಶದಿಂದ ಬಿಹಾರ , ಈಶಾನ್ಯದಿಂದ , ಪಶ್ಚಿಮ ಬಂಗಾಲದಿಂದ ಒಡಿಶಾದವರೆಗೆ, ನಾವು ಈ ಎಲ್ಲಾ ಪ್ರದೇಶಗಳನ್ನು ದೇಶದ ಇತರ ಪ್ರದೇಶಗಳಿಗೆ ಸರಿಸಮಾನವಾಗಿ ಅಭಿವೃದ್ದಿಪಡಿಸುವ ಪ್ರತಿಜ್ಞೆಯನ್ನು ಮಾಡಿದ್ದೇವೆ. ಈ ಪ್ರದೇಶಗಳಲ್ಲಿ ಮಾಡಲಾಗುತ್ತಿರುವ ಕೆಲಸ ಕಾರ್ಯಗಳು ಖಂಡಿತವಾಗಿಯೂ ನೆರೆಯ ರಾಷ್ಟ್ರವಾದ ನೇಪಾಳಕ್ಕೆ ಲಾಭ ತರಲಿವೆ.

ಸಹೋದರರೇ ಮತ್ತು ಸಹೋದರಿಯರೇ ,

ನಾನು ‘ಸಬ್ ಕಾ ಸಾಥ್ –ಸಬ್ ಕಾ ವಿಕಾಸ್’ ಮಾತನಾಡುವಾಗ ನಾನದನ್ನು ಭಾರತಕ್ಕೆ ಮಾತ್ರ ಬಯಸುವುದಲ್ಲ, ನಾನದನ್ನು ಭಾರತದ ಎಲ್ಲಾ ನೆರೆಹೊರೆಯ ದೇಶಗಳಿಗೂ ಹಾರೈಸುತ್ತೇನೆ. ಮತ್ತು ನೇಪಾಳದಲ್ಲಿ ’ಸಮೃದ್ದ ನೇಪಾಳ-ಸಂತುಷ್ಟ ನೇಪಾಳಿ” ಚರ್ಚೆಗಳಾಗುವಾಗ ನಾನು ಬಹಳ ಆನಂದ ಭರಿತನಾಗುತ್ತೇನೆ. 1.25 ಬಿಲಿಯನ್ ಭಾರತೀಯರೂ ಸಂಭ್ರಮಿಸುತ್ತಾರೆ. ಜನಕ ಪುರದ  ನನ್ನ ಸಹೋದರ ಮತ್ತು ಸಹೋದರಿಯರೇ, ನಾವು ಭಾರತದಲ್ಲಿ ಬಹಳ ದೊಡ್ಡ ನಿರ್ಣಯವನ್ನು ಕೈಗೊಂಡಿದ್ದೇವೆ. ಮತ್ತು ಆ ನಿರ್ಣಯ ಯಾವುದೆಂದರೆ ನವ ಭಾರತದ ನಿರ್ಮಾಣ.  

2022 ರಲ್ಲಿ ಭಾರತವು ತನ್ನ ಸ್ವಾತಂತ್ರ್ಯದ 75 ನೇ ವರ್ಷವನ್ನು ಪೂರೈಸಲಿದೆ. 1.25 ಬಿಲಿಯನ್ ಭಾರತೀಯರು ಆ ವೇಳೆಯೊಳಗೆ ನವ ಭಾರತ ನಿರ್ಮಾಣ ಮಾಡುವ ಸಂಕಲ್ಪ ಮಾಡಿದ್ದಾರೆ. ನಾವು ನವ ಭಾರತವನ್ನು ಕಟ್ಟುತ್ತಿದ್ದೇವೆ. ಅಲ್ಲಿ ಬಡವರಲ್ಲಿ ಬಡವ ಕೂಡಾ ಅಭಿವೃದ್ದಿಯ ಅವಕಾಶ ಪಡೆದಿರುತ್ತಾನೆ. ಅಲ್ಲಿ ಅಸಮಾನತೆ, ಪಕ್ಷಪಾತ ಇರುವುದಿಲ್ಲ. ಕೆಳವರ್ಗ ಮತ್ತು ಮೇಲ್ವರ್ಗ ಎಂಬ ಭೇದ ಇಲ್ಲದೆ ಪ್ರತಿಯೊಬ್ಬರಿಗೂ ಗೌರವ ದೊರೆಯುತ್ತದೆ. ಅಲ್ಲಿ ಪ್ರತೀ ಮಗುವಿಗೂ ಶಿಕ್ಷಣ ಲಭಿಸುತ್ತದೆ, ಪ್ರತೀ ಯುವಕನಿಗೂ ಉದ್ಯೋಗ ಇರುತ್ತದೆ ಮತ್ತು ಹಿರಿಯರಿಗೆ ವೈದ್ಯಕೀಯ ಸೌಲಭ್ಯ  ಇರುತ್ತದೆ. ಅಲ್ಲಿ ಜೀವನ ಸುಲಭ ಆಗಿರುತ್ತದೆ ಮತ್ತು ಜನ ಸಾಮಾನ್ಯ ವ್ಯವಸ್ಥೆಯ ವಿರುದ್ದ ಹೋರಾಟ ಮಾಡಬೇಕಾದ ಸ್ಥಿತಿ ಇರುವುದಿಲ್ಲ. ಅಲ್ಲಿ ಸಮಾಜ ಭ್ರಷ್ಟಾಚಾರದಿಂದ ಮುಕ್ತವಾಗಿರುತ್ತದೆ , ನಾವು ಈ ಮಾದರಿಯ ನವ ಭಾರತದತ್ತ ಸಾಗುತ್ತಿದ್ದೇವೆ.

ದೇಶದಲ್ಲಿ ಮತ್ತು ಆಡಳಿತದಲ್ಲಿ ನಾವು ನಾವು ಹಲವು ಸುಧಾರಣೆಗಳನ್ನು ತಂದಿದ್ದೇವೆ. ಪ್ರಕ್ರಿಯೆಗಳನ್ನು ಸರಳೀಕರಣಗೊಳಿಸಲಾಗಿದೆ. ಮತ್ತು ಇಂದು ವಿಶ್ವವು ನಾವು ಕೈಗೊಂಡ ಕ್ರಮಗಳನ್ನು ಶ್ಲ್ಯಾಘಿಸುತ್ತಿದೆ. ನಾವು ರಾಷ್ಟ್ರ ನಿರ್ಮಾಣ ಮತ್ತು ಸಾರ್ವಜನಿಕ ಸಹಭಾಗಿತ್ವ ನಡುವಿನ ಬಾಂಧವ್ಯವನ್ನು ಬಲಪಡಿಸುತ್ತಿದ್ದೇವೆ. ಇಂದು, ನಾನಿಲ್ಲಿಗೆ ಬಂದಿರುವುದು ನಿಮಗೆ 1.25 ಬಿಲಿಯನ್ ಭಾರತೀಯರು ನೇಪಾಳದ ಸಾಮಾನ್ಯ ನಾಗರಿಕರ ಜೀವನವನ್ನು ಸಮೃದ್ದಗೊಳಿಸಲು ಕೈಜೋಡಿಸಲು  ಸಂತೋಷಿಸುತ್ತಾರೆ ಎಂಬ ಭರವಸೆಯನ್ನು ನೀಡುವುದಕ್ಕಾಗಿ.

ಸ್ನೇಹಿತರೇ, ನಾವೆಲ್ಲಾ ಒಂದೇ ಎಂಬ ಭಾವನೆ ನಾವು ಬೇರೆ, ಬೇರೆ ಪ್ರದೇಶಗಳಿಗೆ ಭೇಟಿ ನೀಡಿದಾಗ ಇನ್ನಷ್ಟು  ಬಲವಾಗುತ್ತದೆ. ನೇಪಾಳದ ಪ್ರಧಾನ ಮಂತ್ರಿಗಳು ಭಾರತಕ್ಕೆ ಬಂದು ಹೋದ ತಕ್ಷಣ ನನಗೆ ಇಲ್ಲಿಗೆ ಬರಲು ಒಂದು ಅವಕಾಶ ದೊರೆಯಿತು, ನಿಮ್ಮೊಂದಿಗೆ ಬೆರೆಯಲು ಅವಕಾಶ ದೊರಕಿತು. ನಾನು ಇಲ್ಲಿಗೆ ಬಂದಂತೆ ಉಭಯ ದೇಶಗಳ ಜನರಿಗೂ ಇದೇ ರೀತಿ ಗಡಿಯಾಚೆ ಹೋಗಿ ಬರುವ ಸೌಕರ್ಯಗಳು ಇರಬೇಕು.

ನಾವು ಹಿಮಾಲಯನ್ ಪರ್ವತಗಳೊಂದಿಗೆ ಬೆಸೆಯಲ್ಪಟ್ಟಿದ್ದೇವೆ. ಪರ್ವತ ಪ್ರದೇಶದ ಕೃಷಿ ಭೂಮಿ, ಸಾವಿರಾರು ಕಾಲುದಾರಿಗಳು ಮತ್ತು ಕಚ್ಚಾ ರಸ್ತೆಗಳ ಮೂಲಕ ಜೋಡಿಸಲ್ಪಟ್ಟಿದ್ದೇವೆ.ಡಜನ್ನಿನಷ್ಟು  ಸಣ್ಣ ಸಣ್ಣ ನದಿಗಳು ಮತ್ತು ನಮ್ಮ ಮುಕ್ತ ಗಡಿಯಿಂದಾಗಿ ಬೆಸೆಯಲ್ಪಟ್ಟಿದ್ದೇವೆ. ಇಂದಿನ ಕಾಲದಲ್ಲಿ ಇದಿಷ್ಟೇ ಸಾಕಾಗುವುದಿಲ್ಲ. … ಮತ್ತು ನಾನು ಮುಖ್ಯಮಂತ್ರಿಗಳು ಪ್ರಸ್ತಾಪಿಸಿದ ಎಲ್ಲಾ ವಿಷಯಗಳನ್ನೂ ಅತ್ಯಂತ ಸಂಗ್ರಹ ರೂಪವಾಗಿ ಹೇಳುತ್ತೇನೆ. ನಾವು ಹೆದ್ದರಿಗಳ ಮೂಲಕ ಜೋಡಿಸಲ್ಪಡಬೇಕು. ಮಾಹಿತಿ ಹೆದ್ದಾರಿಗಳ ಮೂಲಕ ಸಂಪರ್ಕಿಸಲ್ಪಟ್ಟಿರಬೇಕು. ಅಂದರೆ ಐ-ವೇಗಳ ಮೂಲಕ. ನಾವು ವಿದ್ಯುತ್ ಮಾರ್ಗದ ಮೂಲಕ ಜೋಡಿಸಲ್ಪಟ್ಟಿರಬೇಕು ಅಂದರೆ ಟ್ರಾನ್ಸ್ ವೇ ಗಳು. ನಾವು ರೈಲ್ವೇ ಮೂಲಕ ಜೋಡಿಸಲ್ಪಡಬೇಕು. ನಾವು ಕಸ್ಟಂಸ್ ತಪಾಸಣಾ ತಾಣಗಳ ಮೂಲಕ , ವಾಯು ಸೇವೆ ವಿಸ್ತರಣೆ ಮೂಲಕ , ಒಳನಾಡು ಜಲಮಾರ್ಗಗಳ ಮೂಲಕ ಜೋಡಿಸಲ್ಪಟ್ಟಿರಬೇಕು. ಅದು ನೆಲ, ಜಲ ,ವಾಯು ಯಾವುದೇ ಇರಲಿ ನಾವು ಪರಸ್ಪರ ಜೋಡಿಸಲ್ಪಟ್ಟಿರಬೇಕು. ಸಂಪರ್ಕ ಬಹಳ ಮುಖ್ಯ ಯಾಕೆಂದರೆ ಜನತೆ ಮತ್ತು ಜನತೆಯ ನಡುವಿನ ಸಂಪರ್ಕ ಬೆಳೆಯುತ್ತದೆ ಮತ್ತು ಅದು ಬಲಗೊಳ್ಳುತ್ತದೆ. ಮತ್ತು ಅದಕ್ಕಾಗಿ ನಾವು ನೇಪಾಳ ಹಾಗು ಭಾರತದ ನಡುವೆ ಸಂಪರ್ಕ ವೃದ್ದಿಗೆ ಆದ್ಯತೆ ಕೊಡುತೇವೆ.

ಇಂದೇ ನಾವು  ಪ್ರಧಾನ ಮಂತ್ರಿ ಓಲಿ ಜೀ ಅವರೊಂದಿಗೆ ಜನಕಪುರದಿಂದ ಆಯೋಧ್ಯಾಕ್ಕೆ ಬಸ್ ಸೇವೆಯನ್ನು ಚಾಲನೆಗೊಳಿಸಿದ್ದೇವೆ. ಕಳೆದ ತಿಂಗಳು ಪ್ರಧಾನ ಮಂತ್ರಿ ಓಲಿ ಮತ್ತು ನಾನು ಬೀರ್ ಗಂಜ್ ನಲ್ಲಿ ಸಮಗ್ರ ತಪಾಸಣಾ ಠಾಣೆಯನ್ನು ಉದ್ಘಾಟಿಸಿದ್ದೇವೆ. ಈ  ಠಾಣೆ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಿಸಿದಾಗ ಗಡಿಯಲ್ಲಿ ವ್ಯಾಪಾರ ಮತ್ತು ಸಾಗಾಣಿಕೆ ಹೆಚ್ಚು ಸರಳವಾಗಲಿದೆ. ಜಯನಗರ ಮತ್ತು ಜನಕಪುರ ರೈಲ್ವೇ ಮಾರ್ಗದ ಕಾಮಗಾರಿ ತ್ವರಿತಗತಿಯಿಂದ ಸಾಗುತ್ತಿದೆ. 

ಸಹೋದರರೇ ಮತ್ತು ಸಹೋದರಿಯರೇ,

ಈ ಮಾರ್ಗವನ್ನು ವರ್ಷಾಂತ್ಯದೊಳಗೆ ಪುರ್ಣಗೊಳಿಸಲು ಪ್ರಯತ್ನಗಳು ನಡೆದಿವೆ. ಈ ರೈಲ್ವೇ ಮಾರ್ಗ ಪೂರ್ಣಗೊಂಡಾಗ ,ನೇಪಾಳವು ಭಾರತದ ವಿಸ್ತಾರವಾದ ರೈಲ್ವೇ ಜಾಲಕ್ಕೆ ಸೇರ್ಪಡೆಗೊಳ್ಲುತ್ತದೆ. ನಾವೀಗ ಕಾಠ್ಮಂಡುವನ್ನು ಬಿಹಾರದ ರಾಕ್ಸೌಲ್  ಮೂಲಕ ತ್ವರಿತವಾಗಿ ಜೋಡಿಸಲು ಮುಂದಡಿ ಇಡುತ್ತಿದ್ದೇವೆ. ಇದು ಮಾತ್ರವಲ್ಲ, ಜಲ ಮಾರ್ಗದ ಮೂಲಕವೂ ಭಾರತ ಮತ್ತು ನೇಪಾಳವನ್ನು ಬೆಸೆಯಲು ನಾವು ಪ್ರಯತ್ನಿಸುತ್ತಿದ್ದೇವೆ. ಭಾರತೀಯ ಜಲಮಾರ್ಗದ ಮೂಲಕ ನೇಪಾಳವು ಶೀಘ್ರದಲ್ಲಿಯೇ ಸಾಗರ ಸಂಪರ್ಕವನ್ನು ಪಡೆಯಲಿದೆ. ಈ ಜಲಮಾರ್ಗದ ಮೂಲಕ ನೇಪಾಳದ ಸರಕುಗಳು ಇತರ ದೇಶಗಳಿಗೆ ಸುಲಭದಲ್ಲಿ ರವಾನೆಯಾಗಲಿವೆ. ಇದು ನೇಪಾಳದಲ್ಲಿ  ಹೊಸ ಕೈಗಾರಿಕೆಗಳ ಉದಯ ಮತ್ತು ಉದ್ಯೋಗಾವಕಾಶಗಳ ಹೆಚ್ಚಳಕ್ಕೆ ಅನುಕೂಲ ಒದಗಿಸಲಿದೆ. ಈ ಯೋಜನೆಗಳು ನೇಪಾಳದ ಸಾಮಾಜಿಕ-ಆರ್ಥಿಕ ಪರಿವರ್ತನೆಗೆ ಮುಖ್ಯವಾಗಿರುವುದು ಮಾತ್ರವಲ್ಲ ವ್ಯಾಪಾರ ಮತ್ತು ವಾಣಿಜ್ಯಕ್ಕೂ ಇವು ಬಹಳ ಮುಖ್ಯ.

ಇಂದು ಭಾರತ ಮತ್ತು ನೇಪಾಳ ನಡುವೆ ದೊಡ್ದ ಪ್ರಮಾಣದ ವ್ಯಾಪಾರವಿದೆ. ಜನರು ವ್ಯಾಪಾರಕ್ಕಾಗಿ ಎರಡೂ ದೇಶಗಳ ನಡುವೆ ಓಡಾಡುತ್ತಿರುತ್ತಾರೆ. ಮುಖ್ಯಮಂತ್ರಿಗಳೇ ನೀವಿದರ ಬಗ್ಗೆ ಮಾತನಾಡುತ್ತಿದ್ದಿರಿ, ಕಳೆದ ತಿಂಗಳು ನಾವು ಕೃಷಿ ಕ್ಷೇತ್ರದಲ್ಲಿ ಹೊಸ ಪಾಲುದಾರಿಕೆಯನ್ನು ಘೋಷಿಸಿದ್ದೇವೆ. ಈ ಪಾಲುದಾರಿಕೆಯಲ್ಲಿ ಕೃಷಿ ಕ್ಷೇತ್ರದಲ್ಲಿ ಸಹಕಾರವನ್ನು ಇನ್ನಷ್ಟು ಉತ್ತೇಜಿಸಲಾಗುವುದು. ಇದು ಉಭಯ ದೇಶಗಳ ರೈತರ ಆದಾಯವನ್ನು ಹೇಗೆ ಹೆಚ್ಚಿಸಬಹುದು ಎಂಬುದಕ್ಕೆ ಒತ್ತು ಕೊಟ್ಟ ಕಾರ್ಯಕ್ರಮವಾಗಿದೆ. ಕೃಷಿ ವಲಯದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಬಳಕೆಯಲ್ಲಿ ಸಹಕಾರವನ್ನು ಹೆಚ್ಚಿಸಲಾಗುವುದು.

ಸಹೋದರ ಮತ್ತು ಸಹೋದರಿಯರೇ ,

ಆಧುನಿಕ ಕಾಲದಲ್ಲಿ ತಂತ್ರಜ್ಞಾನ ಇಲ್ಲದೆ ಅಭಿವೃದ್ದಿ ಸಾಧ್ಯವಾಗದು. ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾರತವು ವಿಶ್ವದ ಅತ್ಯುನ್ನತ ಐದು ರಾಷ್ಟ್ರಗಳಲ್ಲಿ ಒಂದಾಗಿದೆ. ನಾನು ಮೊದಲ ಬಾರಿಗೆ ನೇಪಾಳಕ್ಕೆ ಭೇಟಿ ನೀಡಿದ ಸಂಧರ್ಭವನ್ನು ನೀವು ಸ್ಮರಿಸಿಕೊಳ್ಳಬಹುದು, ಆಗ ನಾನು ಹೇಳಿದ್ದೆ, ಭಾರತವು ನೇಪಾಳದಂತಹ ನೆರೆಯ ರಾಷ್ಟ್ರಗಳಿಗೆ ಉಪಗ್ರಹವನ್ನು ಕಳಿಸುತ್ತದೆ ಎಂಬುದಾಗಿ. ನಾನು  ಕಳೆದ ವರ್ಷ ನನ್ನ ಭರವಸೆಯನ್ನು ಈಡೇರಿಸಿದ್ದೇನೆ.  ಕಳೆದ ವರ್ಷ ಉಡಾಯಿಸಿದ ದಕ್ಷಿಣ ಏಷ್ಯಾ ಉಪಗ್ರಹ ಇಂದು ಅದರ ಪೂರ್ಣ ಸಾಮರ್ಥ್ಯದೊಂದಿಗೆ ಕೆಲಸ ಮಾಡುತ್ತಿದ್ದು, ನೇಪಾಳವು ಅದರ ಪ್ರಯೋಜನ ಪಡೆಯುತ್ತಿದೆ.

ಸಹೋದರರೇ ಮತ್ತು ಸಹೋದರಿಯರೇ,

ನಾವು ಭಾರತದ ಮತ್ತು ನೇಪಾಳದ ಅಭಿವೃದ್ದಿಗೆ  ಐದು ’ಟಿ’  ಗಳ ಪಥವನ್ನು ಅನುಸರಿಸುತ್ತಿದ್ದೇವೆ. ಮೊದಲ ’ಟಿ” ಅಂದರೆ ಪರಂಪರೆ ಯಾ ಟ್ರೆಡಿಶನ್ , ಎರಡನೇ ’ಟಿ’ ಎಂದರೆ ವ್ಯಾಪಾರ ಯಾ ಟ್ರೇಡ್, ಮೂರನೇಯ ’ಟಿ’ ಎಂದರೆ ಪ್ರವಾಸೋದ್ಯಮ ಯಾ ಟೂರಿಸಂ , ನಾಲ್ಕನೇಯ ’ಟಿ’ ಎಂದರೆ ತಂತ್ರಜ್ಞಾನ ಯಾ ಟೆಕ್ನೋಲಜಿ ಮತ್ತು ಐದನೇಯ ’ಟಿ’ ಎಂದರೆ ಸಾರಿಗೆ. ಅಂದರೆ ಪರಂಪರೆ, ವ್ಯಾಪಾರ, ಪ್ರವಾಸೋದ್ಯಮ, ತಂತ್ರಜ್ಞಾನ, ಮತ್ತು ಸಾರಿಗೆ ಮೂಲಕ ನಾವು ಭಾರತ ಮತ್ತು ನೇಪಾಳವನ್ನು ಅಭಿವೃದ್ದಿಯ ಪಥದಲ್ಲಿ ಕೊಂಡೊಯ್ಯಲು ಬಯಸುತ್ತೇವೆ.

ಸ್ನೇಹಿತರೇ, ಭಾರತ ಮತ್ತು ನೇಪಾಳ ನಡುವೆ ಸಂಸ್ಕೃತಿ ಮಾತ್ರವಲ್ಲದೆ , ವ್ಯಾಪಾರವೂ ನಮ್ಮ ಬಾಂಧವ್ಯದ ನಡುವಿನ ಪ್ರಮುಖ ಕೊಂಡಿಯಾಗಿದೆ. ವಿದ್ಯುತ್ ಉತ್ಪಾದನೆಯಲ್ಲಿ ನೇಪಾಳ ತ್ವರಿತವಾಗಿ ಬೆಳೆಯುತ್ತಿದೆ. ಇಂದು ಭಾರತದಿಂದ ನೇಪಾಳಕ್ಕೆ 450 ಮೆಗಾ ವಾಟ್ ವಿದ್ಯುತ್ ಪೂರೈಕೆಯಾಗುತ್ತಿದೆ. ಇದಕ್ಕಾಗಿ ನಾವು ಹೊಸ ಟ್ರಾನ್ಸ್ ಮಿಶನ್ ಅಂದರೆ ಸಾಗಾಟ ಮಾರ್ಗವನ್ನು ನಿರ್ಮಿಸಿದ್ದೇವೆ. 

ಸ್ನೇಹಿತರೇ , ನಾನು 2014 ರಲ್ಲಿ ನೇಪಾಳದ ಘಟನಾ ಸಭೆಯಲ್ಲಿ ತೈಲವನ್ನು ಟ್ರಕ್ಕುಗಳಲ್ಲಿ ಯಾಕೆ ಪೂರೈಸಬೇಕು, ಯಾಕೆ ನೇರವಾಗಿ ಪೈಪ್ ಲೈನುಗಳ ಮೂಲಕ ಪೂರೈಸಬಾರದು ಎಂದು ಪ್ರಶ್ನಿಸಿದ್ದೆ. ನಿಮಗೆ ಸಂತೋಷವಾಗಬಹುದು-ನಾವು ಮೋತಿ ಹರಿ- ಅಮಲೇಕಗನಿ ತೈಲ ಕೊಳವೆ ಮಾರ್ಗದ ಕಾಮಗಾರಿಯನ್ನುಆರಂಭಿಸಿದ್ದೇವೆ.

ಭಾರತದಲ್ಲಿ , ನಮ್ಮ ಸರಕಾರವು ಸ್ವದೇಶ  ದರ್ಶನ್ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮದಡಿಯಲ್ಲಿ ನಾವು ನಮ್ಮ ಚಾರಿತ್ರಿಕ ಮಹತ್ವದ ಸ್ಥಳಗಳನ್ನು ನಮ್ಮ ಧಾರ್ಮಿಕ ಮಹತ್ವದ ಸ್ಥಳಗಳ ಜೊತೆ ಜೋಡಿಸುತ್ತಿದ್ದೇವೆ. ರಾಮಾಯಣ ವೃತ್ತದಡಿ ನಾವು ರಾಮ ದೇವರು ಮತ್ತು ಜಾನಕಿ ಮಾತೆ ತಮ್ಮ ಪ್ರವಾಸ ಕೈಗೊಂಡ ಎಲ್ಲಾ ಸ್ಥಳಗಳನ್ನು ಜೋಡಿಸುತ್ತೇವೆ. ಈಗ ಈ ಸರಣಿಯಲ್ಲಿ ಮುಂದುವರಿದು ನೇಪಾಳವನ್ನು ಕೂಡಾ  ಜೋಡಿಸುವ ನಿಟ್ಟಿನಲ್ಲಿ ಸಾಗುತ್ತೇವೆ. ರಾಮಾಯಣದ ಜೊತೆ ಜೋಡಣೆಗೊಂಡಿರುವ ನೇಪಾಳದ ಯಾವುದೇ ಸ್ಥಳಗಳು ಭಾರತದ ಇತರ ಸ್ಥಳಗಳ ಜೊತೆ ಜೋಡಿಸಲ್ಪಟ್ಟು ಭಕ್ತಾದಿಗಳಿಗೆ ಕೈಗೆಟಕುವ ದರದಲ್ಲಿ ಮತ್ತು ಆಕರ್ಷಕ ಯಾತ್ರೆಯ ಸಂತೋಷ ಒದಗಲಿದೆ. ಇದರಿಂದ ಯಾತ್ರಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ನೇಪಾಳಕ್ಕೆ ಬರುವುದರಿಂದ ನೇಪಾಳದ ಪ್ರವಾಸೋದ್ಯಮ ಅಭಿವೃದ್ದಿಯಾಗಲಿದೆ.

ಸಹೋದರರೇ ಮತ್ತು ಸಹೋದರಿಯರೇ,

ಪ್ರತೀ ವರ್ಷ ಭಾರತದಿಂದ ಸಾವಿರಾರು ಯಾತ್ರಿಕರು ವಿವಾಹ ಪಂಚಮಿಯಂದು ಜನಕಪುರಕ್ಕೆ ಬರುತ್ತಾರೆ. ಪರಿಕ್ರಮ ನಡೆಸಲು ವರ್ಷವಿಡೀ ಜನರು ಬರುತ್ತಿರುತ್ತಾರೆ. ಈ ಯಾತ್ರಿಕರು ಯಾವುದೇ ಸಂಕಷ್ಟಗಳನ್ನು ಎದುರಿಸಬಾರದು ಆದ್ದರಿಂದ ಜನಕಪುರ ಮತ್ತು ಅದಕ್ಕೆ ಸಮೀಪದ ಪ್ರದೇಶಗಳನ್ನು ಅಭಿವೃದ್ದಿಪಡಿಸುವ ನೇಪಾಳ ಸರಕಾರದ ಯೋಜನೆಗೆ ನಾವೂ ಸಹಕಾರ ನೀಡುತ್ತೇವೆ ಎಂದು ಘೋಷಿಸಲು ನನಗೆ ಸಂತೋಷವೆನಿಸುತ್ತದೆ. ಈ ಕಾರ್ಯಕ್ಕೆ ಭಾರತವು 100 ಕೋ.ರೂ.ಗಳ ನೆರವನ್ನು ಘೋಷಿಸುತ್ತದೆ. ಯೋಜನೆಗಳನ್ನು ನೇಪಾಳ ಸರಕಾರದ ಮತ್ತು ಪ್ರಾಂತೀಯ ಸರಕಾರದ ಸಹಯೋಗದಲ್ಲಿ ಗುರುತಿಸಲಾಗುತ್ತದೆ. ಜನಕ ದೊರೆಯ ಕಾಲದಿಂದಲೂ ಜನಕಪುರ ಧಾಮ ಸಂಪ್ರದಾಯ ಅಯೋಧ್ಯೆಗೆ ಮಾತ್ರ ಕೊಡುಗೆ ನೀಡಿದ್ದಲ್ಲ, ಇಡೀಯ ಸಮುದಾಯಕ್ಕೆ ಏನಾದರೊಂದು ಕೊಡುಗೆಯನ್ನು ಕೊಟ್ಟಿದೆ. ನಾನಿಲ್ಲಿಗೆ ಬಂದಿರುವುದು ಬರೇ ಜಾನಕಿ ಮಾತೆಯ ದರ್ಶನಕ್ಕೆ . ಜನಕಪುರಕ್ಕೆ ಮಾಡಿದ ಈ ಘೋಷಣೆಗಳು  1.25  ಬಿಲಿಯನ್ ಭಾರತೀಯರ ಪರವಾಗಿ ಜಾನಕಿ ಮಾತೆಯ ಅಡಿದಾವರೆಗಳಿಗೆ ಸಮರ್ಪಿತವಾಗಿರುವಂತಹವು.

ಇದೇ ರೀತಿ ಇಂತಹದೇ ಮತ್ತೆರಡು  ಕಾರ್ಯಕ್ರಮಗಳಿವೆ : ಬುದ್ದ ಕ್ಷೇತ್ರಗಳ  ಪ್ರವಾಸೀ ವೃತ್ತ ಮತ್ತು ಜೈನ ಕ್ಷೇತ್ರಗಳ ಪ್ರವಾಸೀ ವೃತ್ತ. ಈ ಕಾರ್ಯಕ್ರಮಗಳ ಅಡಿಯಲ್ಲಿ ಭಾರತದಲ್ಲಿ ಬುದ್ದನಿಗೆ ಸಂಬಂಧಪಟ್ಟ ಎಲ್ಲಾ ಸ್ಥಳಗಳನ್ನು  ಮತ್ತು ಮಹಾವೀರ ಜೈನರಿಗೆ ಸಂಬಂಧಪಟ್ಟ ಎಲ್ಲಾ ಸ್ಥಳಗಳನ್ನು ಜೋಡಿಸಲಾಗುವುದು. ಬೌದ್ದ ಮತ್ತು ಜೈನ ಮತಕ್ಕೆ ಸಂಬಂಧಪಟ್ಟ ಹಲವಾರು ಸ್ಥಳಗಳು ನೇಪಾಳದಲ್ಲಿವೆ. ಇವುಗಳು ಉಭಯ ದೇಶಗಳ ಪ್ರವಾಸಿಗರು ಮತ್ತು ಯಾತ್ರಾರ್ಥಿಗಳಿಗೆ ಬಾಂಧವ್ಯ ಅಭಿವೃದ್ದಿಪಡಿಸಲು ಉತ್ತಮ ಅವಕಾಶಗಳು. ಇದರಿಂದ ನೇಪಾಳದ ಯುವಕರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ. 

ಸಹೋದರರೇ ಮತ್ತು ಸಹೋದರಿಯರೇ,

ನಮ್ಮ ಭಾಷೆಗಳು ಮತ್ತು ನಮ್ಮ ಆಹಾರಾಭ್ಯಾಸಗಳಲ್ಲಿ ಸಾಮ್ಯತೆಗಳಿವೆ. ಭಾರತದಲ್ಲಿ ಮೈಥಿಲಿ ಭಾಷೆಯನ್ನಾಡುವವರ ಸಂಖ್ಯೆ ನೇಪಾಳದಲ್ಲಿರುವ ಆ ಭಾಷಿಕರ ಸಂಖ್ಯೆಗೆ ಸಮನಾಗಿದೆ. ಮೈಥಿಲಿ ಕಲೆ ಮತ್ತು ಸಂಸ್ಕೃತಿ  ಹಾಗು ನಾಗರಿಕತೆ ಜಾಗತಿಕವಾಗಿ ಚರ್ಚೆಯಾಗುತ್ತಿದೆ. ಉಭಯ ದೇಶಗಳೂ ಮೈಥಿಲಿ ಅಭಿವೃದ್ದಿಗೆ ಸಂಯುಕ್ತ ಪ್ರಯತ್ನಗಳನ್ನು ಮಾಡಿದರೆ , ಆಗ ಈ ಭಾಷೆಯ ಅಭಿವೃದ್ದಿ ಬಹಳ ಸುಲಭ ಸಾಧ್ಯವಾಗುತ್ತದೆ. ಮೈಥಿಲಿ ಭಾಷೆಯ ಕೆಲವು ಚಲನ ಚಿತ್ರ ನಿರ್ಮಾಪಕರು ನೇಪಾಳ, ಭಾರತಗಳಲ್ಲದೆ ತಮ್ಮ ಹೊಸ ಮೈಥಿಲಿ ಚಲನ ಚಿತ್ರಗಳನ್ನು ಬಿಡುಗಡೆ ಮಾಡಲು ಕತಾರ್ ಮತ್ತು ದುಬೈಗಳಿಗೂ ಹೋಗುತ್ತಾರೆಂದು ನನಗೆ ತಿಳಿಸಲಾಗಿದೆ. ಇದೊಂದು ಸ್ವಾಗತಾರ್ಹ ಬೆಳವಣಿಗೆ ಮತ್ತು ಅದನ್ನು ಉತ್ತೇಜಿಸಬೇಕಾಗಿದೆ. ಇಲ್ಲಿಯ ಬಹು ಸಂಖ್ಯಾತ ಜನರು ಮೈಥಿಲಿ ಭಾಷೆಯನ್ನಾಡುತ್ತಿದ್ದಾರೆ. ಭಾರತದಲ್ಲಿಯೂ ನೇಪಾಳೀ ಭಾಷೆಯನ್ನಾಡುತ್ತಿರುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನೇಪಾಳಿ ಭಾಷೆಯ ಸಾಹಿತ್ಯವನ್ನು ಭಾಷಾಂತರಿಸುವುದಕ್ಕೆ ಪ್ರೋತ್ಸಾಹ ನೀಡುವ ಪ್ರಯತ್ನಗಳು ನಡೆದಿವೆ. ನಾನಿಲ್ಲಿ ಒಂದು ವಿಷಯ ಹೇಳಬಯಸುತ್ತೇನೆಂದರೆ ನೇಪಾಳಿ ಕೂಡಾ ಭಾರತೀಯ ಸಂವಿಧಾನ ಗುರುತಿಸಿದ  ಭಾರತೀಯ ಭಾಷೆಗಳಲ್ಲಿ ಸೇರಿದೆ.

ಸಹೋದರರೇ ಮತ್ತು ಸಹೋದರಿಯರೇ,

ನಮ್ಮ ಸಹಭಾಗಿತ್ವ ವಿಸ್ತರಿಸಬಹುದಾದ ಇನ್ನೊಂದು ಕ್ಷೇತ್ರವಿದೆ. ಭಾರತದ ಜನತೆ ಅತ್ಯಂತ ದೊಡ್ಡ ಸ್ವಚ್ಚತಾ ಆಂದೋಲನ ಆರಂಭಿಸಿದ್ದಾರೆ. ನೀವು ಬಿಹಾರದಲ್ಲಿರುವ ನಿಮ್ಮ ಸಂಬಂಧಿಕರಲ್ಲಿಗೆ ಅಥವಾ ಇತರ ನೆರೆ ಹೊರೆಯ ರಾಜ್ಯಗಳಿಗೆ ಭೇಟಿ ನೀಡಿದಾಗ ನೀವಿದನ್ನು ಗಮನಿಸಿರಬಹುದು ಇಲ್ಲವೇ ಕೇಳಿರಬಹುದು. ಬರೇ ಮೂರರಿಂದ ನಾಲ್ಕು ವರ್ಷಗಳಲ್ಲಿ , ಭಾರತದ 80  % ಗೂ ಅಧಿಕ ಗ್ರಾಮಗಳು ಬಯಲು ಬಹಿರ್ದೆಸೆ ಮುಕ್ತವಾಗಿವೆ. ಭಾರತದ ಎಲ್ಲಾ ಶಾಲೆಗಳಲ್ಲಿ ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯಗಳನ್ನು ಒದಗಿಸಲಾಗಿದೆ. ’ಸ್ವಚ್ಚ ಭಾರತ’ ಮತ್ತು” ಸ್ವಚ್ಚ ಗಂಗಾ’ ಆಂದೋಲನಗಳಂತೆ ನೀವು ಕೂಡಾ ಜನಕಪುರದ ಚಾರಿತ್ರಿಕ ಮತ್ತು ಧಾರ್ಮಿಕ ಸ್ಥಳಗಳನ್ನು ಸ್ವಚ್ಚಗೊಳಿಸಲು ಯಶಸ್ವೀ ಆಂದೋಲನ ಕೈಗೊಂಡದ್ದನು ಗಮನಿಸಲು ನನಗೆ ಸಂತೋಷವೆನಿಸುತ್ತದೆ. ಮತ್ತು ನಾನು ಇದಕ್ಕಾಗಿ ಮೇಯರ್ ಅವರನ್ನು ಅಭಿನಂದಿಸುತ್ತೇನೆ. ನೇಪಾಳದ ಯುವಕರು ಪೌರಾಣಿಕ ಮಹತ್ವದ ಸ್ಥಳಗಳನ್ನು ಸಂರಕ್ಷಿಸಲು ಮುಂದಾಗುತ್ತಿರುವುದು ಕೂಡಾ ಅತ್ಯಂತ ಸಂತಸದ ಸಂಗತಿ.

ನಿರ್ದಿಷ್ಟವಾಗಿ ನಾನು ಈ ಸ್ಥಳದ ಮೇಯರ್ ಅವರಿಗೆ ಅಭಿನಂದನೆ ಸಲ್ಲಿಸಬಯಸುತ್ತೇನೆ. ಸ್ವಚ್ಚ ಜನಕಪುರ ಆಂದೋಲನವನ್ನು ಪ್ರಗತಿ ಪಥದಲ್ಲಿ ಕೊಂಡೊಯ್ದ ಅವರ ಸಹೋದ್ಯೋಗಿಗಳು, ಈ ಸ್ಥಳದ ಯುವಕರು ಮತ್ತು ಶಾಸನ ಸಭೆಯ ಸದಸ್ಯರು, ಸಂಸತ್ ಸದಸ್ಯರು ಎಲ್ಲರಿಗೂ ನನ್ನ ಅಭಿನಂದನೆಗಳು.

ಸಹೋದರರೇ ಮತ್ತು ಸಹೋದರಿಯರೇ, ಇಂದು ನಾನು ತಾಯಿ ಜಾನಕಿಯಲ್ಲಿಗೆ ಭೇಟಿ ನೀಡಿದೆ. ನನಗೆ ನಾಳೆ ಮುಕ್ತಿ ನಾಥ ಧಾಮದ ಮತ್ತು ಆ ಬಳಿಕ ಪಶುಪತಿ ನಾಥಜೀ ಅವರ ಆಶೀರ್ವಾದ ಪಡೆಯುವ ಅವಕಾಶವೂ ಲಭಿಸಿದೆ. ದೇವರ ಮತ್ತು ನೇಪಾಳದ ಜನತೆಯ ಆಶೀರ್ವಾದದ ಬಲದಿಂದ ನಾವು ಯಾವುದೇ ಒಪ್ಪಂದಗಳಿಗೆ ಸಹಿ ಹಾಕಲಿ , ಅವುಗಳು ಸಮೃದ್ದ ನೇಪಾಳ ಮತ್ತು ಸಂತಸ ಭರಿತ ಭಾರತದ ಕನಸನ್ನು ನನಸು ಮಾಡಲು ಸಹಾಯ ಮಾಡುತ್ತವೆ ಎಂಬ ನಂಬಿಕೆ ನನ್ನದಾಗಿದೆ. 

ಮತ್ತೊಮ್ಮೆ ನಾನು ನೇಪಾಳದ ಪ್ರಧಾನ ಮಂತ್ರಿಯವರಾದ ಗೌರವಾನ್ವಿತ ಓಲಿ ಜೀ ಅವರಿಗೆ, ಸರಕಾರಕ್ಕೆ ಮತ್ತು ಸ್ಥಳೀಯ ಸರಕಾರಕ್ಕೆ ಹಾಗು  ನೇಪಾಳದ ಜನತೆಗೆ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ನಿಮ್ಮೆಲ್ಲರಿಗೂ ಧನ್ಯವಾದಗಳು.

ಜೈ ಸಿಯಾರಾಂ, ಜೈ ಸಿಯಾರಾಂ.