Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

15ನೇ ಪ್ರವಾಸಿ ಭಾರತೀಯ ದಿವಸವನ್ನು ಪ್ರಧಾನಮಂತ್ರಿಯವರು ವಾರಾಣಸಿಯಲ್ಲಿ ಉದ್ಘಾಟಿಸಿದರು

15ನೇ ಪ್ರವಾಸಿ ಭಾರತೀಯ ದಿವಸವನ್ನು ಪ್ರಧಾನಮಂತ್ರಿಯವರು ವಾರಾಣಸಿಯಲ್ಲಿ ಉದ್ಘಾಟಿಸಿದರು

15ನೇ ಪ್ರವಾಸಿ ಭಾರತೀಯ ದಿವಸವನ್ನು ಪ್ರಧಾನಮಂತ್ರಿಯವರು ವಾರಾಣಸಿಯಲ್ಲಿ ಉದ್ಘಾಟಿಸಿದರು

15ನೇ ಪ್ರವಾಸಿ ಭಾರತೀಯ ದಿವಸವನ್ನು ಪ್ರಧಾನಮಂತ್ರಿಯವರು ವಾರಾಣಸಿಯಲ್ಲಿ ಉದ್ಘಾಟಿಸಿದರು


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು 15ನೇ ಪ್ರವಾಸಿ ಭಾರತೀಯ ದಿವಸದ ಪೂರ್ಣಾಧಿವೇಶನವನ್ನು ವಾರಾಣಸಿಯ ದೀನ್ ದಯಾಳ್ ಹಸ್ತಕಲಾ ಸಂಕುಲದಲ್ಲಿ ಇಂದು ಉದ್ಘಾಟಿಸಿದರು.

ಪ್ರವಾಸಿ ಭಾರತೀಯ ದಿವಸ 2019ರ ಮುಖ್ಯ ಅತಿಥಿ ಮಾರಿಷಸ್ ಪ್ರಧಾನಮಂತ್ರಿ ಪ್ರವೀಂದ್ ಜುಗನೌಥ್, ಉತ್ತರ ಪ್ರದೇಶ ರಾಜ್ಯಪಾಲ ರಾಮ್ ನಾಯಕ್, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಉತ್ತರಾಖಂಡದ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್, ಕೇಂದ್ರ ಸಾಗರೋತ್ತರ ಭಾರತೀಯರ ವ್ಯವಹಾರಗಳ ರಾಜ್ಯ ಸಚಿವ ನಿವೃತ್ತ ಜನರಲ್ ವಿ ಕೆ ಸಿಂಗ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ತಮ್ಮ ಪೂರ್ವಜರ ನಾಡಿನ ಮೇಲಿನ ಪ್ರೀತಿ ಮತ್ತು ವಾತ್ಸಲ್ಯವು ವಲಸೆ ಹೋದವರನ್ನು ಭಾರತಕ್ಕೆ ಕರೆತಂದಿದೆ ಎಂದು ಪ್ರಧಾನಮಂತ್ರಿಯವರು ತಮ್ಮ ಭಾಷಣದಲ್ಲಿ ಹೇಳಿದರು. ಅನಿವಾಸಿ ಭಾರತೀಯ ಸಮುದಾಯವು ನವ ಭಾರತ ನಿರ್ಮಾಣದಲ್ಲಿ ಕೈ ಜೋಡಿಸಬೇಕು ಎಂದು ಅವರು ಕರೆಕೊಟ್ಟರು.

ವಸುಧೈವ ಕುಟುಂಬಕಂ ಪರಂಪರೆಯನ್ನು ಜೀವಂತವಾಗಿಡಲು ಭಾರತೀಯ ವಲಸೆಗಾರರ ಕೊಡುಗೆಯನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದರು. ಅನಿವಾಸಿ ಭಾರತೀಯರು ಕೇವಲ ಭಾರತದ ರಾಯಭಾರಿಗಳಲ್ಲ, ಅವರು ಭಾರತದ ಶಕ್ತಿ, ಸಾಮರ್ಥ್ಯ ಮತ್ತು ಗುಣಲಕ್ಷಣಗಳನ್ನು ಪ್ರತಿನಿಧಿಸುತ್ತಾರೆ ಎಂದರು. ಇವರು ನವಭಾರತ ನಿರ್ಮಾಣದಲ್ಲಿ ವಿಶೇಷವಾಗಿ ಸಂಶೋಧನೆ ಮತ್ತು ಅನ್ವೇಷಣೆಯಲ್ಲಿ ಭಾಗವಹಿಸಬೇಕು ಎಂದರು.

ತನ್ನ ತ್ವರಿತ ಬೆಳವಣಿಗೆಯಿಂದಾಗಿ ಭಾರತವು ವಿಶ್ವದಲ್ಲಿ ಉನ್ನತ ಸ್ತರದಲ್ಲಿದೆ ಮತ್ತು ಜಾಗತಿಕ ಸಮುದಾಯವನ್ನು ಮುನ್ನಡೆಸುವ ಸ್ಥಾನದಲ್ಲಿದೆ. ಅಂತಾರಾಷ್ಟ್ರೀಯ ಸೌರ ಒಕ್ಕೂಟವು ಇದಕ್ಕೊಂದು ಉದಾಹರಣೆ ಎಂದು ಪ್ರಧಾನಮಂತ್ರಿ ಹೇಳಿದರು. ಸ್ಥಳೀಯ ಪರಿಹಾರ ಮತ್ತು ಜಾಗತಿಕ ಅಪ್ಲಿಕೇಷನ್ ನಮ್ಮ ಮಂತ್ರ ಎಂದು ಶ್ರೀ ಮೋದಿಯವರು ತಿಳಿಸಿದರು. ಅಂತಾರಾಷ್ಟ್ರೀಯ ಸೌರ ಒಕ್ಕೂಟವು ಒಂದೇ ಜಗತ್ತು, ಒಂದೇ ಸೂರ್ಯ, ಒಂದೇ ಜಾಲದತ್ತ ಮೊದಲ ಹೆಜ್ಜೆ ಎಂದರು.

ಭಾರತವು ಜಾಗತಿಕ ಆರ್ಥಿಕ ಶಕ್ತಿಯಾಗುವ ನಿಟ್ಟಿನಲ್ಲಿದೆ. ಭಾರತವು ಬೃಹತ್ ಸ್ಟಾರ್ಟ್ ಅಪ್ ಎಕೋ ಸಿಸ್ಟಂ ಮತ್ತು ಬೃಹತ್ ಆರೋಗ್ಯ ಸೇವೆ ಯೋಜನೆ ಹೊಂದಿದೆ. ಮೇಕ್ ಇನ್ ಇಂಡಿಯಾದೊಂದಿಗೆ ನಾವು ದಾಪುಗಾಲು ಇಟ್ಟಿದ್ದೇವೆ. ಉತ್ತಮ ಉತ್ಪಾದನೆ ನಮ್ಮ ಮುಖ್ಯ ಸಾಧನೆಯಾಗಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು.

ಹಿಂದಿನ ಸರ್ಕಾರಗಳ ಮನೋಬಲ ಹಾಗೂ ಸೂಕ್ತ ನೀತಿಗಳ ಕೊರೆತೆಯಿಂದಾಗಿ ಫಲಾನುಭವಿಗಳಿಗೆ ಮೀಸಲಿಟ್ಟಿದ್ದ ದೊಡ್ಡ ಮೊತ್ತದ ನಿಧಿಗಳ ಬಹುತೇಕ ಭಾಗವು ಅವರಿಗೆ ದೊರೆತಿರಲಿಲ್ಲ. ಆದರೆ ಇಂದು ನಾವು, ತಂತ್ರಜ್ಞಾನದವನ್ನು ಬಳಸಿಕೊಂಡು ವ್ಯವಸ್ಥೆಯಲ್ಲಿದ್ದ ಲೋಪದೋಷಗಳನ್ನು ಸರಿಪಡಿಸಿದ್ದೇವೆ. ಸಾರ್ವಜನಿಕರ ಹಣದ ಲೂಟಿಯನ್ನು ತಡೆಗಟ್ಟಲಾಗಿದೆ ಮತ್ತು ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಕಳೆದ ನಾಲ್ಕೂವರೆ ವರ್ಷಗಳಲ್ಲಿ 5,80000 ಕೋ.ರೂ.ಗಳನ್ನು ಜನರ ಖಾತೆಗಳಿಗೆ ನೇರವಾಗಿ ವರ್ಗಾಯಿಸಲಾಗಿದೆ. ಫಲಾನುಭವಿಗಳ ಪಟ್ಟಿಯಲ್ಲಿ 7 ಕೋಟಿ ನಕಲಿ ಹೆಸರುಗಳು ಸಿಕ್ಕಿಬಿದ್ದಿದ್ದವು, ಇದು ಬ್ರಿಟನ್, ಫ್ರಾನ್ಸ್, ಇಟಲಿಯ ಜನಸಂಖ್ಯೆಗೆ ಸಮ ಎಂದು ಅವರು ತಿಳಿಸಿದರು.

ಇವು ನವ ಭಾರತದ ಹೊಸ ವಿಶ್ವಾಸವನ್ನು ಪ್ರತಿಬಿಂಬಿಸುವ ಕೆಲವು ತುಣುಕುಗಳು ಮಾತ್ರ ಎಂದು ಪ್ರಧಾನಮಂತ್ರಿ ಹೇಳಿದರು.

ನಮ್ಮ ನವಭಾರತದ ನಿರ್ಧಾರದಲ್ಲಿ ವಲಸಿಗರು ಸಮಾನವಾಗಿ ಪ್ರಾಮುಖ್ಯರು. ಅವರ ಸುರಕ್ಷತೆಯೂ ನಮ್ಮ ಕಾಳಜಿ ಎಂದ ಪ್ರಧಾನಮಂತ್ರಿಯವರು, ಸಂಘರ್ಷ ವಲಯಗಳಲ್ಲಿದ್ದ 2 ಲಕ್ಷಕ್ಕೂ ಹೆಚ್ಚು ಭಾರತೀಯರನ್ನು ಸ್ಥಳಾಂತರಿಸುವ ಸವಾಲನ್ನು ಸರ್ಕಾರ ಹೇಗೆ ಸ್ವೀಕರಿಸಿತು ಎಂಬುದನ್ನು ಉದಾಹರಿಸಿದರು.

ಸಾಗರೋತ್ತರ ಭಾರತೀಯರ ಕಲ್ಯಾಣಗಳ ಬಗ್ಗೆ ಮಾತನಾಡಿದ ಶ್ರೀ ನರೇಂದ್ರ ಮೋದಿ ಅವರು, ಪಾಸ್ ಪೋರ್ಟ್ ಮತ್ತು ವೀಸಾ ನಿಯಮಗಳನ್ನು ಸರಳೀಕರಣಗೊಳಿಸಲಾಗಿದೆ. ಇ ವೀಸಾ, ಇವರ ಪ್ರಯಾಣವನ್ನು ಅತ್ಯಂತ ಸುಲಭಗೊಳಿಸಿದೆ. ಎಲ್ಲ ಪ್ರವಾಸಿ ಭಾರತೀಯರೂ ಈಗ ಪಾಸ್ ಪೋರ್ಟ್ ಸೇವಾದೊಂದಿಗೆ ಸಂಪರ್ಕ ಹೊಂದಿದ್ದಾರೆ ಮತ್ತು ಚಿಪ್ ಆಧಾರಿತ ಇ ಪಾಸ್ ಪೋರ್ಟ್ ವಿತರಣೆಯ ಪ್ರಯತ್ನಗಳು ನಡೆದಿವೆ ಎಂದರು.

ಪ್ರವಾಸಿ ತೀರ್ಥ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದ ಪ್ರಧಾನಮಂತ್ರಿಯವರು, ಸಾಗರೋತ್ತರ ಭಾರತೀಯನು ಭಾರತೀಯರಲ್ಲದ ಐದು ಕುಟುಂಬಗಳನ್ನು ಭಾರತ ಭೇಟಿಗೆ ಆಹ್ವಾನಿಸಬೇಕು. ಗಾಂಧೀಜಿ ಮತ್ತು ಗುರು ನಾನಕ್ ಜಿ ಯವರ ಮೌಲ್ಯಗಳನ್ನು ಹರಡಿ, ಅವರ ವರ್ಷಾಚರಣೆಯ ಸಂಭ್ರಮಗಳಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು. ಬಾಪುವಿನ ಮೆಚ್ಚಿನ ಭಜನೆಯಾದ ವೈಷ್ಣವ ಜನತೋ ಸಂಕಲನದಲ್ಲಿ ಜಾಗತಿಕ ಸಮುದಾಯವು ನಮ್ಮೊಂದಿಗೆ ಸೇರಿರುವುದು ನಮಗೆ ಹೆಮ್ಮೆ ಎನಿಸುತ್ತಿದೆ ಎಂದರು.

ತಮ್ಮ ಆತಿಥ್ಯದಿಂದಾಗಿ ಪ್ರವಾಸಿ ಭಾರತೀಯ ದಿನವನ್ನು ಯಶಸ್ವಿಯಾಗಿಸಿದ್ದಕ್ಕೆ ಕಾಶಿಯ ಜನರ ಪಾತ್ರವನ್ನು ಪ್ರಧಾನಮಂತ್ರಿಯವರು ಪ್ರಶಂಸಿಸಿದರು. ಮುಂಬರುವ ಪರೀಕ್ಷೆಗಳ ಸಂಬಂಧ, ಜನವರಿ 29 ರಂದು ಬೆಳಿಗ್ಗೆ 11 ಗಂಟೆಗೆ ವಿದ್ಯಾರ್ಥಿಗಳ ಪೋಷಕರೊಂದಿಗೆ ನಮೋ ಆಪ್ ಮೂಲಕ ಪರೀಕ್ಷಾ ಪೇ ಚರ್ಚಾ ಸಂವಾದ ನಡೆಸಲಿದ್ದೇನೆ ಎಂದು ಪ್ರಧಾನಮಂತ್ರಿ ತಿಳಿಸಿದರು.

ಪ್ರವಾಸಿ ಭಾರತೀಯ ದಿನ 2019ರ ಮುಖ್ಯ ಅತಿಥಿಯಾದ ಮಾರಿಷಸ್ ಪ್ರಧಾನಮಂತ್ರಿ ಪ್ರವೀಂದ್ ಜುಗನೌಥ್, ತಮ್ಮ ಪೂರ್ವಜರ ನಾಡಿನ ಬಗೆಗಿನ ನೆನಪುಗಳನ್ನು ಕೆದಕಿದರು. ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಮಾತನಾಡಿದ ಅವರು, ಇಂತಹ ಕೂಟಗಳು ಸಾಗರೋತ್ತರ ಭಾರತೀಯರು ಇತಿಹಾಸ ಮತ್ತು ಸಂಸ್ಕೃತಿಯ ಒಂದೇ ಕುಟುಂಬಕ್ಕೆ ಸೇರಿದವರೆಂಬ ಗುರುತನ್ನು ಬಲಪಡಿಸುತ್ತವೆ ಎಂದರು. ಭಾರತವು ಅನನ್ಯವಾದರೆ, ಭಾರತೀಯತೆಯು ವಿಶ್ವವ್ಯಾಪಿಯಾದುದು ಎಂದರು. ವಿದ್ಯಾವಂತ ಮತ್ತು ಸ್ವಯಂ ಅವಲಂಬಿತ ವಲಸಿಗರು ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಬಹುದು ಮತ್ತು ವಲಸಿಗ ಸಂಪರ್ಕವು ಬಹುಪಕ್ಷೀಯತೆಗೆ ನೆರವಾಗಲಿದೆ ಎಂದು ಮಾರಿಷಸ್ ಪ್ರಧಾನಮಂತ್ರಿ ಹೇಳಿದರು.

ತಮ್ಮ ಭೋಜ್ ಪುರಿ ಭಾಷೆಯಲ್ಲಿ ಜನಸ್ತೋಮವನ್ನು ಪ್ರೋತ್ಸಾಹಿಸಿದ ಅವರು, ಪ್ರಥಮ ಅಂತಾರಾಷ್ಟ್ರೀಯ ಭೋಜ್ ಪುರಿ ಉತ್ಸವವನ್ನು ಮಾರಿಷಸ್ ಆಯೋಜಿಸಲಿದೆ ಎಂದು ಘೋಷಿಸಿದರು.

ವಿದೇಶಾಂಗ ಸಚಿವೆ ಅವರು ತಮ್ಮ ಸ್ವಾಗತ ಭಾಷಣದಲ್ಲಿ, ಪ್ರಧಾನಮಂತ್ರಿ ಮೋದಿಯವರ ಕ್ರಿಯಾಶೀಲ ನಾಯಕತ್ವದಡಿ ಭಾರತವು ಹೆಮ್ಮೆಪಡುತ್ತಿದೆ ಎಂದರು. ಮಾತೃಭೂಮಿಯೊಂದಿಗಿನ ಸಂಪರ್ಕಕ್ಕಾಗಿ ಅವರು ಭಾರತೀಯ ವಲಸಿಗರಿಗೆ ಧನ್ಯವಾದ ಹೇಳಿದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾತನಾಡಿ, ಉತ್ತರಪ್ರದೇಶದ ಪ್ರವಾಸಿ ಭಾರತೀಯ ದಿನ ಮತ್ತು ಕುಂಭ ಮೇಳಗಳು, ಒಂದೇ ಭಾರತ, ಶ್ರೇಷ್ಠ ಭಾರತದ ಪ್ರತಿಬಿಂಬಗಳು ಎಂದರು.

ಪ್ರಧಾನಮಂತ್ರಿ ಮೋದಿಯವರು ಭಾರತ್ ಕೋ ಜಾನಿಯೇ ಕ್ವಿಜ್ ಸ್ಪರ್ಧೆಯ ವಿಜೇತರನ್ನು ಸನ್ಮಾನಿಸಿದರು. ಯುವ ಭಾರತೀಯ ವಲಸಿಗರಿಗಾಗಿ ಈ ಕ್ವಿಜ್ ಸ್ಪರ್ಧೆ ಇತ್ತು.

ನಾಳೆ, ಜನವರಿ 23, 2019 ರಂದು ಪ್ರವಾಸಿ ಭಾರತೀಯ ದಿನದ ಸಮಾರೋಪ ಸಮಾರಂಭ ನಡೆಯಲಿದೆ. ಈ ಸಂದರ್ಭದಲ್ಲಿ ರಾಷ್ಟ್ರಪತಿ ಶ್ರೀ ರಾಮ್ ನಾಥ್ ಕೋವಿಂದ್ ಅವರು ಆಯ್ದ ಸಾಗರೋತ್ತರ ಭಾರತೀಯರಿಗೆ ಅವರ ಕೊಡುಗೆಗಳಿಗಾಗಿ ಪ್ರವಾಸಿ ಭಾರತೀಯ ಸಮ್ಮಾನ್ ನೀಡಿ ಪುರಸ್ಕರಿಸಲಿದ್ದಾರೆ.

ಸಮಾವೇಶದ ನಂತರ ಜನವರಿ 24ರಂದು ವಲಸಿಗ ಪ್ರತಿನಿಧಿಗಳು ಪ್ರಯಾಗ್ ರಾಜ್ನ ಕುಂಭಮೇಳಕ್ಕೆ ಭೇಟಿ ನೀಡಲಿದ್ದಾರೆ. ನಂತರ ಅವರು, ಜನವರಿ 25 ರಂದು ದೆಹಲಿಗೆ ತೆರಳಲಿದ್ದು, ನವದೆಹಲಿಯ ರಾಜ್ ಪಥ್ ನಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್ ವೀಕ್ಷಿಸಲಿದ್ದಾರೆ.

***