ಭಾರತದ ಪ್ರಥಮ ಅರೆ ಅತಿ ವೇಗದ ರೈಲು “ವಂದೇ ಭಾರತ್ ಎಕ್ಸ್ ಪ್ರೆಸ್’ಗೆ ನಾಳೆ ಹಸಿರು ನಿಶಾನೆ ತೋರಲಿರುವ ಪಿ.ಎಂ
14 Feb, 2019
ಭಾರತೀಯ ರೈಲ್ವೆಯ ಮೇಕ್ ಇನ್ ಇಂಡಿಯಾ ಪ್ರಯತ್ನ ಭಾರತದ ಪ್ರಥಮ ಅರೆ ಅತಿ ವೇಗದ ರೈಲು “ವಂದೇ ಭಾರತ್ ಎಕ್ಸ್ ಪ್ರೆಸ್” ರೂಪತಳೆಯಲು ಕಾರಣವಾಗಿದೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿ – ಖಾನ್ಪುರ್- ಅಲಹಾಬಾದ್ – ವಾರಾಣಸಿ ಮಾರ್ಗದ ಪ್ರಥಮ ಸಂಚಾರಕ್ಕೆ ನಾಳೆ ಬೆಳಗ್ಗೆ ನವದೆಹಲಿಯ ರೈಲು ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಲಿದ್ದಾರೆ. ಈ ಸಂದರ್ಭದಲ್ಲಿ ಅವರು ರೈಲಿನ ಸೌಲಭ್ಯಗಳನ್ನು ಪರಿಶೀಲಿಸಿ, ಸಭಿಕರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಕೇಂದ್ರ ರೈಲ್ವೆ ಮತ್ತು ಕಲ್ಲಿದ್ದಲು ಖಾತೆ ಸಚಿವ ಶ್ರೀ ಪೀಯೂಷ್ ಗೋಯಲ್ ಅವರು ನಾಳೆ ಉದ್ಘಾಟನಾ ಪ್ರಯಾಣದ ವೇಳೆ ಅಧಿಕಾರಿಗಳು ಹಾಗೂ ಮಾಧ್ಯಮ ತಂಡದವನ್ನು ಮುನ್ನಡೆಸಲಿದ್ದಾರೆ. ಈ ರೈಲು ಕಾನ್ಪುರ ಮತ್ತು ಅಲಹಾಬಾದ್ ಗಳಲ್ಲಿ ನಿಲುಗಡೆ ಹೊಂದಿದ್ದು, ಅಲ್ಲಿ ಗಣ್ಯರು ಮತ್ತು ಜನರು ಅದನ್ನು ಸ್ವಾಗತಿಸಲಿದ್ದಾರೆ.
ವಂದೆ ಭಾರತ್ ಎಕ್ಸ್ ಪ್ರೆಸ್ ಪ್ರತಿ ಗಂಟೆಗೆ 160 ಕಿ.ಮೀ.ಗರಿಷ್ಠ ವೇಗದಲ್ಲಿ ಓಡಬಲ್ಲುದಾಗಿದ್ದು, ಶತಾಬ್ದಿ ರೈಲಿನಲ್ಲಿರುವಂತೆ ಉತ್ತಮ ಸೌಲಭ್ಯ ಒಳಗೊಂಡಿದೆ. ಇದು ಪ್ರಯಾಣಿಕರಿಗೆ ಒಟ್ಟಾರೆಯಾಗಿ ಹೊಸ ಅನುಭವವನ್ನು ನೀಡಲಿದೆ.
ನವದೆಹಲಿ ಮತ್ತು ವಾರಾಣಸಿಯ ನಡುವಿನ ದೂರವನ್ನು ಕೇವಲ 8 ಗಂಟೆಗಳಲ್ಲಿ ಕ್ರಮಿಸಲಿರುವ ಈ ರೈಲು, ಸೋಮವಾರ ಮತ್ತು ಗುರುವಾರ ಹೊರತುಪಡಿಸಿ ವಾರದ ಎಲ್ಲಾ ದಿನಗಳಲ್ಲಿ ಸಂಚರಿಸಲಿದೆ.
ಎಲ್ಲ ಬೋಗಿಗಳಿಗೂ ಸ್ವಯಂಚಾಲಿತ ದ್ವಾರಗಳನ್ನು ಅಳವಡಿಸಲಾಗಿದೆ. ಜಿಪಿಎಸ್ ಆಧಾರಿತ ದೃಕ್ ಶ್ರವಣ ಪ್ರಯಾಣಿಕರ ಮಾಹಿತಿ ವ್ಯವಸ್ಥೆ, ಮನರಂಜನಾ ಉದ್ದೇಶಕ್ಕಾಗಿ ಸಂಚಾರದಲ್ಲಿ ವೈಫೈ ಸೌಲಭ್ಯ ಮತ್ತು ಸುಖಾಸನಗಳ ವ್ಯವಸ್ಥೆ ಇದೆ. ಎಲ್ಲ ಶೌಚಾಲಯಗಳೂ ಬಯೋ ವ್ಯಾಕ್ಯೂಮ್ ಮಾದರಿಯಲ್ಲಿವೆ. ದೀಪಗಳು ದ್ವಿಮಾದರಿಯಲ್ಲಿದ್ದು, ಸಾಮಾನ್ಯವಾಗಿ ದೀಪವನ್ನು ನಂದಿಸಿದರೂ, ಪ್ರತಿ ಆಸನದಲ್ಲೂ ವೈಯಕ್ತಿಕವಾಗಿ ದೀಪ ಬೆಳಗಿಸಬಹುದಾಗಿದೆ. ಪ್ರತಿ ಕೋಚ್ ನಲ್ಲಿ ಬಿಸಿಯೂಟ ಬಡಿಸಲು, ಬಿಸಿ ಮತ್ತು ತಣ್ಣನೆಯ ಪಾನೀಯ ಪೂರೈಸಲು ಅಡುಗೆ ಸಾಧನಗಳ ವ್ಯವಸ್ಥೆ (ಪ್ಯಾಂಟ್ರಿ) ಹೊಂದಿದೆ. ಪ್ರಯಾಣಿಕರ ಹೆಚ್ಚುವರಿ ಸೌಕರ್ಯಕ್ಕಾಗಿ ಕಡಿಮೆ ಮಟ್ಟಕ್ಕೆ ಶಾಖ ಮತ್ತು ಶಬ್ದವನ್ನು ಇರಿಸಿಕೊಳ್ಳಲು ನಿರೋಧಕಗಳನ್ನೂ ಅಳಡಿಸಲಾಗಿದೆ.
ವಂದೇ ಭಾರತ್ ಎಕ್ಸ್ ಪ್ರೆಸ್ 16 ಹವಾನಿಯಂತ್ರಿತ ಬೋಗಿಗಳನ್ನು ಹೊಂದಿದ್ದು, ಇದರಲ್ಲಿ 2 ಎಕ್ಸಿಕ್ಯೂಟಿವ್ ದರ್ಜೆಯ ಕೋಚ್ ಗಳಾಗಿವೆ. ಇದರ ಒಟ್ಟಾರೆ ಪ್ರಯಾಣಿಕರ ಆಸನಗಳ ಸಾಮರ್ಥ್ಯ 1,128 ಆಗಿದೆ. ಇದು ಹೆಚ್ಚೂಕಡಿಮೆ ಸಾಂಪ್ರದಾಯಿಕ ಶತಾಬ್ದಿಯಂತೆ ಸಮಾನ ಸಂಖ್ಯೆಯ ಕೋಚ್ ಗಳನ್ನು ಒಳಗೊಂಡಿದೆ. ಚಾಲನಾ ಕೋಚ್ ಸೇರಿದಂತೆ ಎಲ್ಲೆಡೆ ಎಲ್ಲಾ ವಿದ್ಯುತ್ ಉಪಕರಣಗಳನ್ನು ಆಸನಗಳ, ಕೋಚ್ ಗಳ ಕೆಳಗೆ ವರ್ಗಾಯಿಸಿರುವುದಕ್ಕೆ ಧನ್ಯವಾದಗಳು.
ಹಸಿರು ಹೆಜ್ಜೆಗುರುತು ಮೂಡಿಸಲು ಈ ರೈಲಿನಲ್ಲಿ ಪುನರುತ್ಪಾದಕ ಬ್ರೇಕ್ ವ್ಯವಸ್ಥೆಯನ್ನು ವಂದೇ ಭಾರತ್ ಎಕ್ಸ್ ಪ್ರೆಸ್ ಕೋಚ್ ಗಳಲ್ಲಿ ಅಳವಡಿಸಲಾಗಿದ್ದು, ಇವು ಶೇಕಡ 30ರಷ್ಟು ವಿದ್ಯಚ್ಛಕ್ತಿಯನ್ನು ಉಳಿಸುತ್ತವೆ.
ವೇಗ, ಸುರಕ್ಷತೆ ಮತ್ತು ಸೇವೆ ಈ ರೈಲಿನ ಲಕ್ಷಣಗಳಾಗಿವೆ. ರೈಲ್ವೆಯ ಉತ್ಪಾದನಾ ಘಟಕ, ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್), ಸಂಪೂರ್ಣವಾಗಿ ದೇಶೀಯವಾಗಿ ವಿನ್ಯಾಸಗೊಳಿಸಿ, ಉತ್ಪಾದನೆ ಮಾಡಿ, ಕಂಪ್ಯೂಟರ್ ಮಾದರಿ ನಿರ್ಮಿಸಿ ಮತ್ತು ಸಿಸ್ಟಮ್ ಏಕೀಕರಣಕ್ಕಾಗಿ ದೊಡ್ಡ ಸಂಖ್ಯೆಯ ಪೂರೈಕೆದಾರರೊಂದಿಗೆ ಕಾರ್ಯ ನಿರ್ವಹಿಸಿ, ಕೇವಲ 18 ತಿಂಗಳುಗಳಲ್ಲಿ ಇದನ್ನು ಪೂರ್ಣಗೊಳಿಸಿರುವುದರ ಹಿಂದಿನ ಶಕ್ತಿಯಾಗಿದೆ.
ಪ್ರಧಾನಮಂತ್ರಿಯವರ ಮೇಕ್ ಇನ್ ಇಂಡಿಯಾ ದೃಷ್ಟಿಕೋನವನ್ನು ಗಮನದಲ್ಲಿಟ್ಟುಕೊಂಡು ರೈಲಿನ ಪ್ರಮುಖ ವ್ಯವಸ್ಥೆಗಳನ್ನು ಭಾರತದಲ್ಲೇ ವಿನ್ಯಾಸಗೊಳಿಸಿ ನಿರ್ಮಾಣ ಮಾಡಲಾಗಿದೆ. ಈ ರೈಲಿನ ಪರಿಣಾಮವು ಜಾಗತಿಕ ಮಟ್ಟದ ಕಾರ್ಯಕ್ಷಮತೆಗೆ ಸಮನಾಗಿದೆ, ಸುರಕ್ಷತೆ, ಆರಾಮದಾಯಕ ಪ್ರಯಾಣ ಮತ್ತು ಜಾಗತಿಕ ದರಕ್ಕಿಂತ ಅರ್ಧದಷ್ಟು ವೆಚ್ಚವು ಜಾಗತಿಕ ರೈಲು ವಾಣಿಜ್ಯದಲ್ಲಿ ದಿಕ್ಕನ್ನೇ ಬದಲಾಯಿಸಬಲ್ಲುದಾಗಿದೆ.