ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜುಲೈ 4, 2026 ರಂದು ರಾಜಸ್ಥಾನ ಮತ್ತು ಗುಜರಾತಿಗೆ ಭೇಟಿ ನೀಡಲಿದ್ದಾರೆ. ಸುಮಾರು ಬೆಳಿಗ್ಗೆ 10:45ಕ್ಕೆ, ಪ್ರಧಾನಮಂತ್ರಿ ಅವರು ಜೋಧ್ ಪುರ ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ ಮತ್ತು ಜೋಧ್ಪುರದಲ್ಲಿ ಮಾರ್ಪಡಿಸಿದ ಉಡಾನ್ (‘ಮೋಡಿಫೈಡ್ ಉಡಾನ್’) ಯೋಜನೆಗೆ ಚಾಲನೆ ನೀಡಲಿದ್ದಾರೆ. ತದನಂತರ, ಮಧ್ಯಾಹ್ನ ಸುಮಾರು 12:15ಕ್ಕೆ ಅವರು ಬಲೋತ್ರಾಕ್ಕೆ ಪ್ರಯಾಣಿಸಲಿದ್ದು, ಅಲ್ಲಿ ಸುಮಾರು ₹1.06 ಲಕ್ಷ ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಸಮರ್ಪಿಸಲಿದ್ದಾರೆ, ಉದ್ಘಾಟಿಸಲಿದ್ದಾರೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.
ನಂತರ, ಪ್ರಧಾನಮಂತ್ರಿಯವರು ಗುಜರಾತ್ ಗೆ ಪ್ರಯಾಣಿಸಲಿದ್ದಾರೆ. ಸಂಜೆ ಸುಮಾರು 4:30 ಕ್ಕೆ, ಪ್ರಧಾನಮಂತ್ರಿಯವರು ಅಹಮದಾಬಾದ್ ನ ಸಾನಂದ್ ನಲ್ಲಿರುವ ಸಿಜಿ ಸೆಮಿ ಔಟ್ಸೋರ್ಸ್ಡ್ ಸೆಮಿಕಂಡಕ್ಟರ್ ಅಸೆಂಬ್ಲಿ ಅಂಡ್ ಟೆಸ್ಟ್ (ಒಎಸ್ ಎ ಟಿ) ಸೌಲಭ್ಯವನ್ನು ಉದ್ಘಾಟಿಸಲಿದ್ದಾರೆ. ಇಲ್ಲಿಯೂ ಅವರು ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಜೋಧ್ ಪುರದಲ್ಲಿ ಪ್ರಧಾನಮಂತ್ರಿ
ಪ್ರಾದೇಶಿಕ ಸಂಪರ್ಕದ ಮೇಲೆ ವಿಶೇಷ ಗಮನಹರಿಸುವ ಮೂಲಕ ವಾಯುಯಾನ ವಲಯಕ್ಕೆ ಪ್ರಮುಖ ಉತ್ತೇಜನ ನೀಡಲು, ಪ್ರಧಾನಮಂತ್ರಿಯವರು ಜೋಧ್ ಪುರದಲ್ಲಿ ಮಾರ್ಪಡಿಸಿದ ಉಡಾನ್ ಯೋಜನೆಯನ್ನು ಪ್ರಾರಂಭಿಸಲಿದ್ದಾರೆ. ಇದು ಭಾರತದ ನಾಗರಿಕ ವಿಮಾನಯಾನ ರಂಗದಲ್ಲಿ ಗಮನಾರ್ಹ ಪ್ರಗತಿಯನ್ನು ಸೂಚಿಸುತ್ತದೆ ಮತ್ತು ʻʻದೇಶದ ಸಾಮಾನ್ಯ ನಾಗರಿಕರೂ ಹಾರಲಿʼʼ -“ಉಡೇ ದೇಶ್ ಕಾ ಆಮ್ ನಾಗರಿಕ್” ಎನ್ನುವ ದೃಷ್ಟಿಕೋನವನ್ನು ಮತ್ತಷ್ಟು ಮುನ್ನಡೆಸುತ್ತದೆ. ಮುಂದಿನ 10 ವರ್ಷಗಳಲ್ಲಿ ₹28,840 ಕೋಟಿ ಅನುದಾನದೊಂದಿಗೆ, ಈ ಯೋಜನೆಯು ವಾಯುಯಾನ ನೇತೃತ್ವದ ಅಭಿವೃದ್ಧಿಯ ಮುಂದಿನ ಹಂತವನ್ನು ವೇಗಗೊಳಿಸುವ ಗುರಿಯನ್ನು ಹೊಂದಿದೆ. ಇದು ಸಮಗ್ರ ಮತ್ತು ಸುಸ್ಥಿರ ಸಂಪರ್ಕವನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾದ ಬಹು ಕಾರ್ಯತಂತ್ರದ ಅಂಶಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ.
ದೇಶದಾದ್ಯಂತ ವಾಯುಯಾನ ಮೂಲಸೌಕರ್ಯವನ್ನು ವಿಸ್ತರಿಸಲು, ₹12,000 ಕೋಟಿಗೂ ಹೆಚ್ಚಿನ ವೆಚ್ಚದಲ್ಲಿ ಪ್ರಸ್ತುತ ಬಳಕೆಯಲ್ಲಿಲ್ಲದ ರನ್ವೇಗಳಿಂದ 100 ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸುವತ್ತ ಪ್ರಮುಖ ಒತ್ತು ನೀಡಲಾದೆ. ಇದರ ಜೊತೆಗೆ, ಪ್ರಾದೇಶಿಕ ವಿಮಾನ ನಿಲ್ದಾಣಗಳ ಕಾರ್ಯಾಚರಣೆಯ ಆರಂಭಿಕ ವರ್ಷಗಳಲ್ಲಿ ಅವುಗಳ ಕಾರ್ಯಸಾಧ್ಯತೆಯನ್ನು ಖಚಿತಪಡಿಸಿಕೊಳ್ಳಲು ಕಾರ್ಯಾಚರಣೆ ಮತ್ತು ನಿರ್ವಹಣೆ (ಒ& ಎಂ) ಬೆಂಬಲಕ್ಕಾಗಿ ₹2,500 ಕೋಟಿಗೂ ಹೆಚ್ಚು ಹಣವನ್ನು ಮೀಸಲಿಡಲಾಗಿದೆ. ದೂರದ ಮತ್ತು ಕಠಿಣ ಭೂಪ್ರದೇಶಗಳಲ್ಲಿನ ಸಂಪರ್ಕದ ಸವಾಲುಗಳನ್ನು ಎದುರಿಸಲು, ಈ ಯೋಜನೆಯು 200 ಆಧುನಿಕ ಹೆಲಿಪ್ಯಾಡ್ ಗಳ ಅಭಿವೃದ್ಧಿಯನ್ನು ಸಹ ಪ್ರಸ್ತಾಪಿಸುತ್ತದೆ.
ವಿಮಾನಯಾನ ಸಂಸ್ಥೆಗಳಿಗೆ ₹10,000 ಕೋಟಿಗೂ ಹೆಚ್ಚಿನ ಕಾರ್ಯಸಾಧ್ಯತಾ ಅಂತರ ನಿಧಿ (ವಯಾಬಿಲಿಟಿ ಗ್ಯಾಪ್ ಫಂಡಿಂಗ್’- ವಿಜಿಎಫ್) ಬೆಂಬಲವನ್ನು ಈ ಯೋಜನೆ ಮುಂದುವರಿಸಲಿದ್ದು, ಕ್ರಮೇಣ ವಾಣಿಜ್ಯ ಕಾರ್ಯಸಾಧ್ಯತೆಯನ್ನು ಪ್ರೋತ್ಸಾಹಿಸುವ ಜೊತೆಗೆ ಸುಸ್ಥಿರ ಪ್ರಾದೇಶಿಕ ಕಾರ್ಯಾಚರಣೆಗಳನ್ನು ಖಚಿತಪಡಿಸುತ್ತದೆ. ಆತ್ಮನಿರ್ಭರ ಭಾರತದ ದೃಷ್ಟಿಕೋನವನ್ನು ಮತ್ತಷ್ಟು ಬಲಪಡಿಸುತ್ತಾ, ಹಿಂದುಳಿದ ಪ್ರದೇಶಗಳಲ್ಲಿ ಸಂಪರ್ಕ ಮತ್ತು ಕಾರ್ಯಾಚರಣೆಗಳನ್ನು ಹೆಚ್ಚಿಸಲು ಎಚ್ ಎಎಲ್ ಧ್ರುವ ಮತ್ತು ಡಾರ್ನಿಯರ್ ಪ್ಲಾಟ್ ಫಾರ್ಮ್ ಗಳಂತಹ ದೇಶೀಯ ವಿಮಾನಗಳು ಮತ್ತು ಹೆಲಿಕಾಪ್ಟರ್ ಗಳ ಖರೀದಿಯನ್ನು ಈ ಉಪಕ್ರಮವು ಒಳಗೊಂಡಿದೆ.
ಕಾರ್ಯಕ್ರಮದ ಅವಧಿಯಲ್ಲಿ, ಪ್ರಧಾನಮಂತ್ರಿಯವರು ಜೋಧ್ ಪುರ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಕಟ್ಟಡವನ್ನು ಸಹ ಉದ್ಘಾಟಿಸಲಿದ್ದಾರೆ. ಈ ಯೋಜನೆಯನ್ನು ಒಟ್ಟು ₹480 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. 23,000 ಚದರ ಮೀಟರ್ಗಿಂತಲೂ ಹೆಚ್ಚು ವಿಸ್ತೀರ್ಣದಲ್ಲಿ ಹರಡಿರುವ ಹೊಸ ಟರ್ಮಿನಲ್ ಕಟ್ಟಡವು ವಾರ್ಷಿಕವಾಗಿ 20 ಲಕ್ಷ ಪ್ರಯಾಣಿಕರನ್ನು ನಿರ್ವಹಿಸಲು ಆಗುವಂತೆ ವಿನ್ಯಾಸಗೊಳಿಸಲಾಗಿದೆ. ಸುಗಮ ಮತ್ತು ಆರಾಮದಾಯಕ ಪ್ರಯಾಣದ ಅನುಭವವನ್ನು ಖಚಿತಪಡಿಸಿಕೊಳ್ಳಲು ಇದು ಆಧುನಿಕ ಪ್ರಯಾಣಿಕರ ಸೌಲಭ್ಯಗಳನ್ನು ಹೊಂದಿದೆ.
ರಾಜಸ್ಥಾನದ ರಾಜಮನೆತನದ ಪರಂಪರೆಯಿಂದ ವಾಸ್ತುಶಿಲ್ಪದ ಪ್ರೇರಣೆ ಪಡೆದಿರುವ ಈ ಟರ್ಮಿನಲ್, ಕಮಾನುಗಳು ಮತ್ತು ಝರೋಖಾಗಳಂತಹ ಸಾಂಪ್ರದಾಯಿಕ ಅಂಶಗಳನ್ನು ಸಮಕಾಲೀನ ವಿನ್ಯಾಸದೊಂದಿಗೆ ಸರಾಗವಾಗಿ ಸಂಯೋಜಿಸುತ್ತದೆ. ಇಂಧನ-ದಕ್ಷ ವ್ಯವಸ್ಥೆಗಳು, ನೀರು ಸಂರಕ್ಷಣಾ ಕ್ರಮಗಳು ಮತ್ತು 5-ಸ್ಟಾರ್ ಗೃಹ ರೇಟಿಂಗ್ ಸಾಧಿಸುವ ಗುರಿಯನ್ನು ಹೊಂದಿರುವ ಹಸಿರು ಕಟ್ಟಡ ಪದ್ಧತಿಗಳಂತಹ ವೈಶಿಷ್ಟ್ಯಗಳ ಸುಸ್ಥಿರತೆಯು ಟರ್ಮಿನಲ್ ವಿನ್ಯಾಸದ ಭಾಗವಾಗಿದೆ. ಜೋಧ್ ಪುರ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಕಟ್ಟಡದ ಉದ್ಘಾಟನೆಯು ಈ ಪ್ರದೇಶದಲ್ಲಿ ಪ್ರವಾಸೋದ್ಯಮ, ವ್ಯಾಪಾರ ಮತ್ತು ಉದ್ಯೋಗ ಸೃಷ್ಟಿಗೆ ಗಮನಾರ್ಹ ಉತ್ತೇಜನವನ್ನು ನೀಡುತ್ತದೆ.
ಬಲೋತ್ರಾದಲ್ಲಿ ಪ್ರಧಾನಮಂತ್ರಿ
ಬಲೋತ್ರಾದಲ್ಲಿ ಪ್ರಧಾನಮಂತ್ರಿಯವರು ಸುಮಾರು ₹1.06 ಲಕ್ಷ ಕೋಟಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಮತ್ತು ಉದ್ಘಾಟಿಸಲಿದ್ದಾರೆ. ಈ ಯೋಜನೆಗಳು ಪೆಟ್ರೋಕೆಮಿಕಲ್ಸ್, ನಗರ ಸಾರಿಗೆ, ರೈಲ್ವೆ, ರಸ್ತೆಗಳು, ನವೀಕರಿಸಬಹುದಾದ ಇಂಧನ ಮತ್ತು ವಿದ್ಯುತ್ ಪ್ರಸರಣ ಸೇರಿದಂತೆ ಹಲವು ವಲಯಗಳನ್ನು ಒಳಗೊಂಡಿದೆ.
ದೇಶದ ಇಂಧನ ಮತ್ತು ಪೆಟ್ರೋಕೆಮಿಕಲ್ ವಲಯದಲ್ಲಿ ಹೆಗ್ಗುರುತಿನ ಸಾಧನೆಯ ಗುರುತಿನಂತೆ, ಬಲೋತ್ರಾದ ಪಚಪದ್ರಾದಲ್ಲಿ ಭಾರತದ ಮೊದಲ ಮೊದಲ ಹಸಿರು ಕ್ಷೇತ್ರ ಸಂಯೋಜಿತ ಸಂಸ್ಕರಣಾಗಾರ-ಕಮ್-ಪೆಟ್ರೋಕೆಮಿಕಲ್ ಸಂಕೀರ್ಣವನ್ನು ಪ್ರಧಾನಮಂತ್ರಿಯವರು ದೇಶಕ್ಕೆ ಸಮರ್ಪಿಸಲಿದ್ದಾರೆ.
ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಮತ್ತು ರಾಜಸ್ಥಾನ ಸರ್ಕಾರದ ಜಂಟಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾದ, ವಾರ್ಷಿಕ 9 ಮಿಲಿಯನ್ ಮೆಟ್ರಿಕ್ ಟನ್ (ಎಂಎಂಟಿಪಿಎ) ಸಾಮರ್ಥ್ಯದ ಗ್ರೀನ್ಫೀಲ್ಡ್ ರಿಫೈನರಿ-ಕಮ್-ಪೆಟ್ರೋಕೆಮಿಕಲ್ ಸಂಕೀರ್ಣವನ್ನು ₹79,450 ಕೋಟಿಗೂ ಹೆಚ್ಚಿನ ಹೂಡಿಕೆಯೊಂದಿಗೆ ಸ್ಥಾಪಿಸಲಾಗಿದೆ.
ಈ ಅತ್ಯಾಧುನಿಕ ಸಂಕೀರ್ಣವು ತೈಲ ಶುದ್ಧೀಕರಣ ಮತ್ತು ಪೆಟ್ರೋಕೆಮಿಕಲ್ ಉತ್ಪಾದನೆಯನ್ನು ಸಂಯೋಜಿಸುತ್ತದೆ, ಹಾಗೂ ಇದು 2.4 ಎಂಎಂಟಿಪಿಎ ಪೆಟ್ರೋಕೆಮಿಕಲ್ ಸಾಮರ್ಥ್ಯವನ್ನು ಹೊಂದಿದೆ. ಈ ಸಂಸ್ಕರಣಾಗಾರವು 17.0 ರ ಹೆಚ್ಚಿನ ನೆಲ್ಸನ್ ಕಾಂಪ್ಲೆಕ್ಸಿಟಿ ಇಂಡೆಕ್ಸ್ ಮತ್ತು 26% ಕ್ಕಿಂತ ಹೆಚ್ಚಿನ ಪೆಟ್ರೋಕೆಮಿಕಲ್ ಇಳುವರಿಯನ್ನು ಹೊಂದಿದ್ದು, ದಕ್ಷತೆ ಮತ್ತು ಸುಸ್ಥಿರತೆಗಾಗಿ ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿದೆ.
ಈ ಯೋಜನೆಯು ಭಾರತದ ಇಂಧನ ಭದ್ರತೆಯನ್ನು ಬಲಪಡಿಸುವಲ್ಲಿ, ಪೆಟ್ರೋಕೆಮಿಕಲ್ ಸ್ವಾವಲಂಬನೆಯನ್ನು ಹೆಚ್ಚಿಸುವಲ್ಲಿ ಮತ್ತು ಕೈಗಾರಿಕಾ ಬೆಳವಣಿಗೆಯನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ. ಇದು ಈ ಪ್ರದೇಶದಲ್ಲಿ ಪೆಟ್ರೋಕೆಮಿಕಲ್ ಮತ್ತು ಪ್ಲಾಸ್ಟಿಕ್ ಪಾರ್ಕ್ ಅಭಿವೃದ್ಧಿಗೆ ಪೂರಕ ಉದ್ಯಮವಾಗಿ ಕಾರ್ಯನಿರ್ವಹಿಸಲಿದ್ದು, ಕೊನೆಯ ಘಟ್ಟದಲ್ಲಿ ಕಾರ್ಯನಿರ್ವಹಿಸುವ ಉದ್ಯಮಗಳು ಮತ್ತು ಪೂರಕ ವಲಯಗಳನ್ನು ಉತ್ತೇಜಿಸುತ್ತದೆ. ಹೆಚ್ಚುವರಿಯಾಗಿ, ಸಂಸ್ಕರಣಾಗಾರವು ಗಣನೀಯ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸಜ್ಜಾಗಿದ್ದು, ಈ ಪ್ರದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡಲಿದೆ.
ಜೈಪುರ ಮೆಟ್ರೋ ರೈಲು ಯೋಜನೆಯ 2 ನೇ ಹಂತಕ್ಕೆ ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ, ಇದರ ಒಟ್ಟು ವೆಚ್ಚ ₹13,000 ಕೋಟಿಗೂ ಹೆಚ್ಚು. ಹಂತ 2 ರ ಅಡಿಯಲ್ಲಿ, ಪ್ರಹ್ಲಾದ್ ಪುರದಿಂದ ತೋಡಿ ಮೋಡ್ ವರೆಗೆ 41 ಕಿಮೀ ಉದ್ದದ ಉತ್ತರ-ದಕ್ಷಿಣ ಮೆಟ್ರೋ ಕಾರಿಡಾರ್ ಅನ್ನು ಅಭಿವೃದ್ಧಿಪಡಿಸಲಾಗುವುದು, ಇದು ಸೀತಾಪುರ ಮತ್ತು ವಿಶ್ವಕರ್ಮ ಕೈಗಾರಿಕಾ ಪ್ರದೇಶದ (ವಿಕೆಐ) ಕೈಗಾರಿಕಾ ಮತ್ತು ವಸತಿ ಪ್ರದೇಶಗಳನ್ನು 36 ನಿಲ್ದಾಣಗಳ ಮೂಲಕ ಸಂಪರ್ಕಿಸುತ್ತದೆ. ಈ ಕಾರಿಡಾರ್ ಸೀತಾಪುರ ಕೈಗಾರಿಕಾ ಪ್ರದೇಶ, ವಿಕೆಐ, ಜೈಪುರ ವಿಮಾನ ನಿಲ್ದಾಣ, ಟೋಂಕ್ ರಸ್ತೆ, ಎಸ್ಎಂಎಸ್ ಆಸ್ಪತ್ರೆ, ಎಸ್ಎಂಎಸ್ ಸ್ಟೇಡಿಯಂ, ಅಂಬಾಬಾರಿ ಮತ್ತು ವಿದ್ಯಾಧರ ನಗರ ಸೇರಿದಂತೆ ಪ್ರಮುಖ ಸ್ಥಳಗಳಿಗೆ ಸುಗಮ ಸಂಪರ್ಕವನ್ನು ಒದಗಿಸುತ್ತದೆ. ಈ ಯೋಜನೆಯು ಜೈಪುರದ ಪ್ರಮುಖ ಕೈಗಾರಿಕಾ ಮತ್ತು ವಸತಿ ಪ್ರದೇಶಗಳಿಗೆ ಸಂಪರ್ಕವನ್ನು ಗಮನಾರ್ಹವಾಗಿ ಸುಧಾರಿಸುತ್ತದೆ, ನಿವಾಸಿಗಳಿಗೆ ವೇಗವಾದ, ಸುರಕ್ಷಿತವಾದ ಮತ್ತು ಹೆಚ್ಚು ಅನುಕೂಲಕರವಾದ ಸಾರ್ವಜನಿಕ ಸಾರಿಗೆಯನ್ನು ಒದಗಿಸುತ್ತದೆ. ಹಂತ 1 ರ ಅಡಿಯಲ್ಲಿ, 11 ನಿಲ್ದಾಣಗಳನ್ನು ಹೊಂದಿರುವ 11.64 ಕಿಮೀ ಮೆಟ್ರೋ ಕಾರಿಡಾರ್ ಈಗಾಗಲೇ ಕಾರ್ಯನಿರ್ವಹಿಸುತ್ತಿದೆ.
ಪ್ರಧಾನಮಂತ್ರಿಯವರು ಸುಮಾರು ₹900 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಚುರು-ಸದುಲ್ಪುರ (58 ಕಿಮೀ) ಮತ್ತು ಚುರು-ರತನ್ಗಢ (46 ಕಿಮೀ) ರೈಲು ಮಾರ್ಗ ದ್ವಿಗುಣಗೊಳಿಸುವ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಒಟ್ಟು 104 ಕಿಮೀ ಉದ್ದದ ಈ ಯೋಜನೆಗಳು ವಾಯುವ್ಯ ರಾಜಸ್ಥಾನದಲ್ಲಿ ರೈಲು ಸಂಪರ್ಕವನ್ನು ಬಲಪಡಿಸಲಿವೆ. ಇವು ರೈಲು ಮಾರ್ಗದ ಸಾಮರ್ಥ್ಯವನ್ನು ಹೆಚ್ಚಿಸಲಿವೆ, ರೈಲು ಜಾಲದ ಮೇಲಿನ ದಟ್ಟಣೆಯನ್ನು ಕಡಿಮೆ ಮಾಡುವ ಜೊತೆಗೆ ಪ್ರಯಾಣಿಕ ಮತ್ತು ಸರಕು ಸಾಗಣೆ ರೈಲುಗಳ ಸುಗಮ, ಸುರಕ್ಷಿತ ಮತ್ತು ಹೆಚ್ಚು ಸಮಯಕ್ಕೆ ಸರಿಯಾಗಿ ಕಾರ್ಯಾಚರಣೆಯನ್ನು ಸಕ್ರಿಯಗೊಳಿಸುತ್ತವೆ. ಈ ಯೋಜನೆಗಳು ಈ ಪ್ರದೇಶದಲ್ಲಿ ಹೂಡಿಕೆ, ಉದ್ಯೋಗ ಸೃಷ್ಟಿ ಮತ್ತು ಕೈಗಾರಿಕಾ ಅಭಿವೃದ್ಧಿಗೆ ಉತ್ತೇಜನ ನೀಡಲಿವೆ.
ಜೋಧ್ಪುರ ರಿಂಗ್ ರೋಡ್ ಸೆಕ್ಷನ್-2 (ಕಾರ್ವರ್-ದಂಗಿಯಾವಾಸ್) ನ ಎನ್ ಎಚ್-12 ನಾಲ್ಕು ಪಥಗಳ ರಸ್ತೆಯನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಲಿದ್ದಾರೆ. ಸುಮಾರು ₹740 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ಈ ಯೋಜನೆಯು ಜೋಧ್ ಪುರ ಸುತ್ತಮುತ್ತಲಿನ ಪ್ರಾದೇಶಿಕ ಸಂಪರ್ಕವನ್ನು ಸುಧಾರಿಸುತ್ತದೆ ಮತ್ತು ಪ್ರಯಾಣವನ್ನು ಸುಗಮ ಹಾಗೂ ಸುರಕ್ಷಿತಗೊಳಿಸುತ್ತದೆ.
ಪ್ರಧಾನಮಂತ್ರಿಯವರು ಎಸ್ ವಿಜೆಎನ್ ಲಿಮಿಟೆಡ್ ನ 1,000 ಮೆಗಾವ್ಯಾಟ್ ಬಿಕಾನೇರ್ ಸೌರ ಇಂಧನ ಯೋಜನೆಯನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ, ಇದನ್ನು ಸುಮಾರು ₹5,500 ಕೋಟಿ ಹೂಡಿಕೆಯೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಈ ಯೋಜನೆಯು 24.22 ಲಕ್ಷ ದೇಶೀಯವಾಗಿ ತಯಾರಿಸಿದ ಸೌರ ಮಾಡ್ಯೂಲ್ ಗಳನ್ನು ಬಳಸುತ್ತದೆ. ಪ್ರಧಾನಮಂತ್ರಿಯವರು ಎನ್ಎಚ್ ಪಿಸಿಯ 300 ಮೆಗಾವ್ಯಾಟ್ ಕರ್ನಿಸರ್ ಬಿಕಾನೇರ್ ಸೌರಶಕ್ತಿ ಸ್ಥಾವರವನ್ನು ಸಹ ಸಮರ್ಪಿಸಲಿದ್ದಾರೆ. ಈ ಯೋಜನೆಯು ಸುಮಾರು 7.75 ಲಕ್ಷ ದೇಶೀಯವಾಗಿ ತಯಾರಿಸಿದ ಸೌರ ಪಿವಿ ಕೋಶಗಳು ಮತ್ತು ಮಾಡ್ಯೂಲ್ಗಳನ್ನು ಬಳಸುತ್ತದೆ.
ರಾಜಸ್ಥಾನ ನವೀಕರಿಸಬಹುದಾದ ಇಂಧನ ವಲಯದಿಂದ (ಆರ್ ಇ ಝೆಡ್) ವಿದ್ಯುತ್ ಸ್ಥಳಾಂತರಿಸಲು ₹1,900 ಕೋಟಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾದ ಪ್ರಸರಣ ಮಾರ್ಗವನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಲಿದ್ದಾರೆ ಮತ್ತು ರಾಜಸ್ಥಾನ ಆರ್ ಇ ಝೆಡ್ ಗಾಗಿ 530 ಕಿಮೀ ಉದ್ದದ ವಿದ್ಯುತ್ ಪ್ರಸರಣ ವ್ಯವಸ್ಥೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಪ್ರಸರಣ ವ್ಯವಸ್ಥೆಗಳು ರಾಜಸ್ಥಾನದಲ್ಲಿ ಉತ್ಪಾದನೆಯಾಗುವ ನವೀಕರಿಸಬಹುದಾದ ಇಂಧನವನ್ನು ಸಾಗಿಸಲು ಅನುಕೂಲ ಮಾಡಿಕೊಡುತ್ತವೆ ಮತ್ತು ರಾಜ್ಯದಲ್ಲಿ ತಡೆರಹಿತ ವಿದ್ಯುತ್ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತವೆ.
ರಾಜಸ್ಥಾನ ಸರ್ಕಾರದ ವಿವಿಧ ಇಲಾಖೆಗಳಲ್ಲಿ ನೇಮಕಗೊಂಡ ಸುಮಾರು 54,000 ಯುವಕರಿಗೆ ಪ್ರಧಾನಮಂತ್ರಿಯವರು ನೇಮಕಾತಿ ಪತ್ರಗಳನ್ನು ಹಸ್ತಾಂತರಿಸಲಿದ್ದಾರೆ. ಈ ನೇಮಕಾತಿಗಳು ಶಿಕ್ಷಣ, ಇಂಧನ, ಗೃಹ, ಪಂಚಾಯತ್ ರಾಜ್, ಸಾರಿಗೆ, ಉನ್ನತ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಯೋಜನೆ, ಕೃಷಿ, ಮಾಹಿತಿ ತಂತ್ರಜ್ಞಾನ ಮತ್ತು ಆಡಳಿತ ಸುಧಾರಣಾ ಇಲಾಖೆಗಳ ಸಿಬ್ಬಂದಿಗಳನ್ನು ಒಳಗೊಂಡಿವೆ.
ಸಾನಂದ್ ನಲ್ಲಿ ಪ್ರಧಾನಮಂತ್ರಿ
ಗುಜರಾತಿನ ಸಾನಂದ್ ನಲ್ಲಿರುವ ಸಿಜಿ ಸೆಮಿ ಔಟ್ಸೋರ್ಸ್ಡ್ ಸೆಮಿಕಂಡಕ್ಟರ್ ಅಸೆಂಬ್ಲಿ ಅಂಡ್ ಟೆಸ್ಟ್ (ಒಎಸ್ ಎ ಟಿ) ಸೌಲಭ್ಯವನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಲಿದ್ದಾರೆ. ಈ ಉದ್ಘಾಟನೆಯು ಈ ಸೌಲಭ್ಯದಲ್ಲಿ ವಾಣಿಜ್ಯ ಉತ್ಪಾದನೆಯ ಪ್ರಾರಂಭದೊಂದಿಗೆ ಭಾರತದ ಅರೆವಾಹಕ (ಸೆಮಿಕಂಡಕ್ಟರ್) ತಯಾರಿಕಾ ಪ್ರಯಾಣದಲ್ಲಿ ಮಹತ್ವದ ಮೈಲಿಗಲ್ಲನ್ನು ಗುರುತಿಸುತ್ತದೆ. ಜಾಗತಿಕ ಸೆಮಿಕಂಡಕ್ಟರ್ ಮೌಲ್ಯ ಸರಪಳಿಯಲ್ಲಿ ಭಾರತದ ಸ್ಥಾನವನ್ನು ಬಲಪಡಿಸುವಲ್ಲಿ ಇದು ಪ್ರಮುಖ ಹೆಜ್ಜೆಯಾಗಿದೆ. ಈ ಯೋಜನೆಯು ಭಾರತ ಸೆಮಿಕಂಡಕ್ಟರ್ ಮಿಷನ್ (ಐಎಸ್ ಎಂ) ಅಡಿಯಲ್ಲಿ ಅನುಮೋದಿಸಲಾದ ಮೊದಲ ನಾಲ್ಕು ಯೋಜನೆಗಳಲ್ಲಿ ಒಂದಾಗಿದೆ ಮತ್ತು ಇದನ್ನು ಒಟ್ಟು ₹7,500 ಕೋಟಿಗೂ ಹೆಚ್ಚಿನ ಹೂಡಿಕೆಯೊಂದಿಗೆ ಅಭಿವೃದ್ಧಿಪಡಿಸಲಾಗಿದೆ.
ಈ ಸೌಲಭ್ಯವು ಸಂಪೂರ್ಣವಾಗಿ ಕಾರ್ಯರೂಪಕ್ಕೆ ಬಂದ ನಂತರ, ವಾರ್ಷಿಕವಾಗಿ 5 ಶತಕೋಟಿ ಸೆಮಿಕಂಡಕ್ಟರ್ ಚಿಪ್ಸ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಲಿದ್ದು, ಕೃತಕ ಬುದ್ಧಿಮತ್ತೆ ಮತ್ತು ಹೆಚ್ಚಿನ ಕಾರ್ಯಕ್ಷಮತೆಯ ಕಂಪ್ಯೂಟಿಂಗ್ ನ ಕ್ಷಿಪ್ರ ಪ್ರಗತಿಯಿಂದಾಗಿ ಮೆಮೊರಿ ಮತ್ತು ಸ್ಟೋರೇಜ್ ಪರಿಹಾರಗಳಿಗಾಗಿ ಹೆಚ್ಚುತ್ತಿರುವ ಜಾಗತಿಕ ಬೇಡಿಕೆಯನ್ನು ಪೂರೈಸಲು ಸಹಾಯ ಮಾಡುತ್ತದೆ. ಈ ಸೌಲಭ್ಯವು ಆಟೋಮೋಟಿವ್, ಕೈಗಾರಿಕಾ, ದೂರಸಂಪರ್ಕ, 5ಜಿ ಮತ್ತು ಅಂತರ್ ಜಾಲಕ್ಕೆ ಸಂಬಂಧಿಸಿದ ವಸ್ತು ಮತ್ತು ಸೇವೆಗಳ (ಇಂಟರ್ನೆಟ್ ಆಫ್ ಥಿಂಗ್ಸ್ -IoT) ವಲಯಗಳ ಗ್ರಾಹಕರ ಅಗತ್ಯತೆಗಳನ್ನು ಪೂರೈಸುತ್ತದೆ. ಸಿಜಿ ಸೆಮಿ ಸೌಲಭ್ಯವು ವೇಫರ್ ಸಾರ್ಟಿಂಗ್, ಅಸೆಂಬ್ಲಿ, ಟೆಸ್ಟಿಂಗ್, ಪ್ಯಾಕೇಜ್ ವಿನ್ಯಾಸ, ವೈಫಲ್ಯದ ವಿಶ್ಲೇಷಣೆ, ಟೆಸ್ಟ್ ಪ್ರೋಗ್ರಾಂ ಅಭಿವೃದ್ಧಿ, ಉತ್ಪನ್ನ ಗುಣಲಕ್ಷಣಗಳ ನಿರ್ಣಯ ಮತ್ತು ಸಾಗಾಣಿಕೆಯ ಬೆಂಬಲ ಸೇರಿದಂತೆ ಆದಿಯಿಂದ ಅಂತ್ಯದವರೆಗಿನ ಸೆಮಿಕಂಡಕ್ಟರ್ ಅಸೆಂಬ್ಲಿ ಮತ್ತು ಪರೀಕ್ಷಾ ಸೇವೆಗಳನ್ನು ನೀಡುತ್ತದೆ.
ಈ ಸೌಲಭ್ಯದ ಕಾರ್ಯಾಚರಣೆಯು ಭಾರತವು ವಿಶ್ವಾಸಾರ್ಹ ಮತ್ತು ಸ್ವಾವಲಂಬಿ ಸೆಮಿಕಂಡಕ್ಟರ್ ತಯಾರಿಕಾ ತಾಣವಾಗಿ ಹೊರಹೊಮ್ಮುತ್ತಿರುವುದನ್ನು ಒತ್ತಿಹೇಳುತ್ತದೆ ಮತ್ತು ದೇಶದಲ್ಲಿ ಚೇತರಿಕೆ ಹಾಗೂ ಸ್ವಾವಲಂಬಿ ತಂತ್ರಜ್ಞಾನ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಪ್ರಧಾನಮಂತ್ರಿಯವರ ದೃಷ್ಟಿಕೋನಕ್ಕೆ ಅನುಗುಣವಾಗಿದೆ.
*****
I look forward to being among the people of Rajasthan and Gujarat tomorrow, 4th July, to take part in various programmes relating to sectors like energy, aviation, semiconductors, urban development and more. These works will add significant momentum to our efforts of becoming…
— Narendra Modi (@narendramodi) July 3, 2026
From Jodhpur, the Modified UDAN Scheme will be launched. This will ensure that more people are able to fly and connectivity across India is enhanced. Focus will be on developing 100 aerodromes from existing unserved strips and allocating more resources to Operations and…
— Narendra Modi (@narendramodi) July 3, 2026
Tomorrow, 4th July, is a very special day for the people of Jodhpur. The New Terminal Building of Jodhpur Airport will be inaugurated. Jodhpur has a very important place as far as tourism in India is concerned. This upgraded infrastructure will encourage more tourists to come to… pic.twitter.com/GdOuk4NgCr
— Narendra Modi (@narendramodi) July 3, 2026
Tomorrow’s programme in Balotra will be historic, marking the inauguration and laying of foundation stones of works worth over Rs. 1.06 lakh crore. This includes the dedication of the integrated refinery-cum-petrochemical complex at Pachpadra. This project will boost India’s… pic.twitter.com/coYf1sxQsH
— Narendra Modi (@narendramodi) July 3, 2026
Congratulations to the people of Jaipur! Tomorrow, the foundation stone will be laid for the second phase of the Jaipur Metro Rail Project. A corridor will be developed connecting various residential and industrial areas.
— Narendra Modi (@narendramodi) July 3, 2026
The other projects that will be dedicated to the nation…
Sanand has made a place for itself on the world map, synonymous with cutting-edge innovation and growth. I will be in Sanand tomorrow for the inauguration of the CG Semi Outsourced Semiconductor Assembly and Test (OSAT) facility. It will be a momentous occasion for India’s… pic.twitter.com/RVDn19bCKU
— Narendra Modi (@narendramodi) July 3, 2026