Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಜಕಾರ್ತದಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಮಂತ್ರಿ

ಜಕಾರ್ತದಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜಕಾರ್ತದಲ್ಲಿಂದು ನಡೆದ ಅನಿವಾಸಿ ಭಾರತೀಯ ಸಮುದಾಯದ ಸ್ವಾಗತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮಕ್ಕೆ ಆಗಮಿಸಿದ ಅವರಿಗೆ, ಅನಿವಾಸಿ ಭಾರತೀಯರು ಮತ್ತು ಭಾರತದ ಇಂಡೋನೇಷ್ಯಾದ ಸ್ನೇಹಿತರು ದೊಡ್ಡ ಸಂಖ್ಯೆಯಲ್ಲಿ ಸೇರಿ ಆತ್ಮೀಯ ಮತ್ತು ಉತ್ಸಾಹಭರಿತ ಸ್ವಾಗತ ನೀಡಿದರು. ವಿಶೇಷ ಗೌರವದ ಸಂಕೇತವಾಗಿ ಇಂಡೋನೇಷ್ಯಾ ಗಣರಾಜ್ಯದ ಅಧ್ಯಕ್ಷರಾದ ಗೌರವಾನ್ವಿತ ಶ್ರೀ ಪ್ರಬೋವೊ ಸುಬಿಯಾಂಟೊ ಅವರು ಕೂಡ ಈ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರೊಂದಿಗೆ ಪಾಲ್ಗೊಂಡರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ಉತ್ಸಾಹಭರಿತ ಸ್ವಾಗತಕ್ಕಾಗಿ ಸಮುದಾಯಕ್ಕೆ ಧನ್ಯವಾದ ಅರ್ಪಿಸಿದರು. ಅಧ್ಯಕ್ಷ ಪ್ರಬೋವೊ ಅವರ ಉಪಸ್ಥಿತಿಗೆ ಕೃತಜ್ಞತೆ ಸಲ್ಲಿಸಿದ ಪ್ರಧಾನ ಮಂತ್ರಿ, ಅವರನ್ನು ಒಬ್ಬ ಮಹಾನ್ ನಾಯಕ ಮತ್ತು ಭಾರತದ ನಿಜವಾದ ಮಿತ್ರ ಎಂದು ಬಣ್ಣಿಸಿದರು. ಇಂಡೋನೇಷ್ಯಾದ ಪ್ರಗತಿ ಮತ್ತು ಸಮೃದ್ಧಿಗೆ  ಅನಿವಾಸಿ ಭಾರತೀಯರು ನೀಡುತ್ತಿರುವ ಕೊಡುಗೆಯನ್ನು ಶ್ಲಾಘಿಸಿದ ಅವರು, ಎರಡೂ ದೇಶಗಳ ನಡುವಿನ ಸ್ನೇಹದ ‘ಜೀವಂತ ಸೇತುವೆ’ಯಾಗಿ ಸಮುದಾಯ ಕಾರ್ಯನಿರ್ವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಪರಸ್ಪರ ನಂಬಿಕೆ,  ಹಂಚಿಕೆಯ ಪರಂಪರೆ ಮತ್ತು ಸಾಗರ ಸಂಪರ್ಕಗಳ ಆಧಾರದ ಮೇಲೆ ಇಂಡೋನೇಷ್ಯಾದೊಂದಿಗಿನ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಭಾರತದ ಬದ್ಧತೆಯನ್ನು ಅವರು ಪುನರುಚ್ಚರಿಸಿದರು. ಬಾಲಿ ಯಾತ್ರೆ, ವೇಸಕ್ ತೀರ್ಥಯಾತ್ರೆ ಮತ್ತು ನಳಂದ ವಿಶ್ವವಿದ್ಯಾಲಯದಂತಹ ಆಧುನಿಕ ಕಾಲದ ಸಂಪರ್ಕಗಳು ಎರಡೂ ದೇಶಗಳ ನಡುವಿನ ಪ್ರಾಚೀನ ನಾಗರಿಕ ಸಂಬಂಧಗಳನ್ನು ಹೇಗೆ ಪೋಷಿಸುತ್ತಿವೆ ಎಂಬುದನ್ನು ಅವರು ಈ ಸಂದರ್ಭದಲ್ಲಿ ಸ್ಮರಿಸಿದರು

ಇತ್ತೀಚಿನ ವರ್ಷಗಳಲ್ಲಿ ಭಾರತ ಸಾಧಿಸಿರುವ ಪ್ರಗತಿಯನ್ನು ಪ್ರಮುಖವಾಗಿ ಉಲ್ಲೇಖಿಸಿದ ಪ್ರಧಾನ ಮಂತ್ರಿ, ಮುಂದಿನ ಪೀಳಿಗೆಯ ಮೂಲಸೌಕರ್ಯ ಅಭಿವೃದ್ಧಿ, ಸ್ಟಾರ್ಟ್ ಅಪ್ ಕ್ರಾಂತಿ ಮತ್ತು 250 ದಶಲಕ್ಷಕ್ಕೂ ಅಧಿಕ ಜನರನ್ನು ಬಡತನ ರೇಖೆಯಿಂದ ಹೊರತಂದಿರುವ ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಮಾತನಾಡಿದರು. ಭಾರತವು ಕಳೆದ ಹಲವು ವರ್ಷಗಳಿಂದ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ ಮತ್ತು ಜಾಗತಿಕ ಬೆಳವಣಿಗೆಯ ಪ್ರಮುಖ ಚಾಲಕಶಕ್ತಿಯಾಗಿ ಹೊರಹೊಮ್ಮಿದೆ ಎಂದು ಅವರು ತಿಳಿಸಿದರು. ಭಾರತದಲ್ಲಿ ಆಗುತ್ತಿರುವ ಬದಲಾವಣೆಗಳನ್ನು 1.4 ಶತಕೋಟಿ ಜನರ ಆಕಾಂಕ್ಷೆಗಳ ಪ್ರತಿಬಿಂಬವಾಗಿ ನೋಡಬೇಕೆಂದು ಅವರು ಕರೆ ನೀಡಿದರು.

”ವಿಕಸಿತ ಭಾರತ 2047’’  ಮತ್ತು ‘ಇಂಡೋನೇಷ್ಯಾ ಎಮಾಸ್ 2045’ ರ ಹಂಚಿಕೆಯ ಆಕಾಂಕ್ಷೆಗಳನ್ನು ಸಾಕಾರಗೊಳಿಸುವಲ್ಲಿ ಸಮುದಾಯವು ಕೊಡುಗೆ ನೀಡಬೇಕೆಂದು ಅವರು ಮನವಿ ಮಾಡಿದರು. ಇಂಡೋನೇಷ್ಯಾ ಮತ್ತು ಆಸಿಯಾನ್ ಪ್ರದೇಶದಲ್ಲಿ ಪ್ರಗತಿ ಮತ್ತು ಸಮೃದ್ಧಿಯನ್ನು ತರುವಲ್ಲಿ ಭಾರತವು ಬಲವರ್ಧಕವಾಗಿ  ಕಾರ್ಯನಿರ್ವಹಿಸಲು ಬದ್ಧವಾಗಿದೆ ಎಂದು ಅವರು ಭರವಸೆ ನೀಡಿದರು.

ಭಾರತ ಮತ್ತು ಇಂಡೋನೇಷ್ಯಾ ಎರಡು ಸಹಸ್ರಮಾನಗಳಿಗೂ ಅಧಿಕ ಕಾಲದಿಂದಲೂ ನಿಕಟ ನಾಗರಿಕ, ಸಾಂಸ್ಕೃತಿಕ ಮತ್ತು ಜನರ ನಡುವಿನ ಸಂಬಂಧವನ್ನು ಹಂಚಿಕೊಂಡಿವೆ. ಇಂದು ಇಂಡೋನೇಷ್ಯಾದಲ್ಲಿ ಸುಮಾರು 1,50,000 ಭಾರತೀಯ ಮೂಲದ ವ್ಯಕ್ತಿಗಳು (ಪಿಐಒಗಳು) ಮತ್ತು ಸುಮಾರು 15,000 ಅನಿವಾಸಿ ಭಾರತೀಯರು (ಎನ್‌ ಆರ್ ಐಗಳು) ವಾಸಿಸುತ್ತಿದ್ದಾರೆ. ಭಾರತೀಯ ಸಮುದಾಯವು ಇಂಡೋನೇಷ್ಯಾದ ಆರ್ಥಿಕ ಬೆಳವಣಿಗೆ ಮತ್ತು ಬಹುಸಂಸ್ಕೃತಿ ಸಮಾಜಕ್ಕೆ ಅಮೂಲ್ಯವಾದ ಕೊಡುಗೆಗಳನ್ನು ನೀಡುತ್ತಾ, ಉಭಯ ದೇಶಗಳ ನಡುವಿನ ಬಾಂಧವ್ಯದ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದೆ.

 

*****