Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

2019ರ ಅಕ್ಟೋಬರ್ 5 ರಂದು ಬಾಂಗ್ಲಾ ದೇಶದ ಪ್ರಧಾನ ಮಂತ್ರಿಯವರ ಅಧಿಕೃತ ಭೇಟಿಯ ಸಂದರ್ಭದಲ್ಲಿ ದ್ವಿಪಕ್ಷೀಯ ಯೋಜನೆಗಳ ವಿಡಿಯೋ ಉದ್ಘಾಟನೆಯಲ್ಲಿ ಪ್ರಧಾನ ಮಂತ್ರಿಯವರ ಹೇಳಿಕೆಯ ಭಾಷಾಂತರ


ಘನತೆವೆತ್ತ ಪ್ರಧಾನಮಂತ್ರಿ ಶೇಖ್ ಹಸೀನಾ ಅವರೇ,

ಗಣ್ಯರೇ,

ಸ್ನೇಹಿತರೆ,

ನಮಸ್ಕಾರ!!

ಸಬೀಕೆ ಶರೋದೇಯೋ ಶುಭೇಚ್ಛ!

ಪ್ರಧಾನಮಂತ್ರಿ ಶೇಖ್ ಹಸೀನಾ ಜೀ ಅವರೊಂದಿಗೆ ಮತ್ತೆ ಮೂರು ದ್ವಿಪಕ್ಷೀಯ ಯೋಜನೆಗಳನ್ನು ಉದ್ಘಾಟಿಸುವ ಅವಕಾಶ ದೊರೆತಿರುವುದಕ್ಕೆ ನನಗೆ ಸಂತಸವಾಗಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ, ವಿಡಿಯೋ ಲಿಂಕ್ ಮೂಲಕ ನಾವು 9 ಯೋಜನೆಗಳನ್ನು ಉದ್ಘಾಟಿಸಿದ್ದೇವೆ. ಇಂದು ಮತ್ತೆ ಮೂರು ಯೋಜನೆಗಳ ಸೇರ್ಪಡೆಯೊಂದಿಗೆ, ಒಂದು ವರ್ಷದಲ್ಲಿ ನಾವು ಒಂದು ಡಜನ್ ಜಂಟಿ ಯೋಜನೆಗಳಿಗೆ ಚಾಲನೆ ನೀಡಿದ್ದೇವೆ. ಈ ಸಾಧನೆಗಾಗಿ ನಾನು ಎರಡೂ ದೇಶಗಳ ಅಧಿಕಾರಿಗಳು ಮತ್ತು ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ.

ಇಂದಿನ ಮೂರು ಯೋಜನೆಗಳು ವಿವಿಧ ಮೂರು ಕ್ಷೇತ್ರಕ್ಕೆ ಸೇರಿದ್ದಾಗಿವೆ: – ಎಲ್.ಪಿ.ಜಿ. ಆಮದು, ವೃತ್ತಿ ತರಬೇತಿ ಮತ್ತು ಸಾಮಾಜಿಕ ಸೌಲಭ್ಯ. ಆದರೆ, ಈ ಮೂರರ ಉದ್ದೇಶವೂ ಒಂದೇ. ಅದು ನಮ್ಮ ನಾಗರಿಕರ ಜೀವನ ಸುಧಾರಣೆ ಮಾಡುವುದುದಾಗಿದೆ. ಇದು ಭಾರತ ಮತ್ತು ಬಾಂಗ್ಲಾದೇಶದ ಬಾಂಧವ್ಯದ ಪ್ರಮುಖ ತತ್ವವಾಗಿದೆ. ಭಾರತ – ಬಾಂಗ್ಲಾದೇಶ ಸಹಯೋಗದ ಆಧಾರವು ನಮ್ಮ ಸ್ನೇಹ ದೇಶಗಳ ಪ್ರತಿಯೊಬ್ಬ ನಾಗರಿಕರ ಅಭಿವೃದ್ಧಿಯನ್ನು ಖಾತ್ರಿ ಪಡಿಸುತ್ತದೆ ಎಂಬುದಾಗಿದೆ.

ಬಾಂಗ್ಲಾದೇಶದಿಂದ ಸಗಟು ಎಲ್.ಪಿ.ಜಿ. ಪೂರೈಕೆಯು ಎರಡೂ ದೇಶಗಳಿಗೆ ಪ್ರಯೋಜನಕಾರಿಯಾಗಿದೆ. ಇದು ರಫ್ತು, ಆದಾಯ ಮತ್ತು ಬಾಂಗ್ಲಾದೇಶದಲ್ಲಿ ಉದ್ಯೋಗ ಹೆಚ್ಚಿಸುತ್ತದೆ. 1500 ಕಿ.ಮೀ. ಸಾಗಾಟದ ಅಂತರ ತಗ್ಗಿಸುವುದೂ ಆರ್ಥಿಕ ಲಾಭ ತರಲಿದೆ ಮತ್ತು ಪರಿಸರಕ್ಕೆ ಆಗುವ ಹಾನಿಯನ್ನೂ ತಗ್ಗಿಸುತ್ತದೆ. ಎರಡನೇ ಯೋಜನೆ – ಬಾಂಗ್ಲಾದೇಶ – ಭಾರತ ವೃತ್ತಿ ಕೌಶಲ್ಯ ಅಭಿವೃದ್ಧಿ ಸಂಸ್ಥೆಯಿಂದ ಮಾನವ ಶಕ್ತಿಯ ತಯಾರಿ ಮತ್ತು ಬಾಂಗ್ಲಾದೇಶದ ಕೈಗಾರಿಕಾ ಅಭಿವೃದ್ಧಿಗೆ ತಂತ್ರಜ್ಞರನ್ನು ಸಜ್ಜುಗೊಳಿಸುವುದಾಗಿದೆ.

ಘನತೆವೇತ್ತರೆ,

ಕೊನೆಯ ಯೋಜನೆ ಢಾಕಾದ ರಾಮಕೃಷ್ಣ ಮಿಷನ್ ನಲ್ಲಿ ವಿವೇಕಾನಂದ ಭವನದ್ದಾಗಿದೆ. ಇದು ಇಬ್ಬರು ಶ್ರೇಷ್ಠ ಮಾನವರಾದ ಸ್ವಾಮಿ ರಾಮಕೃಷ್ಣ ಪರಮಹಂಸ ಮತ್ತು ಸ್ವಾಮಿ ವಿವೇಕಾನಂದರ ಜೀವನದಿಂದ ಸ್ಪೂರ್ತಿ ಪಡೆಯುವುದಾಗಿದೆ. ಇವರಿಬ್ಬರೂ ನಮ್ಮ ಸಮಾಜದ ಮೇಲೆ ಮೌಲ್ಯ ಮತ್ತು ಅದ್ವಿತೀಯ ಪ್ರಭಾವ ಬೀರಿದ್ದಾರೆ.

ಬಾಂಗ್ಲಾ ಸಂಸ್ಕೃತಿಯ ಔದಾರ್ಯ ಮತ್ತು ಮುಕ್ತ ಮನೋಭಾವದಂತೆ, ಈ ಮಿಷನ್ ಎಲ್ಲಾ ಪಂಗಡಗಳ ಅನುಯಾಯಿಗಳಿಗೂ ಒಂದು ತಾಣವಾಗಿದೆ. ಈ ಮಿಷನ್ ಎಲ್ಲ ಸಮುದಾಯದ ಹಬ್ಬಗಳನ್ನೂ ಸಮಾನ ಚೈತನ್ಯ ಮತ್ತು ಉತ್ಸಾಹದೊಂದಿಗೆ ಆಚರಿಸುತ್ತದೆ. ಈ ಕಟ್ಟಡವು 100ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಮತ್ತು ಸಂಶೋಧನಾ ನಿರತರಿಗೆ ವಸತಿ ಸೌಲಭ್ಯವನ್ನೂ ಒಳಗೊಂಡಿದೆ.

ಘನತೆವೆತ್ತರೆ,

ಭಾರತವು ಬಾಂಗ್ಲಾದೇಶದೊಂದಿಗಿನ ತನ್ನ ಸಹಭಾಗಿತ್ವಕ್ಕೆ ಆದ್ಯತೆ ನೀಡಿದೆ. ಎರಡು ಸ್ನೇಹಪರ ನೆರೆ ರಾಷ್ಟ್ರಗಳ ನಡುವಿನ ಸಹಕಾರಕ್ಕೆ ಭಾರತ ಮತ್ತು ಬಾಂಗ್ಲಾದೇಶ ಒಂದು ಶ್ರೇಷ್ಠ ಉದಾಹರಣೆಯಾಗಿದೆ ಎಂಬುದು ನಮಗೆ ಹೆಮ್ಮೆಯ ವಿಷಯವಾಗಿದೆ. ಇಂದಿನ ನಮ್ಮ ಸಂವಾದ ನಮ್ಮ ಬಾಂಧವ್ಯಕ್ಕೆ ಇನ್ನೂ ಹೆಚ್ಚಿನ ಚೈತನ್ಯ ತುಂಬಲಿದೆ.

ಜೈಹಿಂದ್! ಜೈ ಬಾಂಗ್ಲಾ! ಜೈ ಭಾರತ್ –ಬಾಂಗ್ಲಾ ಬಂಧುತ್ವ!

ಧನ್ಯವಾದಗಳು,

ಸೂಚನೆ: ಪ್ರಧಾನಮಂತ್ರಿಯವರು ಭಾಷಣವನ್ನು ಹಿಂದಿಯಲ್ಲಿ ಮಾಡಿದ್ದಾರೆ. ಇದು ಅವರ ಭಾಷಣದ ಸಾಮೀಪ್ಯ ಅನುವಾದ.