Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಅಂಬೇಡ್ಕರ್ ಜಯಂತಿಯಂದು ಛತ್ತೀಸ್ ಗಢದ ಬಿಜಾಪುರದಲ್ಲಿ ಆಯುಷ್ಮಾನ್ ಭಾರತಕ್ಕೆ ಚಾಲನೆ ನೀಡುವ ಅಂಗವಾಗಿ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ಉದ್ಘಾಟಿಸಿದ ಪ್ರಧಾನಿ


ಅಂಬೇಡ್ಕರ್ ಜಯಂತಿಯ ದಿನವಾದ ಇಂದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಆರೋಗ್ಯ ಖಾತ್ರಿ ಕಾರ್ಯಕ್ರಮ – ಆಯುಷ್ಮಾನ್ ಭಾರತಕ್ಕೆ ಚಾಲನೆ ನೀಡುವ ಅಂಗವಾಗಿ, ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ಉದ್ಘಾಟಿಸಿದರು. ಈ ಕೇಂದ್ರವನ್ನು ಛತ್ತೀಸಗಢದ ಆಕಾಂಕ್ಷೆಯ ಜಿಲ್ಲೆ ಬಿಜಾಪುರದ ಜಂಗ್ಲಾ ಅಭಿವೃದ್ಧಿ ತಾಣದಲ್ಲಿ ಉದ್ಘಾಟಿಸಲಾಯಿತು.

ಒಂದು ಗಂಟೆ ಅವಧಿಯಲ್ಲಿ ಪ್ರಧಾನಿಯವರು ಹಲವಾರು ಜನರೊಂದಿಗೆ ಸಂವಾದ ನಡೆಸಿದರು, ಅಭಿವೃದ್ಧಿ ತಾಣದಲ್ಲಿ ಅವರಿಗೆ ಹಲವು ಅಭಿವೃದ್ಧಿ ಉಪಕ್ರಮಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಲಾಯಿತು.

ಆರೋಗ್ಯ ಮತ್ತು ಕ್ಷೇಮ ಕೇಂದ್ರ ಉದ್ಘಾಟನೆಯಲ್ಲಿ, ಅವರು ಆಶಾ ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸಿದರು. ಮಾದರಿ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ, ಅಂಗನವಾಡಿ ಕಾರ್ಯಕರ್ತರು ಮತ್ತು ಪೋಷಣ್ ಅಭಿಯಾನದ ಬಾಲ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ಹಾತ್ ಬಜಾರ್ ಆರೋಗ್ಯ ಕಿಯೋಸ್ಕ್ ಗೆ ಭೇಟಿ ನೀಡಿ, ಆರೋಗ್ಯ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದರು. ಜಂಗ್ಲಾದಲ್ಲಿ ಬ್ಯಾಂಕ್ ಶಾಖೆಯನ್ನು ಅವರು ಉದ್ಘಾಟಿಸಿ, ಮುದ್ರಾ ಯೋಜನೆಯ ಆಯ್ದ ಫಲಾನುಭವಿಗಳಿಗೆ ಸಾಲ ಮಂಜೂರಾತಿ ಪತ್ರ ವಿತರಿಸಿದರು. ಗ್ರಾಮೀಣ ಬಿಪಿಓ ನೌಕರರೊಂದಿಗೆ ಅವರು ಮಾತುಕತೆ ನಡೆಸಿದರು.

ಬಳಿಕ ಪ್ರಧಾನಮಂತ್ರಿಯವರು ಸಾರ್ವಜನಿಕ ಸಭೆಯ ಸ್ಥಳಕ್ಕೆ ಆಗಮಿಸಿದರು. ಅಲ್ಲಿ ಅವರು ಬುಡಕಟ್ಟು ಸಮುದಾಯದ ಸಬಲೀಕರಣದ ಗುರಿ ಹೊಂದಿರುವ ವನ್ ಧನ್ ಯೋಜನೆಗೆ ಚಾಲನೆ ನೀಡಿದರು. ಇದು ಕಿರು ಅರಣ್ಯ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಮತ್ತು ಎಂ.ಎಫ್.ಪಿ. ಮೌಲ್ಯ ಸರಪಣಿಯ ಅಭಿವೃದ್ಧಿಯ ಮೂಲಕ ಮಾರುಕಟ್ಟೆ ವ್ಯವಸ್ಥೆ ಒದಗಿಸಲಿದೆ.

ವಿಡಿಯೋ ಸಂವಾದದ ಮೂಲಕ ಪ್ರಧಾನಮಂತ್ರಿಯವರು ಭಾನುಪ್ರತಾಪಪುರ – ಗುಡುಂ ರೈಲು ಮಾರ್ಗವನ್ನು ದೇಶಕ್ಕೆ ಸಮರ್ಪಿಸಿದರು. ದಲ್ಲಿ ರಾಜ್ ಹರ ಮತ್ತು ಭಾನುಪ್ರತಾಪಪುರ್ ನಡುವಿನ ರೈಲಿಗೂ ಅವರು ಹಸಿರು ನಿಶಾನೆ ತೋರಿಸಿದರು. ಬಿಜಾಪುರ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರವನ್ನೂ ಅವರು ಉದ್ಘಾಟಿಸಿದರು. ಪ್ರಧಾನಮಂತ್ರಿಯವರು ಎಲ್.ಡಬ್ಲ್ಯು.ಇ. ಪ್ರದೇಶಗಳಲ್ಲಿ ಪಿಎಂಜಿಎಸ್.ವೈ ಅಡಿ 1988 ಕಿ.ಮೀ. ರಸ್ತೆ ನಿರ್ಮಾಣಕ್ಕೆ, ಎಲ್.ಡಬ್ಲ್ಯು.ಇ. ಪ್ರದೇಶಗಳ ಇತರ ರಸ್ತೆ ಸಂಪರ್ಕ ಯೋಜನೆಗಳಿಗೆ; ಬಿಜಾಪುರ ನೀರು ಸರಬರಾಜು ಯೋಜನೆಗೆ; ಮತ್ತು ಎರಡು ಸೇತುವೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.

ಉತ್ಸಾಹಿ ಜನಸ್ತೋಮ ಉದ್ದೇಶಿಸಿ ಭಾಷಣ ಮಾಡಿದ ಅವರು, ಬ್ರಿಟಿಷ್ ಸಾಮ್ರಾಜ್ಯಶಾಹಿ ವಿರುದ್ಧ ಹೋರಾಡಿದ ಆ ಪ್ರದೇಶದ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ವಲಯದಲ್ಲಿ ನಕ್ಸಲ್ ಮಾವೋವಾದಿ ದಾಳಿಯಲ್ಲಿ ಮಡಿದ ಭದ್ರತಾ ಸಿಬ್ಬಂದಿಗೂ ಅವರು ಶ್ರದ್ಧಾಂಜಲಿ ಸಲ್ಲಿಸಿದರು. ಕೇಂದ್ರ ಸರ್ಕಾರ ಈ ಮುನ್ನ ಎರಡು ಗಮನಾರ್ಹ ಅಭಿವೃದ್ಧಿ ಉಪಕ್ರಮಗಳಾದ ಶ್ಯಾಮ್ ಪ್ರಸಾದ್ ಮುಖರ್ಜಿ ರುರ್ಬನ್ ಅಭಿಯಾನ ಮತ್ತು ಪ್ರಧಾನಮಂತ್ರಿ ಗ್ರಾಮೀಣ ಆವಾಸ್ ಯೋಜನೆಯನ್ನು ಛತ್ತೀಸಗಢದಿಂದ ಆರಂಭಿಸಿದ್ದನ್ನು ಉಲ್ಲೇಖಿಸಿದರು. ಇಂದು ಆಯುಷ್ಮಾನ್ ಭಾರತ್ ಮತ್ತು ಗ್ರಾಮ್ ಸ್ವರಾಜ್ ಅಭಿಯಾನವನ್ನು ಈ ವೇದಿಕೆಯಿಂದ ಉದ್ಘಾಟಿಸಲಾಗುತ್ತಿದೆ ಎಂದರು. ಗ್ರಾಮ ಸ್ವರಾಜ್ ಅಭಿಯಾನವು ಕೇಂದ್ರ ಸರ್ಕಾರ ಕಳೆದ ನಾಲ್ಕು ವರ್ಷಗಳಿಂದ ಆರಂಭಿಸಿರುವ ಎಲ್ಲ ಅಭಿವೃದ್ಧಿ ಉಪಕ್ರಮಗಳು ಸಮಾಜದ ಬಡವರು ಮತ್ತು ದುರ್ಬಲರಿಗೆ ತಲುಪುವುದನ್ನು ಖಾತ್ರಿಪಡಿಸುತ್ತದೆ ಎಂದರು. ಗ್ರಾಮ ಸ್ವರಾಜ್ ಅಭಿಯಾನ ಇಂದಿನಿಂದ ಆರಂಭವಾಗಿ ಮೇ 5ರವರೆಗೆ ನಡೆಯಲಿದೆ ಎಂದರು.

ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೋಟ್ಯಂತರ ಜನರ ಹೃದಯ ಮತ್ತು ಮನಸ್ಸಿನಲ್ಲಿ “ಮಹತ್ವಾಕಾಂಕ್ಷೆಯನ್ನು” ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಪ್ರಧಾನ ಮಂತ್ರಿ ಹೇಳಿದರು.

ಬಿಜಾಪುರದಲ್ಲಿ ಇಂದು ಕಾರ್ಯಕ್ರಮ ಆಯೋಜಿಸಿರುವ ಮಹತ್ವವನ್ನು ವಿವರಿಸಿದ ಪ್ರಧಾನಿ, ಅಭಿವೃದ್ಧಿಯ ಪಯಣದಲ್ಲಿ ಹಿಂದುಳಿದಿದ್ದ ದೇಶದ 100 ಜಿಲ್ಲೆಗಳಲ್ಲಿ ಬಿಜಾಪುರ ಒಂದಾಗಿದೆ ಎಂದರು. ಇಲ್ಲಿಯವರೆಗೆ ಹಿಂದುಳಿದ ಜಿಲ್ಲೆ ಎಂಬ ಪಟ್ಟ ಕಟ್ಟಿಕೊಂಡಿರುವ ಇವುಗಳನ್ನು ಮಹತ್ವಾಕಾಂಕ್ಷೆಯ ಮತ್ತು ಆಶಯ ಜಿಲ್ಲೆಯಾಗಿ ಪರಿವರ್ತಿಸಲಾಗುವುದು ಎಂದರು. ಈ ಜಿಲ್ಲೆಗಳು ಇನ್ನು ಮುಂದೆ ಅವಲಂಬಿತ ಮತ್ತು ಹಿಂದುಳಿದ ಜಿಲ್ಲೆ ಆಗಿ ಉಳಿಯುವುದಿಲ್ಲ ಎಂದರು. ಜಿಲ್ಲಾಡಳಿತ, ಜನ ಪ್ರತಿನಿಧಿಗಳು ಮತ್ತು ಜನರೆಲ್ಲರೂ ಈ ಸಾಮೂಹಿಕ ಚಳವಳಿಯಲ್ಲಿ ಕೈಜೋಡಿಸಿದರೆ, ಆಗ ಅಭೂತಪೂರ್ವವಾದ ಫಲಿತಾಂಶ ಬರುತ್ತದೆ ಎಂದರು. ಈ 115 ಜಿಲ್ಲೆಗಳಿಗೆ ಸಂಬಂಧಿಸಿದಂತೆ ಸರ್ಕಾರ ವಿಭಿನ್ನ ದೃಷ್ಟಿಕೋನದೊಂದಿಗೆ ಕಾರ್ಯೋನ್ಮುಖವಾಗಿದೆ ಎಂದರು. ಪ್ರತಿಯೊಂದು ಜಿಲ್ಲೆಯೂ ತನ್ನದೇ ಸವಾಲುಗಳನ್ನು ಎದುರಿಸುತ್ತಿವೆ, ಹೀಗಾಗಿ ಪ್ರತಿಯೊಂದು ಪ್ರಕರಣದಲ್ಲೂ ವಿಭಿನ್ನ ಕಾರ್ಯತಂತ್ರದ ಅಗತ್ಯವಿದೆ ಎಂದರು.

ಆಯುಷ್ಮಾನ್ ಭಾರತ ಯೋಜನೆ ದೇಶದಲ್ಲಿ ಸಾಮಾಜಿಕ ಅಸಮತೋಲನ ನಿವಾರಿಸುವಲ್ಲಿ ಮತ್ತು ಸಾಮಾಜಿಕ ನ್ಯಾಯವನ್ನು ದೀರ್ಘಾವಧಿವರೆಗೆ ಖಾತರಿಪಡಿಸುತ್ತದೆ ಎಂದು ಪ್ರಧಾನಿ ಹೇಳಿದರು. ಈ ಯೋಜನೆಯ ಪ್ರಥಮ ಹಂತದಲ್ಲಿ ಪ್ರಾಥಮಿಕ ಆರೋಗ್ಯ ಸೇವೆಯಲ್ಲಿ ಅಗಾಧ ಬದಲಾವಣೆ ತರುವ ಪ್ರಯತ್ನ ನಡೆದಿದೆ ಎಂದು ಅವರು ಹೇಳಿದರು. ದೇಶದ 1.5 ಲಕ್ಷ ಸ್ಥಳಗಳಲ್ಲಿ ಉಪ ಕೇಂದ್ರಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಈಗ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು. 2022ರ ಹೊತ್ತಿಗೆ ಈ ಸವಾಲನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದರು. ಈ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು ಬಡಜನರಿಗೆ ಕುಟುಂಬದ ವೈದ್ಯರಂತೆ ಕಾರ್ಯ ನಿರ್ವಹಿಸಲಿವೆ ಎಂದರು.

ಆಯುಷ್ಮಾನ್ ಭಾರತದ ಮುಂದಿನ ಗುರಿ, ಬಡಜನರಿಗೆ ವೈದ್ಯಕೀಯ ಚಿಕಿತ್ಸೆಗಾಗಿ 5 ಲಕ್ಷ ರೂಪಾಯಿಗಳವರೆಗೆ ಆರ್ಥಿಕ ನೆರವು ನೀಡುವುದಾಗಿದೆ ಎಂದು ಹೇಳಿದರು.

ಕಳೆದ ಹದಿನಾಲ್ಕು ವರ್ಷಗಳಿಂದ ರಾಜ್ಯದಲ್ಲಿ ಮಾಡಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಛತ್ತೀಸಗಢದ ಮುಖ್ಯಮಂತ್ರಿ ಡಾ. ರಮಣಸಿಂಗ್ ಅವರನ್ನು ಪ್ರಧಾನಿ ಶ್ಲಾಘಿಸಿದರು. ಅದರಲ್ಲೂ ದಕ್ಷಿಣ ಜಿಲ್ಲೆಗಳಾದ ಸುಕ್ಮಾ, ದಂತೇವಾಡ ಮತ್ತು ಬಿಜಾಪುರದಲ್ಲಿ ಆಗಿರುವ ಅಭಿವೃದ್ಧಿ ಉಪಕ್ರಮಗಳನ್ನು ಅವರು ಶ್ಲಾಘಿಸಿದರು. ಬಸ್ತಾರ್ ಶೀಘ್ರವೇ ಆರ್ಥಿಕ ತಾಣವಾಗಿ ಪರಿಗಣಿಸಲ್ಪಡುತ್ತದೆ ಎಂದು ಅವರು ಹೇಳಿದರು. ಪ್ರಾದೇಶಿಕ ಅಸಮತೋಲನವನ್ನು ಹೋಗಲಾಡಿಸಲು ಸಂಪರ್ಕದ ಮಹತ್ವವನ್ನು ಅವರು ಪ್ರತಿಪಾದಿಸಿದರು. ಈ ನಿಟ್ಟಿನಲ್ಲಿ ಅವರು ಇಂದು ಚಾಲನೆ ನೀಡಲಾದ ಸಂಪರ್ಕ ಯೋಜನೆಯ ಪ್ರಸ್ತಾಪ ಮಾಡಿದರು.

ಕೇಂದ್ರ ಸರ್ಕಾರ ಕೈಗೊಂಡ ನಿರ್ಧಾರಗಳು ಮತ್ತು ಉಪಕ್ರಮಗಳು ಸಮಾಜದ ಬಡಜನರ ಮತ್ತು ದುರ್ಬಲ ವರ್ಗದವರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ ಹೊಂದಿರುವ ಬದ್ಧತೆಯನ್ನು ತೋರುತ್ತವೆ ಎಂದು ಪ್ರಧಾನಿ ಪ್ರತಿಪಾದಿಸಿದರು. ಈ ನಿಟ್ಟಿನಲ್ಲಿ ಅವರು ವನ್ ಧನ್ ಯೋಜನೆ ಮತ್ತು ಬುಡಕಟ್ಟು ಸಮುದಾಯದ ಪ್ರಯೋಜನಕ್ಕಾಗಿ ಕೈಗೊಂಡಿರುವ ಇತರ ನಿರ್ಧಾರಗಳನ್ನು ಪ್ರಸ್ತಾಪಿಸಿದರು. ಸ್ವಚ್ಛ ಭಾರತ ಅಭಿಯಾನ, ಬೇಟಿ ಬಚಾವೋ ಬೇಟಿ ಪಡಾವೋ ಮತ್ತು ಉಜ್ವಲ ಯೋಜನೆಯ ಪ್ರಸ್ತಾಪ ಮಾಡಿದ ಅವರು ಈ ಯೋಜನೆಗಳು ಮಹಿಳೆಯರಿಗೆ ಪ್ರಯೋಜನಕಾರಿಯಾಗಿವೆ ಎಂದರು. ಜನರ ಪಾಲ್ಗೊಳ್ಳುವಿಕೆ ಸರ್ಕಾರದ ಬಲವಾಗಿದೆ ಎಂದ ಪ್ರಧಾನಿ, ಇದು 2022ರ ಹೊತ್ತಿಗೆ ನವ ಭಾರತದ ನಿರ್ಮಾಣಕ್ಕೆ ನೆರವಾಗಲಿದೆ ಎಂದರು.

*****