Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವಾರಣಾಸಿಯ ಷಹನ್ ಶಾಪುರ ದಲ್ಲಿ ಆಯೋಜಿಸಿದ್ದ ಪಶುಧನ ಆರೋಗ್ಯ ಮೇಳದಲ್ಲಿ ಪ್ರಧಾನ ಮಂತ್ರಿಗಳು ಮಾಡಿದ ಭಾಷಣ

ವಾರಣಾಸಿಯ ಷಹನ್ ಶಾಪುರ ದಲ್ಲಿ ಆಯೋಜಿಸಿದ್ದ ಪಶುಧನ ಆರೋಗ್ಯ ಮೇಳದಲ್ಲಿ ಪ್ರಧಾನ ಮಂತ್ರಿಗಳು ಮಾಡಿದ ಭಾಷಣ

ವಾರಣಾಸಿಯ ಷಹನ್ ಶಾಪುರ ದಲ್ಲಿ ಆಯೋಜಿಸಿದ್ದ ಪಶುಧನ ಆರೋಗ್ಯ ಮೇಳದಲ್ಲಿ ಪ್ರಧಾನ ಮಂತ್ರಿಗಳು ಮಾಡಿದ ಭಾಷಣ

ವಾರಣಾಸಿಯ ಷಹನ್ ಶಾಪುರ ದಲ್ಲಿ ಆಯೋಜಿಸಿದ್ದ ಪಶುಧನ ಆರೋಗ್ಯ ಮೇಳದಲ್ಲಿ ಪ್ರಧಾನ ಮಂತ್ರಿಗಳು ಮಾಡಿದ ಭಾಷಣ


ಅಪಾರ ಸಂಖ್ಯೆಯಲ್ಲಿ ಆಗಮಿಸಿರುವ ನನ್ನ ಪ್ರೀತಿಯ ಸೋದರ ಮತ್ತು ಸೋದರಿಯರೆ,

ಷ್ಟು ಬೆಳ್ಳಂಬೆಳಗ್ಗೆಯೇ ಇಷ್ಟೊಂದು ದೊಡ್ಡ ಜನಸಾಗರ! ಎಲ್ಲೆಲ್ಲೂ ಜನರೇ ಕಾಣುತ್ತಿರುವುದನ್ನು ಕಲ್ಪನೆ ಮಾಡಿಕೊಳ್ಳಲೂ ಸಾಧ್ಯವಾಗುತ್ತಿಲ್ಲ. ಏಕೆಂದರೆ ನಾವು ಮಾಡಿರುವ ವ್ಯವಸ್ಥೆ ಸಾಲದೆ ಬಹಳಷ್ಟು ಜನರು ಬಿಸಿಲಿನಲ್ಲಿ ನಿಂತಿದ್ದಾರೆ, ಅವರಿಗೆ ಕಷ್ಟವಾಗುತ್ತಿದೆಯಾದರೂ ನನಗೆ ಆಶೀರ್ವಾದ ನೀಡಲು ಬಂದಿದ್ದಾರೆ. ಎಲ್ಲಕ್ಕಿಂತ ಮೊದಲು ನಾನು ನಿಮ್ಮ ಕ್ಷಮೆ ಕೇಳುತ್ತೇನೆ. ನಾನು ನಿಮ್ಮೆಲ್ಲರಿಗೆ ಆಭಾರಿಯಾಗಿದ್ದೇನೆ ಮತ್ತು ಕ್ಷಮೆಯನ್ನೂ ಕೇಳುತ್ತೇನೆ. ಈ ಬಿಸಿಲಿನ ತಾಪಕ್ಕೆ ಒಡ್ಡಿಕೊಂಡಿರುವ ನಿಮ್ಮ ತಪಸ್ಸನ್ನು ನಾನು ಎಂದಿಗೂ ವ್ಯರ್ಥಗೊಳಿಸುವುದಿಲ್ಲ ಎಂದು ಬಿಸಿಲಿನಲ್ಲಿ ನಿಂತಿರುವ ಎಲ್ಲರಿಗೂ ವಿಶ್ವಾಸ ನೀಡುತ್ತೇನೆ.

ಸೋದರ ಸೋದರಿಯರೆ, ನಾನು ಉತ್ತರ ಪ್ರದೇಶ ಸರ್ಕಾರಕ್ಕೆ ವಿಶೇಷವಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿಗಳಿಗೆ ಹೃತ್ಪೂರ್ವಕವಾಗಿ ಬಹಳ ಬಹಳ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಏಕೆಂದರೆ ಅವರು ಇಂದು ಪಶುಸಂಪತ್ತಿನ ಒಂದು ಆರೋಗ್ಯ ಮೇಳವನ್ನು ಆಯೋಜಿಸಿದ್ದಾರೆ. ಈ ಪಶುಧನ ಆರೋಗ್ಯ ಮೇಳಕ್ಕೆ ನಾನು ಹೋದಾಗ ಸುಮಾರು 1700 ಪಶುಗಳು ಬೇರೆ ಬೇರೆ ಕಡೆಗಳಿಂದ ಇಲ್ಲಿಗೆ ಬಂದಿವೆ ಮತ್ತು ಆ ಜಾನುವಾರುಗಳ ಆರೋಗ್ಯ, ಆ ಜಾನುವಾರುಗಳ ಆರೋಗ್ಯ ತಪಾಸಣೆಗೆಂದು ಅಲ್ಲಿ ಎಲ್ಲ ತಜ್ಞ ಪಶು ವೈದ್ಯರು ಬಂದಿದ್ದಾರೆ. ಆ ವೈದ್ಯ ಬಂಧುಗಳು ಸಹ ಪಶುಗಳ ಆರೋಗ್ಯದ ಕುರಿತು ಚಿಂತೆ ಮಾಡುತ್ತಿದ್ದಾರೆ. ಉತ್ತರ ಪ್ರದೇಶ ಸರ್ಕಾರವು ಇದೇ ರೀತಿ ಉತ್ತರ ಪ್ರದೇಶದಲ್ಲಿ ‘ಪಶುಧನ ಆರೋಗ್ಯ ಮೇಳ’ ಗಳನ್ನು ಆಯೋಜಿಸುತ್ತದೆ ಮತ್ತು ಈ ಆರೋಗ್ಯ ಮೇಳಗಳ ಮೂಲಕ ಹಣಕಾಸಿನ ತೊಂದರೆಯಿಂದಾಗಿ ಪಶುಗಳನ್ನು ನೋಡಿಕೊಳ್ಳಲು ಹಿಂದೇಟು ಹಾಕುವಂತಹ ಬಡ ರೈತರಿಗೆ ಇಲ್ಲಿ ಸಿಗುವ ಜಾನುವಾರುಗಳ ಆರೋಗ್ಯ ಸೇವೆಯಿಂದಾಗಿ ಬಹಳ ಸಹಾಯವಾಗುತ್ತದೆ ಎಂಬ ವಿಶ್ವಾಸ ನನಗಿದೆ.

ಕೃಷಿ ಕ್ಷೇತ್ರದಲ್ಲಿ, ಕೃಷಿ ಕ್ಷೇತ್ರದಲ್ಲಿ ನಮ್ಮ ರೈತರಿಗೆ ಆದಾಯ ತಂದು ಕೊಡಲು ಎಲ್ಲಕ್ಕಿಂತ ಹೆಚ್ಚು ನೆರವಾಗುತ್ತಿರುವುದು ಪಶುಪಾಲನೆ, ಕ್ಷೀರ ಉತ್ಪಾದನೆ. ಆದ್ದರಿಂದ ಪಶು ಆರೋಗ್ಯ ಮೇಳಗಳ ಮೂಲಕ ಮುಂಬರುವ ದಿನಗಳಲ್ಲಿ ಹಳ್ಳಿಗಳಿಗೆ, ಬಡ ರೈತ, ನಮ್ಮ ಪಶುಪಾಲಕರಿಗೆ ಒಂದು ಉತ್ತಮ ಸೇವೆ, ಸೌಕರ್ಯ ಸಿಗುತ್ತದೆ. ಈ ಕಾರ್ಯಕ್ಕಾಗಿ ಉತ್ತರ ಪ್ರದೇಶ ಸರ್ಕಾರಕ್ಕೆ ಹೃತ್ಪೂರ್ವಕವಾಗಿ ಬಹಳ ಬಹಳ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಸೋದರ ಸೋದರಿಯರೆ, ಹೆಚ್ಚು ಮತಗಳು ಸಿಗುವಂತಹ ಕೆಲಸ ಮಾಡಲು ಇಷ್ಟ ಪಡುವುದು ರಾಜಕಾರಣಿಗಳ ಸ್ವಭಾವವಾಗಿದೆ. ತಮ್ಮ ಮತ ಬ್ಯಾಂಕ್ ಭದ್ರಪಡಿಸಿಕೊಳ್ಳಲು ಅವರು ಕೆಲಸ ಮಾಡುತ್ತಾರೆ. ಆದರೆ ಸೋದರ ಸೋದರಿಯರೆ, ನಾವು ವಿಭಿನ್ನ ಸಂಸ್ಕಾರಗಳಲ್ಲಿ ಹುಟ್ಟಿ ಬೆಳೆದಿದ್ದೇವೆ, ನಮ್ಮ ಇತಿಹಾಸ ವಿಭಿನ್ನವಾಗಿದೆ. ನಮಗೆ ಪಕ್ಷಕ್ಕಿಂತ ದೇಶ ದೊಡ್ಡದು ಮತ್ತು ಪಕ್ಷಕ್ಕಿಂತ ದೇಶ ದೊಡ್ಡದು ಎಂದು ಭಾವಿಸಿರುವುದರಿಂದ ನಮ್ಮ ಅವಶ್ಯಕತೆಗಳು ಮತಗಳ ಲೆಕ್ಕಾಚಾರವನ್ನು ಅವಲಂಬಿಸಿರುವುದಿಲ್ಲ.

ಇಂದಿನ ಈ ಪಶು ಮೇಳವನ್ನು ಯಾವತ್ತೂ ಮತದಾನ ಮಾಡಲು ಹೋಗದ ಜಾನುವಾರುಗಳಿಗೆ ಆರೋಗ್ಯ ಸೇವೆ ಒದಗಿಸುವ ಸಲುವಾಗಿ ಅಯೋಜಿಸಲಾಗಿದೆ. ಈ ಪಶುಗಳು ಯಾರಿಗೂ ಮತದಾರರಲ್ಲ. 70 ವರ್ಷಗಳಿಂದ ಇದುವರೆಗೂ ಜಾನುವಾರುಗಳಿಗಾಗಿ ಇಂತಹ ಅಭಿಯಾನವನ್ನು ಯಾರೂ ನಡೆಸಿಯೇ ಇಲ್ಲ. ಈಗ ಆರೋಗ್ಯ ಸೇವೆ ಸಿಗುವುದರಿಂದ ಹೈನುಗಾರಿಕೆ ಮಾಡುವವರಿಗೆ ಒಂದು ಹೊಸ ಸೌಕರ್ಯ ದೊರಕುತ್ತದೆ, ಒಂದು ಹೊಸ ವ್ಯವಸ್ಥೆ ಆಗುತ್ತದೆ.

ಪ್ರಸ್ತುತ ನಮ್ಮ ದೇಶವು ಕ್ಷೀರ ಉತ್ಪಾದನೆಯಲ್ಲಿ ಸಾಕಷ್ಟು ಮುಂದಿದೆ. ಆದರೆ ಪ್ರಪಂಚದ ಬೇರೆ ಪಶುಗಳಿಗೆ ಹೋಲಿಸಿದರೆ ನಮ್ಮ ದೇಶದ ಪಶುಗಳು ನೀಡುವ ಸರಾಸರಿ ಹಾಲು ಬಹಳ ಕಡಿಮೆ. ಈ ಕಾರಣದಿಂದಾಗಿ ಹೈನುಗಾರಿಕೆ ಮಾಡುವುದು ದುಬಾರಿಯಾಗಿದೆ. ಪ್ರತಿ ಜಾನುವಾರಿನ ಸರಾಸರಿ ಹಾಲು ಉತ್ಪಾದನೆಯನ್ನು ಹೆಚ್ಚಿಸುವಲ್ಲಿ ನಾವು ಯಶಸ್ವಿಯಾದರೆ ನಮ್ಮ ರೈತರಿಗೆ ಹೈನುಗಾರಿಕೆಯಲ್ಲಿ ಆಸಕ್ತಿ ಹೆಚ್ಚುತ್ತದೆ ಮತ್ತು ಕ್ಷೀರ ಉತ್ಪಾದನೆಯ ಮೂಲಕ ಒಂದು ಹೊಸ ಆರ್ಥಿಕ ಕ್ರಾಂತಿಯೂ ಜನ್ಮ ತಳೆಯುತ್ತದೆ.

ಸೋದರ ಸೋದರಿಯರೆ, ನನ್ನ ಜನ್ಮ ಗುಜರಾತಿನಲ್ಲಾಯಿತು, ನನ್ನ ಕಾರ್ಯಕ್ಷೇತ್ರವೂ ಗುಜರಾತ್ ಆಗಿತ್ತು. ಅಲ್ಲಿ ಸಹಕಾರಿ ವ್ಯವಸ್ಥೆಯ ಮೂಲಕ ಕ್ಷೀರ ಉತ್ಪಾದನೆಯಲ್ಲಾದ ಕೆಲಸವು ಅಲ್ಲಿಯ ರೈತರ ಜೀವನಕ್ಕೆ ಹೊಸ ಶಕ್ತಿ ನೀಡಿತು. ಗುಜರಾತ್ ನಿಂದ ಬಂದಿರುವ ಬನಾಸ್ ಡೈರಿಯು ಲಖ್ನೋ – ಕಾನ್ ಪುರ ಭಾಗಗಳ ರೈತರಿಂದ ಹಾಲು ಖರೀದಿಸಲು ಪ್ರಾರಂಭಿಸಿದೆ ಎಂದು ನನಗೆ ತಿಳಿಸಲಾಗಿದೆ. ಈ ಕಾರಣದಿಂದಾಗಿ ಹಾಲಿಗೆ ಈ ಹಿಂದೆ ಸಿಗುತ್ತಿದ್ದ ಬೆಲೆಗಿಂತ ಹಲವು ಪಟ್ಟು ಹೆಚ್ಚು ಬೆಲೆ ರೈತರಿಗೆ ಸಿಗುತ್ತಿದೆ. ಮುಂದಿನ ದಿನಗಳಲ್ಲಿ ಬನಾಸ್ ಡೈರಿಯು ಕಾಶಿ ಕ್ಷೇತ್ರದ ರೈತರಿಂದ ಸಹ ಹಾಲು ಖರೀದಿಸಲು ಆರಂಭಿಸುತ್ತದೆ ಎಂದು ಸಹ ನನಗೆ ತಿಳಿಸಲಾಗಿದೆ.

ಡೈರಿಯ ಮೂಲಕ ಹಾಲು ಖರೀದಿಸುವ, ಕೊಬ್ಬಿನ ಆಧಾರದ ಮೇಲೆ ಹಾಲು ಖರೀದಿಸುವ ಪ್ರಕ್ರಿಯೆ ಆರಂಭವಾದರೆ ಈ ಕಾಶಿ ಕ್ಷೇತ್ರದ ರೈತರಿಗೆ ಸಹ ಹಾಲಿಗೆ ಸಿಗುವ ಬೆಲೆಯಲ್ಲಿ ಭಾರೀ ಹೆಚ್ಚಳವಾಗಲಿದೆ ಮತ್ತು ಅವರ ಆದಾಯವೂ ಹೆಚ್ಚುತ್ತದೆ ಎಂಬ ವಿಶ್ವಾಸ ನನಗಿದೆ. ಆದ್ದರಿಂದ ರೈತರಿಗೆ, ಹೈನುಗಾರಿಕೆಯಲ್ಲಿ ತೊಡಗಿರುವವರಿಗೆ ಗುಜರಾತ್ ಸರ್ಕಾರದ ನೆರವಿನಿಂದ, ಬನಾಸ್ ಡೈರಿಯ ಸಹಾಯದಿಂದ ಉತ್ತರ ಪ್ರದೇಶ ಸರ್ಕಾರವು ನಡೆಸಿರುವ ಅಭಿಯಾನಕ್ಕಾಗಿ ನಾನು ಉತ್ತರ ಪ್ರದೇಶ ಸರ್ಕಾರಕ್ಕೆ ಮತ್ತು ಉತ್ತರ ಪ್ರದೇಶದ ರೈತರಿಗೆ ಶುಭ ಹಾರೈಕೆಗಳನ್ನು ಸಲ್ಲಿಸುತ್ತೇನೆ. ಕ್ಷೀರ ಉತ್ಪಾದನೆ ಮತ್ತು ಹೈನುಗಾರಿಕೆಯನ್ನು ಮುಂದಕ್ಕೆ ತರಲು ನಾವೆಲ್ಲ ಸೇರಿ ಪ್ರಯತ್ನ ಪಡೋಣ.

ಸೋದರ ಸೋದರಿಯರೆ, 2022ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗುತ್ತವೆ. ಭಾರತವು ಸ್ವಾತಂತ್ರ್ಯ ಗಳಿಸಿದ 75ನೆಯ ವರ್ಷವು 2022ರಲ್ಲಿ ಬರುತ್ತದೆ. ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು ಕಂಡ ಕನಸುಗಳನ್ನು ಸಾಕಾರಗೊಳಿಸಲು ನಾವೆಲ್ಲರೂ ಸೇರಿ ಸಂಕಲ್ಪ ಮಾಡಬೇಕು. ಆ ಸಂಕಲ್ಪಕ್ಕಾಗಿ ಐದು ವರ್ಷಗಳು ನಮ್ಮ ಶಕ್ತಿ ಮತ್ತು ಸಮಯವನ್ನು ಮೀಸಲಿಡಬೇಕು, ಆ ಸಂಕಲ್ಪಗಳನ್ನು ಪೂರೈಸಬೇಕು. ಭಾರತದ ನೂರಾ ಇಪ್ಪತ್ತೈದು ಕೋಟಿ ನಾಗರಿಕರು ಒಂದೊಂದು ಸಂಕಲ್ಪ ಮಾಡಿದರೆ ದೇಶವು ಐದು ವರ್ಷಗಳಾಗುವುದರ ಒಳಗೆ ನೂರಾ ಇಪ್ಪತ್ತೈದು ಕೋಟಿ ಹೆಜ್ಜೆ ಮುಂದಿರುತ್ತದೆ. ಆದ್ದರಿಂದ ಸೋದರ ಸೋದರಿಯರೆ, 2022ರಲ್ಲಿ ಬರುವ ಸ್ವಾತಂತ್ರ್ಯೋತ್ಸವಕ್ಕಾಗಿ ಸಂಕಲ್ಪ ಮಾಡೋಣ.

2022ರಲ್ಲಿ ನಮ್ಮ ದೇಶದ ರೈತರ ಆದಾಯ ಎರಡು ಪಟ್ಟು ಹೆಚ್ಚಾಗಬೇಕು ಎನ್ನುವುದು ನಮ್ಮ ಸಂಕಲ್ಪವಾಗಬೇಕು. ಅದಕ್ಕಾಗಿ ಹೈನುಗಾರಿಕೆ ಒಂದು ಮಾರ್ಗವಾದರೆ, ಕೃಷಿಯಲ್ಲಿ ಆಧುನಿಕತೆ ಅಳವಡಿಸಿಕೊಳ್ಳುವುದು ಮತ್ತೊಂದು ಮಾರ್ಗವಾಗಿದೆ. ಮಣ್ಣಿನ ಆರೋಗ್ಯ ಕಾರ್ಡ್ (Soil health card) ಮೂಲಕ ಜಮೀನಿನ ಮಣ್ಣಿನ ಪರೀಕ್ಷೆ ಮಾಡಿಸಿ. ಏನಾದರೂ ವ್ಯತ್ಯಾಸವಿದ್ದರೆ ರೈತರಿಗೆ ಅದನ್ನು ಸರಿಪಡಿಸಲು ನೆರವು ದೊರಕಿಸಿಕೊಡುವುದಕ್ಕೆ ಒತ್ತು ಕೊಟ್ಟು ಈ ದಿಸೆಯಲ್ಲಿ ಕೆಲಸ ಮಾಡುತ್ತಿದ್ದೇವೆ.

ಉತ್ತರ ಪ್ರದೇಶದಲ್ಲೂ ಹೊಸ ಸರ್ಕಾರ ರಚಿಸಿದ ಬಳಿಕ ಮಣ್ಣಿನ ಆರೋಗ್ಯ ಕಾರ್ಡ್ ಕೊಡುವ ಕೆಲಸ ವೇಗವಾಗಿ ನಡೆಯುತ್ತಿದ್ದು, ಇದು ಮುಂಬರುವ ದಿನಗಳಲ್ಲಿ ನಮ್ಮ ರೈತರ ಒಳಿತಿಗೆ ಕೆಲಸಕ್ಕೆ ಬರುತ್ತದೆ.

ಅದೇ ರೀತಿ ನಮ್ಮಲ್ಲಿ ಯಾರೂ ಕೊಳಕಿನಲ್ಲಿ ಜೀವಿಸುವುದಕ್ಕೆ ಇಷ್ಟ ಪಡುವುದಿಲ್ಲ. ಕೊಳಕನ್ನು ದ್ವೇಷಿಸಿದ ಯಾವುದೇ ವ್ಯಕ್ತಿ ಇಲ್ಲ. ಪ್ರತಿಯೊಬ್ಬರಿಗೂ ಅಸ್ವಚ್ಛತೆ ಎಂದರೆ ಅಸಹ್ಯವಾಗುತ್ತದೆ. ಆದರೆ ಸ್ವಚ್ಛತೆಯು ನಮ್ಮ ಹೊಣೆಗಾರಿಕೆಯಾಗಿದೆ ಎಂಬ ಭಾವವು ನಮ್ಮ ದೇಶದ ಜನರಲ್ಲಿ ಇಲ್ಲ. ನಾವು ಗಲೀಜು ಮಾಡುತ್ತೇವೆ, ಸ್ವಚ್ಛತೆಯ ಕೆಲಸವನ್ನು ಬೇರೆ ಯಾರಾದರೂ ಮಾಡುತ್ತಾರೆ ಎಂಬ ಧೋರಣೆಯಿಂದಾಗಿ ನಮ್ಮ ಭಾರತವನ್ನು ಹೇಗೆ ಸ್ವಚ್ಛವಾಗಿಟ್ಟು ಕೊಳ್ಳಬೇಕೊ, ನಮ್ಮ ಹಳ್ಳಿಗಳನ್ನು ಹೇಗೆ ಸ್ವಚ್ಛವಾಗಿಟ್ಟು ಕೊಳ್ಳಬೇಕೊ, ನಮ್ಮ ನಗರಗಳನ್ನು ಹೇಗೆ ಸ್ವಚ್ಛವಾಗಿಟ್ಟುಕೊಳ್ಳಬೇಕೊ ಅದನ್ನು ನಾವು ಮಾಡಲು ಆಗುತ್ತಿಲ್ಲ. ಸ್ವಚ್ಛತೆಯು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಎಂಬ ಮಾತನ್ನು ನಿಮ್ಮಲ್ಲಿ ಯಾರೂ ಅಲ್ಲಗಳೆಯುವುದಿಲ್ಲ. ಸ್ವಚ್ಛತೆಯು ಪ್ರತಿ ಕುಟುಂಬದ ಹೊಣೆಗಾರಿಕೆಯಾಗಿದೆ. ಈ ಸ್ವಚ್ಛತೆ ವಾತಾವರಣಕ್ಕಾಗಿಯಷ್ಟೇ ಅಲ್ಲ, ನಮ್ಮ ಆರೋಗ್ಯಕ್ಕಾಗಿಯೂ ಅತ್ಯವಶ್ಯಕವಾಗಿದೆ. ವಿವಿಧ ರೀತಿಯ ಖಾಯಿಲೆಗಳು ಹೆಚ್ಚಲು ಮೂಲ ಕಾರಣ ಅಸ್ವಚ್ಚತೆ ಆಗಿದೆ.

ಇತ್ತೀಚೆಗೆ ಯೂನಿಸೆಫ್ ಭಾರತದಲ್ಲಿ 10,000 ಕುಟುಂಬಗಳ ಸಮೀಕ್ಷೆ ನಡೆಸಿತು. ಶೌಚಾಲಯ ಕಟ್ಟಿಸುವುದರ ವಿಚಾರವಾಗಿ ಅದು ಸಮೀಕ್ಷೆ ನಡೆಸಿತು. ನಿನ್ನೆ ಒಂದು ಪತ್ರಿಕೆಯಲ್ಲಿ ಮನೆಯಲ್ಲಿ ಶೌಚಾಲಯವಿದ್ದರೆ ಪ್ರತಿವರ್ಷ ಖಾಯಿಲೆಗಳಿಗಾಗಿ ಖರ್ಚು ಮಾಡುವ 50,000 ಹಣ ಉಳಿತಾಯವಾಗುತ್ತದೆ ಎಂದು ಯೂನಿಸೆಫ್ ಹೇಳಿರುವುದನ್ನು ನಾನು ಓದಿದೆ. ಇಂದು ಇಲ್ಲಿಯೇ ಪಕ್ಕದ ಹಳ್ಳಿಯಲ್ಲಿ ಶೌಚಾಲಯ ಕಟ್ಟಿಸುವ ಕೆಲಸ ಮಾಡುವ ಅವಕಾಶ ದೊರಕಿತು. ಅಕ್ಟೋಬರ್ 2ರೊಳಗೆ ಸಂಪೂರ್ಣ ಗ್ರಾಮವನ್ನು ಬಯಲು ಮುಕ್ತ ಶೌಚಾಲಯ ಮಾಡುವುದಾಗಿ ಗ್ರಾಮಸ್ಥರು ನಿರ್ಧರಿಸಿದ್ದಾರೆ. ಹಳ್ಳಿಯ ಯಾವುದೇ ವ್ಯಕ್ತಿಯೂ ಅಕ್ಟೋಬರ್ 2ರ ನಂತರ ಬಯಲಿನಲ್ಲಿ ಶೌಚಕ್ಕೆ ಹೋಗುವುದಿಲ್ಲ ಎಂಬ ಸಂಕಲ್ಪವನ್ನು ಗ್ರಾಮಸ್ಥರು ಮಾಡಿದ್ದಾರೆ. ನವರಾತ್ರಿಯ ಈ ಶುಭ ಸಂದರ್ಭದಲ್ಲಿ ಶೌಚಾಯಲ ಕಟ್ಟಲು ಇಟ್ಟಿಗೆ ಇಡುವ ಸೌಭಾಗ್ಯ ದೊರಕಿರುವುದರಿಂದ ನನಗೆ ಸಂತೋಷವಾಗಿದೆ. ನನ್ನ ಪಾಲಿಗೆ ಅದು ಸಹ ಒಂದು ಪೂಜೆಯಾಗಿದೆ. ಸ್ವಚ್ಛತೆ ಎನ್ನುವುದು ನನ್ನ ಪಾಲಿಗೆ ಪೂಜೆಯಾಗಿದೆ, ಸ್ವಚ್ಛತೆಯು ನನ್ನ ದೇಶದಲ್ಲಿ ಬಡವರಿಗೆ ರೋಗಗಳಿಂದ ಮುಕ್ತಿ ಕೊಡುತ್ತದೆ. ನನ್ನ ದೇಶದಲ್ಲಿ ಬಡವರ ಅನಾರೋಗ್ಯದಿಂದ ಆರ್ಥಿಕ ಹೊರೆಯಾಗಿದ್ದು, ಸ್ವಚ್ಛತೆಯು ಇದರಿಂದ ಮುಕ್ತಿ ಕೊಡಿಸುತ್ತದೆ. ಆದ್ದರಿಂದ ಈ ಬಡವರಿಗೆ ಒಳಿತು ಮಾಡುವ ನನ್ನ ಅಭಿಯಾನ ಮತ್ತು ಇದರಲ್ಲಿ ಜೊತೆಯಾಗುತ್ತಿರುವ ಎಲ್ಲರಿಗೂ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ನಮ್ಮ ದೇಶದಲ್ಲಿ ಶೌಚಾಲಯ ಶಬ್ದವು ಪ್ರಚಲಿತವಾಗಿದೆ. ಆದರೆ ಇಂದು ನಾನು ಶೌಚಾಲಯದ ಅಡಿಪಾಯವನ್ನು ಇಟ್ಟ ಹಳ್ಳಿಯಲ್ಲಿ ಈಗಾಗಲೇ ನಿರ್ಮಿಸಿರುವ ಶೌಚಾಲಯಗಳ ಮೇಲೆ ‘ಇಜ್ಜತ್ ಘರ್’ ಎಂದು ಬರೆದಿದ್ದನ್ನು ನೋಡಿ ನನಗೆ ಸಂತೋಷವಾಯಿತು. ಈ ಪದ ನನಗೆ ನಿಜಕ್ಕೂ ಎಷ್ಟು ಇಷ್ಟವಾಯಿತೆಂದರೆ ಶೌಚಾಲಯ ನಿಜವಾಗಿಯೂ ಒಂದು ಇಜ್ಜತ್ ಘರ್ ಆಗಿದೆ. ವಿಶೇಷವಾಗಿ ಸೋದರಿಯರಿಗೆ, ಹೆಣ್ಣು ಮಕ್ಕಳಿಗೆ ಇದು ಮರ್ಯಾದೆ ನೀಡುವ ಇಜ್ಜತ್ ಘರ್ ಆಗಿದೆ. ಯಾರ ಮನೆಯಲ್ಲಿ ಇಜ್ಜತ್ ಘರ್ ಇದೆಯೊ, ಅವರ ಮನೆಗೆ ಮರ್ಯಾದೆಯಿದೆ. ಆದ್ದರಿಂದ ಈ ಇಜ್ಜತ್ ಘರ್ ಎಂಬ ಪದವನ್ನು ನೀಡಿದ್ದಕ್ಕಾಗಿ, ಶೌಚಾಲಯವನ್ನು ಇಜ್ಜತ್ ಘರ್ ಎಂಬ ಹೆಸರಿನಿಂದ ಗುರುತಿಸಿದ್ದಕ್ಕಾಗಿ ನಾನು ಉತ್ತರ ಪ್ರದೇಶ ಸರ್ಕಾರವನ್ನು ಅಭಿನಂದಿಸುತ್ತೇನೆ. ಅವರು ಶೌಚಾಲಯದ ಪ್ರತಿಷ್ಠೆಯನ್ನು ಹೆಚ್ಚಿಸಿದ್ದಾರೆ. ಮುಂದಿನ ದಿನಗಳಲ್ಲಿ ಮರ್ಯಾದೆಯ ವಿಷಯದಲ್ಲಿ ಜಾಗೃತರಾಗಿರುವ, ಮರ್ಯಾದೆಯ ಕುರಿತು ಚಿಂತೆಯಿರುವವರೆಲ್ಲರೂ ಇಜ್ಜತ್ ಘರ್ ಕಟ್ಟಿಸುತ್ತಾರೆ. ಅವರು ಖಂಡಿತವಾಗಿ ಇಜ್ಜತ್ ಘರ್ ಉಪಯೋಗಿಸಿ ಇಜ್ಜತ್ ವಾನ್ ಅಂದರೆ ಮರ್ಯಾದೆಯುಳ್ಳವರಾಗುತ್ತಾರೆ ಎಂಬ ವಿಶ್ವಾಸ ನನಗಿದೆ.

ಸೋದರ ಸೋದರಿಯರೆ, ನಮ್ಮ ದೇಶದಲ್ಲಿ ಇಂದಿಗೂ ಕೋಟ್ಯಂತರ ಕುಟುಂಬಗಳಿಗೆ ವಾಸಿಸಲು ಸ್ವಂತ ಮನೆ ಇಲ್ಲ, ತಮ್ಮದೆಂಬ ಸ್ವಂತ ಸೂರು ಇಲ್ಲ, ಅವರು ಬದುಕುತ್ತಿರುವ ರೀತಿ ಯಾವುದೇ ವ್ಯಕ್ತಿಯ ಪಾಲಿಗೆ ಬಹಳ ದಯನೀಯವಾಗಿರುತ್ತದೆ. ಸೋದರ ಸೋದರಿಯರೆ, ಕಡುಬಡವರಿಗೂ ಒಂದು ಸ್ವಂತ ಸೂರು ಕೊಡುವ, ಕಡು ಬಡವರೂ ವಾಸಿಸುವುದಕ್ಕೆ ಮನೆ ಕೊಡುವುದು ನಮ್ಮ ಜವಾಬ್ದಾರಿಯಾಗಿದೆ.

ಆದ್ದರಿಂದ ಸೋದರ ಸೋದರಿಯರೆ, ನಾನೊಂದು ಅಭಿಯಾನವನ್ನು ಕೈಗೆತ್ತಿಕೊಂಡಿದ್ದೇನೆ. ನಾನು ಕೈಗೆತ್ತಿಕೊಂಡಿರುವ ಕೆಲಸ ಬಹಳ ಕಠಿಣವಾದುದು ಎಂದು ನನಗೆ ಗೊತ್ತು. ಆದರೆ ಇಂತಹ ಕಠಿಣ ಕೆಲಸವನ್ನು ನಾನು ಮಾಡದೆ ಇನ್ನಾರು ಮಾಡುತ್ತಾರೆ? ಆದ್ದರಿಂದ ಸೋದರರೆ, 2022ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗುವಷ್ಟರಲ್ಲಿ ಭಾರತದ ಪ್ರತಿಯೊಬ್ಬ ಬಡವನಿಗೂ ಸ್ವಂತ ಮನೆ ಕೊಡಬೇಕು ಎಂದು ನಾವು ನಿರ್ಧರಿಸಿದ್ದೇವೆ. ಬಡವರು ಪಟ್ಟಣದಲ್ಲೇ ಇರಲಿ, ಹಳ್ಳಿಯಲ್ಲೇ ಇರಲಿ ಮನೆ ಇಲ್ಲದವರಿಗೆ ಮನೆ ಕೊಡಬೇಕೆಂದು ನಾವು ಒಂದು ಬಹು ದೊಡ್ಡ ಅಭಿಯಾನವನ್ನೇ ಕೈಗೆತ್ತಿಕೊಂಡಿದ್ದೇವೆ. ಕೋಟ್ಯಂತರ ಸಂಖ್ಯೆಯಲ್ಲಿ ಮನೆಗಳನ್ನು ನಿರ್ಮಿಸಬೇಕಿದೆ, ಭಾರತದಲ್ಲಿ ಎಷ್ಟು ಮನೆಗಳನ್ನು ನಿರ್ಮಿಸಬೇಕಿದೆ ಎಂದರೆ ಒಂದು ರೀತಿಯಲ್ಲಿ ಯೂರೋಪ್ ನ ಒಂದು ಸಣ್ಣ ದೇಶದಷ್ಟು ಜಾಗ ಹಿಡಿಯುವಷ್ಟು ಮನೆಗಳನ್ನು ಭಾರತದಲ್ಲಿ ನಿರ್ಮಿಸಬೇಕಿದೆ, ಇಷ್ಟು ದೊಡ್ಡ ಸಂಖ್ಯೆಯಲ್ಲಿ ಮನೆಗಳನ್ನು ನಿರ್ಮಿಸಬೇಕಿದೆ. ಹೊಸ ಮನೆಗಳನ್ನು ಕಟ್ಟಬೇಕೆಂದರೆ ಇಟ್ಟಿಗೆ, ಸಿಮೆಂಟ್, ಕಬ್ಬಿಣ, ಮರಮುಟ್ಟು ಬೇಕಾಗುತ್ತದೆ. ಹೊಸ ಹೊಸ ಜನರಿಗೆ ಉದ್ಯೋಗ ಸಿಗುತ್ತದೆ, ಮೇಸ್ತ್ರಿಗಳಿಗೆ ಕೆಲಸ ಸಿಗುತ್ತದೆ. ಕೋಟ್ಯಂತರ ಮನೆಗಳನ್ನು ನಿರ್ಮಿಸುವಾಗ ಉದ್ಯೋಗದ ಒಂದು ಅವಕಾಶಗಳು ಸೃಷ್ಟಿಯಾಗುತ್ತವೆ.

ಉತ್ತರ ಪ್ರದೇಶದಲ್ಲಿ ಹಿಂದೆ ಇದ್ದ ಸರ್ಕಾರವು ನಮಗೆ ಪತ್ರಗಳನ್ನು ಬರೆಯುತ್ತಿತ್ತು. ನಿಮ್ಮ ರಾಜ್ಯದಲ್ಲಿ ಮನೆಗಳು ಇಲ್ಲದ ಕುಟುಂಬಗಳು ಎಷ್ಟಿವೆ? ಅವರ ಪಟ್ಟಿ ನೀಡಿ, ಭಾರತ ಸರ್ಕಾರವು ಯೋಜನೆ ಹಾಕಿಕೊಳ್ಳಲು ಬಯಸುತ್ತದೆ ಎಂದು ನಾವು ಅವರಿಗೆ ಹೇಳುತ್ತಿದ್ದೆವು. ಆದರೆ ಹಿಂದಿನ ಸರ್ಕಾರಕ್ಕೆ ಬಡವರಿಗೆ ಮನೆಗಳನ್ನು ನಿರ್ಮಿಸುವುದರಲ್ಲಿ ಆಸಕ್ತಿ ಇರಲಿಲ್ಲ ಎಂದು ನಾನು ದುಃಖದಿಂದ ಹೇಳಬೇಕಾಗಿದೆ. ನಾವು ಪದೇ ಪದೇ ಅದೆಷ್ಟು ಒತ್ತಡ ಹಾಕಿದೆವು ಎಂದರೆ ಕೊನೆಗೆ ಕಷ್ಟದಿಂದ 10,000 ಜನರ ಪಟ್ಟಿ ನೀಡಿದರು. ಆದರೆ ಯೋಗಿ ಅವರ ಸರ್ಕಾರ ಬಂದ ಕೂಡಲೇ ಬೇಗಬೇಗನೇ ಕೆಲಸ ಪ್ರಾರಂಭಿಸಿದರು ಮತ್ತು ಲಕ್ಷಾಂತರ ಸಂಖ್ಯೆಯಲ್ಲಿ ಮನೆಯಿಲ್ಲದವರ ಹೆಸರುಗಳನ್ನು ದಾಖಲಿಸಿದರು. ಇದಿಷ್ಟೇ ಇಲ್ಲ, ಇಂದು ಮನೆ ಕಟ್ಟಬೇಕಿರುವ ಎಲ್ಲರಿಗೂ ಹಣ ಕೊಡುವ ಸೌಭಾಗ್ಯವೂ ನನ್ನದಾಗಿದೆ.

ಸೋದರ ಸೋದರಿಯರೆ, ಸ್ವಚ್ಛತೆಯ ವಿಷಯವಾಗಲಿ, ಹಳ್ಳಿಗಳಿಗೆ ವಿದ್ಯುತ್ ತಲುಪಿಸುವ ವಿಷಯವಾಗಲಿ, ಶಾಲೆಗಳಲ್ಲಿ ಶೌಚಾಲಯಗಳ ನಿರ್ಮಾಣವಾದ ವಿಷಯವಾಗಲಿ, ಬಯಲಿನಲ್ಲಿ ಶೌಚ ಮಾಡುವುದರಿಂದ ಹಳ್ಳಿಗಳನ್ನು ಮುಕ್ತಗೊಳಿಸುವ ವಿಷಯವಾಗಲಿ, ಮನೆಮನೆಗೆ ವಿದ್ಯುತ್ ಪೂರೈಸುವ ವಿಷಯವಾಗಲಿ, ಮನೆಮನೆಗೂ ಶುದ್ಧ ನೀರು ಪೂರೈಕೆಯ ವಿಷಯವಾಗಲಿ, ಈ ಎಲ್ಲ ಕೆಲಸಗಳೆಂದರೆ ನಮ್ಮ ದೇಶದಲ್ಲಿ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.

ನನ್ನ ಹಳ್ಳಿಯ, ಬಡ ಕುಟುಂಬದ ಜೀವನ ಬದಲಾದರೆ, ನಮ್ಮ ಮಧ್ಯಮ ವರ್ಗದ ಕುಟುಂಬದ ಜೀವನ ಬದಲಾದರೆ ದೇಶವನ್ನು ನಾವು ಯಾವ ರೀತಿಯಲ್ಲಿ ಕಟ್ಟಬೇಕೆಂದು ಬಯಸುತ್ತೇವೋ, ಅದೇ ರೀತಿ ಕಟ್ಟಲು ಸಾಧ್ಯವಾಗುತ್ತದೆ. ಇದರ ಮೊದಲ ಷರತ್ತು ಎಂದರೆ ನಮ್ಮ ಮಧ್ಯಮ ವರ್ಗದ ಕುಟುಂಬಗಳಿಗೆ ನೆರವು ಸಿಗಬೇಕು, ನಮ್ಮ ಬಡ ಕುಟುಂಬಗಳಿಗೆ ನೆರವು ಸಿಗಬೇಕು, ಅವರ ಜೀವನದಲ್ಲಿ ಬದಲಾವಣೆ ಬರಬೇಕು. ಆದ್ದರಿಂದ ಆ ಎಲ್ಲ ಯೋಜನೆಗಳನ್ನು ಬದಲಿಸಿ ಅವುಗಳಿಗೆ ಹೊಸ ಶಕ್ತಿ ನೀಡಿದ್ದೇವೆ, ಈ ಕಾರಣದಿಂದಾಗಿ ನಮ್ಮ ದೇಶದಲ್ಲಿ ಒಂದು ಬಹು ದೊಡ್ಡ ಬದಲಾವಣೆ ತಂದಿದ್ದೇವೆ.

ಸೋದರ ಸೋದರಿಯರೆ, ಬನಾರಸ್ ನಲ್ಲಿ ಸಹ ಸ್ವಚ್ಛತೆಯ ಕೆಲವು ಯೋಜನೆಗಳನ್ನು ಉದ್ಘಾಟಿಸುವ ಅವಕಾಶವು ನನಗೆ ದೊರಕಿತು. ಸುಮಾರು 600 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಅಲ್ಲಿ STP(Sewage treatment Plant) ನಿರ್ಮಿಸಿದ್ದೇವೆ. ಇದು ಎಷ್ಟು ಬೃಹತ್ತಾಗಿದೆಯೆಂದರೆ ಇಂದಿಗೆ 20 ವರ್ಷ ಕಳೆದ ನಂತರವೂ ಬನಾರಸ್ ವಿಶಾಲವಾಗಿ ಬೆಳೆದಿದ್ದರೂ ಈಗ ಅಳವಡಿಸಿರುವ ಎಸ್ ಟಿಪಿ ಕಡಿಮೆ ಎನಿಸುವುದಿಲ್ಲ. 20 ವರ್ಷಗಳ ಬಳಿಕವೂ ಇದು ಸಾಲದು ಎನಿಸದಷ್ಟು ಬಹು ದೊಡ್ಡದಾಗಿರಬೇಕೆಂದು ನಾವು ನಿರ್ಧರಿಸಿದ್ದೇವೆ.

ನಾವು waste ನಿಂದ wealth, ಕಸವನ್ನು ರಸವಾಗಿಸುವ ಕಡೆಗೂ ಒತ್ತು ನೀಡಿದ್ದೇವೆ. ಕಸವನ್ನು ರಸವಾಗಿಸುವುದಕ್ಕೆ ಒತ್ತು ಕೊಡುವುದರ ಜೊತೆಗೆ ಕಸದಿಂದ ವಿದ್ಯುತ್ ತಯಾರಿಸುವ ಕೆಲಸವನ್ನು ಮಾಡಲಾಗುತ್ತದೆ. ಹೀಗೆ ಕಸದಿಂದ ವಿದ್ಯುತ್ ತಯಾರಿಸಿ 40 ಸಾವಿರ ಮನೆಗಳಿಗೆ ವಿದ್ಯುತ್ ಪೂರೈಸಲಾಗುತ್ತದೆ. ನಾವು LED ದೀಪಗಳ ಒಂದು ಅಭಿಯಾನವನ್ನು ನಡೆಸಿದೆವು. ಕಾಶಿ ಒಂದರಲ್ಲೇ ಅದೆಷ್ಟು LED ದೀಪಗಳನ್ನು ಮನೆಗಳಲ್ಲಿ ಅಳವಡಿಸಲಾಗಿದೆ ಎಂದರೆ ಅದರಿಂದಾಗಿ ಪ್ರತಿ ಕುಟುಂಬದ ವಿದ್ಯುತ್ ಬಿಲ್ ಕಡಿಮೆಯಾಗಿದೆ. ನಾನು ಒಟ್ಟು ವಿದ್ಯುತ್ ಉಳಿತಾಯದ ಲೆಕ್ಕ ಕೇಳಿದಾಗ ಅಧಿಕಾರಿಗಳು ಕಾಶಿ ಒಂದರಲ್ಲೇ LED ದೀಪಗಳ ಅಳವಡಿಕೆಯಿಂದ ಪ್ರತಿ ವ್ಯಕ್ತಿಗೆ ಉಳಿಯುವ ವಿದ್ಯುತ್ ಬಿಲ್ ನ ಹಣವನ್ನು ಒಟ್ಟು ಸೇರಿಸಿದರೆ 125 ಕೋಟಿ ರೂಪಾಯಿಗಳಾಗುತ್ತದೆ ಎಂದು ಹೇಳಿದರು. ಸಾಮಾನ್ಯ ಜನರ ಜೇಬಿನಲ್ಲಿ ಹಣದ ಉಳಿತಾಯವಾಗುತ್ತದೆ, ಒಬ್ಬರಿಗೆ 500 ಉಳಿಯುತ್ತದೆ, ಮತ್ತೊಬ್ಬರಿಗೆ 1000 ಉಳಿಯುತ್ತದೆ, ಮಗದೊಬ್ಬರಿಗೆ 250 ಉಳಿಯುತ್ತದೆ ಮತ್ತು ಇಡೀ ಪಟ್ಟಣವು 125 ಕೋಟಿ ಉಳಿಸುವುದೆಂದರೆ ಅದು ಬಡ ಮತ್ತು ಮಧ್ಯಮ ವರ್ಗದ ಹೊರೆಯನ್ನು ಕಡಿಮೆ ಮಾಡುವ ನಮ್ಮ ಉತ್ತಮ ಪ್ರಯತ್ನವಾಗಿದೆ.

ಇದಿಷ್ಟೇ ಅಲ್ಲ, ಕಾಶಿಯಲ್ಲಿ ಈಗ ಅಳವಡಿಸಲಾಗಿರುವ ಬೀದಿ ದೀಪಗಳು ಸಹ LED ದೀಪಗಳೇ ಆಗಿವೆ. ಬೀದಿ ದೀಪ ಅಳವಡಿಸುವುದರಿಂದ ಕೇವಲ ಕಾಶಿಯೊಂದರಲ್ಲೇ ಸುಮಾರು13 ಕೋಟಿ ರೂಪಾಯಿಗಳ ವಿದ್ಯುತ್ ಬಿಲ್ ಕಡಿಮೆಯಾಗಿದೆ.ಕಾಶಿ ನಗರ ನಿಗಮಕ್ಕೆ 13 ಕೋಟಿ ರೂಪಾಯಿ ಉಳಿತಾಯವಾಗಿದೆ. ಈಗ ಈ 13 ಕೋಟಿ ರೂಪಾಯಿಗಳನ್ನು ಕಾಶಿಯ ಇನ್ನಷ್ಟು ಪ್ರಗತಿಯ ಕೆಲಸಗಳಿಗೆ ಬಳಸಬಹುದು. ಕೇವಲ LED ದೀಪಗಳನ್ನು ಅಳವಡಿಸಿದ್ದರಿಂದ ನಾಗರಿಕರಿಗೆ 125 ಕೋಟಿ ಮತ್ತು ನಗರ ನಿಗಮಕ್ಕೆ 13 ಕೋಟಿ ಉಳಿಯುವುದೆಂದರೆ ನಾವು ಯಾವ ರೀತಿಯ ಬದಲಾವಣೆಗಳನ್ನು ತರುತ್ತಿದ್ದೇವೆಂದು ತಿಳಿಯುತ್ತದೆ.

ಸೋದರ ಸೋದರಿಯರೆ, ಕಪ್ಪು ಹಣವಾಗಲಿ, ಭ್ರಷ್ಟಾಚಾರವಾಗಲಿ, ಅಪ್ರಾಮಾಣಿಕತೆಯಾಗಲಿ, ಅದರ ವಿರುದ್ಧ ನಾನು ಒಂದು ದೊಡ್ಡ ಯುದ್ಧವನ್ನು ಸಾರಿದ್ದೇನೆ. ಈ ದೇಶದ ಸಾಮಾನ್ಯ ಪ್ರಾಮಾಣಿಕ ವ್ಯಕ್ತಿ ಎಂತಹ ಸಂಕಷ್ಟಗಳನ್ನು ಅನುಭವಿಸಬೇಕಾಗುತ್ತಿದೆ. ಏಕೆಂದರೆ ಅಪ್ರಾಮಾಣಿಕರು ಪ್ರಾಮಾಣಿಕನ ಪ್ರಾಮಾಣಿಕತೆಯನ್ನು ಲೂಟಿ ಮಾಡುತ್ತಿದ್ದಾರೆ. ಆದ್ದರಿಂದ ಸೋದರ ಸೋದರಿಯರೆ, ಪ್ರಾಮಾಣಿಕತೆಯ ಈ ಅಭಿಯಾನವು ಒಂದು ಉತ್ಸವ ರೂಪ ತಾಳುತ್ತಿದೆ. ಜಿಎಸ್ ಟಿ ಜಾರಿಗೆ ತಂದಿದ್ದರಿಂದ ಸಣ್ಣ ಸಣ್ಣ ವ್ಯಾಪಾರಿಗಳು ಸಹ ಇದರ ವ್ಯಾಪ್ತಿಗೆ ಬರುತ್ತಿದ್ದಾರೆ, ಜನರು ಆಧಾರ್ ಗೆ ಲಿಂಕ್ ಆಗುತ್ತಿರುವುದರಿಂದ ಎಲ್ಲೋ ಸೋರಿಹೋಗುತ್ತಿದ್ದ ಆ ಎಲ್ಲ ಹಣ, ಜನರ ಪೈಸೆ ಪೈಸೆ ಹಣವನ್ನು ಜನತೆಯ ಒಳಿತಿಗೆಂದೇ ಖರ್ಚು ಮಾಡಲಾಗುವುದು, ಈ ಕೆಲಸವನ್ನು ನಾವು ಪ್ರಾರಂಭಿಸಿದ್ದೇವೆ. ಇದು ಬಹಳ ವೇಗವಾಗಿ ಆಗುತ್ತಿದೆ. ಆದ್ದರಿಂದ ನನ್ನ ಸೋದರ ಸೋದರಿಯರೆ, ಇಲ್ಲಿಯ ಹಳ್ಳಿಗಳು, ಬಡವರು ಮತ್ತು ರೈತರ ಪ್ರಗತಿ, ನಮ್ಮ ಪಟ್ಟಣಗಳ ಪ್ರಗತಿ ಮಂತ್ರವನ್ನು ಜಪಿಸುತ್ತಾ ನಾವು ಮುನ್ನಡೆಯುತ್ತಿದ್ದೇವೆ. ನೀವು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಇಲ್ಲಿಗೆ ಬಂದು ಆಶೀರ್ವಾದ ನೀಡಿದ್ದೀರಿ, ನಾನು ಹೃತ್ಪೂರ್ವಕವಾಗಿ ನಿಮಗೆ ಆಭಾರಿಯಾಗಿದ್ದೇನೆ.

ಇಲ್ಲಿಯ ಸಂಸದರಾದ ನಮ್ಮ ಮಹೇಂದ್ರ ಪಾಂಡೆ ಅವರು ಅದೆಷ್ಟು ಶಕ್ತಿ, ಉತ್ಸಾಹವನ್ನು ತೋರಿಸಿದ್ದಾರೆ, ಇದಕ್ಕಾಗಿ ಅವರಿಗೆ ನಾನು ಹೃತ್ಪೂರ್ವಕವಾಗಿ ಆಭಾರಿಯಾಗಿದ್ದೇನೆ. ನಾನು ಮತ್ತೊಮ್ಮೆ ಯೋಗಿ ಸರ್ಕಾರದ ಮಹತ್ವಪೂರ್ಣ ಹೆಜ್ಜೆಗಳಿಗಾಗಿ ಅಭಿನಂದಿಸುತ್ತೇನೆ ಮತ್ತು ಕೇವಲ ಆರು ತಿಂಗಳಲ್ಲಿ ಅವರು ಉತ್ತರ ಪ್ರದೇಶದಲ್ಲಿ ಬದಲಾವಣೆ ತರುವ ಅಭಿಯಾನವನ್ನು ಕೈಗೆತ್ತಿಕೊಂಡಿದ್ದಾರೆ, ಯಶಸ್ವಿಯಾಗಿ ಮುಂದೆ ಸಾಗುತ್ತಿದ್ದಾರೆ.

ಅವರಿಗೆ ನಾನು ಬಹಳ ಬಹಳ ಧನ್ಯವಾದಗಳನ್ನು ಸಲ್ಲಿಸುತ್ತೇನೆ.

ನನ್ನ ಜೊತೆ ಜೋರಾಗಿ ಹೇಳಿ – ಭಾರತಮಾತೆಗೆ

ಜಯವಾಗಲಿ. ಎಲ್ಲ ಶಕ್ತಿ ಒಗ್ಗೂಡಿಸಿ ಹೇಳಿ – ಭಾರತಮಾತೆಗೆ ಜಯವಾಗಲಿ.

ಭಾರತಮಾತೆಗೆ ಜಯವಾಗಲಿ

ಭಾರತಮಾತೆಗೆ ಜಯವಾಗಲಿ

ಭಾರತಮಾತೆಗೆ ಜಯವಾಗಲಿ

ಬಹಳ ಬಹಳ ಧನ್ಯವಾದಗಳು!