ಪಿಎಂಇಂಡಿಯಾ
ಸಂಸತ್ತಿನಲ್ಲಿ ರಾಷ್ಟ್ರಪತಿ ಅವರು ಮಾಡಿದ ಭಾಷಣದ ವಂದನಾ ನಿರ್ಣಯಕ್ಕೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಲೋಕ ಸಭೆಯಲ್ಲಿ ಉತ್ತರಿಸಿದರು. ಅವರು ಸದನದ ಸದಸ್ಯರಿಗೆ , ಅದರಲ್ಲೂ ಮೊದಲ ಬಾರಿ ಸಂಸದರಾದವರಿಗೆ ಚರ್ಚೆಯಲ್ಲಿ ಪಾಲ್ಗೊಂಡುದಕ್ಕಾಗಿ ಧನ್ಯವಾದ ಹೇಳಿದರು. ರಾಷ್ಟ್ರಪತಿಗಳ ಭಾಷಣದ ಚಿಂತನೆಗಳು ಮಿಲಿಯಾಂತರ ಭಾರತೀಯರ ನವ ಭಾರತದ ಕನಸನ್ನು ಅನಾವರಣ ಮಾಡಿವೆ ಎಂದರು.
2019 ರ ಲೋಕ ಸಭಾ ಚುನಾವಣೆಗಳ ಬಲಿಷ್ಟ ತೀರ್ಪಿನ ಬಗ್ಗೆ ಮಾತನಾಡಿದ ಪ್ರಧಾನ ಮಂತ್ರಿ ಅವರು ಭಾರತದ ಜನತೆ ಸರಕಾರದ ಸಾಧನೆಯ ಮೌಲ್ಯಮಾಪನದ ಬಳಿಕ ಮತ್ತೆ ಸ್ಥಿರ ಸರಕಾರವನ್ನು ಪುನರಾಯ್ಕೆ ಮಾಡಿದ್ದಾರೆ ಎಂದರು.
“2019 ರ ಲೋಕ ಸಭಾ ಚುನಾವಣೆಗಳು ಭಾರತದ ಜನತೆ ದೇಶದ ಒಳಿತಿನ ಬಗ್ಗೆ ಚಿಂತಿಸುತ್ತಿರುವುದನ್ನು ತೋರಿಸುತ್ತವೆ. ಈ ಸ್ಪೂರ್ತಿ ಅತ್ಯದ್ಭುತ” ಎಂದು ಪ್ರಧಾನ ಮಂತ್ರಿ ಹೇಳಿದ್ದಾರೆ. 130 ಕೋಟಿ ಭಾರತೀಯರ ಸೇವೆಗೆ ಅವಕಾಶ ಒದಗಿಸಿರುವುದಕ್ಕೆ ತೃಪ್ತಿ ತಂದಿದೆ ಮತ್ತು ನಾಗರಿಕರ ಬದುಕಿನಲ್ಲಿ ಧನಾತ್ಮಕ ಬದಲಾವಣೆ ತರುವಂತಹ ಕೆಲಸವನ್ನು ಮಾಡುವುದಾಗಿಯೂ ಅವರು ಹೇಳಿದ್ದಾರೆ.
ಕೇಂದ್ರ ಸರಕಾರದ ಚಿಂತನೆಯನ್ನು ಪ್ರಮುಖವಾಗಿ ಉಲ್ಲೇಖಿಸಿದ ಪ್ರಧಾನ ಮಂತ್ರಿ ಅವರು ಸರಕಾರವು ಸಾರ್ವಜನಿಕ ಕಲ್ಯಾಣದಲ್ಲಿ ನಂಬಿಕೆ ಇಟ್ಟಿದೆ ಮತ್ತು ಆಧುನಿಕ ಮೂಲಸೌಕರ್ಯಗಳನ್ನು ರೂಪಿಸಲಾಗುತ್ತದೆ. ಸರಕಾರವು ಅಭಿವೃದ್ದಿ ಪಥದಿಂದ ವಿಮುಖವಾಗುವುದಿಲ್ಲ ಅಥವಾ ಅಭಿವೃದ್ದಿ ಕಾರ್ಯಯೋಜನೆಯಿಂದ ವಿಮುಖವಾಗುವುದಿಲ್ಲ ಎಂದು ಹೇಳಿದರಲ್ಲದೆ “ ದೇಶದ ಪ್ರಗತಿ ಬಹಳ ಮುಖ್ಯವಾದುದು, ಪ್ರತೀಯೊಬ್ಬ ಭಾರತೀಯರೂ ಸಶಕ್ತರಾಗಿದ್ದಾರೆ ಮತ್ತು ನಮ್ಮ ದೇಶ ಆಧುನಿಕ ಮೂಲಸೌಕರ್ಯಗಳ ದೇಶವಾಗಿದೆ ಎಂದರು.
ಪ್ರತಿಯೊಬ್ಬರೂ ಭಾರತದ ಪ್ರಗತಿಗೆ ಕೊಡುಗೆ ನೀಡಿದ್ದಾರೆ ಎಂಬುದಾಗಿ ತಮ್ಮ ಸರಕಾರ ನಂಬುತ್ತದೆ ಎಂದು ಹೇಳಿದ ಪ್ರಧಾನ ಮಂತ್ರಿ ಅವರು ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನು ಸದನಕ್ಕೆ ನೆನಪಿಸಿದರು.
ಮಹಾತ್ಮಾ ಗಾಂಧಿ ಅವರ 150 ನೆ ಜನ್ಮವರ್ಷಾಚರಣೆ ಮತ್ತು ಭಾರತದ ಸ್ವಾತಂತ್ರ್ಯೋತ್ಸವದ 65 ವರ್ಷದ ಸಂಭ್ರಮಗಳು ಭಾರತದ ಇತಿಹಾಸದ ಹೆಗ್ಗುರುತುಗಳು ಎಂದು ಬಣ್ಣಿಸಿದ ಪ್ರಧಾನ ಮಂತ್ರಿ ಅವರು ಈ ಎರಡೂ ಘಟನೆಗಳನ್ನು ಭಾರೀ ಉತ್ಸಾಹದಿಂದ ಆಚರಿಸುವಂತೆ ಜನತೆಗೆ ಮನವಿ ಮಾಡಿದರು. ಸ್ವಾತಂತ್ರ್ಯ ಹೋರಾಟಗಾರರು ಕನಸು ಕಂಡಂತಹ ಭಾರತವನ್ನು ನಿರ್ಮಿಸಲು ನಾಗರಿಕರು ಕಟಿ ಬದ್ದರಾಗಬೇಕು ಎಂದರಲ್ಲದೆ ದೇಶಕ್ಕಾಗಿ ಬದುಕಬೇಕು ಎಂದೂ ಅವರು ಹೇಳಿದರು.
ಕೇಂದ್ರ ಸರಕಾರವು ಅಧಿಕಾರಕ್ಕೇರಿದ ವಾರಗಳಲ್ಲಿಯೇ ಜನ ಪರ ನಿರ್ಧಾರಗಳನ್ನು ಕೈಗೊಂಡಿದೆ ಎಂದು ಹೇಳಿದ ಪ್ರಧಾನ ಮಂತ್ರಿ ಅವರು ಆ ನಿರ್ಧಾರಗಳು ರೈತರಿಗೆ, ವ್ಯಾಪಾರಿಗಳಿಗೆ , ಯುವಕರಿಗೆ ಮತ್ತು ಸಮಾಜದ ಇತರ ವರ್ಗಗಳಿಗೆ ಭಾರೀ ಪ್ರಯೋಜನಕಾರಿಯಾಗಿವೆ ಎಂದೂ ಹೇಳಿದರು. ಸರಕಾರವು ರಾಷ್ಟ್ರಕ್ಕೆ ನೀಡಿದ ಭರವಸೆಗಳನ್ನು ಈಡೇರಿಸಲು ಆರಂಭ ಮಾಡಿದೆ ಎಂದರು.
ಜಲ ಸಂರಕ್ಷಣೆಯ ಮಹತ್ವವನ್ನು ಪ್ರಸ್ತಾಪಿಸಿದ ಪ್ರಧಾನ ಮಂತ್ರಿ ಶ್ರೀ ಮೋದಿ ಅವರು ಈ ನಿಟ್ಟಿನಲ್ಲಿ ಕೇಂದ್ರ ಸರಕಾರವು “ಜಲ ಶಕ್ತಿ ಸಚಿವಾಲಯ” ಸ್ಥಾಪನೆ ಸಹಿತ ಕೈಗೊಂಡ ಕ್ರಮಗಳನ್ನು ವಿವರಿಸಿದರು. ನೀರನ್ನು ಉಳಿತಾಯ ಮಾಡಲು ದೃಢವಾದ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಜನರಲ್ಲಿ ಮನವಿ ಮಾಡಿದರು. ನೀರಿನ ಸಮಸ್ಯೆ ಬಡವರನ್ನು ಮತ್ತು ಮಹಿಳೆಯರನ್ನು ಹೆಚ್ಚು ಬಾಧಿಸುತ್ತದೆ ಎಂದು ಹೇಳಿದ ಅವರು ಪ್ರತೀ ಮನೆಗೂ ನೀರು ಒದಗಿಸುವ ಕೆಲಸಕ್ಕೆ ಸರಕಾರ ಬದ್ದವಾಗಿದೆ ಎನ್ನುವುದನ್ನೂ ಪುನರುಚ್ಚರಿಸಿದರು.
ಭಾರತವನ್ನು ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿಸುವ ನಿಟ್ಟಿನಲ್ಲಿ ಸಾಮೂಹಿಕ ಪ್ರಯತ್ನಗಳು ನಡೆಯಬೇಕು ಎಂದ ಪ್ರಧಾನ ಮಂತ್ರಿ ಅವರು ಪ್ರವಾಸೋದ್ಯಮಕ್ಕೆ ಉತ್ತೇಜನ ಮತ್ತು ಪ್ರವಾಸೋದ್ಯಮ ಮೂಲಸೌಕರ್ಯ ಸುಧಾರಣೆಗಳು ಆರ್ಥಿಕ ಸಮೃದ್ದಿಯನ್ನು ಸಾಧ್ಯಮಾಡುತ್ತವೆ ಎಂದರು. ಅವರು ’ಮೇಕ್ ಇನ್ ಇಂಡಿಯಾ” ಮತ್ತು ಕೌಶಲ್ಯಾಭಿವೃದ್ದಿಯ ಮಹತ್ವವನ್ನು ಉಲ್ಲೇಖಿಸಿದರು.
ದೇಶದಲ್ಲಿ ಭ್ರಷ್ಟಾಚಾರಕ್ಕೆ ಸ್ಥಳ ಇಲ್ಲ ಎಂದ ಪ್ರಧಾನ ಮಂತ್ರಿ ಶ್ರೀ ಮೋದಿ ಭ್ರಷ್ಟಾಚಾರದ ವಿರುದ್ದ ಸರಕಾರ ತನ್ನ ಹೋರಾಟವನ್ನು ಮುಂದುವರೆಸುತ್ತದೆ ಎಂದೂ ಹೇಳಿದರು. ಸರಕಾರವು ಎಲ್ಲಾ ನಾಗರಿಕರಿಗೆ ಜೀವಿಸಲು ಅನುಕೂಲಕರ ವಾತಾವರಣವನ್ನು ಖಾತ್ರಿಪಡಿಸಲು ಬದ್ದವಾಗಿದೆ ಎಂದವರು ಹೇಳಿದರಲ್ಲದೆ , ನವ ಭಾರತ ನಿರ್ಮಾಣದತ್ತ ಪ್ರತಿಯೊಬ್ಬರೂ ಕಾರ್ಯಪವೃತ್ತರಾಗುವಂತೆ ಮನವಿ ಮಾಡಿದರು.
Replying to 'Motion Of Thanks On the President's Address' in Lok Sabha https://t.co/oXpl0TMDOg
— Narendra Modi (@narendramodi) June 25, 2019