Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

2026ರ ಮುಂಗಾರು ಅಧಿವೇಶನದ ಆರಂಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಹೇಳಿಕೆ

2026ರ ಮುಂಗಾರು ಅಧಿವೇಶನದ ಆರಂಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಹೇಳಿಕೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಂಸತ್ತಿನ ಆವರಣದಲ್ಲಿ 2026ರ ಮುಂಗಾರು ಅಧಿವೇಶನ ಪ್ರಾರಂಭವಾಗುವ ಮೊದಲು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು. ಹೊಸ ಸಂಸತ್ತಿನ ಅಧಿವೇಶನದ ಆರಂಭಕ್ಕೆ ಆಗಮಿಸಿದವರನ್ನು ಸ್ವಾಗತಿಸಿದ ಪ್ರಧಾನಮಂತ್ರಿಯವರು, ನೈಸರ್ಗಿಕ ಹವಾಮಾನ ಮಾದರಿಗಳು ಮತ್ತು ಶಾಸಕಾಂಗ ಉತ್ಪಾದಕತೆಯ ನಡುವೆ ಸಮಾನಾಂತರವಾದ ಹೋಲಿಕೆಯನ್ನು ಮಾಡಿದರು. ರಾಷ್ಟ್ರದ ಸರ್ವತೋಮುಖ ಯೋಗಕ್ಷೇಮದ ಮೇಲೆ ಸಕ್ರಿಯ ಮತ್ತು ದೂರದೃಷ್ಟಿಯ ಕ್ರಮಗಳ ಆಳವಾದ ಪ್ರಭಾವವನ್ನು ಎತ್ತಿಹಿಡಿದ ಪ್ರಧಾನಮಂತ್ರಿಯವರು, ಅಂತಿಮವಾಗಿ ಪ್ರತಿಯೊಂದು ಜೀವಿಗೂ ಪ್ರಯೋಜನವನ್ನು ನೀಡುವ ಅತ್ಯಂತ ರಚನಾತ್ಮಕ ಫಲಿತಾಂಶಗಳ ನಿರೀಕ್ಷೆಯನ್ನು ವ್ಯಕ್ತಪಡಿಸಿದರು. ” ಮುಂಗಾರು ಸಕ್ರಿಯವಾಗಿರಲಿ ಮತ್ತು ಮುಂಗಾರು ಅಧಿವೇಶನವೂ ಉತ್ಪಾದಕವಾಗಿರಲಿ ಎಂದು ನಾವು ಪ್ರಾರ್ಥಿಸುತ್ತೇವೆ,” ಎಂದು ಶ್ರೀ ಮೋದಿ ಹೇಳಿದರು.

ಕಳೆದ ಒಂದು ತಿಂಗಳಲ್ಲಿ ದೃಢವಾದ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಾಧನೆಗಳ ಸರಣಿಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ದೇಶದ ಏರುತ್ತಿರುವ ಜಾಗತಿಕ ಸ್ಥಾನಮಾನದ ಬಗ್ಗೆ ಅಪಾರ ಹೆಮ್ಮೆಯನ್ನು ವ್ಯಕ್ತಪಡಿಸಿದರು. ಕಳೆದ ವರ್ಷದ ಅಧಿವೇಶನಕ್ಕಿಂತ ಮೊದಲು ಭಾರತೀಯ ಪ್ರಜೆಯೊಬ್ಬರು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತಲುಪಿದ್ದನ್ನು ಸ್ಮರಿಸಿದ ಅವರು, ಖಾಸಗಿ ಬಾಹ್ಯಾಕಾಶ ನವೋದ್ಯಮ ‘ಸ್ಕೈರೂಟ್’ ಸಾಧಿಸಿದ ಇತ್ತೀಚಿನ ಐತಿಹಾಸಿಕ ಮೈಲಿಗಲ್ಲನ್ನು ನೆನಪಿಸಿ ಸಂಭ್ರಮಿಸಿದರು. ಕೇವಲ 28 ವರ್ಷಗಳ ಸರಾಸರಿ ವಯಸ್ಸಿನ ತಂಡವೊಂದು ದೇಶವನ್ನು ಖಾಸಗಿ ಬಾಹ್ಯಾಕಾಶ ಪರಿಶೋಧನೆಯ ಹೊಸ ಯುಗಕ್ಕೆ ಯಶಸ್ವಿಯಾಗಿ ಕೊಂಡೊಯ್ದಿದೆ ಎಂಬ ಅದ್ಭುತ ಸಂಗತಿಯನ್ನು ಶ್ಲಾಘಿಸಿದ ಅವರು, ಈ ಸಾಧನೆಗಳು ರಾಷ್ಟ್ರದ ಆತ್ಮವಿಶ್ವಾಸವನ್ನು ಹೇಗೆ ಗಮನಾರ್ಹವಾಗಿ ಹೆಚ್ಚಿಸುತ್ತವೆ ಎಂಬುದನ್ನು ಒತ್ತಿಹೇಳಿದರು. “ನಮ್ಮ ಯುವಕರು ನಡೆಸುತ್ತಿರುವ ಈ ನವೋದ್ಯಮಗಳು ಬಾಹ್ಯಾಕಾಶದಲ್ಲಿ ಭಾರತದ ಧ್ವಜವನ್ನು ದೃಢವಾಗಿ ನೆಟ್ಟಿವೆ, ಇದು ನಮ್ಮ ದೇಶದ ಪ್ರತಿಷ್ಠೆಯನ್ನು ಜಾಗತಿಕವಾಗಿ ಸಾರ್ವತ್ರಿಕ ಮತ್ತು ಸ್ವೀಕಾರಾರ್ಹವಾಗಿಸಿದೆ,” ಎಂದು ಶ್ರೀ ಮೋದಿ ಹೇಳಿದರು.

ಈ ಇತ್ತೀಚಿನ ತಾಂತ್ರಿಕ ಮೈಲಿಗಲ್ಲುಗಳನ್ನು ರಾಷ್ಟ್ರದ ಅಪರಿಮಿತ ಸಾಮರ್ಥ್ಯದ ಉದ್ದೇಶಿತ ಸೂಚಕಗಳು ಎಂದು ಬಣ್ಣಿಸಿದ ಪ್ರಧಾನಮಂತ್ರಿಯವರು, ಪ್ರಸ್ತುತ ಪೀಳಿಗೆಯ ಸಾಮರ್ಥ್ಯಗಳು ಸಂಪೂರ್ಣವಾಗಿ ಸ್ವತಂತ್ರ್ಯವಾಗಿರುವವು ಎಂದು ಘೋಷಿಸಿದರು. ಈ ಐತಿಹಾಸಿಕ ಯಶಸ್ಸುಗಳನ್ನು ಇಡೀ ದೇಶಕ್ಕೆ ಮುನ್ನಡೆಯಲು ಅಂತಿಮ ಪ್ರೇರಣೆಯ ಮೂಲ ಎಂದು ಅವರು ಹೇಳಿದರು. “ನಮ್ಮ ಯುವಕರ ಸಾಮರ್ಥ್ಯ ಮತ್ತು ಆಕಾಂಕ್ಷೆಗಳು ಬಾಹ್ಯಾಕಾಶದಷ್ಟೇ ಅಪರಿಮಿತವಾಗಿವೆ ಎಂಬುದಕ್ಕೆ ಇದು ಪ್ರಬಲ ಸಂದೇಶವಾಗಿದೆ,” ಎಂದು ಶ್ರೀ ಮೋದಿ ಒತ್ತಿ ಹೇಳಿದರು.

ಈ ಅಭೂತಪೂರ್ವ ಉದ್ಯಮಶೀಲತೆಯ ವಿಜಯಗಳ ಮೂಲ ಕಾರಣವನ್ನು ತಿಳಿಸಿದ ಪ್ರಧಾನಮಂತ್ರಿಯವರು, ಸರ್ಕಾರದ ಕ್ಷಿಪ್ರ ಮತ್ತು ಪರಿವರ್ತನಾತ್ಮಕ ನೀತಿ ಬದಲಾವಣೆಗಳಿಗೆ ಇದರ ಶ್ರೇಯಸ್ಸು ನೀಡಿದರು. ಈ ಪ್ರಗತಿಪರ ವಾತಾವರಣವು ಯುವ ನಾವೀನ್ಯಕಾರರಿಗೆ ದೊಡ್ಡ ಅಪಾಯಗಳನ್ನು ಎದುರಿಸಲು   ಮತ್ತು ಅದ್ಭುತ ವಿಜಯಗಳನ್ನು ಸಾಧಿಸಲು ನೇರವಾಗಿ ಶಕ್ತಗೊಳಿಸುತ್ತದೆ ಎಂದು ಅವರು ಒತ್ತಿಹೇಳಿದರು. “ದೇಶವು ಇಂದು ಕೈಗೊಂಡಿರುವ ʻಸುಧಾರಣಾ ಎಕ್ಸ್ಪ್ರೆಸ್ʼನ ಫಲಿತಾಂಶದಿಂದಾಗಿಯೇ ನಮ್ಮ ಯುವಕರು ಇಂತಹ ಮಹಾನ್ ಧೈರ್ಯವನ್ನು ತೋರಿಸಲು ಮತ್ತು ಯಶಸ್ವಿಯಾಗಲು ಸಾಧ್ಯವಾಗಿದೆ,” ಎಂದು ಶ್ರೀ ಮೋದಿ ಪುಷ್ಟೀಕರಿಸಿದರು.

ಬೃಹತ್ ಮೂಲಸೌಕರ್ಯ ಮತ್ತು ತಾಂತ್ರಿಕ ಉದ್ಘಾಟನೆಗಳ ತ್ವರಿತವಾದ ಅನುಕ್ರಮವನ್ನು ವಿವರಿಸಿದ ಪ್ರಧಾನಮಂತ್ರಿಯವರು, ರಾಜಸ್ಥಾನದಲ್ಲಿ ಪ್ರಮುಖ ತೈಲ ಸಂಸ್ಕರಣಾಗಾರ, ದೇಶದ ಮೂರನೇ ಸೆಮಿಕಂಡಕ್ಟರ್ (ಅರೆವಾಹಕ) ಘಟಕ ಮತ್ತು ವಿಶ್ವದ ಅತಿ ಉದ್ದದ ಹಾಗೂ ಅತ್ಯಂತ ಶಕ್ತಿಶಾಲಿ ಹಸಿರು ಜಲಜನಕ ರೈಲಿನ ಇತ್ತೀಚಿನ ಲೋಕಾರ್ಪಣೆಯನ್ನು ಉಲ್ಲೇಖಿಸಿದರು. ಈ ಅತ್ಯುನ್ನತ ರಾಷ್ಟ್ರೀಯ ಆಸ್ತಿಗಳಿಗೆ ದೇಶದ ಬುದ್ಧಿವಂತ ವಿಜ್ಞಾನಿಗಳು, ಎಂಜಿನಿಯರ್ ಗಳು ಮತ್ತು ಕಾರ್ಮಿಕರ ಒಗ್ಗಟ್ಟಾದ ಸಮರ್ಪಣೆ ಮತ್ತು ನಿರಂತರ  ಶ್ರಮವೇ ಸಂಪೂರ್ಣ ಕಾರಣ ಎಂದು ಅವರು ಹೇಳಿದರು. “ಏಕೀಕೃತ, ಒಂದೇ ಗುರಿಯೊಂದಿಗೆ ದೇಶಕ್ಕಾಗಿ ಬಾಳುತ್ತಿರುವ ಮತ್ತು ಕೆಲಸ ಮಾಡುತ್ತಿರುವ ನಮ್ಮ ನಾವೀನ್ಯಕಾರರು, ಉದ್ಯಮಿಗಳು ಮತ್ತು ಕಾರ್ಮಿಕರ ನೇರ ಫಲಿತಾಂಶ ಇದಾಗಿದೆ,” ಎಂದು ಶ್ರೀ ಮೋದಿ ಹೇಳಿದರು.

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷಗಳಿಂದ ಉಂಟಾಗುತ್ತಿರುವ ತೀವ್ರ ಜಾಗತಿಕ ಆತಂಕಗಳ ಬಗ್ಗೆ ಹೇಳಿದ ಪ್ರಧಾನಮಂತ್ರಿಯವರು, ಪೆಟ್ರೋಲ್, ಡೀಸೆಲ್, ಎಲ್ ಪಿಜಿ, ರಸಗೊಬ್ಬರ ಮತ್ತು ರಾಸಾಯನಿಕ ಪೂರೈಕೆ ಸರಪಳಿಗಳಾದ್ಯಂತ ಉಂಟಾದ ಬೃಹತ್ ಅಡೆತಡೆಗಳು ಇಂಧನ ಅವಲಂಬಿತ ದೇಶಕ್ಕೆ ಹೇಗೆ ಆಳವಾದ ಬೆದರಿಕೆಯನ್ನು ಒಡ್ಡಿವೆ ಎಂಬುದನ್ನು ಎತ್ತಿಹಿಡಿದರು. ಈ ತೀವ್ರ ಅಂತರರಾಷ್ಟ್ರೀಯ ಸಮಸ್ಯೆಗಳ ಹೊರತಾಗಿಯೂ, ದೇಶದ ಅದ್ಭುತ ಶೇಕಡಾ 7.7 ರಷ್ಟು ಬೆಳವಣಿಗೆಯ ದರವನ್ನು ಅದರ ಚೇತರಿಕೆ  ಮತ್ತು ಸಾಮರ್ಥ್ಯಕ್ಕೆ ಸಾಕ್ಷಿಯಾಗಿ ಅವರು ಹೆಮ್ಮೆಯಿಂದ ಉಲ್ಲೇಖಿಸಿದರು. ಶಾಸಕಾಂಗ ಕಾರ್ಯಸೂಚಿಗೆ ವಿಷಯದ ಬಗ್ಗೆ  ಹೇಳಿತ್ತಾ, ಈ ಕ್ಷಿಪ್ರ ರಾಷ್ಟ್ರೀಯ ವೇಗವನ್ನು ಬಳಸಿಕೊಳ್ಳುವಂತೆ ಅವರು ಎಲ್ಲಾ ಅತ್ಯಂತ ಅನುಭವೀ ಸಂಸದರನ್ನು ಒತ್ತಾಯಿಸಿದರು. ದೇಶಭಕ್ತಿಗೆ ಆದ್ಯತೆ ನೀಡುವ ಮತ್ತು ಪ್ರತಿಯೊಂದು ಧ್ವನಿ ಹಾಗೂ ಆಲೋಚನೆಗೆ ಗೌರವ ಸಿಗುವುದನ್ನು ಖಚಿತಪಡಿಸಿಕೊಳ್ಳುವ ಆಳವಾದ ರಚನಾತ್ಮಕ, ಸತ್ಯ ಆಧಾರಿತ ಚರ್ಚೆಗಳಿಗೆ ಮನವಿ ಮಾಡಿದರು. ಬೆಳಿಗ್ಗೆ ಸಂಸದರಿಗೆ ಸಭಾಪತಿಯವರು ನೀಡಿದ ಸಾಮಾಜಿಕ ಮಾಧ್ಯಮದ ಸ್ವಾಗತವನ್ನು ಉಲ್ಲೇಖಿಸಿ ಮಾತು ಮುಗಿಸಿದ ಅವರು, ಅಡ್ಡಿಪಡಿಸುವ ಗಲಾಟೆಗಳಿಲ್ಲದ ಅರ್ಥಪೂರ್ಣ ಚರ್ಚೆಗಳಿಗೆ ಕರೆ ನೀಡಿದರು. “ಎಲ್ಲಿ ಬಲವಾದ ಸತ್ಯಗಳು ಮತ್ತು ತರ್ಕಗಳಿವೆಯೋ, ಅಲ್ಲಿ ಅಡೆತಡೆಗಳಿಗೆ ಯಾವುದೇ ಜಾಗವಿಲ್ಲ; ರಾಷ್ಟ್ರವನ್ನು ಆತ್ಮವಿಶ್ವಾಸದಿಂದ ಮುನ್ನಡೆಸಲು ಶಾಂತ ಮನಸ್ಸಿನಿಂದಲೂ ಪ್ರಬಲ ಧ್ವನಿಯನ್ನು ಎತ್ತಬಹುದು,” ಎಂದು ಶ್ರೀ ಮೋದಿ ಒತ್ತಿ ಹೇಳಿದರು.

 

*****