Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವಿಡಿಯೋ ಬ್ರಿಜ್ ಮೂಲಕ ದೇಶಾದ್ಯಂತದ ಸ್ವಸಹಾಯ ಗುಂಪುಗಳ ಸದಸ್ಯರೊಂದಿಗೆ ಸಂವಾದ ನಡೆಸಿದ ಪ್ರಧಾನಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ವಿಡಿಯೋ ಬ್ರಿಜ್ ಮೂಲಕ ದೇಶಾದ್ಯಂತದ ಸ್ವಸಹಾಯ ಗುಂಪುಗಳ ಸದಸ್ಯರು ಮತ್ತು ದೀನ್ ದಯಾಳ್ ಅಂತ್ಯೋದಯ ಯೋಜನೆಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ಈ ಸಂವಾದವು ಒಂದು ಕೋಟಿ ಮಹಿಳೆಯರು ಪ್ರತಿನಿಧಿಸುವ ವಿವಿಧ ಸ್ವಸಹಾಯ ಗುಂಪುಗಳನ್ನು ವ್ಯಾಪಿಸಿತ್ತು. ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ಪ್ರಧಾನಮಂತ್ರಿಯವರು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸುತ್ತಿರುವ ಸಂವಾದದ 9ನೇ ಸಂವಾದ ಇದಾಗಿದೆ.

ವಿವಿಧ ರಾಜ್ಯಗಳ ಸ್ವಸಹಾಯ ಗುಂಪುಗಳ ಮಹಿಳೆಯರೊಂದಿಗೆ ಸಂವಾದ ನಡೆಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಪ್ರಧಾನಿ, ಪ್ರತಿಯೊಬ್ಬ ಸದಸ್ಯರೂ ಉದ್ಯಮಶೀಲತೆ, ಸಂಘಟಿತ ಪ್ರಯತ್ನ ಮತ್ತು ಸಂಕಲ್ಪಕ್ಕೆ ಸ್ಫೂರ್ತಿದಾಯಕ ಉದಾಹರಣೆಯಾಗಿದ್ದಾರೆ ಎಂದರು. ಮಹಿಳೆಯರು ಉದ್ಯಮಶೀಲರಾಗಿದ್ದಾರೆ, ಅವರಲ್ಲಿ ಪ್ರತೀಕೂಲ ಪರಿಸ್ಥಿತಿಯಲ್ಲೂ ಸ್ವಯಂ ಅವಲಂಬನೆಯ ಅಪಾರವಾದ ಅಂತಃಶಕ್ತಿಯಿದೆ ಅವರಿಗೆ ಅದನ್ನು ಪ್ರದರ್ಶಿಸಲು ಅವಕಾಶ ಮಾತ್ರ ಬೇಕಿದೆ ಎಂದರು. ಮಹಿಳೆಯರ ಕೊಡುಗೆ ಇಲ್ಲದ ಹಲವು ವಲಯಗಳನ್ನು ಅದರಲ್ಲೂ ಕೃಷಿ ಮತ್ತು ಹೈನುಗಾರಿಕೆಯನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ ಎಂದರು. ಇದು ನಮ್ಮ ದೇಶಾದ್ಯಂತ ಮಹಿಳೆಯರ ನೈಜ ಸ್ಫೂರ್ತಿ ಎಂದರು.

ದೀನ್ ದಯಾಳ್ ಅಂತ್ಯೋದಯ ಯೋಜನೆ – ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನವನ್ನು ಎಲ್ಲ ರಾಜ್ಯಗಳಲ್ಲಿಯೂ ಆರಂಭಿಸಲಾಗಿದೆ ಎಂದು ಪ್ರಧಾನಿ, ಸಂವಾದದ ವೇಳೆ ತಿಳಿಸಿದರು. ಈ ಯೋಜನೆಯ ಗುರಿ 2.5 ಲಕ್ಷ ಗ್ರಾಮ ಪಂಚಾಯ್ತಿಗಳ ಕೋಟ್ಯಂತರ ಬಡ ಕುಟುಂಬಗಳನ್ನು ತಲುಪಿ, ಅವರಿಗೆ ಸುಸ್ಥಿರ ಜೀವನೋಪಾಯದ ಅವಕಾಶ ಒದಗಿಸುವುದಾಗಿದೆ ಎಂದೂ ಅವರು ತಿಳಿಸಿದರು. ಯೋಜನೆಯನ್ನು ಯಶಸ್ವಿಯಾಗಿ ಜಾರಿ ಮಾಡಿರುವ ಅಧಿಕಾರಿಗಳು ಮತ್ತು ಎಲ್ಲ ರಾಜ್ಯಗಳಿಗೆ ಅವರು ಅಭಿನಂದನೆ ಸಲ್ಲಿಸಿದರು.

ಸ್ವಸಹಾಯ ಗುಂಪುಗಳ ಬಗ್ಗೆ ಮಾತನಾಡಿದ ಪ್ರಧಾನಿ, ಸ್ವಸಹಾಯ ಗುಂಪುಗಳು ಬಡವರ ಅದರಲ್ಲೂ ಗ್ರಾಮೀಣ ಸಮಾಜದಲ್ಲಿನ ಮಹಿಳೆಯರ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಯ ಸುಧಾರಣೆಯಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತವೆ ಎಂದರು. 2011-2014ರ ಸಾಲಿಗೆ ಹೋಲಿಸಿದರೆ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಸ್ವಸಹಾಯ ಗುಂಪುಗಳ ಸಂಖ್ಯೆ ನಾಲ್ಕುಪಟ್ಟು ಹೆಚ್ಚಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಉದ್ಯಮಶೀಲರನ್ನು ಮತ್ತು ಉದ್ಯೋಗಗಳನ್ನು ಸೃಷ್ಟಿಸಿದೆ ಎಂದರು. 2011-2014ರ ಮೂರು ವರ್ಷಗಳ ಅವಧಿಯಲ್ಲಿ ಕೇವಲ 5 ಲಕ್ಷ ಸ್ವ ಸಹಾಯ ಗುಂಪುಗಳು ರಚನೆಯಾಗಿ 52 ಲಕ್ಷ ಕುಟುಂಬಗಳನ್ನು ಬೆಸೆದಿದ್ದವು. ಆದರೆ, 2014ರಿಂದ ಹೆಚ್ಚುವರಿಯಾಗಿ 20 ಲಕ್ಷಕ್ಕೂ ಹೆಚ್ಚು ಸ್ವಸಹಾಯ ಗುಂಪುಗಳು ರೂಪುಗೊಂಡಿದ್ದು 2.25 ಕೋಟಿ ಕುಟುಂಬಗಳು ಇದರ ವ್ಯಾಪ್ತಿಯಲ್ಲಿವೆ ಎಂದರು.

ಸರ್ಕಾರ ಕೂಡ ದೇಶಾದ್ಯಂತ ಸ್ವಸಹಾಯ ಗುಂಪುಗಳನ್ನು ಉತ್ತೇಜಿಸಲು ತರಬೇತಿ, ಆರ್ಥಿಕ ನೆರವು ಮತ್ತು ಅವಕಾಶಗಳನ್ನು ಒದಗಿಸುತ್ತಿದೆ. ಮಹಿಳಾ ಕಿಸಾನ್ ಸಶಕ್ತೀಕರಣ ಪರಿಯೋಜನೆಯ ಮೂಲಕ 33 ಲಕ್ಷ ಕೃಷಿಕ ಮಹಿಳೆಯರಿಗೆ ತರಬೇತಿ ನೀಡಲಾಗಿದೆ ಎಂದರು. ಪ್ರಸ್ತುತ ಗ್ರಾಮೀಣ ಭಾರತದಾದ್ಯಂತ 45 ಲಕ್ಷ ಸ್ವಸಹಾಯ ಗುಂಪುಗಳು ಸಕ್ರಿಯವಾಗಿದ್ದು, 5 ಕೋಟಿ ಮಹಿಳೆಯರು ಇದರಲ್ಲಿದ್ದಾರೆ ಎಂದರು.

ದೀನ್ ದಯಾಳ್ ಅಂತ್ಯೋದಯ ಯೋಜನೆಯ ಮೂಲಕ ಗ್ರಾಮೀಣ ಯುವಜನರಿಗೆ ಕೌಶಲ ಅಭಿವೃದ್ಧಿಗಾಗಿ ವಿಶೇಷ ಒತ್ತು ನೀಡಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು. ಯುವಜನರ ಉತ್ತಮ ಜೀವನಕ್ಕಾಗಿ ಯುವಕರಿಗೆ ವೃತ್ತಿಗಾಗಿ ಮತ್ತು ಯುವಕರ ಸ್ವಉದ್ಯೋಗ ಆಶೋತ್ತರಗಳ ಈಡೇರಿಕೆಗೂ ತರಬೇತಿ ನೀಡಲಾಗುತ್ತಿದೆ ಎಂದರು. 600 ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಗಳ ಮೂಲಕ 28 ಲಕ್ಷ ಯುವಜನರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಗಿದ್ದು, 19 ಲಕ್ಷ ಯುವಜನರು ಉದ್ಯೋಗ ಪಡೆದಿದ್ದಾರೆ ಎಂದರು.

ಸಂವಾದದ ವೇಳೆ ಪ್ರಧಾನಮಂತ್ರಿಯವರು, ಮೌಲ್ಯವರ್ಧನೆ ಮತ್ತು ಮೌಲ್ಯ ಸರಣಿಯ ದೃಷ್ಟಿಕೋನದ ಮಹತ್ವದ ಬಗ್ಗೆ ಮಾತನಾಡಿದರು. ಸರ್ಕಾರದ ಇ-ಮಾರುಕಟ್ಟೆ ತಾಣ (ಜಿಇಎಂ)ನಲ್ಲಿ ನೋಂದಾಯಿಸಿಕೊಂಡು ತಮ್ಮ ಉತ್ಪನ್ನ ಮಾರಾಟ ಮಾಡುವಂತೆ ಮನವಿ ಮಾಡಿದರು.

ಪ್ರಧಾನಿಯವರೊಂದಿಗೆ ಸಂವಾದ ನಡೆಸಿದ ಸದಸ್ಯರು, ತಮ್ಮ ಅನುಭವ ಮತ್ತು ಸ್ವಸಹಾಯ ಗುಂಪುಗಳಿಗೆ ಸಂಬಂಧಿಸಿದ ಯಶೋಗಾಥೆಯನ್ನು ಹಂಚಿಕೊಂಡರು. ಪ್ರಧಾನಮಂತ್ರಿಯವರು ಬಡ ಮಹಿಳೆಯರು ಆತ್ಮ ವಿಶ್ವಾಸ ಮತ್ತು ಬಲದಿಂದ ಎಲ್ಲ ಸಂಕಷ್ಟಗಳ ವಿರುದ್ಧ ಹೇಗೆ ಹೋರಾಡುತ್ತಿದ್ದಾರೆ ಎಂದು ತಿಳಿಸಿದರು. ಮಹಿಳಾ ಫಲಾನುಭವಿಗಳು ಕೂಡ ಹೇಗೆ ಸ್ವ ಸಹಾಯ ಗುಂಪುಗಳು ಹೇಗೆ ತಮ್ಮ ಬದುಕಿನಲ್ಲಿ ಧನಾತ್ಮಕ ಪರಿವರ್ತನೆ ತಂದವು ಎಂಬುದನ್ನು ವಿವರಿಸಿದರು. ತಮ್ಮ ಭಾವಚಿತ್ರ ಸಹಿತ ಕಲ್ಪನೆ ಮತ್ತು ಯಶೋಗಾಥೆಯನ್ನು ನರೇಂದ್ರ ಮೋದಿ ಆಪ್ ಮೂಲಕ ತಮಗೆ ಕಳುಹಿಸುವಂತೆ ಪ್ರಧಾನಮಂತ್ರಿಯವರು ತಿಳಿಸಿದರು.

*****

AKT/HS