Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವಿಧಿ 370 ಮತ್ತು 35(ಎ) ರದ್ದತಿಗೆ ಏಳು ವರ್ಷ ಸಂದಿದ್ದನ್ನು ಸ್ಮರಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಧಿ 370 ಮತ್ತು 35(ಎ) ರದ್ದತಿಯ ಐತಿಹಾಸಿಕ ದಿನಕ್ಕೆ ಏಳು ವರ್ಷಗಳು ಸಂದಿದ್ದನ್ನು ಇಂದು ಸ್ಮರಿಸಿದರು. 2019ರ ಆಗಸ್ಟ್ 5 ಅನ್ನು ಭಾರತದ ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಯತ್ತ ಪಯಣದಲ್ಲಿ ನಿರ್ಣಾಯಕ ಮೈಲುಗಲ್ಲು ಎಂದು ಅವರು ಬಣ್ಣಿಸಿದರು.

ಕಳೆದ ಏಳು ವರ್ಷಗಳಲ್ಲಿ, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ನ ಜನರು ವಿವಿಧ ಕ್ಷೇತ್ರಗಳಲ್ಲಿ ವ್ಯಾಪಕ ಪರಿವರ್ತನೆಗೆ ಸಾಕ್ಷಿಯಾಗಿದ್ದಾರೆ ಎಂದು ಶ್ರೀ ಮೋದಿ ಹೇಳಿದರು. ಮೂಲಸೌಕರ್ಯವು ಗಮನಾರ್ಹವಾಗಿ ವಿಸ್ತರಿಸಿದೆ, ಜೊತೆಗೆ ಶಿಕ್ಷಣ, ಆರೋಗ್ಯ ರಕ್ಷಣೆ, ಉದ್ಯಮಶೀಲತೆ ಮತ್ತು ಕ್ರೀಡೆಗಳಲ್ಲಿ ಹೊಸ ಅವಕಾಶಗಳು ಹೊರಹೊಮ್ಮಿವೆ ಎಂದು ವಿವರಿಸಿದರು. “ದಶಕಗಳಿಂದ ಹಲವಾರು ಸಾಂವಿಧಾನಿಕ ಹಕ್ಕುಗಳಿಂದ ವಂಚಿತರಾಗಿದ್ದ ಮಹಿಳೆಯರು ಮತ್ತು ಸಮಾಜದ ಅಂಚಿನಲ್ಲಿರುವ ಸಮುದಾಯಗಳ ಸದಸ್ಯರನ್ನು ಈಗ ಭಾರತದ ಸಂವಿಧಾನದ ಸಂಪೂರ್ಣ ಅನ್ವಯದ ಮೂಲಕ ಸಶಕ್ತಗೊಳಿಸಲಾಗಿದೆ,” ಎಂದು ಶ್ರೀ ಮೋದಿ ಹೇಳಿದರು.

ರಾಷ್ಟ್ರವು ಡಾ. ಶ್ಯಾಮಾ ಪ್ರಸಾದ್ ಮುಖರ್ಜಿ ಅವರ 125ನೇ ಜನ್ಮ ಜಯಂತಿಯನ್ನು ಆಚರಿಸುತ್ತಿರುವ ಸಂದರ್ಭದಲ್ಲಿಯೇ ಈ ವರ್ಷದ ವಾರ್ಷಿಕೋತ್ಸವ ಬಂದಿರುವುದು ಮತ್ತಷ್ಟು ವಿಶೇಷ ಮಹತ್ವವನ್ನು ಪಡೆದುಕೊಂಡಿದೆ ಎಂದು ಪ್ರಧಾನಮಂತ್ರಿ ಹೇಳಿದರು. ರಾಷ್ಟ್ರೀಯ ಐಕ್ಯತೆಗಾಗಿ ಡಾ. ಮುಖರ್ಜಿ ಅವರ ಆಜೀವನ ಬದ್ಧತೆಯು ತಲೆಮಾರುಗಳಿಗೆ ಸ್ಫೂರ್ತಿ ನೀಡುತ್ತಲೇ ಇದೆ ಮತ್ತು ಅವರು ಪ್ರತಿಪಾದಿಸಿದ ಕನಸು 2019ರ ಆಗಸ್ಟ್ 5ರಂದು ಐತಿಹಾಸಿಕವಾಗಿ ಈಡೇರಿದೆ ಎಂದು ಅವರು ಹೇಳಿದರು.

ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ನ ಅಭಿವೃದ್ಧಿಗೆ ಸರ್ಕಾರದ ಅಚಲ ಬದ್ಧತೆಯನ್ನು ಪುನರುಚ್ಚರಿಸಿದ ಪ್ರಧಾನಮಂತ್ರಿಯವರು, ಪ್ರತಿಯೊಬ್ಬ ಪ್ರಜೆಯೂ ದೊಡ್ಡ ಕನಸುಗಳನ್ನು ಕಾಣಲು, ತಮ್ಮ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಮತ್ತು ‘ವಿಕಸಿತ ಭಾರತ’ದ ಸಂಕಲ್ಪಕ್ಕೆ ಕೊಡುಗೆ ನೀಡಲು ಅವಕಾಶ ಹೊಂದಿರಬೇಕು ಎಂದು ಹೇಳಿದರು.

ಪ್ರಧಾನಮಂತ್ರಿಯವರು ಈ ಬಗ್ಗೆ ʻಎಕ್ಸ್‌ʼ ಖಾತೆಯ ಪೋಸ್ಟ್‌ನಲ್ಲಿ ಹೀಗೆ ಹೇಳಿದ್ದಾರೆ:  

“ಏಳು ವರ್ಷಗಳ ಹಿಂದೆ, ಈ ದಿನದಂದು, ವಿಧಿ 370 ಮತ್ತು 35(ಎ) ಇತಿಹಾಸ ಸೇರಿದವು. ಇದು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ನ ಪ್ರಯಾಣದಲ್ಲಿ ನಿರ್ಣಾಯಕ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿತು”.

“ಅಂದಿನಿಂದ, ಜಮ್ಮು-ಕಾಶ್ಮೀರ ಮತ್ತು ಲಡಾಖ್‌ನ ಜನರ ಜೀವನವು ವ್ಯಾಪಕವಾದ ಬದಲಾವಣೆಗಳಿಗೆ ಸಾಕ್ಷಿಯಾಗಿದೆ. ಮೂಲಸೌಕರ್ಯಗಳು ವಿಸ್ತರಣೆಗೊಂಡಿವೆ, ಜೊತೆಗೆ ಶಿಕ್ಷಣ, ಆರೋಗ್ಯ, ಉದ್ಯಮಶೀಲತೆ ಮತ್ತು ಕ್ರೀಡೆಯಂತಹ ಕ್ಷೇತ್ರಗಳಲ್ಲಿ ಹೊಸ ಅವಕಾಶಗಳು ಬೆಳೆದಿವೆ. ಮಹಿಳೆಯರೇ ಆಗಿರಲಿ ಅಥವಾ ಅಂಚಿನಲ್ಲಿರುವ ಸಮುದಾಯಗಳೇ ಆಗಿರಲಿ, ದಶಕಗಳ ಕಾಲ ತಮ್ಮ ಮೂಲಭೂತ ಸಾಂವಿಧಾನಿಕ ಹಕ್ಕುಗಳಿಂದ ವಂಚಿತರಾಗಿದ್ದವರು, ಭಾರತದ ಸಂವಿಧಾನದ ಸಂಪೂರ್ಣ ಅನ್ವಯದಿಂದಾಗಿ ಇಂದು ಸಶಕ್ತರಾಗಿದ್ದಾರೆ.”

“ನಮ್ಮ ದೇಶವು ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರ 125ನೇ ಜನ್ಮ ದಿನಾಚರಣೆಯನ್ನು ಆಚರಿಸುತ್ತಿರುವ ಈ ವರ್ಷದಲ್ಲಿ, ಈ ಬಾರಿಯ ಆಗಸ್ಟ್ 5 ಇನ್ನಷ್ಟು ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ. ರಾಷ್ಟ್ರೀಯ ಐಕ್ಯತೆಗಾಗಿ ಅವರ ಆಜೀವನ ಬದ್ಧತೆಯು ತಲೆಮಾರುಗಳಿಗೆ ನಿರಂತರವಾಗಿ ಸ್ಫೂರ್ತಿ ನೀಡುತ್ತಿದೆ. ದಶಕಗಳ ಹಿಂದೆ ಅವರು ಕಂಡಿದ್ದ ದೃಷ್ಟಿಕೋನವು 2019ರ ಆಗಸ್ಟ್ 5 ರಂದು ಐತಿಹಾಸಿಕವಾಗಿ ಸಾಕಾರಗೊಂಡಿತು.”

“ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ನ ಪ್ರಗತಿಗೆ ನಾವು ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತೇವೆ ಮತ್ತು ಪ್ರತಿಯೊಬ್ಬ ನಾಗರಿಕರಿಗೂ ದೊಡ್ಡ ಕನಸುಗಳನ್ನು ಕಾಣಲು, ಸಾಧಿಸಲು ಮತ್ತು ‘ವಿಕಸಿತ ಭಾರತ’ದ ನಿರ್ಮಾಣಕ್ಕೆ ಕೊಡುಗೆ ನೀಡಲು ಅವಕಾಶ ದೊರೆಯುವುದನ್ನು ನಾವು ಖಚಿತಪಡಿಸುತ್ತೇವೆ.”

#Article370Abrogation

 

*****