Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಜಿ-7 ಶೃಂಗಸಭೆಯ ನೇಪಥ್ಯದಲ್ಲಿ ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷರು ಮತ್ತು ಯುರೋಪಿಯನ್ ಆಯೋಗದ ಅಧ್ಯಕ್ಷರೊಂದಿಗೆ ಪ್ರಧಾನಮಂತ್ರಿ ಸಭೆ

ಜಿ-7 ಶೃಂಗಸಭೆಯ ನೇಪಥ್ಯದಲ್ಲಿ ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷರು ಮತ್ತು ಯುರೋಪಿಯನ್ ಆಯೋಗದ ಅಧ್ಯಕ್ಷರೊಂದಿಗೆ ಪ್ರಧಾನಮಂತ್ರಿ ಸಭೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಎವಿಯಾನ್‌ನಲ್ಲಿ ನಡೆದ ಜಿ-7 ಶೃಂಗಸಭೆಯ ನೇಪಥ್ಯದಲ್ಲಿ ಇಂದು ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷರಾದ ಮಾನ್ಯ ಶ್ರೀ ಆಂಟೋನಿಯೊ ಕೋಸ್ಟಾ ಮತ್ತು ಯುರೋಪಿಯನ್ ಆಯೋಗದ ಅಧ್ಯಕ್ಷರಾದ ಮಾನ್ಯ ಶ್ರೀಮತಿ ಉರ್ಸುಲಾ ವಾನ್ ಡೆರ್ ಲೇಯೆನ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು.

ಭಾರತದಲ್ಲಿ 2026ರ ಜನವರಿಯಲ್ಲಿ ನಡೆದ 16ನೇ ಭಾರತ-ಯುರೋಪಿಯನ್ ಒಕ್ಕೂಟದ ಮೈಲಿಗಲ್ಲಿನ ಶೃಂಗಸಭೆಯನ್ನು ನೆನಪು ಮಾಡಿಕೊಂಡ ನಾಯಕರು, ಅಂದಿನಿಂದ ಈವರೆಗೆ ಭಾರತ-ಯುರೋಪಿಯನ್ ಒಕ್ಕೂಟದ ದ್ವಿಪಕ್ಷೀಯ ಬಾಂಧವ್ಯದಲ್ಲಾಗಿರುವ ಗಮನಾರ್ಹ ಪ್ರಗತಿಯನ್ನು ಸ್ವಾಗತಿಸಿದರು. ಇತ್ತೀಚೆಗೆ ಮುಕ್ತಾಯಗೊಂಡ ಭಾರತ-ಯುರೋಪಿಯನ್ ಒಕ್ಕೂಟ ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆಗಳನ್ನು ಐತಿಹಾಸಿಕ ಸಾಧನೆ ಎಂದು ಬಣ್ಣಿಸಿದ ನಾಯಕರು, ಅದರ ತ್ವರಿತ ಸಹಿ ಮತ್ತು ಅನುಷ್ಠಾನದ ಅಗತ್ಯವನ್ನು ಒತ್ತಿ ಹೇಳಿದರು. ಇದು ವ್ಯಾಪಾರ ಮತ್ತು ಹೂಡಿಕೆಗೆ ದೊಡ್ಡ ಅವಕಾಶಗಳನ್ನು ತೆರೆಯಲಿದೆ ಮತ್ತು ವಿಶೇಷವಾಗಿ ಪ್ರಸ್ತುತದ ಪ್ರಕ್ಷುಬ್ಧ ಭೌಗೋಳಿಕ ರಾಜಕೀಯ ಸನ್ನಿವೇಶದಲ್ಲಿ ಪೂರೈಕೆ ಸರಪಳಿಗಳ ವೈವಿಧ್ಯೀಕರಣಕ್ಕೆ ಕೊಡುಗೆ ನೀಡಬಲ್ಲದಾಗಿದೆ.

ಮುಕ್ತ ಮಾರುಕಟ್ಟೆ ಆರ್ಥಿಕತೆಗಳು ಮತ್ತು ಬಹುತ್ವ ಸಮಾಜಗಳನ್ನು ಹೊಂದಿರುವ ವಿಶ್ವದ ಎರಡು ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳಾಗಿ, ಭಾರತ ಮತ್ತು ಯೂರೋಪಿಯನ್‌ ಒಕ್ಕೂಟವು ನಂಬಿಕೆ, ಹಂಚಿತ ಮೌಲ್ಯಗಳು ಮತ್ತು ಭವಿಷ್ಯದೆಡೆಗೆ ಸಮಾನ ದೃಷ್ಟಿಕೋನವನ್ನು ಆಧರಿಸಿದ ಸಂಬಂಧವನ್ನು ಹೊಂದಿವೆ. ಜನವರಿ 2026ರಲ್ಲಿ ಅಂಗೀಕರಿಸಲಾದ ಜಂಟಿ ಭಾರತ-ಇ.ಯು ಸಮಗ್ರ ಕಾರ್ಯತಂತ್ರದ ಕಾರ್ಯಸೂಚಿಯ ಪ್ರಗತಿಯ ಬಗ್ಗೆ ನಾಯಕರು ಚರ್ಚಿಸಿದರು. ಇದು ಭಾರತ-ಇ.ಯು ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುತ್ತದೆ ಮತ್ತು ಪರಸ್ಪರ ಅನುಕೂಲಕರ ಹಾಗೂ ಪರಿವರ್ತನಕಾರಿ ಫಲಿತಾಂಶಗಳನ್ನು ನೀಡಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಅನಿಸಿಕೆ ಹಂಚಿಕೊಂಡ ನಾಯಕರು, ಪಶ್ಚಿಮ ಏಷ್ಯಾದಲ್ಲಿನ ಬೆಳವಣಿಗೆಗಳನ್ನು ಸ್ವಾಗತಿಸಿದರು. ಶಾಂತಿ ಮತ್ತು ಸ್ಥಿರತೆ, ಸಮೃದ್ಧಿ ಮತ್ತು ಸುಸ್ಥಿರ ಅಭಿವೃದ್ಧಿಗೆ ಕೊಡುಗೆ ನೀಡಬಲ್ಲ, ಸ್ಥಿತಿಸ್ಥಾಪಕತ್ವವುಳ್ಳ ಬಹುಧ್ರುವೀಯ ಜಾಗತಿಕ ವ್ಯವಸ್ಥೆಯನ್ನು ರೂಪಿಸುವ ತಮ್ಮ ಹಂಚಿತ ಬದ್ಧತೆಯನ್ನು ಉಭಯ ನಾಯಕರು ಪುನರುಚ್ಚರಿಸಿದರು.

****