ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಖಾಸಗಿ ಮಾರ್ಗದಲ್ಲಿ ಅಥವಾ ಸರ್ಕಾರ ದಿಂದ ಸರ್ಕಾರದ (ಜಿ2ಜಿ) ಮಾರಾಟದ ಮೂಲಕ ಮತ್ತು ಎರಡೂ ರಾಷ್ಟ್ರಗಳು ನೇಮಿಸುವ ಸರ್ಕಾರಿ ಸಂಸ್ಥೆಗಳ ಮೂಲಕ ಬೇಳೆ ಕಾಳುಗಳನ್ನು ಆಮದು ಮಾಡಿಕೊಳ್ಳಲು ದೀರ್ಘಾವಧಿ ಒಪ್ಪಂದಕ್ಕಾಗಿ ಮೊಜಾಂಬಿಕ್ ನೊಂದಿಗೆ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.
ಈ ತಿಳಿವಳಿಕೆ ಒಪ್ಪಂದವು ಅವರೆಕಾಳು/ತೊಗರಿ ಮತ್ತು ಇತರ ಬೇಳೆಕಾಳುಗಳ ಮಾರಾಟದಲ್ಲಿ ಪ್ರಗತಿದಾಯಕ ಹೆಚ್ಚಳಕ್ಕೆ ಪ್ರೋತ್ಸಾಹ ನೀಡುವ ಮೂಲಕ ಮೊಜಾಂಬಿಕ್ ನಲ್ಲಿ ಈ ಧಾನ್ಯಗಳ ಉತ್ಪಾದನೆ ಉತ್ತೇಜಿಸುವ ಗುರಿಯನ್ನು ಹೊಂದಿದೆ. ಈ ತಿಳಿವಳಿಕೆ ಒಪ್ಪಂದವು ತೊಗರಿ ಮತ್ತು ಇತರ ಧಾನ್ಯಗಳನ್ನು ಐದು ಆರ್ಥಿಕ ವರ್ಷಗಳಿಗೆ ಮೊಜಾಂಬಿಕ್ ನಿಂದ ಭಾರತಕ್ಕೆ ರಫ್ತು ಮಾಡುವ ಗುರಿಯನ್ನೂ ಹೊಂದಿದೆ ಮತ್ತು ವಾಣಿಜ್ಯವನ್ನು 2016-17ನೇ ಸಾಲಿನಲ್ಲಿ 100,000 ಟನ್ ಗಳಿಂದ 2020-21ರ ಹೊತ್ತಿಗೆ 2000,000 ಟನ್ ಗೆ ಹೆಚ್ಚಿಸುವ ಗುರಿಯನ್ನೂ ಹೊಂದಿದೆ.
ಈ ತಿಳಿವಳಿಕೆ ಒಪ್ಪಂದವು ಭಾರತದಲ್ಲಿ ದೇಶೀಯವಾಗಿ ಬೇಳೆಕಾಳುಗಳ ಲಭ್ಯತೆಯನ್ನು ಹೆಚ್ಚಿಸುತ್ತದೆ ಮತ್ತು ಅವುಗಳ ಬೆಲೆಯನ್ನು ಸ್ಥಿರವಾಗಿಡುತ್ತದೆ.
2015-16ರ ಸಾಲಿನಲ್ಲಿ ದೇಶದಲ್ಲಿ ಒಟ್ಟು ಬೇಳೆ ಕಾಳುಗಳ ಉತ್ಪಾದನೆ 17 ದಶಲಕ್ಷ ಟನ್ ಎಂದು ಅಂದಾಜು ಮಾಡಲಾಗಿದೆ, ಜೊತೆಗೆ 5.79 ದಶಲಕ್ಷ ಟನ್ ಬೇಳೆ ಕಾಳುಗಳನ್ನು ದೇಶೀಯ ಬೇಡಿಕೆಯನ್ನು ಸರಿದೂಗಿಸಲು ಆಮದು ಮಾಡಿಕೊಳ್ಳಲಾಗಿದೆ. ಆದಾಗ್ಯೂ ದೇಶೀಯ ಉತ್ಪಾದನೆ ಮತ್ತು ಆಮದೂ ಸೇರಿದಂತೆ ಒಟ್ಟಾರೆ ಬೇಳೆಕಾಳುಗಳ ಲಭ್ಯತೆ ದೇಶೀಯ ಅಗತ್ಯಕ್ಕಿಂತ ಕಡಿಮೆಯೇ ಇದ್ದು, ಇದು 2015-16 ಮತ್ತು ಪ್ರಸಕ್ತ ಸಾಲಿನಲ್ಲಿ ಬೇಳೆಕಾಳುಗಳ ದರದ ಮೇಲೆ ಒತ್ತಡ ಹೇರಿದೆ.
ಬೇಳೆಕಾಳುಗಳ ಲಭ್ಯತೆಯ ಕೊರತೆಯ ಸಮಸ್ಯೆಯನ್ನು ಪರಿಹರಿಸಲು ಮತ್ತು ಪ್ರಸಕ್ತ ಅಗತ್ಯಕ್ಕೆ ಪೂರಕವಾಗಿ, ಸರ್ಕಾರ ಮೊಜಾಂಬಿಕ್ ನೊಂದಿಗೆ ಜಿ2ಜಿ ದೀರ್ಘಾವಧಿ ಒಪ್ಪಂದಕ್ಕೆ ನಿರ್ಧರಿಸಿದೆ. ಇದು ಬೇಳೆಕಾಳುಗಳ ಲಭ್ಯತೆಯ ಖಾತ್ರಿ ಒದಗಿಸುತ್ತದೆ. ಮೊಜಾಂಬಿಕ್ ನೊಂದಿಗೆ ಈ ಎಂ.ಓ.ಯು.ಗೆ. ಅಂಕಿತ ಹಾಕುವುದು ಇದೇ ರೀತಿಯ ಒಪ್ಪಂದವನ್ನು ಬೇರೆ ರಾಷ್ಟ್ರಗಳ ಜೊತೆ ಮಾಡಿಕೊಳ್ಳಲೂ ಅವಕಾಶ ಕಲ್ಪಿಸಲಿದೆ.