Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪಿಲಿಪ್ಪೀನ್ಸ್ ಗೆ ಪ್ರಯಾಣ ಬೆಳಸುವ ಮುನ್ನ ಪ್ರಧಾನಮಂತ್ರಿಯವರ ಹೇಳಿಕೆ


ಪಿಲಿಪ್ಪೀನ್ಸ್ ಗೆ ಭೇಟಿ ನೀಡುತ್ತಿರುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಪ್ರವಾಸಪೂರ್ವ ಹೇಳಿಕೆಯ ಪಠ್ಯ ಈ ಕೆಳಕಂಡಂತಿದೆ.

“ನಾನು ನವೆಂಬರ್ 12ರಿಂದ ಆರಂಭವಾಗಿ ಮೂರು ದಿನಗಳ ಕಾಲ ಮನಿಲಾದಲ್ಲಿ ಇರುತ್ತೇನೆ. ಇದು ಪಿಲಿಪ್ಪೀನ್ಸ್ ಗೆ ನಾನು ನೀಡುತ್ತಿರುವ ಪ್ರಥಮ ದ್ವಿಪಕ್ಷೀಯ ಭೇಟಿಯಾಗಿದ್ದು, ಅಲ್ಲಿ ನಾನು ಆಸಿಯಾನ್ – ಭಾರತ ಮತ್ತು ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಭಾಗಿಯಾಗಲಿದ್ದೇನೆ. ಅವುಗಳಲ್ಲಿ ನನ್ನ ಪಾಲ್ಗೊಳ್ಳುವಿಕೆಯು ಆಸಿಯಾನ್ ಸದಸ್ಯರಾಷ್ಟ್ರಗಳೊಂದಿಗೆ ಅದರಲ್ಲೂ ನಮ್ಮ ಸರ್ಕಾರದ ಪೂರ್ವದತ್ತ ಕ್ರಮದ ನೀತಿಯ ಚೌಕಟ್ಟಿನಲ್ಲಿ ಭಾರತ – ಪೆಸಿಫಿಕ್ ವಲಯದೊಂದಿಗಿನ ಬಾಂಧವ್ಯವನ್ನು ಆಳಗೊಳಿಸುವ ಭಾರತದ ಮುಂದುವರಿದ ಬದ್ಧತೆಯನ್ನು ಸಂಕೇತಿಸುತ್ತದೆ,

ಈ ಶೃಂಗಸಭೆಗಳ ಜೊತೆಗೆ, ನಾನು ಆಸಿಯಾನ್ ನ 50ನೇ ವಾರ್ಷಿಕೋತ್ಸವ, ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆಯ (ಆರ್.ಸಿ.ಇ.ಪಿ.) ನಾಯಕರ ಸಭೆ ಮತ್ತು ಆಸಿಯಾನ್ ವಾಣಿಜ್ಯ ಮತ್ತು ಹೂಡಿಕೆ ಶೃಂಗಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದೇನೆ.

ಆಸಿಯಾನ್ ವಾಣಿಜ್ಯ ಮತ್ತು ಹೂಡಿಕೆ ಶೃಂಗಸಭೆಯು ನಮ್ಮ ಒಟ್ಟಾರೆ ವಾಣಿಜ್ಯದ ಶೇ.10.85ರಷ್ಟು ಗಣನೀಯ ಪಾಲು ಹೊಂದಿರುವ ಆಸಿಯಾನ್ ಸದಸ್ಯ ರಾಷ್ಟ್ರಗಳೊಂದಿಗಿನ ನಮ್ಮ ವಾಣಿಜ್ಯ ಬಾಂಧವ್ಯವನ್ನು ಮತ್ತಷ್ಟು ಹೆಚ್ಚಿಸಲು ನಮ್ಮ ಆಪ್ತ ಸಹಕಾರವನ್ನು ಉತ್ತೇಜಿಸಲಿದೆ.

ಪಿಲಿಪ್ಪೀನ್ಸ್ ನ ನನ್ನ ಪ್ರಥಮ ಭೇಟಿಯ ವೇಳೆ, ನಾನು ಪಿಲಿಪ್ಪೀನ್ಸ್ ಅಧ್ಯಕ್ಷ ಘನತೆವೆತ್ತ ಶ್ರೀ. ರೋಡ್ರಿಗೋ ದುತೆರ್ತೆ ಅವರೊಂದಿಗೆ ದ್ವಿಪಕ್ಷೀಯ ಸಭೆಯನ್ನು ಎದಿರು ನೋಡುತ್ತಿದ್ದೇನೆ. ನಾನು ಆಸಿಯಾನ್ ಮತ್ತು ಪೂರ್ವ ಏಷ್ಯಾ ಶೃಂಗದ ನಾಯಕರೊಂದಿಗೂ ಮಾತುಕತೆ ನಡೆಸಲಿದ್ದೇನೆ.

ಪಿಲಿಪ್ಪೀನ್ಸ್ ನಲ್ಲಿರುವ ಭಾರತೀಯ ಸಮುದಾಯದೊಂಗಿಗೆ ಸಂಪರ್ಕ ಬೆಳೆಸುವುದನ್ನೂ ನಾನು ಎದಿರು ನೋಡುತ್ತಿದ್ದೇನೆ. ಮನಿಲಾದಲ್ಲಿನ ನನ್ನ ವಾಸ್ತವ್ಯದ ವೇಳೆ, ನಾನು ಅಂತಾರಾಷ್ಟ್ರೀಯ ಅಕ್ಕಿ ಸಂಶೋಧನಾ ಸಂಸ್ಥೆ (ಐ.ರ್.ಆರ್.ಐ) ಮತ್ತು ಮಹಾವೀರ್ ಪಿಲಿಪ್ಪೀನ್ಸ್ ಪ್ರತಿಷ್ಠಾನ ಇನ್ ಕಾರ್ಪೊರೇಷನ್ (ಎಂ.ಪಿ.ಎಫ್.ಐ.)ಗೂ ಭೇಟಿ ನೀಡಲಿದ್ದೇನೆ.

ವೈಜ್ಞಾನಿಕ ಸಂಶೋಧನೆ ಮತ್ತು ಅಭಿವೃದ್ಧಿ ಮೂಲಕ ಅಂತಾರಾಷ್ಟ್ರೀಯ ಅಕ್ಕಿ ಸಂಶೋಧನಾ ಸಂಸ್ಥೆ (ಐ.ಆರ್.ಆರ್.ಐ.) ಉತ್ತಮ ಗುಣಮಟ್ಟದ ಭತ್ತವನ್ನು ಅಭಿವೃದ್ಧಿಪಡಿಸಿದ್ದು, ಆಹಾರದ ಅಭಾವವನ್ನು ಎದುರಿಸಲು ಜಾಗತಿಕ ಸಮುದಾಯಕ್ಕೆ ನೆರವಾಗಿದೆ. ಐ.ಆರ್.ಆರ್.ಐನಲ್ಲಿ ದೊಡ್ಡ ಸಂಖ್ಯೆಯಲ್ಲಿ ಭಾರತೀಯ ವಿಜ್ಞಾನಿಗಳು ಕಾರ್ಯ ನಿರ್ವಹಿಸುತ್ತಿದ್ದು, ಈ ಕ್ಷೇತ್ರದ ಸಂಶೋಧನೆ ಮತ್ತು ಅಭಿವೃದ್ಧಿಗೆ ಕೊಡುಗೆ ನೀಡುತ್ತಿದ್ದಾರೆ. ನನ್ನ ಸಂಪುಟವು 2017ರ ಜುಲೈ 12ರಂದು ವಾರಾಣಸಿಯಲ್ಲಿ ಐಆರ್.ಆರ್.ಐ.ನ ದಕ್ಷಿಣ ಏಷ್ಯಾ ಪ್ರಾದೇಶಿಕ ಕೇಂದ್ರ ಸ್ಥಾಪಿಸುವ ಪ್ರಸ್ತಾಪಕ್ಕೆ ಅನುಮೋದನೆ ನೀಡಿದೆ. ಪಿಲಿಪ್ಪೀನ್ಸ್ ನ ಕೇಂದ್ರ ಕಚೇರಿಯ ಹೊರಗೆ ಐ.ಆರ್.ಆರ್.ಐ.ನ ಪ್ರಥಮ ಸಂಶೋಧನಾ ಕೇಂದ್ರ ಇದಾಗಿದೆ. ವಾರಾಣಸಿಯ ಕೇಂದ್ರವು ಅಕ್ಕಿಯ ಉತ್ಪಾದನೆ ಹೆಚ್ಚಿಸಲು ಮತ್ತು ಉತ್ಪಾದನಾ ವೆಚ್ಚವನ್ನು ತಗ್ಗಿಸಲು, ಮೌಲ್ಯ ವರ್ಧನೆ ಮಾಡಲು, ರೈತರ ಕೌಶಲ ಹೆಚ್ಚಿಸಲು ಬೆಂಬಲ ನೀಡುವ ಮೂಲಕ ರೈತರ ಆದಾಯವನ್ನು ಹೆಚ್ಚಿಸಲು ನೆರವಾಗುತ್ತದೆ.

ಮಹಾವೀರ್ ಪಿಲಿಪ್ಪೀನ್ಸ್ ಪ್ರತಿಷ್ಠಾನ ಐ.ಎನ್.ಸಿ. (ಎಂ.ಪಿ.ಎಫ್.ಐ.)ಗೆ ನನ್ನ ಭೇಟಿಯು, ಕಾಲು ಕಳೆದುಕೊಂಡಿರುವ ದೀನರಿಗೆ ಜೈಪುರ ಕೃತಕ ಕಾಲುಗಳನ್ನು ಉಚಿತವಾಗಿ ವಿತರಿಸುವ ಕಾರ್ಯಚಟುವಟಿಕೆಗೆ ಭಾರತ ನೀಡುತ್ತಿರುವ ಬೆಂಬಲವನ್ನು ತೋರುತ್ತದೆ. 1989ರಲ್ಲಿ ಎಂ.ಪಿ.ಎಫ್.ಐ. ಸ್ಥಾಪನೆಯಾದ ದಿನದಿಂದಲೂ ಸುಮಾರು 15,000 ಜೈಪುರ ಕೃತಕ ಕಾಲುಗಳನ್ನು ಪಿಲಿಪ್ಪೀನ್ಸ್ ನಲ್ಲಿ ಅಗತ್ಯ ಇರುವವರಿಗೆ ಜೋಡಿಸಿ, ಅವರು ಹೊಸ ಬದುಕು ಬಾಳುವಂತೆ ಮಾಡಿದೆ. ಈ ಮಾನವೀಯ ಉದಾತ್ತ ಸೇವೆಗೆ ಬೆಂಬಲ ನೀಡಲು ಭಾರತ ಸರ್ಕಾರ ಪ್ರತಿಷ್ಠಾನಕ್ಕೆ ಕೊಡುಗೆಯನ್ನೂ ನೀಡುತ್ತಿದೆ.

ನನ್ನ ಮನಿಲಾ ಭೇಟಿ ಪಿಲಿಪ್ಪೀನ್ಸ್ ನೊಂದಿಗಿನ ಭಾರತದ ದ್ವಿಪಕ್ಷೀಯ ಬಾಂಧವ್ಯವನ್ನು ಉತ್ತೇಜಿಸಲಿದೆ ಎಂಬ ವಿಶ್ವಾಸ ನನಗಿದೆ ಜೊತೆಗೆ ಆಸಿಯಾನ್ ನೊಂದಿಗೆ ನಮ್ಮ ರಾಜಕೀಯ ಭದ್ರತೆ, ಆರ್ಥಿಕ ಮತ್ತು ಸಾಮಾಜಿಕ – ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಬಲಪಡಿಸಲಿದೆ.”

****