ಪಿಎಂಇಂಡಿಯಾ
ಸಿಜೆಐ ಶ್ರೀ ಬಿ ಆರ್ ಗವಾಯಿ ಜೀ, ನ್ಯಾಯಮೂರ್ತಿ ಸೂರ್ಯ ಕಾಂತ್ ಜೀ, ನ್ಯಾಯಮೂರ್ತಿ ವಿಕ್ರಮ್ ನಾಥ್ ಜೀ, ಕೇಂದ್ರದಲ್ಲಿ ನನ್ನ ಸಹೋದ್ಯೋಗಿ ಅರ್ಜುನ್ ರಾಮ್ ಮೇಘವಾಲ್ ಜೀ, ಸುಪ್ರೀಂ ಕೋರ್ಟ್ನ ಇತರ ಗೌರವಾನ್ವಿತ ನ್ಯಾಯಮೂರ್ತಿಗಳು, ಹೈಕೋರ್ಟ್ಗಳ ಮುಖ್ಯ ನ್ಯಾಯಮೂರ್ತಿಗಳು, ಹಾಗು ಮಹಿಳೆಯರೇ ಮತ್ತು ಮಹನೀಯರೇ,
ಈ ಮಹತ್ವದ ಸಂದರ್ಭದಲ್ಲಿ ನಿಮ್ಮೆಲ್ಲರೊಂದಿಗೆ ಉಪಸ್ಥಿತರಿರುವುದು ಒಂದು ಸೌಭಾಗ್ಯ. ಕಾನೂನು ನೆರವು ವಿತರಣಾ ಕಾರ್ಯವಿಧಾನವನ್ನು ಬಲಪಡಿಸುವುದು ಮತ್ತು ಕಾನೂನು ಸೇವೆಗಳ ದಿನದೊಂದಿಗೆ ಸಂಬಂಧಿಸಿದ ಈ ಕಾರ್ಯಕ್ರಮವು ನಮ್ಮ ನ್ಯಾಯಾಂಗ ವ್ಯವಸ್ಥೆಗೆ ಹೊಸ ಶಕ್ತಿಯನ್ನು ನೀಡುತ್ತದೆ. 20 ನೇ ರಾಷ್ಟ್ರೀಯ ಸಮ್ಮೇಳನಕ್ಕೆ ನಿಮಗೆಲ್ಲರಿಗೂ ಶುಭ ಹಾರೈಸುತ್ತೇನೆ. ನೀವು ಇಂದು ಬೆಳಿಗ್ಗೆಯಿಂದ ಈ ಕೆಲಸದಲ್ಲಿ ತೊಡಗಿಸಿಕೊಂಡಿದ್ದೀರಿ ಎಂದು ನನಗೆ ತಿಳಿಸಲಾಗಿದೆ, ಆದ್ದರಿಂದ ನಾನು ನಿಮ್ಮ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುವುದಿಲ್ಲ. ಇಲ್ಲಿ ಉಪಸ್ಥಿತರಿರುವ ಗಣ್ಯರು, ನ್ಯಾಯಾಂಗ ಸದಸ್ಯರು ಮತ್ತು ಕಾನೂನು ಸೇವೆಗಳ ಅಧಿಕಾರಿಗಳನ್ನು ನಾನು ಅಭಿನಂದಿಸುತ್ತೇನೆ.
ಸ್ನೇಹಿತರೇ,
ನ್ಯಾಯವು ಎಲ್ಲರಿಗೂ ಲಭ್ಯವಾದಾಗ, ಸಕಾಲಿಕವಾದಾಗ, ಸಾಮಾಜಿಕ ಅಥವಾ ಆರ್ಥಿಕ ಹಿನ್ನೆಲೆಯನ್ನು ಲೆಕ್ಕಿಸದೆ ಪ್ರತಿಯೊಬ್ಬ ವ್ಯಕ್ತಿಗೂ ನ್ಯಾಯವು ತಲುಪಿದಾಗ ಮಾತ್ರ ಅದು ಸಾಮಾಜಿಕ ನ್ಯಾಯದ ಅಡಿಪಾಯವಾಗುತ್ತದೆ. ನ್ಯಾಯವು ಎಲ್ಲರಿಗೂ ಲಭ್ಯವಾಗುವಂತೆ ನೋಡಿಕೊಳ್ಳುವಲ್ಲಿ ಕಾನೂನು ನೆರವು ಪ್ರಮುಖ ಪಾತ್ರ ವಹಿಸುತ್ತದೆ. ರಾಷ್ಟ್ರಮಟ್ಟದಿಂದ ತಾಲೂಕು ಮಟ್ಟದವರೆಗೆ, ಕಾನೂನು ಸೇವಾ ಅಧಿಕಾರಿಗಳು ನ್ಯಾಯಾಂಗ ಮತ್ತು ಸಾಮಾನ್ಯ ಜನರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಾರೆ. ಇಂದು, ಲೋಕ ಅದಾಲತ್ಗಳು ಮತ್ತು ವ್ಯಾಜ್ಯ ಪೂರ್ವ ಇತ್ಯರ್ಥಗಳ ಮೂಲಕ, ಲಕ್ಷಾಂತರ ವಿವಾದಗಳನ್ನು ತ್ವರಿತವಾಗಿ, ಸೌಹಾರ್ದಯುತವಾಗಿ ಮತ್ತು ಕಡಿಮೆ ವೆಚ್ಚದಲ್ಲಿ ಪರಿಹರಿಸಲಾಗುತ್ತಿದೆ ಎಂಬುದರ ಬಗ್ಗೆ ನನಗೆ ತೃಪ್ತಿ ಇದೆ. ಭಾರತ ಸರ್ಕಾರವು ಪ್ರಾರಂಭಿಸಿದ ಕಾನೂನು ನೆರವು ರಕ್ಷಣಾ ಮಂಡಳಿ ವ್ಯವಸ್ಥೆಯಡಿಯಲ್ಲಿ, ಕೇವಲ ಮೂರು ವರ್ಷಗಳಲ್ಲಿ, ಸುಮಾರು 8 ಲಕ್ಷ ಕ್ರಿಮಿನಲ್ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಸರ್ಕಾರದ ಈ ಪ್ರಯತ್ನಗಳು ದೇಶದ ಬಡವರು, ದಲಿತರು, ತುಳಿತಕ್ಕೊಳಗಾದವರು, ಶೋಷಿತರು ಮತ್ತು ವಂಚಿತರಿಗೆ ನ್ಯಾಯವನ್ನು ಸುಲಭಗೊಳಿಸಿವೆ.
ಸ್ನೇಹಿತರೇ,
ಕಳೆದ 11 ವರ್ಷಗಳಲ್ಲಿ, ನಮ್ಮ ಗಮನವು ಸುಗಮ ವ್ಯವಹಾರ ಮತ್ತು ಜೀವನವನ್ನು ಸುಲಭಗೊಳಿಸುವುದಕ್ಕೆ ಸ್ಥಿರವಾಗಿ ಮತ್ತು ದೃಢವಾಗಿ ಕೇಂದ್ರೀಕರಿಸಲ್ಪಟ್ಟಿದೆ ಮತ್ತು ನಾವು ವಿವಿಧ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ವ್ಯವಹಾರಗಳಿಗೆ ಸಂಬಂಧಿಸಿ 40 ಸಾವಿರಕ್ಕೂ ಹೆಚ್ಚು ಅನಗತ್ಯ ಅನುಸರಣೆಗಳನ್ನು ತೆಗೆದುಹಾಕಲಾಗಿದೆ. ಜನ್ ವಿಶ್ವಾಸ್ ಕಾಯ್ದೆಯ ಮೂಲಕ 3,400ಕ್ಕೂ ಹೆಚ್ಚು ಕಾನೂನು ವಿಭಾಗಗಳನ್ನು ಅಪರಾಧ ಮುಕ್ತಗೊಳಿಸಲಾಗಿದೆ. 1,500ಕ್ಕೂ ಹೆಚ್ಚು ಅಪ್ರಸ್ತುತ ಮತ್ತು ಹಳೆಯ ಕಾನೂನುಗಳನ್ನು ರದ್ದುಗೊಳಿಸಲಾಗಿದೆ. ದಶಕಗಳಿಂದ ಅಸ್ತಿತ್ವದಲ್ಲಿದ್ದ ಹಳೆಯ ಕಾನೂನುಗಳನ್ನು ಈಗ ಭಾರತೀಯ ನ್ಯಾಯ ಸಂಹಿತಾ ಬದಲಾಯಿಸಿದೆ.
ಮತ್ತು ಸ್ನೇಹಿತರೇ,
ನಾನು ಮೊದಲೇ ಹೇಳಿದಂತೆ, ಸುಗಮ ವ್ಯವಹಾರ ಮತ್ತು ಜೀವನವನ್ನು ಸುಲಭಗೊಳಿಸುವಿಕೆಯು ನ್ಯಾಯವನ್ನು ಖಾತ್ರಿಪಡಿಸಿಕೊಂಡಾಗ ಮಾತ್ರ ಸಾಧ್ಯ. ಕಳೆದ ಕೆಲವು ವರ್ಷಗಳಲ್ಲಿ, ಸುಗಮ ಅಥವಾ ಸುಲಭದಲ್ಲಿ ನ್ಯಾಯ ದೊರೆಯುವಂತೆ ಮಾಡಲು ಹಾಗು ಅದರ ಪ್ರಮಾಣವನ್ನು ಹೆಚ್ಚಿಸಲು ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಮತ್ತು ಈ ನಿಟ್ಟಿನಲ್ಲಿ ಮುಂದುವರಿಯುತ್ತಾ, ನಾವು ಇನ್ನೂ ವೇಗವಾಗಿ ಚಲಿಸಲಿದ್ದೇವೆ. .
ಸ್ನೇಹಿತರೇ,
ಈ ವರ್ಷ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರವಾದ ನಾಲ್ಸಾ (ಎನ್.ಎ.ಎಲ್.ಎಸ್.ಎ.-NALSA) ದ 30ನೇ ವಾರ್ಷಿಕೋತ್ಸವವನ್ನು ಸೂಚಿಸುತ್ತದೆ. ಈ ಮೂರು ದಶಕಗಳಲ್ಲಿ, ನಾಲ್ಸಾ ನ್ಯಾಯಾಂಗವನ್ನು ದೇಶದ ಬಡ ನಾಗರಿಕರೊಂದಿಗೆ ಸಂಪರ್ಕಿಸಲು ಬಹಳ ಮುಖ್ಯವಾದ ಪ್ರಯತ್ನವನ್ನು ಮಾಡಿದೆ. ಕಾನೂನು ಸೇವೆಗಳ ಅಧಿಕಾರಿಗಳನ್ನು ಸಂಪರ್ಕಿಸುವ ಜನರಿಗೆ ಸಾಮಾನ್ಯವಾಗಿ ಯಾವುದೇ ಸಂಪನ್ಮೂಲಗಳಿಲ್ಲ, ಪ್ರಾತಿನಿಧ್ಯವಿಲ್ಲ, ಮತ್ತು ಕೆಲವೊಮ್ಮೆ ಯಾವುದೇ ಭರವಸೆ ಇರುವುದಿಲ್ಲ. ಅವರಿಗೆ ಭರವಸೆ ಮತ್ತು ಬೆಂಬಲವನ್ನು ನೀಡುವುದು “ಸೇವೆ” ಎಂಬ ಪದದ ನಿಜವಾದ ಅರ್ಥವಾಗಿದೆ, ಮತ್ತು ಇದು “ನಾಲ್ಸಾ” ಎಂಬ ಹೆಸರಿನಲ್ಲೂ ಇದೆ. ಆದ್ದರಿಂದ, ಅದರ ಪ್ರತಿಯೊಬ್ಬ ಸದಸ್ಯರು ತಾಳ್ಮೆ ಮತ್ತು ವೃತ್ತಿಪರತೆಯಿಂದ ತಮ್ಮ ಕೆಲಸವನ್ನು ಮುಂದುವರಿಸುತ್ತಾರೆ ಎಂದು ನನಗೆ ಸಂಪೂರ್ಣ ವಿಶ್ವಾಸವಿದೆ.
ಸ್ನೇಹಿತರೇ,
ಇಂದು ನಾವು “ನಾಲ್ಸಾ”ದ ಸಮುದಾಯ ಮಧ್ಯಸ್ಥಿಕೆ ತರಬೇತಿ ಮಾಡ್ಯೂಲ್ ಪ್ರಾರಂಭಿಸುತ್ತಿದ್ದೇವೆ, ಇದರ ಮೂಲಕ ನಾವು ಭಾರತೀಯ ಸಂಪ್ರದಾಯದ ಪ್ರಾಚೀನ ಜ್ಞಾನವನ್ನು ಪುನರುಜ್ಜೀವನಗೊಳಿಸುತ್ತಿದ್ದೇವೆ, ಇದರಲ್ಲಿ ವಿವಾದಗಳನ್ನು ಸಂವಾದ ಮತ್ತು ಒಮ್ಮತದ/ಒಟ್ಟಾಭಿಪ್ರಾಯದ ಮೂಲಕ ಪರಿಹರಿಸಲಾಗುತ್ತಿತ್ತು. ಗ್ರಾಮ ಮಂಡಳಿಗಳಿಂದ ಗ್ರಾಮದ ಹಿರಿಯರವರೆಗೆ, ಮಧ್ಯಸ್ಥಿಕೆ ಸದಾ ನಮ್ಮ ನಾಗರಿಕತೆಯ ಒಂದು ಭಾಗವಾಗಿದೆ. ಹೊಸ ಮಧ್ಯಸ್ಥಿಕೆ ಕಾಯ್ದೆ ಈ ಸಂಪ್ರದಾಯವನ್ನು ಮುಂದಕ್ಕೆ ಕೊಂಡೊಯ್ಯುತ್ತಿದೆ ಮತ್ತು ಅದಕ್ಕೆ ಆಧುನಿಕ ರೂಪವನ್ನು ನೀಡುತ್ತಿದೆ. ಈ ತರಬೇತಿ ಮಾಡ್ಯೂಲ್ ಮೂಲಕ, ಸಮುದಾಯ ಮಧ್ಯಸ್ಥಿಕೆಗಳಿಗಾಗಿ ಸಂಪನ್ಮೂಲಗಳನ್ನು ರೂಪಿಸಲಾಗುತ್ತದೆ ಎಂದು ನನಗೆ ವಿಶ್ವಾಸವಿದೆ, ಇದು ವಿವಾದಗಳನ್ನು ಪರಿಹರಿಸಲು, ಸಾಮರಸ್ಯವನ್ನು ಕಾಪಾಡಿಕೊಳ್ಳಲು ಮತ್ತು ಮೊಕದ್ದಮೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಸ್ನೇಹಿತರೇ,
ತಂತ್ರಜ್ಞಾನವು ಖಂಡಿತವಾಗಿಯೂ ವಿಧ್ವಂಸಕ ಶಕ್ತಿಯಾಗಿದೆ. ಆದರೆ ಅದು ಜನಪರ ಗಮನವನ್ನು ಹೊಂದಿದ್ದರೆ, ಅದೇ ತಂತ್ರಜ್ಞಾನವು ಪ್ರಜಾಪ್ರಭುತ್ವೀಕರಣದ ಶಕ್ತಿಯಾಗುತ್ತದೆ. ಯುಪಿಐ ಡಿಜಿಟಲ್ ಪಾವತಿಗಳನ್ನು ಹೇಗೆ ಕ್ರಾಂತಿಕಾರಕಗೊಳಿಸಿದೆ ಎಂಬುದನ್ನು ನಾವು ನೋಡಿದ್ದೇವೆ. ಇಂದು, ಸಣ್ಣ ಮಾರಾಟಗಾರರು ಸಹ ಡಿಜಿಟಲ್ ಆರ್ಥಿಕತೆಯ ಭಾಗವಾಗಿದ್ದಾರೆ. ಹಳ್ಳಿಗಳು ಲಕ್ಷಾಂತರ ಕಿಲೋಮೀಟರ್ ಆಪ್ಟಿಕಲ್ ಫೈಬರ್ನೊಂದಿಗೆ ಸಂಪರ್ಕ ಹೊಂದಿವೆ. ಕೆಲವೇ ವಾರಗಳ ಹಿಂದೆ, ಗ್ರಾಮೀಣ ಪ್ರದೇಶಗಳಲ್ಲಿ ಸುಮಾರು ಒಂದು ಲಕ್ಷ ಮೊಬೈಲ್ ಟವರ್ಗಳನ್ನು ಏಕಕಾಲದಲ್ಲಿ ಪ್ರಾರಂಭಿಸಲಾಯಿತು. ಅಂದರೆ ಇಂದು ತಂತ್ರಜ್ಞಾನವು ಸೇರ್ಪಡೆ ಮತ್ತು ಸಬಲೀಕರಣದ ಮಾಧ್ಯಮವಾಗುತ್ತಿದೆ. ನ್ಯಾಯ ವಿತರಣೆಯಲ್ಲಿ ಇ-ಕೋರ್ಟ್ಗಳ ಯೋಜನೆಯು ಇದಕ್ಕೆ ಒಂದು ಉತ್ತಮ ಉದಾಹರಣೆಯಾಗಿದೆ. ತಂತ್ರಜ್ಞಾನವು ನ್ಯಾಯಾಂಗ ಪ್ರಕ್ರಿಯೆಗಳನ್ನು ಆಧುನಿಕ ಮತ್ತು ಮಾನವೀಯವಾಗಿಸುತ್ತದೆ ಎಂಬುದನ್ನು ಇದು ತೋರಿಸುತ್ತದೆ. ಇ-ಫೈಲಿಂಗ್ನಿಂದ ಎಲೆಕ್ಟ್ರಾನಿಕ್ ಸಮನ್ಸ್ ಸೇವೆಯವರೆಗೆ, ವರ್ಚುವಲ್ ವಿಚಾರಣೆಯಿಂದ ವೀಡಿಯೊ ಕಾನ್ಫರೆನ್ಸಿಂಗ್ವರೆಗೆ, ತಂತ್ರಜ್ಞಾನವು ಎಲ್ಲವನ್ನೂ ಸುಲಭಗೊಳಿಸಿದೆ. ಇದು ನ್ಯಾಯದ ಹಾದಿಯನ್ನು ಸುಲಭಗೊಳಿಸಿದೆ. ನಿಮಗೆಲ್ಲರಿಗೂ ತಿಳಿದಿರುವಂತೆ, ಈ ಯೋಜನೆಯ ಮೂರನೇ ಹಂತದ ಬಜೆಟ್ ಅನ್ನು 7 ಸಾವಿರ ಕೋಟಿ ರೂ.ಗಳಿಗೂ ಮೀರಿ ಹೆಚ್ಚಿಸಲಾಗಿದೆ. ಇದು ಈ ಯೋಜನೆಗೆ ಸರ್ಕಾರದ ಬಲವಾದ ಬದ್ಧತೆಯನ್ನು ಪ್ರದರ್ಶಿಸುತ್ತದೆ.
ಸ್ನೇಹಿತರೇ,
ಕಾನೂನು ಅರಿವಿನ ಮಹತ್ವ ನಮಗೆಲ್ಲರಿಗೂ ತಿಳಿದಿದೆ. ಬಡ ವ್ಯಕ್ತಿಯು ತನ್ನ ಹಕ್ಕುಗಳನ್ನು ತಿಳಿದುಕೊಳ್ಳದ ಹೊರತು, ಕಾನೂನನ್ನು ಅರ್ಥಮಾಡಿಕೊಳ್ಳದ ಹೊರತು ಮತ್ತು ವ್ಯವಸ್ಥೆಯ ಸಂಕೀರ್ಣತೆಯಿಂದ ಆತಂಕಗೊಳ್ಳದ ಹೊರತು ನ್ಯಾಯ ಸಿಗುವುದಿಲ್ಲ. ಆದ್ದರಿಂದ, ದುರ್ಬಲ ವರ್ಗಗಳು, ಮಹಿಳೆಯರು ಮತ್ತು ವೃದ್ಧರಲ್ಲಿ ಕಾನೂನು ಅರಿವು ಹೆಚ್ಚಿಸುವುದು ನಮ್ಮ ಆದ್ಯತೆಯಾಗಿದೆ. ನೀವೆಲ್ಲರೂ ಮತ್ತು ನಮ್ಮ ನ್ಯಾಯಾಲಯಗಳು ಈ ದಿಕ್ಕಿನಲ್ಲಿ ನಿರಂತರವಾಗಿ ಪ್ರಯತ್ನಗಳನ್ನು ಮಾಡುತ್ತಿವೆ. ನಮ್ಮ ಯುವಜನರು, ವಿಶೇಷವಾಗಿ ಕಾನೂನು ವಿದ್ಯಾರ್ಥಿಗಳು ಇದರಲ್ಲಿ ಪರಿವರ್ತನಾತ್ಮಕ ಪಾತ್ರವನ್ನು ವಹಿಸಬಹುದು ಎಂದು ನಾನು ನಂಬುತ್ತೇನೆ. ಯುವ ಕಾನೂನು ವಿದ್ಯಾರ್ಥಿಗಳು ಬಡವರು ಮತ್ತು ಹಳ್ಳಿಗಳಲ್ಲಿ ವಾಸಿಸುವ ಜನರೊಂದಿಗೆ ಸಂಪರ್ಕ ಸಾಧಿಸಲು ಮತ್ತು ಅವರ ಕಾನೂನು ಹಕ್ಕುಗಳು ಮತ್ತು ಕಾನೂನು ಪ್ರಕ್ರಿಯೆಗಳನ್ನು ಅವರಿಗೆ ವಿವರಿಸಲು ಪ್ರೋತ್ಸಾಹಿಸಿದರೆ, ಅದು ಅವರಿಗೆ ಸಮಾಜದ ನಾಡಿಮಿಡಿತವನ್ನು ನೇರವಾಗಿ ಅನುಭವಿಸಲು ಅವಕಾಶವನ್ನು ನೀಡುತ್ತದೆ. ಸ್ವಸಹಾಯ ಗುಂಪುಗಳು, ಸಹಕಾರಿ ಸಂಸ್ಥೆಗಳು, ಪಂಚಾಯತ್ ರಾಜ್ ಸಂಸ್ಥೆಗಳು ಮತ್ತು ಇತರ ಬಲವಾದ ತಳಮಟ್ಟದ ಜಾಲಗಳೊಂದಿಗೆ ಕೆಲಸ ಮಾಡುವ ಮೂಲಕ, ನಾವು ಕಾನೂನು ಜ್ಞಾನವನ್ನು ಪ್ರತಿ ಮನೆ ಬಾಗಿಲಿಗೆ ತರಬಹುದು.
ಸ್ನೇಹಿತರೇ,
ಕಾನೂನು ನೆರವಿಗೆ ಸಂಬಂಧಿಸಿದ ಇನ್ನೊಂದು ಅಂಶವಿದೆ, ಅದನ್ನು ನಾನು ಆಗಾಗ್ಗೆ ಚರ್ಚಿಸುತ್ತೇನೆ. ನ್ಯಾಯದ ಭಾಷೆ ನ್ಯಾಯವನ್ನು ಬಯಸುವ ವ್ಯಕ್ತಿಗೆ ಅರ್ಥವಾಗುವಂತೆ ಇರಬೇಕು. ಕಾನೂನನ್ನು ರಚಿಸುವಾಗ ಇದನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಜನರು ತಮ್ಮದೇ ಆದ ಭಾಷೆಯಲ್ಲಿ ಕಾನೂನನ್ನು ಅರ್ಥಮಾಡಿಕೊಂಡಾಗ, ಅದು ಉತ್ತಮ ಅನುಸರಣೆಗೆ ಕಾರಣವಾಗುತ್ತದೆ ಮತ್ತು ಮೊಕದ್ದಮೆಗಳನ್ನು ಕಡಿಮೆ ಮಾಡುತ್ತದೆ. ಇದರೊಂದಿಗೆ, ತೀರ್ಪುಗಳು ಮತ್ತು ಕಾನೂನು ದಾಖಲೆಗಳನ್ನು ಸ್ಥಳೀಯ ಭಾಷೆಯಲ್ಲಿ ಲಭ್ಯವಾಗುವಂತೆ ಮಾಡುವುದು ಸಹ ಅಗತ್ಯವಾಗಿದೆ. ಸುಪ್ರೀಂ ಕೋರ್ಟ್ 80 ಸಾವಿರಕ್ಕೂ ಹೆಚ್ಚು ತೀರ್ಪುಗಳನ್ನು 18 ಭಾರತೀಯ ಭಾಷೆಗಳಿಗೆ ಭಾಷಾಂತರಿಸಲು ಉಪಕ್ರಮವನ್ನು ತೆಗೆದುಕೊಂಡಿರುವುದು ನಿಜಕ್ಕೂ ಶ್ಲಾಘನೀಯ. ಹೈಕೋರ್ಟ್ಗಳಲ್ಲಿ ಮತ್ತು ಜಿಲ್ಲಾ ಮಟ್ಟದಲ್ಲಿಯೂ ಈ ಪ್ರಯತ್ನ ಮುಂದುವರಿಯುತ್ತದೆ ಎಂದು ನನಗೆ ವಿಶ್ವಾಸವಿದೆ.
ಸ್ನೇಹಿತರೇ,
ನಾವು ಅಭಿವೃದ್ಧಿ ಹೊಂದಿದ ಭಾರತದತ್ತ ಸಾಗುತ್ತಿರುವಾಗ, ನಾವು ನಮ್ಮನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರ ಎಂದು ಕರೆದುಕೊಳ್ಳುವಾಗ ನಮ್ಮ ನ್ಯಾಯ ವಿತರಣಾ ವ್ಯವಸ್ಥೆ ಹೇಗಿರುತ್ತದೆ ಎಂದು ಊಹಿಸಿಕೊಳ್ಳಬೇಕೆಂದು ನಾನು ಕಾನೂನು ವೃತ್ತಿ, ನ್ಯಾಯಾಂಗ ಸೇವೆಗಳು ಮತ್ತು ಅದರೊಂದಿಗೆ ಸಂಬಂಧ ಹೊಂದಿರುವ ಎಲ್ಲರನ್ನೂ ಆಗ್ರಹಿಸುತ್ತೇನೆ? ಆ ದಿಕ್ಕಿನಲ್ಲಿ ನಾವು ಒಟ್ಟಾಗಿ ಮುಂದುವರಿಯಬೇಕು. ನಾಲ್ಸಾ, ಇಡೀ ಕಾನೂನು ಭ್ರಾತೃತ್ವ ಮತ್ತು ನ್ಯಾಯ ವಿತರಣೆಯಲ್ಲಿ ತೊಡಗಿರುವ ಪ್ರತಿಯೊಬ್ಬರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಮತ್ತೊಮ್ಮೆ, ಈ ಕಾರ್ಯಕ್ರಮಕ್ಕೆ ನಾನು ನಿಮಗೆಲ್ಲರಿಗೂ ಶುಭ ಹಾರೈಸುತ್ತೇನೆ ಮತ್ತು ನಿಮ್ಮೆಲ್ಲರ ನಡುವೆ ಇರಲು ನನಗೆ ಅವಕಾಶ ನೀಡಿದ್ದಕ್ಕಾಗಿ ನಾನು ನಿಮಗೆಲ್ಲರಿಗೂ ತುಂಬಾ ಕೃತಜ್ಞನಾಗಿದ್ದೇನೆ. ಧನ್ಯವಾದಗಳು.
*****
Addressing the National Conference on Strengthening Legal Aid Delivery Mechanisms at Supreme Court. https://t.co/aAlPK9koIK
— Narendra Modi (@narendramodi) November 8, 2025
जब न्याय सबके लिए Accessible होता है, Timely होता है, जब न्याय Social या Financial Background देखे बिना हर व्यक्ति तक पहुंचता है, तभी वो सामाजिक न्याय की नींव बनता है: PM @narendramodi
— PMO India (@PMOIndia) November 8, 2025
Ease of Doing Business और Ease of Living तभी संभव हैं... जब Ease of Justice भी सुनिश्चित हो।
— PMO India (@PMOIndia) November 8, 2025
पिछले कुछ वर्षों में, Ease Of Justice को बढ़ाने के लिए भी कई कदम उठाए गए हैं।
और आगे, हम इस दिशा में और तेजी लाएंगे: PM @narendramodi
Mediation हमेशा से हमारी सभ्यता का हिस्सा रही है।
— PMO India (@PMOIndia) November 8, 2025
नया Mediation Act इसी परंपरा को आगे बढ़ा रहा है, उसे आधुनिक स्वरूप दे रहा है: PM @narendramodi
Technology आज Inclusion और Empowerment का माध्यम बन रही है।
— PMO India (@PMOIndia) November 8, 2025
Justice delivery में E-Courts project भी इसका एक शानदार उदाहरण है: PM @narendramodi
जब लोग कानून को अपनी भाषा में समझते हैं, तो इससे Better Compliance होता है और मुकदमेबाजी कम होती है।
— PMO India (@PMOIndia) November 8, 2025
इसके साथ ही ये भी आवश्यक है कि judgements और legal documents को स्थानीय भाषा में उपलब्ध कराया जाए: PM @narendramodi