Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಯುರೋಪ್ ದುಂಡು ಮೇಜಿನ ಕೈಗಾರಿಕಾ ಸಭೆಯಲ್ಲಿ ಪ್ರಧಾನಮಂತ್ರಿ ಅವರ ಪತ್ರಿಕಾ ಹೇಳಿಕೆ

ಯುರೋಪ್ ದುಂಡು ಮೇಜಿನ ಕೈಗಾರಿಕಾ ಸಭೆಯಲ್ಲಿ ಪ್ರಧಾನಮಂತ್ರಿ ಅವರ ಪತ್ರಿಕಾ ಹೇಳಿಕೆ


ಗೌರವಾನ್ವಿತ ಸ್ವೀಡನ್ ಪ್ರಧಾನಮಂತ್ರಿ ಕ್ರಿಸ್ಟರ್ಸನ್,

ಗೌರವಾನ್ವಿತ ಐರೋಪ್ಯ ಒಕ್ಕೂಟ ಆಯೋಗದ ಅಧ್ಯಕ್ಷರಾದ ಶ್ರೀಮತಿ ಉರ್ಸುಲಾ ವಾನ್ ಡೆರ್ ಲೇಯೆನ್,

ಎರಡೂ ದೇಶಗಳ ಪ್ರತಿನಿಧಿಗಳೆ,

ಮತ್ತು ಮಾಧ್ಯಮ ಮಿತ್ರರೆ,

ನಮಸ್ಕಾರ!

ಮೊದಲನೆಯದಾಗಿ, ಪ್ರಧಾನಮಂತ್ರಿ ಕ್ರಿಸ್ಟರ್ಸನ್ ಅವರ ಆತ್ಮೀಯ ಸ್ವಾಗತಕ್ಕಾಗಿ ನಾನು ಹೃತ್ಪೂರ್ವಕವಾಗಿ ಧನ್ಯವಾದ ಹೇಳುತ್ತೇನೆ.

ಸ್ವಲ್ಪ ಸಮಯದ ಹಿಂದೆ, ನನಗೆ ಸ್ವೀಡನ್‌ನ ಅತ್ಯುನ್ನತ ಗೌರವವಾದ ರಾಯಲ್ ಆರ್ಡರ್ ಆಫ್ ದಿ ಪೋಲಾರ್ ಸ್ಟಾರ್ ನೀಡಲಾಯಿತು. ಈ ಗೌರವ ನನಗೆ ಮಾತ್ರವಲ್ಲ, ಇದು 1.4 ಶತಕೋಟಿ ಭಾರತೀಯರಿಗೆ ಸಂದ ಗೌರವವಾಗಿದೆ. ಭಾರತ – ಸ್ವೀಡನ್ ಸಂಬಂಧಗಳನ್ನು ಶ್ರೀಮಂತಗೊಳಿಸಿದ ಮತ್ತು ಅವರಿಗೆ ಬಲವಾದ ಅಡಿಪಾಯ ಹಾಕಿದ ಸ್ವೀಡನ್‌ನಲ್ಲಿರುವ ನಮ್ಮ ಎಲ್ಲಾ ಸ್ನೇಹಿತರಿಗೆ ಸಂದ ಗೌರವ ಇದಾಗಿದೆ.

ಸ್ವೀಡನ್ ಮತ್ತು ಯುರೋಪಿನ ಕೈಗಾರಿಕಾ ಹೃದಯ ಭಾಗ(ನೆಲೆ)ವಾದ ಗೋಥೆನ್‌ಬರ್ಗ್‌ಗೆ ನನ್ನ ಭೇಟಿಗೆ ವಿಶೇಷ ಮಹತ್ವ ನೀಡುವ ಇಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕಾಗಿ ಉರ್ಸುಲಾ ಜಿ ಅವರಿಗೆ ನಾನು ವಿಶೇಷ ಕೃತಜ್ಞತೆ ಸಲ್ಲಿಸುತ್ತೇನೆ.

ಸ್ನೇಹಿತರೆ,

ಭಾರತ ಮತ್ತು ಸ್ವೀಡನ್ ನಡುವಿನ ಸಂಬಂಧವು ಪ್ರಜಾಪ್ರಭುತ್ವ ಮೌಲ್ಯಗಳು, ಕಾನೂನು ನಿಯಮಗಳು ಮತ್ತು ಮಾನವ ಕೇಂದ್ರಿತ ಅಭಿವೃದ್ಧಿಯ ಬಲಿಷ್ಠ ಅಡಿಪಾಯಗಳ ಮೇಲೆ ನಿರ್ಮಿಸಲ್ಪಟ್ಟಿದೆ. ನಮ್ಮ ಎರಡೂ ದೇಶಗಳು ನಾವೀನ್ಯತೆಯನ್ನು ಬೆಳವಣಿಗೆಯ ಚಾಲನಾಶಕ್ತಿಯಾಗಿ, ಸುಸ್ಥಿರತೆಯನ್ನು ಹಂಚಿಕೆಯ ಜವಾಬ್ದಾರಿಯಾಗಿ ಮತ್ತು ಪ್ರಜಾಪ್ರಭುತ್ವವನ್ನು ನಮ್ಮ ಶಕ್ತಿಯಾಗಿ ನೋಡುತ್ತಿವೆ.

ಇಂದಿನ ಸಭೆಯಲ್ಲಿ, ಈ ಹಂಚಿಕೆಯ ಮೌಲ್ಯಗಳು ಮತ್ತು ಸಾಮಾನ್ಯ ಹಿತಾಸಕ್ತಿಗಳ ಆಧಾರದ ಮೇಲೆ ನಮ್ಮ ಸಹಕಾರವನ್ನು ಮುಂದಕ್ಕೆ ಕೊಂಡೊಯ್ಯುವ ಬಗ್ಗೆ ನಾವು ಚರ್ಚಿಸಿದ್ದೇವೆ. ನಮ್ಮ ಪಾಲುದಾರಿಕೆ ಎಲ್ಲಾ ಕ್ಷೇತ್ರಗಳಲ್ಲಿ ಬೆಳೆಯುತ್ತಿರುವುದರಿಂದ, ನಾವು ನಮ್ಮ ಸಂಬಂಧವನ್ನು ಕಾರ್ಯತಂತ್ರ ಪಾಲುದಾರಿಕೆಯ ಮಟ್ಟಕ್ಕೆ ಏರಿಸಲು ನಿರ್ಧರಿಸಿದ್ದೇವೆ. ಈ ಪಾಲುದಾರಿಕೆಯಲ್ಲಿ ನಾವು ಹಸಿರು ಪರಿವರ್ತನೆ, ರಕ್ಷಣೆ, ಉದಯೋನ್ಮುಖ ತಂತ್ರಜ್ಞಾನಗಳು ಮತ್ತು ಜನರಿಂದ ಜನರಿಗೆ ಸಂಪರ್ಕಗಳಂತಹ ಪ್ರಮುಖ ಕ್ಷೇತ್ರಗಳಲ್ಲಿ ಮುಂದುವರಿಯುತ್ತೇವೆ.

ಸ್ನೇಹಿತರೆ,

ಎಐ, ಆರೋಗ್ಯ-ತಂತ್ರಜ್ಞಾನ ಮತ್ತು ಹಸಿರು ಚಲನಶೀಲತೆಯಂತಹ ಹೈಟೆಕ್ ವಲಯಗಳಲ್ಲಿ ನಮ್ಮ ನಡುವಿನ ಸಹಕಾರ ಹೆಚ್ಚಳಕ್ಕೆ ಅಗಾಧ ಸಾಮರ್ಥ್ಯವಿದೆ. ಈ ವರ್ಷ ಭಾರತದಲ್ಲಿ ನಡೆದ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಸ್ವೀಡನ್‌ನ ದೊಡ್ಡ ಉದ್ಯಮ ನಿಯೋಗ ಭಾಗವಹಿಸಿತ್ತು. “ಸ್ವೀಡನ್-ಭಾರತ ತಂತ್ರಜ್ಞಾನ ಮತ್ತು ಎಐ ಕಾರಿಡಾರ್”  ಬಲಪಡಿಸಲು ನಾವು ಸಂಕೀರ್ಣ ಉಪಕ್ರಮಗಳ ಮೇಲೆ ಕೆಲಸ ಮಾಡುತ್ತೇವೆ.

ಎರಡೂ ದೇಶಗಳ ಸ್ಟಾರ್ಟಪ್‌ಗಳು ಮತ್ತು ಸಂಶೋಧನಾ ಪರಿಸರ ವ್ಯವಸ್ಥೆಗಳ ನಡುವಿನ ಸಂಪರ್ಕಗಳನ್ನು ಬಲಪಡಿಸಲು, ನಾವು ಭಾರತ – ಸ್ವೀಡನ್ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರವನ್ನು ಸ್ಥಾಪಿಸಲಿದ್ದೇವೆ.

ಹವಾಮಾನ ಬದಲಾವಣೆ ಮತ್ತು ಸುಸ್ಥಿರತೆ ಕುರಿತ ನಮ್ಮ ಚಿಂತನೆಯಲ್ಲಿ ಭಾರತ ಮತ್ತು ಸ್ವೀಡನ್ ನಡುವೆ ಬಲವಾದ ಒಮ್ಮುಖವಿದೆ. ಲೀಡರ್‌ಶಿಪ್ ಗ್ರೂಪ್ ಫಾರ್ ಇಂಡಸ್ಟ್ರಿ ಟ್ರಾನ್ಸಿಶನ್ ಅಥವಾ ಲೀಡ್‌ಐಟಿ ನಮ್ಮ ಜಂಟಿ ಜಾಗತಿಕ ಉಪಕ್ರಮವಾಗಿದ್ದು, ಇದರ ಅಡಿ ನಾವು ಕಡಿಮೆ ಇಂಗಾಲದ ಕೈಗಾರಿಕಾ ರೂಪಾಂತರದ ಮೇಲೆ ಗಮನ ಕೇಂದ್ರೀಕರಿಸುತ್ತಿದ್ದೇವೆ. ಇಂದು ನಾವು ಅದರ 3ನೇ ಹಂತದಲ್ಲಿ ಕೆಲಸ ಮಾಡಲು ನಿರ್ಧರಿಸಿದ್ದೇವೆ.

ಭಾರತವು ಹಸಿರು ಹೈಡ್ರೋಜನ್, ಹಸಿರು ಆರ್ಥಿಕತೆ ಮತ್ತು ಸುಸ್ಥಿರ ಮೂಲಸೌಕರ್ಯದಂತಹ ಕ್ಷೇತ್ರಗಳಲ್ಲಿ ಪ್ರಮುಖ ಕೆಲಸ ಮಾಡುತ್ತಿದೆ. ಸ್ವೀಡನ್‌ನ ತಂತ್ರಜ್ಞಾನ ಮತ್ತು ಭಾರತದ ಪ್ರಮಾಣವನ್ನು ಒಟ್ಟುಗೂಡಿಸುವ ಮೂಲಕ, ಇಡೀ ಜಗತ್ತಿಗೆ ಪ್ರಯೋಜನಕಾರಿಯಾದ ಹವಾಮಾನ ಪರಿಹಾರಗಳನ್ನು ನಾವು ರೂಪಿಸಬಹುದು. ಆರ್ಕ್ಟಿಕ್ ಪ್ರದೇಶದಲ್ಲಿ ಭಾರತ ಮತ್ತು ಸ್ವೀಡನ್‌ನ ಸಹಕಾರವು ಹವಾಮಾನ ಬದಲಾವಣೆಯ ಜಾಗತಿಕ ತಿಳಿವಳಿಕೆಯನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ.

ಸ್ನೇಹಿತರೆ,

ರಕ್ಷಣಾ ವಲಯದಲ್ಲಿ ನಮ್ಮ ಸಹಕಾರ ಸ್ಥಿರವಾಗಿ ಬೆಳೆಯುತ್ತಿದೆ. ಸ್ವೀಡಿಷ್ ಕಂಪನಿಗಳಿಂದ ಭಾರತದಲ್ಲಿ ಉತ್ಪಾದನಾ ಸೌಲಭ್ಯಗಳ ಸ್ಥಾಪನೆಯ ನಮ್ಮ ಪಾಲುದಾರಿಕೆಯು ಖರೀದಿದಾರ-ಮಾರಾಟಗಾರರ ಸಂಬಂಧವನ್ನು ಮೀರಿ ದೀರ್ಘಕಾಲೀನ ಕೈಗಾರಿಕಾ ಸಹಯೋಗವಾಗುತ್ತಿದೆ ಎಂಬುದನ್ನು ತೋರಿಸುತ್ತಿದೆ.

ಸ್ನೇಹಿತರೆ,

ಐರೋಪ್ಯ ಒಕ್ಕೂಟ ಆಯೋಗದ ಅಧ್ಯಕ್ಷರಾದ ಶ್ರೀಮತಿ ಉರ್ಸುಲಾ ವಾನ್ ಡೆರ್ ಲೇಯೆನ್ ಜಿ ಅವರ ಇಂದಿನ ಉಪಸ್ಥಿತಿಯು ಈ ಸಂದರ್ಭವನ್ನು ಇನ್ನಷ್ಟು ವಿಶೇಷವಾಗಿಸುತ್ತದೆ. ಈ ವರ್ಷದ ಆರಂಭದಲ್ಲಿ ಜನವರಿಯಲ್ಲಿ ಅವರು ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಭಾರತ-ಯುರೋಪ್ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ನಾವು ಹಲವಾರು ಐತಿಹಾಸಿಕ ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ. ಆ ಎಲ್ಲಾ ಫಲಿತಾಂಶಗಳಲ್ಲಿ ಉತ್ತಮ ಪ್ರಗತಿ ಸಾಧಿಸುತ್ತಿರುವುದನ್ನು ನೋಡಿ ನನಗೆ ಸಂತೋಷವಾಗಿದೆ.

ಭಾರತ-ಯುರೋಪ್ ಮುಕ್ತ ವ್ಯಾಪಾರ ಒಪ್ಪಂದವು ಕೈಗಾರಿಕೆಗಳು, ಹೂಡಿಕೆದಾರರು ಮತ್ತು ನಾವೀನ್ಯಕಾರರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ. ಉರ್ಸುಲಾ ಜಿ ಹೇಳಿದಂತೆ, ಇದು “ಎಲ್ಲಾ ಒಪ್ಪಂದಗಳ ತಾಯಿಯಾಗಿದೆ”

ಭದ್ರತೆ ಮತ್ತು ರಕ್ಷಣಾ ಪಾಲುದಾರಿಕೆ ಮತ್ತು ಚಲನಶೀಲತೆ ಒಪ್ಪಂದವು ನಮ್ಮ ಕಾರ್ಯತಂತ್ರ ಮತ್ತು ಜನ-ಕೇಂದ್ರಿತ ಪಾಲುದಾರಿಕೆಗೆ ಹೊಸ ಶಕ್ತಿ ನೀಡಿದೆ. ಭಾರತ-ಯುರೋಪ್ ವ್ಯಾಪಾರ ಮತ್ತು ತಂತ್ರಜ್ಞಾನ ಮಂಡಳಿಯು ನಮ್ಮ ಸಹಕಾರವನ್ನು ಮತ್ತಷ್ಟು ಬಲಪಡಿಸಿದೆ. ಡಿಜಿಟಲ್ ತಂತ್ರಜ್ಞಾನ, ಸ್ವಚ್ಛ ಇಂಧನ, ಸೆಮಿಕಂಡಕ್ಟರ್ ಗಳು, ಚೇತರಿಕೆಯ  ಪೂರೈಕೆ ಸರಪಳಿಗಳು ಮತ್ತು ನಾವೀನ್ಯತೆ ಮುಂತಾದ ಕ್ಷೇತ್ರಗಳಲ್ಲಿ ನಾವು ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ.

ಭಾರತ ಮತ್ತು ಯುರೋಪ್ ನಡುವಿನ ರಾಜಕೀಯ, ಆರ್ಥಿಕ ಮತ್ತು ಕಾರ್ಯತಂತ್ರ ಒಮ್ಮುಖವು ವಿಶ್ವಾದ್ಯಂತ ಶಾಂತಿ ಮತ್ತು ಸ್ಥಿರತೆಗೆ ಮುಖ್ಯವಾಗಿದೆ.

ಸ್ನೇಹಿತರೆ,

ಇಂದಿನ ಉದ್ವಿಗ್ನ ಜಾಗತಿಕ ವಾತಾವರಣದಲ್ಲಿ ಭಾರತ ಮತ್ತು ಸ್ವೀಡನ್‌ನಂತಹ ಪ್ರಜಾಪ್ರಭುತ್ವಗಳ ನಡುವಿನ ನಿಕಟ ಸಹಕಾರವು ವಿಶೇಷ ಮಹತ್ವದ್ದಾಗಿದೆ. ವಿವಿಧ ಉದ್ವಿಗ್ನತೆ ಮತ್ತು ಸವಾಲುಗಳನ್ನು ಪರಿಹರಿಸುವ ಸಾಧನವಾಗಿ ನಾವು ಯಾವಾಗಲೂ ಸಂವಾದ ಮತ್ತು ರಾಜತಾಂತ್ರಿಕತೆಯನ್ನು ಒತ್ತಿ ಹೇಳಿದ್ದೇವೆ.

ಭಯೋತ್ಪಾದನೆಯು ಎಲ್ಲಾ ಮಾನವತೆಗೆ ಗಂಭೀರ ಸವಾಲು ಎಂದು ಭಾರತ ಮತ್ತು ಸ್ವೀಡನ್ ಒಪ್ಪುತ್ತವೆ. ಕಳೆದ ವರ್ಷ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಸ್ವೀಡನ್‌ನಿಂದ ನಮಗೆ ದೊರೆತ ಬೆಂಬಲಕ್ಕಾಗಿ ನಾನು ಪ್ರಧಾನಿ ಕ್ರಿಸ್ಟರ್ಸನ್‌ ಅವರಿಗೆ ನನ್ನ ಕೃತಜ್ಞತೆ ಸಲ್ಲಿಸುತ್ತೇನೆ. ಭಯೋತ್ಪಾದನೆ ಮತ್ತು ಅದನ್ನು ಬೆಂಬಲಿಸುವವರ ವಿರುದ್ಧ ನಾವು ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ.

ಗೌರವಾನ್ವಿತರೆ,

ಇಂದಿನ ಅರ್ಥಪೂರ್ಣ ಚರ್ಚೆಗಳಿಗಾಗಿ ಮತ್ತೊಮ್ಮೆ ನಾನು ನಿಮಗೆ ಧನ್ಯವಾದ ಹೇಳುತ್ತೇನೆ. ನಮ್ಮ ಹಂಚಿಕೆಯ ಪ್ರಯತ್ನಗಳ ಮೂಲಕ ಭಾರತ-ಸ್ವೀಡನ್ ಮತ್ತು ಭಾರತ-ಯುರೋಪ್ ಪಾಲುದಾರಿಕೆಗಳು ಮುಂದುವರಿಯುತ್ತವೆ. ಒಟ್ಟಾಗಿ ನಾವು ಜಾಗತಿಕ ಶಾಂತಿ, ಭದ್ರತೆ ಮತ್ತು ಸಮೃದ್ಧಿಗೆ ಕೊಡುಗೆ ನೀಡುತ್ತಲೇ ಇರುತ್ತೇವೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ.

ತುಂಬು ಧನ್ಯವಾದಗಳು.

ಹಕ್ಕು ನಿರಾಕರಣೆ: ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಕನ್ನಡ ರೂಪಾಂತರ ಇದಾಗಿದೆ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.

 

*****