Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಾದೇಶಿಕ ಸಂಪರ್ಕ ಯೋಜನೆಯಡಿ ಶಿಮ್ಲಾ ದೆಹಲಿ ವಿಭಾಗದ ವಿಮಾನ ಸೇವೆಯ ಉದ್ಘಾಟನೆಯ ಸಂದರ್ಭದಲ್ಲಿ ಪ್ರಧಾನಮಂತ್ರಿಗಳು ಮಾಡಿದ ಭಾಷಣ

ಪ್ರಾದೇಶಿಕ ಸಂಪರ್ಕ ಯೋಜನೆಯಡಿ ಶಿಮ್ಲಾ ದೆಹಲಿ ವಿಭಾಗದ ವಿಮಾನ ಸೇವೆಯ ಉದ್ಘಾಟನೆಯ ಸಂದರ್ಭದಲ್ಲಿ ಪ್ರಧಾನಮಂತ್ರಿಗಳು ಮಾಡಿದ ಭಾಷಣ

ಪ್ರಾದೇಶಿಕ ಸಂಪರ್ಕ ಯೋಜನೆಯಡಿ ಶಿಮ್ಲಾ ದೆಹಲಿ ವಿಭಾಗದ ವಿಮಾನ ಸೇವೆಯ ಉದ್ಘಾಟನೆಯ ಸಂದರ್ಭದಲ್ಲಿ ಪ್ರಧಾನಮಂತ್ರಿಗಳು ಮಾಡಿದ ಭಾಷಣ

ಪ್ರಾದೇಶಿಕ ಸಂಪರ್ಕ ಯೋಜನೆಯಡಿ ಶಿಮ್ಲಾ ದೆಹಲಿ ವಿಭಾಗದ ವಿಮಾನ ಸೇವೆಯ ಉದ್ಘಾಟನೆಯ ಸಂದರ್ಭದಲ್ಲಿ ಪ್ರಧಾನಮಂತ್ರಿಗಳು ಮಾಡಿದ ಭಾಷಣ


ನನ್ನ ಪ್ರೀತಿಯ ದೇಶ ಭಾಂಧವರೇ ,
 
 ಭಾರತದ ಮಧ್ಯಮ ವರ್ಗದ ಬದುಕಿನಲ್ಲಿ ಬಹಳ ವೇಗವಾಗಿ ಒಂದು ಹೊಸ ಭಾವನೆಗಳ, ಹೊಸ ಕನಸುಗಳ, ಹೊಸ ಸಂಕಲ್ಪ ಮತ್ತು ಏನನ್ನಾದರೂ ಸಾಧಿಸುವ ಛಲ ಮೂಡಿರುವುದನ್ನು ದೇಶವು ನೋಡುತ್ತಿದೆ. ಅವಕಾಶ ಸಿಕ್ಕರೆ ಇವರು ದೇಶದ ಪ್ರಗತಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವಲ್ಲಿ ಕಲ್ಪನೆಗೂ ಮೀರಿದ ಉತ್ತಮ ಫಲಿತಾಂಶ ಕೊಡಬಲ್ಲರು. ರಿಸ್ಕ್‌ ತೆಗೆದುಕೊಳ್ಳುವ ಸಾಮರ್ಥ್ಯವು ಮಧ್ಯಮ ವರ್ಗದ ಈ ಯುವ ಪೀಳಿಗೆಯಲ್ಲಿ ವಿಶೇಷವಾಗಿ ಇತರೆ ವರ್ಗಗಳಿಗಿಂತ ಹೆಚ್ಚಾಗಿ ಕಂಡು ಬರುತ್ತಿದೆ. ಅವಕಾಶ ಸಿಕ್ಕರೆ ಈ ಯುವ ಜನತೆ ದೇಶದ ಅದೃಷ್ಟವನ್ನೂ ಬದಲಿಸಬಲ್ಲರು, ದೇಶದ ಚಿತ್ರಣವನ್ನೂ ಬದಲಿಸಬಲ್ಲರು. 
 
ವಿಮಾನ ಯಾನಕ್ಕೆ ವಿಶ್ವದಲ್ಲಿ ಎಲ್ಲಕ್ಕಿಂತ ಹೆಚ್ಚು ಅವಕಾಶಗಳು ಎಲ್ಲಿವೆ ಎಂದರೆ ಅದು ಭಾರತದಲ್ಲಿದೆ ಎಂಬುದು ಇಡೀ ಪ್ರಪಂಚಕ್ಕೆ ಗೊತ್ತು. ಬಹಳ ಹಿಂದೆ ವಿಮಾನ ಪ್ರಯಾಣ ಮಾಡುವುದೆಂದರೆ ಅದು ರಾಜಮಹಾರಾಜರಿಗೆ ಮಾತ್ರ ಎಂದು ಯೋಚಿಸಲಾಗುತ್ತಿತ್ತು. ಆದ್ದರಿಂದ ನಮ್ಮ ಏರ್‍ಲೈನ್ಸ್ ಲೋಗೊ ಸಹ ಮಹಾರಾಜನೇ ಆಗಿತ್ತು. ಶ್ರೀ ಅಟ‌ಲ್  ಬಿಹಾರಿ ವಾಜಪೇಯಿ ಅವರ ಸರ್ಕಾರವಿದ್ದಾಗ ರಾಜೀವ್ ಪ್ರತಾಪ್ ರೂಡಿ ವಿಮಾನಯಾನ ಸಚಿವರಾಗಿದ್ದರು. ನಾನಾಗ ಹಿಮಾಚಲ ಪ್ರದೇಶದಲ್ಲಿದ್ದು, ಪಕ್ಷ ಸಂಘಟನೆಯ ಕೆಲಸದಲ್ಲಿ ತೊಡಗಿದ್ದೆ. ಒಂದು ಸಲ ಅವರನ್ನು ಭೇಟಿಯಾದಾಗ ಈ ಮಹಾರಾಜನ ಲೋಗೊವನ್ನು ಬದಲಿಸಲು ಸಾಧ್ಯವಿಲ್ಲವೇ? ವಿಮಾನ, ವಿಮಾನ ಪ್ರಯಾಣವೆಂದರೆ ಶ್ರೀಮಂತ ವರ್ಗದವರಿಗೆ ಮಾತ್ರವೇ ಎಂದು ಕೇಳಿದೆ. ಅದಕ್ಕಾಗಿ ಏನು ಮಾಡಬಹುದು ಎಂದು ಅವರು ಕೇಳಿದಾಗ ನಾನು ವ್ಯಂಗ್ಯ ಚಿತ್ರಕಲಾವಿದ ಆರ್.ಕೆ. ಲಕ್ಷ್ಮಣ್ ಅವರ ಕಾಮನ್ ಮ್ಯಾನ್ ಅಂದರೆ ಸಾಮಾನ್ಯ ಮನುಷ್ಯನ ಲೋಗೊ ಹಾಕಿರಿ, ಅದಕ್ಕೆ ಅನುಮತಿ ಪಡೆಯಿರಿ ಎಂದು ಸಲಹೆ ನೀಡಿದೆ. ಶ್ರೀ ವಾಜಪೇಯಿ ಅವರ ಸರ್ಕಾರವು ಆ ಕಾಮನ್ ಮ್ಯಾನ್ ಲೋಗೋವನ್ನು ಸಹ ಸೇರಿಸಿತು ಎಂಬ ಸಂತೋಷ ನನಗಿದೆ. 
 
ಆ ಸಮಯದಲ್ಲಿ ನಾನು ಯಾವುದೇ ರಾಜಕೀಯ ಹುದ್ದೆಯಲ್ಲಿರಲಿಲ್ಲ. ಪಕ್ಷ ಸಂಘಟನೆಯ ಕಾರ್ಯದಲ್ಲಿ ತೊಡಗಿಕೊಂಡಿದ್ದೆ. ಆದರೂ ಆಗ ರಾಜ ಮಹಾರಾಜರಿಗೆ ಮಾತ್ರ ಮೀಸಲು ಎನ್ನಿಸುವಂತಿದ್ದ ಈ ಲೋಗೊವನ್ನು ಬದಲಿಸಬೇಕು ಎಂದು ಯೋಚಿಸುತ್ತಿದ್ದೆ. ಇಷ್ಟು ದೊಡ್ಡ ದೇಶದಲ್ಲಿ ಒಂದು ವಿಮಾನ ನೀತಿ ಇಲ್ಲ ಎನ್ನುವುದು ಎಲ್ಲಕ್ಕಿಂತ ದೊಡ್ಡ ಕೊರತೆ ಎಂದು ನಾನು ನಮ್ಮ ವಿಭಾಗಕ್ಕೆ ಮನವಿ ಮಾಡಿದೆ. ಇಷ್ಟು ವಿಶಾಲವಾದ ದೇಶ, ಏನೆಲ್ಲ ಸಾಧ್ಯತೆಗಳಿವೆ. ವಿಶ್ವದ ಗಮನ ನಮ್ಮ ಕಡೆ ಇದೆ. ಹಾಗಾಗಿ ಒಂದು ವೈಮಾನಿಕ ನೀತಿ ಮಾಡಿ ಮತ್ತು ಎಲ್ಲ ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಿಮಾನ ಸೇವೆಯನ್ನು ವಿಸ್ತರಿಸುವ ಒಂದು ವಿನ್ಯಾಸವನ್ನು ತಯಾರಿಸಿ ಎಂದು ಹೇಳಿದೆ. ದೇಶಕ್ಕೆ ಸ್ವಾತಂತ್ರ‍್ಯ ದೊರೆತ ಬಳಿಕ ಮೊದಲ ಬಾರಿಗೆ ದೇಶದಲ್ಲಿ ವೈಮಾನಿಕ ನೀತಿಯನ್ನು ತಯಾರಿಸುವ ಅದೃಷ್ಟ ನಮ್ಮ ಸರ್ಕಾರಕ್ಕೆ ಸಿಕ್ಕಿದ್ದಕ್ಕೆ ನನಗೆ ಸಂತೋಷವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಮೊದಲ ಸಭೆಯಲ್ಲಿ ಹವಾಯಿ ಚಪ್ಪಲಿ ಹಾಕಿಕೊಂಡು ಓಡಾಡುವ ಒಬ್ಬ ಬಡವ ಸಹ ಹವಾಯಿ ಜಹಾಜ್ ನಲ್ಲಿ ಅಂದರೆ ವಿಮಾನದಲ್ಲಿ ಓಡಾಡುವಂತಾಗಬೇಕು, ಆ ರೀತಿಯಲ್ಲಿ ನಮ್ಮ ದೇಶದ ವಿಮಾನ ಸೇವೆಯನ್ನು ನೋಡಲು ಬಯಸುತ್ತೇನೆ ಎಂದು ನಾನು ಹೇಳಿದೆ. 
 
ಇಂದು ಅದು ಸಾಧ್ಯವಾಗುತ್ತಿದೆ. ಈ ದಿವಸ ಶಿಮ್ಲಾ ಮತ್ತು ದೆಹಲಿಯ ನಡುವೆ, ನಾಂದೇಡ್ ಮತ್ತು ಹೈದರಾಬಾದ್ ನಡುವೆ ಸಂಪರ್ಕ ಸಾಧ್ಯವಾಗಿದೆ. ಇಲ್ಲಿರುವ ಶ್ರೀ ನಡ್ಡಾ ಅವರು ಹಿಮಾಚಲ ಪ್ರದೇಶದವರೇ ಆಗಿದ್ದಾರೆ. ದೆಹಲಿ ಮತ್ತು ಶಿಮ್ಲಾ ನಡುವೆ ವಿಮಾನ ಸಂಪರ್ಕ ಸಾಧ್ಯವಾಗಿದ್ದಕ್ಕೆ ಅವರಿಗೆ ವಿಶೇಷ ಸಂತೋಷವಾಗಿದೆ. ದೆಹಲಿಯಿಂದ ಬಂದಿರುವ ನನಗೆ ಇನ್ನೂ ಹೆಚ್ಚು ಸಂತೋಷವಾಗಿದೆ. ನಾವು ಇಂದು ಟ್ಯಾಕ್ಸಿಯಲ್ಲಿ ಹೋದರೆ ಒಂದು ಕಿಲೋಮೀಟರ್ ಬಾಡಿಗೆ ಎಂಟರಿಂದ ಹತ್ತು ರೂಪಾಯಿ ಇರುತ್ತದೆ. ದೆಹಲಿಯಿಂದ ಶಿಮ್ಲಾಕ್ಕೆ ವಿಮಾನದ ಮೂಲಕ ಕೇವಲ ಒಂದು ಗಂಟೆಯಲ್ಲಿ ತಲುಪಬಹುದು. ಅದೇ ರಸ್ತೆ ಮಾರ್ಗದ ಮೂಲಕ ಕಡಿಮೆಯೆಂದರೆ ಒಂಬತ್ತು ಗಂಟೆ ಹಿಡಿಯುತ್ತದೆ. ಇದಕ್ಕೆ ತಗಲುವ ಟ್ಯಾಕ್ಸಿ ದರ ಕಿಲೋಮೀ‍ಟರಿಗೆ ಹತ್ತು ರೂಪಾಯಿ ಎಂದು ಲೆಕ್ಕ ಹಾಕಿದರೂ ಬೆಟ್ಟಗಳ ಮೇಲೆ ಹತ್ತು ರೂಪಾಯಿಗಿಂತ ಹೆಚ್ಚು ಕೊಡಬೇಕಾಗುತ್ತದೆ. ಈ ವಿಮಾನ ಪ್ರಯಾಣವು ಸಮಯವನ್ನು ಉಳಿಸುವುದರ ಜೊತೆಗೆ ಟ್ಯಾಕ್ಸಿಯಲ್ಲಿ ಕಿಲೋಮೀಟರಿಗೆ ಕೊಡಬೇಕಾದ ಹತ್ತು ರೂಪಾಯಿಗಿಂತ ಕಡಿಮೆ ಅಂದರೆ ಕೇವಲ ಆರರಿಂದ ಏಳು ರೂಪಾಯಿ ಬೀಳಬಹುದು. ಈ ಹೊಸ ನೀತಿಯಲ್ಲಿ ವಿಮಾನ ಪ್ರಯಾಣದ ವೆಚ್ಚ ಟ್ಯಾಕ್ಸಿಗಿಂತ ಕಡಿಮೆ ಆಗಿದೆ. 
 
ಈ ದಿನ ನಾಂದೇಡ್ ನಿಂದ ಹೈದರಾಬಾದಿಗೆ ವಿಮಾನಯಾನ ಆರಂಭವಾಗಲಿದೆ. ಸದ್ಯದಲ್ಲೇ ನಾಂದೇಡ್ ನಿಂದ ಮುಂಬೈಗೂ ವಿಮಾನ ಸೇವೆ ಶುರುವಾಗಲಿದೆ. ವಿಮಾನಯಾನ ಕಂಪನಿಗಳಿಗೆ ನಾನು ಒಂದು ಕಿವಿಮಾತು ಹೇಳಲು ಅಥವಾ ಸಲಹೆ ನೀಡಲು ಬಯಸುತ್ತೇನೆ. ಇದಕ್ಕಾಗಿ ನಾನು ನಿಮಗೆ ಐಷಾರಾಮಿ ದರ ವಿಧಿಸುವುದಿಲ್ಲ. ವಿಮಾನ ಸೇವೆ ಒದಗಿಸುವ ಕಂಪನಿಗಳು ವ್ಯಾವಹಾರಿಕ ದೃಷ್ಟಿಯಿಂದ ಯೋಚಿಸಬೇಕು. ನಾಂದೇಡ್, ಅಮೃತಸರ ಮತ್ತು ಪಾಟ್ನಾ ನಗರಗಳ ನಡುವೆ ಸಂಪರ್ಕ ಏರ್ಪಡುವಂತೆ ವಿಮಾನದ ಸಂಚಾರಗಳನ್ನು ಆರಂಭಿಸಿದರೆ ವಿಶ್ವಾದ್ಯಂತ ಇರುವ ಸಿಖ್ ಪ್ರವಾಸಿಗರಿಗೆ ಈ ವಿಮಾನಯಾನ ಪ್ರಯಾಣದ ಲಾಭ ಹೆಚ್ಚಾಗಿ ಆಗುತ್ತದೆ. ಎರಡನೇ ಮಹಾಯುದ್ಧವಾದಾಗ ಬಹುತೇಕ ಈಶಾನ್ಯ ಭಾಗದಲ್ಲಿ ವಿಮಾನ ಇಳಿಸುವ ರನ್ ವೇಗಳನ್ನು ನಿರ್ಮಿಸಲಾಗಿತ್ತು. ಗಡಿ ಪ್ರದೇಶಗಳಲ್ಲಿ ಸಹ ಬಹಳಷ್ಟು ರನ್ ವೇಗಳನ್ನು ಮಾಡಲಾಗಿತ್ತು ಎಂಬುದು ಕೆಲವೇ ಕೆಲವರಿಗೆ ಗೊತ್ತಿರಬಹುದು. ಆದರೆ ಇದುವರೆಗೂ ಅವುಗಳನ್ನು ಉಪಯೋಗಿಸಿಲ್ಲ. ಕೆಲವು ರನ್ ವೇಗಳಲ್ಲಂತೂ ಜನರು ಅಲ್ಲಿನ ವಸ್ತುಗಳನ್ನು ಕಿತ್ತು ಸಾಗಿಸಿರಬಹುದು. ದೇಶ ಸ್ವಾತಂತ್ರ್ಯ ಗಳಿಸಿ ಎಪ್ಪತ್ತು ವಸಂತಗಳನ್ನು ಪೂರೈಸಿದೆ. ಆದರೆ ಕೇವಲ 70-75 ವಿಮಾನ ನಿಲ್ದಾಣಗಳಷ್ಟೇ ವ್ಯಾವಹಾರಿಕ ಉದ್ದೇಶಕ್ಕೆ ಉಪಯೋಗಕ್ಕೆ ಬರುತ್ತಿದೆ. 70 ವರ್ಷಗಳಲ್ಲಿ 70-75 ವಿಮಾನ ನಿಲ್ದಾಣಗಳು ಯಾವುದಕ್ಕೂ ಸಾಲದು. 
 
ಈಗ ಈ ಹೊಸ ನೀತಿ ಜಾರಿಗೆ ತಂದಿರುವುದರಿಂದ ಒಂದು ವರ್ಷದೊಳಗೆ ಇದಕ್ಕಿಂತ ಹೆಚ್ಚು ವಿಮಾನ ನಿಲ್ದಾಣಗಳನ್ನು ವ್ಯಾವಹಾರಿಕ ಬಳಕೆಗೆ ಜೋಡಿಸಲಾಗುವುದು. ಭಾರತದ ಸಣ್ಣ, ಎರಡನೇ ದರ್ಜೆ ನಗರಗಳು ಪ್ರಗತಿಯ ಇಂಜಿನ್ ಆಗುತ್ತಿವೆ. ಪ್ರಗತಿಗೆ ಇಂಧನ ತುಂಬುವ ಶಕ್ತಿ ಎರಡನೇ ಮತ್ತು ಮೂರನೇ ದರ್ಜೆಯ ನಗರಗಳಿಗೆ ಇವೆ. ಈ ಎಲ್ಲ ನಗರಗಳಿಗೆ ಅನುಕೂಲಕರ ವಿಮಾನ ಸಂಪರ್ಕ ದೊರೆತರೆ ಬಂಡವಾಳ ಶಾಹಿಗಳು, ಆಡಳಿತ ತಜ್ಞರು, ಶಿಕ್ಷಣ ಮುಂತಾದ ಕ್ಷೇತ್ರಗಳಿಂದ ಗುಣಮಟ್ಟದ ಮಾನವ ಸಂಪನ್ಮೂಲ ಲಭ್ಯವಾಗಿ ಪ್ರಗತಿ ಹೊಂದುವ ಸಾಧ್ಯತೆಗಳು ಹೆಚ್ಚುತ್ತವೆ. ವಿಶ್ವದಲ್ಲಿ ಪ್ರವಾಸೋದ್ಯಮದ ಪ್ರಗತಿ ಎಲ್ಲಕ್ಕಿಂತ ವೇಗವಾಗಿದೆ. ಪ್ರವಾಸಕ್ಕೆಂದು ನಿಗದಿತ ಸ್ಥಳ ತಲುಪಿದ ನಂತರ ಪ್ರವಾಸಿಗಳು ಕಷ್ಟ ಸಹಿಸಿಕೊಳ್ಳಲು ತಯಾರಾಗಿರುತ್ತಾರೆ. ಶ್ರಮ ಪಡುವುದು ಅವರಿಗೆ ಇಷ್ಟವಾಗುತ್ತದೆ, ಬೆಟ್ಟ ಹತ್ತುವುದು, ಬೆವರು ಸುರಿಸುವುದು ಅವರಿಗೆ ಇಷ್ಟವಾಗುತ್ತದೆ. 
 
ಆದರೆ ಆ ಪ್ರವಾಸೀ ಸ್ಥಳಕ್ಕೆ ಬರುವಾಗ ಮಾತ್ರ ಹೆಚ್ಚು ಅನುಕೂಲ ಬಯಸುತ್ತಾರೆ. ಅವರಿಗೆ ವಿಮಾನ ಸಂಪರ್ಕ ಸಾಧ್ಯವಾದರೆ, ವೈಫೈ ಸಂಪರ್ಕ ದೊರೆತರೆ ಅವರು ಮೊದಲು ಆ ಪ್ರವಾಸೀ ತಾಣವನ್ನು ಇಷ್ಟಪಡುತ್ತಾರೆ. ಅಲ್ಲಿಗೆ ಹೋದ ನಂತರ ಕಷ್ಟ ಸಹಿಸಿಕೊಳ್ಳಲು ತಯಾರಾಗಿರುತ್ತಾರೆ. ರಿಸ್ಕ್‌ ತೆಗೆದುಕೊಳ್ಳಲು ತಯಾರಾಗಿರುತ್ತಾರೆ. ಆದರೆ ಹೋಗಿ, ಬರುವ ಅನುಕೂಲ ಮಾತ್ರ ಚೆನ್ನಾಗಿರಬೇಕೆಂದು ಬಯಸುತ್ತಾರೆ. ಶಿಮ್ಲಾದಲ್ಲಿ ಈಗ ಈ ವ್ಯವಸ್ಥೆ ಆರಂಭವಾಗಿದೆ. ವರ್ಷಗಳಿಂದ ಇದು ನೆನೆಗುದಿಗೆ ಬಿದ್ದಿತ್ತು. ಇದರಿಂದ ಹಿಮಾಚಲ ಪ್ರದೇಶದ ಪ್ರವಾಸೋದ್ಯಮಕ್ಕೆ ಹೆಚ್ಚು ಬಲ ದೊರಕುತ್ತದೆಂಬ ನಂಬಿಕೆ ನನಗಿದೆ. 2500 ರೂಪಾಯಿಗಳು ಬಹಳ ಹೆಚ್ಚಾಯಿತು. ಇಂತಹ ಟಿಕೇಟ್ 2,500ಕ್ಕಿಂತ ಕಡಿಮೆ ಇರಬೇಕು. ಈಶಾನ್ಯ ಭಾರತ ಅತ್ಯಂತ ¸ಸುಂದರ ಭೂಭಾಗವಾಗಿದ್ದು ಇದನ್ನು ನೋಡುವುದೇ ಆನಂದ. ಒಂದು ಸಲ ಬಂದರೆ ಪದೇಪದೇ ಬರಬೇಕೆಂದು ಮನಸ್ಸಾಗುವಂತಹ ಸುಂದರ ಪ್ರದೇಶವಿದು. ಪ್ರಕೃತಿ ಇಲ್ಲಿ ಚೆಲುವಾಗಿ ನೆಲೆ ನಿಂತಿರುವಷ್ಟು ಇನ್ನೆಲ್ಲೂ ಇಲ್ಲವೇನೋ ಎನ್ನಿಸುತ್ತದೆ. 
 
ಆದರೆ ಸಂಪರ್ಕದ ಕೊರತೆಯಿಂದ ಭಾರತದ ಸಾಮಾನ್ಯ ನಾಗರಿಕರಿಗೆ ಈಶಾನ್ಯದ ಸಂಪರ್ಕ ಸಾಧ್ಯವಾಗುತ್ತಿಲ್ಲ. ಈಗ ಈ ವ್ಯವಸ್ಥೆ ಆರಂಭವಾಗಿರುವುದರಿಂದ ದೇಶದ ಒಗ್ಗೂಡಿಕೆಗೂ ಬಹಳ ದೊಡ್ಡ ಕೊಡುಗೆಯಾಗಬಲ್ಲದು. ಇದರಿಂದ ಪ್ರಯಾಣದ ಅನುಕೂಲಗಳಷ್ಟೇ ಅಲ್ಲ, ಎರಡು ಭೂಭಾಗಗಳು, ಎರಡು ವಿಭಿನ್ನ ಸಂಸ್ಕೃತಿಗಳು, ಎರಡು ಪರಂಪರೆಗಳು ಬಹಳ ಸಹಜವಾಗಿ ಒಂದುಗೂಡುತ್ತವೆ. ದೇಶದ ಸಾಮಾನ್ಯ ನಾಗರಿಕನಿಗೂ ವಿಮಾನದಲ್ಲಿ ಹಾರಲು ಸಾಧ್ಯವಾಗುತ್ತದೆ. ಉಡಾನ್ (UDAN) ಎಂಬ ಈ ಪದವನ್ನು ಸೂಚಿಸಿದ್ದು ಸಹ ನಮ್ಮ ದೇಶದ ಒಬ್ಬ ಸಾಮಾನ್ಯ ನಾಗರಿಕ ಎಂಬುದು ನನಗೆ ಖುಷಿಯ ವಿಚಾರವಾಗಿದೆ. ನಾನು ಆಗಲೇ ಹೇಳಿದಂತೆ ವಿಮಾನದಲ್ಲಿ ಹವಾಯಿ ಚಪ್ಪಲಿ ಹಾಕಿದವರು ಸಹ ಓಡಾಡಬೇಕು. ದೇಶದ ಒಂದು ಮೂಲೆಯಿಂದ ಇನ್ನೊಂದು ಮೂಲೆಯನ್ನು ಜೋಡಿಸುವ ಒಂದು ಮಹಾ ಅಭಿಯಾನ ಇದರಿಂದ ಶುರುವಾಗಿದೆ. ಮತ್ತೊಂದು ಕಾರ್ಯಕ್ರಮವೂ ಶುರುವಾಗಲಿದ್ದು, ಅದರ ಶಂಕುಸ್ಥಾಪನೆ ಆಗುತ್ತಿರುವುದು ನನಗೆ ಸಂತೋಷದ ಸಂಗತಿಯಾಗಿದೆ. ಮಾನವ ಸಂಪನ್ಮೂಲ ಅಭಿವೃದ್ಧಿ ಎಷ್ಟು ಚೆನ್ನಾಗಿ ಆಗುತ್ತದೋ ಅಷ್ಟರ ಮಟ್ಟಿಗೆ ನಮ್ಮ ದೇಶದ ¸ಸಾಮರ್ಥ್ಯ ಹೆಚ್ಚುತ್ತದೆ. ಭಾರತದಲ್ಲಿ ಜಲ ವಿದ್ಯುತ್ ಉತ್ಪಾದನೆಯ ಸಾಧ್ಯತೆ ಬಹಳವಾಗಿದೆ. 
 
ಸುಮಾರು ಒಂದೂವರೆ ಲಕ್ಷಕ್ಕಿಂತ ಹೆಚ್ಚು ಮೆಗಾವ್ಯಾಟ್ ವಿದ್ಯುತ್ತನ್ನು ನಾವು ಉತ್ಪಾದಿಸಲು ಸಾಧ್ಯ ಎಂದು ಅಂದಾಜು ಮಾಡಲಾಗಿದೆ. ಇದಕ್ಕಾಗಿ ಮಾನವ ಸಂಪನ್ಮೂಲ ಅಂದರೆ ಮಾನವ ಶಕ್ತಿಯ ಅಗತ್ಯ ಬೇಕು. ಇದಕ್ಕಾಗಿ ಸಮರ್ಪಣಾ ಮನೋಭಾವದ ಸಂಸ್ಥೆಗಳ ಅವಶ್ಯಕತೆ ಇದೆ. ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರದಿಂದ ಹಿಡಿದು ಇಡೀ ಹಿಮಾಲಯ ಭಾಗದಲ್ಲಿ ಜಲವಿದ್ಯುತ್ ಯೋಜನೆ ಆರಂಭಿಸುವುದಕ್ಕೆ ಸಾಧ್ಯತೆಗಳಿವೆ. ಇಲ್ಲಿ ಯುವಜನರಿಗೆ ಜಲ ವಿದ್ಯುತ್ತಿಗೆ ಸಂಬಂಧಿಸಿದಂತೆ ಇಂಜಿನಿ‍ಯರಿಂಗ್ ಶಿಕ್ಷಣ ದೊರೆತರೆ, ವಿಶೇಷ ತರಬೇತಿ ಸಿಕ್ಕರೆ ಒಳ್ಳೆಯದು. ಸಂಸ್ಥೆಗಳು ಇಂತಹ ಶಿಕ್ಷಣದ ಜೊತೆಗೆ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮುಂತಾದ ವಿಷಯಗಳಲ್ಲೂ ಉತ್ತಮ ತರಬೇತಿ ನೀಡಿದರೆ ಬಹಳ ಸೇವೆ ಮಾಡಿದಂತಾಗುತ್ತದೆ. ಬಿಲಾಸ್ ಪುರದಲ್ಲಿ ಜಲವಿದ್ಯುತ್ ಗೆ ಸಂಬಂಧಿಸಿದಂತೆ ವಿಶೇಷ ಶಿಕ್ಷಣ ನೀಡುವ ಕೆಲಸ ಶೀಘ್ರದಲ್ಲೇ ಆರಂಭವಾಗಲಿದೆ. ಅದರ ಶಂಕುಸ್ಥಾಪನೆಯನ್ನು ಮಾಡುವ ಅವಕಾಶವು ನನಗಿಂದು ದೊರೆತಿದೆ. ದೇಶವು ಇಂದು ಹಿಮಾಚಲದ ಮಣ್ಣಿನಿಂದ ವೈಮಾನಿಕ ಮತ್ತು ಜಲವಿದ್ಯುತ್ ಶಕ್ತಿಗಳ ಅನುಭವ ಹೊಂದುತ್ತಿದೆ. 
 
ಈ ಮಾತನ್ನು ನಾನು ಹಿಮಾಚಲ ಪ್ರದೇಶ ಮತ್ತು ಇಡೀ ದೇಶದ ಯುವಜನರನ್ನು ಗಮನದಲ್ಲಿಟ್ಟುಕೊಂಡು ಹೇಳುತ್ತಿದ್ದೇನೆ. ವಾಯು ಶಕ್ತಿ ಮತ್ತು ಜಲಶಕ್ತಿಗಳು ಇಂದಿನ ಪ್ರಗತಿಯ ದಾರಿಯಲ್ಲಿ ಬಹಳ ದೊಡ್ಡ ಶಕ್ತಿಯನ್ನು ತುಂಬುತ್ತವೆ. ನಾವಿಂದು ಕನಸು ಕಾಣುತ್ತಿರುವ ನವಭಾರತದ ನಿರ್ಮಾಣಕ್ಕೆ ಪೂರಕವಾಗಿ ಜನಬಲ ಮತ್ತು ಸಾಮರ್ಥ್ಯ ಅರಣ್ಯ ಸಂಪತ್ತಿನ ಸಾಮರ್ಥ್ಯವಿದೆ. ಜೊತೆಗೆ ಜಲ ಸಂಪತ್ತಿನ ಸಾಮರ್ಥ್ಯವೂ ಅಷ್ಟೇ ಇದೆ. ಈ ಎಲ್ಲ ಸಾಮರ್ಥ್ಯಗಳನ್ನು ಒಗ್ಗೂಡಿಸಿ ಮುಂದೆ ಸಾಗಬೇಕಿದೆ. ನಾನು ಮತ್ತೊಮ್ಮೆ ಭಾರತ ಸರ್ಕಾರದ ವಿಮಾನಯಾನ ಸಚಿವಾಲಯಕ್ಕೆ, ಈ ವಿಭಾಗಕ್ಕೆ ಸಂಬಂಧಿಸಿದ ಎಲ್ಲ ಅಧಿಕಾರಿಗಳಿಗೆ, ಎಲ್ಲ ಸಚಿವರಿಗೆ ಮತ್ತು ಯೋಜನೆಯ ಮುಂದಾಳುಗಳಿಗೆ ಹೃತ್ಪೂರ್ವಕವಾಗಿ ಬಹಳ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಬಹಳ ಮಹತ್ವಾಕಾಂಕ್ಷಿಯಾದ ಈ ಯೋಜನೆ ಆರಂಭವಾಗಿ ಬಹಳ ಕಡಿಮೆ ಸಮಯದಲ್ಲೇ ಹೊಸ ವಿಮಾನ ಸಂಪರ್ಕಗಳನ್ನು ಒದಗಿಸುವ ಮೂಲಕ ಇದು ಭಾರತದ ಪ್ರಗತಿಯ ಹೊಸ ಶಕ್ತಿಯಾಗಲಿದೆ. 
ನನ್ನ ಕಡೆಯಿಂದ ಬಹಳ ಶುಭ ಹಾರೈಕೆಗಳು.
 
 
                                              ******