Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತ ಕ್ರಿಯಾ ಯೋಜನೆ 2020 ಸಮಾವೇಶ: ಪ್ರಧಾನಿ ಅವರ ಪ್ರಾಸ್ತಾವಿಕ ನುಡಿ 


ಟಿ.ವಿ. ವಾಹಿನಿ ಟೈಮ್ಸ್ ನೌ ಆಯೋಜಿಸಿದ್ದ ಭಾರತ ಕ್ರಿಯಾ ಯೋಜನೆ 2020 ಸಮಾವೇಶದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಪ್ರಾಸ್ತಾವಿಕ ನುಡಿಯಲ್ಲಿ ವಿಶ್ವದ ಅತ್ಯಂತ ಯುವ ರಾಷ್ಟ್ರವಾಗಿರುವ ಭಾರತ ಹೊಸ ದಶಕಕ್ಕಾಗಿ ಕ್ರಿಯಾ ಯೋಜನೆಯನ್ನು ರೂಪಿಸುತ್ತಿದೆ ಮತ್ತು ಆ ಯುವ ಭಾರತ ನಿಧಾನಗತಿಯಲ್ಲಿ ಸಾಗುವ ಪ್ರವೃತ್ತಿಯದ್ದಲ್ಲ ಎಂದು ಹೇಳಿದರು.

ಸರಕಾರ ಈ ಸ್ಫೂರ್ತಿಯನ್ನು ಅಳವಡಿಸಿಕೊಂಡಿದೆ ಮತ್ತು ಕಳೆದ ತಿಂಗಳುಗಳಲ್ಲಿ ಶತಮಾನದಲ್ಲಿ ಕೈಗೊಳ್ಳಬಹುದಾದಷ್ಟು ನಿರ್ಧಾರಗಳನ್ನು ಕೈಗೊಂಡಿದೆ ಎಂದರು.

ಈ ಬದಲಾವಣೆಗಳು ಸಮಾಜದ ಪ್ರತಿಯೊಂದು ಸ್ತರದಲ್ಲಿಯೂ ಹೊಸ ಶಕ್ತಿಯನ್ನು , ಚೈತನ್ಯವನ್ನು ತುಂಬಿವೆ, ಮತ್ತು ಆತ್ಮವಿಶ್ವಾಸವನ್ನು ಬೆಳೆಸಿವೆ ಎಂದೂ ಅವರು ಹೇಳಿದರು.

ಇಂದು ದೇಶದ ಬಡವರು ಆತ್ಮವಿಶ್ವಾಸದಿಂದ ಇದ್ದಾರೆ, ತಮ್ಮ ಜೀವನ ಮಟ್ಟವನ್ನು ಎತ್ತರಿಸಬಹುದು ಎಂಬ ಭರವಸೆ ಅವರಿಗೆ ಬಂದಿದೆ, ಬಡತನವನ್ನು ತೊಲಗಿಸಬಹುದೆಂಬ ವಿಶ್ವಾಸವಿದೆ ಮತ್ತು ರೈತರು ತಮ್ಮ ಕೃಷಿ ಆದಾಯವನ್ನು ಹೆಚ್ಚಿಸಬಹುದೆಂಬ ಭರವಸೆಯಲ್ಲಿದ್ದಾರೆ ಎಂದೂ ಪ್ರಧಾನ ಮಂತ್ರಿ ಅವರು ಹೇಳಿದರು.

5 ಟ್ರಿಲಿಯನ್ ಡಾಲರ್ ಆರ್ಥಿಕತೆ- ಸಣ್ಣ ನಗರಗಳು ಮತ್ತು ಪಟ್ಟಣಗಳಿಗೆ ಆದ್ಯತೆ.

“ಭಾರತವು ಮುಂದಿನ ಐದು ವರ್ಷಗಳಲ್ಲಿ ತನ್ನ ಆರ್ಥಿಕತೆಯನ್ನು 5 ಟ್ರಿಲಿಯನ್ ಡಾಲರುಗಳಿಗೆ ವಿಸ್ತರಿಸಲು ಉದ್ದೇಶಿಸಿದೆ. ಗುರಿಯನ್ನು ನಿಗದಿ ಮಾಡಿಕೊಂಡು ಅದನ್ನು ಸಾಧಿಸುವತ್ತ ಸಾಗುವುದು ಉತ್ತಮ. ಈ ಗುರಿ ಸುಲಭ ಸಾಧ್ಯವಾದುದಲ್ಲ,  ಆದರೆ ಸಾಧಿಸಲು ಅಸಾಧ್ಯವಾದುದೇನಲ್ಲ “ ಎಂದವರು ಹೇಳಿದರು.

ಈ ಗುರಿಯನ್ನು ಸಾಧಿಸಲು , ದೇಶದಲ್ಲಿಯ ಉತ್ಪಾದನಾ ವಲಯವನ್ನು ಬಲಪಡಿಸಬೇಕಾಗುತ್ತದೆ, ಇದು ಬಹಳ ಮುಖ್ಯವಾದುದು  ಮತ್ತು ದೇಶದ ರಫ್ತನ್ನು ಹೆಚ್ಚಿಸಬೇಕಾಗುತ್ತದೆ ಮತ್ತು ಸರಕಾರವು ಈ ನಿಟ್ಟಿನಲ್ಲಿ ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ ಎಂದೂ ಅವರು ನುಡಿದರು.

ಈ ಎಲ್ಲಾ ಪ್ರಯತ್ನಗಳ ಮಧ್ಯೆ, ಭಾರತವು ಉದಯಿಸುತ್ತಿರುವ ಆರ್ಥಿಕತೆಯಾಗಿ ಇನ್ನಷ್ಟು ಸವಾಲುಗಳನ್ನು ಎದುರಿಸುತ್ತಿದೆ, ಜಾಗತಿಕೆ ಆರ್ಥಿಕತೆಯ ಏರು ಪೇರುಗಳ ನಡುವೆ ಹೀಗೆ ಹೊಯ್ದಾಟಗಳಾಗುತ್ತಿವೆ ಎಂದೂ ಪ್ರಧಾನ ಮಂತ್ರಿ ಅವರು ಹೇಳಿದರು.

ಇದೇ ಮೊದಲ ಬಾರಿಗೆ ಸರಕಾರವೊಂದು ಸಣ್ಣ ನಗರಗಳ ಆರ್ಥಿಕ ಬೆಳವಣಿಗೆ ಬಗ್ಗೆ ಆದ್ಯತೆ ನೀಡಿದೆ ಜೊತೆಗೆ ಅವುಗಳನ್ನು ಹೊಸ ಬೆಳವಣಿಗೆ ತಾಣಗಳನ್ನಾಗಿ ಮಾಡುವ ಕೆಲಸಕ್ಕೆ ಕೈಹಾಕಿದೆ ಎಂಬುದನ್ನವರು ಒತ್ತಿ ಹೇಳಿದರು.

 

ತೆರಿಗೆ ವ್ಯವಸ್ಥೆಯ ಸುಧಾರಣೆ:

“ಪ್ರತೀ ಸರಕಾರವೂ ತೆರಿಗೆ ವ್ಯವಸ್ಥೆಯನ್ನು ಸುಧಾರಿಸಲು ಹಿಂದೇಟು ಹಾಕುತ್ತಿತ್ತು. ಹಲವಾರು ವರ್ಷಗಳ ಕಾಲ ಅಲ್ಲಿ ಬದಲಾವಣೆ ಎಂಬುದು ಇರಲಿಲ್ಲ.ನಾವೀಗ ಕೇಂದ್ರೀಯ ತೆರಿಗೆ ವ್ಯವಸ್ಥೆ ಪ್ರಕ್ರಿಯೆಯಿಂದ ನಾಗರಿಕ ಕೇಂದ್ರಿತ ತೆರಿಗೆ ವ್ಯವಸ್ಥೆಯತ್ತ ಸಾಗುತ್ತಿದ್ದೇವೆ. ತೆರಿಗೆ ಪಾವತಿದಾರರ ಸನ್ನದು ಅನುಷ್ಟಾನ ಮಾಡಿದ ಆಯ್ದ ದೇಶಗಳ ಸಾಲಿಗೆ ಭಾರತವೂ ಸೇರಲಿದೆ. ಈ ಸನ್ನದು  ತೆರಿಗೆದಾರರ ಹಕ್ಕುಗಳ ಬಗ್ಗೆ ಸ್ಪಷ್ಟವಾಗಿ ವಿವರಿಸಲಿದೆ” ಎಂದೂ ಪ್ರಧಾನ ಮಂತ್ರಿ ಅವರು ಹೇಳಿದರು. 

ತೆರಿಗೆ ತಪ್ಪಿಸುವ ವಿಷಯದ ಬಗ್ಗೆ ಪ್ರತಿಯೊಬ್ಬ ಭಾರತೀಯರೂ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದ ಪ್ರಧಾನ ಮಂತ್ರಿ ಅವರು ಪ್ರಾಮಾಣಿಕ ತೆರಿಗೆ ದಾರ ಎದುರಿಸಬೇಕಾದ ಕೇಡು ಇದಾಗಿದೆ ಎಂದೂ ನುಡಿದರು.  ಎಲ್ಲಾ ನಾಗರಿಕರು ಜವಾಬ್ದಾರಿಯುತ ನಾಗರಿಕರಾಗಬೇಕು ಮತ್ತು ಅವರ ತೆರಿಗೆಯನ್ನು ಪಾವತಿಸಬೇಕು ಎಂದೂ ಪ್ರಧಾನ ಮಂತ್ರಿ ಅವರು ಆಗ್ರಹಿಸಿದರು.

ಸಮೃದ್ದ ಭಾರತ ನಿರ್ಮಾಣ ಮಾಡುವಲ್ಲಿ ಮಾಧ್ಯಮಗಳು ರಚನಾತ್ಮಕ ಪಾತ್ರ ವಹಿಸುವಂತೆ ಅವರು ಮನವಿ ಮಾಡಿದರು.

“ಪ್ರತಿಯೊಬ್ಬರೂ ತಮ್ಮ ತಮ್ಮ ಕರ್ತವ್ಯಗಳನ್ನು ನಿರ್ವಹಿಸಿದರೆ, ಆಗ ಅಲ್ಲಿ ಪರಿಹರಿಸುವುದಕ್ಕೆ ಯಾವುದೇ ಸಮಸ್ಯೆ ಇರುವುದಿಲ್ಲ. ಆಗ ದೇಶಕ್ಕೆ ಹೊಸ ಬಲ, ಹೊಸ ಶಕ್ತಿ ಬರುತ್ತದೆ. ಇದು ಭಾರತವನ್ನು ಈ ದಶಕದಲ್ಲಿ ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ “ ಎಂದವರು ಹೇಳಿದರು.