Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮಾರ್ಚ್ 11 ರಂದು ಕೇರಳ ಮತ್ತು ತಮಿಳುನಾಡಿಗೆ ಪ್ರಧಾನಮಂತ್ರಿ ಭೇಟಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026ರ ಮಾರ್ಚ್ 11 ರಂದು ಕೇರಳ ಮತ್ತು ತಮಿಳುನಾಡಿಗೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 1:30ರ ಸುಮಾರಿಗೆ, ಪ್ರಧಾನ ಮಂತ್ರಿಗಳು ಕೇರಳದ ಎರ್ನಾಕುಲಂನಲ್ಲಿ ಸುಮಾರು ₹10,800 ಕೋಟಿ ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ರಾಷ್ಟ್ರಕ್ಕೆ ಸಮರ್ಪಿಸಿ, ಶಿಲಾನ್ಯಾಸ ನೆರವೇರಿಸುತ್ತಾರೆ ಮತ್ತು ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದ ಸಂದರ್ಭದಲ್ಲಿ ಪ್ರಧಾನ ಮಂತ್ರಿಗಳು ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ನಂತರ ಸಂಜೆ 5:45ರ ಸುಮಾರಿಗೆ, ಪ್ರಧಾನಮಂತ್ರಿಗಳು ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿ ಸುಮಾರು ₹5,650 ಕೋಟಿ ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ರಾಷ್ಟ್ರಕ್ಕೆ ಸಮರ್ಪಿಸಿ, ಶಿಲಾನ್ಯಾಸ ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಗಳು ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಎರ್ನಾಕುಲಂನಲ್ಲಿ ಪ್ರಧಾನಮಂತ್ರಿ

ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ನ ಕೊಚ್ಚಿ ಸಂಸ್ಕರಣಾಗಾರದಲ್ಲಿ ಪಾಲಿಪ್ರೊಪಿಲೀನ್ ಘಟಕಕ್ಕೆ ಪ್ರಧಾನಮಂತ್ರಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಯೋಜನೆಯ ಹೂಡಿಕೆ ₹5,500 ಕೋಟಿಗಳಿಗಿಂತ ಹೆಚ್ಚು. ಈ ಪಾಲಿಪ್ರೊಪಿಲೀನ್ ಘಟಕದ ಸಾಮರ್ಥ್ಯ ವರ್ಷಕ್ಕೆ 400 ಕಿಲೋ ಟನ್. ಪಾಲಿಪ್ರೊಪಿಲೀನ್ ಎಂಬುದು ಪ್ಯಾಕೇಜಿಂಗ್, ಆಟೋಮೋಟಿವ್ ಘಟಕಗಳು, ವೈದ್ಯಕೀಯ ಸಾಧನಗಳು, ಜವಳಿ ಮತ್ತು ಗೃಹೋಪಯೋಗಿ ಉತ್ಪನ್ನಗಳಲ್ಲಿ ಬಳಸಲಾಗುವ ಅತ್ಯಗತ್ಯ ವಸ್ತುವಾಗಿದೆ. ಈ ಸೌಲಭ್ಯವು ಭಾರತದ ದೇಶೀಯ ಪಾಲಿಮರ್ ಉತ್ಪಾದನಾ ಸಾಮರ್ಥ್ಯವನ್ನು ಬಲಪಡಿಸುತ್ತದೆ, ಆಮದು ಅವಲಂಬನೆಯನ್ನು ಕಡಿಮೆ ಮಾಡುತ್ತದೆ, ಕೈಗಾರಿಕಾ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ಪ್ರದೇಶದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.

ರಸ್ತೆ ಮೂಲಸೌಕರ್ಯ ವಲಯದಲ್ಲಿ, ಪ್ರಧಾನಮಂತ್ರಿ ಎರಡು ಪ್ರಮುಖ ಹೆದ್ದಾರಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಮೊದಲನೆಯದು ರಾಷ್ಟ್ರೀಯ ಹೆದ್ದಾರಿ-66ರ ತಲಪಾಡಿ-ಚೆಂಗಲ ವಿಭಾಗದ ಆರು ಪಥ ರಸ್ತೆಯಾಗಿದ್ದು, ಇದನ್ನು ₹2,650 ಕೋಟಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ವಿಭಾಗವು ಮುಂಬೈ-ಕನ್ಯಾಕುಮಾರಿ ಆರ್ಥಿಕ ಕಾರಿಡಾರ್‌ನ ಭಾಗವಾಗಿದೆ ಮತ್ತು ಕಾಸರಗೋಡು ಹಾಗು ಕಣ್ಣೂರು ಜಿಲ್ಲೆಗಳು ಮತ್ತು ಮಂಗಳೂರು ಮತ್ತು ಮುಝಪಿಲಂಗಡ್ ಸೇರಿದಂತೆ ನೆರೆಯ ಪ್ರದೇಶಗಳ ನಡುವಿನ ಸಂಪರ್ಕವನ್ನು ಬಲಪಡಿಸುತ್ತದೆ. ಈ ಯೋಜನೆಯು ಕಾಸರಗೋಡು, ಬೇಕಲ್, ಪಯ್ಯನ್ನೂರು ಮತ್ತು ಕಣ್ಣೂರಿನಂತಹ ಪ್ರಮುಖ ಪಟ್ಟಣಗಳಿಗೆ ಸಂಪರ್ಕವನ್ನು ಸುಧಾರಿಸುತ್ತದೆ, ಅಝಿಕ್ಕಲ್ ಬಂದರಿಗೆ ಸಂಪರ್ಕವನ್ನು ಹೆಚ್ಚಿಸುತ್ತದೆ ಮತ್ತು ಪ್ರವಾಸೋದ್ಯಮ ಹಾಗು ವ್ಯಾಪಾರವನ್ನು ಬೆಂಬಲಿಸುತ್ತದೆ.

ಎರಡನೇ ಯೋಜನೆಯು ವೆಂಗಲಂ ನಿಂದ ರಾಮನಟ್ಟುಕರವರೆಗಿನ ಕೋಝಿಕ್ಕೋಡ್ ಬೈಪಾಸ್ ಅನ್ನು ಆರು ಪಥಗಳಾಗಿ ವಿಸ್ತರಿಸುವುದು, ಇದನ್ನು ಸುಮಾರು ₹2,140 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಯೋಜನೆಯು ಅಸ್ತಿತ್ವದಲ್ಲಿರುವ ಅವಿಭಜಿತ ದ್ವಿಪಥ ರಸ್ತೆಯನ್ನು ಎರಡೂ ಬದಿಗಳಲ್ಲಿ ಸೇವಾ ರಸ್ತೆಗಳೊಂದಿಗೆ ಆರು ಪಥಗಳ ಹೆದ್ದಾರಿಯಾಗಿ ನವೀಕರಿಸುತ್ತದೆ. ಇದು ದಟ್ಟಣೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ, ಸಂಚಾರ ಸಾಮರ್ಥ್ಯವನ್ನು ಸುಧಾರಿಸುತ್ತದೆ ಮತ್ತು ರಸ್ತೆ ಸುರಕ್ಷತೆಯನ್ನು ಹೆಚ್ಚಿಸುತ್ತದೆ. ಈ ಹಾದಿಯಲ್ಲಿ ಪ್ರಯಾಣದ ಸಮಯವು ಒಂದು ಗಂಟೆಯಿಂದ ಸುಮಾರು 15-20 ನಿಮಿಷಗಳವರೆಗೆ ಕಡಿಮೆಯಾಗುವ ನಿರೀಕ್ಷೆಯಿದೆ. ಈ ಯೋಜನೆಯು ಕೋಝಿಕ್ಕೋಡ್ ಬೀಚ್, ಬೇಪೋರ್ ಬಂದರು ಮತ್ತು ಕಪ್ಪಾಡ್ ಬೀಚ್‌ನಂತಹ ಪ್ರಮುಖ ತಾಣಗಳಿಗೆ ಸಂಪರ್ಕವನ್ನು ಸುಧಾರಿಸುತ್ತದೆ, ಈ ಪ್ರದೇಶದಲ್ಲಿ ಪ್ರವಾಸೋದ್ಯಮ ಮತ್ತು ವ್ಯಾಪಾರವನ್ನು ಹೆಚ್ಚಿಸುತ್ತದೆ.

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ (ಪಿ.ಎಂ.ಜಿ.ಎಸ್.ವೈ.-PMGSY) ಅಡಿಯಲ್ಲಿ ಕೇರಳದಲ್ಲಿ ನಿರ್ಮಿಸಲಾದ 23 ಗ್ರಾಮೀಣ ರಸ್ತೆಗಳನ್ನು ಪ್ರಧಾನ ಮಂತ್ರಿಯವರು ಉದ್ಘಾಟಿಸಲಿದ್ದಾರೆ. ಈ ರಸ್ತೆಗಳು ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿ ಸಂಪರ್ಕವನ್ನು ಸುಧಾರಿಸುತ್ತವೆ ಮತ್ತು ಮಾರುಕಟ್ಟೆಗಳು, ಶಿಕ್ಷಣ, ಆರೋಗ್ಯ ಹಾಗು ಉದ್ಯೋಗಾವಕಾಶಗಳಿಗೆ ಉತ್ತಮ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ, ಇದರಿಂದಾಗಿ ಗ್ರಾಮೀಣ ಜೀವನೋಪಾಯವನ್ನು ಬಲಪಡಿಸುತ್ತದೆ.

ಅಮೃತ ಭಾರತ ನಿಲ್ದಾಣ ಯೋಜನೆಯಡಿಯಲ್ಲಿ ಮೂರು ಪುನರಾಭಿವೃದ್ಧಿಗೊಳಿಸಲಾದ ರೈಲು ನಿಲ್ದಾಣಗಳನ್ನು ಪ್ರಧಾನಮಂತ್ರಿ ಉದ್ಘಾಟಿಸಲಿದ್ದಾರೆ – ಶೋರನೂರ್ ಜಂಕ್ಷನ್, ಕುಟ್ಟಿಪ್ಪುರಂ ಮತ್ತು ಚಂಗನಶ್ಶೇರಿ. ಈ ನಿಲ್ದಾಣಗಳನ್ನು ಸುಧಾರಿತ ಪ್ರಯಾಣಿಕರ ಸೌಲಭ್ಯಗಳು ಮತ್ತು ವರ್ಧಿತ ಪ್ರವೇಶದೊಂದಿಗೆ ಆಧುನೀಕರಿಸಲಾಗಿದೆ. ಪುನರಾಭಿವೃದ್ಧಿಯು ಪ್ರಯಾಣಿಕರಿಗೆ ಆಧುನಿಕ, ಸುರಕ್ಷಿತ ಮತ್ತು ಅನುಕೂಲಕರ ಪ್ರಯಾಣ ಅವಕಾಶಗಳನ್ನು ಸೃಷ್ಟಿಸುವಾಗ ಸ್ಥಳೀಯ ವಾಸ್ತುಶಿಲ್ಪದ ಅಂಶಗಳನ್ನೂ ಸಂಯೋಜಿಸುತ್ತದೆ.

ಶೋರನೂರ್-ನಿಲಂಬೂರ್ ರಸ್ತೆ ರೈಲು ಮಾರ್ಗ ವಿದ್ಯುದ್ದೀಕರಣ ಯೋಜನೆಯನ್ನು ಪ್ರಧಾನಮಂತ್ರಿಯವರು ರಾಷ್ಟ್ರಕ್ಕೆ ಅರ್ಪಿಸಲಿದ್ದಾರೆ. ಈ ಪ್ರಮುಖ ರೈಲು ವಿಭಾಗದ ವಿದ್ಯುದ್ದೀಕರಣವು ಶೋರನೂರಿನಲ್ಲಿ ಲೋಕೋಮೋಟಿವ್ ಬದಲಾವಣೆಗಳ ಅಗತ್ಯವನ್ನು ನಿವಾರಿಸುವ ಮೂಲಕ ವೇಗವಾದ, ಹೆಚ್ಚು ಪರಿಣಾಮಕಾರಿ ಮತ್ತು ಸುಸ್ಥಿರ ರೈಲು ಕಾರ್ಯಾಚರಣೆಗೆ ಅನುವು ಮಾಡಿಕೊಡುತ್ತದೆ. ಕೇರಳ ಮತ್ತು ತಮಿಳುನಾಡು ನಡುವಿನ ರೈಲು ಸಂಪರ್ಕವನ್ನು ಬಲಪಡಿಸುವ ಪಾಲಕ್ಕಾಡ್ ಮತ್ತು ಪೊಲ್ಲಾಚಿ ನಡುವಿನ ಹೊಸ ರೈಲು ಸೇವೆಗೆ ಪ್ರಧಾನಮಂತ್ರಿಯವರು ಹಸಿರು ನಿಶಾನೆ ತೋರಲಿದ್ದಾರೆ. ಈ ಸೇವೆಯು ಎರಡು ರಾಜ್ಯಗಳ ನಡುವೆ ಪ್ರಯಾಣಿಸುವ ದೈನಂದಿನ ಪ್ರಯಾಣಿಕರು, ಯಾತ್ರಿಕರು, ವ್ಯಾಪಾರಿಗಳು ಮತ್ತು ಪ್ರವಾಸಿಗರಿಗೆ ಪ್ರಯೋಜನವನ್ನು ನೀಡುತ್ತದೆ.

ಕೇರಳದ ಕೊಲ್ಲಂ ಜಿಲ್ಲೆಯ ಪಶ್ಚಿಮ ಕಲ್ಲಡದಲ್ಲಿ 50 ಮೆಗಾವ್ಯಾಟ್ ತೇಲುವ ಸೌರ ಯೋಜನೆಯ ಶಂಕುಸ್ಥಾಪನೆಯನ್ನು ಪ್ರಧಾನಮಂತ್ರಿಯವರು ನೆರವೇರಿಸಲಿದ್ದಾರೆ. ಈ ಯೋಜನೆಯು ಭಾರತದ ಶುದ್ಧ ಇಂಧನ ಗುರಿಗಳಿಗೆ ಕೊಡುಗೆ ನೀಡುತ್ತದೆ ಮತ್ತು ಸುಸ್ಥಿರ ಹಾಗು ಕಡಿಮೆ ಇಂಗಾಲದ ಇಂಧನ ಭವಿಷ್ಯದ ಕಡೆಗೆ ದೇಶದ ಬದ್ಧತೆಯನ್ನು ಬಲಪಡಿಸುತ್ತದೆ.

ತಿರುಚನಾಪಳ್ಳಿಯಲ್ಲಿ ಪ್ರಧಾನಮಂತ್ರಿ

ತಿರುಚನಾಪಳ್ಳಿಯಲ್ಲಿ ಸುಮಾರು ₹5,650 ಕೋಟಿ ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳನ್ನು ಪ್ರಧಾನಮಂತ್ರಿ ಉದ್ಘಾಟಿಸಲಿದ್ದಾರೆ, ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ, ಶಿಲಾನ್ಯಾಸ ನೆರವೇರಿಸಲಿದ್ದಾರೆ ಮತ್ತು ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಈ ಯೋಜನೆಗಳು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಮೂಲಸೌಕರ್ಯ, ಲೂಬ್ರಿಕಂಟ್ ಉತ್ಪಾದನೆ, ಗ್ರಾಮೀಣ ಸಂಪರ್ಕ, ಹೆದ್ದಾರಿ ಅಭಿವೃದ್ಧಿ ಮತ್ತು ರೈಲ್ವೆ ಸೇವೆಗಳು ಸೇರಿದಂತೆ ಪ್ರಮುಖ ಕ್ಷೇತ್ರಗಳನ್ನು ಒಳಗೊಂಡಿವೆ.

ಪೆಟ್ರೋಲಿಯಂ ವಲಯದಲ್ಲಿ, ₹3,680 ಕೋಟಿಗೂ ಹೆಚ್ಚು ಹೂಡಿಕೆಯಲ್ಲಿ ನೀಲಗಿರಿ ಮತ್ತು ಈರೋಡ್ ಜಿಲ್ಲೆಗಳಲ್ಲಿ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ನ ನಗರ ಅನಿಲ ವಿತರಣಾ ಜಾಲಕ್ಕೆ ಪ್ರಧಾನಮಂತ್ರಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಯೋಜನೆಯು 8.8 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಪಿ.ಎನ್.ಜಿ. ಸಂಪರ್ಕಗಳನ್ನು ಒದಗಿಸುತ್ತದೆ, 200 ಕ್ಕೂ ಹೆಚ್ಚು ವಾಣಿಜ್ಯ ಸ್ಥಾವರ/ಸಂಸ್ಥೆಗಳಿಗೆ ಅನಿಲ ಪೂರೈಸುತ್ತದೆ ಮತ್ತು 201 ಕ್ಕೂ ಹೆಚ್ಚು ಸಿ.ಎನ್.ಜಿ. ಕೇಂದ್ರಗಳನ್ನು ಸ್ಥಾಪಿಸುತ್ತದೆ.

ಪ್ರಧಾನಮಂತ್ರಿಯವರು ಚೆನ್ನೈನ ಮನಾಲಿಯಲ್ಲಿ ವಾರ್ಷಿಕ 672 ಸಾವಿರ ಮೆಟ್ರಿಕ್ ಟನ್ ಸಾಮರ್ಥ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್‌ನ ಲೂಬ್ರಿಕಂಟ್ ಮಿಶ್ರಣ ಘಟಕವನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಸುಮಾರು ₹1,490 ಕೋಟಿ ಹೂಡಿಕೆಯಲ್ಲಿ ಅಭಿವೃದ್ಧಿಪಡಿಸಲಾದ ಸ್ಥಾವರವು ಭಾರತದ ಲೂಬ್ರಿಕಂಟ್ ಉತ್ಪಾದನಾ ಸಾಮರ್ಥ್ಯವನ್ನು ಬಲಪಡಿಸುತ್ತದೆ.

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿಯಲ್ಲಿ, ಪ್ರಧಾನಮಂತ್ರಿಯವರು ತಮಿಳುನಾಡಿನಲ್ಲಿ 370 ಕಿ.ಮೀ. ಉದ್ದದ 89 ಗ್ರಾಮೀಣ ರಸ್ತೆಗಳನ್ನು ಉದ್ಘಾಟಿಸಲಿದ್ದಾರೆ, ಇದು ಗ್ರಾಮೀಣ ಪ್ರದೇಶಗಳಲ್ಲಿನ ಮಾರುಕಟ್ಟೆಗಳು, ಶಾಲೆಗಳು ಮತ್ತು ಆರೋಗ್ಯ ಸೌಲಭ್ಯಗಳಿಗೆ ಸಂಪರ್ಕವನ್ನು ಗಮನಾರ್ಹವಾಗಿ ಸುಧಾರಿಸುತ್ತದೆ. ರಾಷ್ಟ್ರೀಯ ಹೆದ್ದಾರಿ-81 ರಲ್ಲಿ ಗಂಗೈಕೊಂಡ ಚೋಳಪುರಂ ಬಳಿ ಹೊಸ ಬೈಪಾಸ್‌ಗೆ ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಪ್ರಧಾನಮಂತ್ರಿಯವರು ಎರಡು ಅಮೃತ ಭಾರತ ಎಕ್ಸ್‌ಪ್ರೆಸ್ ರೈಲುಗಳು, ಎರಡು ಎಕ್ಸ್‌ಪ್ರೆಸ್ ರೈಲುಗಳು ಮತ್ತು ಪ್ರಯಾಣಿಕ ರೈಲು ಸೇವೆಗೆ ಚಾಲನೆ ನೀಡಲಿದ್ದಾರೆ, ಇದು ತಮಿಳುನಾಡು ಮತ್ತು ತೆಲಂಗಾಣ, ಕರ್ನಾಟಕ, ಕೇರಳ ಮತ್ತು ಪೂರ್ವ ಭಾರತ ಸೇರಿದಂತೆ ಇತರ ಪ್ರದೇಶಗಳ ನಡುವೆ ರೈಲು ಸಂಪರ್ಕವನ್ನು ಬಲಪಡಿಸುತ್ತದೆ, ಇದರಿಂದಾಗಿ ಪ್ರಯಾಣಿಕರಿಗೆ ಪ್ರಯೋಜನವಾಗುತ್ತದೆ ಮತ್ತು ಪ್ರಾದೇಶಿಕ ಆರ್ಥಿಕ ಬೆಳವಣಿಗೆಗೆ ಬೆಂಬಲ ನೀಡುತ್ತದೆ.

 

*****