Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಇಂಡೋನೇಷ್ಯಾ ಅಧ್ಯಕ್ಷರೊಂದಿಗೆ ಜಂಟಿ ಪತ್ರಿಕಾ ಹೇಳಿಕೆಯ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಪತ್ರಿಕಾ ಹೇಳಿಕೆಯ ಕನ್ನಡ ಅನುವಾದ

ಇಂಡೋನೇಷ್ಯಾ ಅಧ್ಯಕ್ಷರೊಂದಿಗೆ ಜಂಟಿ ಪತ್ರಿಕಾ ಹೇಳಿಕೆಯ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಪತ್ರಿಕಾ ಹೇಳಿಕೆಯ ಕನ್ನಡ ಅನುವಾದ


ಘನತೆವೆತ್ತ ಅಧ್ಯಕ್ಷರಾದ ಪ್ರಬೋವೊ ಅವರೇ,
ಎರಡೂ ದೇಶಗಳ ಗೌರವಾನ್ವಿತ ಪ್ರತಿನಿಧಿಗಳೇ,
ಮಾಧ್ಯಮದ ಸ್ನೇಹಿತರೇ,
ನಮಸ್ಕಾರ!
ಸೆಲಾಮತ್‌ ಸಿಯಾಂಗ್‌!

ಮೊದಲನೆಯದಾಗಿ, ಆತ್ಮೀಯ ಮತ್ತು ಸೌಹಾರ್ದಯುತ ಸ್ವಾಗತಕ್ಕಾಗಿ ನನ್ನ ಸ್ನೇಹಿತರು ಹಾಗೂ ಅಧ್ಯಕ್ಷರೂ ಆಗಿರುವ ಪ್ರಬೋವೊ ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ.

ಕಳೆದ ವರ್ಷ ಭಾರತದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅಧ್ಯಕ್ಷ ಪ್ರಬೋವೊ ಅವರನ್ನು ಸ್ವಾಗತಿಸುವ ಗೌರವ ನಮಗೆ ದೊರೆತಿತ್ತು. ಇಂದು, ಅವರ ಆತ್ಮೀಯ ಮತ್ತು ಪ್ರೀತಿಯ ಆಹ್ವಾನದ ಮೇರೆಗೆ ಇಂಡೋನೇಷ್ಯಾಕ್ಕೆ ಭೇಟಿ ನೀಡುತ್ತಿರುವುದು ನನಗೆ ಅತೀವ ಸಂತೋಷದ ಸಂಗತಿಯಾಗಿದೆ.

ಇಂದು ಬೆಳಗ್ಗೆ, ಇಂಡೋನೇಷ್ಯಾದ ಅತ್ಯುನ್ನತ ನಾಗರೀಕ ಪ್ರಶಸ್ತಿಯನ್ನು ಅತ್ಯಂತ ಆತ್ಮೀಯತೆ ಮತ್ತು ಗೌರವದಿಂದ ಸ್ವೀಕರಿಸಲು ನನಗೆ ತುಂಬಾ ಗೌರವವೆನಿಸಿದೆ. ಈ ಗೌರವ ಕೋಟ್ಯಂತರ ಭಾರತೀಯರಿಗೆ ಸಲ್ಲಬೇಕು. ಇದು ಇಂಡೋನೇಷ್ಯಾದ ಜನರ ಸದ್ಭಾವನೆಯನ್ನು ಪ್ರತಿಬಿಂಬಿಸುತ್ತದೆ. ಜೊತೆಗೆ, ಭಾರತ ಮತ್ತು ಇಂಡೋನೇಷ್ಯಾ ನಡುವಿನ ಐತಿಹಾಸಿಕ ಮತ್ತು ಶಾಶ್ವತ ಸ್ನೇಹ ಸಂಬಂಧಗಳಿಗೆ ಸಂದ ಗೌರವ ಇದಾಗಿದೆ. ಈ ಗೌರವಕ್ಕಾಗಿ ನಾನು ಅಧ್ಯಕ್ಷ ಪ್ರಬೋವೊ, ಇಂಡೋನೇಷ್ಯಾ ಸರ್ಕಾರ ಮತ್ತು ಇಂಡೋನೇಷ್ಯಾದ ಜನರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.

ಇತ್ತೀಚಿನ ವರ್ಷಗಳಲ್ಲಿ, ಭಾರತ ಮತ್ತು ಇಂಡೋನೇಷ್ಯಾ ನಡುವಿನ ಸಂಬಂಧವು ಹೊಸ ಶಕ್ತಿ, ಮತ್ತಷ್ಟು ವಿಶ್ವಾಸ ಹಾಗೂ ಆಳವಾದ ಕಾರ್ಯತಂತ್ರ ಸ್ಥಾನವನ್ನು ಪಡೆದುಕೊಂಡಿದೆ.

2018ರಲ್ಲಿ ಸ್ಥಾಪನೆಯಾದ ನಮ್ಮ ʻಸಮಗ್ರ ಕಾರ್ಯತಂತ್ರದ ಸಹಭಾಗಿತ್ವʼವು ಇಂದು ಹೊಸ ಎತ್ತರವನ್ನು ತಲುಪುತ್ತಿದೆ. ಅಭಿವೃದ್ಧಿ, ಭದ್ರತೆ, ತಂತ್ರಜ್ಞಾನ, ಸಂಸ್ಕೃತಿ ಮತ್ತು ಶಿಕ್ಷಣ ಸೇರಿದಂತೆ ಸಹಕಾರದ ಪ್ರತಿಯೊಂದು ಕ್ಷೇತ್ರದಲ್ಲೂ ನಾವು ಗಮನಾರ್ಹ ದಾಪುಗಾಲು ಹಾಕುತ್ತಿದ್ದೇವೆ.

ಇಂದು ಭಾರತ-ಇಂಡೋನೇಷ್ಯಾ ಸಹಭಾಗಿತ್ವದಲ್ಲಿ ಹೊಸ ಸುವರ್ಣ ಅಧ್ಯಾಯದ ಆರಂಭವಾಗಿದೆ ಎಂಬ ವಿಶ್ವಾಸ ನನಗಿದೆ. ಈ ಹೊಸ ಅಧ್ಯಾಯವು ಇಪ್ಪತ್ತೊಂದನೇ ಶತಮಾನದ ಜಗತ್ತಿನ ಮೇಲೆ ಮತ್ತು ಒಟ್ಟಾರೆಯಾಗಿ ಮಾನವೀಯತೆಯ ಮೇಲೆ ಆಳವಾದ ಮತ್ತು ಸಕಾರಾತ್ಮಕ ಪರಿಣಾಮ ಬೀರಲಿದೆ.

ನಮ್ಮ ಎರಡೂ ದೇಶಗಳ ನಡುವೆ ಹೆಚ್ಚುತ್ತಿರುವ ವಿಶ್ವಾಸವು ರಕ್ಷಣೆ, ಭದ್ರತೆ ಮತ್ತು ಕಡಲ ಕ್ಷೇತ್ರದಲ್ಲಿ ನಮ್ಮ ಸಹಕಾರವನ್ನು ಬಲಪಡಿಸುತ್ತಿದೆ. ಇಂದು, ರಕ್ಷಣಾ ಸಹಕಾರ, ವಿಪತ್ತು ನಿರ್ವಹಣೆ ಮತ್ತು ಕೈಗಾರಿಕಾ ಸಹಕಾರದಲ್ಲಿ ಸಹಯೋಗವನ್ನು ಮತ್ತಷ್ಟು ಹೆಚ್ಚಿಸಲು ನಾವು ಪರಸ್ಪರ ಸಮ್ಮತಿಸಿದ್ದೇವೆ.

ಹಿಂದೂ ಮಹಾಸಾಗರದಲ್ಲಿ ಕಡಲ ಸುರಕ್ಷತೆ ಮತ್ತು ಭದ್ರತೆಯನ್ನು ಹೆಚ್ಚಿಸಲು ನಮ್ಮ ಎರಡು ಕರಾವಳಿ ಕಾವಲು ಪಡೆಗಳು ಈಗ ಒಗ್ಗೂಡಿ ಕೆಲಸ ಮಾಡಲಿವೆ. ಎರಡು ನಿಕಟ ಕಡಲ ರಾಷ್ಟ್ರಗಳಾಗಿ, ನಾವು ನೀಲಿ ಆರ್ಥಿಕತೆ, ಬಂದರು ಅಭಿವೃದ್ಧಿ ಮತ್ತು ಕಡಲ ವ್ಯಾಪಾರದಲ್ಲಿ ನಮ್ಮ ಸಹಕಾರವನ್ನು ಆಳಗೊಳಿಸಲು ನಿರ್ಧರಿಸಿದ್ದೇವೆ.

ಮಿತ್ರರೇ,

ಭಾರತ ಮತ್ತು ಇಂಡೋನೇಷ್ಯಾ ಎರಡೂ ದೇಶಗಳಿಗೂ ಬಡತನ ನಿರ್ಮೂಲನೆ ಹಾಗೂ ಪ್ರತಿಯೊಬ್ಬ ನಾಗರಿಕರಿಗೂ ಜನಕಲ್ಯಾಣ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ತಲುಪಿಸುವುದು ಅತ್ಯುನ್ನತ ಆದ್ಯತೆಯಾಗಿದೆ. ಮಧ್ಯಾಹ್ನದ ಬಿಸಿಯೂಟ ಯೋಜನೆ ಮತ್ತು ನಾಗರೀಕ ಸರಬರಾಜು ವ್ಯವಸ್ಥೆಗೆ ಸಂಬಂಧಿಸಿದ ನಮ್ಮ ಅನುಭವ ಮತ್ತು ಪರಿಹಾರಗಳನ್ನು ನಾವು ಇಂಡೋನೇಷ್ಯಾದೊಂದಿಗೆ ಹಂಚಿಕೊಂಡಿದ್ದೇವೆ. ನಾವು ಈಗ ಈ ಸಹಕಾರವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತಿದ್ದೇವೆ.

ಆರೋಗ್ಯ ಕ್ಷೇತ್ರದಲ್ಲಿನ ನಮ್ಮ ಸಹಕಾರವು ನಮ್ಮ ಎರಡೂ ದೇಶಗಳಲ್ಲಿ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಖಾತ್ರಿಪಡಿಸಲು ಮಹತ್ವದ ಕೊಡುಗೆ ನೀಡುತ್ತದೆ. ಇಂದು ಅಂತಿಮಗೊಂಡ ಈ ಕುರಿತಾದ ಒಪ್ಪಂದವು ಇಂಡೋನೇಷ್ಯಾದ ಜನರಿಗೆ ಭಾರತದ ಉತ್ತಮ ಗುಣಮಟ್ಟದ ಮತ್ತು ಕೈಗೆಟಕುವ ದರದಲ್ಲಿ ಔಷಧಗಳ ಲಭ್ಯತೆಗೆ ಅವಕಾಶ ಕಲ್ಪಿಸುತ್ತದೆ.

ಇಂಡೋನೇಷ್ಯಾದ ವೈದ್ಯರು ಮತ್ತು ಆರೋಗ್ಯ ವೃತ್ತಿಪರರ ಸಾಮರ್ಥ್ಯ ವರ್ಧನೆಗೂ ನಾವು ಕೊಡುಗೆ ನೀಡುತ್ತೇವೆ. ಭಾರತದಲ್ಲಿ ಅಭಿವೃದ್ಧಿಪಡಿಸಿದ ಗೋಧಿ ಬೀಜಗಳ ಪೂರೈಕೆಯು ಇಂಡೋನೇಷ್ಯಾದ ಆಹಾರ ಭದ್ರತೆಯನ್ನು ಮತ್ತಷ್ಟು ಬಲಪಡಿಸುತ್ತದೆ. ಇದರ ಜೊತೆಗೆ, ಸುಸ್ಥಿರ ಕೃಷಿ ಮತ್ತು ಕೃಷಿ ತಂತ್ರಜ್ಞಾನದಲ್ಲಿ ನಾವು ಉತ್ತಮ ರೂಢಿಗಳನ್ನು ಪರಸ್ಪರ ಹಂಚಿಕೊಳ್ಳಲಿದ್ದೇವೆ.

ಮಿತ್ರರೇ,

ಇಪ್ಪತ್ತೊಂದನೇ ಶತಮಾನವು ತಂತ್ರಜ್ಞಾನ ಚಾಲಿತ ಶತಮಾನವಾಗಿದೆ. ಭಾರತ ಮತ್ತು ಇಂಡೋನೇಷ್ಯಾ ಎರಡೂ ದೇಶಗಳು ತಮ್ಮ ಯುವಜನರ ಶಕ್ತಿಯಿಂದ ಪ್ರೇರಿತವಾಗಿವೆ. ನಮ್ಮ ಯುವಜನರು ತಂತ್ರಜ್ಞಾನದ ಬಗ್ಗೆ ಸ್ವಾಭಾವಿಕ ಬಾಂಧವ್ಯವನ್ನು ಹೊಂದಿದ್ದಾರೆ.

ಇಂದು, ಕೃತಕ ಬುದ್ಧಿಮತ್ತೆ, ದೂರಸಂಪರ್ಕ ಮತ್ತು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದಂತಹ ಕ್ಷೇತ್ರಗಳಲ್ಲಿ ನಮ್ಮ ಯುವಜನರ ನಡುವೆ ತಂತ್ರಜ್ಞಾನ ಸಹಕಾರವನ್ನು ಬಲಪಡಿಸುವ ಮಹತ್ವದ ಒಪ್ಪಂದವನ್ನು ನಾವು ಆಖೈರುಗೊಳಿಸಿದ್ದೇವೆ. ನಮ್ಮ ಎರಡೂ ದೇಶಗಳ ನವೋದ್ಯಮ ಪರಿಸರ ವ್ಯವಸ್ಥೆಗಳ ನಡುವಿನ ಸಹಯೋಗವನ್ನು ಮತ್ತಷ್ಟು ಗಾಢವಾಗಿಸಲು ನಾವು ಪರಸ್ಪರ ಸಮ್ಮತಿಸಿದ್ದೇವೆ.

ನಾವು ಇಂಡೋನೇಷ್ಯಾದಲ್ಲಿ ಪ್ರತಿಷ್ಠಿತ ʻಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ʼ(ಐಐಎಂ)-ಬೆಂಗಳೂರಿನ ಸಾಗರೋತ್ತರ ಕ್ಯಾಂಪಸ್ ಅನ್ನು ಸ್ಥಾಪಿಸಲಿದ್ದೇವೆ. ಇದು ʻಆಸಿಯಾನ್ʼ ವಲಯದಾದ್ಯಂತ ಯುವಜನರಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ.

ಬಾಹ್ಯಾಕಾಶ ಕ್ಷೇತ್ರದಲ್ಲಿ ನಮ್ಮ ಸಹಕಾರವು ದಶಕಗಳ ಕಾಲದ ನಂಬಿಕೆ ಮತ್ತು ಪಾಲುದಾರಿಕೆಯ ಮೇಲೆ ನೆಲೆಗೊಂಡಿದೆ. ಈ ಬಲವಾದ ಅಡಿಪಾಯದ ಮೇಲೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಜಂಟಿ ಸಂಶೋಧನೆ, ತಂತ್ರಜ್ಞಾನ ವಿನಿಮಯ ಮತ್ತು ಸಾಮರ್ಥ್ಯ ವರ್ಧನೆಯನ್ನು ಮುನ್ನಡೆಸಲು ನಾವು ಇಂದು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ.

ಸ್ನೇಹಿತರೇ,

ಇಂದಿನ ಜಗತ್ತಿನಲ್ಲಿ, ತಂತ್ರಜ್ಞಾನದಲ್ಲಿ “ಪೂರೈಕೆ ಸರಪಳಿಯ ಸದೃಢತೆ” ಅತ್ಯಂತ ಮಹತ್ವದ್ದಾಗಿದೆ. ನಿರ್ಣಾಯಕ ಖನಿಜಗಳು ಮತ್ತು ಉಕ್ಕಿನ ಕ್ಷೇತ್ರಗಳಲ್ಲಿ ಪೂರೈಕೆ ಸರಪಳಿಯ ಸದೃಢತೆಯನ್ನು ಬಲಪಡಿಸಲು ನಾವು ಒಂದು ಪ್ರಮುಖ ಒಪ್ಪಂದವನ್ನು ಅಂತಿಮಗೊಳಿಸಿದ್ದೇವೆ. ಇದಲ್ಲದೆ, ನಮ್ಮ ಕಂಪನಿಗಳು ಸ್ಟೇನ್‌ಲೆಸ್ ಸ್ಟೀಲ್ ಮತ್ತು ಅಪರೂಪದ ಭೂಮಿಯ ಆಯಸ್ಕಾಂತಗಳ ಕುರಿತ ಪಾಲುದಾರಿಕೆಯಲ್ಲಿ ಹೊಸ ಹಂತವನ್ನು ಪ್ರಾರಂಭಿಸುತ್ತಿವೆ.

ಸ್ನೇಹಿತರೇ,

ಜನರ ನಡುವಿನ ಸಂಬಂಧಗಳು ನಮ್ಮ ಬಾಂಧವ್ಯದ ದೊಡ್ಡ ಶಕ್ತಿಯಾಗಿದೆ. ಭಾರತದ ʻಏಕೀಕೃತ ಪಾವತಿ ಇಂಟರ್‌ಫೇಸ್ʼ(ಯುಪಿಐ) ಶೀಘ್ರವೇ ಇಂಡೋನೇಷ್ಯಾದ ಪಾವತಿ ವ್ಯವಸ್ಥೆಯೊಂದಿಗೆ ಸಂಯೋಜನೆಗೊಳ್ಳುತ್ತಿರುವುದು ನಮಗೆ ಸಂತಸ ತಂದಿದೆ. ಇದು ನಮ್ಮ ಎರಡೂ ದೇಶಗಳ ನಡುವಿನ ಸುಗಮ ವ್ಯಾಪಾರ ಮತ್ತು ಸುಗಮ ಪ್ರಯಾಣದ ಎರಡನ್ನೂ ಮತ್ತಷ್ಟು ಸುಧಾರಿಸಲಿದೆ.

ಸ್ನೇಹಿತರೆ,

ನಾಳೆ, ಯೋಗ್ಯಕರ್ತಾದಲ್ಲಿ ಅಧ್ಯಕ್ಷ ಪ್ರಬೋವೊ ಅವರೊಂದಿಗೆ ಪ್ರಂಬನನ್ ದೇವಾಲಯದ ಸಂರಕ್ಷಣಾ ಯೋಜನೆಯನ್ನು ಉದ್ಘಾಟಿಸುವ ಸೌಭಾಗ್ಯ ನನಗೆ ದೊರೆತಿದೆ. ಒಂದು ಸಾವಿರ ವರ್ಷಗಳಿಗೂ ಹೆಚ್ಚು ಪುರಾತನವಾದ ಈ ಪ್ರಂಬನನ್ ದೇವಾಲಯವು ಭಾರತ ಮತ್ತು ಇಂಡೋನೇಷ್ಯಾದ ನಡುವಿನ ಹಂಚಿಕೆಯ ಸಾಂಸ್ಕೃತಿಕ ಪರಂಪರೆಯ ಕಾಲಾತೀತ ಸಂಕೇತವಾಗಿ ನಿಂತಿದೆ.

ಗುರುದೇವ್ ರವೀಂದ್ರನಾಥ ಟ್ಯಾಗೋರ್ ಅವರ ಐತಿಹಾಸಿಕ ಇಂಡೋನೇಷ್ಯಾ ಭೇಟಿಯ ಶತಮಾನೋತ್ಸವವನ್ನು ನಮ್ಮ ಎರಡೂ ದೇಶಗಳು ಬಹಳ ಉತ್ಸಾಹದಿಂದ ಆಚರಿಸಲಿವೆ. ಇಂಡೋನೇಷ್ಯಾದ ರಾಷ್ಟ್ರ ನಿರ್ಮಾಣದ ಗಮನಾರ್ಹ ಪ್ರಯಾಣಕ್ಕೆ ದೂರದೃಷ್ಟಿಯ ಶಿಕ್ಷಣ ತಜ್ಞ ಮತ್ತು ಆ ದೇಶದ ಮೊದಲ ಶಿಕ್ಷಣ ಸಚಿವ ಕಿ ಹಜರ್ ದೇವಂತರಾ ಅವರು ಕೊಡುಗೆ ಅಪಾರವಾದುದು. ಅವರ ಶೈಕ್ಷಣಿಕ ತತ್ವವು ಗುರುದೇವ್ ಟ್ಯಾಗೋರ್ ಅವರ ಆಲೋಚನೆಗಳಿಂದ ಗಾಢವಾಗಿ ಪ್ರಭಾವಿತವಾಗಿತ್ತು. ಈ ಹಂಚಿಕೆಯ ಬೌದ್ಧಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಗುರುತಿಸಿ, ಭಾರತ ಮತ್ತು ಇಂಡೋನೇಷ್ಯಾ ಈ ಶತಮಾನೋತ್ಸವವನ್ನು “ಸಾಂಸ್ಕೃತಿಕ ಮತ್ತು ಶೈಕ್ಷಣಿಕ ರಾಜತಾಂತ್ರಿಕತೆಯ ಟ್ಯಾಗೋರ್-ದೇವಂತರ ವರ್ಷ” ಎಂದು ಆಚರಿಸಲಿವೆ.

ಮಿತ್ರರೇ,

ಪ್ರಜಾಸತ್ತಾತ್ಮಕ ಮೌಲ್ಯಗಳು ಮತ್ತು ವಿವಿಧತೆಯಲ್ಲಿ ಏಕತೆ  – ಇವು ಭಾರತ ಮತ್ತು ಇಂಡೋನೇಷ್ಯಾ ಬಹಳ ಹಿಂದಿನಿಂದಲೂ ಪರಸ್ಪರ ಹಂಚಿಕೊಂಡ ಶಕ್ತಿಗಳಾಗಿವೆ. ನಮ್ಮ ಎರಡೂ ದೇಶಗಳ ಚುನಾವಣಾ ಆಯೋಗಗಳ ನಡುವೆ ಇಂದು ಸಹಿ ಹಾಕಲಾದ ಒಪ್ಪಂದವು ನಮ್ಮ ಪ್ರಜಾಸತ್ತಾತ್ಮಕ ಸಹಕಾರವನ್ನು ಮತ್ತಷ್ಟು ಬಲಪಡಿಸುತ್ತದೆ.

 

ಸ್ನೇಹಿತರೆ,
ಭಾರತ ಮತ್ತು ಇಂಡೋನೇಷ್ಯಾ ಜಾಗತಿಕ ವಿಷಯಗಳ ಬಗ್ಗೆ ತಮ್ಮ ಸಹಕಾರವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವುದನ್ನು ಮುಂದುವರಿಸಿವೆ. ಇಂಡೋ-ಪೆಸಿಫಿಕ್ ಬಗ್ಗೆ ನಮ್ಮ ದೃಷ್ಟಿಕೋನಗಳಲ್ಲಿ ಬಲವಾದ ಹೊಂದಾಣಿಕೆ ಇದೆ. ಭಾರತವು ಸದಾ ʻಆಸಿಯಾನ್ʼ ಅನ್ನು ಕೇಂದ್ರವನ್ನಾಗಿ ಮಾಡಲು ವಿಶೇಷ ಪ್ರಾಮುಖ್ಯತೆಯನ್ನು ನೀಡುತ್ತಾ ಬಂದಿದೆ.

ಜಾಗತಿಕ ಪ್ರಕ್ಷುಬ್ಧತೆಯ ಈ ಸಮಯದಲ್ಲಿ, ಮಾತುಕತೆ ಮತ್ತು ರಾಜತಾಂತ್ರಿಕತೆಯ ಪಾತ್ರವು ಹಿಂದೆಂದಿಗಿಂತಲೂ ಹೆಚ್ಚು ಮಹತ್ವದ್ದಾಗಿದೆ ಎಂದು ಭಾರತ ನಂಬುತ್ತದೆ. ಪ್ಯಾಲೆಸ್ತೀನ್ ವಿಷಯದಲ್ಲಿ, ನಾವು ʻಎರಡು ದೇಶಗಳ ಪರಿಹಾರʼ ಮತ್ತು ಶಾಶ್ವತ ಶಾಂತಿಯ ಅನ್ವೇಷಣೆಗೆ ಬೆಂಬಲವನ್ನು  ಮುಂದುವರಿಸುತ್ತೇವೆ.

ಸ್ನೇಹಿತರೇ,

ನಮ್ಮ ಎರಡೂ ರಾಷ್ಟ್ರಗಳು ಈಗ ಸುವರ್ಣಯುಗ ಹೊಸ್ತಿಲಲ್ಲಿವೆ.

ನಮ್ಮ ಇತಿಹಾಸವು ಹಂಚಿಕೆಯ ಸಾಂಸ್ಕೃತಿಕ ಪರಂಪರೆಯಲ್ಲಿ ಬೇರೂರಿದೆ,
ನಮ್ಮ ವರ್ತಮಾನವು ಪರಸ್ಪರ ನಂಬಿಕೆಯ ಮೇಲೆ ನಿಂತಿದೆ
ಮತ್ತು ನಮ್ಮ ಭವಿಷ್ಯವನ್ನು ಹಂಚಿಕೆಯ ಸಮೃದ್ಧಿಯಿಂದ ವ್ಯಾಖ್ಯಾನಿಸಲಾಗಿದೆ.

ನಾವು ಒಟ್ಟಾಗಿ, ಇಂಡೋನೇಷ್ಯಾದ “ಎಮಾಸ್”ನ ಆಶಯ ಮತ್ತು “ವಿಕಸಿತ ಭಾರತ”ವನ್ನು ನಿರ್ಮಿಸುವ ನಮ್ಮ ಸಂಕಲ್ಪವನ್ನು ಸಾಕಾರಗೊಳಿಸುತ್ತೇವೆ ಎಂಬ ವಿಶ್ವಾಸ ನನಗಿದೆ.

ಅನಂತ ಧನ್ಯವಾದಗಳು.

 

ಗಮನಿಸಿ: ಇದು ಪ್ರಧಾನಮಂತ್ರಿ ಅವರ ಹೇಳಿಕೆಯ ಅಂದಾಜು ಅನುವಾದ. ಮೂಲ ಹೇಳಿಕೆಗಳನ್ನು ಹಿಂದಿಯಲ್ಲಿ ನೀಡಲಾಗಿದೆ.

 

*****