Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸಂಸತ್ತಿನ ಬಜೆಟ್ ಅಧಿವೇಶನ 2018ಕ್ಕೂ ಮುನ್ನ ಮಾಧ್ಯಮಗಳಿಗೆ ಪ್ರಧಾನಿಯವರು ನೀಡಿದ ಹೇಳಿಕೆಯ ಇಂಗ್ಲಿಷ್ ಭಾಷಾಂತರದ ಪಠ್ಯ


ನಮಸ್ಕಾರ ಸೇಹಿತರೆ. 
ಸಂಸತ್ತಿನ ಬಜೆಟ್ ಅಧಿವೇಶನ ಇಂದಿನಿಂದ ಆರಂಭಗೊಳ್ಳಲಿದೆ. ಈ ಅಧಿವೇಶನವು ರಾಷ್ಟ್ರಪತಿಯವರ ಭಾಷಣದೊಂದಿಗೆ ಪ್ರಾರಂಭವಾಗಲಿದೆ.  ಕಳೆದ ಅಧಿವೇಶನದಲ್ಲಿ, ಅದು ನಮ್ಮ ಪ್ರಯತ್ನವಾಗಿತ್ತು ಮತ್ತು ದೇಶ ಸಹ ಟ್ರಿಪಲ್ ತಲಾಖ್ ನಂಥ ಪ್ರಮುಖ ವಿಚಾರಗಳಲ್ಲಿ ಯಾವುದೇ ರಾಜಕೀಯ ಇರುವುದಿಲ್ಲ, ಇದರಿಂದ ಮುಸ್ಲಿಂ ಮಹಿಳೆಯರು ತಮ್ಮ ಹಕ್ಕು ಪಡೆಯುತ್ತಾರೆ ಎಂಬ ಅತ್ಯುನ್ನತ ಭರವಸೆ ಇಟ್ಟುಕೊಂಡಿತ್ತು. ಆದಾಗ್ಯೂ, ಸುಪ್ರೀಂಕೋರ್ಟ್ ತೀರ್ಪಿನ ಹೊರತಾಗಿಯೂ ತ್ರಿವಳಿ ತಲಾಖ್ ಗೆ ಸಂಬಂಧಿಸಿದ ವಿಧೇಯಕ ಸಂಸತ್ತಿನಲ್ಲಿ ಅನುಮೋದನೆ ಪಡೆಯಲಿಲ್ಲ. ಮುಸ್ಲಿಂ ಮಹಿಳೆಯರ ಹಕ್ಕು ರಕ್ಷಿಸುವ ತ್ರಿವಳಿ ತಲಾಖ್ ಮಸೂದೆ ಅನುಮೋದನೆಗೆ ಕೈಜೋಡಿಸುವಂತೆ ನಾನು ದೇಶಾದ್ಯಂತ ಇರುವ ಎಲ್ಲ ರಾಜಕೀಯ ಪಕ್ಷಗಳಿಗೂ ಮನವಿ ಮಾಡುತ್ತೇನೆ.  ಇದು ಹೊಸ ವರ್ಷದಲ್ಲಿ ಮುಸ್ಲಿಂ ಮಹಿಳೆಯರಿಗೆ ನೀಡಬಹುದಾದ ದೊಡ್ಡ ಉಡುಗೊರೆಯಾಗಿದೆ. 


ಬಜೆಟ್ ಅಧಿವೇಶನ ಅತ್ಯಂತ ಮಹತ್ವವಾದ್ದು. ಇಡೀ ಜಾಗತಿಕ ಸಮುದಾಯವೇ ಭಾರತದ ಆರ್ಥಿಕತೆಯ ಮೇಲೆ ಆಶಾಭಾವನೆ ಇಟ್ಟುಕೊಂಡಿದೆ. ವಿಶ್ವ ನಮ್ಮತ್ತ ನೋಡುತ್ತಿರುವ ಸಂದರ್ಭದಲ್ಲಿ ಇದು ಬಂದಿದೆ. ಜಾಗತಿಕ ಕ್ರೆಡಿಟ್ ಶ್ರೇಣೀಕರಣ ಸಂಸ್ಥೆ, ವಿಶ್ವಬ್ಯಾಂಕ್, ಐ.ಎಂ.ಎಫ್ ಇರಬಹುದು, ಇವು ಭಾರತದ ಪ್ರಗತಿಯ ಕುರಿತಂತೆ ಮತ್ತು ಮುಂದಿನ ಹೆಜ್ಜೆಯ ಬಗ್ಗೆ ಧನಾತ್ಮಕ ಭಾವನೆ ಹೊಂದಿವೆ. ಬಜೆಟ್ ತ್ವರಿತವಾಗಿ ಬೆಳೆಯುತ್ತಿರುವ ಆರ್ಥಿಕತೆಗೆ ಚೈತನ್ಯ ತುಂಬುತ್ತದೆ. ಇದು ಶ್ರೀಸಾಮಾನ್ಯನ ಆಶೋತ್ತರಗಳು ಮತ್ತು ನಿರೀಕ್ಷೆಗಳನ್ನು ಈಡೇರಿಸುತ್ತದೆ. ಬಜೆಟ್ ಅಧಿವೇಶನದ ಒಂದು ತಿಂಗಳ ಬಳಿಕ, ವಿವಿಧ ಸಮಿತಿಗಳು ಬಜೆಟ್ ಪ್ರಸ್ತಾವನೆಗಳ ವಿವರಗಳ ಬಗ್ಗೆ ಚರ್ಚೆ ನಡೆಸುತ್ತವೆ. ನಮ್ಮ ಹಿಂದಿನ ಅನುಭವದ ಪ್ರಕಾರ, ಈ ಚರ್ಚೆಗಳಲ್ಲಿ ರಾಜಕೀಯ ಹಿತಕ್ಕಿಂತ ದೇಶದ ಹಿತ ಉನ್ನತವಾಗಿರುತ್ತದೆ. ಪಕ್ಷಾತೀತವಾಗಿ, ಅದರಲ್ಲೂ ಆಡಳಿತ ಪಕ್ಷದ ಸಂಸದರೇ ಲೋಪಗಳನ್ನು ಒತ್ತಿ ಹೇಳಿದರೆ, ಪ್ರತಿಪಕ್ಷಗಳ ಸದಸ್ಯರು ಅದರ ಮುಖ್ಯಾಂಶಗಳ ಬಗ್ಗೆ ಹೇಳುತ್ತಾರೆ. ಒಂದು ರೀತಿಯಲ್ಲಿ ಇದು ಆರೋಗ್ಯಪೂರ್ಣ ಪರಿಸರ ಮತ್ತು ವಾತಾವರಣದಲ್ಲಿ ಚರ್ಚೆ ಮತ್ತು ಸಮಾಲೋಚನೆಗೆ ಅವಕಾಶ ಒದಗಿಸುತ್ತದೆ.

ನಿನ್ನೆ ನಡೆದ ಸರ್ವ ಪಕ್ಷ ಸಭೆಯಲ್ಲಿ, ನಾನು, ಸಮಿತಿಗಳಲ್ಲಿನ ಚರ್ಚೆಯ ಗರಿಷ್ಠ ನೆರವು ಪಡೆದು ಸಾಮಾನ್ಯ ವ್ಯಕ್ತಿಗೆ ಆಯವ್ಯಯದಿಂದ ಹೆಚ್ಚು ಪ್ರಯೋಜನವನ್ನು ಒದಗಿಸುತ್ತೇವೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಒತ್ತಾಯಿಸಿದ್ದೆ. ನಮ್ಮ ಉದ್ದೇಶವು ದಲಿತರು, ತುಳಿತಕ್ಕೊಳಗಾದವರು, ದುರ್ಬಲರು ಮತ್ತು ಈ ಸವಲತ್ತುಗಳಿಗೆ ಯಾವುದೇ ಅವಕಾಶ ಇಲ್ಲದವರನ್ನು ತಲುಪುವುದು ಹೇಗೆ ಎಂಬುದಾಗಿರಬೇಕು. ಗ್ರಾಮೀಣರು, ಬಡವರು, ರೈತರು ಮತ್ತು ಕಾರ್ಮಿಕರು ಹೇಗೆ ಬಜೆಟ್ ನಿಂದ ಹೇಗೆ ಗರಿಷ್ಠ ಲಾಭ ಪಡೆಯುತ್ತಾರೆ ಎಂಬುದನ್ನೂ ನಾವು ನೋಡುವ ಅಗತ್ಯವಿದೆ. ನಾವು ವಿವರವಾದ ಚರ್ಚೆ ಮಾಡೋಣ, ಧನಾತ್ಮಕ ಸಲಹೆಗಳನ್ನು ನೀಡೋಣ ಮತ್ತು ಮುಂದಿನ ಹೆಜ್ಜೆಗೆ ಮಾರ್ಗ ಸೂಚಿ  ರೂಪಿಸೋಣ.

***