ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ ದೆಹಲಿಯ ಲೋಕ ಕಲ್ಯಾಣ್ ಮಾರ್ಗದಲ್ಲಿರುವ ತಮ್ಮ ಅಧಿಕೃತ ನಿವಾಸ 7ರಲ್ಲಿ ಭಾರತ ಸರ್ಕಾರದ ಕಾರ್ಯದರ್ಶಿಗಳೊಂದಿಗೆ 2ನೇ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಹಣಕಾಸು ಮತ್ತು ಆರ್ಥಿಕತೆ, ವಾಣಿಜ್ಯ ಮತ್ತು ಕೈಗಾರಿಕೆ ಹಾಗೂ ತಂತ್ರಜ್ಞಾನ ಕ್ಷೇತ್ರಗಳೊಂದಿಗೆ ವ್ಯವಹರಿಸುವ ಸಚಿವಾಲಯಗಳು ಮತ್ತು ಇಲಾಖೆಗಳ ಭವಿಷ್ಯದ ಕಾರ್ಯಸೂಚಿಯನ್ನು ಅವರು ಪರಿಶೀಲಿಸಿದರು. ವಿಕಸಿತ ಭಾರತದ ಗುರಿಗಳತ್ತ ಪ್ರಗತಿಯನ್ನು ವೇಗಗೊಳಿಸುವತ್ತ ಸಭೆ ಗಮನ ಹರಿಸಿತು.
ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳ ನಡುವೆ ಇರುವ ಕಂದಕಗಳನ್ನು ತೊಡೆದುಹಾಕಲು ಸಮನ್ವಯ ಮತ್ತು ಸಹಕಾರದಿಂದ ಕಾರ್ಯ ನಿರ್ವಹಿಸಲು ಬಲವಾದ ಗಮನ ಹರಿಸಬೇಕು, ಅಧಿಕಾರಿಗಳು ಒಂದೇ ಉದ್ದೇಶದೊಂದಿಗೆ ಕೆಲಸ ಮಾಡಬೇಕೆಂದು ಪ್ರಧಾನಮಂತ್ರಿ ಸೂಚಿಸಿದರು. ವಿವಿಧ ಇಲಾಖೆಗಳು ನಿಕಟ ಸಮನ್ವಯದಿಂದ ಕಾರ್ಯ ನಿರ್ವಹಿಸಲು ಮತ್ತು ಸಮಗ್ರ ಫಲಿತಾಂಶಗಳನ್ನು ನೀಡಲು ಸರ್ಕಾರದೊಳಗಿನ ಎಲ್ಲಾ ಕಂದಕಗಳನ್ನು ತೊಡೆದುಹಾಕುವ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದರು.
ನಾಗರಿಕ ಕೇಂದ್ರಿತ ಆಡಳಿತ ನೀಡುವ ಮಹತ್ವಕ್ಕೆ ಒತ್ತು ನೀಡಿದ ಪ್ರಧಾನಮಂತ್ರಿ, ಭಾರತೀಯರು ಆಡಳಿತದ ಕೇಂದ್ರದಲ್ಲಿ ಉಳಿಯಬೇಕು. ಪ್ರತಿಯೊಂದು ನಿರ್ಧಾರ ಮತ್ತು ನೀತಿಯು ಸಾಮಾನ್ಯ ನಾಗರಿಕರ ಹಿತಾಸಕ್ತಿಗಳು ಮತ್ತು ಆಕಾಂಕ್ಷೆಗಳಿಂದ ಮಾರ್ಗದರ್ಶನ ಹೊಂದಿರಬೇಕು ಎಂದು ಅವರು ನೆನಪಿಸಿದರು.
ಭಾರತವು ಮೂಲಸೌಕರ್ಯದಲ್ಲಿ ಗಮನಾರ್ಹ ಹೂಡಿಕೆಗಳನ್ನು ಮಾಡುತ್ತಿರುವಾಗ, ಸ್ಥಳೀಯ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವುದಕ್ಕೂ ಸಮಾನ ಆದ್ಯತೆ ನೀಡಬೇಕು. ತಾಂತ್ರಿಕ ಸ್ವಾವಲಂಬನೆ ಮತ್ತು ನಿರ್ಣಾಯಕ ವಲಯಗಳಲ್ಲಿ ದೇಶೀಯ ಸಾಮರ್ಥ್ಯಗಳನ್ನು ನಿರ್ಮಿಸುವ ಮಹತ್ವಕ್ಕೆ ಒತ್ತು ನೀಡಬೇಕು ಎಂದು ಅವರು ಸೂಚನೆ ನೀಡಿದರು.
ಇಂಧನ ಭದ್ರತೆಯು ರಾಷ್ಟ್ರೀಯ ಭದ್ರತೆ, ಆರ್ಥಿಕ ಸ್ಥಿರತೆ ಮತ್ತು ನಾಗರಿಕರ ಕಲ್ಯಾಣದೊಂದಿಗೆ ನಿಕಟ ಸಂಬಂಧ ಹೊಂದಿದೆ. ನಾವೀನ್ಯತೆ, ವೈವಿಧ್ಯೀಕರಣ ಮತ್ತು ವೇಗವರ್ಧಿತ ಸಾಮರ್ಥ್ಯ ಸೃಷ್ಟಿಯ ಮೂಲಕ ಭಾರತ ಇಂಧನ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಬೇಕು ಎಂದು ಪ್ರಧಾನಮಂತ್ರಿ ಹೇಳಿದರು.
ಸುಧಾರಣೆಗಳು ಎಂಬುದು ಕೇವಲ ಫ್ಯಾಶನ್ ಗಾಗಿ ಬಳಸುವ ಪದವಾಗದೆ, ಅದು ಪರಿಣಾಮಕಾರಿ ಆಡಳಿತಕ್ಕಾಗಿ ನಿರಂತರವಾದ ಅಗತ್ಯ ಎಂದ ಪ್ರಧಾನಮಂತ್ರಿ, ಪ್ರಕ್ರಿಯೆಗಳನ್ನು ಸುಧಾರಿಸುವ, ಕೆಲಸದ ಸಂಸ್ಕೃತಿಯನ್ನು ಸುಧಾರಿಸುವ ಮತ್ತು ಸಾಂಸ್ಥಿಕ ದಕ್ಷತೆಯನ್ನು ಬಲಪಡಿಸುವ ಅಗತ್ಯವಿದೆ ಎಂದು ಹೇಳಿದರು.
ತಂತ್ರಜ್ಞಾನದ ಹೆಚ್ಚುತ್ತಿರುವ ಬಳಕೆಯೊಂದಿಗೆ ಡಿಜಿಟಲ್ ವ್ಯವಸ್ಥೆಗಳು ಮತ್ತು ಮೂಲಸೌಕರ್ಯಗಳನ್ನು ರಕ್ಷಿಸಲು ಸೈಬರ್ ಸುರಕ್ಷತೆಯ ಮೇಲೆ ಬಲವಾದ ಗಮನ ಹರಿಸಬೇಕು ಎಂದು ಪ್ರಧಾನಮಂತ್ರಿ ಹೇಳಿದರು. ಉದಯೋನ್ಮುಖ ಸೈಬರ್ ಬೆದರಿಕೆಗಳ ವಿರುದ್ಧ ನಿರಂತರ ಜಾಗರೂಕತೆ ಹೊಂದುವ ಅಗತ್ಯವಿದೆ. ಸೈಬರ್ ಭದ್ರತಾ ಪರಿಸರ ವ್ಯವಸ್ಥೆಯಲ್ಲಿ ಯುವ ನಾವೀನ್ಯಕಾರರು ಮತ್ತು ಉದ್ಯಮಿಗಳ ಹೆಚ್ಚಿನ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸಬೇಕು, ಅದು ರಾಷ್ಟ್ರವ್ಯಾಪಿ ಆಂದೋಲನವಾಗಿ ವಿಕಸನಗೊಳ್ಳಬೇಕು ಎಂದು ಒತ್ತಿ ಹೇಳಿದರು.
ದೇಶವು ಪ್ರಮುಖ ಉಪಕ್ರಮಗಳನ್ನು ಕೈಗೊಳ್ಳುತ್ತಿರುವ ಕಾರ್ಯತಂತ್ರ ವಲಯಗಳಲ್ಲಿ, ತಪ್ಪು ಮಾಹಿತಿ ಮತ್ತು ಅಂತಹ ಪ್ರಯತ್ನಗಳ ಸುತ್ತಲಿನ ಆಧಾರರಹಿತ ಭಯಗಳನ್ನು ಎದುರಿಸಲು, ಪೂರ್ವಭಾವಿ ಸಂವಹನ ನಡೆಸುವ ಮಹತ್ವವಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು.
ಹೊಸ ಮತ್ತು ಭವಿಷ್ಯದ ಕೈಗಾರಿಕೆಗಳಿಗೆ ಅಗತ್ಯವಿರುವ ಕೌಶಲ್ಯಗಳೊಂದಿಗೆ ಕಾರ್ಯಪಡೆಯನ್ನು ಸಜ್ಜುಗೊಳಿಸಲು ಉದ್ಯಮದ ಸಹಭಾಗಿತ್ವದಲ್ಲಿ ಹೊಸ ಶೈಕ್ಷಣಿಕ ಕೋರ್ಸ್ಗಳನ್ನು ಯೋಜಿಸಬೇಕು. ಸರ್ಕಾರವು ಯಾವಾಗಲೂ ಯುವ, ಕ್ರಿಯಾತ್ಮಕ ಮತ್ತು ಭವಿಷ್ಯದ ದೃಷ್ಟಿಕೋನದಿಂದ ಇರಬೇಕು, ಚುರುಕುತನ ಮತ್ತು ನಾವೀನ್ಯತೆಯೊಂದಿಗೆ ಹೊಸ ಸವಾಲುಗಳು ಮತ್ತು ಅವಕಾಶಗಳಿಗೆ ನಿರಂತರವಾಗಿ ಹೊಂದಿಕೊಳ್ಳಬೇಕು ಎಂದು ಅವರು ಸೂಚನೆ ನೀಡಿದರು.
ಸಭೆಯಲ್ಲಿ ಕಾರ್ಯದರ್ಶಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಆಗಿರುವ ಪ್ರಗತಿ, ಆದ್ಯತೆಗಳು ಮತ್ತು ಅನುಷ್ಠಾನ ಸಮಸ್ಯೆಗಳ ಕುರಿತು ವಿವರವಾದ ಚರ್ಚೆಗಳನ್ನು ನಡೆಸಿದರು. ಸಭೆಯಲ್ಲಿ ಸಂಪುಟ ಕಾರ್ಯದರ್ಶಿ, ಪ್ರಮುಖ ಸಚಿವಾಲಯಗಳು ಮತ್ತು ಇಲಾಖೆಗಳ ಕಾರ್ಯದರ್ಶಿಗಳು ಮತ್ತು ಪ್ರಧಾನ ಮಂತ್ರಿ ಕಚೇರಿಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
*****
In today’s meeting with Secretaries to the Government of India, we discussed key aspects relating to sectors like Finance and Economy, Commerce and Industry as well as Technology. Highlighted ways to enhance citizen-centric governance, boost infrastructure and develop indigenous…
— Narendra Modi (@narendramodi) July 28, 2026