Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸರ್ದಾರ್ ಸರೋವರ ಜಲಾಶಯವನ್ನು ದೇಶಕ್ಕೆ ಸಮರ್ಪಿಸಿದ ಪ್ರಧಾನಿ;ದಬೋಯ್ ನಲ್ಲಿ ನರ್ಮದಾ ಮಹೋತ್ಸವ ಸಮಾರೋಪದಲ್ಲಿ ಭಾಗಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಸರ್ದಾರ್ ಸರೋವರ ಜಲಾಶಯವನ್ನು ದೇಶಕ್ಕೆ ಸಮರ್ಪಿಸಿದರು. ಕೆವಾಡಿಯಾದ ಜಲಾಶಯದಲ್ಲಿ ಕಾರ್ಯಕ್ರಮದ ಅಂಗವಾಗಿ ಪ್ರಾರ್ಥನೆ ಹಾಗೂ ಶ್ಲೋಕಪಠಣ ನಡೆಯಿತು. ಇದರ ಅಂಗವಾಗಿ ಪ್ರಧಾನಮಂತ್ರಿಯವರು ಫಲಕ ಅನಾವರಣ ಮಾಡಿದರು.
ನಂತರ, ಪ್ರಧಾನಿಯವರು ಸರ್ದಾರ್ ಸರೋವರದಿಂದ ತುಸುವೇ ದೂರದಲ್ಲಿರುವ ಸಾಧುಬೆಟ್ ನಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಸಮರ್ಪಿತವಾದ ಏಕತೆಯ ಪ್ರತಿಮೆ ನಿರ್ಮಾಣವಾಗುತ್ತಿರುವ ಸ್ಥಳಕ್ಕೆ ಭೇಟಿ ನೀಡಿದರು. ಅವರಿಗೆ ಕಾಮಗಾರಿ ಪ್ರಗತಿಯ ಸ್ಥೂಲ ಪರಿಚಯ ಮಾಡಿಸಲಾಯಿತು.

ದಬೋಯ್ ನಲ್ಲಿ ಬೃಹತ್ ಸಾರ್ವಜನಿಕ ಸಭೆಯಲ್ಲಿ, ಪ್ರಧಾನಮಂತ್ರಿಯವರು ರಾಷ್ಟ್ರೀಯ ಬುಡಕಟ್ಟು ಸ್ವಾತಂತ್ರ್ಯ ಯೋಧರ ವಸ್ತುಸಂಗ್ರಹಾಲಯದ ಶಂಕುಸ್ಥಾಪನೆ ಅಂಗವಾಗಿ ಶಿಲಾನ್ಯಾಸ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಗುಜರಾತ್ ನ ವಿವಿಧ ಜಿಲ್ಲೆಗಳಲ್ಲಿ ನರ್ಮದಾ ನದಿಯ ಬಗ್ಗೆ ಜಾಗೃತಿ ಮೂಡಿಸಿದ ನರ್ಮದಾ ಮಹೋತ್ಸವದ ಸಮಾರೋಪವೂ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಈ ಬೃಹತ್ ಜನಸ್ತೋಮ ತಾಯಿ ನರ್ಮದೆಯ ಬಗ್ಗೆ ಇಟ್ಟಿರುವ ಗೌರವವನ್ನು ತೋರಿಸುತ್ತದೆ ಎಂದರು. ವಿಶ್ವಕರ್ಮ ಜಯಂತಿಯ ಸಂದರ್ಭದಲ್ಲಿ ಅವರು ದೇಶದ ನಿರ್ಮಾಣಕ್ಕೆ ಶ್ರಮಿಸುತ್ತಿರುವ ಎಲ್ಲರಿಗೂ ವಂದನೆ ಸಲ್ಲಿಸಿದರು. 2022ರ ಹೊತ್ತಿಗೆ ನವ ಭಾರತದ ನಿರ್ಮಾಣಕ್ಕೆ ಅಗತ್ಯವಾದ ಯಾವುದೇ ಅವಕಾಶ ಬಿಡುವುದು ಬೇಡ ಎಂದು ಪ್ರಧಾನಿ ಪ್ರತಿಪಾದಿಸಿದರು.
ಜಲಾಶಯದ ಬಗ್ಗೆ ಸರ್ದಾರ್ ಪಟೇಲ್ ಅವರ ದೂರದರ್ಶಿತ್ವವನ್ನು ಪ್ರಧಾನಮಂತ್ರಿಯವರು ಸ್ಮರಿಸಿದರು. ಸರ್ದಾರ್ ಪಟೇಲ್ ಮತ್ತು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಜಲ ಮಾರ್ಗ ಮತ್ತು ನೀರಾವರಿಗೆ ಹೆಚ್ಚಿನ ಒತ್ತು ನೀಡಿದ್ದರು ಎಂದರು.

ನೀರಿನ ಸಂಪನ್ಮೂಲದ ಕೊರತೆ ಅಭಿವೃದ್ಧಿಗೆ ದೊಡ್ಡ ತೊಡಕಾಗಿದೆ ಎಂದು ಪ್ರಧಾನಿ ಹೇಳಿದರು. ತಾವು ಗಡಿ ಪ್ರದೇಶಕ್ಕೆ ಭೇಟಿ ನೀಡಿದ್ದನ್ನು ಸ್ಮರಿಸಿದ ಪ್ರಧಾನಿ, ಆಗ ಅಲ್ಲಿ ಬಿ.ಎಸ್.ಎಫ್. ಯೋಧರಿಗೆ ಸಾಕಷ್ಟು ನೀರು ಇರಲಿಲ್ಲ ಎಂದರು. ನಾವು ನರ್ಮದಾ ನೀರನ್ನು ಗಡಿ ಪ್ರದೇಶಕ್ಕೆ ನಮ್ಮ ಯೋಧರಿಗಾಗಿ ತಂದಿದ್ದೇವೆ ಎಂದರು.

ಗುಜರಾತ್ ನ ಸಂತರು ಮತ್ತು ಸ್ವಾಮೀಜಿಗಳು ಸರ್ದಾರ್ ಸರೋವರ ಜಲಾಶಯ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.

ನರ್ಮದೆಯ ನೀರು ಜನತೆಗೆ ನೆರವಾಗುವುದಲ್ಲದೆ ಅವರ ಜೀವನವನ್ನೂ ಪರಿವರ್ತಿಸಲಿದೆ ಎಂದು ತಿಳಿಸಿದರು.

ದೇಶದ ಪಶ್ಚಿಮ ಭಾಗದಲ್ಲಿ ನೀರಿನ ಕೊರತೆ ಇದೆ, ಪೂರ್ವ ಭಾಗದಲ್ಲಿ ವಿದ್ಯುತ್ ಮತ್ತು ಅನಿಲದ ಕೊರತೆ ಇದೆ ಎಂದು ಪ್ರಧಾನಿ ಹೇಳಿದರು. ಈ ಕೊರತೆಗಳ ನಿವಾರಣೆಗೆ ಸರ್ಕಾರ ಶ್ರಮಿಸುತ್ತಿದೆ ಎಂದು ಹೇಳಿದ ಅವರು, ಇದರಿಂದ ಭಾರತ ಅಭಿವೃದ್ಧಿಯ ಹೊಸ ಎತ್ತರ ಏರುತ್ತದೆ ಎಂದರು.

ಏಕತೆಯ ಪ್ರತಿಮೆ ಸರ್ದಾರ್ ಪಟೇಲರಿಗೆ ಸೂಕ್ತ ಗೌರವಾರ್ಪಣೆಯಾಗಿದೆ, ಮತ್ತು ಇದು ಎಲ್ಲೆಡೆಯಿಂದ ಪ್ರವಾಸಿಗರನ್ನು ಆಕರ್ಷಿಸಲಿದೆ ಎಂದು ಪ್ರಧಾನಿ ಹೇಳಿದರು. ವಸಾಹತುಶಾಹಿಯ ವಿರುದ್ಧ ಹೋರಾಟ ಮಾಡಿದ ಬುಡಕಟ್ಟು ಸ್ವಾತಂತ್ರ್ಯಯೋಧರನ್ನು ಪ್ರಧಾನಿ ಸ್ಮರಿಸಿದರು.

***

AKT/HS