Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತ-ಇಟೆಲಿ ತಂತ್ರಜ್ಞಾನ ಸಮ್ಮೇಳನದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ.

ಭಾರತ-ಇಟೆಲಿ ತಂತ್ರಜ್ಞಾನ ಸಮ್ಮೇಳನದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ.


ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹೊಸದಿಲ್ಲಿಯಲ್ಲಿ ನಡೆದ ಭಾರತ –ಇಟೆಲಿ ತಂತ್ರಜ್ಞಾನ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದರು. ಇಟೆಲಿಯ ಪ್ರಧಾನ ಮಂತ್ರಿ ಶ್ರೀ. ಗಿಯೂಸೆಪ್ ಕಾಂಟೆ ಈ ಸಂದರ್ಭ ಉಪಸ್ಥಿತರಿದ್ದರು.

ತಮ್ಮ ಭಾಷಣದಲ್ಲಿ ಪ್ರಧಾನ ಮಂತ್ರಿ ಅವರು ಭಾರತ-ಇಟೆಲಿ ಕೈಗಾರಿಕಾ ಸಂಶೋಧನೆ ಮತ್ತು ಅಭಿವೃದ್ದಿ ಸಹಕಾರ ಕಾರ್ಯಕ್ರಮದ ಮುಂದಿನ ಹಂತದ ಕಾರ್ಯಾರಂಭವನ್ನು ಘೋಷಿಸಿದರು. ಈ ಕಾರ್ಯಕ್ರಮ ನಮ್ಮ ಕೈಗಾರಿಕೆ ಮತ್ತು ಸಂಶೋಧನಾ ಸಂಸ್ಥೆಗಳಿಗೆ ಹೊಸ ಉತ್ಪನ್ನಗಳನ್ನು ಅಭಿವೃದ್ದಿಪಡಿಸಲು ಅನುಕೂಲ ಮಾಡಿಕೊಡಲಿದೆ ಎಂದರು.

ತಂತ್ರಜ್ಞಾನದ ಮಹತ್ವ ಕುರಿತಂತೆ ಮಾತನಾಡಿದ ಪ್ರಧಾನ ಮಂತ್ರಿ ಅವರು ಭಾರತವು ಸಾಮಾಜಿಕ ನ್ಯಾಯ, ಸಶಕ್ತೀಕರಣ, ಒಳಗೊಳ್ಳುವಿಕೆ ಮತ್ತು ಪಾರದರ್ಶಕತೆಯನ್ನು ಸಾಧಿಸಲು ತಂತ್ರಜ್ಞಾನವನ್ನು ಮಾಧ್ಯಮವಾಗಿಸಿಕೊಂಡಿದೆ ಎಂದರು. ಸರಕಾರವು ಕೊನೆಯ ಬಿಂದುವಿನವರೆಗೂ ಸೇವೆಗಳು ಕ್ರಿಯಾಶೀಲವಾಗಿ ಮತ್ತು ಸಮರ್ಪಕವಾಗಿ ಒದಗುವುದನ್ನು ಖಾತ್ರಿಪಡಿಸಲು ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದೆ ಎಂದರು.

ನಾಗರಿಕರಲ್ಲಿ ತಂತ್ರಜ್ಞಾನದ ಜೊತೆಗೆ ವೈಜ್ಞಾನಿಕ ಸ್ಪೂರ್ತಿಯನ್ನು ಬೆಳೆಸಲು ಸರಕಾರ ಒತ್ತು ನೀಡುತ್ತಿದೆ ಎಂದು ಹೇಳಿದ ಪ್ರಧಾನ ಮಂತ್ರಿ ಅವರು ಈ ಹಿನ್ನೆಲೆಯಲ್ಲಿ ಅಟಲ್ ಇನ್ನೋವೇಶನ್ ಮಿಶನ್, ಉಮಾಂಗ್ ಆಪ್ ಮತ್ತು ದೇಶಾದ್ಯಂತ ಹರಡಿರುವ ಮೂರು ಲಕ್ಷ ಸಾಮಾನ್ಯ ಸೇವಾ ಕೇಂದ್ರಗಳನ್ನು ಉದಾಹರಿಸಿದರು. ಈ ತಂತ್ರಜ್ಞಾನ ಆಧಾರಿತ ಪರಿಹಾರಗಳು ಸರಕಾರವನ್ನು ನಾಗರಿಕರ ಮನೆ ಬಾಗಿಲಿಗೆ ತಂದಿವೆ ಎಂದರು.

ಭಾರತದ ಬಾಹ್ಯಾಕಾಶ ಕಾರ್ಯಕ್ರಮವನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಪ್ರಧಾನ ಮಂತ್ರಿ ಅವರು ಇದು ಗುಣಮಟ್ಟದೊಂದಿಗೆ ಮಾಡಿದ ಅನ್ವೇಷಣೆಗೆ ಉದಾಹರಣೆ ಎಂದು ಬಣ್ಣಿಸಿದರು. ಭಾರತವೀಗ ಇಟೆಲಿಯೂ ಸೇರಿದಂತೆ ಹಲವು ರಾಷ್ಟ್ರಗಳ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಲು ಸಮರ್ಥವಾಗಿದೆ ಮತ್ತು ಇದು ಕಡಿಮೆ ಖರ್ಚಿನಲ್ಲಿ ನವೀನ ಮಾದರಿಯ ಅನ್ವೇಷಣೆ ಮಾಡುವ ಭಾರತದ ಸಾಮರ್ಥ್ಯಕ್ಕೆ ಕೈಗನ್ನಡಿಯಾಗಿದೆ ಎಂದೂ ಅವರು ಹೇಳಿದರು.

ಜೀವನ ಶೈಲಿ ಸಾಧನ ಸಲಕರಣೆಗಳ ವಿನ್ಯಾಸ (ಎಲ್.ಎ.ಡಿ.) ಕ್ಷೇತ್ರದಲ್ಲಿ ಭಾರತ ಮತ್ತು ಇಟೆಲಿ ನಡುವಿನ ವಿಸ್ತರಿತ ಸಹಕಾರದ ಬಗ್ಗೆ ಪ್ರಧಾನ ಮಂತ್ರಿ ಅವರು ಸಂತಸ ವ್ಯಕ್ತಪಡಿಸಿದರು. ಚರ್ಮೋದ್ಯಮ ಕ್ಷೇತ್ರ, ಸಾರಿಗೆ ಮತ್ತು ವಾಹನ ವಿನ್ಯಾಸ (ಟಿ.ಎ.ಡಿ.) ವಲಯಕ್ಕೆ ವಿಶೇಷ ಆದ್ಯತೆ ನೀಡಲಾಗುವುದು ಎಂದು ಅವರು ಹೇಳಿದರು.