Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

21-06-2018 ರಂದು ನಾಲ್ಕನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಡೆಹ್ರಾಡೂನಿನಲ್ಲಿ ಪ್ರಧಾನ ಮಂತ್ರಿ ಅವರು ಮಾಡಿದ ಭಾಷಣದ ಅವತರಣಿಕೆ.

21-06-2018 ರಂದು ನಾಲ್ಕನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಡೆಹ್ರಾಡೂನಿನಲ್ಲಿ ಪ್ರಧಾನ ಮಂತ್ರಿ ಅವರು ಮಾಡಿದ ಭಾಷಣದ ಅವತರಣಿಕೆ.

21-06-2018 ರಂದು ನಾಲ್ಕನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಡೆಹ್ರಾಡೂನಿನಲ್ಲಿ ಪ್ರಧಾನ ಮಂತ್ರಿ ಅವರು ಮಾಡಿದ ಭಾಷಣದ ಅವತರಣಿಕೆ.

21-06-2018 ರಂದು ನಾಲ್ಕನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಡೆಹ್ರಾಡೂನಿನಲ್ಲಿ ಪ್ರಧಾನ ಮಂತ್ರಿ ಅವರು ಮಾಡಿದ ಭಾಷಣದ ಅವತರಣಿಕೆ.


ವೇದಿಕೆಯಲ್ಲಿರುವ ಎಲ್ಲಾ ಗಣ್ಯರೇ , ಈ ಸುಂದರ ಕ್ರೀಡಾಂಗಣದಲ್ಲಿ ಹಾಜರಿರುವ ಎಲ್ಲಾ ನನ್ನ ಸ್ನೇಹಿತರೇ , ನಾಲ್ಕನೇ ಅಂತಾರಾಷ್ಟ್ರೀಯ ಯೋಗ ದಿನದಂದು ವಿಶ್ವದಾದ್ಯಂತ ಇರುವ ಯೋಗ ಪ್ರೇಮಿಗಳಿಗೆ ನಾನು ಪವಿತ್ರ ಭೂಮಿಯಾದ ದೇವಭೂಮಿ ಉತ್ತರಾಖಂಡದಿಂದ ಶುಭಾಶಯಗಳನ್ನು ಕೋರುತ್ತೇನೆ.

ತಾಯಿ ಗಂಗೆಯ ಈ ನಾಡಿನಲ್ಲಿ, ನಾಲ್ಕು ಪವಿತ್ರ ಕ್ಷೇತ್ರಗಳು ಇರುವ, ಆದಿ ಶಂಕರಾಚಾರ್ಯರು ದರ್ಶಿಸಿದ ಈ ಭೂಮಿಯಲ್ಲಿ ಮತ್ತು ಸ್ವಾಮಿ ವಿವೇಕಾನಂದರು ಹಲವಾರು ಬಾರಿ ಭೇಟಿ ನೀಡಿದ ಈ ಭೂಮಿಯಲ್ಲಿ ಯೋಗ ದಿನದ ಅಂಗವಾಗಿ ನಾವೆಲ್ಲಾ ಈ ರೀತಿಯಲ್ಲಿ ಇಲ್ಲಿ ಸೇರಿರಿರುವುದು ಒಂದು ಶುಭ ಅದೃಷ್ಟ.

ಇದಲ್ಲದೆಯೂ ಉತ್ತರಾಖಂಡವು ಹಲವಾರು ದಶಕಗಳ ಕಾಲ ಯೋಗದ ಮುಖ್ಯ ಕೇಂದ್ರವಾಗಿತ್ತು. ಉತ್ತರಾಖಂಡದ ಈ ಪರ್ವತ ಶ್ರೇಣಿಗಳು ಯೋಗ ಮತ್ತು ಆಯುರ್ವೇದಕ್ಕೆ ಪ್ರೇರಣೆ.

ಈ ಸ್ಥಳಕ್ಕೆ ಭೇಟಿ ನೀಡುವ ಸಾಮಾನ್ಯ ಮನುಷ್ಯ ಕೂಡಾ ಇಲ್ಲೊಂದು ವಿಶಿಷ್ಟ ಅನುಭವ ಪಡೆಯುತ್ತಾನೆ. ಈ ಪುಣ್ಯ ಭೂಮಿಯಲ್ಲೊಂದು ಅದ್ಭುತ ಸ್ಪೂರ್ತಿ, ಕಂಪನ ಮತ್ತು ಆಯಸ್ಕಾಂತೀಯ ಶಕ್ತಿ ಇದೆ.

ಸ್ನೇಹಿತರೇ ,

ಇಂದು ಉದಯಿಸುತ್ತಿರುವ ಸೂರ್ಯ ತನ್ನ ಏರುಗತಿಯ ಹಾದಿಯ ಪ್ರಯಾಣದಲ್ಲಿ, ಈ ಭೂಮಿಗೆ ಸೂಯರಶ್ಮಿ ತಲುಪುವಲ್ಲೆಲ್ಲ ಜನತೆ ಆ ಬೆಳಕನ್ನು ಮತ್ತು ಸೂರ್ಯನನ್ನು ಯೋಗದೊಂದಿಗೆ ಸ್ವಾಗತಿಸುತ್ತಿರುವುದು ಎಲ್ಲಾ ಭಾರತೀಯರಿಗೂ ಹೆಮ್ಮೆಯ ಸಂಗತಿ.

ಡೆಹ್ರಾಡೂನಿನಿಂದ ಡಬ್ಲಿನ್ ವರೆಗೆ , ಶಾಂಘೈಯಿಂದ ಚಿಕಾಗೋವರೆಗೆ , ಜಕಾರ್ತಾದಿಂದ ಜೋಹಾನ್ಸ್ ಬರ್ಗದವರೆಗೆ ಎಲ್ಲಾ ಕಡೆಯೂ ಯೋಗ ಹರಡಿದೆ.

ಹಿಮಾಲಯದ ಸಾವಿರಾರು ಅಡಿ ಎತ್ತರದ ಪರ್ವತಶ್ರೇಣಿಗಳಿರಲಿ, ಸೂರ್ಯನ ಬೆಳಕು ಬೀರುವ ಮರುಭೂಮಿಯಿರಲಿ ಎಲ್ಲಾ ಪರಿಸ್ಥಿತಿಯಲ್ಲೂ ಯೋಗವು ಜೀವನವನ್ನು ಶ್ರೀಮಂತಗೊಳಿಸುತ್ತಿದೆ.

ವಿಭಜಕವಾದಿ ಶಕ್ತಿಗಳು ಪ್ರಾಮುಖ್ಯತೆ ಗಳಿಸಿದರೆ ಅದರಿಂದ ಶಿಥಿಲತೆ ಉಂಟಾಗುತ್ತದೆ. ಅದು ಜನರನ್ನು ವಿಭಜಿಸುತ್ತದೆ, ಸಮಾಜವನ್ನು ವಿಂಗಡಿಸುತ್ತದೆ ಮತ್ತು ದೇಶಗಳನ್ನೂ ವಿಭಜಿಸುತ್ತದೆ. ಸಮಾಜಗಳಲ್ಲಿ ವಿಭಜನೆ ಇದ್ದರೆ ಅದು ಕುಟುಂಬದೊಳಗೆ ಅಸಂತುಷ್ಟಿಯನ್ನು ಮೂಡಿಸುತ್ತದೆ ಮತ್ತು ಮನುಷ್ಯ ಆಂತರ್ಯದಲ್ಲಿ ದುರ್ಬಲಗೊಂಡು ಜೀವನದಲ್ಲಿ ಉದ್ವಿಗ್ನತೆ ಹೆಚ್ಚುತ್ತಾ ಹೋಗುತ್ತದೆ.

ಈ ಶಿಥಿಲತೆಯ ನಡುವೆ ಸಮತೋಲನವನ್ನು ಕಾಪಾಡಲು ಯೋಗವು ಸಹಾಯ ಮಾಡುತ್ತದೆ. ಅದು ನಮ್ಮನ್ನು ಒಗ್ಗೂಡಿಸುವ ಕೆಲಸ ಮಾಡುತ್ತದೆ.

ಯೋಗವು ಇಂದಿನ ವೇಗದ ಆಧುನಿಕ ಜೀವನ ಶೈಲಿಯಲ್ಲಿ ದೇಹ, ಮನಸ್ಸು, ಸ್ಪೂರ್ತಿ ಮತ್ತು ಆತ್ಮವನ್ನು ಜೋಡಿಸಿ ಶಾಂತಿ ನೆಮ್ಮದಿಯನ್ನು ತರುತ್ತದೆ.

ವ್ಯಕ್ತಿಗಳನ್ನು ಕುಟುಂಬದ ಜೊತೆ ಒಗ್ಗೂಡಿಸುವ ಮೂಲಕ ಕುಟುಂಬದೊಳಗೆ ಶಾಂತಿಯನ್ನು ತರುತ್ತದೆ.

ಸಮಾಜದ ಬಗ್ಗೆ ಕುಟುಂಬವು ಸೂಕ್ಷ್ಮತ್ವವನ್ನು ಬೆಳೆಸಿಕೊಳ್ಳುವಂತೆ ಮಾಡುವ ಮೂಲಕ ಅದು ಸಮಾಜದಲ್ಲಿ ಸೌಹಾರ್ದತೆಯನ್ನು ತರುತ್ತದೆ.

ಸಮಾಜಗಳು ರಾಷ್ಟ್ರೀಯ ಸಮಗ್ರತೆಗೆ ಕೊಂಡಿಗಳಾಗುತ್ತವೆ.

ಮತ್ತು ಈ ರೀತಿಯ ದೇಶಗಳು ವಿಶ್ವದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ತರುತ್ತವೆ. ಈ ಸಹೋದರತ್ವ ಭಾವನೆಯಿಂದ ಮಾನವತೆ ಬೆಳೆಯುತ್ತದೆ ಮತ್ತು ಬಲಗೊಳ್ಳುತ್ತದೆ.

ಇದರರ್ಥ ಯೋಗವು ವ್ಯಕ್ತಿಗಳನ್ನು, ಕುಟುಂಬಗಳನ್ನು , ಸಮಾಜಗಳನ್ನು, ದೇಶಗಳನ್ನು, ಮತ್ತು ವಿಶ್ವವನ್ನು ಬೆಸೆಯುತ್ತದೆ ಮತ್ತು ಇಡೀಯ ಮಾನವ ಕುಲವನ್ನು ಜೋಡಿಸುತ್ತದೆ.

ವಿಶ್ವ ಸಂಸ್ಥೆಯಲ್ಲಿ ಯೋಗ ದಿನದ ಪ್ರಸ್ತಾಪವನ್ನು ಮಂಡಿಸಿದಾಗ ವಿಶ್ವದ ಗರಿಷ್ಟ ಸಂಖ್ಯೆಯ ದೇಶಗಳು ಈ ಗೊತ್ತುವಳಿಯನ್ನು ಸಹಪ್ರಾಯೋಜಿಸಿದವು, ಇದೊಂಡು ದಾಖಲೆ. ವಿಶ್ವಸಂಸ್ಥೆಯ ಇತಿಹಾಸದಲ್ಲಿ ಕನಿಷ್ಟ ಕಾಲಾವಧಿಯಲ್ಲಿ ಅಂಗೀಕೃತಗೊಂಡ ಮೊದಲ ಪ್ರಸ್ತಾಪ ಇದು. ಮತ್ತು ಇಂದು ವಿಶ್ವದ ಪ್ರತೀ ನಾಗರಿಕ, ಪ್ರತೀ ದೇಶವೂ ಯೋಗ ತನ್ನದೇ ಎಂದು ಭಾವಿಸಿದೆ ಮತ್ತು ಇದು ಭಾರತದ ಜನರಿಗೆ ನಾವು ಆ ದೊಡ್ಡ ಪರಂಪರೆಯ ಉತ್ತರಾಧಿಕಾರಿಗಳು ಹಾಗು ಆ ಪರಂಪರೆಯನ್ನು ರಕ್ಷಿಸಿಕೊಂಡು ಬಂದವರು ಎಂಬ ಪ್ರಮುಖ ಸಂದೇಶವನ್ನು ಸಾರಿದೆ.

ನಮ್ಮ ಪರಂಪರೆಯಲ್ಲಿ ನಾವು ಹೆಮ್ಮೆಪಡಲು ಆರಂಭಿಸಿದರೆ ಮತ್ತು ಕಾಲದ ಜೊತೆ ಹೆಜ್ಜೆ ಹಾಕದ ಸಂಗತಿಗಳನ್ನು ಕೈಬಿಟ್ಟರೆ ಅವುಗಳು ಮುಂದುವರಿಯಲಾರವು. ಆದಾಗ್ಯೂ ಕಾಲ ಕಾಲಕ್ಕೆ ಯಾವುದು ಸೂಕ್ತ , ಮತ್ತು ಭವಿಷ್ಯಕ್ಕೆ ಯಾವುದು ಅನುಕೂಲ ಎಂಬುದನ್ನು ಅರಿತುಕೊಂಡು , ಇಂತಹ ಮಾದರಿಯ ನಮ್ಮ ಪರಂಪರೆಯಲ್ಲಿ ಹೆಮ್ಮೆಪಟ್ಟುಕೊಂಡರೆ ಆಗ ವಿಶ್ವವು ಕೂಡಾ ಇಂತಹವುಗಳಲ್ಲಿ ಹೆಮ್ಮೆಪಡುವುದಕ್ಕೆ ಹಿಂದೆ ಸರಿಯುವುದಿಲ್ಲ. ಆದರೆ ನಮಗೆ ನಮ್ಮ ಬಲದಲ್ಲಿಯೇ ನಂಬಿಕೆ ಇಲ್ಲದಿದ್ದರೆ, ನಮ್ಮ ಸಾಮರ್ಥ್ಯದಲ್ಲಿ ನಂಬಿಕೆ ಇಲ್ಲದಿದ್ದರೆ ಆಗ ಅದನ್ನು ಯಾರೂ ಅಂಗೀಕರಿಸಲಾರರು. ಕುಟುಂಬವು ತಾನೇ ಕುಟುಂಬದಲ್ಲಿಯ ಮಗುವಿನ ನೈತಿಕ ಶಕ್ತಿಯನ್ನು ಉಡುಗಿಸುವುದನ್ನು ಮುಂದುವರಿಸಿದರೆ ಮತ್ತು ಆ ಮಗು ಆ ಪ್ರದೇಶದಲ್ಲಿ ಗೌರವಿಸಲ್ಪಡಬೇಕು ಎಂದು ಅಪೇಕ್ಷಿಸಿದರೆ, ಆಗ ಅದು ಸಾಧ್ಯವಾಗದು. ಪೋಷಕರು, ಕುಟುಂಬ, ಸಹೋದರರು ಮತ್ತು ಸಹೋದರಿಯರೆಲ್ಲರೂ ಆ ಮಗುವನ್ನು ಇರುವಂತೆ ಒಪ್ಪಿಕೊಂಡರೆ ಆಗ ನೆರೆ ಹೊರೆಯವರೂ ಆ ಮಗುವನ್ನು ಒಪ್ಪಿಕೊಳ್ಳಲು ಆರಂಭಿಸುತ್ತಾರೆ.

ಇಂದು ಭಾರತವು ಯೋಗದ ಶಕ್ತಿಗೆ ಮತ್ತೊಮ್ಮೆ ಜೋಡಿಸಿಕೊಂಡಿದೆ ಎಂಬುದನ್ನು ಯೋಗವು ಸಾಬೀತು ಮಾಡಿದೆ. ಅದೇ ರೀತಿ ವಿಶ್ವವೂ ಯೋಗದೊಂದಿಗೆ ಜೋಡಿಸಿಕೊಳ್ಳಲು ಆರಂಭಿಸಿದೆ.

ಇಂದು ಯೋಗವು ವಿಶ್ವದ ಅತ್ಯುತ್ತಮ ಶಕ್ತಿಶಾಲೀ ಏಕೀಕರಣದ ಶಕ್ತಿಯಾಗಿ ಮೂಡಿ ಬಂದಿದೆ.

ಇಂದು ಇಡೀ ವಿಶ್ವದಲ್ಲಿ ಯೋಗ ಮಾಡುತ್ತಿರುವ ಜನರ ಸಂಖ್ಯೆಯನ್ನು ನಾವು ಒಗ್ಗೂಡಿಸಿದರೆ ನಾನು ಪೂರ್ಣ ಭರವಸೆಯಿಂದ ಹೇಳಬಲ್ಲೆ, ಆಗ ರೋಮಾಂಚಕಾರೀ ವಸ್ತುಸ್ಥಿತಿಗಳು ವಿಶ್ವದೆದುರು ಅನಾವರಣಗೊಳ್ಳಲಿವೆ.

ಯೋಗಕ್ಕಾಗಿ ಸೇರಿದ ಜನ, ನಿಮ್ಮಂತೆ ಯೋಗ ಮಾಡಲು ವಿವಿಧ ದೇಶಗಳಲಿ, ಪಾರ್ಕುಗಳಲ್ಲಿ, ತೆರೆದ ಬಯಲುಗಳಲ್ಲಿ, ರಸ್ತೆ ಬದಿಗಳಲ್ಲಿ, ಕಚೇರಿಗಳಲ್ಲಿ, ಮನೆಗಳಲ್ಲಿ , ಆಸ್ಪತ್ರೆಗಳಲ್ಲಿ, ಶಾಲೆಗಳಲ್ಲಿ ಮತ್ತು ಕಾಲೇಜುಗಳಲ್ಲಿ, ಐತಿಹಾಸಿಕ ಕಟ್ಟಡಗಳಲ್ಲಿ ಒಗ್ಗೂಡಿದ ಜನರು ವಿಶ್ವ ಭ್ರಾತೃತ್ವ ಮತ್ತು ಜಾಗತಿಕ ಸ್ನೇಹಶೀಲತೆಯ ಭಾವನೆಗೆ ಇನ್ನಷ್ಟು ಶಕ್ತಿ ತುಂಬುತ್ತಿದ್ದಾರೆ.

ಸ್ನೇಹಿತರೇ, ವಿಶ್ವವು ಯೋಗವನ್ನು ಒಪ್ಪಿಕೊಂಡಿದೆ, ಮತ್ತು ಅದರ ಪ್ರಾಮುಖ್ಯತೆಯ ನೋಟಗಳನ್ನು ಪ್ರತೀ ವರ್ಷ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸುತ್ತಿರುವ ರೀತಿಯಲ್ಲಿ ಕಾಣಬಹುದು.

ವಸ್ತುಸ್ಥಿತಿ ಎಂದರೆ ಉತ್ತಮ ಆರೋಗ್ಯ ಮತ್ತು ಕ್ಷೇಮಕ್ಕಾಗಿ ಯೋಗ ದಿನವು ಒಂದು ದೊಡ್ಡ ಜನಾಂದೋಲನವಾಗಿದೆ.

ಸ್ನೇಹಿತರೇ, ಟೋಕಿಯೋದಿಂದ ಟೊರೊಂಟೋವರೆಗೆ, ಸ್ಟಾಕ್ ಹೋಂನಿಂದ ಸಾವೋ ಪೌಲೋವರೆಗೆ ಮಿಲಿಯಾಂತರ ಜನರ ಬದುಕಿನಲ್ಲಿ ಯೋಗವು ಧನಾತ್ಮಕ ಪ್ರಭಾವ ಬೀರಿದೆ.

ಯೋಗವು ಅದರ ಪ್ರಾಚೀನತೆ ಮತ್ತು ಆಧುನಿಕತೆಯಿಂದಾಗಿ ಸುಂದರವಾಗಿದೆ. ಅದು ಇನ್ನೂ ಸ್ಥಿರವಾಗಿದೆ ಮತ್ತು ಬೆಳೆಯುತ್ತಿದೆ.

ಅದು ನಮ್ಮ ಭೂತಕಾಲದ ಮತ್ತು ವರ್ತಮಾನ ಕಾಲದ ಅತ್ಯುತ್ತಮ ಸಂಗತಿಗಳಲ್ಲೊಂದು ಮತ್ತು ನಮ್ಮ ಭವಿಷ್ಯದ ಆಶಾಕಿರಣವಾಗಿದೆ.

ಯೋಗದಲ್ಲಿ ನಾವು ವ್ಯಕ್ತಿಗತವಾಗಿ ಮತ್ತು ನಮ್ಮ ಸಮಾಜದಲ್ಲಿ ಎದುರಿಸುವ ಸಮಸ್ಯೆಗಳಿಗೆ ಅತ್ಯಂತ ಸೂಕ್ತ ಪರಿಹಾರವಿದೆ.

ನಮ್ಮದು ಎಂದೆಂದೂ ನಿದ್ರಿಸದ ವಿಶ್ವ. ಯಾವುದೇ ಒಂದು ಸಂಧರ್ಭದಲ್ಲಿ ವಿಶ್ವದ ವಿವಿಧ ಭಾಗಗಳಲ್ಲಿ ಏನಾದರೊಂದು ನಡೆಯುತ್ತಿರುತ್ತದೆ.

ಅವಸರದ ಬದುಕು ಬಹಳ ಒತ್ತಡವನ್ನು ತರುತ್ತದೆ. ವಿಶ್ವದಲ್ಲಿ ಪ್ರತೀ ವರ್ಷ 18 ಮಿಲಿಯನ್ ಜನರು ಹೃದಯ ಸಂಬಂಧಿ ಖಾಯಿಲೆಗಳಿಂದ ಸಾಯುತ್ತಾರೆಂಬುದನ್ನು ಓದುವಾಗ ನನಗೆ ದಿಗ್ಭ್ರಮೆಯಾಯಿತು. ಮಧುಮೇಹದೊಂದಿಗಿನ ಹೋರಾಟದಲ್ಲಿ ಸುಮಾರು 1.6 ಮಿಲಿಯನ್ ಜನರು ಸಾಯುತ್ತಾರೆ.

ಶಾಂತ, ಸೃಜನಾತ್ಮಕ ಮತ್ತು ಸಮೃದ್ದ ಜೀವನ ನಡೆಸುವ ದಾರಿಯೆಂದರೆ ಯೋಗ. ಅದು ಆತಂಕವನ್ನು ಮತ್ತು ಮಾನಸಿಕ ಉದ್ವಿಗ್ನತೆಯನ್ನು ತೊಡೆದುಹಾಕುತ್ತದೆ.

ವಿಭಜಿಸುವುದಕ್ಕೆ ಬದಲು ಯೋಗವು ಸದಾ ಎಲ್ಲರನ್ನೂ ಒಗ್ಗೂಡಿಸುತ್ತದೆ.

ದ್ವೇಷವನ್ನು ತಾರಕಕ್ಕೇರಿಸುವುದಕ್ಕೆ ಬದಲು ಯೋಗವು ಎಲ್ಲರನ್ನೂ ಸೇರಿಸುತ್ತದೆ.

ವೇದನೆಗಳನ್ನು ಹೆಚ್ಚಿಸುವುದಕ್ಕೆ ಬದಲು ಗುಣಪಡಿಸುತ್ತದೆ.

ಯೋಗದ ಅನುಷ್ಟಾನಕ್ಕೆ ಶಾಂತಿ, ಸಂತೋಷ ಮತ್ತು ಸಹೋದರತ್ವದ ಶಕೆಯನ್ನು ಆರಂಭಿಸುವ ಶಕ್ತಿ ಇದೆ.

ಹೆಚ್ಚು ಹೆಚ್ಚು ಜನರು ಯೋಗವನ್ನು ಅನುಸರಿಸುತ್ತಿದ್ದಾರೆ, ಅಳವಡಿಸಿಕೊಳ್ಳುತ್ತಿದ್ದಾರೆ ಎಂದರೆ ವಿಶ್ವಕ್ಕೆ ಅದನ್ನು ಕಲಿಸಲು ಹೆಚ್ಚು ಶಿಕ್ಷಕರು ಬೇಕಾಗುತ್ತಾರೆ ಎಂದರ್ಥ. ಕಳೆದ ಮೂರು ವರ್ಷಗಳಲ್ಲಿ ಹಲವಾರು ಮಂದಿ ಯೋಗವನ್ನು ಕಲಿಸುತ್ತಿದ್ದಾರೆ, ಹೊಸ ಸಂಸ್ಥೆಗಳು ಸ್ಥಾಪಿಸಲ್ಪಡುತ್ತಿವೆ.ಮತ್ತು ತಂತ್ರಜ್ಞಾನ ಕೂಡಾ ಯೋಗದ ಜೊತೆಗೆ ಜನರನ್ನು ಜೋಡಿಸುತ್ತಿದೆ. ಈ ಸಂಧರ್ಭವನ್ನು ಮುಂದಿನ ದಿನಗಳಲ್ಲಿ ಬಳಸಿಕೊಳ್ಳಲು ನೀವೆಲ್ಲರೂ ಸಿದ್ದರಾಗಬೇಕು ಎಂದು ಮನವಿ ಮಾಡುತ್ತೇನೆ.

ಈ ಯೋಗ ದಿನವು ಯೋಗದ ಜೊತೆ ನಮ್ಮ ಸಂಬಂಧವನ್ನು ಇನ್ನಷ್ಟು ಆಳಗೊಳಿಸಲಿ ಮತ್ತು ನಮ್ಮ ಸುತ್ತಲಿನ ಜನತೆ ಅದನ್ನು ಅನುಷ್ಟಾನ ಮಾಡುವಂತೆ ಪ್ರೇರೇಪಣೆ ನೀಡಲು ಒಂದು ಅವಕಾಶವಾಗಲಿ ಎಂದು ಹಾರೈಸುತ್ತೇನೆ. ಇದು ಇಂದಿನ ಅಚ್ಚಳಿಯದ ಪರಿಣಾಮವಾಗಬಲ್ಲುದು.

ಸ್ನೇಹಿತರೇ, ಯೋಗವು ಅನಾರೋಗ್ಯದಿಂದ ಆರೋಗ್ಯದ ಕಡೆಗೆ ಸಾಗುವ ಪಥವನ್ನು ವಿಶ್ವಕ್ಕೆ ತೋರಿಸಿಕೊಟ್ತಿದೆ.

ಇದರಿಂದಾಗಿಯೇ ವಿಶ್ವದಾದ್ಯಂತ ಯೋಗದ ಅಂಗೀಕಾರಾರ್ಹತೆ ತ್ವರಿತವಾಗಿ ಹೆಚ್ಚುತ್ತಿದೆ.

ಕೊವೆನ್ಟ್ರಿ ವಿಶ್ವವಿದ್ಯಾಲಯ ಮತ್ತು ರಾಡ್ಬೌಂಡ್ ವಿಶ್ವವಿದ್ಯಾಲಯಗಳು ನಡೆಸಿದ ಅಧ್ಯಯನಗಳು ಯೋಗವು ನಮ್ಮ ದೇಹಕ್ಕೆ ಪರಿಹಾರದಾಯಕ ಅನುಭವ ನೀಡುವುದು ಮಾತ್ರವಲ್ಲದೆ ನಮ್ಮ ಡಿ.ಎನ್.ಎ. ಯಲ್ಲಿ ಅನಾರೋಗ್ಯ ಮತ್ತು ಖಿನ್ನತೆಗೆ ಸಂಬಂಧಿಸಿ ನಡೆಯುವ ಮಾಲಿಕ್ಯುಲಾರ್ ರಾಸಾಯನಿಕ ಕ್ರಿಯೆಗಳನ್ನು ಪರಿವರ್ತಿಸಬಲ್ಲವು ಎಂಬುದನ್ನು ಹೊರಗೆಡವಿವೆ.

ಯೋಗದ ಆಸನಗಳ ದೈನಂದಿನ ಅನುಷ್ಟಾನದಿಂದ ಮತ್ತು ಉಸಿರಾಟದ ವ್ಯಾಯಾಮದಿಂದ ನಾವು ಉತ್ತಮ ಆರೋಗ್ಯ ಹೊಂದುವುದಷ್ಟೇ ಅಲ್ಲ ಜೊತೆಗೆ ಹಲವು ಖಾಯಿಲೆಗಳಿಂದಲೂ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು. ದಿನನಿತ್ಯ ಯೋಗಾಭ್ಯಾಸ ಕುಟುಂಬದ ವೈದ್ಯಕೀಯ ವೆಚ್ಚದ ಮೇಲೂ ನೇರ ಪರಿಣಾಮ ಬೀರುತ್ತದೆ.

ಪ್ರತೀ ಚಟುವಟಿಕೆ , ರಾಷ್ಟ್ರ ನಿರ್ಮಾಣದ ಪ್ರತೀ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತಾಗಲು ನಾವು ಆರೋಗ್ಯವಂತರಾಗಿರಬೇಕಾದುದು ಅವಶ್ಯ. ಮತ್ತು ಈ ನಿಟ್ಟಿನಲ್ಲಿ ಯೋಗಕ್ಕೆ ನಿಶ್ಚಿತವಾಗಿಯೂ ಮಹತ್ವದ ಪಾತ್ರವಿದೆ.

ಆದ್ದರಿಂದ , ಇಂದು, ನಾನು ಯೋಗಾಭ್ಯಾಸ ಮಾಡುತ್ತಿರುವ ನಿಮ್ಮೆಲ್ಲರಲ್ಲೂ ಮನವಿ ಮಾಡುತ್ತೇನೆ, ದಯವಿಟ್ಟು ಅದನ್ನು ದೈನಂದಿನ ಅಭ್ಯಾಸ ಮಾಡಿಕೊಳ್ಳಿ, ಮತ್ತು ಯೋಗವನ್ನು ಇನ್ನೂ ಆರಂಭಿಸದೇ ಇರುವವರು ಆ ನಿಟ್ಟಿನಲ್ಲಿ ಒಮ್ಮೆ ಪ್ರಯತ್ನ ಮಾಡಿ.

ಸ್ನೇಹಿತರೇ , ಯೋಗದ ಪ್ರಸಾರ ಹೆಚ್ಚಿದಂತೆ ವಿಶ್ವವು ಭಾರತಕ್ಕೆ ಬರುತ್ತಿದೆ ಮತ್ತು ಭಾರತವು ವಿಶ್ವಕ್ಕೆ ಇನ್ನಷ್ಟು ನಿಕಟವಾಗುತ್ತಿದೆ. ನಮ್ಮ ಸತತ ಪ್ರಯತ್ನದಿಂದಾಗಿ . ಯೋಗಕ್ಕೆ ಇಂದು ಸ್ಥಾನ ಮಾನ ದೊರೆತಿದೆ, ಅದು ಕಾಲ ಸಾಗಿದಂತೆ ಇನ್ನಷ್ಟು ಬಲಗೊಳ್ಳಲಿದೆ.

ಆರೋಗ್ಯ ಪೂರ್ಣ ಮತ್ತು ಸಂತುಷ್ಟ ಮಾನವತೆಗಾಗಿ ಯೋಗದ ಕುರಿತ ನಮ್ಮ ತಿಳುವಳಿಕೆಯನ್ನು ಇನ್ನಷ್ಟು ಅಭಿವೃದ್ದಿಪಡಿಸುವ ಹೊಣೆಗಾರಿಕೆ ನಮ್ಮ ಮೇಲಿದೆ. ದಯವಿಟ್ಟು ಮುಂದೆ ಬನ್ನಿ, ನಮ್ಮ ಹೊಣೆಗಾರಿಕೆಯನ್ನು ಮನಸ್ಸಿನಲ್ಲಿಟ್ಟುಕೊಂಡು ನಮ್ಮ ಪ್ರಯತ್ನಗಳನ್ನು ಇನ್ನಷ್ಟು ತೀವ್ರಗೊಳಿಸೋಣ.

ಈ ಪುಣ್ಯ ಭೂಮಿಯಿಂದ , ನಾನು ಮತ್ತೊಮ್ಮೆ ವಿಶ್ವದಾದ್ಯಂತ ಇರುವ ಯೋಗಾಸಕ್ತರಿಗೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ.

ಈ ಕಾರ್ಯಕ್ರಮವನ್ನು ಆಯೋಜಿಸಿದ ಉತ್ತರಾಖಂಡದ ಸರಕಾರಕ್ಕೆ ನನ್ನ ವಿಶ್ವಾಸಪೂರ್ವಕ ವಂದನೆಗಳನ್ನು ಸಲ್ಲಿಸುತ್ತೇನೆ.

ಎಲ್ಲರಿಗೂ ಧನ್ಯವಾದಗಳು.